ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ : ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನವರಿ ತಿಂಗಳಲ್ಲಿ ನಡೆದಿದ್ದ ಕಳ್ಳತನಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿತನಿಂದ ಒಟ್ಟು 1,76,300 ರೂ ಕಿಮ್ಮತ್ತಿನ 39 ಗ್ರಾಂ ಬಂಗಾರದ ಆಭರಣಗಳನ್ನು ಹಾಗೂ ಒಟ್ಟು 10 ಸಾವಿರ ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಲಕ್ಷ್ಮೀ ನಗರ ಹಾಗೂ ಜನ್ನತ್ ನಗರದಲ್ಲಿಯ ಮನೆಗಳಲ್ಲಿ ಯಾರೋ ಕಳ್ಳರು 14.01.2024ರಿಂದ 16.01.2024ರ ನಡುವಿನ ಅವಧಿಯಲ್ಲಿ ಕಳ್ಳತನ ಮಾಡಿದ್ದರು. ಘಟನೆಗೆ ಸಂಬಂಧಿಸಿದಂತೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ: 05/2024 00: 454. 457, 380 : 04/2024:454, 457, 380 ಐಪಿಸಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡು ಆರೋಪಿತರ ಪತ್ತೆ ಮಾಡಲು ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಗದಗ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಡಿ.ಎಸ್.ಪಿ, ಸಿಪಿಐ ಶಿರಹಟ್ಟಿ ಇವರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ, ಪತ್ತೆ ಕಾರ್ಯ ಕೈಗೊಂಡಿದ್ದರು.
ಪ್ರಕರಣದ ಆರೋಪಿತನಾದ ರಾಣೆಬೆನ್ನೂರಿನ ಸದ್ಯ ಬಳ್ಳಾರಿ ಕಾಟೆಗುಡ್ಡ, ಎಂ.ಜಿ. ರೋಡ್ ಹತ್ತಿರದ ಪರಶುರಾಮ ರಾಮಪ್ಪ ಚಂದಳ್ಳಿ ತಳವಾರ ಇವನನ್ನು ಮಂಗಳವಾರ ಪತ್ತೆ ಮಾಡಿ ದಸ್ತಗೀರ ಮಾಡಿದ್ದಾರೆ.
ಆರೋಪಿತನ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಸಿಪಿಐ ನಾಗರಾಜ ಮಾಡಳ್ಳಿ, ಲಕ್ಷೇಶ್ವರ ಠಾಣೆಯ ಪಿಎಸ್ಐ ಈರಪ್ಪ ರಿತ್ತಿ, ಕ್ರೈಂಮ್ ವಿಭಾಗದ ಪಿಎಸ್ಐ ಚನ್ನಬಸವ ಬಬಲಿ, ಎಎಸ್ಐ ಎಮ್.ಎ. ಮೌಲ್ವಿ, ಸಿಬ್ಬಂದಿಗಳಾದ ಆರ್.ಎಸ್. ಯರಗಟ್ಟಿ, ಎಮ್.ಎ. ಶೇಖ್, ಎಮ್.ಎಸ್. ಬಳ್ಳಾರಿ, ಆನಂದ ಕಮ್ಮಾರ, ಸಿ.ಎಸ್. ಮಠಪತಿ, ಡಿ.ಎಸ್. ನದಾಫ್, ಗಣೇಶ ಗ್ರಾಮಪುರೋಹಿತ್, ಹೆಚ್.ಐ. ಕಲ್ಲಣ್ಣವರ, ಪಾಂಡುರಂಗರಾವ, ಮಧುಚಂದ್ರ ಧಾರವಾಡ ಇವರುಗಳ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.