ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಆಮ್ ಆದ್ಮಿ ಪಕ್ಷ ನೈತಿಕ, ಸೈದ್ಧಾಂತಿಕವಾಗಿ ತನ್ನದೇ ಆದ ನೆಲೆಗಟ್ಟನ್ನು ಹೊಂದಿರುವ ರಾಷ್ಟ್ರೀಯ ಪಕ್ಷವಾಗಿ ಬೆಳೆದಿದೆ. ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಜಿಲ್ಲೆಯ ಆಮ್ ಆದ್ಮಿ ಪಕ್ಷದಿಂದ ಬೆಂಬಲ ಸೂಚಿಸುತ್ತಿರುವುದು ಪಕ್ಷದ ಗೆಲುವಿಗೆ ಮತ್ತಷ್ಟು ಬಲ ನೀಡಲಿದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಗದಗ ಜಿಲ್ಲಾ ಮಾಜಿ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ ಹೇಳಿದರು.
ಅವರು ತಮ್ಮ ನಿವಾಸದಲ್ಲಿ ಗದಗ ಜಿಲ್ಲೆಯ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಿದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಿ ಮಾತನಾಡಿದರು.
ಆಮ್ ಆದ್ಮಿ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿರುವುದು ಒಂದು ದೊಡ್ಡ ಶಕ್ತಿ ಬಂದಂತಾಗಿದೆ. ಇಂಡಿಯಾ ಒಕ್ಕೂಟದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಆಮ್ ಆದ್ಮಿ ಪಕ್ಷ ಸೇರಿ ಕೆಲಸ ಮಾಡುತ್ತಿವೆ ಹಾಗೆಯೇ ಇಲ್ಲಿಯೂ ಸಹ ಒಟ್ಟಾಗಿ ಕ್ಷೇತ್ರದಲ್ಲಿ ಸಂಚಾರ ಮಾಡಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸೋಣ ಎಂದರು.
ಕಾಂಗ್ರೆಸ್ ಮುಖಂಡರಾದ ಚನ್ನಪ್ಪ ಜಗಲಿ, ವಿರೂಪಾಕ್ಷಪ್ಪ ಪಡಗೇರಿ, ಗುರುನಾಥ ದಾನಪ್ಪನವರ, ಶರಣು ಗೋಡಿ, ಕಿರಣ ನವಲೆ, ರಾಜು ಹೊಳಲಾಪುರ, ಶಿವಾನಂದ ಲಿಂಗಶೆಟ್ಟಿ, ಕೆ.ಓ. ಹುಲಿಕಟ್ಟಿ, ಮಹಾಂತೇಶ ತೋಟದ, ಮುದಕಣ್ಣ ಗದ್ದಿ, ಮೋಹನ ನಂದೆಣ್ಣನವರ, ಎಎಪಿ ಸದಸ್ಯರಾದ ಅಶೋಕ ಉಳ್ಳಾಗಡ್ಡಿ, ರಾಹುಲ ಮಡಿವಾಳರ, ಷಣ್ಮುಖ ಬಡ್ನಿ, ಬಸವರಾಜ ಬಡ್ನಿ, ಮೌಲಾಸಾಬ್ ಜಾಲವಾಡಗಿ, ಸುಭಾಷಚಂದ್ರ ಕುಂಬಾರ, ಶಿವಣ್ಣ ಹಳ್ಳಿಗುಡಿ ಮುಂತಾದವರಿದ್ದರು.
ಗದಗ ಜಿಲ್ಲಾ ಎಎಪಿ ಮುಖಂಡ ಮಲ್ಲಿಕಾರ್ಜುನ ದೊಡ್ಡಮನಿ ಮಾತನಾಡಿ, ರಾಷ್ಟçಮಟ್ಟದಲ್ಲಿ ಇಂಡಿಯಾ ಒಕ್ಕೂಟದಲ್ಲಿ ಎಎಪಿ ಸೇರಿಕೊಂಡಿದ್ದು, ಅದರಂತೆ ಹಾವೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಪಕ್ಷದ ಕಾರ್ಯಕರ್ತರು ಬೆಂಬಲ ನೀಡಿ ಅವರ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದರು.