Home Blog Page 16

ಗಣೇಶೋತ್ಸವ ಶಾಂತಿಯುತ ಆಚರಣೆಗೆ ಪೊಲೀಸರ ಕಟ್ಟುನಿಟ್ಟಿನ ಸೂಚನೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗಣೇಶೋತ್ಸವವನ್ನು ಶಾಂತಿ, ಸೌಹಾರ್ದತೆ ಹಾಗೂ ಸಂಭ್ರಮದಿಂದ ಆಚರಿಸುವ ಜತೆಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲ ಗಣೇಶೋತ್ಸವ ಮಂಡಳಿಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನರೇಗಲ್ಲ ಪೊಲೀಸ್ ಠಾಣೆಯ ಪಿಎಸ್‌ಐ ಐಶ್ವರ್ಯ ನಾಗರಾಳ ಸೂಚಿಸಿದರು.

ಸಮೀಪದ ಜಕ್ಕಲಿ ಗ್ರಾಮದ ಗ್ರಾಮ ಚಾವಡಿಯಲ್ಲಿ ರವಿವಾರ ಸಂಜೆ ನರೇಗಲ್ಲ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಗಣೇಶೋತ್ಸವದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗಣೇಶೋತ್ಸವ ಎಲ್ಲರ ಹಬ್ಬ. ಹಬ್ಬಕ್ಕೆ ಅಡ್ಡಿಪಡಿಸುವುದು ಪೊಲೀಸರ ಉದ್ದೇಶವಲ್ಲ. ಎಲ್ಲರೂ ಸುರಕ್ಷಿತವಾಗಿ ಹಾಗೂ ನೆಮ್ಮದಿಯಿಂದ ಹಬ್ಬ ಆಚರಿಸುವಂತಾಗಬೇಕು. ಆದ್ದರಿಂದ ಗಣೇಶೋತ್ಸವ ಮಂಡಳಿಗಳು ಹೆಚ್ಚಿನ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.

ಡಿಜೆ ಬಳಕೆಗೆ ಸಂಪೂರ್ಣ ನಿಷೇಧವಿದ್ದು, ಈಗಾಗಲೇ ಡಿಜೆ ಕಾಯ್ದಿರಿಸಿದ್ದರೆ ಅದನ್ನು ರದ್ದುಪಡಿಸಿ ಹಣವನ್ನು ವಾಪಸ್ ಪಡೆಯುವಂತೆ ಸಲಹೆ ನೀಡಿದರು. ಡಿಜೆಗಾಗಿ ಖರ್ಚು ಮಾಡುವ ಹಣವನ್ನು ಭಜನಾ ತಂಡಗಳು, ಕಲಾವಿದರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸಿದರೆ ಸ್ಥಳೀಯ ಕಲಾವಿದರ ಕುಟುಂಬಗಳಿಗೆ ನೆರವಾಗಲಿದೆ ಎಂದು ಹೇಳಿದರು.

ಗಣಪತಿ ಪ್ರತಿಷ್ಠಾಪನೆಗೂ ಮುನ್ನ ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ವಿದ್ಯುತ್ ವ್ಯವಸ್ಥೆಗೆ ಹೆಸ್ಕಾಂನಿಂದ ಅಗತ್ಯ ಅನುಮತಿ ಪಡೆಯುವುದು ಕಡ್ಡಾಯ. ಅನುಮತಿ ಇಲ್ಲದೆ ಗಣಪತಿ ಪ್ರತಿಷ್ಠಾಪಿಸಿದರೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.

ಗಣಪತಿ ಮೂರ್ತಿಯನ್ನು ರಸ್ತೆ ಅಥವಾ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುವಂತೆ ಪ್ರತಿಷ್ಠಾಪಿಸಬಾರದು. ಮಂಟಪಗಳಲ್ಲಿ ರಾತ್ರಿ ವೇಳೆ ಸಮರ್ಪಕ ಬೆಳಕಿನ ವ್ಯವಸ್ಥೆ ಮಾಡಬೇಕು ಹಾಗೂ ಸಮಿತಿಯ ಸದಸ್ಯರು ಸ್ಥಳದಲ್ಲಿರುವಂತೆ ಸೂಚಿಸಿದರು.

ಮಂಟಪಗಳಲ್ಲಿ ಇಸ್ಪೀಟ್ ಸೇರಿದಂತೆ ಯಾವುದೇ ರೀತಿಯ ಜೂಜಾಟ, ಅಕ್ರಮ ಚಟುವಟಿಕೆ, ಮದ್ಯಪಾನ ಮಾಡಿ ಗಲಾಟೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಕೃತ್ಯಗಳಿಗೆ ಅವಕಾಶವಿಲ್ಲ. ಇಂತಹ ಘಟನೆಗಳು ನಡೆದರೆ ಮೊದಲು ಗಣೇಶೋತ್ಸವ ಸಮಿತಿಯ ಸದಸ್ಯರನ್ನೇ ಹೊಣೆಗಾರರನ್ನಾಗಿ ಮಾಡಿ, ನಂತರ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯೊಂದಿಗೆ ಯಾರೂ ಅಸಭ್ಯವಾಗಿ ಅಥವಾ ಅನುಚಿತವಾಗಿ ವರ್ತಿಸಬಾರದು. ಅಂತಹ ಪ್ರಕರಣಗಳಲ್ಲಿ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಧ್ವನಿವರ್ಧಕ ಬಳಕೆಯಲ್ಲಿಯೂ ನಿಗದಿತ ನಿಯಮಗಳನ್ನು ಪಾಲಿಸಬೇಕು. ರಾತ್ರಿ 10 ಗಂಟೆಯೊಳಗೆ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಬೇಕು. ನಿಯಮ ಉಲ್ಲಂಘಿಸಿ ಡಿಜೆ ಅಥವಾ ಧ್ವನಿವರ್ಧಕ ಬಳಸಿದರೆ ಉಪಕರಣಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಎಚ್ಚರಿಸಿದರು.

ಹಬ್ಬ ಎಂದರೆ ಪೂಜೆ, ಭಕ್ತಿ, ಸಂಸ್ಕೃತಿ ಮತ್ತು ಸೌಹಾರ್ದತೆ. ಕುಡಿದು ಬಂದು ಗಲಾಟೆ ಮಾಡುವುದು ಅಥವಾ ರಾತ್ರಿ ತಡವರೆಗೆ ಅಶಿಸ್ತಿನಿಂದ ವರ್ತಿಸುವುದು ನಮ್ಮ ಸಂಸ್ಕೃತಿಯಲ್ಲ. ಎಲ್ಲರೂ ಪರಂಪರೆಯನ್ನು ಗೌರವಿಸಿ ಶಾಂತಿಯುತವಾಗಿ ಹಬ್ಬ ಆಚರಿಸೋಣ ಎಂದು ಕರೆ ನೀಡಿದರು.

