Home Blog Page 14

ಅಭಿಮಾನಿಗಳ ಮಧ್ಯೆ ಲಾಂಗ್ ಹಿಡಿದು ಪೋಸ್: ಜೆಸಿ ಸಿನಿಮಾದ ನಟನ ವಿರುದ್ಧ ಸುಮೋಟೊ ಕೇಸ್

ಸಿನಿಮಾ ಸಂಭ್ರಮ ಮಧ್ಯೆ ನಡೆದ ಘಟನೆಯೊಂದು ಇದೀಗ ಕಾನೂನು ವಿವಾದಕ್ಕೆ ತಿರುಗಿದೆ. ಜೆಸಿ ಸಿನಿಮಾ ಬಿಡುಗಡೆಯ ದಿನ ಥಿಯೇಟರ್‌ನಲ್ಲಿ ಅಭಿಮಾನಿಗಳ ನಡುವೆ ಲಾಂಗ್ ಹಿಡಿದು ಪೋಸ್ ನೀಡಿದ ನಟ ಸೂರ್ಯ ಪ್ರಖ್ಯಾತ್ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಘಟನೆ ವೇಳೆ ತೆಗೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಅಪಾಯಕಾರಿ ಆಯುಧದೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿದ ಗೋವಿಂದರಾಜ ನಗರ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ.

ಇದೀಗ ಪೊಲೀಸರು ನಟರಿಗೆ ನೋಟಿಸ್ ನೀಡಿದ್ದು, ಲಾಂಗ್ ಎಲ್ಲಿಂದ ಬಂದಿತು ಮತ್ತು ಏಕೆ ಹಿಡಿದಿದ್ದರು ಎಂಬ ಬಗ್ಗೆ ವಿವರಣೆ ಕೇಳಿದ್ದಾರೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

ನಟಿ ತ್ರಿಶಾ ಬಗ್ಗೆ ಹೇಳಿಕೆ: ವಿವಾದದ ಬಳಿಕ ಕ್ಷಮೆ ಕೇಳಿದ ಬಿಜೆಪಿ ಮುಖಂಡ ನೈನಾರ್ ನಾಗೇಂದ್ರನ್

ವಿಜಯ್ ವಿರುದ್ಧ ರಾಜಕೀಯ ಟೀಕೆ ಮಾಡುವ ವೇಳೆ ತ್ರಿಷಾ ಹೆಸರನ್ನು ಬಳಸಿದ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ನೀಡಿದ ಹೇಳಿಕೆ ಕ್ಷಣಾರ್ಧದಲ್ಲೇ ವೈರಲ್ ಆಗಿ ರಾಜಕೀಯ-ಸಿನಿಮಾ ವಲಯದಲ್ಲಿ ಕಿಚ್ಚು ಹಚ್ಚಿತು.

ನಟಿ ತ್ರಿಷಾ ಕೃಷ್ಣನ್ ನೇರವಾಗಿ ಪ್ರತಿಕ್ರಿಯಿಸಿ ಉನ್ನತ ಹುದ್ದೆಯ ವ್ಯಕ್ತಿಯಿಂದ ಇಂತಹ ಮಾತು ನಿರೀಕ್ಷಿಸಿರಲಿಲ್ಲ ಎಂದು ಕಿಡಿಕಾರಿದರು. ನಂತರ ಡಿಎಂಕೆ ಮತ್ತು ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ತೀವ್ರ ಟೀಕೆ ನಡೆಸಿದರು. ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಹೇಳಿಕೆ ಎಂದು ಆರೋಪಿಸಿ ರಾಜಕೀಯ ಒತ್ತಡ ಹೆಚ್ಚಾಯಿತು.

ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ವಿರೋಧ ವ್ಯಕ್ತವಾದ ಹಿನ್ನೆಲೆ ಬಿಜೆಪಿ ಒಳಗೂ ಅಸಮಾಧಾನ ಮೂಡಿತು. ಅಂತಿಮವಾಗಿ ಕೆ. ಅಣ್ಣಾಮಲೈ ಮತ್ತು ವಾನತಿ ಶ್ರೀನಿವಾಸನ್ ಸೂಚನೆ ಮೇರೆಗೆ ನೈನಾರ್ ನಾಗೇಂದ್ರನ್ ತಮ್ಮ ಹೇಳಿಕೆಯಿಂದ ಹಿಂದೆ ಸರಿದರು.

