ವಿಜಯಸಾಕ್ಷಿ ಸುದ್ದಿ, ಗದಗ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಕೊಣ್ಣೂರು ಮತ್ತು ಕಲಕೇರಿ ಚೆಕ್ಪೋಸ್ಟ್ ಗಳಲ್ಲಿ ಚುನಾವಣೆ ಅಕ್ರಮ ತಡೆಗಟ್ಟಲು ತಾಲೂಕು ಆಡಳಿತ ಮತ್ತು ಚುನಾವಣೆ ಅಧಿಕಾರಿಗಳು ಹದ್ದಿನ ಕಣ್ಣು ಇಟ್ಟಿದ್ದಾರೆ. ಪ್ರತಿನಿತ್ಯ ಚೆಕ್ಪೋಸ್ಟ್ ಗಳಿಗೆ ಭೇಟಿ ನೀಡುತ್ತಿರುವ ಚುನಾವಣೆ ಅಧಿಕಾರಿಗಳು, ಅಕ್ರಮ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ನರಗುಂದ ತಹಸೀಲ್ದಾರ ಶ್ರೀಶೈಲ್ ತಳವಾರ, ನರಗುಂದ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ತಾಲೂಕಿನ ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿಗಳಾದ ಸೋಮಶೇಖರ್ ಬಿರಾದರ್ ಕೊಣ್ಣೂರು ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚೆಕ್ಪೋಸ್ಟ್ ನಲ್ಲಿ ನಡೆಸಲಾಗುವ ತಪಾಸಣೆಯ ದಾಖಲೆಗಳನ್ನು ಮತ್ತು ತಪಾಸಣೆ ಕಾರ್ಯವನ್ನು ಸೆರೆಹಿಡಿಯುವ ಕ್ಯಾಮೆರಾದ ಸೂಕ್ತ ಕಾರ್ಯ ನಿರ್ವಹಣೆಯ ಕುರಿತು ಪರಿಶೀಲಿಸಿದರು. ಕೆಲವು ವಾಹನಗಳನ್ನು ತಡೆದ ಇಓ ಮತ್ತು ತಹಸೀಲ್ದಾರರು ತಪಾಸಣೆ ನಡೆಸಿದರು. ಸ್ಥಳದಲ್ಲಿದ್ದ ಚೆಕ್ಪೋಸ್ಟ್ ಸಿಬ್ಬಂದಿಗಳಿಗೆ ಚುನಾವಣೆ ಅಕ್ರಮದಲ್ಲಿ ಯಾರೇ ಭಾಗಿಯಾದರೂ ಅಂತಹವರ ವಿರುದ್ಧ ಚುನಾವಣೆ ನಿಯಮಾನುಸಾರ ಕ್ರಮಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.