ಸಭೆಯಲ್ಲಿ ಅಶೋಕಪ್ಪ ಯಾವಗಲ್ಲ, ವೀರಯ್ಯ ಹಿರೇಮಠ, ಶರಣಪ್ಪ ಕುರಡಗಿ, ಚನ್ನಬಸವ ಅರಹುಣಸಿ, ಸಂಗಮೇಶ ಮೆಣಸಗಿ, ಮುತ್ತು ಮೇಟಿ ಸೇರಿದಂತೆ ವಿವಿಧ ಗಣೇಶೋತ್ಸವ ಮಂಡಳಿಗಳ ಮುಖಂಡರು, ಯುವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ನರೇಗಲ್ಲ ಠಾಣೆಯ ಹವಾಲ್ದಾರ ಪುಂಡಲೀಕಪ್ಪ ದಾಸರ, ಪೊಲೀಸ್ ಪೇದೆಗಳಾದ ಕಿರಣಕುಮಾರ ವಿ. ಹಿರೇಮಠ, ಸಂತೋಷ ಘಾಟಿಗೆ ಭಾಗವಹಿಸಿದ್ದರು. ಪೇದೆ ಚಂದ್ರು ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ಶಿವರಾಜ ಮುಗಳಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.

ಪೊಲೀಸ್ ಇಲಾಖೆ ಜನರ ರಕ್ಷಣೆಗೆ ಸದಾ ಸಿದ್ಧವಿದೆ. ಯಾವುದೇ ಸಮಸ್ಯೆ ಎದುರಾದರೆ ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನು ಸಂಪರ್ಕಿಸಿ. ನಾವು ನಿಮ್ಮ ವಿರುದ್ಧ ಇರುವವರಲ್ಲ; ನಿಮ್ಮ ಸಹಕಾರದಿಂದ ಹಬ್ಬ ಉತ್ತಮವಾಗಿ ನಡೆದರೆ ನಮಗೂ ಸಂತೋಷ.

— ಐಶ್ವರ್ಯ ನಾಗರಾಳ, ಪಿಎಸ್‌ಐ, ನರೇಗಲ್ಲ ಠಾಣೆ

ರೈತ, ದಲಿತ ವಿರೋಧಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು: ಐ.ಎಸ್. ಪೂಜಾರ

0

ವಿಜಯಸಾಕ್ಷಿ ಸುದ್ದಿ, ಗದಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಹಾಗೂ ರೈತ ಮತ್ತು ದಲಿತ ವಿರೋಧಿ ನೀತಿಗಳನ್ನು ಖಂಡಿಸಿ ಹಮ್ಮಿಕೊಂಡಿರುವ 170 ಕಿ.ಮೀ. ಬಳ್ಳಾರಿ ಚಲೋ ಎರಡನೇ ಹಂತದ ಪಾದಯಾತ್ರೆಯಲ್ಲಿ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ ಹಿರಿಯ ಮುಖಂಡ ಐ.ಎಸ್. ಪೂಜಾರ ತಮ್ಮ ಬೆಂಬಲಿಗರೊಂದಿಗೆ ಭಾಗವಹಿಸಿದ್ದರು.

ಮಸ್ಕಿ ತಾಲೂಕಿನ ಸಂತೇಕೇಲೂರಿನಲ್ಲಿ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಅವರು, ರಾಜ್ಯ ಸರ್ಕಾರದ ವಿವಿಧ ವೈಫಲ್ಯಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಶೇಷವಾಗಿ ರೈತರು ಹಾಗೂ ದಲಿತರ ಹಿತಾಸಕ್ತಿಗೆ ವಿರುದ್ಧವಾದ ನೀತಿಗಳನ್ನು ಸರ್ಕಾರ ಅನುಸರಿಸುತ್ತಿದೆ ಎಂದು ಆರೋಪಿಸಿ, ಮುಂಬರುವ ಚುನಾವಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಬರಗಾಲ ಘೋಷಣೆಯಲ್ಲಿಯೂ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದ ಪೂಜಾರ, ಪಾದಯಾತ್ರೆ ಘೋಷಣೆಯಾದ ದಿನವೇ ಮುಖ್ಯಮಂತ್ರಿ ಗದಗ ಜಿಲ್ಲೆಗೆ ಬರಗಾಲ ಪೀಡಿತ ಪ್ರದೇಶಗಳ ವೀಕ್ಷಣೆಗೆ ಆಗಮಿಸಿರುವುದು ರೈತರು ಹಾಗೂ ಜನರಿಗೆ ಕೇವಲ ಆಶ್ವಾಸನೆ ನೀಡುವ ಕ್ರಮವಾಗಿದೆ. ಇದು ಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲವು ಜಿಲ್ಲೆಗಳಲ್ಲಿ ಕೆಲವು ತಾಲೂಕುಗಳನ್ನು ಹೊರತುಪಡಿಸಿ ಬರಗಾಲ ಘೋಷಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ರೈತರ ಸಂಕಷ್ಟಕ್ಕೆ ಸೂಕ್ತವಾಗಿ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಬಿ. ಶ್ರೀರಾಮುಲು, ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಪದಾಧಿಕಾರಿಗಳು, ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಅಕ್ಷರ ಜ್ಞಾನದಿಂದ ಬದುಕಿನ ಪರಿವರ್ತನೆ: ಮುಕುಲ್ ಜೈನ್

0

ವಿಜಯಸಾಕ್ಷಿ ಸುದ್ದಿ, ಗದಗ: ಅಕ್ಷರವೆಂಬುದು ಕೇವಲ ಜ್ಞಾನವಲ್ಲ, ಅದು ಬದುಕನ್ನು ಬದಲಿಸುವ ಶಕ್ತಿ. ಒಬ್ಬ ವ್ಯಕ್ತಿಗೆ ಅಕ್ಷರ ಕಲಿಸಿದರೆ ಒಂದು ಕುಟುಂಬಕ್ಕೆ ಬೆಳಕು ನೀಡಿದಂತೆ, ಒಂದು ಸಮಾಜವನ್ನು ಸಾಕ್ಷರಗೊಳಿಸಿದರೆ ಇಡೀ ರಾಷ್ಟ್ರಕ್ಕೆ ಬೆಳಕು ನೀಡಿದಂತೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್ ಹೇಳಿದರು.

ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ 60ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಸಾಕ್ಷರತಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸಾಕ್ಷರತೆಯು ವ್ಯಕ್ತಿಯ ವೈಯಕ್ತಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಜತೆಗೆ ಸಾಮಾಜಿಕ ಜಾಗೃತಿ, ಪ್ರಜಾಪ್ರಭುತ್ವದ ಬಲವರ್ಧನೆ ಮತ್ತು ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗುತ್ತದೆ. ಜಿಲ್ಲೆಯನ್ನು ಸಂಪೂರ್ಣ ಸಾಕ್ಷರಗೊಳಿಸಲು ಸಾಕ್ಷರತಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಸ್.ಎಸ್. ಕುರಿಯವರ ಅವರು ಗಣ್ಯರನ್ನು ಸ್ವಾಗತಿಸಿ, ದೇಶ, ರಾಜ್ಯ ಹಾಗೂ ಜಿಲ್ಲೆಯ ಸಾಕ್ಷರತೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ದೇಶದ ನಿಜವಾದ ಅಭಿವೃದ್ಧಿಯನ್ನು ಅಳೆಯಲು ಆರ್ಥಿಕ ಪ್ರಗತಿಯ ಜತೆಗೆ ಜನರ ಶಿಕ್ಷಣ ಮತ್ತು ಸಾಕ್ಷರತೆಯ ಮಟ್ಟವೂ ಪ್ರಮುಖ ಮಾನದಂಡವಾಗಿದೆ. ಸಾಕ್ಷರತೆ ಹೆಚ್ಚಾದಂತೆ ದೇಶದ ಅಭಿವೃದ್ಧಿಯೂ ವೇಗ ಪಡೆಯುತ್ತದೆ ಎಂದರು.

