Home Blog Page 148

ಪೊಲೀಸ್ ಕ್ವಾಟ್ರಸ್‌ನಲ್ಲೇ ಶಾಸಕಿ ಮನೆಗೆ ಬೆದರಿಕೆ! ‘ಯಾರಿಗೂ ಹೆದರುವುದಿಲ್ಲ’ – ಮರಳು ಮಾಫಿಯಾಗೆ ಖಡಕ್ ಎಚ್ಚರಿಕೆ

0

ರಾಯಚೂರು: ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತುತ್ತಿರುವುದಕ್ಕೆ ಅಕ್ರಮ ಮರಳು ದಂಧೆಕೋರರು ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ ಎಂದು ದೇವದುರ್ಗ ಶಾಸಕಿ ಕರೆಮ್ಮ ಜಿ. ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ, ಅಕ್ರಮ ಮರಳು ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವದುರ್ಗ ತಾಲೂಕಿನಲ್ಲಿ ಯಾವುದೇ ಟೆಂಡರ್ ಇಲ್ಲದೇ ಲಾರಿಗಳ ಮೂಲಕ ಅಕ್ರಮವಾಗಿ ಮರಳು ಸಾಗಣೆ ನಡೆಯುತ್ತಿದೆ ಎಂದು ಆರೋಪಿಸಿದರು.

ಟ್ರ್ಯಾಕ್ಟರ್ ಮೂಲಕ ಮರಳು ಸಾಗಣೆ ಮಾಡುವವರ ಪರವಾಗಿ ನಾನು ನಿಲ್ಲುತ್ತೇನೆ. ಆದರೆ ಲಾರಿ ಮಾಲೀಕರು ಟ್ರ್ಯಾಕ್ಟರ್ ಚಾಲಕರ ವಿರುದ್ಧ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಕರೆಮ್ಮ ನಾಯಕ್ ಹೇಳಿದ್ದಾರೆ.

ಲಾರಿ ಮೂಲಕ ಅಕ್ರಮ ಮರಳುಗಾರಿಕೆ ನಡೆಸುವ ಶ್ರೀನಿವಾಸ ನಾಯಕ್ ಸೇರಿದಂತೆ ಕೆಲವರು ಪೊಲೀಸ್ ಕ್ವಾಟ್ರಸ್‌ನಲ್ಲಿರುವ ನನ್ನ ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ. ಇದು ಕಾನೂನು ಸುವ್ಯವಸ್ಥೆಗೆ ದೊಡ್ಡ ಸವಾಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂಬಂಧ ಶ್ರೀನಿವಾಸ ನಾಯಕ್, ರವಿ, ವಿರೇಶ್ ಗೌಡ, ಅಮರೇಶ್, ವಾಸು, ಹನುಮಂತ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಅಧಿಕಾರಿಗಳು ಇವರ ವಿರುದ್ಧ ಕ್ರಮ ಕೈಗೊಳ್ಳಲು ಹೆದರುತ್ತಿದ್ದಾರೆ ಎಂದು ಆರೋಪಿಸಿದರು.

ಈ ವಿಷಯವನ್ನು ಸಿಎಂ ಮತ್ತು ಗೃಹ ಸಚಿವರು ಗಂಭೀರವಾಗಿ ಪರಿಗಣಿಸಬೇಕು. ಅಧಿವೇಶನದಲ್ಲಿ ಅಕ್ರಮ ಮರಳು ಸಾಗಣೆ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತೇನೆ. ಯಾವುದಕ್ಕೂ ನಾನು ಹೆದರುವುದಿಲ್ಲ ಎಂದು ಕರೆಮ್ಮ ನಾಯಕ್ ಸ್ಪಷ್ಟಪಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಬಿಗ್ ಶಾಕ್; ಪಿಯುಸಿ ಮಕ್ಕಳಿಗೆ ಇನ್ಮುಂದೆ ರಜೆ ಇಲ್ಲ!

0

ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸ್ಟಡಿ ಹಾಲಿಡೇ ವ್ಯವಸ್ಥೆಯನ್ನು ರದ್ದುಪಡಿಸಿ ಹೊಸ ಮಾರ್ಗಸೂಚಿ ಜಾರಿಗೊಳಿಸಿದೆ.

