Home Blog Page 168

ಗುಜರಾತ್ ಗೋಶಾಲೆಗೆ ಸೋನು ಸೂದ್ ₹22 ಲಕ್ಷ ದೇಣಿಗೆ: ಗೋಸೇವೆ ಮೂಲಕ ಮತ್ತೆ ಗಮನ ಸೆಳೆದ ನಟ

ನಟ ಸೋನು ಸೂದ್ ಅವರು ತಮ್ಮ ಸಾಮಾಜಿಕ ಸೇವೆಯ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಗುಜರಾತ್‌ನ ವಾರಾಹಿ ಪ್ರದೇಶದಲ್ಲಿರುವ ಗೋಶಾಲೆಗೆ ಭೇಟಿ ನೀಡಿದ ಅವರು, ಗೋವುಗಳ ಆರೈಕೆಗಾಗಿ ₹22 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ.

ಸಂಬಂಧಿತ ಗೋಶಾಲೆಯಲ್ಲಿ ಸುಮಾರು 7,000 ಗೋವುಗಳಿಗೆ ಆಶ್ರಯ ನೀಡಲಾಗುತ್ತಿದ್ದು, ಅನಾಥ, ಗಾಯಗೊಂಡ, ಅಂಗವಿಕಲ ಹಾಗೂ ವೃದ್ಧ ಗೋವುಗಳ ರಕ್ಷಣೆ ಮತ್ತು ಆರೈಕೆ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈ ಕಾರ್ಯದಿಂದ ಪ್ರೇರಿತಗೊಂಡ ಸೋನು ಸೂದ್ ಗೋಶಾಲೆಗೆ ಆರ್ಥಿಕ ನೆರವು ನೀಡಿದ್ದಾರೆ.

ಗೋಶಾಲೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಸೋನು ಸೂದ್, “ಇಲ್ಲಿ ನನಗೆ ದೊರೆತ ಪ್ರೀತಿ ಮತ್ತು ಆತ್ಮೀಯತೆ ಹೆಮ್ಮೆ ತಂದಿದೆ. ಗೋ ರಕ್ಷಣೆಯನ್ನು ಈ ರೀತಿಯಲ್ಲಿ ದೇಶದಾದ್ಯಂತ ಜಾರಿಗೆ ತರಬೇಕು. ಗೋವುಗಳು ಕೇವಲ ಕಾಳಜಿಯನ್ನು ಮಾತ್ರ ಬಯಸುತ್ತವೆ. ನಾವು ಹಸುಗಳು ಮತ್ತು ಗೋಶಾಲೆಗಳ ಜೊತೆ ನಿಲ್ಲಬೇಕು” ಎಂದು ಹೇಳಿದರು.

ಸೋನು ಸೂದ್ ಕೋವಿಡ್-19 ಮಹಾಮಾರಿ ಸಮಯದಲ್ಲಿ ದೇಶಾದ್ಯಂತ ವ್ಯಾಪಕ ಸಾಮಾಜಿಕ ಸೇವೆ ನಡೆಸಿದ್ದರು. ಲಾಕ್‌ಡೌನ್ ವೇಳೆ ವಲಸೆ ಕಾರ್ಮಿಕರನ್ನು ಮನೆಗಳಿಗೆ ಕಳುಹಿಸುವುದು, ಆಕ್ಸಿಜನ್ ಪೂರೈಕೆ, ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣ, ಆಹಾರ ವಿತರಣೆ ಸೇರಿದಂತೆ ಹಲವು ಸೇವೆಗಳ ಮೂಲಕ ಜನಪ್ರಿಯತೆ ಪಡೆದಿದ್ದರು. ಅವರ ಸೇವೆಯನ್ನು ಸರ್ಕಾರದ ಮಟ್ಟದಲ್ಲೂ ಪ್ರಶಂಸಿಸಲಾಗಿದೆ.