ಸಾಕ್ಷರ ವ್ಯಕ್ತಿ ಉತ್ತಮ ಉದ್ಯೋಗ ಪಡೆಯಲು ಪ್ರಯತ್ನಿಸುವುದರ ಜತೆಗೆ ಆರೋಗ್ಯದ ಬಗ್ಗೆ ಜಾಗೃತನಾಗುತ್ತಾನೆ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಾನೆ ಹಾಗೂ ಸಮಾಜದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಾನೆ. ಹೀಗಾಗಿ ಸಾಕ್ಷರತೆ ದೇಶದ ಮಾನವ ಸಂಪನ್ಮೂಲವನ್ನು ಬಲಪಡಿಸುತ್ತದೆ. ಜ್ಞಾನ ಹೊಂದಿರುವ ನಾಗರಿಕರೇ ದೇಶದ ದೊಡ್ಡ ಸಂಪತ್ತು. ಸಾಕ್ಷರತೆ ಕೇವಲ ಸರ್ಕಾರಿ ಯೋಜನೆಯಲ್ಲ, ಸಾಮಾಜಿಕ ಚಳವಳಿಯಾಗಿದೆ ಎಂದು ಹೇಳಿದರು.

ಕನಿಷ್ಠ ಒಬ್ಬ ಅನಕ್ಷರಸ್ಥ ವ್ಯಕ್ತಿಗೆ ಓದಲು ಮತ್ತು ಬರೆಯಲು ಕಲಿಸುವ ಸಂಕಲ್ಪ ಮಾಡಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ತಮ್ಮ ಸಹಯೋಗದೊಂದಿಗೆ ಸಾಕ್ಷರತಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.

ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಸಾಕ್ಷರತಾ ಪ್ರಮಾಣ ವಚನ ಬೋಧಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೆ.ಡಿ. ಬಡಿಗೇರ, ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಕ್ಷೇತ್ರ ಸಮನ್ವಯಾಧಿಕಾರಿ ಜೆ.ಎ. ಬಾವಿಕಟ್ಟಿ, ಎಸ್.ಆರ್. ನದಾಫ್, ಎಸ್.ಬಿ. ಬನ್ನಿಕಲ್, ಕೆ.ಎ. ಹುಲಗೇರಿ, ಜಿ.ಡಿ. ದಾಸರ, ಎಸ್.ವೈ. ವಿಬೂತಿ ಸೇರಿದಂತೆ ಗದಗ ಗ್ರಾಮೀಣ ವಿಭಾಗದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.

ಶಾಸ್ತ್ರಿಜಿ ಬಿ.ಎಡ್. ಕಾಲೇಜಿನ ಉಪನ್ಯಾಸಕ ರಾಜು ಕೇರೂರ ಹಾಗೂ ಪ್ರಶಿಕ್ಷಣಾರ್ಥಿಗಳು, ಯುವ ಸಬಲೀಕರಣ ಇಲಾಖೆಯ ವಿದ್ಯಾರ್ಥಿಗಳು ಮತ್ತು ಸಾಕ್ಷರತಾ ಕಾರ್ಯಕ್ರಮಗಳ ಬೋಧಕರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆರಗು ತಂದರು.

ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯಿಂದ ಸಾಕ್ಷರತಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ಬಿತ್ತಿಪತ್ರಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಹಾಗೂ ಇತರರು ಅನಾವರಣಗೊಳಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಸಹಾಯಕ ಅಶೋಕ ಹಾದಿ ಮಾಡಿದರು. ದೈಹಿಕ ಶಿಕ್ಷಕ ಎಸ್. ಮುಳಗುಂದ ಅವರು ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೆ.ವೈ. ವಿಬೂತಿ ವಂದನಾರ್ಪಣೆ ಮಾಡಿದರು.

ಸಾಕ್ಷರತೆ ಕೇವಲ ಸರ್ಕಾರಿ ಯೋಜನೆಯಲ್ಲ; ಅದು ಸಾಮಾಜಿಕ ಚಳವಳಿಯಾಗಿದೆ. ಕನಿಷ್ಠ ಒಬ್ಬ ಅನಕ್ಷರಸ್ಥ ವ್ಯಕ್ತಿಗೆ ಓದಲು ಮತ್ತು ಬರೆಯಲು ಕಲಿಸುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕು.

— ಎಸ್.ಎಸ್. ಕುರಿಯವರ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ, ಗದಗ

ಹುದ್ದೆ ಅಧಿಕಾರವಲ್ಲ, ಸಮಾಜ ಸೇವೆಗೆ ಅವಕಾಶ: ಕೆ.ಎ. ಬಳಿಗೇರ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮಾಜದ ಸಂಘಟನೆ ಬಲಗೊಳ್ಳಬೇಕಾದರೆ ಪರಸ್ಪರ ಸಹಕಾರ, ಒಗ್ಗಟ್ಟು ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಸಂಘದ ಹುದ್ದೆಗಳನ್ನು ಅಧಿಕಾರವೆಂದು ಭಾವಿಸದೆ, ಸಮಾಜ ಸೇವೆಗೆ ದೊರೆತ ಅವಕಾಶವೆಂದು ಪರಿಗಣಿಸಿ ನೂತನ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.

ಸಮೀಪದ ಜಕ್ಕಲಿ ಗ್ರಾಮದಲ್ಲಿ ರವಿವಾರ ನಡೆದ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಬಣಜಿಗ ಸಮಾಜದ ಇತಿಹಾಸ, ಪರಂಪರೆ ಹಾಗೂ ಹಿರಿಯರು ನೀಡಿರುವ ಕೊಡುಗೆಗಳನ್ನು ಅರಿತು, ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಇಂದಿನ ಸಮಾಜದ ಮೇಲಿದೆ. ಕನ್ನಡ ನಾಡಿನ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಬಣಜಿಗ ಸಮಾಜದ ಅನೇಕ ಮಹನೀಯರು ಅಮೂಲ್ಯ ಕೊಡುಗೆ ನೀಡಿದ್ದಾರೆ. 12ನೇ ಶತಮಾನದ ಶರಣ ಚಳವಳಿಯಿಂದ ಇಂದಿನವರೆಗೂ ಸಮಾಜದ ಹಲವು ಸಾಧಕರು ತಮ್ಮ ಸೇವೆ ಮತ್ತು ಸಾಧನೆಯ ಮೂಲಕ ದಾರಿದೀಪವಾಗಿದ್ದಾರೆ ಎಂದರು.