ಪಿಯು ಫಲಿತಾಂಶದಲ್ಲಿ ನಿರೀಕ್ಷಿತ ಸುಧಾರಣೆ ಕಂಡುಬರದ ಹಿನ್ನೆಲೆ, ಇನ್ನು ಮುಂದೆ ಪರೀಕ್ಷೆ ಮುಗಿಯುವವರೆಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಕಾಲೇಜಿಗೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ. ಫೆಬ್ರವರಿ 26ರವರೆಗೆ ಕಾಲೇಜುಗಳನ್ನು ನಡೆಸಲು ನಿರ್ಧರಿಸಲಾಗಿದ್ದು, ಉಪನ್ಯಾಸಕರ ನೇತೃತ್ವದಲ್ಲಿ ಗ್ರೂಪ್ ಸ್ಟಡಿ, ಪಠ್ಯ ಪುನರವಲೋಕನ, ಅನುಮಾನ ನಿವಾರಣೆ ಹಾಗೂ ಪ್ರಶ್ನೋತ್ತರ ಚರ್ಚೆಗಳ ಮೂಲಕ ವಿದ್ಯಾರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಸಿದ್ಧಪಡಿಸಲು ಕಾಲೇಜುಗಳಿಗೆ ನಿರ್ದೇಶನ ನೀಡಲಾಗಿದೆ.

ಜೊತೆಗೆ ಉಪನ್ಯಾಸಕರು ಕೂಡ ಪರೀಕ್ಷೆ ಮುಗಿಯುವವರೆಗೂ ಕಡ್ಡಾಯವಾಗಿ ಕಾಲೇಜಿಗೆ ಹಾಜರಾಗಬೇಕು ಎಂದು ಇಲಾಖೆ ಆದೇಶಿಸಿದೆ. ಈ ಕ್ರಮದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸುಧಾರಣೆ ಕಾಣಲಿದೆ ಎಂಬ ವಿಶ್ವಾಸವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ವ್ಯಕ್ತಪಡಿಸಿದೆ.

ಚಿಕ್ಕಬಳ್ಳಾಪುರ| ಸ್ಲೀಪರ್ ಬಸ್ ಅಪಘಾತ; ಓರ್ವ ಸಾವು, 11 ಮಂದಿಗೆ ಗಾಯ

0

ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಮಂತ್ರಾಲಯಕ್ಕೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನಪ್ಪಿದ್ದು, 11 ಮಂದಿ ಗಾಯಗೊಂಡ ಘಟನೆ ಜರುಗಿದೆ. ಬಿಹಾರ ಮೂಲದ 20 ವರ್ಷದ ಸುಹಾಸ್ ಮೃತ ಯುವಕ.

ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಇಬ್ಬರನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹೊಸ ಬೈಕುಗಳನ್ನ ಹೊತ್ತು ಹೈದರಾಬಾದ್ ಕಡೆಗೆ ಸಾಗುತ್ತಿದ್ದ ಕಂಟೇನರ್ ಲಾರಿಗೆ ಹಿಂಬದಿಯಿಂದ ಸುಗಮ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಬಸ್ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಘಟನೆ ನಂತರ ಸ್ಥಳಕ್ಕೆ ಎಸ್‌ಪಿ ಕುಶಾಲ್ ಚೌಕ್ಸಿ ಸೇರಿದಂತೆ ಚಿಕ್ಕಬಳ್ಳಾಪುರ ಪೊಲೀಸರು ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಿದ್ರು.

ಅಪಘಾತದಲ್ಲಿ ಬಸ್‌ ಗುದ್ದಿದ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ಸು ಕಂಟೈನರ್‌ನ ಒಳಗೆ ಸಿಲುಕಿಕೊಂಡಿದ್ದು, ಓರ್ವ ಪ್ರಯಾಣಿಕನ ಕಾಲು ಸಹ ಸಿಲುಕಿ ನರಳಾಡಿರೋದು ಕಂಡುಬಂದಿದೆ. ಗಂಟೆಗಟ್ಟಲೆ ಹರಸಹಾಸ ಪಟ್ಟು ಕೊನೆಗೆ ಕಟಿಂಗ್ ಮಿಷನ್ ಮೂಲಕ ರಾಡುಗಳನ್ನ ಕಟ್ ಮಾಡಿ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ.

ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಕೇಸ್‌: ಇಂಥ ಘಟನೆ ಗೌರವ ತರಲ್ಲ, ಡಿಸ್‌ಮಿಸ್‌ ಕೂಡ ಆಗಬಹುದು: ಪರಮೇಶ್ವರ್ ಗರಂ

0

ಬೆಂಗಳೂರು: ಡಿಜಿಪಿ ರಾಮಚಂದ್ರ ರಾವ್ ಪ್ರಕರಣ ರಾಜ್ಯದ ಆಡಳಿತ ವ್ಯವಸ್ಥೆಯನ್ನೇ ತಲ್ಲಣಗೊಳಿಸಿದ್ದು, ಇದೀಗ ಸರ್ಕಾರ ಕಠಿಣ ನಿಲುವು ತಳೆದಿದೆ. ಗೃಹಸಚಿವ ಜಿ. ಪರಮೇಶ್ವರ್ ಸ್ಪಷ್ಟವಾಗಿ, “ಇಂತಹ ಘಟನೆಗಳು ಯಾರಿಗೂ ಗೌರವ ತರೋದಿಲ್ಲ” ಎಂದು ಹೇಳಿ ಬಲವಾದ ಸಂದೇಶ ನೀಡಿದ್ದಾರೆ.

ನಿನ್ನೆ ಈ ವಿಷಯ ತಿಳಿದಾಗ ನಾನು ಅಸ್ವಸ್ಥರಾಗಿದ್ದೆ. ಮಧ್ಯಾಹ್ನ ನಂತರ ಮಾಹಿತಿ ಪಡೆದು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ. ಬಳಿಕ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಯಾವುದೇ ಇಲಾಖೆ ಆಗಿರಲಿ, ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಇಂತಹ ಘಟನೆಗಳು ನಡೆಯಬಾರದು. ಸಿಎಂ ಕೂಡ ಈ ವಿಚಾರದಿಂದ ತೀವ್ರ ಅಸಮಾಧಾನಗೊಂಡಿದ್ದಾರೆ. ದೊಡ್ಡ ಅಧಿಕಾರಿ, ಸೀನಿಯರ್ ಎಂಬ ಕಾರಣ ನೀಡಿ ಯಾರನ್ನೂ ಉಳಿಸಬಾರದು ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಗೃಹಸಚಿವ ಹೇಳಿದ್ದಾರೆ.

ಸಿಎಂಗೆ ವಿಷಯ ತಿಳಿಸಿದ ತಕ್ಷಣವೇ ರಾಮಚಂದ್ರ ರಾವ್ ಅವರನ್ನು ಅಮಾನತು ಮಾಡಿ ತನಿಖೆ ನಡೆಸಲು ಸೂಚನೆ ನೀಡಲಾಗಿದೆ. ಆದರೆ ರಾಮಚಂದ್ರ ರಾವ್ ಆರೋಪಗಳನ್ನು ಸುಳ್ಳು ಎಂದು ಹೇಳಿರುವ ಹಿನ್ನೆಲೆ, ತನಿಖೆಯಲ್ಲಿ ಎಲ್ಲಾ ಆಯಾಮಗಳನ್ನು ಪರಿಶೀಲಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಬಿಜೆಪಿ ಪಕ್ಷ ಬಂಧನಕ್ಕೆ ಒತ್ತಾಯಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ತನಿಖೆ ನಂತರ ಯಾವ ಮಟ್ಟದ ಕ್ರಮ ಬೇಕಾದರೂ ಆಗಬಹುದು. ಅಗತ್ಯವಿದ್ದರೆ ಡಿಸ್‌ಮಿಸ್‌ಗೂ ಅವಕಾಶ ಇದೆ. ತಕ್ಷಣ ಕ್ರಮ ತೋರಿಸಬೇಕು ಎಂಬ ಕಾರಣಕ್ಕೆ ಅಮಾನತು ಮಾಡಲಾಗಿದೆ. ಯಾವುದೇ ಮುಲಾಜಿ ಇಲ್ಲದೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮನೆ ಮುಂದೆ ಹಾರ್ನ್ ಹಾಕಿದ್ದಕ್ಕೆ ಗಲಾಟೆ; ಯುವಕನಿಗೆ ಚಾಕು ಇರಿತ, ಗಂಭೀರ

0

ಗದಗ: ಮನೆ ಮುಂದೆ ಹಾರ್ನ್ ಹಾಕಿದ ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಜಗಳ ನಡೆದು, ತಂದೆ–ಮಗ ಸೇರಿ ಮೂವರ ಮೇಲೆ ದಾಳಿ ಮಾಡಿರುವ ಘಟನೆ ಗದಗ ತಾಲೂಕಿನ ಅಡವಿ ಸೋಮಾಪುರ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಮಗನಿಗೆ ಚಾಕು ಇರಿತವಾದರೆ, ತಂದೆಗೆ ಕಬ್ಬಿಣದ ಹುಕ್ ‌ನಿಂದ ಹಲ್ಲೆ ಮಾಡಲಾಗಿದೆ. ಜಗಳ ಬಿಡಿಸಲು ಬಂದ ಮಲ್ಲಪ್ಪನಿಗೆ ಬಡಿಗೆಯಿಂದ ಹೊಡೆದಿದ್ಧರಿಂದ ಗಂಭೀರವಾಗಿ ಗಾಯಗೊಂಡ ಮೂವರು ಚಿಕಿತ್ಸೆಗಾಗಿ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಂಬಳಿ ಕುಟುಂಬ ಮತ್ತು ಚಕ್ರಣ್ಣವರ ಕುಟುಂಬದ ನಡುವೆ ಈ ಗಲಾಟೆ ನಡೆದಿದೆ.

ಚಕ್ರಣ್ಣವರ ಕುಟುಂಬದ ಈರಪ್ಪ, ಚಿನ್ನಪ್ಪ, ದೊಡ್ಡ ಯಲ್ಲಪ್ಪ ಮತ್ತು ರಮೇಶ್ ಅವರು ಚಾಕು ಹಾಗೂ ಕಬ್ಬಿಣದ ಹುಕ್ ಬಳಸಿ ದಾಳಿ ನಡೆಸಿದ ಆರೋಪ ಕೇಳಿ ಬಂದಿದೆ.

ಪ್ರತಿದಾಳಿಯಲ್ಲಿ ಇನ್ನೊಂದು ಗುಂಪಿನ ಈರವ್ವ ಹಾಗೂ ದೊಡ್ಡ ಯಲ್ಲಪ್ಪನಿಗೂ ಗಾಯಗಳಾಗಿವೆ. ಎರಡು ಕುಟುಂಬಗಳ ನಡುವೆ ಹಿಂದಿನಿಂದಲೂ ವೈಷಮ್ಯವಿದ್ದು, ಈ ಹಿಂದೆ ಗ್ರಾಮದ ಹಿರಿಯರು ರಾಜಿ ಪಂಚಾಯಿತಿ ನಡೆಸಿದ್ದರು ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ ನಡೆದ ಈ ಘಟನೆಯ ಹಿನ್ನೆಲೆಯಲ್ಲಿ ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.15/2026, ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಶಮರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಚಿನ್ನ ಕಳವು ಪ್ರಕರಣ: ಬೆಂಗಳೂರು, ಬಳ್ಳಾರಿ ಸೇರಿ ಹಲವೆಡೆ ಇಡಿ ದಾಳಿ

0

ಬೆಂಗಳೂರು: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಪವಿತ್ರ ಚಿನ್ನ ಕಳವು ಪ್ರಕರಣ ಇದೀಗ ರಾಷ್ಟ್ರಮಟ್ಟದ ತನಿಖೆಗೆ ತಿರುಗಿದ್ದು, ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ 4.5 ಕೆಜಿ ಚಿನ್ನ ಕಳವು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ.

ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಅಯ್ಯಪ್ಪ ದೇವಸ್ಥಾನ, ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಅವರ ಮನೆ, ಟ್ರಸ್ಟಿಗಳ ನಿವಾಸಗಳು – ಎಲ್ಲೆಡೆ ಇಡಿ ಅಧಿಕಾರಿಗಳು ಬೆಳಿಗ್ಗೆ ದಾಳಿ ನಡೆಸಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬಳ್ಳಾರಿಯಲ್ಲಿ ಪ್ರತಿಷ್ಠಿತ ರೊದ್ದಂ ಜ್ಯುವೆಲ್ಲರಿ ಅಂಗಡಿ ಹಾಗೂ ಅದರ ಮಾಲೀಕ ಗೋವರ್ಧನ್ ನಿವಾಸದ ಮೇಲೂ ರೇಡ್ ನಡೆದಿದೆ.