ತಮ್ಮ ಹೇಳಿಕೆ ತಪ್ಪಾಗಿದೆ ಎಂದು ಒಪ್ಪಿಕೊಂಡ ಅವರು, “ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ” ಎಂದು ಸಾರ್ವಜನಿಕವಾಗಿ ಕ್ಷಮೆ ಕೇಳಿದರು. ವಿವಾದಕ್ಕೆ ತಾತ್ಕಾಲಿಕ ತೆರೆ ಬಿದ್ದರೂ, ರಾಜಕೀಯ ಟೀಕೆಯಲ್ಲಿ ವೈಯಕ್ತಿಕ ಉಲ್ಲೇಖ ಎಷ್ಟು ದೊಡ್ಡ ಪರಿಣಾಮ ಉಂಟುಮಾಡಬಹುದು ಎಂಬುದನ್ನು ಈ ಘಟನೆ ಮತ್ತೊಮ್ಮೆ ತೋರಿಸಿದೆ.

ಕುಷ್ಟಗಿಯಲ್ಲಿ ಪಂಚಾಯತ್ ನೌಕರ ಆತ್ಮಹತ್ಯೆ: ಆಸ್ತಿ ವಿವಾದ ಹಿನ್ನೆಲೆ ಐವರ ವಿರುದ್ಧ ದೂರು

0

ಕೊಪ್ಪಳ: ಕುಷ್ಟಗಿ ತಾಲೂಕಿನ ಜಮಲಾಪೂರ ಗ್ರಾಮದಲ್ಲಿ ಗ್ರಾಮ ಪಂಚಾಯತ್ ನೌಕರ ರಮೇಶ್ ದಂಡಿನ ನೇಣುಬಿಗಿದುಕೊಂಡು ಸಾವನ್ನಪ್ಪಿದ ಘಟನೆ ಆಘಾತ ಮೂಡಿಸಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಕುಟುಂಬ ಗಲಾಟೆ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣವನ್ನು ತಾವರಗೇರಾ ಪೊಲೀಸ್ ಠಾಣೆ ದಾಖಲಿಸಿಕೊಂಡಿದ್ದು, ಐವರ ವಿರುದ್ಧ ದೂರು ದಾಖಲಾಗಿದೆ.

ಇದೇ ವೇಳೆ ಜಮಖಂಡಿನಲ್ಲಿ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯಲು ಮುಂದಾದ ಹಿನ್ನೆಲೆಯಲ್ಲಿ ನಾಲ್ವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಪೆಟ್ರೋಲ್ ಬಾಯಿಗೆ ಸೇರಿದ ಕಾರಣ ನಾಲ್ವರೂ ಅಸ್ವಸ್ಥಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಡಿಹೆಚ್ಒ ಮಂಜುನಾಥ ಹಳೆಯ ನೌಕರರನ್ನು ಮುಂದುವರಿಸುವ ಭರವಸೆ ನೀಡಿದ ವೇಳೆ ದಲಿತ ಸಂಘಟನೆಗಳು ಹಾಗೂ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಪರಿಸ್ಥಿತಿಯನ್ನು ಪೊಲೀಸರು ನಿಯಂತ್ರಿಸಿದರು.

ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲಿ: ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಬಳಕೆ ಆಗಬೇಕು. ಈ ಅನುದಾನಡಿ ಜಿಲ್ಲೆಯಲ್ಲಿ ಕೈಗೊಳ್ಳಲಾಗುವ ಅಭಿವೃದ್ಧಿ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿರುವಂತೆ ನಿಗಾವಹಿಸಬೇಕೆಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾದ ಅನುದಾನದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನದಡಿ ಕೈಗೊಳ್ಳಲು ಉದ್ದೇಶಿಸಿರುವ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಬೇಕು ಎಂದು ಸೂಚಿಸಿದರು. ನಗರೋತ್ಥಾನದಡಿ ಬಿಡುಗಡೆಯಾದ ಅನುದಾನ ಹಾಗೂ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಮಾಹಿತಿ ಪಡೆದ ಸಚಿವರು, ನಗರೋತ್ಥಾನದಡಿ ಕೈಗೊಳ್ಳಲಾಗುವ ರಸ್ತೆ, ಚರಂಡಿ ಮುಂತಾದ ಕಾಮಗಾರಿಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಬೇಕು ಎಂದರು.

ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ್ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರುಡಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ್ ಶಿರೋಳ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಬರಟ್ಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವರಾಜ ಕೊಟೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಗದಗ ವಿಧಾನಸಭಾ ಮತಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಅಪೂರ್ಣವಾದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಸೂಚಿಸಿದರು.

ತಯಬಅಲಿ ಹೊಂಬಳರಿಗೆ ‘ಫೆಲೋಶಿಪ್’ ಪದವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಬೆರಳಚ್ಚು, ಶೀಘ್ರಲಿಪಿ ಮತ್ತು ಗಣಕಯಂತ್ರ ವಿದ್ಯಾಶಾಲೆಗಳ ಸಂಘ ಬೆಂಗಳೂರು ವತಿಯಿಂದ ಬೆರಳಚ್ಚು, ಶೀಘ್ರಲಿಪಿ ಮತ್ತು ಗಣಕಯಂತ್ರ ಶಿಕ್ಷಣದಲ್ಲಿ ಸತತ 50 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ನಗರ ಶ್ರೀ ಕಲ್ಮೇಶ್ವರ ಬೆರಳಚ್ಚು ಮತ್ತು ಕಂಪ್ಯೂಟರ್ ವಿದ್ಯಾಸಂಸ್ಥೆಯ ಮಾಲೀಕರು ಮತ್ತು ಪ್ರಾಚಾರ್ಯರಾದ ಡಾ. ತಯಬಅಲಿ ಅ.ಹೊಂಬಳರಿಗೆ ಸಮಗ್ರ ಬೆರಳಚ್ಚು ಶಿಕ್ಷಣ ಸೇವೆಯನ್ನು ಮೆಚ್ಚಿ 2024-25ನೇ ಸಾಲಿನ ಸಂಘದ 56ನೇ ಸರ್ವಸದಸ್ಯರ ಸಭೆಯಲ್ಲಿ ಗೌರವಾರ್ಥ `ಫೆಲೋಷಿಪ್’ ಪದವಿ ಪ್ರದಾನ ಮಾಡಲಿದೆ.

ಸಾವಿರಾರು ವಿದ್ಯಾರ್ಥಿಗಳಿಗೆ ಬೆರಳಚ್ಚು, ಶೀಘ್ರಲಿಪಿ ಮತ್ತು ಗಣಕಯಂತ್ರ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಇಂದು ಸಾವಿರಾರು ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಯಲ್ಲಿ ಕಲಿತು ಉನ್ನತ ಹುದ್ದೆ ಮತ್ತು ಪ್ರತಿಷ್ಠಿತ ಇಲಾಖೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವುದು ಸಂಸ್ಥೆಯ ಹಿರಿಮೆಯಾಗಿದೆ. ವಿದ್ಯಾರ್ಥಿಗಳನ್ನು ಶಿಕ್ಷಣ ಮತ್ತು ಸನ್ಮಾರ್ಗದ ದಾರಿಯಲ್ಲಿ ನಡೆಯಲು ಪ್ರೇರಣೆಯಾಗಿ, ಬೆರಳಚ್ಚು ಸೇವೆಯಲ್ಲಿಯೇ ತಮ್ಮ ಜೀವನ ಸವೆಸಿದ ಸಂಸ್ಥೆಯ ಸೇವೆಯನ್ನು ಮೆಚ್ಚಿ 2024-25ನೇ ಸಾಲಿನ ಸಂಘದ 56ನೇ ಸರ್ವಸದಸ್ಯರ ಸಭೆಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ಜಸ್ಟೀಸ್ ಜಿ. ಬಸವರಾಜ ಇವರು ಫೆ. 22ರಂದು ಬೆಂಗಳೂರಿನಲ್ಲಿ ಪದವಿ ಪ್ರದಾನ ಮಾಡಲಿದ್ದಾರೆ.

