HomeIndia Newsಬಹುಮತ ಸಾಬೀತಾದರೆ ನಾಳೆಯೇ ಪ್ರಮಾಣವಚನ: ವಿಜಯ್ ವಿಚಾರದಲ್ಲಿ ರಾಜ್ಯಪಾಲ ಅರ್ಲೇಕರ್ ಸ್ಪಷ್ಟನೆ

ಬಹುಮತ ಸಾಬೀತಾದರೆ ನಾಳೆಯೇ ಪ್ರಮಾಣವಚನ: ವಿಜಯ್ ವಿಚಾರದಲ್ಲಿ ರಾಜ್ಯಪಾಲ ಅರ್ಲೇಕರ್ ಸ್ಪಷ್ಟನೆ

For Dai;y Updates Join Our whatsapp Group

Spread the love

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆ ಕುರಿತ ರಾಜಕೀಯ ಚರ್ಚೆಗಳು ತೀವ್ರವಾಗಿರುವ ನಡುವೆಯೇ ರಾಜ್ಯಪಾಲ ಆರ್‌.ವಿ. ಅರ್ಲೇಕರ್ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಬಹುಮತ ಹೊಂದಿರುವ ಯಾವುದೇ ಪಕ್ಷ ಅಥವಾ ಮೈತ್ರಿಗೆ ಸರ್ಕಾರ ರಚನೆಗೆ ಅವಕಾಶ ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಿದ್ದು, ಅಂತಿಮವಾಗಿ ಸಂಖ್ಯೆಯೇ ಮುಖ್ಯ ಎಂದು ಅವರು ಹೇಳಿದ್ದಾರೆ.

ದಳಪತಿ ವಿಜಯ್ ಎರಡು ಬಾರಿ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಆದರೆ, ಅಗತ್ಯ ಬಹುಮತವನ್ನು ಸಾಬೀತುಪಡಿಸಲು ಸಾಧ್ಯವಾಗದ ಹಿನ್ನೆಲೆ ಅವರ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಈ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ರಾಜ್ಯಪಾಲರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ಯಾವುದೇ ಪಕ್ಷ ಸರ್ಕಾರ ರಚಿಸಲು ಮುಂದೆ ಬಂದರೂ, ತಮ್ಮ ಬಳಿ ಬಹುಮತವಿದೆ ಎಂಬುದನ್ನು ಮೊದಲು ಮನವರಿಕೆ ಮಾಡಿಕೊಡಬೇಕು. ಇದಕ್ಕಿಂತ ಹೆಚ್ಚಾಗಿ ನಾನು ಏನನ್ನೂ ಕೇಳಿಲ್ಲ. ನಾನು ತಲೆ ಎಣಿಕೆ ಮಾಡಲು ಹೇಳುತ್ತಿಲ್ಲ. ಬಹುಮತವನ್ನು ವಿಧಾನಸಭೆಯಲ್ಲೇ ಸಾಬೀತುಪಡಿಸಬೇಕು ಎಂಬುದಷ್ಟೇ ನನ್ನ ಮಾತು ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ಬಹುಮತದೊಂದಿಗೆ ಡಿಎಂಕೆ, ಎಐಎಡಿಎಂಕೆ ಅಥವಾ ಬೇರೆ ಯಾರೇ ಬಂದರೂ ಸರ್ಕಾರ ರಚನೆಗೆ ಅವಕಾಶ ನೀಡಲೇಬೇಕು. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಭಾಗ. ಅಗತ್ಯ ಸಂಖ್ಯಾಬಲ ಇದ್ದರೆ ನಾಳೆಯೇ ಪ್ರಮಾಣವಚನ ಬೋಧಿಸಲು ನಾನು ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಟಿವಿಕೆ ಹೊರತುಪಡಿಸಿ 118 ಸದಸ್ಯರ ಬೆಂಬಲದೊಂದಿಗೆ ಇನ್ನಾವ ಪಕ್ಷವೂ ಮುಂದೆ ಬರದಿದ್ದರೆ ಸಂವಿಧಾನಾತ್ಮಕ ಆಯ್ಕೆಗಳ ಬಗ್ಗೆ ಯೋಚಿಸಬೇಕಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಎಸ್‌.ಆರ್‌. ಬೊಮ್ಮಾಯಿ ಪ್ರಕರಣವನ್ನು ಉಲ್ಲೇಖಿಸಿದ ರಾಜ್ಯಪಾಲರು, ಆ ತೀರ್ಪು ಹೊಸ ಸರ್ಕಾರ ರಚನೆಗೆ ಸಂಬಂಧಿಸಿದುದಲ್ಲ. ಇಲ್ಲಿ ವಿಚಾರ ಹೊಸ ಸರ್ಕಾರ ರಚನೆಗೆ ಸಂಬಂಧಿಸಿದೆ. ನಾನು ಬಹುಮತದ ಸಂಖ್ಯೆ ಕೇಳುತ್ತಿದ್ದೇನೆ ಹೊರತು ನನ್ನ ಮುಂದೆ ಶಾಸಕರ ತಲೆ ಎಣಿಕೆ ಮಾಡಲು ಹೇಳುತ್ತಿಲ್ಲ. ಅದನ್ನು ವಿಧಾನಸಭೆಯಲ್ಲೇ ಮಾಡಬೇಕು ಎಂದು ಹೇಳಿದರು.

ರಾಜಕೀಯವಾಗಿ ಕುದುರೆ ವ್ಯಾಪಾರದ ಆರೋಪಗಳು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಂತಹ ಬೆಳವಣಿಗೆಗಳು ಒಳ್ಳೆಯದಲ್ಲ. ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ನಾನು ಸಿದ್ಧನಿದ್ದೇನೆ. ಆದರೆ ಸರ್ಕಾರ ರಚನೆಗೆ ಸಂಖ್ಯಾಬಲ ಅನಿವಾರ್ಯ ಎಂದು ಹೇಳಿದ್ದಾರೆ.

ಸಂಖ್ಯೆಗಳಿಲ್ಲದೇ ಮೊದಲು ಪ್ರಮಾಣವಚನ ಬೋಧಿಸಿ ನಂತರ ಬಹುಮತ ಸಾಬೀತುಪಡಿಸಿ ಎಂದು ಹೇಳುವುದು ಸರಿಯಲ್ಲ. ಇದು ಕೇವಲ ಒಂದು ಪಕ್ಷದ ಸಮಸ್ಯೆಯಲ್ಲ, ರಾಜ್ಯದ ಆಡಳಿತಕ್ಕೆ ಸಂಬಂಧಿಸಿದ ವಿಷಯ. ಸಂಖ್ಯಾಬಲವಿಲ್ಲದೇ ಸರ್ಕಾರ ರಚನೆಗೆ ಅವಕಾಶ ನೀಡಿದರೆ ಜನರಿಗೆ ಸಮಸ್ಯೆಯಾಗುತ್ತದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!