ಬಳ್ಳಾರಿ: ಹಂಪಿಯ ವಿರೂಪಾಕ್ಷ ದೇವಸ್ಥಾನದ ಆನೆ ‘ಲಕ್ಷ್ಮೀ’ ಕೊನೆಗೂ ಹಂಪಿಗೆ ವಿದಾಯ ಹೇಳಿದೆ. ಸ್ಥಳೀಯರ ತೀವ್ರ ವಿರೋಧ, ಸಾಮಾಜಿಕ ಜಾಲತಾಣಗಳ ಆಕ್ರೋಶ ಹಾಗೂ ಭಾವನಾತ್ಮಕ ಪ್ರತಿಭಟನೆಗಳ ನಡುವೆಯೂ ತಡರಾತ್ರಿ ರಹಸ್ಯ ಕಾರ್ಯಾಚರಣೆ ಮೂಲಕ ಆನೆಯನ್ನು ಕೋಲಾರಕ್ಕೆ ಸ್ಥಳಾಂತರಿಸಲಾಗಿದೆ.
ಮುಜರಾಯಿ ಇಲಾಖೆ ಮತ್ತು ವಿಜಯನಗರ ಜಿಲ್ಲಾಡಳಿತ ಸಂಯುಕ್ತವಾಗಿ ಈ ಕಾರ್ಯಾಚರಣೆ ನಡೆಸಿದ್ದು, ರಾತ್ರಿ 1 ಗಂಟೆಯ ನಂತರ ಯಾವುದೇ ಗೊಂದಲ ಸೃಷ್ಟಿಯಾಗದಂತೆ ಅತ್ಯಂತ ಗೌಪ್ಯವಾಗಿ ಆನೆಯನ್ನು ಲಾರಿಗೆ ಹತ್ತಿಸಿ ಕರೆದೊಯ್ಯಲಾಗಿದೆ.
ಈ ವೇಳೆ ವರ್ಷಗಳಿಂದ ಲಕ್ಷ್ಮಿಯನ್ನು ಸಾಕಿ ಬೆಳೆಸಿದ್ದ ಮಾವುತರ ಕುಟುಂಬ ಭಾವುಕರಾಯಿತು. ಆನೆಯನ್ನು ಅಪ್ಪಿಕೊಂಡು ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಅಲ್ಲಿದ್ದವರ ಮನಕಲಕಿತು. ಸ್ಥಳೀಯರು ಸಹ ಆಡಳಿತದ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಆದರೆ ಅಧಿಕಾರಿಗಳ ಪ್ರಕಾರ, ಲಕ್ಷ್ಮಿಯ ಆರೋಗ್ಯ ಸ್ಥಿತಿ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಮತ್ತು ಆರೈಕೆಗೆ ಅನುಕೂಲವಾಗುವಂತೆ ಕೋಲಾರಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹಂಪಿಯ ಜನರೊಂದಿಗೆ ಭಾವನಾತ್ಮಕ ನಂಟು ಹೊಂದಿದ್ದ ‘ಲಕ್ಷ್ಮೀ’ಯ ಸ್ಥಳಾಂತರ ಇದೀಗ ರಾಜ್ಯಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ.



