HomeGadag News40 ವರ್ಷಗಳಿಂದ ಗುಡಿಸಲು... ಇನ್ನೂ ಸ್ವಂತ ಸೂರು ಇಲ್ಲ!

40 ವರ್ಷಗಳಿಂದ ಗುಡಿಸಲು… ಇನ್ನೂ ಸ್ವಂತ ಸೂರು ಇಲ್ಲ!

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: “ನಾವೂ ನಿಮ್ಮಂತೆ ಮನುಷ್ಯರಲ್ಲವೇ? ನಮಗೂ ಈ ನೆಲದಲ್ಲಿ ಬದುಕುವ ಹಕ್ಕಿಲ್ಲವೇ?” ಇದು ಲಕ್ಷ್ಮೇಶ್ವರ ಪಟ್ಟಣದ ದೊಡ್ಡೂರ ರಸ್ತೆ ಪಕ್ಕದಲ್ಲಿ ಕಳೆದ ಹಲವು ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಹತ್ತಾರು ಕುಟುಂಬಗಳ ಹೃದಯವಿದ್ರಾವಕ ಪ್ರಶ್ನೆ.
ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕಾಗಿ ತಾವು ವಾಸಿಸುತ್ತಿರುವ ಜಾಗವನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ, “ನಮಗೆ ಸ್ವಂತ ಸೂರು ಕಲ್ಪಿಸದೇ ಮತ್ತೆ ಬೀದಿಗೆ ತಳ್ಳಬೇಡಿ” ಎಂದು ಗುಡಿಸಲು ನಿವಾಸಿಗಳು ಸರ್ಕಾರ ಹಾಗೂ ಜನಪ್ರತಿನಿಧಿಗಳ ಮುಂದೆ ಮನವಿ ಮಾಡಿದ್ದಾರೆ.
ಸುಮಾರು 40 ವರ್ಷಗಳ ಹಿಂದೆ ಕಲಾಯಿ ಕೆಲಸಗಾರರು, ಸುಡಗಾಡ ಸಿದ್ಧರು, ದುರ್ಗಮುರಿಗರು, ಮೋಡಿಕಾರರು, ಕುಂಚಿಕೋರರು, ಬಗರಿಕಾರರು ಸೇರಿದಂತೆ ಹಲವು ಸಮುದಾಯಗಳ ಕುಟುಂಬಗಳು ಉದ್ಯೋಗ ಅರಸಿ ಲಕ್ಷ್ಮೇಶ್ವರಕ್ಕೆ ವಲಸೆ ಬಂದಿದ್ದವು. ಆರಂಭದಲ್ಲಿ ಹಳೆಯ ಬಸ್ ನಿಲ್ದಾಣದ ಸುತ್ತಮುತ್ತ ನೆಲೆಸಿದ್ದ ಇವರನ್ನು ಅಲ್ಲಿಂದ ತೆರವುಗೊಳಿಸಿದ ಬಳಿಕ ಹೊಸ ಬಸ್ ನಿಲ್ದಾಣದ ಹಿಂಭಾಗದ ಕಂದಾಯ ಇಲಾಖೆಯ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿಂದಲೂ ತೆರವುಗೊಳಿಸಿದ ನಂತರ ಕಳೆದ ಹಲವು ವರ್ಷಗಳಿಂದ ದೊಡ್ಡೂರ ರಸ್ತೆ ಪಕ್ಕದ ಪುರಸಭೆ ಮೈದಾನದಲ್ಲಿ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿದ್ದಾರೆ.
ಈಗ ಇದೇ ಜಾಗದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಚಾಲನೆ ದೊರೆತಿರುವುದರಿಂದ ಮತ್ತೊಮ್ಮೆ ನಿರಾಶ್ರಿತರಾಗುವ ಭೀತಿ ಅವರನ್ನು ಕಾಡುತ್ತಿದೆ.
ಗುಡಿಸಲು ನಿವಾಸಿಗಳಲ್ಲಿ ಬಹುತೇಕರ ಬಳಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಸೇರಿದಂತೆ ಎಲ್ಲಾ ಅಗತ್ಯ ದಾಖಲೆಗಳಿದ್ದರೂ, ಸ್ವಂತ ಸೂರಿನ ಕನಸು ಮಾತ್ರ ಇನ್ನೂ ನನಸಾಗಿಲ್ಲ. ಸರ್ಕಾರಗಳು ಗುಡಿಸಲು ಮುಕ್ತ ರಾಜ್ಯ, ಎಲ್ಲರಿಗೂ ಮನೆ, ಆರೋಗ್ಯ, ಶಿಕ್ಷಣ ಹಾಗೂ ಮೂಲಸೌಕರ್ಯಗಳ ಭರವಸೆ ನೀಡುತ್ತಾ ಬಂದರೂ, ತಮ್ಮ ಬದುಕಿನಲ್ಲಿ ಅದರ ಅನುಭವವಾಗಿಲ್ಲ ಎಂಬುದು ನಿವಾಸಿಗಳ ನೋವಾಗಿದೆ.
ಆದರೆ, ಈ ಪ್ರದೇಶದಲ್ಲಿ ವಾಸಿಸುವ ಕೆಲವರು ಬೇರೆಡೆ ಮನೆ ಹೊಂದಿದ್ದಾರೆ ಎಂಬ ಆರೋಪಗಳೂ ಕೇಳಿವ ಬಂದಿವೆ. ಹೀಗಾಗಿ ನಿಜವಾದ ನಿವೇಶನ ರಹಿತ ಹಾಗೂ ನಿರಾಶ್ರಿತ ಕುಟುಂಬಗಳನ್ನು ಗುರುತಿಸಿ ಅವರಿಗೆ ಶಾಶ್ವತ ನೆಲೆ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
 “ಬಾಲ್ಯದಿಂದಲೇ ಗುಡಿಸಲಿನಲ್ಲೇ ಬದುಕುತ್ತಿದ್ದೇವೆ. ಮತದಾರರ ಚೀಟಿ, ಆಧಾರ್, ರೇಷನ್ ಕಾರ್ಡ್ ಎಲ್ಲವೂ ಇದೆ. ಆದರೆ ಸ್ವಂತ ಮನೆ ಮಾತ್ರ ಸಿಕ್ಕಿಲ್ಲ. ಈಗ ಮತ್ತೆ ಇಲ್ಲಿಂದ ತೆರವುಗೊಳಿಸುತ್ತಿದ್ದಾರೆ. ನಾವು ಎಲ್ಲಿ ಹೋಗಬೇಕು? ನಮಗೂ ಒಂದು ಸೂರು ಕಲ್ಪಿಸಿ.”
– ಶಾಂತವ್ವ ಬಗರಕೇರ ಸೇರಿದಂತೆ ಗುಡಿಸಲು ನಿವಾಸಿಗಳು
“ಪ್ರಜಾಸೌಧ ನಿರ್ಮಾಣವಾಗಲಿರುವ ಜಾಗದಲ್ಲಿರುವ ಗುಡಿಸಲು ನಿವಾಸಿಗಳಿಗೆ ತಾತ್ಕಾಲಿಕವಾಗಿ ಬೇರೆಡೆ ಸ್ಥಳಾವಕಾಶ ಕಲ್ಪಿಸಲು ಸೂಚಿಸಲಾಗಿದೆ. ನಿಜವಾದ ನಿರಾಶ್ರಿತರಿಗೆ ಶಿಗ್ಲಿ ರಸ್ತೆ ಹಾಗೂ ಕೆಂಪಿಗೆರೆ ಬಳಿಯ ಪುರಸಭೆ ಜಾಗದಲ್ಲಿ ಶಾಶ್ವತ ನೆಲೆ ಕಲ್ಪಿಸುವ ಕುರಿತು ಶಾಸಕರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.”
– ಧನಂಜಯ ಎಂ., ತಹಸೀಲ್ದಾರ್, ಲಕ್ಷ್ಮೇಶ್ವರ
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img