Home Blog Page 149

ಅಬಕಾರಿ ಡಿಸಿ ಲಂಚ ಪ್ರಕರಣ: ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ಲೋಕಾಯುಕ್ತಕ್ಕೆ ದೂರು!

0

ಬೆಂಗಳೂರು: ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ ಬಿದ್ದ ಬೆನ್ನಲ್ಲೇ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಸಂಕಷ್ಟ ಎದುರಾಗಿದೆ.

ಲೈಸೆನ್ಸ್ ನೀಡುವ ನೆಪದಲ್ಲಿ ಕೇಳಲಾದ ಲಂಚದ ಬಹುಪಾಲು ಹಣವನ್ನು ಸಚಿವರಿಗೆ ನೀಡಬೇಕೆಂದು ಅಬಕಾರಿ ಡಿಸಿ ಹೇಳಿರುವ ಆಡಿಯೋ ಆಧಾರದ ಮೇಲೆ, ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಇದರಿಂದ ಅಬಕಾರಿ ಲೈಸೆನ್ಸ್‌ಗೆ ಕೋಟಿ ಕೋಟಿ ರೂಪಾಯಿ ಲಂಚ ಕೇಳಿದ್ದ ಪ್ರಕರಣ ಇದೀಗ ಸಚಿವರ ಮಟ್ಟಕ್ಕೂ ತಲುಪಿದೆ.

ಬ್ಯಾಟರಾಯನಪುರ ಕಚೇರಿಯಲ್ಲಿ 25 ಲಕ್ಷ ರೂ. ಲಂಚ ಸ್ವೀಕರಿಸುವ ಕೆಲವೇ ನಿಮಿಷಗಳ ಮುನ್ನ ದೂರುದಾರ ಲಕ್ಷ್ಮೀನಾರಾಯಣ ಮತ್ತು ಅಬಕಾರಿ ಡಿಸಿ ಜಗದೀಶ್ ನಾಯ್ಕ್ ನಡುವೆ ಲೈಸೆನ್ಸ್ ಡೀಲಿಂಗ್ ಕುರಿತು ಮಾತುಕತೆ ನಡೆದಿದೆ. ಈ ವೇಳೆ, ಲಂಚದ ಹಣವನ್ನು ಕೆಲವು ಅಧಿಕಾರಿಗಳ ಜೊತೆಗೆ ಸಚಿವರಿಗೂ ಹಂಚಬೇಕು ಎಂದು ಡಿಸಿ ಹೇಳಿದ್ದಾಗಿ ಆರೋಪಿಸಲಾಗಿದೆ. ಈ ಸಂಭಾಷಣೆಯನ್ನು ದೂರುದಾರರು ತಮ್ಮ ಮೊಬೈಲ್‌ನಲ್ಲಿ ಆಡಿಯೋ ರೂಪದಲ್ಲಿ ದಾಖಲಿಸಿಕೊಂಡಿದ್ದು, ಅದನ್ನೇ ಆಧಾರವಾಗಿ ಇದೀಗ ಸಚಿವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಇದರ ನಡುವೆ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹಾಗೂ ಅವರ ಪುತ್ರರು ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಸಿಎಲ್–7 ಪರವಾನಗಿ ನೀಡಲು ಪ್ರತಿ ಪರವಾನಗಿಗೆ 1.5 ಕೋಟಿ ರೂ. ಲಂಚ ಕೇಳಲಾಗಿದೆ ಎಂದು ಬಿಜೆಪಿ ಆರೋಪಿಸಿದ್ದು, ಈ ವಿಷಯದಲ್ಲಿ ಮುಖ್ಯಮಂತ್ರಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಜೊತೆಗೆ ಅಬಕಾರಿ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಇನ್ನೊಂದೆಡೆ, ಆರೋಪಗಳಿಗೆ ಪ್ರತಿಕ್ರಿಯಿಸಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, “ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇದು ನನ್ನ ವಿರುದ್ಧದ ಕುತಂತ್ರ. ನನ್ನ ತೇಜೋವಧೆ ಮಾಡುವ ಪ್ರಯತ್ನ ಇದು. ನಾನು ಕಾನೂನು ಹೋರಾಟ ನಡೆಸುತ್ತೇನೆ. ಯಾರೋ ಹೇಳಿದಾಕ್ಷಣ ನನ್ನ ಪಾತ್ರ ಇದೆ ಎಂದು ಹೇಳಲು ಸಾಧ್ಯವಿಲ್ಲ” ಎಂದು ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಅಧಿಕಾರಿಗಳಲ್ಲಿ ಸೌಜನ್ಯಪೂರ್ಣ ವರ್ತನೆ ಕಾಣಿಸಲಿ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಕಂದಾಯ ಇಲಾಖೆ ಅಧಿಕಾರಿಗಳಲ್ಲಿ ಆತ್ಮಾವಲೋಕನ ಅತ್ಯಗತ್ಯವಾಗಿದೆ. ಕಚೇರಿಗೆ ಆಗಮಿಸುವ ನಾಗರಿಕರ ಗೌರವಕ್ಕೆ ಯಾವುದೇ ಚ್ಯುತಿ ಬಾರದಂತೆ ಅಧಿಕಾರಿಗಳ ನಡೆ ಮತ್ತು ವರ್ತನೆ ಇರಬೇಕು ಎಂದು ರಾಜ್ಯದ ಕಾನೂನು, ನ್ಯಾಯ ಹಾಗೂ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರೂ ಆಗಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ಗದಗ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಗದಗ ತಾಲೂಕು ಪ್ರಜಾಸೌಧ ಕಟ್ಟಡದ ಶಿಲಾನ್ಯಾಸ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗದಗ ತಾಲೂಕು ಉತ್ತಮ ಶಿಸ್ತು ಮತ್ತು ಆಡಳಿತ ಕ್ರಮಗಳಿಂದ ಹೆಸರು ಪಡೆದಿದೆ. ನಿರ್ಮಾಣವಾಗುತ್ತಿರುವ ಹೊಸ ಪ್ರಜಾಸೌಧ ಕಟ್ಟಡವು ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಗೌರವ ತರುವ ಕಟ್ಟಡವಾಗಲಿದೆ. ಮುಂದಿನ ದಿನಗಳಲ್ಲಿ ಇದು ಸಾರ್ವಜನಿಕರಿಗೆ ನೆಮ್ಮದಿಯ ಹಾಗೂ ಸುಗಮ ಸೇವೆ ಒದಗಿಸುವ ಕೇಂದ್ರವಾಗಲಿದೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.

