ವಿಜಯಸಾಕ್ಷಿ ಸುದ್ದಿ, ಗದಗ: “ಗದಗ ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. 2024-25ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬೆಳೆ ವಿಮೆ ಹಣವನ್ನು ರೈತರ ಖಾತೆಗೆ ಕೂಡಲೇ ಜಮೆ ಮಾಡಬೇಕು. ನಾವು ಪುಕ್ಕಟೆಯಾಗಿ ಏನನ್ನೂ ಕೇಳುತ್ತಿಲ್ಲ, ನಾವು ಕಟ್ಟಿದ ವಿಮೆಯ ಹಣವನ್ನೇ ಕೇಳುತ್ತಿದ್ದೇವೆ. ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ” ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಿ.ಆರ್. ನಾರಾಯಣರೆಡ್ಡಿ ಬಣ) ಆಗ್ರಹಿಸಿತು.
46ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಮಂಗಳವಾರ ಗದಗ ಜಿಲ್ಲೆಯ ತಿಮ್ಮಾಪೂರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈತ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ, 1980ರ ನವೆಂಬರ್ 21ರಂದು ನವಲಗುಂದ-ನರಗುಂದ ರೈತ ಹೋರಾಟ ಹಾಗೂ ಹಾವೇರಿ ಭಾಗದಲ್ಲಿ ಸರ್ಕಾರದ ಗೋಲಿಬಾರ್ಗೆ ಬಲಿಯಾದ ರೈತರನ್ನು ಸ್ಮರಿಸಿದರು. ಹುತಾತ್ಮ ರೈತರ ತ್ಯಾಗವನ್ನು ನೆನೆಯುವ ದಿನವಾಗಿರುವುದರ ಜೊತೆಗೆ ಇದನ್ನು “ಕರಾಳ ದಿನ”ವಾಗಿಯೂ ಆಚರಿಸಲಾಗುತ್ತಿದೆ ಎಂದರು.
ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಗದಗ ಜಿಲ್ಲೆಯಾದ್ಯಂತ ಬೆಳೆಗಳು ಹಾನಿಗೊಳಗಾಗಿವೆ. ಆದರೂ ಸರ್ಕಾರ ಇನ್ನೂ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿಲ್ಲ ಎಂದು ಅವರು ಆರೋಪಿಸಿದರು.
ರೈತರು ಕಟ್ಟಿರುವ 2024-25ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬೆಳೆ ವಿಮೆ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ರೈತ ವಿರೋಧಿ ನೀತಿಗಳನ್ನು ಕೈಬಿಟ್ಟು ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಶರಣಪ್ಪ ಜೋಗಿನ, ಬಾಳಪ್ಪ ಗಂಗರಾತ್ರಿ, ಶಿವಪುತ್ರಪ್ಪ ತಿಮ್ಮಾಪೂರ, ಫಕೀರಪ್ಪ ಜೋಗಿನ, ರಾಮಣ್ಣ ಖಂಡ್ರೆ, ಉದಯ ಗಂಗರಾತ್ರಿ, ಹನುಮಪ್ಪ ಹಚ್ಚಪ್ಪನವರ, ಮಲ್ಲಪ್ಪ ಮಡಿವಾಳರ, ಭೀಮನಗೌಡ ಪಾಟೀಲ, ರಾಮಣ್ಣ ಕಂಕರಿ, ಶರಣಪ್ಪ ಹಡಪದ, ಪ್ರಕಾಶ ಬಸಾಪೂರ, ಹೊನ್ನಕೆರಪ್ಪ ಬಿಚಗಲ್ಲ ಸೇರಿದಂತೆ ಗ್ರಾಮಸ್ಥರು ಹಾಗೂ ರೈತರು ಉಪಸ್ಥಿತರಿದ್ದು, ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
“ನಾವು ಪುಕ್ಕಟೆಯಾಗಿ ಏನನ್ನೂ ಕೇಳುತ್ತಿಲ್ಲ. ನಾವು ಕಟ್ಟಿದ ಬೆಳೆ ವಿಮೆಯ ಹಣವನ್ನೇ ಕೇಳುತ್ತಿದ್ದೇವೆ. ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ.”
– ರೈತ ಮುಖಂಡರು