ಒಟ್ಟು 9 ಮಂದಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, ಪ್ರಕರಣದಲ್ಲಿ ಹಣಕಾಸಿನ ಅಕ್ರಮ ವರ್ಗಾವಣೆ, ಕಪ್ಪು ಹಣ ಮತ್ತು ಲಿಂಕ್‌ಗಳ ಮೇಲೆ ಕಣ್ಣಿಟ್ಟಿದೆ. ಇದೇ ಕಾರಣಕ್ಕೆ ಇಡಿ ಇದೀಗ ಮನಿ ಲಾಂಡರಿಂಗ್ ಕಾಯ್ದೆ (PMLA) ಅಡಿಯಲ್ಲಿ ಅಧಿಕೃತ ತನಿಖೆ ಆರಂಭಿಸಿದೆ.

ತನಿಖೆಯಲ್ಲಿ ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್ ಪ್ರಮುಖ ಪಾತ್ರ ವಹಿಸಿರುವುದು ಬಹಿರಂಗವಾಗಿದೆ. ಮುಖ್ಯ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ದೇವಸ್ಥಾನದಿಂದ ಕಳವು ಮಾಡಿದ ಚಿನ್ನವನ್ನು ಗೋವರ್ಧನ್‌ಗೆ ಮಾರಾಟ ಮಾಡಿದ್ದಾನೆ ಎಂಬ ಆರೋಪವಿದ್ದು, ಅಕ್ರಮವಾಗಿ 470 ಗ್ರಾಂ ಚಿನ್ನ ಖರೀದಿಸಿದ್ದ ಪ್ರಕರಣದಲ್ಲಿ ಗೋವರ್ಧನ್ ಅವರನ್ನು ಕೇರಳ ಎಸ್‌ಐಟಿ ಈಗಾಗಲೇ ಬಂಧಿಸಿದೆ.

ಈ ಪ್ರಕರಣ ಕೇವಲ ಚಿನ್ನ ಕಳ್ಳತನಕ್ಕೆ ಸೀಮಿತವಾಗಿಲ್ಲ. ಇದರಲ್ಲಿ ಪ್ರಭಾವಿಗಳ ಕೈವಾಡವಿದೆ ಎಂಬ ಗಂಭೀರ ಆರೋಪಗಳು ಆರಂಭದಿಂದಲೇ ಕೇಳಿಬರುತ್ತಿದ್ದು, ತನಿಖೆ ಗಂಭೀರ ತಿರುವು ಪಡೆದುಕೊಂಡಿದೆ.

2019ರಲ್ಲಿ ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಗಳಿಗೆ ಚಿನ್ನದ ಲೇಪನ ಮಾಡುವ ಸಂದರ್ಭ ಸುಮಾರು 4.5 ಕೆಜಿ ಚಿನ್ನ ನಾಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ತನಿಖೆಗೆ ಆದೇಶ ನೀಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಬರಿಮಲೆಯ ಮಾಜಿ ಮುಖ್ಯ ಅರ್ಚಕ (ತಂತ್ರಿ) ಕಂದರಾರು ರಾಜೀವ್, ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷರು ಸೇರಿದಂತೆ ಇದುವರೆಗೆ 12ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

ಡಿಜಿಪಿ ರಾಸಲೀಲೆ ವಿಡಿಯೋ: ರಾಮಚಂದ್ರರಾವ್ ಅಮಾನತು

0

ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ ಡಿಜಿಪಿ ರಾಮಚಂದ್ರರಾವ್ ಪ್ರಕರಣದಲ್ಲಿ ಕೊನೆಗೂ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಅವರನ್ನು ಅಮಾನತುಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ.

ಕಚೇರಿಯೊಳಗೇ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ನಡೆಸುತ್ತಿರುವುದಾಗಿ ಆರೋಪಿಸಲಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಪ್ರಕರಣ ಸರ್ಕಾರಕ್ಕೆ ಭಾರೀ ಮುಜುಗರ ತಂದಿತ್ತು. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕೇವಲ ವಿಡಿಯೋ ಮಾತ್ರವಲ್ಲದೆ, ಸಂಬಂಧಿತ ಆಡಿಯೋ ಕ್ಲಿಪ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿತ್ತು.

ಪ್ರಕರಣ ಬೆಳಕಿಗೆ ಬಂದ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರವಾಗಿ ಪ್ರತಿಕ್ರಿಯಿಸಿ, ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎಸ್. ಸಲೀಂ ಅವರಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.

