ಐಪಿಎಲ್ ಮುಕ್ತಾಯವಾದ ಬೆನ್ನಲ್ಲೇ ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ ಏಕದಿನ ಹಾಗೂ ಟೆಸ್ಟ್ ಸರಣಿಯನ್ನು ಆಡಲಿದ್ದು, ಈ ಸರಣಿಗಳಿಗಾಗಿ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ಹೊಸ ತಂಡಗಳಲ್ಲಿ ಹಲವು ಯುವ ಆಟಗಾರರಿಗೆ ಅವಕಾಶ ನೀಡಲಾಗಿದ್ದು, ಕೆಲವು ಹಿರಿಯ ಆಟಗಾರರಿಗೆ ಗೇಟ್ ಪಾಸ್ ನೀಡಲಾಗಿದೆ.
ಈ ಪೈಕಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ಗೆ ಬಿಸಿಸಿಐ ಡಬಲ್ ಶಾಕ್ ನೀಡಿದೆ. ಟೆಸ್ಟ್ ತಂಡದ ಉಪನಾಯಕತ್ವದಿಂದ ಅವರನ್ನು ಕೈಬಿಡಲಾಗಿದ್ದು, ಏಕದಿನ ತಂಡದಲ್ಲೂ ಅವಕಾಶ ನೀಡಿಲ್ಲ.
ಕಳೆದ ವರ್ಷ ಶುಭ್ಮನ್ ಗಿಲ್ ಗಾಯಗೊಂಡ ಹಿನ್ನೆಲೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ ಆ ಸರಣಿಯಲ್ಲಿ ಭಾರತ 0-2 ಅಂತರದಿಂದ ಸೋಲು ಅನುಭವಿಸಿತ್ತು. ಇದೀಗ ಪಂತ್ ಬದಲಿಗೆ ಕೆಎಲ್ ರಾಹುಲ್ ಅವರನ್ನು ಟೆಸ್ಟ್ ತಂಡದ ಉಪನಾಯಕನಾಗಿ ನೇಮಿಸಲಾಗಿದೆ.
ಇನ್ನೊಂದೆಡೆ ಕಳೆದ ಎರಡು ವರ್ಷಗಳಿಂದ ಏಕದಿನ ತಂಡದಲ್ಲಿದ್ದರೂ ಪಂತ್ಗೆ ಒಂದೇ ಒಂದು ಪಂದ್ಯದಲ್ಲೂ ಅವಕಾಶ ಸಿಕ್ಕಿರಲಿಲ್ಲ. ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್ ಸ್ಥಾನ ಉಳಿಸಿಕೊಂಡಿದ್ದರು. ಈಗ ಪಂತ್ ಅವರನ್ನು ಸಂಪೂರ್ಣವಾಗಿ ಏಕದಿನ ತಂಡದಿಂದ ಕೈಬಿಡಲಾಗಿದ್ದು, ಇಶಾನ್ ಕಿಶನ್ಗೆ ಎರಡನೇ ವಿಕೆಟ್ ಕೀಪರ್ ಆಗಿ ಅವಕಾಶ ನೀಡಲಾಗಿದೆ.
ರಿಷಭ್ ಪಂತ್ ಕೊನೆಯ ಬಾರಿಗೆ 2024ರ ಆಗಸ್ಟ್ನಲ್ಲಿ ಏಕದಿನ ಪಂದ್ಯವನ್ನಾಡಿದ್ದರು. ಬಳಿಕ ಅಭ್ಯಾಸದ ವೇಳೆ ಗಾಯಗೊಂಡ ಕಾರಣ 2025ರ ಜನವರಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಅವರ ಸ್ಥಾನಕ್ಕೆ ಧ್ರುವ್ ಜುರೆಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.
ಇದುವರೆಗೆ ಪಂತ್ 31 ಏಕದಿನ ಪಂದ್ಯಗಳಲ್ಲಿ 27 ಇನ್ನಿಂಗ್ಸ್ ಆಡಿದ್ದು, 33.50 ಸರಾಸರಿ ಹಾಗೂ 106.21 ಸ್ಟ್ರೈಕ್ರೇಟ್ನಲ್ಲಿ 871 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ನಾಲ್ಕು ಅರ್ಧಶತಕಗಳು ಸೇರಿವೆ.