ಅಕ್ಕಮಹಾದೇವಿಯವರ ವಚನಗಳು ಹಾಗೂ ಜೀವನಾದರ್ಶಗಳು ಇಡೀ ಮನುಕುಲಕ್ಕೆ ಸ್ಫೂರ್ತಿಯಾಗಿವೆ. ಮಕ್ಕಳಿಗೆ ಕೇವಲ ಅಕ್ಷರ ಜ್ಞಾನ ನೀಡಿದರೆ ಸಾಲದು, ಸಂಸ್ಕಾರ, ವ್ಯಕ್ತಿತ್ವ ವಿಕಸನ ಹಾಗೂ ಜೀವನ ಮೌಲ್ಯಗಳನ್ನು ಕಲಿಸುವುದು ಅಗತ್ಯ. ಮೊಬೈಲ್ ಹಾಗೂ ದೂರದರ್ಶನದ ವ್ಯಾಮೋಹದಿಂದ ಮಕ್ಕಳಿಗೆ ಪೋಷಕರು ಸಮಯ ನೀಡದಿರುವ ಪರಿಸ್ಥಿತಿ ಬದಲಾಗಬೇಕು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರು, ಹಿರಿಯರು ಹಾಗೂ ಶಿಕ್ಷಕರು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಸಲಹೆ ನೀಡಿದರು.

ಸಮಾಜದ ಸಂಘಟನೆ ಬಲಗೊಳ್ಳಬೇಕಾದರೆ ಪರಸ್ಪರ ಕಾಲೆಳೆಯುವ ಮನೋಭಾವವನ್ನು ಬಿಟ್ಟು, ಒಬ್ಬರ ಬೆಳವಣಿಗೆಯನ್ನು ಮತ್ತೊಬ್ಬರು ಪ್ರೋತ್ಸಾಹಿಸುವ ಉದಾರ ಮನೋಭಾವ ಬೆಳೆಸಿಕೊಳ್ಳಬೇಕು. ತಂತಿ ಬಿಗಿಯಾಗಿದ್ದಾಗಲೇ ನಾದ ಮೂಡುವಂತೆ, ಸಮಾಜದ ಶಕ್ತಿ ಹೊರಹೊಮ್ಮಲು ಎಲ್ಲರೂ ಒಗ್ಗಟ್ಟಿನಿಂದ ಸಾಗಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಗಜೇಂದ್ರಗಡ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಉಮೇಶ ಮೆಣಸಗಿ, ಸಮಾಜವನ್ನು ಕಟ್ಟುವುದಷ್ಟೇ ಅಲ್ಲ, ಅದನ್ನು ಸಂಘಟಿಸಿ ಮುನ್ನಡೆಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದರು.

ಸಮಾಜದ ಸಂಘಟನೆಗಳಲ್ಲಿ ರಾಜಕೀಯವನ್ನು ಬೆರೆಸಬಾರದು. ವೈಯಕ್ತಿಕ ರಾಜಕೀಯ ವಿಚಾರಗಳನ್ನು ಬದಿಗಿಟ್ಟು ಸಮಾಜದ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಿ ಸಾಗಬೇಕು. ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಲು ಸಮಾಜದ ವತಿಯಿಂದ ವಿದ್ಯಾನಿಧಿ ಸ್ಥಾಪಿಸಿ, ಸದಸ್ಯರಿಂದ ಸಂಗ್ರಹಿಸುವ ಹಣವನ್ನು ಅಗತ್ಯವಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಳಸಬೇಕು ಎಂದು ಸಲಹೆ ನೀಡಿದರು.

ಕಾಲಕಾಲಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಅಗತ್ಯವಿದೆ. ಜಕ್ಕಲಿಯಲ್ಲಿ ಆರೋಗ್ಯ ಶಿಬಿರ ಆಯೋಜಿಸಿದರೆ ತಮ್ಮಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ ಅವರು, ವಿವಿಧ ತಜ್ಞ ವೈದ್ಯರನ್ನು ಕರೆಸುವುದು ಹಾಗೂ ಅಗತ್ಯ ಔಷಧಗಳ ವ್ಯವಸ್ಥೆಗೂ ನೆರವಾಗುವುದಾಗಿ ಭರವಸೆ ನೀಡಿದರು.

ರೋಣ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮುತ್ತಣ್ಣ ಸಂಗಳದ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅತಿಥಿಯಾಗಿ ಮಾತನಾಡಿದ ಚನ್ನಮಲ್ಲಪ್ಪ ಗದುಗಿನ, ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಸದಸ್ಯತ್ವ ಪಡೆದು ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಂತೆ ಮನವಿ ಮಾಡಿದರು.

ನೂತನ ಪದಾಧಿಕಾರಿಗಳಿಗೆ ನರೇಗಲ್ಲ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಯೋಗಿ ಜಕ್ಕಲಿ ಪ್ರಮಾಣ ವಚನ ಬೋಧಿಸಿದರು.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ, ಅಟ್ಯಾಪಟ್ಯಾ ಕ್ರೀಡಾಪಟು ಪ್ರೀತಿ ಬುಳ್ಳಾ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಅನ್ನದಾನೇಶ ಮೆಣಸಗಿ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಟಿ.ಎ. ಕಡಗದ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ ವಾಲಿ ಪ್ರಾರ್ಥಿಸಿದರು. ಮುತ್ತಣ್ಣ ಕಡಗದ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ವಾಲಿ ಸ್ವಾಗತಿಸಿದರು. ಪ್ರಕಾಶಪ್ಪ ಹೊಸಮನಿ ನಿರೂಪಿಸಿದರು.

ವೇದಿಕೆಯಲ್ಲಿ ಜಿ.ಎ. ಬೆಲ್ಲದ, ಅಶೋಕಪ್ಪ ಯಾವಗಲ್ಲ, ಡಾ. ಎ.ವಿ. ನರೇಗಲ್ಲ, ನೂತನ ಅಧ್ಯಕ್ಷ ಚನ್ನಬಸಪ್ಪ ಸೂಡಿ, ವೀರಪ್ಪ ಪಟ್ಟಣಶೆಟ್ಟಿ, ಅನಿಲಕುಮಾರ ಹೊಸಮನಿ, ವೀರಪ್ಪ ಅಕ್ಕಿಶೆಟ್ಟರ, ಶರಣಬಸಪ್ಪ ಪಟ್ಟಣಶೆಟ್ಟಿ, ಮಹಾದೇವಪ್ಪ ಮೆಣಸಗಿ, ಸುಭಾಷಚಂದ್ರ ಕುದರಿ, ವೀರಪ್ಪ ವಾಲಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಂಘದ ಹುದ್ದೆಗಳನ್ನು ಅಧಿಕಾರವೆಂದು ಭಾವಿಸದೆ, ಸಮಾಜ ಸೇವೆಗೆ ದೊರೆತ ಅವಕಾಶವೆಂದು ಪರಿಗಣಿಸಿ ನೂತನ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕು. ಪರಸ್ಪರ ಸಹಕಾರ ಮತ್ತು ಒಗ್ಗಟ್ಟಿನಿಂದ ಸಮಾಜದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು.