ಬೆರಳಚ್ಚು ಶಿಕ್ಷಣ ತಜ್ಞರು, ಹಿರಿಯರು, ಸಾಹಿತಿಗಳು, ಮಿತ್ರವೃಂದದವರು ಮತ್ತು ವಿದ್ಯಾರ್ಥಿಗಳು ಡಾ. ತಯಬಅಲಿ ಅ.ಹೊಂಬಳರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.

ಬೀದರ್| AI ಕ್ಯಾಮೆರಾ ಮೂಲಕ ಆಟೋದಲ್ಲಿ ಮಹಿಳೆ ಕಳೆದುಕೊಂಡಿದ್ದ 29 ಸಾವಿರ ಪತ್ತೆಹಚ್ಚಿದ ಪೊಲೀಸ್!

0

ಬೀದರ್: ಎಐ ಕ್ಯಾಮೆರಾ ಸಹಾಯದಿಂದ ಮಹಿಳೆಯೊಬ್ಬರು ಆಟೋದಲ್ಲಿ ಕಳೆದುಕೊಂಡಿದ್ದ 29 ಸಾವಿರ ಹಣವನ್ನು ಪತ್ತೆ ಹಚ್ಚುವಲ್ಲಿ ಬೀದರ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಜ್ಯೋತಿ ಎಂಬ ಮಹಿಳೆ ಡಿಹೆಚ್‌ಓ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅದರಂತೆ ಕಳೆದ ಮೂರು ದಿನಗಳ ಹಿಂದೆ ಆಟೋದಿಂದ ಪ್ರಯಾಣಿಸುತ್ತಿದ್ದಾಗ ಹಣವನ್ನು ಮರೆತು ಹೋಗಿದ್ದರು.

ಮನೆಯಿಂದ ಕಚೇರಿಗೆ ಬಂದು ಹಣ ಪರಿಶೀಲಿಸಿದಾಗ ಹಣದ ಬ್ಯಾಗ್ ಕಳೆದುಕೊಂಡಿದ್ದು ಗೊತ್ತಾಗಿ ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರಿಗೆ ನೆರವಾಗಿದ್ದು AI ಕ್ಯಾಮೆರಾ. ಆಟೋದಿಂದ ಬಿದ್ದಿದ್ದ ಹಣವನ್ನು ಬೈಕ್ ಸವಾರರು ಎತ್ತಿಕೊಂಡಿದ್ದ ದೃಶ್ಯ ಎಐ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಇದೀಗ ಆ 29 ಸಾವಿರ ರೂ. ಹಣವನ್ನು ಬೀದರ್ ಪೊಲೀಸರು ಮಹಿಳೆಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಈ ಪ್ರದೇಶಗಳಲ್ಲಿ ಮಂಗಳವಾರ ಪವರ್ ಕಟ್; ಎಲ್ಲೆಲ್ಲಿ?

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಮಂಗಳವಾರ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಸಬ್ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯಗಳು ನಡೆಯುತ್ತಿರುವುದರಿಂದ ನಾಳೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಎಲ್ಲೆಲ್ಲಿ ಇರಲ್ಲ ಕರೆಂಟ್?

*ಮಾನ್ಯತಾ ಟೆಕ್ ಪಾರ್ಕ್
*ಮಾರುತಿ ಲೇಔಟ್
*ಭುವನೇಶ್ವರನಗರ
*ಏರ್ ಲೇಔಟ್
*ರಾಜೇನಹಳ್ಳಿ
*ಪಿಡಿ ಲೇಔಟ್
*ಶ್ರೀರಾಂಪುರ
*ಮಾಸ್ಟರ್ ಬಿಲ್ಡರ್
*ಚಾಮುಂಡೇಶ್ವರಿ ಬಡಾವಣೆ