ಕೋವಿಡ್ ಬಳಿಕವೂ ಅವರು ಶಿಕ್ಷಣ, ಆರೋಗ್ಯ, ಆರ್ಥಿಕ ನೆರವು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಮಾಜ ಸೇವೆಯನ್ನು ಮುಂದುವರೆಸುತ್ತಿದ್ದಾರೆ. ಪ್ರತಿ ದಿನವೂ ಸಹಾಯಕ್ಕಾಗಿ ಸಾವಿರಾರು ಮನವಿಗಳು ಬರುತ್ತವೆ ಎಂದು ಸೋನು ಸೂದ್ ತಿಳಿಸಿದ್ದಾರೆ. ಸದ್ಯ ಅವರು ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಲಕ್ಕುಂಡಿ ಭೂಮಿಯೊಳಗೆ ಅಡಗಿದೆ ಬಂಗಾರ-ವಜ್ರದ ರಹಸ್ಯ! ನಾಳೆಯಿಂದ ಮಹಾ ಉತ್ಖನನ ಆರಂಭ – ಮತ್ತೆ ನಿಧಿ ಪತ್ತೆಯ ಭೀತಿ

0

ಗದಗ ಜಿಲ್ಲೆಯ ಲಕ್ಕುಂಡಿ… ಇತಿಹಾಸ, ಸಂಪತ್ತು ಮತ್ತು ರಹಸ್ಯಗಳ ಭೂಮಿ! ನಿಧಿ ಪತ್ತೆಯಾದ ಬೆನ್ನಲ್ಲೇ ನಾಳೆಯಿಂದ ಲಕ್ಕುಂಡಿಯಲ್ಲಿ ಮತ್ತೆ ಭಾರೀ ಉತ್ಖನನ ಕಾರ್ಯಕ್ಕೆ ಚಾಲನೆ ಸಿಗಲಿದೆ. ಲಕ್ಕುಂಡಿ ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಿಂದ ಅಧಿಕೃತವಾಗಿ ಉತ್ಖನನ ಆರಂಭವಾಗಲಿದೆ ಎಂದು ಲಕ್ಕುಂಡಿ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಪಾಟೀಲ್ ಹಾಗೂ ಆಯುಕ್ತ ಶರಣು ಗೋಗೇರಿ ಮಾಹಿತಿ ನೀಡಿದ್ದಾರೆ.

ಲಕ್ಕುಂಡಿ ಎಂದರೆ ಕೇವಲ ದೇವಸ್ಥಾನಗಳ ಪಟ್ಟಣವಲ್ಲ… ಇದು ಕಲ್ಯಾಣ ಚಾಲುಕ್ಯರ, ರಾಷ್ಟ್ರಕೂಟರ, ಹೊಯ್ಸಳರು, ಕಳಚೂರಿಗಳು, ವಿಜಯನಗರ ಅರಸರು ಹಾಗೂ ದಾನಚಿಂತಾಮಣಿ ಅತ್ತಿಮಬ್ಬೆಯ ಆಳ್ವಿಕೆಯ ಇತಿಹಾಸವನ್ನು ತನ್ನೊಡಲಲ್ಲಿ ಹೊತ್ತ ನಾಡು. ಶಿಲ್ಪಕಲೆಯ ಜೊತೆಗೆ ಚಿನ್ನ, ಬೆಳ್ಳಿ, ವಜ್ರ, ವೈಢೂರ್ಯ, ಮುತ್ತು, ನೀಲಮಣಿ ಸೇರಿದಂತೆ ಅಪಾರ ಸಂಪತ್ತು ಭೂಮಿಯೊಳಗೆ ಹುದುಗಿದೆ ಎಂಬ ನಂಬಿಕೆ ಬಲವಾಗಿದೆ.

