ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠಳ ಬರ್ಬರ ಹತ್ಯೆ ಖಂಡಿಸಿ ಮಂಗಳವಾರ ಪಟ್ಟಣದ ಹಾವಳಿ ಹನುಮಂತದೇವರ ದೇವಸ್ಥಾನದ ಹತ್ತಿರ ಶ್ರೀ ರಾಮಸೇನಾ ಮತ್ತು ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಶ್ರೀರಾಮ ಸೇನಾ ತಾಲೂಕ ಸಂಚಾಲಕ ಈರಣ್ಣ ಪೂಜಾರ, ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ಮೇಲಿನ ಹಲ್ಲೆ, ಕೊಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಪುಸಲಾಯಿತಿ ಮೋಸ ಮಾಡಿ ಮೃಗೀಯ ರೀತಿಯಲ್ಲಿ ಕೊಲೆ ಮಾಡುವ ಕೆಟ್ಟ ಮನಸ್ಥಿತಿಯ ದುಷ್ಕರ್ಮಿಗಳು ಹೆಚ್ಚುತ್ತಿದ್ದು, ಹಿಂದೂ ಸಮಾಜ ಭಯದಲ್ಲಿ ಬದುಕುವಂತಾಗಿದೆ. ಸರಕಾರ ಒಂದು ಸಮಾಜವನ್ನು ಓಲೈಸುವ ನಿಟ್ಟಿನಲ್ಲಿ ಹಿಂದೂ ಸಮಾಜವನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು. ಸರಕಾರ ನೇಹಾ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ದುಷ್ಕರ್ಮಿ ಫಯಾಜ್ನನ್ನು ಕೂಡಲೇ ಗಲ್ಲಿಗೇರಿಸಿ ಎಂದು ಅಕ್ರೋಶ ವ್ಯಕ್ತಪಡಿಸಿದರು.
ತಹಸೀಲ್ದಾರ ವಾಸುದೇವ ಸ್ವಾಮಿ ಮನವಿ ಸ್ವೀಕರಿಸಿದರು. ಕಿರಣ ಚಿಲ್ಲೂರಮಠ, ಬಸವರಾಜ ಚಕ್ರಸಾಲಿ, ಬಸವರಾಜ ಅರಳಿ, ಮುತ್ತು, ಕರ್ಜೆಕಣ್ಣವರ, ಮಂಜುನಾಥ ಕೊಡಳ್ಳಿ, ಅರುಣ ಮೆಕ್ಕಿ, ಅಮಿತ್ ಗುಡಗೇರಿ, ಸೋಮೇಶ ಉಪನಾಳ, ಸಾಗರ ಅಳ್ಳಳ್ಳಿ, ಫಕ್ಕೀರೇಶ ಕರ್ಜೆಕಣ್ಣವರ, ನವೀನ ಕುಂಬಾರ, ಸೋಮು ಗೌರಿ, ಪ್ರಾಣೇಶ ವ್ಯಾಪಾರಿ, ವೆಂಕಟೇಶ ಕುಲಕರ್ಣಿ, ಕುಮಾರ ಕಣವಿ, ಆದೇಶ ಸವಣೂರ ಹಾಜರಿದ್ದರು.