ಇತ್ತೀಚೆಗೆ ಸಾರ್ವಜನಿಕರ ಭೇಟಿ ಕಾರ್ಯಕ್ರಮದಲ್ಲಿ ಅನೇಕ ನಾಗರಿಕರು ತಮ್ಮ ಸಮಸ್ಯೆಗಳು ಹಾಗೂ ಅಹವಾಲುಗಳೊಂದಿಗೆ ದಾಖಲೆಗಳನ್ನೂ ತೆಗೆದುಕೊಂಡು ನ್ಯಾಯಕ್ಕಾಗಿ ಆಗಮಿಸಿದ್ದರು. ಸರ್ಕಾರದ ಕೆಲಸಗಳು ವಿಳಂಬವಾಗುತ್ತಿದ್ದರೆ ಅಥವಾ ಇತ್ಯರ್ಥವಾಗದೆ ಉಳಿಯುತ್ತಿದ್ದರೆ, ನಮ್ಮ ಆಡಳಿತ ವ್ಯವಸ್ಥೆಯಲ್ಲಿಯೇ ಲೋಪದೋಷಗಳಿವೆ ಎಂಬುದನ್ನು ಒಪ್ಪಿಕೊಳ್ಳಬೇಕು. ಅವುಗಳನ್ನು ಗುರುತಿಸಿ ಸರಿಪಡಿಸಲು ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಉತ್ತಮ ಆಡಳಿತ ಸಾಧ್ಯವಾಗಬೇಕು ಎಂಬುದು ಸರ್ಕಾರದ ಇಚ್ಛಾಶಕ್ತಿಯಾಗಿದೆ ಎಂದು ಸ್ಪಷ್ಟಪಡಿಸಿದರು.

ತಹಸೀಲ್ದಾರರ ಕಚೇರಿಗಳಲ್ಲಿನ ಬಾಕಿ ಫೈಲ್‌ಗಳ ಕುರಿತು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಬೇಕು. ಕಚೇರಿ ಸ್ಥಳಾಂತರಗೊಳ್ಳುವ ಮುನ್ನ ಎಲ್ಲಾ ಬಾಕಿ ಕಡತಗಳನ್ನು ಇತ್ಯರ್ಥಪಡಿಸಿ, ಹೊಸ ಕಚೇರಿಗೆ ಪ್ರವೇಶಿಸಬೇಕು. ಹೊಸ ಪ್ರಜಾಸೌಧದಲ್ಲಿ ಅಧಿಕಾರಿಗಳಿಂದ ಹೆಚ್ಚಿನ ಜವಾಬ್ದಾರಿ ಮತ್ತು ಜನಪರ ಕಾರ್ಯಕ್ಷಮತೆ ನಿರೀಕ್ಷಿಸಲಾಗಿದೆ ಎಂದು ಸಚಿವರು ಹೇಳಿದರು.

ಕಂದಾಯ ಇಲಾಖೆಯ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನವಿದೆ. ಅಧಿಕಾರಿಗಳ ಬಗ್ಗೆ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಬಾರದು. ಏಜೆಂಟರ ಹಾವಳಿ ಸಂಪೂರ್ಣವಾಗಿ ನಿಲ್ಲಿಸಬೇಕು. ತಾತ್ಕಾಲಿಕ ಕಚೇರಿಗಳಲ್ಲೂ ಏಜೆಂಟರ ಪ್ರವೇಶ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕಚೇರಿಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಬೇಕೆಂದು ಸೂಚಿಸಿದರು.

ಆಡಳಿತ ಸುಧಾರಣೆ ಒಬ್ಬರಿಂದ ಸಾಧ್ಯವಿಲ್ಲ, ಜವಾಬ್ದಾರಿ ಹೊತ್ತಿರುವ ಎಲ್ಲ ಅಧಿಕಾರಿಗಳಿಂದ ಮಾತ್ರ ಸಾಧ್ಯ. ಅಧಿಕಾರಿಗಳಲ್ಲಿ ಸೌಜನ್ಯಪೂರ್ಣ ವರ್ತನೆ ಕಾಣಿಸಬೇಕು. ನಾಗರಿಕರು ಕಚೇರಿಗೆ ಗೌರವಯುತವಾಗಿ ಬಂದು ತಮ್ಮ ಕೆಲಸಗಳನ್ನು ಸುಲಭವಾಗಿ ಮಾಡಿಕೊಂಡು ಹೋಗುವಂತಾಗಬೇಕು. ಸಾರ್ವಜನಿಕರನ್ನು ಕಚೇರಿಯಲ್ಲಿ ನಿಲ್ಲಿಸಿ ಮಾತನಾಡಿಸುವ ಅಧಿಕಾರಿಗಳಿಗೆ ತಕ್ಷಣ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಎಚ್ಚರಿಸಿದರು.

ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ ಕೂಡಲೇ ನಾಗರಿಕರಿಗೆ ಸ್ವೀಕೃತಿ ನೀಡುವ ವ್ಯವಸ್ಥೆ ಕಡ್ಡಾಯವಾಗಬೇಕು. 2027ರ ಜನವರಿ 26ರೊಳಗೆ ಪ್ರಜಾಸೌಧ ಕಟ್ಟಡ ಲೋಪಾರ್ಪಣೆ ಆಗಬೇಕು. ಕಟ್ಟಡವು ಉತ್ತಮ ಗುಣಮಟ್ಟದಿಂದ ನಿರ್ಮಾಣವಾಗಬೇಕು. ಗುತ್ತಿಗೆದಾರರು ಯಾರಿಗೂ ಲಂಚ ನೀಡಬಾರದು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎನ್. ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ರಿಟಿಷ್ ಆಡಳಿತ ಕಾಲದಲ್ಲಿ ತಾಲೂಕು ಕಚೇರಿಯಿಂದಲೇ ಭೂಮಿಗೆ ಸಂಬಂಧಿಸಿದ ಹಾಗೂ ಇತರೆ ಆಡಳಿತ ಕಾರ್ಯಗಳು ನಡೆಯುತ್ತಿದ್ದು, ನಂತರ ವಿಕೇಂದ್ರೀಕರಣದೊಂದಿಗೆ ವಿವಿಧ ಇಲಾಖೆಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

