HomeBengaluru Newsಪುನೀತ್ ರಾಜ್ ಕುಮಾರ್ ನಿಧನದ ವೇಳೆ ಆಕ್ಷೇಪಾರ್ಹ ಪೋಸ್ಟ್: ಬೆಂಗಳೂರಿನ ಯುವಕನಿಗೆ ಹೈಕೋರ್ಟ್ ತೀವ್ರ ತರಾಟೆ

ಪುನೀತ್ ರಾಜ್ ಕುಮಾರ್ ನಿಧನದ ವೇಳೆ ಆಕ್ಷೇಪಾರ್ಹ ಪೋಸ್ಟ್: ಬೆಂಗಳೂರಿನ ಯುವಕನಿಗೆ ಹೈಕೋರ್ಟ್ ತೀವ್ರ ತರಾಟೆ

For Dai;y Updates Join Our whatsapp Group

ಬೆಂಗಳೂರು: ದಿವಂಗತ ನಟ ಡಾ. ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ನಿಧನದ ಸಮಯದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಬೆಂಗಳೂರಿನ ಯುವಕ ರಿತ್ವಿಕ್ ಶರ್ಮಾನಿಗೆ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ತನ್ನ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ (FIR) ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು, ಯುವಕನ ಭವಿಷ್ಯ ಹಾಗೂ ವಿದ್ಯಾಭ್ಯಾಸದ ದೃಷ್ಟಿಯಿಂದ ಪ್ರಕರಣವನ್ನು ಅಂತಿಮವಾಗಿ ರದ್ದುಗೊಳಿಸಿ ಆದೇಶಿಸಿದೆ.

“ಉಚಿತ ಎಂದು ಇಂತಹ ವಿಕೃತ ಸಂದೇಶ ಪೋಸ್ಟ್ ಮಾಡುತ್ತೀರಾ?”: ವಿಚಾರಣೆ ವೇಳೆ ನ್ಯಾಯಪೀಠವು ಅರ್ಜಿದಾರನ ದುರ್ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿತು. “ಸಾಮಾಜಿಕ ಮಾಧ್ಯಮಗಳನ್ನು ಬಳಸಲು ಮುಕ್ತ ಅವಕಾಶವಿದೆ ಎಂದ ಮಾತ್ರಕ್ಕೆ ಇಂತಹ ವಿಕೃತ ಸಂದೇಶಗಳನ್ನು ಪೋಸ್ಟ್ ಮಾಡುತ್ತೀರಾ? ಪುನೀತ್ ರಾಜ್‌ಕುಮಾರ್ ಅವರು ಮೇರುನಟ ಡಾ. ರಾಜ್‌ಕುಮಾರ್ ಅವರ ಪುತ್ರ. ಅವರು ನಿಧನರಾದ ಸಂದರ್ಭದಲ್ಲಿ ಇಂತಹ ಆಕ್ಷೇಪಾರ್ಹ ಪದ ಬಳಕೆ ಮಾಡಬಹುದೇ? ಯಾವ ರೀತಿಯ ಪದ ಬಳಸಲಾಗಿದೆ ಎಂಬುದು ನಿಮಗಾದರೂ ಗೊತ್ತೇ?” ಎಂದು ತೀವ್ರ ಅಸಮಾಧಾನ ಹೊರಹಾಕಿತು.

ವಿದ್ಯಾಭ್ಯಾಸ ಹಾಗೂ ಭವಿಷ್ಯದ ದೃಷ್ಟಿಯಿಂದ ಕೇಸ್ ರದ್ದು: ಅರ್ಜಿದಾರ ರಿತ್ವಿಕ್ ಪರ ವಕೀಲೆ ಪದ್ಮಾವತಿ ವಾದ ಮಂಡಿಸಿ, “ಕಕ್ಷಿದಾರ ರಿತ್ವಿಕ್ ಲಂಡನ್‌ನಲ್ಲಿ ಹುಟ್ಟಿ ಬೆಳೆದಿದ್ದು, ಎರಡು ವರ್ಷಗಳ ಹಿಂದಷ್ಟೇ ಭಾರತಕ್ಕೆ ಮರಳಿದ್ದಾನೆ. ಆತನಿಗೆ ಈ ಪೋಸ್ಟ್‌ನ ಗಂಭೀರ ಪರಿಣಾಮಗಳ ಅರಿವಿರಲಿಲ್ಲ. ಈ ಪೋಸ್ಟ್ ಅನ್ನು ಆತನ ಸ್ನೇಹಿತ ಮಾಡಿದ್ದು,

ತನ್ನ ಪ್ರಮಾದವನ್ನು ಒಪ್ಪಿಕೊಂಡು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾನೆ. ಪ್ರಸ್ತುತ ಅರ್ಥಶಾಸ್ತ್ರದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಕ್ರಿಮಿನಲ್ ಮೊಕದ್ದಮೆಯಿಂದ ಆತನ ಶೈಕ್ಷಣಿಕ ಹಾಗೂ ವೃತ್ತಿ ಭವಿಷ್ಯಕ್ಕೆ ಧಕ್ಕೆಯಾಗಲಿದೆ” ಎಂದು ಮನವಿ ಮಾಡಿದರು. ಅರ್ಜಿದಾರನ ದುರ್ವರ್ತನೆಗೆ ಚಾಟಿ ಬೀಸಿದ ನ್ಯಾಯಪೀಠ, ಯುವಕನ ವಿದ್ಯಾಭ್ಯಾಸ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ಎಫ್‌ಐಆರ್ ರದ್ದುಗೊಳಿಸಿತು.

ಏನಿದು ಪ್ರಕರಣ?: ನವೆಂಬರ್ 1, 2021 ರಂದು ಪುನೀತ್ ರಾಜ್‌ಕುಮಾರ್ ಅವರು ನಿಧನರಾದ ಬೆನ್ನಲ್ಲೇ, ಕಿಂಗ್‌ಫಿಷರ್ ಬಿಯರ್ ಬಾಟಲಿಯ ಫೋಟೋ ಹಾಕಿ ಅದರ ಮೇಲೆ ಅತ್ಯಂತ ಆಕ್ಷೇಪಾರ್ಹ ಸಾಲನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಸಂಬಂಧ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ (IT) ಕಾಯ್ದೆ ಸೆಕ್ಷನ್ 67 ಮತ್ತು ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img