ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸಮೀಪದ ಹರಿಪುರದಲ್ಲಿ ಶ್ರೀ ವೀರಭದ್ರೇಶ್ವರ ದೇವರ 38ನೇ ವರ್ಷದ ಅಗ್ನಿಮಹೋತ್ಸವವು ಶ್ರಾವಣ ಮಾಸದ ದ್ವಾದಶಿ ದಿನವಾದ ಮಂಗಳವಾರ ಸಡಗರ ಸಂಭ್ರಮದಿಂದ ಜರುಗಿತು.
ಸಂಪ್ರದಾಯದಂತೆ ಬೆಳಿಗ್ಗೆ 6 ಗಂಟೆಗೆ ಶ್ರೀ ಶಂಕರಲಿಂಗೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ದೇವರಿಗೆ ಎಲೆಪೂಜೆ, ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ಬಳಿಕ ಬೆಳಿಗ್ಗೆ 8 ಗಂಟೆಗೆ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವವು ನಂದಿಧ್ವಜ, ಸಮ್ಮಾಳಗಳು, ಮುತ್ತೈದೆಯರು ಹಾಗೂ ವಿವಿಧ ವಾದ್ಯಗೋಷ್ಠಿಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭದಲ್ಲಿ ಪುರವಂತರು ವೀರಭದ್ರದೇವರ ಒಡಪುಗಳನ್ನು ಹೇಳುತ್ತಾ, ಶಸ್ತ್ರಗಳನ್ನು ಧರಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು. ಮಧ್ಯಾಹ್ನ 1 ಗಂಟೆಯ ಬಳಿಕ ದೇವಸ್ಥಾನದ ಮುಂಭಾಗದಲ್ಲಿ ಏರ್ಪಡಿಸಿದ್ದ ಅಗ್ನಿಕುಂಡದಲ್ಲಿ ಅಪಾರ ಸಂಖ್ಯೆಯ ಭಕ್ತರು ಅಗ್ನಿಹಾಯ್ದು ಭಕ್ತಿ ಸಮರ್ಪಿಸಿದರು. ಈ ವೇಳೆ ಮೊಳಗಿದ ‘ಹರ ಹರ ಮಹಾದೇವ’ ಘೋಷ ಮುಗಿಲು ಮುಟ್ಟಿತು. ನಂತರ ಮಹಾಪ್ರಸಾದ ವಿತರಿಸಲಾಯಿತು.
ಅಗ್ನಿಮಹೋತ್ಸವದ ನೇತೃತ್ವವನ್ನು ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಸಮಿತಿ ಅಧ್ಯಕ್ಷ ಶಂಕ್ರಪ್ಪ ಕಾಳಗಿ, ಚಂದ್ರಶೇಖರ ಕಾಳಗಿ, ಬಸವರಾಜ ದೇಸಾಯಿಪಟ್ಟಿ, ಶಂಭು ಕಾಳಗಿ, ಬಸವರಾಜ ಮೂರಶಿಳ್ಳಿ, ವಿಜಯಕುಮಾರ ದೇಸಾಯಿಪಟ್ಟಿ, ಪ್ರಸನ್ನ ಮೂರಶಿಳ್ಳಿ, ದೇವಪ್ಪ ಗದಗಿನ, ನೀಲಕಂಠಪ್ಪ ಕಾಳಗಿ, ಮಂಜುನಾಥ ಸೊಂಟನೂರ, ವೀರೇಶ ದೇಸಾಯಿಪಟ್ಟಿ, ಗಂಗಪ್ಪ ದೇಸಾಯಿಪಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