ಪ್ರಜಾಸೌಧ ಕಟ್ಟಡವನ್ನು ಸುಮಾರು 16 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಗುತ್ತಿಗೆದಾರರು 11 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಇಲ್ಲಿ ಭೂಮಿಗೆ ಸಂಬಂಧಿಸಿದ ಎಲ್ಲಾ ಸೇವೆಗಳು ಒಂದೇ ಕಟ್ಟಡದಲ್ಲಿ ಲಭ್ಯವಾಗಲಿದ್ದು, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗದಗ–ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಜಿ.ಪಂ ಮಾಜಿ ಅಧ್ಯಕ್ಷರಾದ ಸಿದ್ದು ಪಾಟೀಲ ಹಾಗೂ ವಾಸಣ್ಣ ಕುರಡಗಿ, ಎಸ್.ಎನ್. ಬಳ್ಳಾರಿ, ಬಸವರಾಜ ಕಡೇಮನಿ, ಫಾರುಕ್ ಹುಬ್ಬಳ್ಳಿ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ತಹಸೀಲ್ದಾರ ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ರಾಜಾರಾಮ್ ಪವಾರ, ಮಲ್ಲಯ್ಯ ಕೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಗದಗ ತಾಲೂಕಿನ ಎಲ್ಲ ಗ್ರಾಮಗಳಿಗೆ ಸ್ಮಶಾನ ವ್ಯವಸ್ಥೆ ಕಲ್ಪಿಸಲು ಸ್ವಾತಂತ್ರ್ಯನಂತರ 80 ವರ್ಷ ಬೇಕಾಯಿತು. ದಾಖಲೆಗಳು ಸರಿಯಾಗಿದ್ದರೂ ನಾಗರಿಕರು ಗುಲಾಮಗಿರಿ ಮನೋಭಾವದಿಂದ ಹೊರಬಂದು ತಮ್ಮ ಹಕ್ಕುಗಳನ್ನು ತಾವೇ ಪಡೆದುಕೊಳ್ಳಬೇಕು. ಇಂದಿನ ತಂತ್ರಜ್ಞಾನ ಮತ್ತು ಕಾನೂನು ವ್ಯವಸ್ಥೆ ಎಲ್ಲವೂ ಬೆರಳ ತುದಿಯಲ್ಲಿ ಲಭ್ಯವಿದೆ. ಬಡತನ ಅಥವಾ ಅಜ್ಞಾನ ಇರಬಹುದು, ಆದರೆ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತಂದುಕೊಳ್ಳಬಾರದು.

  • ಎಚ್.ಕೆ. ಪಾಟೀಲ.
    ಜಿಲ್ಲಾ ಉಸ್ತುವಾರಿ ಸಚಿವರು.

ಗದಗ ಐಎಂಎ ಜನಮುಖಿ ಕಾರ್ಯ ಕೈಗೊಳ್ಳಲಿ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಐಎಂಎ ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿ ಜನಮುಖಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ರಾಜ್ಯ ಐಎಂಎ ಅಧ್ಯಕ್ಷ ಟಿ. ವೀರಭದ್ರಯ್ಯ ಅಭಿಪ್ರಾಯಪಟ್ಟರು.

ಅವರು ರವಿವಾರ ಗದಗಿನ ಐಎಂಎ ರಕ್ತಭಂಡಾರದಲ್ಲಿ ಏರ್ಪಡಿಸಿದ್ದ ಸಾರ್ವಜನಿಕರಿಗೆ ಆರೋಗ್ಯದ ಸಂದೇಶ ಸಾರುವ ಎಲ್‌ಇಡಿ ಫಲಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಗದಗ ಐಎಂಎಗೆ ತನ್ನದೇ ಆದ ಭವ್ಯ ಇತಿಹಾಸವಿದೆ. ರಾಜ್ಯ ಐಎಂಎಗೆ ಬಹು ದೊಡ್ಡ ಕೊಡುಗೆಯನ್ನೂ ನೀಡಿರುವ ಗದಗ ಶಾಖೆಯು ನಡೆದು ಬಂದ ದಾರಿ ತುಂಬಾ ರೋಚಕವಾಗಿದ್ದು, ಹಲವಾರು ರಚನಾತ್ಮಕ ಕಾರ್ಯ ಯೋಜನೆಗಳ ಮೂಲಕ ಇಲ್ಲಿನ ಹಿರಿ-ಕಿರಿಯ ವೈದ್ಯರು ವೈದ್ಯ ಲೋಕಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.

ಗದಗ ಐಎಂಎ 2026ನೇ ವರ್ಷವನ್ನು ಶತಮಾನೋತ್ಸವದ ವರ್ಷವನ್ನಾಗಿ ಆಚರಿಸುತ್ತಿದ್ದು, ಈ ಅವಧಿಯಲ್ಲಿ ಜನರ ಆರೋಗ್ಯವನ್ನು ಸುಧಾರಿಸುವ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಸಲಹೆ ನೀಡಿದರು.

ಗದಗಿನ ಮಧ್ಯವರ್ತಿ ಸ್ಥಳದಲ್ಲಿರುವ ಐಎಂಎ ರಕ್ತಭಂಡಾರದ ಆವರಣದಲ್ಲಿ ಅಳವಡಿಸಿರುವ ಈ ಎಲ್‌ಇಡಿ ಫಲಕವು ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವಂತಾಗಲಿ. ಇಲ್ಲಿ ಬಿತ್ತರಗೊಳ್ಳುವ ಸಂದೇಶಗಳಲ್ಲಿ ಕೆಲವು ಸಂದೇಶಗಳು ಜನತೆಯ ಬದುಕಿನಲ್ಲಿ ಆರೋಗ್ಯ ಜಾಗೃತಿ ಮೂಡಿಸಿದಲ್ಲಿ ಯೋಜನೆ ಸಾರ್ಥಕತೆ ಪಡೆದುಕೊಳ್ಳುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಡಾ. ರಾಜಶೇಖರ ಪವಾಡಶೆಟ್ಟರ ಸಂದರ್ಭೋಚಿತವಾಗಿ ಮಾತನಾಡಿದರು. ಐಎಂಎ ಅಧ್ಯಕ್ಷ ಡಾ. ಶ್ರೀಧರ ಕುರಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಡಾ. ಎಸ್.ಆರ್. ನಾಗನೂರ ಉಪಸ್ಥಿತರಿದ್ದರು.

