ಶಿವಮೊಗ್ಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ಕಾರ್ಯದರ್ಶಿ (ಪಿಎ) ಎಂದು ಪರಿಚಯಿಸಿಕೊಂಡು ರಿಕ್ರಿಯೇಷನ್ ಕ್ಲಬ್ಗೆ ಲೈಸೆನ್ಸ್ ಕೊಡಿಸುವುದಾಗಿ ನಂಬಿಸಿ ₹15 ಲಕ್ಷ ವಂಚಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹೇಮಂತ್ ಕುಮಾರ್ ಅಲಿಯಾಸ್ ಗಣೇಶ್ (30) ಎಂದು ಗುರುತಿಸಲಾಗಿದೆ. ಮಂಜುನಾಥ್ ಹಂಜಿ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಹೇಮಂತ್ ಕುಮಾರ್ ಮೊದಲು ಮಂಜುನಾಥ್ ಹಂಜಿ ಅವರೊಂದಿಗೆ ಪರಿಚಯ ಬೆಳೆಸಿ ಆತ್ಮೀಯತೆ ಗಳಿಸಿದ್ದ. ಬಳಿಕ ತಾನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಿಎ ಎಂದು ಹೇಳಿಕೊಂಡು, ವಾರದಲ್ಲಿ ನಾಲ್ಕು ದಿನ ಬೆಂಗಳೂರಿನಲ್ಲಿ ಹಾಗೂ ಎರಡು ದಿನ ಶಿವಮೊಗ್ಗದಲ್ಲಿ ಕೆಲಸ ನಿರ್ವಹಿಸುತ್ತೇನೆ ಎಂದು ನಂಬಿಸಿದ್ದಾನೆ.
ಇದರ ಜೊತೆಗೆ ತನ್ನೊಂದಿಗೆ ನಾಲ್ವರು ಸ್ನೇಹಿತರನ್ನು ಕರೆದುಕೊಂಡು ಕಾರಿನಲ್ಲಿ ಸಂಚರಿಸುತ್ತಿದ್ದ ಆರೋಪಿಯು, ತನ್ನ ಮಾತುಗಳಿಗೆ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ನಂತರ ಸ್ನೇಹಿತರು ಸೇರಿ ರಿಕ್ರಿಯೇಷನ್ ಕ್ಲಬ್ ಆರಂಭಿಸೋಣ. ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಸುಲಭವಾಗಿ ಲೈಸೆನ್ಸ್ ಪಡೆದುಕೊಡುತ್ತೇನೆ ಎಂದು ಮಂಜುನಾಥ್ ಹಂಜಿ ಅವರಿಗೆ ಭರವಸೆ ನೀಡಿದ್ದಾನೆ.
ಸ್ವಲ್ಪ ದಿನಗಳ ಬಳಿಕ, “ನನ್ನ ಸ್ನೇಹಿತರು ವಿಶ್ವಾಸಾರ್ಹರಲ್ಲ. ಅವರು ಕ್ಲಬ್ನಲ್ಲಿ ಇರಬಾರದು. ನಾವಿಬ್ಬರೇ ಸೇರಿ ಕ್ಲಬ್ ಆರಂಭಿಸೋಣ” ಎಂದು ಹೇಳಿ, ಲೈಸೆನ್ಸ್ ವ್ಯವಸ್ಥೆ ಮಾಡುವ ನೆಪದಲ್ಲಿ ಮಂಜುನಾಥ್ ಹಂಜಿ ಅವರಿಂದ ₹15 ಲಕ್ಷ ಪಡೆದುಕೊಂಡಿದ್ದಾನೆ ಎನ್ನಲಾಗಿದೆ.
ಹಣ ಪಡೆದ ಬಳಿಕ ಮೂರು ತಿಂಗಳಿಗೂ ಹೆಚ್ಚು ಕಾಲ ಲೈಸೆನ್ಸ್ ಕೊಡಿಸದೇ ಸತಾಯಿಸುತ್ತಿದ್ದ ಆರೋಪಿಯು, ಹಣ ವಾಪಸ್ ಕೇಳಿದಾಗಲೆಲ್ಲಾ ವಿವಿಧ ಕಾರಣಗಳನ್ನು ಹೇಳಿ ಕಾಲಹರಣ ಮಾಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಯ ವರ್ತನೆಯ ಬಗ್ಗೆ ಅನುಮಾನಗೊಂಡ ಮಂಜುನಾಥ್ ಹಂಜಿ ಅವರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ತುಂಗಾನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಇದೇ ರೀತಿಯಲ್ಲಿ ಇನ್ನೂ ಯಾರನ್ನಾದರೂ ವಂಚಿಸಿರುವ ಸಾಧ್ಯತೆ ಇದೆಯೇ ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.