— ಕೆ.ಎ. ಬಳಿಗೇರ, ಅಧ್ಯಕ್ಷರು, ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್

ಬೆಂಗಳೂರಿನ ಸೌತ್ ರುಚೀಸ್ ಹೋಟೆಲ್ ಮೇಲೆ FDA ದಾಳಿ; ಅವಧಿ ಮೀರಿದ ಆಹಾರ ಪತ್ತೆ!

0

ಬೆಂಗಳೂರು: ಗ್ರಾಹಕರಿಂದ ಬಂದ ದೂರುಗಳ ಆಧಾರದ ಮೇಲೆ FDA ಅಧಿಕಾರಿಗಳು ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಸೌತ್ ರುಚೀಸ್ ಹೋಟೆಲ್‌ ಮೇಲೆ ದಾಳಿ ನಡೆಸಿದ್ದಾರೆ.

ಪರಿಶೀಲನೆ ವೇಳೆ ಹೋಟೆಲ್‌ನ ಅಡುಗೆಮನೆಯಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದಿದ್ದು, ಒಳಭಾಗದಲ್ಲಿ ಜಿರಳೆಗಳು ಓಡಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಅಡುಗೆಮನೆಯ ಹಲವು ಭಾಗಗಳಲ್ಲಿ ಅಸ್ವಚ್ಛತೆ ಇರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ.

ಇದಲ್ಲದೆ, ಕೊಬ್ಬರಿ ಪುಡಿ, ಸಾಂಬಾರ್ ಪುಡಿ, ರಸಂ ಪುಡಿ, ಮಶ್ರೂಮ್ ಹಾಗೂ ಸೌತ್ ರುಚೀಸ್ ಹೆಸರಿನ ಚಟ್ನಿ ಪುಡಿ ಸೇರಿದಂತೆ ಹಲವು ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ತಪ್ಪಾಗಿ ಲೇಬಲ್ ಮಾಡಲಾಗಿದ್ದ ಆಹಾರ ಪದಾರ್ಥಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಹಾಗೂ ಅಡುಗೆಮನೆಯಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ, ಹೋಟೆಲ್‌ನ ಅಡುಗೆಮನೆಯನ್ನು ತಕ್ಷಣ ಸೀಜ್ ಮಾಡಲು FDA ಆಯುಕ್ತರು ಆದೇಶಿಸಿದ್ದಾರೆ.

ಅವಧಿ ಮೀರಿದ ಹಾಗೂ ನಿಯಮಾನುಸಾರ ಲೇಬಲ್ ಮಾಡದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದ್ದು, ಹೋಟೆಲ್ ಮಾಲೀಕ ಪ್ರದೀಪ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಕಾಮಗಾರಿಗಳು ಗುಣಮಟ್ಟದ್ದಾಗಿರಲಿ: ಮಿಥುನ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದಲ್ಲಿ ಕೈಗೊಳ್ಳುವ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಗುತ್ತಿಗೆದಾರರು ನಿಗದಿತ ಅನುದಾನಕ್ಕೆ ಅನುಗುಣವಾಗಿ ಕಾಮಗಾರಿ ನಿರ್ವಹಿಸಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಬೇಕು ಎಂದು ರೋಣ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಎರಡು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ವಿಧಾನಸಭೆ ಅಧ್ಯಕ್ಷ ಹಾಗೂ ತಮ್ಮ ತಂದೆ ಜಿ.ಎಸ್. ಪಾಟೀಲರು ಕ್ಷೇತ್ರದ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದು, ಅಗತ್ಯ ಅನುದಾನ ತರುವಲ್ಲಿ ಹಿಂದೆ ಬಿದ್ದಿಲ್ಲ. ಬಂದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವುದು ಎಲ್ಲರ ಜವಾಬ್ದಾರಿ ಎಂದರು.

ರೋಣ-ಜಕ್ಕಲಿ-ನರೇಗಲ್ಲ-ಅಬ್ಬಿಗೇರಿ ರಸ್ತೆ ಸುಧಾರಣೆಗೆ ₹೧೫೦ ಲಕ್ಷ ಹಾಗೂ ಗಾಂಧಿ ಭವನ ನವೀಕರಣಕ್ಕೆ ₹೩೫ ಲಕ್ಷ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕಾಮಗಾರಿಗಳು ಶೀಘ್ರ ಪೂರ್ಣಗೊಂಡು ಸಾರ್ವಜನಿಕರಿಗೆ ಅನುಕೂಲವಾಗಬೇಕು. ಗಾಂಧಿ ಭವನದಲ್ಲಿ ಹಿಂದಿನಂತೆ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಬೇಕು ಹಾಗೂ ಕಟ್ಟಡ ದುರುಪಯೋಗವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಬೆಟಗೇರಿ, ಪಪಂ ಮಾಜಿ ಅಧ್ಯಕ್ಷ ಫಕೀರಪ್ಪ ಮಳ್ಳಿ, ಮಾಜಿ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಪ್ರಿಯಾಂಕಾ ನಡುವಿನಮನಿ

0

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರು ರಾಷ್ಟ್ರ ನಿರ್ಮಾತೃಗಳಾಗಿದ್ದು, ಸಮರ್ಥ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಉಪನ್ಯಾಸಕಿ ಪ್ರಿಯಾಂಕಾ ನಡುವಿನಮನಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಿ, ಅವರಿಗೆ ಸೂಕ್ತ ಅವಕಾಶ ಕಲ್ಪಿಸಿ ಉತ್ತಮ ನಾಗರಿಕರನ್ನಾಗಿ ರೂಪಿಸುವ ಹೊಣೆ ಶಿಕ್ಷಕರ ಮೇಲಿದೆ. ಗುರುಕುಲ ಪದ್ಧತಿಯಿಂದ ಎಐ ಶಿಕ್ಷಣದವರೆಗೆ ವ್ಯವಸ್ಥೆ ಬದಲಾಗಿದ್ದರೂ ಶಿಕ್ಷಕರ ಮಹತ್ವ ಕಡಿಮೆಯಾಗಿಲ್ಲ. ಯಾವುದೇ ತಂತ್ರಜ್ಞಾನ ಶಿಕ್ಷಕರಿಗೆ ಪರ್ಯಾಯವಾಗಲಾರದು, ಅವು ಪೂರಕವಾಗಿ ಕಾರ್ಯನಿರ್ವಹಿಸಬಹುದೇ ಹೊರತು ವಿದ್ಯಾರ್ಥಿಗಳಲ್ಲಿ ಭಾವನೆಗಳನ್ನು ತುಂಬಲು ಸಾಧ್ಯವಿಲ್ಲ ಎಂದರು.

ಆರ್‌ಡಿಪಿಆರ್ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅಮರೇಶ ಯತಗಲ್ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ಶಿಕ್ಷಕರ ಸೇವೆ ಸ್ಮರಣೀಯವಾಗಿದೆ ಎಂದರು.

ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಎಸ್. ಸೋಮಣ್ಣವರ ಮಾತನಾಡಿ, ಶಿಕ್ಷಕರಿಗೆ ಬೋಧನೆಯೇತರ ಕೆಲಸಗಳ ಹೊರೆ ಹೆಚ್ಚಿದ್ದು, ಇದು ಗುಣಮಟ್ಟದ ಶಿಕ್ಷಣಕ್ಕೆ ಅಡಚಣೆಯಾಗಿದೆ. ಕೆಳಹಂತದಿಂದಲೇ ವಿದ್ಯಾರ್ಥಿಗಳ ಸಾಮರ್ಥ್ಯ ಬೆಳೆಸುವ ಯೋಜನೆ ರೂಪಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಶಾಲೆಗಳು ಸಂವಿಧಾನದ ಆಶಯಗಳನ್ನು ಈಡೇರಿಸುವ ಪವಿತ್ರ ತಾಣಗಳಾಗಿವೆ. ವ್ಯಕ್ತಿ ಮತ್ತು ಸಮಾಜದ ಉನ್ನತಿಗೆ ಶಿಕ್ಷಕರ ಸೇವೆ ಮಹತ್ವದ್ದಾಗಿದೆ ಎಂದರು.

ಈ ಸಂದರ್ಭದಲ್ಲಿ ಡಾ. ಅಮರೇಶ ಯತಗಲ್ ಹಾಗೂ ಎಸ್.ಎಸ್. ಸೋಮಣ್ಣವರ ಅವರನ್ನು ಸನ್ಮಾನಿಸಲಾಯಿತು. ರಾಹುಲ ಗಿಡ್ನಂದಿ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಸತೀಶ ಚನ್ನಪ್ಪಗೌಡರ ವಂದಿಸಿದರು. ಹಲವು ಗಣ್ಯರು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.

ಮಳೆಗಾಗಿ ರೈತ ಮಹಿಳೆಯರಿಂದ ಗುರ್ಜಿಪೂಜೆ : ಉತ್ತಮ ಮಳೆ, ಸಮೃದ್ಧ ಬೆಳೆಗಾಗಿ ಪ್ರಾರ್ಥನೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಮಳೆ ಕೈಕೊಟ್ಟು ಭೂಮಿ ಒಣಗುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ಮಳೆಗಾಗಿ ಹಳ್ಳದಕೇರಿ ಓಣಿಯ ರೈತ ಮಹಿಳೆಯರು ಸಾಂಪ್ರದಾಯಿಕ ಗುರ್ಜಿಪೂಜೆ ಆರಂಭಿಸಿದ್ದಾರೆ.

ಮುಂಗಾರು ಪೂರ್ವದಲ್ಲಿ ಸಾಮಾನ್ಯವಾಗಿ ಆಚರಿಸಲಾಗುವ ಈ ಸಂಪ್ರದಾಯದ ಮೂಲಕ ಉತ್ತಮ ಮಳೆಯಾಗಿ ಭೂಮಿ ತೇವಗೊಂಡು ಬಿತ್ತನೆ ಕಾರ್ಯ ಯಶಸ್ವಿಯಾಗಲಿ, ಬೆಳೆ ಸಮೃದ್ಧಿಯಾಗಿ ರೈತರ ಮನೆಗಳಲ್ಲಿ ಧಾನ್ಯ ತುಂಬಲಿ ಎಂದು ಪ್ರಾರ್ಥಿಸಲಾಗುತ್ತದೆ. ಮಳೆ ಹಾಗೂ ಕೃಷಿ ಅವಿನಾಭಾವ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಗುರ್ಜಿಪೂಜೆಯನ್ನು ಪ್ರಕೃತಿ ಆರಾಧನೆಯ ರೂಪದಲ್ಲಿಯೂ ಕಾಣಲಾಗುತ್ತದೆ.

ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಬಿತ್ತನೆ ಮಾಡಿದ ಕೆಲವೆಡೆ ಬೆಳೆಗಳು ಒಣಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾನುವಾರುಗಳಿಗೆ ನೀರು ಹಾಗೂ ಮೇವಿನ ಕೊರತೆಯ ಆತಂಕವೂ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಹಿಂಗಾರು ಹಂಗಿನಲ್ಲಾದರೂ ಉತ್ತಮ ಮಳೆಯಾಗಿ ಒಣಗಿದ ಭೂಮಿಗೆ ಜೀವ ದೊರೆಯಲಿ, ಹೊಲಗಳು ಹಸಿರಾಗಲಿ, ಕೆರೆ-ಕಟ್ಟೆಗಳು ತುಂಬಲಿ, ಜಾನುವಾರುಗಳಿಗೆ ನೀರು-ಮೇವು ದೊರೆಯಲಿ ಹಾಗೂ ರೈತರ ಸಂಕಷ್ಟ ದೂರವಾಗಲಿ ಎಂದು ಮಹಿಳೆಯರು ಗುರ್ಜಿಪೂಜೆ ಮೂಲಕ ಪ್ರಾರ್ಥಿಸಿದರು.

ಸಿದ್ದಮ್ಮ ಗಡೇದ, ಲಕ್ಷ್ಮವ್ವ ದಾನಿ, ನೀಲವ್ವ ಗೊರವರ, ನೀಲಮ್ಮ ಸಾಲಾವಳಿಮಠ, ಮಾಲಾ ರಡ್ಡೇರ, ರೇಣುವ್ವ ಬೂದಿಹಾಳ, ರೇಣುಕಾ ದಾನಿ ಹಾಗೂ ಶಿವಕ್ಕ ಸಾಲಾವಳಿಮಠ ಸೇರಿದಂತೆ ರೈತ ಮಹಿಳೆಯರು ಪಾಲ್ಗೊಂಡಿದ್ದರು.

ಅಂಬೇಡ್ಕರ್–ಬುದ್ಧ–ಬಸವಣ್ಣ ಅವಹೇಳನ ಖಂಡಿಸಿ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಬುದ್ಧ ಹಾಗೂ ಬಸವಣ್ಣನವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪದ ಹಿನ್ನೆಲೆಯಲ್ಲಿ ವೇದಮೂರ್ತಿ ಎಂಬುವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಸ್ಲಂ ಜನಾಂದೋಲನ–ಕರ್ನಾಟಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ದೊಡ್ಡಯಾಚೆನಹಳ್ಳಿಯ ವೇದಮೂರ್ತಿ ಅವರು ಅಂಬೇಡ್ಕರ್, ಬುದ್ಧ ಹಾಗೂ ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಮೀಸಲಾತಿ ಸೇರಿದಂತೆ ಸಂವಿಧಾನಾತ್ಮಕ ವಿಚಾರಗಳ ಬಗ್ಗೆಯೂ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದಲ್ಲದೆ, ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವ ಸಾಧ್ಯತೆಯಿದೆ. ಹೀಗಾಗಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಪೌರಕಾರ್ಮಿಕರು ಭೇಟಿ ಮಾಡಿ, ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ತಮ್ಮ ಸೇವೆಯನ್ನು ಕಾಯಂಗೊಳಿಸುವಂತೆ ಮನವಿ ಮಾಡಿದಾಗ ಸಚಿವರು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬೆಲೆ ಏರಿಕೆಯ ಸಂದರ್ಭದಲ್ಲಿ ಕನಿಷ್ಠ ವೇತನದಲ್ಲಿ ಕುಟುಂಬ ನಿರ್ವಹಿಸುವುದು ಕಷ್ಟವಾಗಿದ್ದು, ಪೌರಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಚಿವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಹಾಗೂ ಅವರ ವಿರುದ್ಧ ಕ್ರಮ ಜರುಗಿಸಿ ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದರು.