2024ರ ನವೆಂಬರ್‌ನಲ್ಲಿ ನಡೆದ ಅನ್ವೇಷಣೆಯಲ್ಲೇ ಸಾವಿರಾರು ಪ್ರಾಚೀನ ಅವಶೇಷಗಳು ಪತ್ತೆಯಾಗಿದ್ದವು. ಇದೀಗ ಮತ್ತೆ ನಿಧಿ ಸಿಕ್ಕಿರುವ ಬೆನ್ನಲ್ಲೇ ಉತ್ಖನನ ಕಾರ್ಯಕ್ಕೆ ಮತ್ತಷ್ಟು ವೇಗ ಸಿಗಲಿದೆ. ಅನೇಕ ಭಾಗಗಳಲ್ಲಿ ಇಂದಿಗೂ ರತ್ನ, ಹವಳ, ವಜ್ರ, ವೈಡೂರ್ಯದಂತಹ ವಸ್ತುಗಳು ದೊರೆಯುತ್ತಿರುವುದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ, ಸಿದ್ದರಬಾವಿ, ಚಂದ್ರಮೌಳೇಶ್ವರ ದೇವಸ್ಥಾನದ ಬಳಿ ಸುಮಾರು 5,388 ಚದರ ಅಡಿ ವ್ಯಾಪ್ತಿಯಲ್ಲಿ ಉತ್ಖನನಕ್ಕೆ ಸಿದ್ಧತೆ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆ, ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಉತ್ಖನನ ನಡೆಯುತ್ತಿದೆ.
ಇದಕ್ಕೂ ಮೊದಲು 2004-05ರಲ್ಲಿ ಪ್ರಭುದೇವರ ಮಠದ ದಕ್ಷಿಣ ಭಾಗದಲ್ಲಿ ನಡೆದ ಉತ್ಖನನದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಅನೇಕ ಮಹತ್ವದ ಕುರುಹುಗಳು ಪತ್ತೆಯಾಗಿದ್ದವು. ಈಗಿನ ಉತ್ಖನನದಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಶಾಸನಗಳು, ಶಿಲ್ಪಕಲೆ, ಸ್ಮಾರಕಗಳು ಹಾಗೂ ಅಪರೂಪದ ಆಭರಣಗಳು ಸಿಕ್ಕುವ ಸಾಧ್ಯತೆ ಇದೆ.
ಒಟ್ಟಾರೆ, ಲಕ್ಕುಂಡಿಯ ಭೂಮಿ ಮತ್ತೆ ದೇಶದ ಗಮನ ಸೆಳೆಯಲು ಸಿದ್ಧವಾಗಿದೆ.

ಭೀಕರ ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ಏಳು ಮಹಿಳೆಯರು ಬಲಿ: ಇಡೀ ಗ್ರಾಮದಲ್ಲಿ ಶೋಕ

0

ರಾಜಸ್ಥಾನದ ಫತೇಪುರ್ ಶೇಖಾವತಿಯಲ್ಲಿ ನಡೆದ ರಸ್ತೆ ಅಪಘಾತವು ಒಂದೇ ಕುಟುಂಬದ ಏಳು ಮಹಿಳೆಯರನ್ನು ಒಂದೇ ಕ್ಷಣದಲ್ಲಿ ಕಸಿದುಕೊಂಡಿದೆ. ಈ ಭೀಕರ ದುರಂತ ಇಡೀ ರಾಜ್ಯವನ್ನು ಶೋಕದಲ್ಲಿ ಮುಳುಗಿಸಿದೆ. ರಾಷ್ಟ್ರೀಯ ಹೆದ್ದಾರಿ 52ರ ಹರ್ಸಾವಾ ಗ್ರಾಮದ ಬಳಿ ನಡೆದ ಈ ಅಪಘಾತದ ದೃಶ್ಯ ನೋಡಿದವರು ಕಣ್ಣೀರು ಹಾಕದೇ ಇರಲು ಸಾಧ್ಯವಾಗಲಿಲ್ಲ.

