ವಿಜಯಸಾಕ್ಷಿ ಸುದ್ದಿ, ಗದಗ: ಜಾತಿ ಅಸ್ಪೃಶ್ಯತೆ ಹಾಗೂ ಅಸಮಾನತೆಯನ್ನು ಬಲಪಡಿಸುವ ಹುನ್ನಾರ ಹೊಂದಿರುವ ಬಿಜೆಪಿ-ಸಂಘ ಪರಿವಾರ ಪ್ರಾಯೋಜಿತ ಹಿಂದುತ್ವ ಸಮಾವೇಶಕ್ಕೆ ನಾಗರಿಕರು ಯಾವುದೇ ಕಾರಣಕ್ಕೂ ಬೆಂಬಲ ನೀಡಬಾರದು ಹಾಗೂ ಭಾಗವಹಿಸಬಾರದು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಜಿಲ್ಲಾ ಸಮಿತಿ ಮನವಿ ಮಾಡಿದೆ.
ನಗರದ ಗಾಂಧಿ ಸರ್ಕಲ್ನಲ್ಲಿ ಸಿಪಿಐ(ಎಂ) ಜಿಲ್ಲಾ ಸಮಿತಿ ನೇತೃತ್ವದಲ್ಲಿ, ಕನ್ನೇರಿ ಕಾಡುಸಿದ್ದೇಶ್ವರಸ್ವಾಮಿ ನೇತೃತ್ವದಲ್ಲಿ ಶರಣರ ಹೆಸರಿನಲ್ಲಿ ನಡೆಯುತ್ತಿರುವ ಹಿಂದುತ್ವ ಸಮಾವೇಶವನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಯು. ಬಸವರಾಜ್, ಭಾರತ ದೇಶದ ಸಮಾಜವನ್ನು ಮನುವಾದಿಗಳು ಮೂಲದಲ್ಲೇ ಅಸಮಾನತೆ ಮತ್ತು ಜಾತಿ ಅಸ್ಪೃಶ್ಯತೆಯಿಂದ ಕೂಡಿದ ಸಮಾಜವಾಗಿ ಕಟ್ಟಿಕೊಂಡು ಅದನ್ನು ಪೋಷಿಸಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು. ಅದರ ವಿರುದ್ಧವಾಗಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಸೂಫಿ ಸಂತರು ಸಮಾನತೆಯ ಹೋರಾಟವನ್ನು ಮುನ್ನಡೆಸಿದ್ದಾರೆ ಎಂದರು.
“12ನೇ ಶತಮಾನದ ಶರಣರ ಚಳುವಳಿ ಜಾಗತಿಕವಾಗಿ ಗಮನ ಸೆಳೆದ ಸಮಾನತೆಯ ಹೋರಾಟವಾಗಿದೆ. ಆದರೆ ಅಂದಿನ ಮನುವಾದಿ ಹಾಗೂ ಸನಾತನ ಶಕ್ತಿಗಳು ಶರಣ ಚಳುವಳಿಯನ್ನು ಮಟ್ಟ ಹಾಕಿ ಶರಣರನ್ನು ಕೊಲ್ಲೆ ಮಾಡಿದ್ದವು. ಅದೇ ಸನಾತನವಾದಿ ಶಕ್ತಿಗಳು ಇಂದು ಬಿಜೆಪಿ ಮತ್ತು ಸಂಘ ಪರಿವಾರದ ಹೆಸರಿನಲ್ಲಿ ಸಮಾಜದಲ್ಲಿ ಜಾತಿ ಅಸ್ಪೃಶ್ಯತೆ ಹಾಗೂ ಅಸಮಾನತೆಯನ್ನು ಜೀವಂತವಾಗಿಡಲು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿವೆ” ಎಂದು ಟೀಕಿಸಿದರು.
“ಲಿಂಗಾಯತ ಸಮುದಾಯದ ಕನ್ನೇರಿ ಕಾಡುಸಿದ್ದೇಶ್ವರಸ್ವಾಮಿಯನ್ನು ಮುಂದಿಟ್ಟುಕೊಂಡು ಶರಣರ ಹೆಸರಿನಲ್ಲಿ ಹಿಂದುತ್ವ ಸಮಾವೇಶ ನಡೆಸಲಾಗುತ್ತಿದೆ. ಸಮಾನತೆ ಮತ್ತು ವಚನ ಚಳುವಳಿಯಲ್ಲಿ ನಂಬಿಕೆ ಇಟ್ಟಿರುವ ಗದುಗಿನ ಜನರು ಇಂತಹ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಬೆಂಬಲ ನೀಡಬಾರದು” ಎಂದು ಅವರು ಕರೆ ನೀಡಿದರು.
ನಂತರ ಮಾತನಾಡಿದ ಜಿಲ್ಲಾ ಸಮಿತಿ ಸದಸ್ಯ ಎಂ.ಎಸ್. ಹಡಪದ, ಕೇಂದ್ರ ಸರ್ಕಾರದ ಬೆಲೆ ಏರಿಕೆ, ನಿರುದ್ಯೋಗ ಹಾಗೂ ಹಣದುಬ್ಬರದಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.