ಅಕ್ರಮವಾಗಿ ಗೋಮಾಂಸ ಸಾಗಾಟ; ಆರೋಪಿ ಅರೆಸ್ಟ್!

0

ಮಡಿಕೇರಿ:-ವಿರಾಜಪೇಟೆ ಗ್ರಾಮಾಂತರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಾಹಿದ್ ಅಹ್ಮದ್ (47) ಬಂಧಿತ ಆರೋಪಿ. ಈತ ಹುಣಸೂರಿನ ರತ್ನಪುರಿ ನಿವಾಸಿ ಎನ್ನಲಾಗಿದೆ. ಜಾಹಿದ್‌ ಆಲ್ಟೊ-800 ಕಾರಿನಲ್ಲಿ ಅಕ್ರಮವಾಗಿ ಗೋಮಾಂಸ ತುಂಬಿಸಿಕೊಂಡು ಕಾರಿನಲ್ಲಿ ಗೋಣಿಕೊಪ್ಪಲಿನಿಂದ ವಿರಾಜಪೇಟೆ ಕಡೆಗೆ ಬರುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿರಾಜಪೇಟೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದಾರೆ.

ಕಾರು ಪರಿಶೀಲಿಸಿದಾಗ ಕಾರಿನಲ್ಲಿ 150 ಕೆಜಿ ಗೋಮಾಂಸ ಪತ್ತೆಯಾಗಿದ್ದು, ಇದನ್ನ ವಿರಾಜಪೇಟೆ ವ್ಯಾಪ್ತಿಯಲ್ಲಿ ಮಾರಾಟ ಮಾಡಲು ತರುತ್ತಿದ್ದ ಎನ್ನಲಾಗಿದೆ. ಈತ ಹುಣಸೂರಿನ ರತ್ನಪುರಿ ಯಿಂದ ಮಾಂಸವನ್ನ ತಂದಿರೋದಾಗಿ ಪೊಲೀಸರಿಗೆ ಹೇಳಿದ್ದಾನೆ.

ಆರೋಪಿಯನ್ನ ಬಂಧಿಸಿ ಪ್ರಕರಣ ದಾಖಲಿಸಿರುವ ಪೊಲೀಸರು, ಗೋಮಾಂಸ ಸಾಗಾಟಕ್ಕೆ ಬಳಸಿದ್ದ ಕಾರನ್ನೂ ಜಪ್ತಿ ಮಾಡಿದ್ದಾರೆ.

ಸರ್ಕಾರಿ ಕಚೇರಿಯಲ್ಲಿ ರಾಸಲೀಲೆ ವಿಡಿಯೋ ವೈರಲ್; ರಾಮಚಂದ್ರ ರಾವ್‌ಗೆ 10 ದಿನಗಳ ಕಡ್ಡಾಯ ರಜೆ

0

ಬೆಂಗಳೂರು:- ಒಂದೆಡೆ ರಾಸಲೀಲೆ ವಿಡಿಯೋ ವೈರಲ್ ಆಗುತ್ತಿದ್ದರೆ, ಮತ್ತೊಂದೆಡೆ ಡಿಜಿಪಿ ರಾಮಚಂದ್ರರಾವ್ 10 ದಿನಗಳ ಕಡ್ಡಾಯ ರಜೆಯ ಮೇಲೆ ತೆರಳಿದ್ದಾರೆ.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಕಚೇರಿಯಲ್ಲೇ ಮಹಿಳೆಯರೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಡಿಯೋ ಸಹ ಹರಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ರಾಮಚಂದ್ರರಾವ್, “ನನಗೆ ಇದು ಗೊತ್ತಿಲ್ಲ, ಯಾರೋ ಎಐ ಮೂಲಕ ಷಡ್ಯಂತ್ರ ಮಾಡಿದ್ದಾರೆ. ಕಾನೂನು ಹೋರಾಟ ಮಾಡುತ್ತೇನೆ” ಎಂದಿದ್ದಾರೆ.

ಆದರೆ ಮತ್ತೊಂದು ಸ್ಥಳದಲ್ಲಿ ಈ ವಿಡಿಯೋ 8 ವರ್ಷ ಹಳೆಯದಾಗಿದೆ ಎಂಬ ಮಾಹಿತಿ ನೀಡಿರುವುದರಿಂದ ಡಿಜಿಪಿ ಹೇಳಿಕೆ ಅನುಮಾನಾಸ್ಪದವಾಗಿದೆ. ಇನ್ನೂ ವಿಡಿಯೋ ಹೊರಬೀಳುತ್ತಿದ್ದಂತೆ ಗೃಹ ಸಚಿವ ಪರಮೇಶ್ವರ್ ಭೇಟಿಗೆ ಪ್ರಯತ್ನಿಸಿದರೂ ಅವರು ಮನೆಗೆ ಇದ್ದರೂ ಅವಕಾಶ ನೀಡಿರಲಿಲ್ಲ. ಹೀಗಾಗಿ ರಾಮಚಂದ್ರರಾವ್ 10 ದಿನ ಕಡ್ಡಾಯ ರಜೆಯ ಮೇಲೆ ತೆರಳಿದ್ದಾರೆ. ಸಿಎಂ ಸಿದ್ದರಾಮಯ್ಯ ಶಿಸ್ತು ಕ್ರಮದ ಸೂಚನೆ ನೀಡಿ, ಕಾನೂನಿಗಿಂತ ಯಾರೂ ದೊಡ್ಡವರು ಅಲ್ಲ ಎಂದು ಹೇಳಿದ್ದಾರೆ. ಈ ನಡುವೆ ಡಿಸಿಎಂ ಡಿಕೆಶಿ ಅವರು “ನನಗೆ ಗೊತ್ತಿಲ್ಲ, ಪರಮೇಶ್ವರ್ ಅವರನ್ನು ಕೇಳಿ” ಎಂದು ತಿಳಿಸಿದ್ದಾರೆ.