ನಗರದ ಇತರೆ ಭಾಗಗಳಾದ ವರ್ತೂರು ರಸ್ತೆ, ನಾಗವಾರಪಾಳ್ಯ, ನಾಗಪ್ಪ ರೆಡ್ಡಿ ಲೇಔಟ್, ಅಬ್ಬೆರೆಡ್ಡಿ ಲೇಔಟ್, ಬಾಲಾಜಿ ಲೇಔಟ್, ಧರ್ಮರಾಜ ಪಾಳ್ಯ, ವಿಜಯನಗರ ಪೈ ಲೇಔಟ್, ಉದಯನಗರ, ಗಂಗಪ್ಪ ಲೇಔಟ್, ಸದಾನಂದನಗರ, ಕಸ್ತೂರಿ ನಗರ, ಕೃಷ್ಣಪ್ಪನ ಪಾಳ್ಯ, ಸುದ್ಧಗುಂಟೆಪಾಳ್ಯ, ಆರ್ಎಂ ಝಡ್ ಲೇಔಟ್, ಅಂಕಪ್ಪ ರೆಡ್ಡಿ ಲೇಔಟ್, ಶಿವ ದೇವಸ್ಥಾನ ರಸ್ತೆ ಮತ್ತು ಅಯ್ಯಪ್ಪ ದೇವಸ್ಥಾನ ರಸ್ತೆಗಳಲ್ಲಿಯೂ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಕೋರಿದೆ.

ಕೆಎಸ್‌ಎಂಸಿಎ ನೂತನ ಎಂಡಿಯಾಗಿ ಬಿ. ಆನಂದ್ ಅಧಿಕಾರ ಸ್ವೀಕಾರ

0

ಗದಗ: ಕೆಎಸ್‌ಎಂಸಿಎ ಸಂಸ್ಥೆಯ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಬಿ. ಆನಂದ್ ಅವರಿಗೆ ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಸತೀಶ ಕೃಷ್ಣ ಸೈಲ್ ಹಾರ್ದಿಕವಾಗಿ ಸ್ವಾಗತಿಸಿದರು.

ಲಿಂಗವನ್ನು ಪ್ರಾಣಕ್ಕಿಂತ ಮೇಲಾಗಿ ಪ್ರೀತಿಸಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರೀಗುರುವಿನಿಂದ ಶಿವದೀಕ್ಷಾ ಸಂಪನ್ನರಾಗಿ ಇಷ್ಟಲಿಂಗ ಪಡೆದು ಪೂಜಿಸಿದರೆ ಮಾನವ ಜನ್ಮ ಸಾರ್ಥಕವಾಗುತ್ತದೆ. ಲಿಂಗದೀಕ್ಷೆಯು ಭಗವಂತನನ್ನು ಸಾಕ್ಷಾತ್ಕಾರಪಡಿಸಿಕೊಳ್ಳುವ ಚೈತನ್ಯ ಶಕ್ತಿ ಸಾಧನವಾಗಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.

ಅವರು ಭಾನುವಾರ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಮಹಾಶಿವರಾತ್ರಿ ಜಾತ್ರಾಮಹೋತ್ಸವದ ಅಂಗವಾಗಿ ನಡೆದ ಶಿವಲಿಂಗ ಪೂಜೆ, ಜಂಗಮ ವಟುಗಳಿಗೆ ಅಯ್ಯಾಚಾರ-ಲಿಂಗದೀಕ್ಷೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಆಶೀರ್ವಚನ ನೀಡಿದರು.

ಶ್ರೀ ಗುರು ಶಿಷ್ಯ ಸದ್ಭಕ್ತರಿಗೆ ಲಿಂಗಧಾರಣೆ ಮಾಡಿ, ಮಂತ್ರ ಸಂಸ್ಕಾರದ ಮೂಲಕ ಶುದ್ಧೀಕರಣಗೊಳಿಸಿ ಜ್ಞಾನೋಪದೇಶ ಮಾಡಿ, ಈ ಲಿಂಗವನ್ನು ಪ್ರಾಣಕ್ಕಿಂತ ಮೇಲಾಗಿ ಪ್ರೀತಿಸಿ, ಪೂಜಿಸಿದಾಗ ಮಾತ್ರ ಲಿಂಗದೀಕ್ಷೆಗೆ ಅರ್ಥ ಬರುತ್ತದೆ. ವೀರಶೈವ ಧರ್ಮದಲ್ಲಿ ಗುರು-ಲಿಂಗ-ಜಂಗಮಕ್ಕೆ ವಿಶಿಷ್ಟ ಸ್ಥಾನವಿದ್ದು, ಲಿಂಗದೀಕ್ಷಾ ಮತ್ತು ಅಯ್ಯಾಚಾರ ಸಂಸ್ಕಾರಗಳು ಅತ್ಯಂತ ಮಹತ್ವದ್ದಾಗಿದೆ. ಲಿಂಗಧಾರಣೆ, ಶಿವಪೂಜೆಯಿಂದ ಆತ್ಮಬಲ ಹೆಚ್ಚುತ್ತದೆ. ಸಮಾಜದಲ್ಲಿನ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಪ್ರಾಪ್ತವಾಗುತ್ತದೆ.