ಇನ್ನು, ಡಿಜಿಪಿ ರಾಮಚಂದ್ರರಾವ್ ಅವರು ಮಾಧ್ಯಮಗಳ ಮುಂದೆ, “ಇವೆಲ್ಲವೂ ಎಐ ಮೂಲಕ ತಯಾರಿಸಲಾದ ನಕಲಿ ವಿಡಿಯೋಗಳು. ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ” ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದರು.

ಆದರೆ, ಸಾರ್ವಜನಿಕ ಒತ್ತಡ, ರಾಜಕೀಯ ಪ್ರತಿಕ್ರಿಯೆಗಳು ಮತ್ತು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಸರ್ಕಾರ, ನಿವೃತ್ತಿಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಅವರನ್ನು ಅಮಾನತುಗೊಳಿಸಿ ಸ್ಪಷ್ಟ ಸಂದೇಶ ನೀಡಿದೆ.

ಈ ಬೆಳವಣಿಗೆ ಪೊಲೀಸ್ ಇಲಾಖೆಯ ಶಿಸ್ತು, ಗೌರವ ಮತ್ತು ವಿಶ್ವಾಸಕ್ಕೆ ಸಂಬಂಧಿಸಿದ ಮಹತ್ವದ ಪ್ರಕರಣವಾಗಿ ಪರಿಗಣಿಸಲಾಗುತ್ತಿದೆ.

ಹುಟ್ಟೂರಿಗೆ ಮರಳಿದ BBK12 ವಿನ್ನರ್ ಗಿಲ್ಲಿ ನಟ: ಜನಸಾಗರ, ರಸ್ತೆ ಜಾಮ್, ಕಪ್ ಹಿಡಿದುಕೊಂಡೇ ಭಾವುಕ ಮಾತು

ಬಿಗ್ ಬಾಸ್ ಕಪ್ ಕೈಯಲ್ಲಿ ಹಿಡಿದು ಹುಟ್ಟೂರಿನ ರಸ್ತೆಯಲ್ಲಿ ಗಿಲ್ಲಿ ನಟ ಸಾಗಿದ ದೃಶ್ಯ, ಅಭಿಮಾನಿಗಳಿಗೆ ಕಣ್ಣೀರು ತರಿಸುವಂತಹ ಕ್ಷಣವಾಗಿ ಮೂಡಿಬಂದಿದೆ.

ಒಂದು ಕಾಲದಲ್ಲಿ ಸರ್ಕಾರಿ ಬಸ್ ಪಾಸ್ ಹಿಡಿದು ಓಡಾಡುತ್ತಿದ್ದ ಹುಡುಗ, ಇಂದು ಅದೇ ರಸ್ತೆಯಲ್ಲಿ ಟ್ರೋಫಿಯೊಂದಿಗೆ ಕಾರಿನಲ್ಲಿ ಬರುತ್ತಿದ್ದಾನೆ. ಈ ದೃಶ್ಯವೇ ಗಿಲ್ಲಿ ಜೀವನದ ದೊಡ್ಡ ಸಿಂಬಲ್ ಆಗಿದೆ.

ಜನರ ಮಧ್ಯೆ ಮಾತನಾಡಿದ ಗಿಲ್ಲಿ ನಟ, “ನಾನು ಕೆ.ಎಂ. ದೊಡ್ಡಿಯಲ್ಲಿ ಐಟಿಐ ಓದಿದ್ದೆ. ಇದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಇವತ್ತು ಇದೇ ಊರಲ್ಲಿ ಕಪ್ ಹಿಡಿದು ಜನರ ಮಧ್ಯೆ ನಿಂತಿದ್ದೀನಿ ಅಂದ್ರೆ, ಅದು ಜನರ ಪ್ರೀತಿಯ ಫಲ” ಎಂದರು.

