ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪ್ರಕೃತಿಯ ಸೃಷ್ಟಿಯ ಮುಂದೆ ಮನುಷ್ಯನ ಕಲ್ಪನೆಯೂ ಕೆಲವೊಮ್ಮೆ ಮಂಕಾಗುತ್ತದೆ. ಅಂತಹ ಅಪರೂಪದ ಪ್ರಕೃತಿ ವೈಚಿತ್ರ್ಯವೊಂದು ನರೇಗಲ್ಲ–ಗದಗ ರಸ್ತೆಯ ಪೆಟ್ರೋಲ್ ಬಂಕ್ ಸಮೀಪದ ಪ್ರಶಾಂತ ಮೇಸ್ತ್ರಿ ಅವರ ಕಾರ್ ಗ್ಯಾರೇಜ್ ಎದುರು ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಗಿಡ ಮತ್ತು ಜಾಲಿಗಿಡಗಳ ಸಹಜ ಬೆಳವಣಿಗೆಯಿಂದ ರೂಪುಗೊಂಡಿರುವ ಈ ಆಕಾರ ನೋಡಿದವರಿಗೆ ಒಂದೇ ರೀತಿಯಾಗಿ ಕಾಣುವುದಿಲ್ಲ. ಕೆಲವರಿಗೆ ಅದು ಬಾಯಿ ತೆರೆದು ಬೇಟೆಗೆ ಹೊಂಚು ಹಾಕಿರುವ ಮೊಸಳೆಯಂತೆ ಭಾಸವಾದರೆ, ಮತ್ತೂ ಕೆಲವರಿಗೆ ಸೊಂಡಿಲೆತ್ತಿ ಘೀಳಿಡುತ್ತಿರುವ ಆನೆಯಂತೆ ಕಾಣುತ್ತಿದೆ. ಅದರ ತಲೆ, ಬಾಯಿ ಮತ್ತು ಕೋರೆ ಹಲ್ಲುಗಳಂತಿರುವ ಆಕಾರ ಪ್ರಕೃತಿಯ ಅದ್ಭುತ ಕಲಾಕೃತಿಯಂತೆ ಗೋಚರಿಸುತ್ತಿದೆ.
ವಿಶೇಷವೆಂದರೆ, ಈ ರಚನೆಯನ್ನು ಯಾರೂ ಕೃತಕವಾಗಿ ಸೃಷ್ಟಿಸಿಲ್ಲ. ಯಾವುದೇ ಕೊಂಬೆಗಳನ್ನು ಕತ್ತರಿಸಿ ಅಥವಾ ರೂಪಿಸಿ ಮಾಡದೇ, ಗಿಡಗಳ ಸಹಜ ಬೆಳವಣಿಗೆಯಿಂದಲೇ ಈ ವಿಶಿಷ್ಟ ಆಕಾರ ಮೂಡಿದೆ. ಇದೇ ಕಾರಣಕ್ಕೆ ಈ ಮಾರ್ಗದಲ್ಲಿ ಸಂಚರಿಸುವ ಅನೇಕರು ವಾಹನಗಳನ್ನು ನಿಲ್ಲಿಸಿ ಕೆಲ ಹೊತ್ತು ಈ ಪ್ರಕೃತಿ ವೈಚಿತ್ರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಸ್ಥಳೀಯ ನಿವಾಸಿ ಈರಪ್ಪ ಮಣ್ಣೊಡ್ಡರ ಮಾತನಾಡಿ, “ನಾವು ಇಲ್ಲಿಯೇ ಕೆಲಸ ಮಾಡುತ್ತಿದ್ದರೂ ಈ ರಚನೆ ನಮ್ಮ ಗಮನಕ್ಕೆ ಬಂದಿರಲಿಲ್ಲ. ದಾರಿಹೋಕರು ಪದೇಪದೇ ವಾಹನ ನಿಲ್ಲಿಸಿ ನೋಡುತ್ತಿರುವುದನ್ನು ಕಂಡು ಕುತೂಹಲದಿಂದ ಗಮನಿಸಿದಾಗ ಈ ಅಪರೂಪದ ಆಕಾರ ಕಾಣಿಸಿತು. ಇದು ಪ್ರಕೃತಿಯೇ ಮೂಡಿಸಿರುವ ಅದ್ಭುತ ಶಿಲ್ಪ,” ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಸೃಷ್ಟಿಯ ರಹಸ್ಯಗಳನ್ನು ಅರಿಯಲು ದೊಡ್ಡ ಕಣ್ಣಲ್ಲ, ಗಮನಿಸುವ ಕಣ್ಣು ಸಾಕು ಎನ್ನುವುದನ್ನು ಈ ಪ್ರಕೃತಿ ಕಲಾಕೃತಿಯೇ ಸಾಬೀತುಪಡಿಸುತ್ತಿದೆ.