ವೇಮನರ ತತ್ವ-ಸಿದ್ಧಾಂತಗಳು ಇನ್ನಷ್ಟು ಪಸರಿಸಲಿ: ಸಚಿವ ಡಾ. ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಮಹಾಯೋಗಿ ವೇಮನರ ತತ್ವ-ಸಿದ್ಧಾಂತಗಳು ಇಂದಿನ ಸಮಾಜಕ್ಕೆ ಹೆಚ್ಚು ಪ್ರಸ್ತುತವಾಗಿವೆ. ಅವುಗಳನ್ನು ಇನ್ನಷ್ಟು ಪಸರಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ರಾಜ್ಯದ ಕಾನೂನು, ನ್ಯಾಯ ಹಾಗೂ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರೂ ಆಗಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ, ಶ್ರೀ ಮಹಾಯೋಗಿ ವೇಮನ ಮತ್ತು ಗದಗ ಜಿಲ್ಲಾ ರೆಡ್ಡಿ ಸಮಾಜ ಸಂಘ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನ್ಯಾಯದ ವಿರುದ್ಧ ಹೋರಾಡುವ ಸ್ವಭಾವದ ಸಮಾಜ ನಮ್ಮದು. ಭೂಮಿಯ ಮೇಲೆ ಅಪಾರ ಮೋಹ ಇಟ್ಟುಕೊಂಡು ಪ್ರಾಮಾಣಿಕವಾಗಿ ದುಡಿದು ಬದುಕುವವರು ನಮ್ಮವರು. ಅನೇಕ ಶ್ರೇಷ್ಠ ವ್ಯಕ್ತಿಗಳನ್ನು ಸಮಾಜಕ್ಕೆ ನೀಡಿರುವ ರೆಡ್ಡಿ ಸಮಾಜ ಶ್ರೇಷ್ಠ ಸಮಾಜವಾಗಿದೆ. ಜನರ ಪ್ರೀತಿಗೆ ಪಾತ್ರರಾದ ರೆಡ್ಡಿ ಸಮುದಾಯದವರು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರಂತಹ ಮಹಾನ್ ವ್ಯಕ್ತಿತ್ವಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಸಚಿವರು ಶ್ಲಾಘಿಸಿದರು.

ಸಾರಸ್ವತ ಲೋಕಕ್ಕೆ ವೇಮನರ ವಿಚಾರಧಾರೆಯನ್ನು ಪರಿಚಯಿಸುವ ಉದ್ದೇಶದಿಂದ ವೇಮನರ ಕುರಿತ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಮುಂದಿನ 15 ದಿನಗಳೊಳಗೆ ರೆಡ್ಡಿ ಸಮಾಜದ ಸಮುದಾಯ ಭವನಕ್ಕೆ ಜಾಗ ದೊರೆಯಲಿದೆ. ಮುಂದಿನ ವರ್ಷ ಅಲ್ಲಿಯೇ ಮಹಾಯೋಗಿ ವೇಮನ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ತಮಗಾಗಿ ಬದುಕದೇ ಸಮಾಜಕ್ಕಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ನಾವು ಆಚರಿಸುತ್ತೇವೆ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ಮಹಾಯೋಗಿ ವೇಮನರು ಒಬ್ಬರು. ವೇಮನರು ಸಾಕಷ್ಟು ಕವನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅವರ ಕವನಗಳು ಸರಿಯಾಗಿ ದಾಖಲೀಕರಣವಾಗಿರಲಿಲ್ಲ. ಅನೇಕ ಕವನಗಳು ತಾಳೆಗರಿಗಳಲ್ಲಿ ಇದ್ದು, ಅವುಗಳನ್ನು ಸಂರಕ್ಷಿಸಲು ಬ್ರಿಟಿಷ್ ಸರ್ಕಾರವೇ ಮುಂದಾಯಿತು ಎಂದರೆ ವೇಮನರ ಕವಿತೆಗಳ ಶಕ್ತಿ ಎಷ್ಟಿತ್ತು ಎಂಬುದನ್ನು ಅರಿಯಬಹುದು. ಈ ಶತಮಾನ ಜ್ಞಾನದ ಯುಗ, ಪಾಂಡಿತ್ಯದ ಯುಗ. ಸಮಾಜದ ಎಲ್ಲ ಮಕ್ಕಳಿಗೂ ಸಮರ್ಪಕ ಜ್ಞಾನ ಹಾಗೂ ಶಿಕ್ಷಣ ನೀಡಬೇಕು ಎಂದು ಹೇಳಿದರು.

ಮಾಜಿ ಸಚಿವ ಬಿ.ಆರ್. ಯಾವಗಲ್ ಮಾತನಾಡಿ, ಮಹಾಯೋಗಿ ವೇಮನ ವಿಚಾರಗಳು ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾಗಿಲ್ಲ. ಇಡೀ ಮನುಕುಲಕ್ಕೆ ಸಾರ್ವಕಾಲಿಕವಾಗಿವೆ. ವೇಮನರು ತಮ್ಮ ವಚನಗಳ ಮೂಲಕ ದೇಶಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಮಹಾಯೋಗಿ ವೇಮನರ ಜಯಂತಿ ಆಚರಣೆಯ ಮೂಲಕ ವೇಮನರ ವಿಚಾರಗಳನ್ನು ಸಮಾಜದ ಒಳಿತಿಗಾಗಿ ಪಸರಿಸಲು ಎಲ್ಲರೂ ಸಂಘಟಿತರಾಗಬೇಕು ಎಂದರು.

