ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದರಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೊರಹೊಮ್ಮುತ್ತಿರುವುದು ಶೈಕ್ಷಣಿಕ ಪ್ರಗತಿಯ ಸಂಕೇತವಾಗಿದೆ ಎಂದು ಗದಗ-ಬೆಟಗೇರಿ ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರದೀಪ ಉಗಲಾಟ ಹೇಳಿದರು.
ತಾಲೂಕಿನ ಬೆಳಹೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಕಲಿಕಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಅಭಿನಂದಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದರ ಪರಿಣಾಮ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಇತ್ತೀಚಿನ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಡಾ. ಪ್ರದೀಪ ಉಗಲಾಟ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಕೆ.ಎಸ್. ದಿಂಡಿ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕವಾಗಿ ಮುನ್ನಡೆಯಬೇಕು ಎಂದರು.
ಡಿಡಿಪಿಐ ಹಾಗೂ ಬಿಇಒ ಅವರ ಮಾರ್ಗದರ್ಶನದಲ್ಲಿ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಮುದಾಯ ಹಾಗೂ ಸಂಘ-ಸಂಸ್ಥೆಗಳ ಸಹಭಾಗಿತ್ವವೂ ಅತ್ಯಂತ ಮುಖ್ಯವಾಗಿದೆ. ರೋಟರಿ ಕ್ಲಬ್ ಪದಾಧಿಕಾರಿಗಳು ಶಾಲೆಗೆ ಆಗಮಿಸಿ ಸಸಿ ನೆಡುವುದರ ಜೊತೆಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿರುವುದು ಅಭಿನಂದನೀಯ ಎಂದರು.
ಸಚೇತನ ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿದ ಹಾಗೂ ವಿವಿಧ ಎಫ್ಎಲ್ಎನ್ ಕಲಿಕಾ ಸ್ಪರ್ಧೆಗಳಲ್ಲಿ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿ ನೋಟ್ಬುಕ್ ಹಾಗೂ ಪೆನ್ಸಿಲ್ಗಳನ್ನು ವಿತರಿಸಿ ಕಲಿಕೆಗೆ ಉತ್ತೇಜನ ನೀಡಲಾಯಿತು.
ಕನ್ನಡ ಶಬ್ದಗಳನ್ನು ಬಿಡಿಸುವ ಸ್ಪರ್ಧೆಯಲ್ಲಿ ರೋಹಿತ ಹುಲಕೋಟಿ, ಕಿರಣ ಶಿಶುವಿನಹಳ್ಳಿ ಹಾಗೂ ಸ್ಪೂರ್ತಿ ಪಕ್ಕೀರಗೌಡ್ರ ವಿಜೇತರಾದರು. ಮೂಲಕ್ರಿಯೆಗಳ ಲೆಕ್ಕ ಬಿಡಿಸುವ ಸ್ಪರ್ಧೆಯಲ್ಲಿ ನಿವೇದಿತಾ ನರಗುಂದ, ಸ್ನೇಹಾ ನೀರಲಗಿ ಹಾಗೂ ಸಾನ್ವಿ ಮಡಿವಾಳರ ಸ್ಥಾನ ಪಡೆದರು.
ಮಗ್ಗಿ ಹೇಳುವ ಸ್ಪರ್ಧೆಯಲ್ಲಿ ಶಾಂಭವಿ ಹುಲಕೋಟಿ, ತನ್ವೀರ್ ನದಾಫ್ ಹಾಗೂ ರೋಹಿತ ಭರಮನಗೌಡ್ರ ವಿಜೇತರಾದರು. ನಾಲ್ಕನೇ ತರಗತಿಯ ಕನ್ನಡ ಉಕ್ತಲೇಖನ ಸ್ಪರ್ಧೆಯಲ್ಲಿ ವೇದಾ ದೊಡ್ಡಗೌಡ್ರ, ಸಾನ್ವಿ ಚಲವಾದಿ ಹಾಗೂ ಕೀರ್ತಿ ಉಪ್ಪಾರ ಉತ್ತಮ ಸಾಧನೆ ಮಾಡಿದರು.
ಐದನೇ ತರಗತಿಯ ಉಕ್ತಲೇಖನ ಸ್ಪರ್ಧೆಯಲ್ಲಿ ಅನುಪಮ ಹುಲಕೋಟಿ, ದೇವೇಂದ್ರಗೌಡ ಮುದಿಗೌಡ್ರ ಹಾಗೂ ತೇಜಸ್ವಿನಿ ಚಲವಾದಿ ವಿಜೇತರಾದರು. ಮೂಲಕ್ರಿಯೆಗಳ ಲೆಕ್ಕ ಬಿಡಿಸುವ ಸ್ಪರ್ಧೆಯಲ್ಲಿ ಸಾಬಣ್ಣಸಾಬ ಹೊಂಬಳ, ಪಲ್ಲವಿ ಪಕ್ಕಿರಗೌಡ್ರ ಹಾಗೂ ಪಲ್ಲವಿ ಹುಲಕೋಟಿ ಸಾಧನೆ ಮಾಡಿದರು.
ಚಿತ್ರಕಲಾ ಸ್ಪರ್ಧೆಯಲ್ಲಿ ನೀಲಾ ಲಿಂಗನಾಯ್ಕರ, ಬಸಮ್ಮ ಕತ್ತಿ ಹಾಗೂ ಅನಿಸಾ ನದಾಫ್ ಸ್ಥಾನ ಪಡೆದರು. ಸಚೇತನ ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿದ ನೀಲಾ ಲಿಂಗನಾಯ್ಕರ ಸೇರಿದಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು.
ವೇದಿಕೆಯಲ್ಲಿ ರೋಟರಿ ಕ್ಲಬ್ ಉಪಾಧ್ಯಕ್ಷ ಸುರೇಶ ಕುಂಬಾರ, ಕಾರ್ಯದರ್ಶಿ ಅಕ್ಷಯ್ ಶೆಟ್ಟಿ, ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಪತ್ತೇಸಾಬ ದೊಡ್ಡಮನಿ, ಸದಸ್ಯ ಪರಸಪ್ಪ ಹುಲಕೋಟಿ ಉಪಸ್ಥಿತರಿದ್ದರು.
ಶಾಲೆಯ ಶಿಕ್ಷಕರಾದ ಬಿ.ಎಂ. ಸೈಯದ್, ಮಂಜುನಾಥ ಜಕ್ಕಲಿ, ರುಕ್ಮಿಣಿ ಗುಳಗಂದಿ, ಸುಜಾತಾ ಧೋಳ, ಸುಮಾ ತಿಪ್ಪರಡ್ಡಿ, ಲಲಿತಾ ಚನ್ನಪ್ಪಗೌಡರ ಸೇರಿದಂತೆ ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