ವಕೀಲ ಎಂ.ಬಿ. ನದಾಫ, ಪರವೀನಬಾನು ಹವಾಲ್ದಾರ, ಶರಣಪ್ಪ ಸೂಡಿ, ಇಬ್ರಾಹಿಂ ಮುಲ್ಲಾ, ಮೆಹಬೂಬಸಾಬ ಬಳ್ಳಾರಿ, ಪುಷ್ಪಾ ಬಿಜಾಪುರ, ಸಲೀಂ ಹರಿಹರ, ಖಾಜಾಸಾಬ ಇಸ್ಮಾಯಿಲನವರ, ಸಾಕ್ರುಬಾಯಿ ಗೋಸಾವಿ, ಮಕ್ತುಮಸಾಬ ಮುಲ್ಲಾನವರ, ಅಫ್ರೋಜಾ ಗುಳಗುಂದಿ, ಗೌಸಸಾಬ ಅಕ್ಕಿ, ರವಿ ಗೋಸಾವಿ, ಮಾಲಾ ಗೋಸಾವಿ ಸೇರಿದಂತೆ ವಿವಿಧ ಸ್ಲಂ ಪ್ರದೇಶಗಳ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಅವಹೇಳನಕಾರಿ ಹೇಳಿಕೆ ನೀಡಿರುವ ವೇದಮೂರ್ತಿ ವಿರುದ್ಧ ಕಠಿಣ ಕ್ರಮ ಜರುಗಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು. ಪೌರಕಾರ್ಮಿಕರನ್ನು ಅವಮಾನಿಸಿದ ಸಚಿವ ಕೃಷ್ಣ ಬೈರೇಗೌಡ ಅವರೂ ಕ್ಷಮೆ ಕೇಳಬೇಕು.

— ಇಮ್ತಿಯಾಜ್ ಆರ್. ಮಾನ್ವಿ, ಸ್ಲಂ ಸಮಿತಿ ಅಧ್ಯಕ್ಷ

ಬರದ ನಡುವೆಯೇ ಜಾನುವಾರುಗಳಿಗೆ ‘ಅಜೋಲಾ’ ಪೌಷ್ಟಿಕ ಮೇವು!

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು/ಗದಗ: ಮಳೆಯ ಅಭಾವ, ಹಸಿರು ಮೇವಿನ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದ ಜಾನುವಾರು ಸಾಕಣೆದಾರರು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ, ಜಾನುವಾರುಗಳಿಗೆ ಸ್ಥಳೀಯವಾಗಿಯೇ ಪೌಷ್ಟಿಕ ಪೂರಕ ಮೇವು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ರಾಜ್ಯದಾದ್ಯಂತ ₹3.78 ಕೋಟಿ ವೆಚ್ಚದಲ್ಲಿ 12,000 ಅಜೋಲಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮುಂದಾಗಿದೆ.

ಜಾನುವಾರುಗಳಿಗೆ, ಅದರಲ್ಲೂ ಹಾಲು ನೀಡುವ ದನ-ಕರುಗಳಿಗೆ ಅಗತ್ಯವಾದ ಪ್ರೋಟೀನ್, ಖನಿಜಾಂಶ ಸೇರಿದಂತೆ ಹಲವು ಪೌಷ್ಟಿಕಾಂಶಗಳನ್ನು ಹೊಂದಿರುವ ಅಜೋಲಾವನ್ನು ಪೂರಕ ಆಹಾರವಾಗಿ ಬಳಸಬಹುದಾಗಿದೆ. ಹಸಿರು ಮೇವಿನ ಕೊರತೆಯ ಸಂದರ್ಭದಲ್ಲಿ ರೈತರಿಗೆ ಕಡಿಮೆ ವೆಚ್ಚದಲ್ಲಿ ಲಭ್ಯವಾಗುವ ಪರ್ಯಾಯ ಪೌಷ್ಟಿಕ ಮೇವಾಗಿ ಅಜೋಲಾ ನೆರವಾಗಲಿದೆ.

ರಾಜ್ಯದ 31 ಜಿಲ್ಲೆಗಳ 240 ತಾಲ್ಲೂಕುಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು, ಜಿಲ್ಲಾವಾರು ಭೌತಿಕ ಮತ್ತು ಆರ್ಥಿಕ ಗುರಿ ನಿಗದಿಪಡಿಸಲಾಗಿದೆ. ಪ್ರತಿ ಅಜೋಲಾ ಘಟಕಕ್ಕೆ ಗರಿಷ್ಠ ₹3,150 ವೆಚ್ಚ ಅಂದಾಜಿಸಲಾಗಿದೆ.

ಬಾಗಲಕೋಟೆ ಮತ್ತು ತುಮಕೂರು ಜಿಲ್ಲೆಗಳಿಗೆ ತಲಾ 500, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಮೈಸೂರು ಜಿಲ್ಲೆಗಳಿಗೆ ತಲಾ 450 ಘಟಕಗಳನ್ನು ಹಂಚಿಕೆ ಮಾಡಲಾಗಿದೆ. ಬೀದರ್, ಚಿಕ್ಕಬಳ್ಳಾಪುರ, ಧಾರವಾಡ, ಹಾಸನ, ಹಾವೇರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ತಲಾ 400 ಘಟಕಗಳು; ಕೊಪ್ಪಳ, ಮಂಡ್ಯ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಿಗೆ ತಲಾ 350 ಘಟಕಗಳನ್ನು ನಿಗದಿಪಡಿಸಲಾಗಿದೆ.

ಚಿತ್ರದುರ್ಗ, ದಾವಣಗೆರೆ, ಕೋಲಾರ, ವಿಜಯನಗರ ಹಾಗೂ ಯಾದಗಿರಿ ಜಿಲ್ಲೆಗಳಿಗೆ ತಲಾ 300; ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ, ಕೊಡಗು ಹಾಗೂ ರಾಮನಗರ ಜಿಲ್ಲೆಗಳಿಗೆ ತಲಾ 250 ಘಟಕಗಳ ಗುರಿ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 200 ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ಕಡಿಮೆ ಜಾಗ, ಕಡಿಮೆ ವೆಚ್ಚದಲ್ಲೇ ಘಟಕ

ಅಜೋಲಾ ಘಟಕಗಳನ್ನು ರೈತರ ಮನೆ ಅಥವಾ ಕೊಟ್ಟಿಗೆಯ ಸಮೀಪವೇ ಕಡಿಮೆ ಜಾಗದಲ್ಲಿ ನಿರ್ಮಿಸಬಹುದಾಗಿದೆ. ಸುಮಾರು 10 ಅಡಿ ಉದ್ದ, 4 ಅಡಿ ಅಗಲ ಹಾಗೂ 1 ಅಡಿ ಆಳದ ಘಟಕವನ್ನು ನಿರ್ಮಿಸಲಾಗುತ್ತದೆ.