ವಿಭೂತಿ, ಲಿಂಗ, ಜೋಳಿಗೆ, ದಂಡ ಇವು ಸಂಸ್ಕಾರದ ಸಂಕೇತಗಳಾಗಿವೆ. ಲಿಂ. ಗಂಗಾಧರ ಶ್ರೀಗಳು ಮಹಾಶಿವರಾತ್ರಿಗೆ ಮಾಡುತ್ತಿದ್ದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಲಿಂ. ಗಂಗಾಧರ ಜಗದ್ಗುರುಗಳ ಸಂಕಲ್ಪದಂತೆ ಕ್ಷೇತ್ರದಲ್ಲಿ ತ್ರಿಕೋಟಿಲಿಂಗ ಸ್ಥಾಪನೆ ಕಾರ್ಯ ನಡೆದಿದ್ದು ಈ ಭಾಗದ ಶಿವಭಕ್ತರಿಗೆ ಕಾಶಿ ಕ್ಷೇತ್ರ ದರ್ಶನವಾದಂತೆ ಎಂದು ಹೇಳಿದರು.

ಲಕ್ಷ್ಮೇಶ್ವರ, ಕುಂದಗೋಳ, ಶಿಗ್ಗಾಂವ ತಾಲೂಕಿನ ಕ್ಷೇತ್ರದ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿದ್ದರು. 50ಕ್ಕೂ ಹೆಚ್ಚು ಜಂಗಮ ವಟುಗಳಿಗೆ ಲಿಂಗದೀಕ್ಷೆ ಕಾರ್ಯ ನೆರವೇರಿಸಲಾಯಿತು. ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಅಪಾರ ಭಕ್ತರು ಲಿಂ. ವೀರಗಂಗಾಧರ ಜಗದ್ಗುರುಗಳ ಗದ್ದುಗೆ ದರ್ಶನ ಪಡೆದು ತ್ರಿಕೋಟಿ ಶಿವಲಿಂಗ ಸ್ಥಾಪನೆಗಾಗಿ ಸಿದ್ಧಗೊಂಡಿರುವ ಶಿವಲಿಂಗ ಪೂಜೆ ಮಾಡಿದರು. ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ಮಾನವ ಧರ್ಮ ಮಹಾಮಂಟಪ, ಅಡ್ಡಪಲ್ಲಕ್ಕಿ ಕಲಾ ಮಂಟಪಗಳು ತಳಿರು ತೋರಣ, ಹೂವು, ದೀಪಾಲಂಕಾರದಿಂದ ಕಂಗೊಳಿಸಿದವು.

ನಿರಾಕಾರ ಸ್ವರೂಪದ ಚೇತನಶಕ್ತಿಯೇ ಶಿವ ಪರಮಾತ್ಮ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಣ್ಣಿಗೆ ಕಾಣದ, ಭಾವಕ್ಕೆ ಮೀರಿದ, ಆದಿ-ಅಂತ್ಯವಿಲ್ಲದ ನಿರಾಕಾರ ಸ್ವರೂಪದ ಚೇತನಶಕ್ತಿಯೇ ಶಿವಪರಮಾತ್ಮ. ಶಿವರಾತ್ರಿಯ ಶುಭ ಘಳಿಗೆಯಲ್ಲಿ ಶಿವನನ್ನು ಶ್ರದ್ಧೆ, ಭಕ್ತಿ, ತನ್ಮಯತೆಯಿಂದ ಧ್ಯಾನಿಸಿದರೆ ದೇಹ ಹಾಗೂ ಮನಸ್ಸಿಗೆ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ಹೂವಿನಶಿಗ್ಲಿ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

