ವಿಜಯಸಾಕ್ಷಿ ಸುದ್ದಿ, ಗದಗ: ಇನ್ನರ್ ವೀಲ್ ಕ್ಲಬ್ ಗದಗ-ಬೆಟಗೇರಿ ವತಿಯಿಂದ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಂಗವಾಗಿ ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಆರ್ಥಿಕವಾಗಿ ಹಿಂದುಳಿದ ಶ್ರವಣ ದೋಷವುಳ್ಳ ವಿದ್ಯಾರ್ಥಿನಿ ಪಲ್ಲವಿ ಭಾನಾಪುರ ಅವರಿಗೆ ಶಿಕ್ಷಣ ಮುಂದುವರಿಸಲು ಅಗತ್ಯ ಪಠ್ಯಪೂರಕ ಸಾಮಗ್ರಿಗಳನ್ನು ವಿತರಿಸಲಾಯಿತು. ಬಡ ರೈತ ಮಹಿಳೆ ಪದ್ಮಾವತಿ ಡೊಂಗಡೆ ಅವರಿಗೆ ಕೃಷಿಗೆ ನೆರವಾಗುವಂತೆ ಬೀಜಗಳನ್ನು ವಿತರಿಸಿದರೆ, ಮತ್ತೊಬ್ಬ ಮಹಿಳೆ ಶೈಲಾ ಅಂಗಡಿ ಅವರಿಗೆ ದೈನಂದಿನ ಜೀವನಕ್ಕೆ ನೆರವಾಗುವ ಉದ್ದೇಶದಿಂದ ಮಿಕ್ಸರ್ ಗ್ರೈಂಡರ್ ನೀಡಲಾಯಿತು.
ಈ ಸಂದರ್ಭದಲ್ಲಿ ಡಿಇಎಸ್ಒ ವಿರಾಜ ಕೋಟಕ್ ಅವರು ಕ್ಲಬ್ನ ಸೇವಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಪಿಡಿಸಿ ಪ್ರೇಮಾ ಗುಳಗೌಡರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷೆ ಅಶ್ವಿನಿ ಜಗತಾಪ್ ಸ್ವಾಗತಿಸಿದರು. ರೇಣುಕಾ ಅಮಾತ್ಯ ಪ್ರಾರ್ಥನೆ ನಡೆಸಿದರೆ, ಸುವರ್ಣ ಮದರಿಮಠ ಇನ್ನರ್ ವೀಲ್ ಪ್ರಾರ್ಥನೆ ನೆರವೇರಿಸಿದರು.
ಪ್ರಸಕ್ತ ಸಾಲಿನ ಅಧ್ಯಕ್ಷೆ ಮಂಜುಳಾ ಅಕ್ಕಿ ವಾರ್ಷಿಕ ಸೇವಾ ಯೋಜನೆಗಳನ್ನು ವಿವರಿಸಿದರು. ಕಾರ್ಯದರ್ಶಿ ಪೂಜಾ ಭೂಮಾ ವಂದಿಸಿದರು. ಜ್ಯೋತಿ ದಾನಪ್ಪಗೌಡರ ಹಾಗೂ ಸ್ಮಿತಾ ಹೊಸೂರ್ ಕಾರ್ಯಕ್ರಮ ನಿರ್ವಹಿಸಿದರು.