ಪ್ರೀತಿ ಮಾತ್ರವಲ್ಲ, ಭಯವೂ ಇದೆ

ಗಿಲ್ಲಿ ನಟನ ಮಾತಿನಲ್ಲಿ ಪ್ರಾಮಾಣಿಕತೆ ಸ್ಪಷ್ಟವಾಗಿ ಕಾಣಿಸಿಕೊಂಡಿತು. “ಜನರ ಪ್ರೀತಿ ಹೆಚ್ಚಾದಷ್ಟು ಜವಾಬ್ದಾರಿ ಹೆಚ್ಚಾಗುತ್ತದೆ. ಖುಷಿಗಿಂತ ಭಯ ಜಾಸ್ತಿ ಆಗಿದೆ. ಈ ಪ್ರೀತಿಗೆ ನ್ಯಾಯ ಕೊಡಬೇಕೆಂಬ ಒತ್ತಡ ಯಾವಾಗಲೂ ಇರುತ್ತದೆ” ಎಂದು ಹೇಳಿದ್ದಾರೆ.

ಅಂಬರೀಷ್ ಹೆಸರು ಕೇಳಿದಾಗ ತಲೆಬಾಗಿದ ಗಿಲ್ಲಿ

ದೊಡ್ಡಅರಸಿನ ಕೆರೆ ಗೇಟ್ ಬಳಿ ಅಭಿಮಾನಿಗಳು ಗಿಲ್ಲಿಯನ್ನು ಅಂಬರೀಷ್ ಅವರ ಜೊತೆ ಹೋಲಿಕೆ ಮಾಡಿದಾಗ, ಗಿಲ್ಲಿ ನಟ ತಕ್ಷಣವೇ ವಿನಯದಿಂದ ಪ್ರತಿಕ್ರಿಯಿಸಿದರು.
“ಅಂಬರೀಷಣ್ಣನ ಕಾಲಿನ ಧೂಳಿಗೂ ನಾನು ಸಮನಲ್ಲ. ಅವರ ಮಟ್ಟಕ್ಕೆ ನಮ್ಮನ್ನು ಹೋಲಿಸಬೇಡಿ. ಅವರ ಊರಿನ ಪಕ್ಕ ನಮ್ಮ ಊರು ಇರೋದೇ ಭಾಗ್ಯ” ಎಂದು ಹೇಳಿದರು.

ಜಗ್ಗೇಶ್ ಮಾತು ನಿಜವಾದ ಕ್ಷಣ

ನಟ ಜಗ್ಗೇಶ್ ನೀಡಿದ್ದ ಭವಿಷ್ಯ ಇದೀಗ ನಿಜವಾಗಿದೆ. ಇಂದು ಗಿಲ್ಲಿ ನಟ ಪೊಲೀಸ್ ಭದ್ರತೆಯಲ್ಲಿ ಸಂಚರಿಸುತ್ತಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ಗಿಲ್ಲಿ, “ಜಗ್ಗೇಶ್ ಅವರ ಆಶೀರ್ವಾದದಿಂದಲೇ ಇದು ಸಾಧ್ಯವಾಗಿದೆ” ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಪವಿತ್ರಾ ಗೌಡಗೆ ಮನೆ ಊಟ ಬೇಡಿಕೆ – ಕೋರ್ಟ್ ಆದೇಶಕ್ಕೆ ರಾಜ್ಯ ಸರ್ಕಾರವೇ ತಡೆ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಪವಿತ್ರಾ ಗೌಡ ಇದೀಗ ಮತ್ತೊಂದು ಕಾರಣದಿಂದ ಸುದ್ದಿಯಾಗಿದ್ದಾರೆ. ಜೈಲಿನಲ್ಲಿ ಮನೆ ಊಟ ಪಡೆಯಲು ಸಲ್ಲಿಸಿದ ಮನವಿ ಇದೀಗ ಕಾನೂನು ಹಾಗೂ ಆಡಳಿತಾತ್ಮಕ ಚರ್ಚೆಗೆ ಕಾರಣವಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಪವಿತ್ರಾ ಗೌಡ, ಜೈಲಿನ ಆಹಾರದಿಂದ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ ಎಂದು ನ್ಯಾಯಾಲಯದ ಮುಂದೆ ವಾದಿಸಿದ್ದರು. “ಜೈಲೂಟದಿಂದ ಚರ್ಮರೋಗ, ಗುಳ್ಳೆಗಳು ಹಾಗೂ ಫುಡ್ ಪಾಯ್ಸನಿಂಗ್ ಸಮಸ್ಯೆ ಉಂಟಾಗಿದೆ” ಎಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ 57ನೇ ಸಿಸಿಹೆಚ್ ಕೋರ್ಟ್ ಮೊದಲಿಗೆ ಮನೆ ಊಟಕ್ಕೆ ಅನುಮತಿ ನೀಡಿತ್ತು. ಬಳಿಕ ಜೈಲಾಧಿಕಾರಿಗಳ ಆಕ್ಷೇಪದ ಹಿನ್ನೆಲೆಯಲ್ಲಿ, ಕೋರ್ಟ್ ಆದೇಶವನ್ನು ತಿದ್ದುಪಡಿ ಮಾಡಿ ವಾರಕ್ಕೆ ಒಮ್ಮೆ ಮಾತ್ರ ಅವಕಾಶ ನೀಡಿತ್ತು. ಆದರೆ ಇದೀಗ ಈ ಆದೇಶವನ್ನೇ ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ.