ಅವರು ಭಾನುವಾರ ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ, ಸಾಂಸ್ಕೃತಿಕ, ನೃತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಿವಜ್ಞಾನದ ಅರಿವು ಜೀವನ ಸಾಕ್ಷಾತ್ಕಾರಕ್ಕೆ ಸೋಪಾನವಾಗಿದೆ. ಅಜ್ಞಾನ ಹೋಗಲಾಡಿಸಿ ಸುಜ್ಞಾನದ ಬೆಳಕನ್ನು ಬದುಕಿನಲ್ಲಿ ಬೆಳಗಿಸು ಎಂದು ಶಿವನನ್ನು ಉಪವಾಸ, ಜಪ-ತಪ, ಪೂಜೆ, ಸ್ಮರಣೆ, ಭಜನೆಯ ಮೂಲಕ ಪ್ರಾರ್ಥಿಸುವ ಶುಭ ದಿನವೇ ಶಿವರಾತ್ರಿ. ಶಿವರಾತ್ರಿ ದಿನ ವಿಶೇಷವಾಗಿ ಶಿವ ದೇಗುಲಗಳಲ್ಲಿ ಪೂಜೆ, ಪ್ರಾರ್ಥನೆ, ಭಜನೆ, ಮಂತ್ರ, ಹೋಮ, ಯಾಗದ ಮೂಲಕ ಅಂತರಾತ್ಮಕ್ಕೆ ಶಿವನ ಇರುವಿಕೆಯ ಅರಿವಾಗುತ್ತದೆ ಎಂದರು.

ಪಿಎಸ್‌ಐ ನಾಗರಾಜ ಗಡಾದ ಮಾತನಾಡಿ, ನಮ್ಮ ಸಾಂಪ್ರದಾಯಿಕ ಆಚರಣೆಗಳಿಗೆ ವಿಶೇಷವಾದ ಅರ್ಥವಿದ್ದು, ತಾಯಂದಿರು ಮಕ್ಕಳೊಂದಿಗೆ ಪಾಲ್ಗೊಳ್ಳಬೇಕು. ತನ್ಮೂಲಕ ಮಕ್ಕಳನ್ನು ಮೊಬೈಲ್‌ನಿಂದ ದೂರವಿಟ್ಟು ಅವರಲ್ಲೂ ನಮ್ಮ ಧರ್ಮ, ಸಂಸ್ಕಾರ, ಆಚರಣೆ, ಸಂಪ್ರದಾಯಗಳ ಬಗ್ಗೆ ಪೂಜ್ಯನೀಯ ಭಾವನೆ ಮೂಡಿಸಬೇಕು ಎಂದರು.

ಯುವ ಮುಖಂಡರಾದ ಆನಂದ ಗಡ್ಡದೇವರಮಠ ಹಾಗೂ ಸುನೀಲ ಮಹಾಂತಶೆಟ್ಟರ ಮಾತನಾಡಿ, ದೇವಸ್ಥಾನಗಳು ನಮ್ಮ ಧರ್ಮ, ಸಂಸ್ಕೃತಿ, ಸಂಪ್ರದಾಯ, ಆಚರಣೆಗಳ ಪ್ರತೀಕವಾಗಿವೆ. ಇಂದಿನ ತಂತ್ರಜ್ಞಾನದ ಯುಗದಲ್ಲೂ ಇವುಗಳನ್ನು ಉಳಿಸಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಡಾ. ಸುಧಾಮೂರ್ತಿಯವರು ದೇವಸ್ಥಾನ ಜೀರ್ಣೋದ್ಧಾರಗೊಳಿಸಿದ ನಂತರ ದೇವಸ್ಥಾನದಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಭಕ್ತರ ಸಂಖ್ಯೆ ಹೆಚ್ಚಿದೆ. ಪುಲಿಗೆರೆ ಉತ್ಸವದಂತೆ ಶಿವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮವು ಸಹ ಮೆರಗು ನೀಡುವಂತೆ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಸೋಮೇಶ್ವರ ದೇವಸ್ಥಾನದ ಅರ್ಚಕರ ಸಮಿತಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ದಿಗಂಬರ ಪೂಜಾರ, ಉಪಾಧ್ಯಕ್ಷರಾಗಿ ರಾಘವೇಂದ್ರ ಪೂಜಾರ, ಕಾರ್ಯದರ್ಶಿಯಾಗಿ ಸಮೀರ ಪೂಜಾರ ಹಾಗೂ ಖಜಾಂಚಿಯಾಗಿ ಕೃಷ್ಣ ಪೂಜಾರ ಅವರ ಅಧಿಕಾರ ಪದಗ್ರಹಣ ನೆರವೇರಿತು.