ಪ್ರತಿ ಘಟಕದ ₹3,150 ವೆಚ್ಚದಲ್ಲಿ ಯುವಿ-ಸ್ಟೆಬಿಲೈಸ್ಡ್ ಎಚ್‌ಡಿಪಿಇ ಶೀಟ್‌ಗೆ ₹1,350, ನೆರಳು ಬಲೆ ಹಾಗೂ ಬಿದಿರು/ಜಿಐ ಫ್ರೇಮ್‌ಗೆ ₹650, ಫಲವತ್ತಾದ ಮಣ್ಣು, ಸಗಣಿ ಮತ್ತು ಸೂಪರ್ ಫಾಸ್ಫೇಟ್ ಮಿಶ್ರಣಕ್ಕೆ ₹250 ಹಾಗೂ ಎರಡು ಕೆ.ಜಿ. ಅಜೋಲಾ ತಳಿ/ಬೀಜಕ್ಕೆ ₹200 ವೆಚ್ಚವಾಗಲಿದೆ. ಸಾಮಗ್ರಿಗಳಿಗೆ ₹2,450 ಹಾಗೂ ಸ್ಥಳ ಸಿದ್ಧತೆ, ತೊಟ್ಟಿ ಅಳವಡಿಕೆ, ಸಂರಕ್ಷಣೆ ಮತ್ತು ಬೀಜ ಬಿತ್ತನೆಗೆ ಎರಡು ಮಾನವ ದಿನಗಳ ಕೂಲಿ ವೆಚ್ಚವಾಗಿ ₹700 ನಿಗದಿಪಡಿಸಲಾಗಿದೆ.

ಸ್ವಚ್ಛ ನೀರಿರುವ ಸ್ಥಳಕ್ಕಷ್ಟೇ ಆದ್ಯತೆ

ಜಿಲ್ಲೆಗೆ ನಿಗದಿಪಡಿಸಿದ ಗುರಿಯನ್ನು ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿವಾರು ಹಂಚಿಕೆ ಮಾಡಿ, ಸೂಕ್ತ ಸ್ಥಳ ಮತ್ತು ನೀರಿನ ಲಭ್ಯತೆ ಹೊಂದಿರುವ ಜಾನುವಾರು ಸಾಕಣೆದಾರರನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಲಾಗುತ್ತದೆ. ಕಲುಷಿತ ನೀರಿನಲ್ಲಿ ಅಜೋಲಾ ಬೆಳೆಸುವುದರಿಂದ ಮಾಲಿನ್ಯಕಾರಕಗಳ ಅಪಾಯ ಇರುವ ಹಿನ್ನೆಲೆಯಲ್ಲಿ ಸ್ವಚ್ಛ ನೀರಿನ ಲಭ್ಯತೆ ಇರುವ ಸ್ಥಳಗಳನ್ನಷ್ಟೇ ಆಯ್ಕೆ ಮಾಡಲಾಗುತ್ತದೆ.

ಫಲಾನುಭವಿಗಳಿಗೆ ಅಜೋಲಾ ಉತ್ಪಾದನೆ, ಕೊಯ್ಲು, ಸ್ವಚ್ಛತೆ, ಸಂಸ್ಕರಣೆ ಹಾಗೂ ಜಾನುವಾರುಗಳಿಗೆ ನೀಡುವ ವಿಧಾನ ಕುರಿತು ತಾಂತ್ರಿಕ ತರಬೇತಿ ನೀಡಲಾಗುತ್ತದೆ. ಯೋಜನೆಯನ್ನು VB-G RAM G ಮಾರ್ಗಸೂಚಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗೆ ಒಳಪಟ್ಟು ಅನುಷ್ಠಾನಗೊಳಿಸಲಾಗುತ್ತದೆ.

ಪ್ರತಿ ಘಟಕದ ಫಲಾನುಭವಿಯ ವಿವರ, ಆಧಾರ್, ಜಿಪಿಎಸ್ ಸ್ಥಳ ಹಾಗೂ ಘಟಕದ ಕಾರ್ಯನಿರ್ವಹಣೆಯ ಮೊದಲು ಮತ್ತು ನಂತರದ ಛಾಯಾಚಿತ್ರಗಳನ್ನು ಕಡ್ಡಾಯವಾಗಿ ದಾಖಲಿಸಲಾಗುತ್ತದೆ. ಜಿಲ್ಲಾ ಉಪನಿರ್ದೇಶಕರು ಮಾಸಿಕ ವೇಳಾಪಟ್ಟಿ ಸಿದ್ಧಪಡಿಸಿ ಯೋಜನೆ ಅನುಷ್ಠಾನಗೊಳಿಸಲಿದ್ದು, ಪ್ರತಿ ತಿಂಗಳ 5ರೊಳಗೆ ಪ್ರಗತಿ ವರದಿಯನ್ನು ರಾಜ್ಯ ಕಚೇರಿಗೆ ಸಲ್ಲಿಸುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.

ಅಜೋಲಾ ಯೋಜನೆಯ ಪ್ರಮುಖ ಅಂಶಗಳು

  • ಒಟ್ಟು ವೆಚ್ಚ: ₹3.78 ಕೋಟಿ
  • ಒಟ್ಟು ಘಟಕಗಳು: 12,000
  • ಜಿಲ್ಲೆಗಳು: 31
  • ತಾಲ್ಲೂಕುಗಳು: 240
  • ಪ್ರತಿ ಘಟಕದ ವೆಚ್ಚ: ₹3,150
  • ಗದಗ ಜಿಲ್ಲೆಯ ಗುರಿ: 350 ಘಟಕ
  • ಗದಗಕ್ಕೆ ಅನುದಾನ: ₹11.02 ಲಕ್ಷ
  • ಘಟಕದ ಗಾತ್ರ: 10 × 4 × 1 ಅಡಿ

ಗದಗ ಜಿಲ್ಲೆಗೆ 350 ಘಟಕ

ಗದಗ ಜಿಲ್ಲೆಯ ಏಳು ತಾಲ್ಲೂಕುಗಳಿಗೆ 350 ಅಜೋಲಾ ಘಟಕಗಳ ಗುರಿ ನೀಡಲಾಗಿದ್ದು, ಇದಕ್ಕಾಗಿ ₹11.02 ಲಕ್ಷ ಅನುದಾನ ನಿಗದಿಪಡಿಸಲಾಗಿದೆ. ಇದೇ ರೀತಿ ಬೆಳಗಾವಿ ಜಿಲ್ಲೆಗೆ 750, ವಿಜಯಪುರಕ್ಕೆ 650, ಉತ್ತರ ಕನ್ನಡಕ್ಕೆ 600 ಹಾಗೂ ಕಲಬುರಗಿಗೆ 550 ಘಟಕಗಳ ಗುರಿ ನೀಡಲಾಗಿದೆ.