ಹುಲಕೋಟಿಯ ಶ್ರೀ ರಾಜರಾಜೇಶ್ವರಿ ವಿದ್ಯಾನಿಕೇತನದ ಅನಿಲ ವೈದ್ಯ ಉಪನ್ಯಾಸ ನೀಡಿ, ವೇಮನರ ವಚನಗಳ ಪೂಜೆಯಾಗಬೇಕು. ಮಾನವ ಮಹಾಮಾನವ ಆಗಬೇಕು. ಪೂಜೆಯೆನ್ನುವುದು ಸಂಸ್ಕಾರವಾಗಬೇಕು. ಸಂಸ್ಕಾರವು ಸಾಕ್ಷಾತ್ಕಾರವಾಗಬೇಕು. ವೇಮನರು ಮೋಹಕ್ಕೆ ಬಿದ್ದು ಅದರಿಂದ ಹೊರಬರುತ್ತಾರೆ. ಮಹಾಯೋಗಿ ವೇಮನರು ತಮ್ಮ ವಚನಗಳಲ್ಲಿ ನಿಜವನ್ನರಿತವನು ನೀತಿವಂತನು ಎಂದು ಹೇಳಿದ್ದಾರೆ. ಅಜ್ಞಾನದಲ್ಲಿರುವ ತನಕ ಸುಜ್ಞಾನ ಸಿಗುವುದಿಲ್ಲ. ಆಸೆಗಳನ್ನು ತ್ಯಜಿಸಿ ಸತ್ಯವನ್ನರಿತು ನಿಜಮಾನವರಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು. ವೇಮನರ ಕುರಿತು ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಮಟ್ಟದ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಕೃಷ್ಣಗೌಡ ಪಾಟೀಲ, ಎಚ್.ಎಸ್. ಶಿವನಗೌಡ್ರ, ವಾಸಣ್ಣ ಕುರಡಗಿ, ಶ್ರೀನಿವಾಸ ದ್ಯಾವನಗೌಡ್ರ, ಮುಚ್ಚಂಡಿ, ಆರ್.ಎಸ್. ಪಾಟೀಲ, ಕರಬಸಪ್ಪ ಹಂಚಿನಾಳ, ಲಕ್ಷಣಗೌಡ ಪಾಟೀಲ, ತಮ್ಮನಗೌಡ ಶಿರಿಯಪ್ಪಗೌಡ್ರ, ಶೇಖರಡ್ಡಿ ಗದ್ದಿಕೇರಿ, ಶಿವನಗೌಡ ಹಳ್ಳೂರ, ಜಯಶ್ರೀ ಕೋಲಕಾರ, ರವಿಂದ್ರನಾಥ ಕುಲಕರ್ಣಿ, ಜೆ.ಕೆ. ಜಮಾದಾರ, ಜಿ.ಬಿ. ಆದಾಪೂರ, ಪ್ರೊ. ಕೆ.ಎಚ್. ಬೇಲೂರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಮಲ್ಲಣ್ಣ ಪರಡ್ಡಿ, ಹೇಮರೆಡ್ಡಿ ನೀಲಗುಂದ, ಪ್ರೇಮಕ್ಕ ಮೇಟಿ, ವಿ.ಆರ್. ದೇವರಡ್ಡಿ ಸೇರಿದಂತೆ ಗದಗ ಜಿಲ್ಲಾ ರೆಡ್ಡಿ ಸಮಾಜದ ಪದಾಧಿಕಾರಿಗಳು, ಗಣ್ಯರು, ಹಿರಿಯರು ಹಾಜರಿದ್ದರು.

ರವಿ ಮೂಲಿಮನಿ ಸ್ವಾಗತಿಸಿದರು. ಸುಧಾ ಹುಚ್ಚಣ್ಣವರ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ವಂದಿಸಿದರು.

ಎಲ್ಲ ಜಯಂತಿಗಳು ದೊಡ್ಡ ಪ್ರಮಾಣದಲ್ಲಿ ಹಾಗೂ ಅರ್ಥಪೂರ್ಣವಾಗಿ ಜರುಗಬೇಕು. ಕನ್ನಡ ನಾಡಿಗೆ ಮಹಾಯೋಗಿ ವೇಮನರನ್ನು ಪರಿಚಯಿಸಿದವರು ಎಸ್.ಆರ್. ಪಾಟೀಲರು ಎಂಬುದನ್ನು ನಾವೆಲ್ಲರೂ ಅರಿಯಬೇಕು. ಬಾಯಿಂದ ಬಾಯಿಗೆ ಹರಿದಾಡುತ್ತಿದ್ದ ವೇಮನರ ಸಾಹಿತ್ಯವನ್ನು ಸಿ.ಪಿ. ಬ್ರೌನ್ ಅವರು ಆಂಗ್ಲ ಭಾಷೆಗೆ ಅನುವಾದಿಸಿ ವಿಶ್ವಕ್ಕೆ ಪರಿಚಯಿಸಿದ್ದಾರೆ. ವೇಮನರ 20 ಸಾವಿರಕ್ಕೂ ಅಧಿಕ ಪ್ರತಿಗಳನ್ನು ಮುದ್ರಿಸಿ ಹಂಚಿಕೆ ಮಾಡಲಾಗಿದೆ ಎಂಬುದು ಸಂತಸದ ಸಂಗತಿ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವೇಮನ ಪೀಠ ಸ್ಥಾಪನೆಯಾಗಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ.

ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.

 

ಹಿಂದೂ ಸಂಘಟನೆಗಳಿಂದ ಬೈಕ್ ರ‍್ಯಾಲಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಹಿಂದೂ ಸಮ್ಮೇಳನ ಸಮಿತಿಯಿಂದ ಹಿಂದೂ ಸಮ್ಮೇಳನ ಮತ್ತು ಬೃಹತ್ ಶೋಭಾ ಯಾತ್ರೆಯ ಹಿನ್ನೆಲೆಯಲ್ಲಿ ರವಿವಾರ ಮುಂಜಾನೆ ಹಿಂದೂ ಸಂಘಟನೆಗಳ ನೂರಾರು ಯುವಕರು ಬೈಕ್‌ಗಳ ಮೂಲಕ ರ‍್ಯಾಲಿ ನಡೆಸಿ, ಸಮ್ಮೇಳನ ಯಶಸ್ವಿಗೆ ಎಲ್ಲರೂ ಭಾಗವಹಿಸುವಂತೆ ಸಂದೇಶ ನೀಡಿದರು.

ನೂರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಬೈಕ್‌ಗಳಿಗೆ ಕೇಸರಿ ಧ್ವಜ ಕಟ್ಟಿಕೊಂಡು ಶ್ರೀ ರಾಮ, ಹನುಮಾನ್, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಭಗತಸಿಂಗ್, ಇಮ್ಮಡಿ ಪುಲಿಕೇಶಿ, ಸಿಂಧೂರ ಲಕ್ಷ್ಮಣ, ಮಾದವ ಗೋಲ್ವಾಲ್ಕರ, ಕೇಶವ ಬಲಿರಾಂ ಹೆಡ್ಗೆವಾರ, ಅವರ ಭಾವಚಿತ್ರಗಳನ್ನು ಬೈಕ್ ಮೇಲೆ ಹಿಡಿದು ಘೋಷಣೆ ಮೊಳಗಿಸುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಸೋಮೇಶ್ವರ ತೇರಿನ ಮನೆ ಹತ್ತಿರ ಹಿಂದೂ ಸಮ್ಮೇಳನ ನಡೆಯುವ ವೇದಿಕೆ ಬಳಿ ಮುಕ್ತಾಯಗೊಳಿಸಿದರು.

ಬೈಕ್ ರ‍್ಯಾಲಿಗೆ ಯುವ ಮುಖಂಡರು, ಸಮ್ಮೇಳನದ ಪದಾಧಿಕಾರಿಗಳು ಚಾಲನೆ ನೀಡಿದರು. ಬೈಕ್ ರ‍್ಯಾಲಿ ಪಂಪ ವೃತ್ತದಿಂದ ಬಸ್ತಿಕೇರಿ, ವಿದ್ಯಾರಣ್ಯ ವೃತ್ತ, ಹಾವಳಿ ಆಂಜನೇಯ ದೇವಸ್ಥಾನ, ಮ್ಯಾಗೇರಿ ಓಣಿ, ಕೋರ್ಟ್ ಸರ್ಕಲ್, ತಹಸೀಲ್ದಾರ ಆಫೀಸ್, ದೂದ ನಾನಾ ದರ್ಗಾ, ಭರಮದೇವರ ಸರ್ಕಲ್, ಬಜಾರ ರಸ್ತೆ, ಪುರಸಭೆ, ಶಿಗ್ಲಿ ಕ್ರಾಸ್, ಹೊಸ ಬಸ್ ಸ್ಟಾಂಡ್, ಗದಗ ನಾಕಾ ಮುಖಾಂತರ ಸೋಮೇಶ್ವರ ತೇರಿನ ಮನೆಗೆ ಮುಕ್ತಾಯಗೊಂಡಿತು.

ಶ್ರೀಮಠ ಶ್ರೇಷ್ಠ ಪರಂಪರೆಯನ್ನು ಹೊಂದಿದೆ: ಸಚಿವ ಡಾ. ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ನಾಡಿನಲ್ಲಿ ಶ್ರೇಷ್ಠ, ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿರುವ ಪರಮಪೂಜ್ಯ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಇಳಿವಯಸ್ಸಿನಲ್ಲೂ ಶ್ರೀಮಠ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಜ.ಅ. ವಿದ್ಯಾ ಸಂಸ್ಥೆಯ ಮೂಲಕ 30ಕ್ಕೂ ಹೆಚ್ಚು ಅಂಗ ಸಂಸ್ಥೆಗಳನ್ನು ಹೊಂದಿ ಲಕ್ಷಾಂತರ ಮಕ್ಕಳಿಗೆ ಅಕ್ಷರ, ಅರಿವು, ಸಂಸ್ಕಾರ ನೀಡಿದ್ದಾರೆ. ಶ್ರೀಮಠ ಶ್ರೇಷ್ಠ ಪರಂಪರೆಯನ್ನು ಹೊಂದಿದೆ. ಶ್ರೀಗಳು ಮಾನವೀಯ ಮೌಲ್ಯಗಳು, ಸ್ಪಂದನೆಯ ಭಾವನೆಯನ್ನು ಹೊಂದಿದ್ದಾರೆ. ಅವರಿಂದ ಸಮಾಜಕ್ಕೆ ಪಾರ ಅನುಕೂಲವಾಗಿದೆ. ಇಡೀ ಸಮಾಜಕ್ಕೆ ಜ.ಅ. ವಿದ್ಯಾ ಸಂಸ್ಥೆಯ ಕೊಡುಗೆ ಅಪಾರವಿದೆ ಎಂದು ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಶತಮಾನೋತ್ಸವದ ಪ್ರಯುಕ್ತ ಭಾನುವಾರ ಸಂಜೆ ಜರುಗಿದ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಶ್ರೀಗಳು ಶಾಲೆ ಪ್ರಾರಂಭಿಸಿದಾಗ ಮಕ್ಕಳನ್ನು ಶಾಲೆಗೆ ಕಳಿಸಲೂ ಹಿಂದೆ ಮುಂದೆ ನೋಡುವ ಕಾಲವಿತ್ತು. ಆಗಲೂ ಶ್ರೀಗಳು ಜನತೆಗೆ ಅಕ್ಷರದ ಮಹತ್ವವನ್ನು ತಿಳಿಸಿ ಶಾಲೆಗೆ ಕರೆತರುವ ಮೂಲಕ ಯಶಸ್ವಿಯಾಗಿದ್ದಾರೆ. ಶ್ರೀಗಳು ಊರಿಂದೂರಿಗೆ ಜೋಳಿಗೆ ಹಾಕಿಕೊಂಡು ಹೋಗಿ ಭಕ್ತರಿಂದ ಸಂಗ್ರಹಿಸಿದ ಕಾಣಿಕೆಯಲ್ಲಿ ಶಾಲೆ ನಡೆಸಬೇಕಿತ್ತು. ಇಂದಿಗೂ ಊರೂರಿಗೆ ತೆರಳಿ, ಬರುವ ಹಣದಲ್ಲಿ ವಿದ್ಯಾ ಸಂಸ್ಥೆ, ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ. ಅನ್ನದಾನೀಶ್ವರ ಶಿವಯೋಗಿಗಳವರು, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿದರು. ಶ್ರೀಮಠದ ಉತ್ತರಾಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ರಾಮಣ್ಣ ಲಮಾಣಿ, ಕರಬಸಪ್ಪ ಹಂಚಿನಾಳ, ಸುಜಾತಾ ದೊಡ್ಡಮನಿ, ಡಿ.ಡಿ. ಮೋರನಾಳ, ಡಾ. ಬಿ.ಜಿ. ಜವಳಿ, ಆನಂದಗೌಡ ಪಾಟೀಲ, ಡಾ. ಪ್ರಕಾಶ ಹೊಸಮನಿ, ವೆಂಕಟಪ್ಪ ನಾಯಕ, ಮಹೇಶಗೌಡ ಪಾಟೀಲ, ಹಿರಿಯ ವಿದ್ಯಾರ್ಥಿಗಳು ಇದ್ದರು.