ಇದೇ ಸಂದರ್ಭದಲ್ಲಿ ಡಾ. ನಿಂಗನಗೌಡ ಚ.ಪಾಟೀಲ ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವರ ಕುರಿತು ರಚಿಸಿದ `ತಿರುಳ್‌ಗನ್ನಡನಾಡು ಪುಲಗೆರೆಯ ಶ್ರೀ ಸೋಮೇಶ್ವರ ಮಹಿಮೆ’ ಕೃತಿಯನ್ನು ಶ್ರೀಗಳು ಬಿಡುಗಡೆಗೊಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ಶ್ರೀ ಸೋಮೇಶ್ವರ ದೇವಸ್ಥಾನ ಅರ್ಚಕರ ಸಮಿತಿ ನೂತನ ಅಧ್ಯಕ್ಷ ದಿಗಂಬರ ಪೂಜಾರ ವಹಿಸಿದ್ದರು. ವೇದಿಕೆಯಲ್ಲಿ ಸೋಮೇಶ್ವರ ಜಾತ್ರಾ ಕಮಿಟಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ, ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ, ಅರ್ಚಕರಾದ ಸೋಮನಾಥ ಪೂಜಾರ, ರಾಘವೇಂದ್ರ ಪೂಜಾರ, ನಾಗರಾಜ ಪೂಜಾರ, ಚಿಕ್ಕರಸಯ್ಯ ಪೂಜಾರ, ಕೃಷ್ಣ ಪೂಜಾರ, ಗುರುರಾಜ ಪೂಜಾರ ಮುಂತಾದವರಿದ್ದರು. ಶ್ವೇತಾ ಪೂಜಾರ, ಅಲಕನಂದಾ ಕುಲಕರ್ಣಿ, ದರ್ಶಿನಿ ಪೂಜಾರ ನಿರೂಪಿಸಿದರು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಗೀತ ಶಿಕ್ಷಕ ಕಲಾವಿದ, ಸಂಗೀತ ಶಿಕ್ಷಕ ಡಾ. ಅರ್ಜುನ ವಠಾರ ಅವರಿಂದ ಶಾಸ್ತ್ರೀಯ ಸಂಗೀತ, ಗೋಕಾಕದ ಪಂ. ನಟರಾಜ ಮಹಾಜನ ಅವರಿಂದ ವಾದ್ಯರಹಿತ ಸಂಗೀತ ಸೇವೆ ನಡೆಯಿತು. ಸ್ಥಳೀಯ ವೇದಿಕಾ ಭರತನಾಟ್ಯ ಶಾಲೆಯ ವಿದ್ಯಾರ್ಥಿಗಳು, ಬೆಂಗಳೂರಿನ ವಿ. ದೀಪಿಕಾ ಹೆಚ್.ಎಸ್, ಅನುಶ್ರೀ ಆರ್, ಗದಗನ ನಿಮಿಷಾಂಬಾ ಜ್ಯೋತಿಶ್ರೀ ನಾಟ್ಯ ಅಕಾಡೆಮಿ, ಕುಂದಗೋಳದ ನಾಟ್ಯ ತಂಡದವರಿಂದ ನಾಟ್ಯ ವೈಭವ ಮೇಳೈಸಿತ್ತು. ಹುಬ್ಬಳ್ಳಿಯ ಶಿವಾ ತಂಡದವರ ಗಂಗಾರತಿ ವಿಶೇಷ ಕಾರ್ಯಕ್ರಮ ಜನಮನ್ನಣೆಗೆ ಪಾತ್ರವಾಯಿತು.

error: Content is protected !!