ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪೊಲೀಸ್ ಇಲಾಖೆಯೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಾ ಅನೇಕ ಕಾನೂನು ಸುವ್ಯವಸ್ಥೆ ಕಾರ್ಯಗಳಲ್ಲಿ ಕೈಜೋಡಿಸುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿಯ ಸೇವೆ ಶ್ಲಾಘನೀಯವಾಗಿದೆ ಎಂದು ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಗೃಹರಕ್ಷಕ ದಳದ ಜಿಲ್ಲಾ ಬೋಧಕ ಕಿರಣಕುಮಾರ ಕಟಗಿ ಹೇಳಿದರು.
ಸೋಮವಾರ ಪಟ್ಟಣದ ಗೃಹರಕ್ಷಕ ದಳದ ಸಿಬ್ಬಂದಿಗಳ ವತಿಯಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಯಾವುದೇ ಕೆಲಸ ಮಾಡುತ್ತಿದ್ದರೂ ಅದರಲ್ಲಿ ನಿಷ್ಠೆ, ಪ್ರಾಮಾಣಿಕತೆ ಮತ್ತು ಜವಾಬ್ದಾರಿ ಇರಬೇಕು. ಯಾವ ಹುದ್ದೆಯನ್ನೂ ಚಿಕ್ಕದಾಗಿ ಪರಿಗಣಿಸಬಾರದು ಎಂದು ಹೇಳಿದರು.
ಜಿಲ್ಲೆಯ ಗೃಹರಕ್ಷಕ ದಳದ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವುದೇ ತಮಗೆ ಮುಖ್ಯಮಂತ್ರಿ ಚಿನ್ನದ ಪದಕ ದೊರಕಲು ಕಾರಣವಾಗಿದೆ ಎಂದು ತಿಳಿಸಿದ ಅವರು, “ಈ ಗೌರವವನ್ನು ಜಿಲ್ಲೆಯ ಎಲ್ಲಾ ಸಿಬ್ಬಂದಿಗಳಿಗೆ ಅರ್ಪಿಸುತ್ತೇನೆ” ಎಂದು ಹೇಳಿದರು.
ಸನ್ಮಾನಗಳು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇಂದಿನ ಗೌರವ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಲು ಪ್ರೇರಣೆ ನೀಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪಿಎಸ್ಐ ನಾಗರಾಜ ಗಡದ ಮಾತನಾಡಿ, ಕಿರಣಕುಮಾರ ಕಟಗಿ ಅವರು ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಕಡಿಮೆ ಅವಧಿಯಲ್ಲೇ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
“ಎಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆ ಇರುತ್ತದೆಯೋ ಅಲ್ಲಿ ಪ್ರಶಸ್ತಿಗಳು ತಾನಾಗಿಯೇ ಬರುತ್ತವೆ” ಎಂದು ಹೇಳಿದರು.
ಗೃಹರಕ್ಷಕ ದಳದ ಸಿಬ್ಬಂದಿಗಳು ಪೊಲೀಸ್ ಇಲಾಖೆಗೆ ಅತ್ಯಂತ ಸಹಕಾರಿಯಾಗಿದ್ದು, ಅವರಿಗೆ ಇನ್ನಷ್ಟು ಸೌಲಭ್ಯ ದೊರಕುವಂತಾಗಬೇಕು ಎಂದು ಆಶಿಸಿದರು.
ಗೃಹರಕ್ಷಕ ದಳದ ಜಿಲ್ಲಾ ಸಮಾದೇಶಕ ಸಿ.ಬಿ. ಗೂಳರಡ್ಡಿ ಮಾತನಾಡಿ, ಸಿಬ್ಬಂದಿಗಳ ಸೇವಾ ಮನೋಭಾವಕ್ಕೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಗೃಹರಕ್ಷಕ ದಳದ ಸಿಬ್ಬಂದಿಗಳಾದ ಸಿ.ಜಿ. ಹೂವಿನ, ಬಿ.ಎನ್. ಛಬ್ಬಿ, ಸೋಮಶೇಖರಯ್ಯ ಕಲ್ಮಠ, ಬಿ.ಎಚ್. ಬೆಂತೂರ, ಸಿ.ಎನ್. ಅಗಡಿ, ಎಂ.ಎಸ್. ಬೂದಿಹಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಯಾವ ಹುದ್ದೆಯೂ ಚಿಕ್ಕದಲ್ಲ; ಪ್ರಾಮಾಣಿಕ ಸೇವೆಯೇ ವ್ಯಕ್ತಿಗೆ ನಿಜವಾದ ಗೌರವ ತಂದುಕೊಡುತ್ತದೆ.”
ಕಿರಣಕುಮಾರ ಕಟಗಿ
ಗೃಹರಕ್ಷಕ ದಳದ ಜಿಲ್ಲಾ ಬೋಧಕ