ಕಾರ್ಯಕ್ರಮ ಉದ್ಘಾಟಿಸಿದ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ಅಜಿತ್ ಹನುಮಕ್ಕನವರ ಮಾತನಾಡಿ, ದೇಶದ ಶಕ್ತಿ ಉಳಿದಿದ್ದು ಗ್ರಾಮೀಣ ಭಾಗದಲ್ಲಿ ಮಾತ್ರ. ಮಠ-ಮಾನ್ಯಗಳು ಚಾರಿತ್ರ‍್ಯ ಕಲಿಸುತ್ತವೆ. ಪತ್ರಿಕೋದ್ಯಮ ಎಂದರೆ ತಪಸ್ಸು ಇದ್ದಂತೆ. ಚಾರಿತ್ರ‍್ಯಿಕ ನಿರ್ಮಾಣ ಮಾಡುವ ಕೆಲಸ ಮಾಡಬೇಕು. ಮಠಕ್ಕೆ ಋಣಿಯಾಗಬೇಕು. ಈ ದೇಶಕ್ಕೆ ಮಠಮಾನ್ಯಗಳು ಏನು ಕೊಡುಗೆ ನೀಡಿವೆ ಎಂದು ಪ್ರಶ್ನಿಸುವವರನ್ನು ಇಂತಹ ಮಠಗಳಿಗೆ ಕರೆತಂದು ತೋರಿಸಬೇಕು. 1924ರಲ್ಲಿ ಒಂದೇ ಇದ್ದ ಶಾಲೆಯು ಇದೀಗ 33 ಅಂಗ ಸಂಸ್ಥೆಗಳನ್ನು ಹೊಂದುವಂತೆ ಶ್ರೀಗಳು ಮಾಡಿದ್ದು ದೊಡ್ಡ ಸಾಧನೆ ಎಂದರು.

ಕರೋನಾ ರೀತಿಯ ಮಾರಕ ರೋಗ ಶಂಕೆ; ಇಂದಿರಾ ಪ್ರಿಯದರ್ಶಿನಿ ಮೃಗಾಲಯ ಬಂದ್!

0

ದಾವಣಗೆರೆ: ದಾವಣಗೆರೆ ತಾಲೂಕಿನ ಆನಗೋಡು ಸಮೀಪದ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಕಳೆದ ಮೂರು ದಿನಗಳಲ್ಲಿ ನಾಲ್ಕು ಚುಕ್ಕೆ ಜಿಂಕೆಗಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.

ಸಾಂಕ್ರಾಮಿಕ ರೋಗ ಹರಡುವ ಶಂಕೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೃಗಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ಸಂಪೂರ್ಣ ಪಾರ್ಕ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಉಳಿದ ಜಿಂಕೆಗಳಿಗೆ ಸೋಂಕು ಹರಡದಂತೆ ತಡೆಯಲು ಪಶುವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ಅಧಿಕಾರಿಗಳು ನಿರಂತರ ನಿಗಾವಹಿಸಿದ್ದಾರೆ. ಪ್ರಾಥಮಿಕವಾಗಿ ಹೆಮರಾಜಿಕ್ ಸೆಪ್ಟಿಸೆಮಿಯಾ ಎಂಬ ಮಾರಣಾಂತಿಕ ರೋಗದ ಶಂಕೆ ವ್ಯಕ್ತವಾಗಿದ್ದು, ನಿಖರ ಕಾರಣ ತಿಳಿಯಲು ರಕ್ತದ ಮಾದರಿ ಹಾಗೂ ಅಂಗಾಂಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆಎಸ್ ಬಸವಂತಪ್ಪ ಅವರು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ತಜ್ಞರನ್ನು ತಕ್ಷಣ ಕರೆಸಿ ಉಳಿದ ಪ್ರಾಣಿಗಳ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಬಳ್ಳಾರಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲು ಹಿಂದೇಟು ಯಾಕೆ? ಸಿದ್ದರಾಮಯ್ಯಗೆ ರೆಡ್ಡಿ ಪ್ರಶ್ನೆ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪ್ರಾಮಾಣಿಕತೆ ತೋರಿಸಲು ಈ ಹಿಂದೆ 7 ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಹಾಗಿದ್ದರೆ ಬಳ್ಳಾರಿ ಪ್ರಕರಣವನ್ನು ಸಿಬಿಐಗೆ ನೀಡಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಪ್ರಶ್ನಿಸಿದ್ದಾರೆ.

ಬಳ್ಳಾರಿಯಲ್ಲಿ ನಡೆದ ಘಟನೆಯಲ್ಲಿ ಕಾಂಗ್ರೆಸ್ ಶಾಸಕ ನಾ.ರಾ. ಭರತ್ ರೆಡ್ಡಿ ಸೇರಿದಂತೆ ಸಾವಿರಾರು ಜನರು ತಮ್ಮ ಮನೆ ಮೇಲೆ ದಾಳಿ ನಡೆಸಿ ಪೆಟ್ರೋಲ್ ಬಾಂಬ್ ಎಸೆದು ಗುಂಡಿನ ದಾಳಿ ನಡೆಸಿದ್ದು, ಇದರಲ್ಲಿ ಒಬ್ಬ ಅಮಾಯಕ ಮೃತಪಟ್ಟಿದ್ದಾನೆ. ಇದು ತನ್ನ ಮೇಲೆ ನಡೆದ ಕೊಲೆ ಯತ್ನವಾಗಿದ್ದು, ಕಾಂಗ್ರೆಸ್ ಶಾಸಕರ ಬಂಧನ ತಪ್ಪಿಸಲು ಸಿಐಡಿಗೆ ವಹಿಸುವ ಮೂಲಕ ಪ್ರಕರಣವನ್ನು ಮುಚ್ಚುವ ಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಬಳ್ಳಾರಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಬಿಜೆಪಿ ರಾಜ್ಯ ಕೋರ್ ಕಮಿಟಿ ನಿರ್ಣಯದ ಮೂಲಕ ಒತ್ತಾಯಿಸಿದೆ ಎಂದು ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

error: Content is protected !!