“ಸರ್ಕಾರದ ನೀತಿಗಳ ವಿರುದ್ಧ ಜನರಲ್ಲಿ ಅಸಮಾಧಾನ ಹೆಚ್ಚಾಗುತ್ತಿದ್ದು, ಪ್ರತಿಭಟನೆಗಳೂ ಆರಂಭವಾಗಿವೆ. ಈ ಪ್ರತಿಭಟನಾ ಜ್ವಾಲೆಯನ್ನು ಹತ್ತಿಕ್ಕಲು ಕಾರ್ಪೊರೇಟ್ ಮಾಧ್ಯಮಗಳು ಹಾಗೂ ಬಂಡವಾಳಶಾಹಿ ವ್ಯವಸ್ಥೆ ಕೋಮುವಾದಿ ಶಕ್ತಿಗಳ ಜೊತೆ ಕೈಜೋಡಿಸಿ ಧರ್ಮದ ಹೆಸರಿನಲ್ಲಿ ವಿಭಜನಕಾರಿ ನೀತಿಗಳನ್ನು ಮುನ್ನಲೆಗೆ ತರುತ್ತಿವೆ” ಎಂದು ಆರೋಪಿಸಿದರು.
“ಸರ್ಕಾರ ಮತ್ತು ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಜನರು ಧ್ವನಿ ಎತ್ತದಂತೆ ಮಾಡಲು ದೇಶದಾದ್ಯಂತ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅದರ ಭಾಗವಾಗಿಯೇ ಕರ್ನಾಟಕದಲ್ಲೂ ಹಿಂದುತ್ವ ಹಾಗೂ ಸಂಘ ಪರಿವಾರದ ಶಕ್ತಿಗಳ ಕುತಂತ್ರದಿಂದ ಈ ಸಮಾವೇಶ ಗದಗದಲ್ಲಿ ನಡೆಯುತ್ತಿದೆ” ಎಂದು ಹೇಳಿದರು.
“ಮಾನವೀಯತೆ ಮತ್ತು ಸಮಾನತೆಯಲ್ಲಿ ನಂಬಿಕೆ ಇಟ್ಟಿರುವವರು ಯಾರೂ ಕೂಡ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಬಾರದು. ದೇಶದ ಜನತೆ ಬೆಲೆ ಏರಿಕೆ, ನಿರುದ್ಯೋಗ ಹಾಗೂ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಟಕ್ಕೆ ಮುಂದಾಗಬೇಕು” ಎಂದು ಕರೆ ನೀಡಿದರು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ ಮಾತನಾಡಿ, ಗದಗ ಜಿಲ್ಲೆ ಸೌಹಾರ್ದತೆಯ ನಾಡಾಗಿದ್ದು, ತೋಂಟದಾರ್ಯ ಮಠ, ಗವಾಯಿಗಳ ಮಠ, ಡಂಬಳ ಮಠ, ಹಾಲಕೆರೆ ಮಠ ಸೇರಿದಂತೆ ಅನೇಕ ಮಠಗಳು ಶರಣರ ಆಶಯವನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.
“ಇಂತಹ ಸಂದರ್ಭದಲ್ಲಿ ಹಿಂದುತ್ವದ ಕೋಮುವಾದಿ ಸಮಾವೇಶವನ್ನು ಗದುಗಿನ ಜನತೆ ಒಗ್ಗಟ್ಟಿನಿಂದ ವಿರೋಧಿಸಿ ವಿಫಲಗೊಳಿಸಬೇಕು” ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಪೀರೂ ರಾಠೋಡ, ಮೈಬು ಹವಾಲ್ದಾರ್, ಬಸವರಾಜ್ ಮಂತೂರ್, ಪಕ್ಷದ ಸದಸ್ಯರಾದ ಚಂದ್ರು ರಾಠೋಡ, ಕನಕರಾಯ ಹಾದಿಮನಿ, ದೇವಪ್ಪ, ಗಣೇಶ ರಾಠೋಡ, ಮರಿಯಮ್ಮ ಮುಳುಗುಂದ, ಮಂಜವ್ವ, ಫಕೀರವ್ವ ಪೂಜಾರ್, ಶಿವಕ್ಕ ಬೆವನಮರದ, ರೇಣುಕಾ ಛಲವಾದಿ, ಸರಸ್ವತಿ ಬಣಕಾರ, ನಾಗರತ್ನ ಸೇರಿದಂತೆ ಹಲವರು ಭಾಗವಹಿಸಿದ್ದರು.
“ಶರಣರ ಸಮಾನತೆಯ ಚಳುವಳಿಯನ್ನು ಸನಾತನ ಶಕ್ತಿಗಳು ಅಂದು ದಮನಿಸಿದ್ದವು. ಅದೇ ಶಕ್ತಿಗಳು ಇಂದು ಬಿಜೆಪಿ ಮತ್ತು ಸಂಘ ಪರಿವಾರದ ರೂಪದಲ್ಲಿ ಸಮಾಜದಲ್ಲಿ ಅಸಮಾನತೆಯನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿವೆ.”ಯು. ಬಸವರಾಜ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ
“ಸೌಹಾರ್ದತೆಯ ನೆಲವಾದ ಗದಗದಲ್ಲಿ ಕೋಮುವಾದಿ ಸಮಾವೇಶವನ್ನು ಜನರು ಒಗ್ಗಟ್ಟಿನಿಂದ ವಿರೋಧಿಸಿ ವಿಫಲಗೊಳಿಸಬೇಕು.”ಬಾಲು ರಾಠೋಡ, ಜಿಲ್ಲಾ ಕಾರ್ಯದರ್ಶಿ“ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರದ ವಿರುದ್ಧ ಜನರ ಅಸಮಾಧಾನವನ್ನು ಮರೆಮಾಚಲು ಧರ್ಮದ ಹೆಸರಿನಲ್ಲಿ ವಿಭಜನಕಾರಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.”ಎಂ.ಎಸ್. ಹಡಪದ, ಜಿಲ್ಲಾ ಸಮಿತಿ ಸದಸ್ಯ



