ವಿಜಯಸಾಕ್ಷಿ ಸುದ್ದಿ, ಗದಗ: ಹರಿಜಾತ್ರೆ ಎಂದರೆ ತಾಯಿಯರ ಜಾತ್ರೆ. ತಾಯಿ ಎಂದರೆ ಶಕ್ತಿ. ಈ ಜಗತ್ತು ವಿಕಾಸವಾಗಿರುವುದೇ ಆ ಶಕ್ತಿಯಿಂದ ಎಂದು ಗದುಗಿನ ಶಿವಾನಂದ ಬ್ರಹ್ಮಮಠದ ಪೂಜ್ಯಶ್ರೀ ಜ. ಸದಾಶಿವಾನಂದ ಮಹಾಸ್ವಾಮೀಜಿ ಹೇಳಿದರು.
ನಗರದ ಒಕ್ಕಲಗೇರಿ ಓಣಿಯಲ್ಲಿ 18 ವರ್ಷಗಳ ಬಳಿಕ ನಡೆಯುತ್ತಿರುವ ಶ್ರೀ ದ್ಯಾಮಮ್ಮ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರೋತ್ಸವದ ಮೂರನೇ ದಿನದ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪ್ರಕೃತಿಯೇ ತಾಯಿ. ಆ ತಾಯಿಯ ಮಡಿಲಲ್ಲಿ ಎಲ್ಲರನ್ನೂ ಕಾಪಾಡುವ ಶಕ್ತಿಯಿದೆ. ಆ ತಾಯಿಗೆ ಉಡಿ ತುಂಬುವ ಮೂಲಕ ಕೃತಜ್ಞತೆ ಸಲ್ಲಿಸುವುದೇ ಜಾತ್ರೆಯ ಉದ್ದೇಶ. ನಮ್ಮ ದೇಶದಲ್ಲಿ ಹೆಣ್ಣುಮಕ್ಕಳಿಗೆ ದೇವಿಯ ಸ್ಥಾನ ನೀಡಲಾಗುತ್ತದೆ. ಮನೆಯಲ್ಲಿ ಹೆಣ್ಣುಮಕ್ಕಳನ್ನು ಸಾಕ್ಷಾತ್ ದೇವಿಯ ರೂಪದಲ್ಲಿ ಕಾಣುವ ಸಂಪ್ರದಾಯವಿದೆ ಎಂದರು.
18 ವರ್ಷಗಳಿಗೊಮ್ಮೆ ನಡೆಯುವ ಹರಿಜಾತ್ರೆಗೆ ತನ್ನದೇ ಆದ ವಿಶೇಷ ಮಹತ್ವವಿದೆ. ಯಾವ ಸಮಯದಲ್ಲಿ ಯಾವ ಕಾರ್ಯ ನಡೆಯಬೇಕು ಎಂಬುದೂ ದೈವಿಚ್ಛೆಯಾಗಿರುತ್ತದೆ. ದೈವಶಕ್ತಿಯನ್ನು ಆರಾಧಿಸುವುದೇ ಜಾತ್ರೆಯ ಮೂಲ ಆಶಯ ಎಂದು ಶ್ರೀಗಳು ಹೇಳಿದರು.
ಕಪ್ಪತಗುಡ್ಡದ ಪರಿಸರ ಸಂರಕ್ಷಣೆ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಅಭಿವೃದ್ಧಿಯ ಹೆಸರಿನಲ್ಲಿ ಕಪ್ಪತಗುಡ್ಡ ಮಲಿನವಾಗುತ್ತಿದೆ. ಪರಿಸರ ಹಾಳಾಗುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿಕೊಡುವಂತೆ ಶ್ರೀ ದ್ಯಾಮಮ್ಮ ಹಾಗೂ ಶ್ರೀ ದುರ್ಗಮ್ಮ ದೇವಿಯರಲ್ಲಿ ಎಲ್ಲರೂ ಪ್ರಾರ್ಥಿಸೋಣ ಎಂದು ಕರೆ ನೀಡಿದರು.
ಆಧ್ಯಾತ್ಮಿಕ ವಿದ್ಯಾಶ್ರಮದ ಪೂಜ್ಯಶ್ರೀ ನೀಲಮ್ಮ ತಾಯಿ ಅಸುಂಡಿ ಅಮ್ಮನವರು ವೇದಿಕೆಯಲ್ಲಿ ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ್ ಅಧ್ಯಕ್ಷತೆ ವಹಿಸಿದ್ದರು. ಜಾತ್ರಾ ಕಮಿಟಿ ಕಾರ್ಯಾಧ್ಯಕ್ಷ ಫಕ್ಕೀರಪ್ಪ ಹೆಬಸೂರ, ಸಾಮಾಜಿಕ ಕಾರ್ಯಕರ್ತ ಮಹೇಶ ದಾಸರ, ಗಣ್ಯ ವ್ಯಾಪಾರಸ್ಥ ಶರಣಪ್ಪ ಸಾಸನೂರ, ಯುವ ಧುರೀಣ ಸಂಗಮೇಶ ಕವಳಿಕಾಯಿ, ಉದ್ಯಮಿ ಸಾಗರ ಪವಾರ, ಗಣ್ಯ ವ್ಯಾಪಾರಸ್ಥ ಫಕೀರಸಾ ಬಾಂಡಗೆ ಮುಖ್ಯ ಅತಿಥಿಗಳಾಗಿದ್ದರು.
ನಗರಸಭೆ ಸದಸ್ಯರಾದ ಶ್ವೇತಾ ದಂಡಿನ, ವಿಜಯಲಕ್ಷ್ಮೀ ದಿಂಡೂರ, ಗೂಳಪ್ಪ ಮುಶಿಗೇರಿ, ಪ್ರಕಾಶ ಅಂಗಡಿ, ಚಂದ್ರಶೇಖರ ತಡಸದ, ಜಾತ್ರಾ ಕಮಿಟಿ ಕಾರ್ಯದರ್ಶಿ ಗಂಗಾಧರ ಮೆಲಗೇರಿ, ಚಂದ್ರಶೇಖರ ಶೆಟ್ಟರ, ಮಹೇಶ ಶಾಬಾದಿಮಠ, ಕಿರಣ ಭೂಮಾ ಪಾಲನಕರ, ಸಂತೋಷ ಎಂ.ಎಂ. ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಂಚಾಕ್ಷರಿ ಅಂಗಡಿ ಸ್ವಾಗತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಡೋಣಿಯ ನಿಂಗಪ್ಪ ಗುಡ್ಡದ ಅವರಿಂದ ಡೊಳ್ಳಿನ ಪದ ಹಾಗೂ ರಾಮದುರ್ಗ ತಂಡದಿಂದ ಜುಗಲಬಂದಿ ಕಾರ್ಯಕ್ರಮ ನಡೆಯಿತು. ಜಾತ್ರೋತ್ಸವದಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.



