ವಿಜಯಸಾಕ್ಷಿ ಸುದ್ದಿ, ಗದಗ : ಡಾ. ಬಿ.ಆರ್. ಅಂಬೇಡ್ಕರರು ರಚಿಸಿದ ಭಾರತದ ಸಂವಿಧಾನದ ಫಲದಿಂದ ಇಂದು ನಾವು ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕವಾಗಿ ಸುಖಮಯ ಜೀವನ ನಡೆಸುತಿದ್ದೇವೆ.
ಅಂಬೇಡ್ಕರರು ತಮ್ಮ ಜೀವನದಲ್ಲಿ ಶಿಕ್ಷಣ ಪಡೆಯಲು ಅನುಭವಿಸಿದ ಕಷ್ಟ ಮತ್ತು ಸಮಾಜ ತಮಗೆ ತೋರಿದ ತಾರತಮ್ಯ, ದೌರ್ಜನ್ಯಗಳು ಮುಂದಿನ ಜನಾಂಗದವರು ಅನುಭವಿಸಬಾರದೆಂಬ ಹೋರಾಟಗಳಿಂದ ಜಯಗಳಿಸಿ ಇಡೀ ವಿಶ್ವಕ್ಕೆ ಮಾದರಿಯಾಗಿರುವ ಸಂವಿಧಾನ ರಚಿಸಿದರು ಎಂದು ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶಿವಾನಂದ ಗಿಡ್ಡಕೆಂಚಣ್ಣವರ ತಿಳಿಸಿದರು.
ಇಲ್ಲಿನ ಎಸ್ವಾಯ್ಬಿಎಂಎಸ್ ಯೋಗಪಾಠಶಾಲೆಯ ಬಸವ ಯೋಗ ಕೇಂದ್ರ ಮತ್ತು ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ-2024 ಗದಗ ಇವರುಗಳ ಸಹಯೋಗದಲ್ಲಿ ಬೇಸಿಗೆ ರಜೆ ಪ್ರಯುಕ್ತ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗಾಗಿ ನಡೆದಿರುವ ಸಂಸ್ಕೃತಿ-ಸಂಸ್ಕಾರ ಶಿಬಿರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ನಿವೃತ್ತ ಕೃಷಿ ವಿಜ್ಞಾನಿ ಡಾ. ಎಸ್.ಕೆ. ನಾಲತ್ವಾಡಮಠ ಮಾತನಾಡಿ, ಹಿರಿಯರಾದ ನಾವೆಲ್ಲರೂ ಅಂಬೇಡ್ಕರರ ತತ್ವಾದರ್ಶಗಳನ್ನು ಪರಿಪಾಲಿಸಿದರೆ ಕಿರಿಯರೂ ನಮ್ಮನ್ನು ಅನುಸರಿಸುವರು ಎಂದು ಹೇಳಿದರು.
ಶಿಬಿರಾರ್ಥಿಗಳಾದ ಸಿಮ್ರಾನ್ ನದಾಫ್, ಚಿನ್ಮಯಿ ಗೌಡರ, ನಿಧಿ ಕಟ್ಟಿಮನಿ, ಅನುಷ್ಕಾ ಹಿರೇಮಠ ಅಂಬೇಡ್ಕರರ ಕುರಿತು ಮಾತನಾಡಿದರು. ವೇದಿಕೆಯಲ್ಲಿ ನವೀನ ಪಲ್ಲೇದ, ಶಿಬಿರದ ಶಿಕ್ಷಕರಾದ ಎಸ್.ಎಂ. ಬುರಡಿ, ಸುನಂದಾ ಜ್ಯಾನೋಪಂತರ, ವೀಣಾ ಹಿರೇಮಠ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಅದಿತಿ ಹಿರೇಮಠ, ಸಾಹಿತ್ಯ ಜಾಧವ, ತ್ರಿಶಾ ಸಿ. ಪ್ರಾರ್ಥನೆ ಹೇಳಿದರು. ಶ್ರಾವಣಿ ಗುಡದೂರ ಸಂವಿಧಾನ ಪೀಠಿಕೆ ಪಠಣ ಮಾಡಿಸಿದರು. ಶಿಬಿರ ಸಂಯೋಜಕ ಕೆ.ಎಸ್. ಪಲ್ಲೇದ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಂ. ಬುರಡಿ ವಂದಿಸಿದರು.