ಸರ್ಕಾರದ ಆತಂಕ ಏನು?

ಸರ್ಕಾರದ ವಾದದ ಪ್ರಕಾರ, ಕೊಲೆ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳ ಆರೋಪಿಗಳಿಗೆ ಮನೆ ಊಟದಂತಹ ವಿಶೇಷ ಸೌಲಭ್ಯ ನೀಡಲು ಯಾವುದೇ ಜೈಲು ನಿಯಮಗಳಿಲ್ಲ.
ಒಬ್ಬರಿಗೆ ಈ ಅವಕಾಶ ನೀಡಿದರೆ, ಇತರೆ ಕೈದಿಗಳೂ ಅದೇ ರೀತಿಯ ಬೇಡಿಕೆ ಇಡುವ ಸಾಧ್ಯತೆ ಇರುವುದರಿಂದ ಜೈಲು ವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರುತ್ತದೆ ಎಂಬುದು ಸರ್ಕಾರದ ವಾದ.

ಇದಕ್ಕೆ ಜೊತೆಗೆ, ಜೈಲಿನ ಆಹಾರಕ್ಕೆ FSSAI 4 ಸ್ಟಾರ್ ರೇಟಿಂಗ್ ನೀಡಿರುವುದು ಕೂಡ ಸರ್ಕಾರದ ವಾದಕ್ಕೆ ಬಲ ನೀಡುತ್ತಿದೆ.

ಈ ಪ್ರಕರಣ ಇದೀಗ ಕೇವಲ ಪವಿತ್ರಾ ಗೌಡ ಅವರ ವೈಯಕ್ತಿಕ ಬೇಡಿಕೆಗೆ ಸೀಮಿತವಾಗದೆ, ಜೈಲು ನಿಯಮಗಳು, ಕೈದಿಗಳ ಹಕ್ಕು ಮತ್ತು ಸಮಾನತೆ ಕುರಿತ ದೊಡ್ಡ ಚರ್ಚೆಯಾಗಿ ಪರಿಣಮಿಸಿದೆ.

ನೂತನ ಮನೆಗಳ ವಿತರಣೆ ಕಾರ್ಯಕ್ರಮ ಜ.24ಕ್ಕೆ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆ ಎಂಬ ಕನಸನ್ನು ನನಸಾಗಿಸುವ ಮಹತ್ವದ ಯೋಜನೆಯನ್ನು ಜನವರಿ 24ರಂದು ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಮನೆಗಳ ಲೋಕಾರ್ಪಣೆ ಕಾರ್ಯಕ್ರಮವು ಸರ್ಕಾರದ ಜನಪರ ಕಾರ್ಯಗಳ ಪ್ರತೀಕವಾಗಿದೆ ಎಂದು ಕಾರ್ಮಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್.ಲಾಡ್ ಹೇಳಿದರು.

ಅವರು ಸೋಮವಾರ ಜಿ.ಪಂ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಜ. 24ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಮನೆಗಳ ಲೋಕಾರ್ಪಣೆ ಕಾರ್ಯಕ್ರಮದ ಸಿದ್ಧತೆಯ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಧಾರವಾಡ ಜಿಲ್ಲೆಯಲ್ಲಿ ಒಟ್ಟು 2,169 ಮನೆಗಳನ್ನು ಮಂಜೂರು ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ಮನೆಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ 3 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಹೇಳಿದರು.

ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಮಾತನಾಡಿ, ಕರ್ನಾಟಕದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಒಟ್ಟು 1,80,253 ಮನೆಗಳು ಮಂಜೂರಾಗಿವೆ. 86,651 ಮನೆಗಳ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ ಎಂದು ತಿಳಿಸಿದರು.

error: Content is protected !!