ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಗಜೇಂದ್ರಗಡ ತಾಲೂಕು ಎಂದು ಘೋಷಣೆಯಾಗಿ ಸುಮಾರು 8 ವರ್ಷಗಳೇ ಕಳೆದಿವೆ. ಆದರೆ, ಜನರಿಗೆ ತಲುಪುವಂತಹ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲಿ ದೊರೆಯುತ್ತಿಲ್ಲ. ತಾಲೂಕಿನಲ್ಲಿ ಸರಿಯಾಗಿ ಇಲಾಖೆಗಳ ಕಚೇರಿಗಳು ಇಲ್ಲದೆ ಜನರು ಅಲೆದಾಡಬೇಕಾಗಿತ್ತು. ಈಗ ಹಂತ ಹಂತವಾಗಿ ಇಲಾಖೆಗಳು ನಿರ್ಮಾಣಗೊಳ್ಳುತ್ತಿದ್ದು, ಅಧಿಕಾರಿಗಳಿಗೆ ಹಾಗೂ ಜನರಿಗೆ ಪ್ರಯೋಜನ ಆಗಲಿದೆ. ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದಲ್ಲಿ 8.60 ಕೋಟಿ ರೂ ವೆಚ್ಚದಲ್ಲಿ ಕಾಲಕಾಲೇಶ್ವರ ರಸ್ತೆಯಲ್ಲಿ ಗುಡ್ಡಕ್ಕೆ ಹೊಂದಿಕೊಂಡಿರುವ ಒಂದು ಎಕರೆ ಜಾಗದಲ್ಲಿ ನೂತನವಾಗಿ ನಿರ್ಮಿಸಲಾಗುವ ‘ಪ್ರಜಾಸೌಧ’ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪ್ರಸ್ತುತ ಕಂದಾಯ ಇಲಾಖೆ ಕಟ್ಟಡದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೆಲಸ ಮಾಡುವುದು ಕಷ್ಟಕರವಾಗಿತ್ತು. ಇದನ್ನು ಪರಿಗಣಿಸಿ ಹೊಸ ಕಟ್ಟಡಕ್ಕೆ ಭೂಮಿ ಹುಡುಕಿ ಅನುಮೋದನೆ ತರುವಲ್ಲಿ ಬಹಳಷ್ಟು ಶ್ರಮಪಟ್ಟಿದ್ದೇವೆ. ಇನ್ನುಮುಂದೆ ಅಧಿಕಾರಿಗಳು ಸುಗಮವಾಗಿ ಕರ್ತವ್ಯ ನಿರ್ವಹಿಸಿ ಜನಪರ ಕೆಲಸ ಮಾಡಬೇಕು ಎಂದರು.
ಗಜೇಂದ್ರಗಡ ಮತ್ತು ಸೂಡಿ ಗ್ರಾಮವನ್ನು ಹೋಬಳಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಲವು ಗ್ರಾಮಗಳಲ್ಲಿ ಸ್ಮಶಾನ ಭೂಮಿಯ ಕೊರತೆ ಇದ್ದು, ಅತೀ ಶೀಘ್ರದಲ್ಲಿ ಭೂಮಿ ಹುಡುಕಲು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ನೂರು ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ, ಮಾರುಕಟ್ಟೆ ನಿರ್ಮಾಣ, ಯುವಕರಿಗೆ ಕ್ರೀಡಾಂಗಣ ಮುಂತಾದ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲ್ಲಪ್ಪ ಸಜ್ಜನ್, ಶಿವರಾಜ್ ಘೋರ್ಪಡೆ, ತಾರಾಸಿಂಗ್ ರಾಠೋಡ್, ವೀರಣ್ಣ ಶೆಟ್ಟರ್, ಎಚ್.ಎಸ್. ಸೋಂಪುರ, ರಾಜೂ ಸಾಂಗ್ಲಿಕರ್, ಮುರ್ತುಜಾ ಡಾಲಾಯತ್, ರಫೀಕ್ ತೋರಗಲ್, ಸುಭಾಸ್ ಮ್ಯಾಗೇರಿ, ಭೀಮಣ್ಣ ತಳವಾರ, ಅರ್ಜುನ್ ರಾಠೋಡ್, ಶೇಖಪ್ಪ ರಾಮಜಿ, ತಾಲೂಕಾ ದಂಡಾಧಿಕಾರಿ ಕಿರಣಕುಮಾರ್ ಕುಲಕರ್ಣಿ, ತಾ.ಪಂ ಮುಖ್ಯಾಧಿಕಾರಿ ಚಂದ್ರಶೇಖರ ಕಂದಕೂರ, ಮಂಜುಳಾ ರೇವಡಿ, ಪ್ರಕಾಶ ರಾಠೋಡ, ಅಂದಪ್ಪ ರಾಠೋಡ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.
ಮುಖಂಡರಾದ ಸಿದ್ದಣ್ಣ ಬಂಡಿ ಮಾತನಾಡಿ, ರೈತರಿಗೆ ಹೆಸರು, ಮೆಣಸಿನಕಾಯಿ ಮುಂತಾದ ಬೆಳೆಗಳಿಗೆ ಪರಿಹಾರ ಮಂಜೂರಾಗಿದೆ. ಇನ್ನೂ 2550 ರೈತರಿಗೆ ಪರಿಹಾರ ಮಂಜೂರು ಮಾಡಬೇಕಾಗಿದ್ದು, ಕೆಲವು ತಾಂತ್ರಿಕ ಕಾರಣಗಳಿಂದ ಅದು ಆಗುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಹಣವನ್ನು ಬಳಸುತ್ತಿದ್ದಾರೆ. ಆದರೆ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಹೇಳುವವರೂ ಇದ್ದಾರೆ. ಆದರೆ ಸರ್ಕಾರ ಅಭಿವೃದ್ಧಿ ಕೆಲಸಗಳಿಗೂ ಒತ್ತು ನೀಡಿದೆ ಎಂಬುದನ್ನು ಮರೆಯುವಂತಿಲ್ಲ ಎಂದರು.



