ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಜಗದ್ಗುರು ತೋಂಟದಾರ್ಯ ಮಠದಲ್ಲಿ ವಿಶ್ವಗುರು ಬಸವೇಶ್ವರ ಜಯಂತಿ ಅಂಗವಾಗಿ ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ವತಿಯಿಂದ `ಮಾನವತಾವಾದಿ ಬಸವೇಶ್ವರ’ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ತ್ರಿವಿಧ ದಾಸೋಹಿ ಪೂಜ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ದಿವ್ಯ ಪ್ರಕಾಶದಲ್ಲಿ ಹಾಗೂ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಸಮಾರಂಭ ಜರುಗಲಿದ್ದು, ಮೇ.10ರಂದು ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ತೋಂಟದಾರ್ಯ ಮಠದಿಂದ ಭವ್ಯ ಮೆರವಣಿಗೆ ಆರಂಭವಾಗಿ ನಗರದಾದ್ಯಂತ ಸಂಚರಿಸಲಿದೆ. ಸಾಯಂಕಾಲ 7.30ಕ್ಕೆ ಶ್ರೀಮಠದದಲ್ಲಿ ಜರುಗುವ ವೇದಿಕೆ ಕಾರ್ಯಕ್ರಮದಲ್ಲಿ `ಮಾನವತಾವಾದಿ ಬಸವೇಶ್ವರ’ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರುವುದು.
ಶಿವಮೊಗ್ಗದ ಡಾ.ಪುಟ್ಟರಾಜ ಕವಿ ಗವಾಯಿಗಳ ಉಚಿತ ಸಂಗೀತ ಮತ್ತು ಸಂಸ್ಕೃತ ಪಾಠಶಾಲೆಗೆ ಈ ಬಾರಿ `ಮಾನವತಾವಾದಿ ಬಸವೇಶ್ವರ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಪ್ರಶಸ್ತಿ ಪ್ರದಾನ ನೆರವೇರಿಸುವರು.
ಇದೇ ಸಂದರ್ಭದಲ್ಲಿ ಡಾ.ಎಂ.ಎಂ ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಡಾ.ಶಿವಾನಂದ ವಿರಕ್ತಮಠ ರಚಿಸಿದ `ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ’ ಗ್ರಂಥ ಲೋಕಾರ್ಪಣೆಗೊಳ್ಳಲಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತ ಪ್ರತಿ ವಿಭಾಗದ ಮುಖ್ಯಸ್ಥ ಡಾ.ಕೆ ರವೀಂದ್ರನಾಥ ಗ್ರಂಥ ಲೋಕಾರ್ಪಣೆಗೊಳಿಸುವರು. ರೇವಣಸಿದ್ಧಯ್ಯ ಮರಿದೇವರಮಠ ಹಾಗೂ ಸಂಗಡಿಗರಿಂದ ವಚನ ಸಂಗೀತ ಜರುಗುವುದು.
ಮೇ.11ರ ಸಂಜೆ 7.30ಕ್ಕೆ ಜರುಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಎಸ್.ಎಸ್. ಪಾಟೀಲ ವಹಿಸುವರು. ಅತಿಥಿಗಳಾಗಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮೇಗೌಡ ಆಗಮಿಸುವರು.
ಧಾರವಾಡದ ವಿಜಯಕುಮಾರ ಕಮ್ಮಾರ ವಿಶೇಷ ಉಪನ್ಯಾಸ ನೀಡುವರು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಅವರಿಂದ ವಚನ ಸಂಗೀತ ಹಾಗೂ ರಾಜೇಶ್ವರಿ ಕಲಾ ಕುಟೀರದ ವಿದ್ಯಾರ್ಥಿಗಳಿಂದ ವಚನ ವೈಭವ ಜರುಗುವುದು ಎಂದು ಪ್ರಕಟಣೆ ತಿಳಿಸಿದೆ.