ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜದಲ್ಲಿ ಜಾತಿ, ಧರ್ಮ, ಭಾಷೆ ಅಥವಾ ಯಾವುದೇ ಜನಾಂಗ ನಮ್ಮ ಶತ್ರುಗಳಲ್ಲ. ಅಸಮಾನತೆ ಮತ್ತು ಅನ್ಯಾಯದ ವ್ಯವಸ್ಥೆಯೇ ನಮ್ಮ ನಿಜವಾದ ಶತ್ರು ಎಂದು ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್ ಹೇಳಿದರು.
ನಗರದ ಬಾಬು ಜಗಜೀವನರಾಂ ಸಭಾಭವನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಸಾಧಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಲಿತ ಸಂಘರ್ಷ ಸಮಿತಿ ಶಿಕ್ಷಣ, ಸಾಮಾಜಿಕ ಜಾಗೃತಿ ಹಾಗೂ ಪ್ರತಿಭಾವಂತರ ಪ್ರೋತ್ಸಾಹದ ಮೂಲಕ ಮಹತ್ವದ ಕಾರ್ಯ ಮಾಡುತ್ತಿದೆ. ಸಮಾಜಕ್ಕಾಗಿ ನಿಸ್ವಾರ್ಥವಾಗಿ ದುಡಿಯುವವರನ್ನು ಯುವಕರು ಆದರ್ಶವಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಇಂದಿನ ಯುವ ಪೀಳಿಗೆಯಲ್ಲಿ ಹೋರಾಟದ ಮನೋಭಾವ ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಅನ್ಯಾಯ ಮತ್ತು ಶೋಷಣೆಯ ವಿರುದ್ಧ ಜಾಗೃತ ಹೋರಾಟ ನಡೆಸುವ ಮೂಲಕ ಅಂಬೇಡ್ಕರ್, ಪುಲೆ ಹಾಗೂ ಪೆರಿಯಾರ್ ಅವರ ಕನಸಿನ ಸಮಾನತೆಯ ಸಮಾಜವನ್ನು ನಿರ್ಮಿಸಬೇಕಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರು ಹಾಗೂ ಪೌರ ಕಾರ್ಮಿಕರಿಗೂ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ತಮ್ಮಣ್ಣವರ ವಹಿಸಿದ್ದರು. ರಾಜ್ಯಾಧ್ಯಕ್ಷ ಮಾರುತಿ ಮಡ್ಡಮನಿ ಅಂಬೇಡ್ಕರ್ ಹಾಗೂ ಪುಲೆ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ರೋಣ ತಾಲೂಕು ಅಧ್ಯಕ್ಷ ಮಿಥುನ್ ಪಾಟೀಲ, ಕಾಂಗ್ರೆಸ್ ವಕ್ತಾರ ಸಂಗಮೇಶ ಕೊಳ್ಳಿ ಹಾಗೂ ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಎಸ್.ಎನ್. ಬಳ್ಳಾರಿ ಮಾತನಾಡಿದರು.
ವೇದಿಕೆಯಲ್ಲಿ ವಿರೂಪಾಕ್ಷಪ್ಪ ರಾಮಗೀರಿ, ಆನಂದ ಶಿಂಗಾಡಿ, ಸಿದ್ದಪ್ಪ ಲಿಂಗದಾಳ, ಶರೀಫ್ ಬಿಳಿಯಲಿ, ಬಾಲರಾಜ್ ಅರಬರ, ರಮೇಶ್ ಚಲವಾದಿ, ಶಂಭು ಕಾಳೆ, ಶಿವಪುತ್ರಪ್ಪ ಚಲವಾದಿ, ಬಸವರಾಜ ಬಿಳಿಯಲಿ, ಅನಿಲ್ ಕಾಳೆ, ರಾಘವೇಂದ್ರ ಬಿನ್ನಾಳ, ಪರಶು ಕಾಳೆ, ನಿತೀಶ ಘಟ್ಟೆಣ್ಣವರ, ಶರಣು ಕಾಳೆ, ಹನುಮಂತ ಘಟ್ಟೆಣ್ಣವರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ರಾಮಚಂದ್ರ ಹಂಸನೂರು ಕಾರ್ಯಕ್ರಮ ನಿರೂಪಿಸಿದರು.
“ಶಿಕ್ಷಿಸು, ಸಂಘಟಿಸು, ಹೋರಾಟ ಮಾಡು ಎಂಬುದು ಡಾ. ಅಂಬೇಡ್ಕರ್ ಸಮಾಜಕ್ಕೆ ನೀಡಿದ ಕ್ರಾಂತಿಕಾರಿ ಸಂದೇಶ. ಅಂಬೇಡ್ಕರ್, ಮಹಾತ್ಮ ಜ್ಯೋತಿಬಾ ಪುಲೆ ಹಾಗೂ ಪೆರಿಯಾರ್ ಅವರ ಸಿದ್ಧಾಂತಗಳ ಆಧಾರದ ಮೇಲೆ ಸಮ ಸಮಾಜ ಕಟ್ಟಿದಾಗ ಮಾತ್ರ ನ್ಯಾಯಯುತ ಮತ್ತು ಪ್ರಗತಿಪರ ಸಮಾಜ ನಿರ್ಮಾಣ ಸಾಧ್ಯ.”
ಅಹಿಂಸಾ ಚೇತನ್



