ವಿಜಯಸಾಕ್ಷಿ ಸುದ್ದಿ, ಗದಗ: ಕೆಲಸ ಖಾಯಂ ಸೇರಿದಂತೆ ತಮ್ಮ ಹಕ್ಕುಗಳಿಗಾಗಿ ಮನವಿ ಸಲ್ಲಿಸಲು ಬಂದ ಪೌರಕಾರ್ಮಿಕರನ್ನು ಸಚಿವ ಕೃಷ್ಣ ಬೈರೇಗೌಡ ಅವರು ನಡೆಸಿಕೊಂಡ ರೀತಿಯನ್ನು ಖಂಡಿಸಿರುವ ಪತ್ರಕರ್ತರು, ಲೇಖಕರು, ನ್ಯಾಯವಾದಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು, ಪೌರಕಾರ್ಮಿಕ ಸಮುದಾಯದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪತ್ರದಲ್ಲಿ, ಸರ್ಕಾರಿ ಕೆಲಸದಲ್ಲಿ ಲೋಪಗಳಿದ್ದರೆ ಜವಾಬ್ದಾರಿಯುತ ಸಚಿವರು ಪ್ರಶ್ನಿಸುವುದು ಸಹಜ. ಆದರೆ ಪೌರಕಾರ್ಮಿಕರನ್ನೇ ಗುರಿಯಾಗಿಸಿ ಪ್ರಶ್ನಿಸುವ ಧೋರಣೆ ಪೂರ್ವಗ್ರಹಪೀಡಿತವಾಗಿದ್ದರೆ ಅದು ಅಕ್ಷಮ್ಯ ಎಂದು ಹೇಳಿದ್ದಾರೆ.
ಪೌರಕಾರ್ಮಿಕರ ಕೆಲಸದ ಪರಿಸ್ಥಿತಿ, ಅವರಿಗೆ ಅಗತ್ಯ ಸುರಕ್ಷತಾ ಪರಿಕರಗಳ ಲಭ್ಯತೆ ಹಾಗೂ ಆರೋಗ್ಯ ತಪಾಸಣೆ ಕುರಿತು ಸರ್ಕಾರ ಗಂಭೀರವಾಗಿ ಗಮನಹರಿಸಬೇಕು. ಕಸ ವಿಲೇವಾರಿ ಸೇರಿದಂತೆ ಅಪಾಯಕಾರಿ ಸ್ವಚ್ಛತಾ ಕಾರ್ಯ ನಿರ್ವಹಿಸುವ ಕಾರ್ಮಿಕರ ಸಮಸ್ಯೆಗಳನ್ನು ಅರಿಯದೆ ಅವರನ್ನೇ ಪ್ರಶ್ನಿಸುವುದು ಸರಿಯಲ್ಲ ಎಂದು ಪತ್ರದಲ್ಲಿ ಆಕ್ಷೇಪಿಸಲಾಗಿದೆ.
ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಶೋಷಣೆಯಿಂದ ನಲುಗಿರುವ ಪೌರಕಾರ್ಮಿಕರು ತಮ್ಮ ಅಹವಾಲು ಹೇಳಿಕೊಳ್ಳಲು ಬಂದ ಸಂದರ್ಭದಲ್ಲಿ ಸಚಿವರು ಬಳಸಿದ ಭಾಷೆ ಮತ್ತು ಪ್ರಶ್ನಿಸಿದ ರೀತಿ ಸಂವೇದನಾ ರಹಿತವಾಗಿದ್ದು, ನಿರ್ದಯವಾಗಿದೆ. ಅಧಿಕಾರದಲ್ಲಿರುವವರು ಯಾವುದೇ ಸಂದರ್ಭದಲ್ಲೂ ಮಾನವೀಯ ಸಂವೇದನೆ ಕಳೆದುಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.
ಪೌರಕಾರ್ಮಿಕರನ್ನು ಅವಮಾನಿಸುವ ರೀತಿಯಲ್ಲಿ ನಡೆದುಕೊಂಡಿರುವ ಸಚಿವ ಕೃಷ್ಣ ಬೈರೇಗೌಡ ಅವರು ಕೂಡಲೇ ಪೌರಕಾರ್ಮಿಕ ಸಮುದಾಯದ ಕ್ಷಮೆ ಕೇಳಬೇಕು. ಸಂವೇದನೆ ಕಳೆದುಕೊಂಡಿದ್ದರೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ, ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ ಪತ್ರಕ್ಕೆ ರುದ್ರಪ್ಪ ಸಿ., ಎನ್. ರವಿಕುಮಾರ್, ಕೆ.ಪಿ. ಶ್ರೀಪಾಲ್, ವೈ.ಜಿ. ಅಶೋಕ್ ಕುಮಾರ್, ಕೆ.ಎಲ್. ಅಶೋಕ್, ರಶ್ಮಿ ಎಸ್., ಬಸವರಾಜ ಸೂಳಿಭಾವಿ (ಬಸೂ), ಮೀನಾಕ್ಷಿ ಬಾಳಿ, ಡಾ. ಎಚ್.ಎಸ್. ಅನುಪಮಾ, ಸನತಕುಮಾರ ಬೆಳಗಲಿ ಸೇರಿದಂತೆ ವಿವಿಧ ಕ್ಷೇತ್ರಗಳ ಹಲವರು ಸಹಿ ಹಾಕಿದ್ದಾರೆ.