ವೇಗವಾಗಿ ಚಲಿಸುತ್ತಿದ್ದ ಕಾರು ಮೊದಲು ಪಿಕಪ್ ಟ್ರಕ್‌ಗೆ ಡಿಕ್ಕಿ ಹೊಡೆದು, ನಂತರ ಎದುರು ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನೊಳಗೆ ಇದ್ದ ಮಹಿಳೆಯರು ಹೊರಬರಲು ಅವಕಾಶವೇ ಸಿಗದೆ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅತ್ತೆ, ಐವರು ಸೊಸೆಯಂದಿರು ಮತ್ತು ಮಗಳು ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕಾರು ಚಾಲಕ ಮತ್ತು ಯುವತಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ಮಹಿಳೆಯರೆಲ್ಲರೂ ಫತೇಪುರ್ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ರಘುನಾಥಪುರ ಗ್ರಾಮದ ನಿವಾಸಿಗಳು ಮತ್ತು ಒಂದೇ ಕುಟುಂಬಕ್ಕೆ ಸೇರಿದವರು. ಇತ್ತೀಚೆಗೆ ಮೋಹಿನಿ ದೇವಿಯ ಅತ್ತಿಗೆ ಕೈಲಾಶ್ ದೇವಿ ನಿಧನರಾದ ಹಿನ್ನೆಲೆಯಲ್ಲಿ ಕುಟುಂಬವು ಲಕ್ಷ್ಮಣಗಢಕ್ಕೆ ಅಂತ್ಯಕ್ರಿಯೆಗೆ ಹೋಗಿತ್ತು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಸಂಜೆ 4 ಗಂಟೆ ಸುಮಾರಿಗೆ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಒಟ್ಟು ನಾಲ್ಕು ವಾಹನಗಳು ಒಟ್ಟಿಗೆ ಪ್ರಯಾಣಿಸುತ್ತಿದ್ದವು. ಮೂರು ವಾಹನಗಳಲ್ಲಿ ಪುರುಷರು ಇದ್ದರು. ಮಹಿಳೆಯರು ಹಾಗೂ ಚಾಲಕ ಒಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಆ ಪ್ರಯಾಣವೇ ಅವರ ಕೊನೆಯ ಪ್ರಯಾಣವಾಗುತ್ತದೆ ಎಂಬುದನ್ನು ಯಾರೂ ಊಹಿಸಿರಲಿಲ್ಲ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಹರ್ಸಾವಾ ಗ್ರಾಮದ ಬಳಿ ಚಾಲಕ ಓವರ್‌ಟೇಕ್ ಮಾಡಲು ಪ್ರಯತ್ನಿಸಿದ್ದಾನೆ. ಅತಿ ವೇಗದ ಕಾರಣ ಕಾರು ನಿಯಂತ್ರಣ ತಪ್ಪಿ ಮೊದಲು ಪಿಕಪ್ ವಾಹನಕ್ಕೆ, ನಂತರ ಎದುರು ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಮಹಿಳೆಯರು ಕಾರಿನೊಳಗೆ ಸಿಲುಕಿಕೊಂಡಿದ್ದು, ಸಾಕಷ್ಟು ಪ್ರಯತ್ನದ ಬಳಿಕ ಹೊರತೆಗೆದಾಗ ಏಳು ಮಂದಿ ಸಾವನ್ನಪ್ಪಿದ್ದುದಾಗಿ ತಿಳಿದುಬಂದಿದೆ.

ಅಪಘಾತದಲ್ಲಿ ಮೋಹಿನಿ ದೇವಿ (80), ಚಂದಾ ದೇವಿ (55), ತುಳಸಿ ದೇವಿ (45), ಬರ್ಖಾ ದೇವಿ (35), ಆಶಾ ದೇವಿ (60), ಸಂತೋಷ್ ದೇವಿ (45) ಮತ್ತು ಇಂದಿರಾ (60) ಮೃತಪಟ್ಟಿದ್ದಾರೆ. ಗಾಯಾಳುಗಳಾದ ಸೋನು (35) ಮತ್ತು ಚಾಲಕ ವಾಸಿಮ್ (25) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾವಿನ ಸುದ್ದಿ ಗ್ರಾಮ ತಲುಪಿದ ತಕ್ಷಣ, ರಘುನಾಥಪುರ ಗ್ರಾಮ ಮೌನಕ್ಕೆ ಒಳಗಾಯಿತು. ಆ ರಾತ್ರಿ ಗ್ರಾಮದಲ್ಲಿ ಯಾವುದೇ ಮನೆಗಳಲ್ಲಿ ಒಲೆ ಉರಿಸಲಿಲ್ಲ. ಮನೆಗಳ ಆಧಾರವಾಗಿದ್ದ ಮಹಿಳೆಯರ ನಷ್ಟ ಕುಟುಂಬಗಳನ್ನು ಸಂಪೂರ್ಣವಾಗಿ ಕುಗ್ಗಿಸಿದೆ.

ಪೊಲೀಸರು ಹಾಗೂ ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಧನುಕಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಜಿಲ್ಲಾಧಿಕಾರಿ ಮುಕುಲ್ ಶರ್ಮಾ ಎಸ್‌ಕೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಹಾಗೂ ರಾಜ್ಯಪಾಲ ಹರಿಭಾವು ಬಾಗ್ಡೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಮತ್ತೆ ರಸ್ತೆ ಸುರಕ್ಷತೆ ಮತ್ತು ಅತಿ ವೇಗದ ಅಪಾಯಗಳ ಬಗ್ಗೆ ಗಂಭೀರ ಪ್ರಶ್ನೆ ಎತ್ತಿದೆ.

ಬಿಗ್ ಬಾಸ್ ಫಿನಾಲೆಗೂ ಮುನ್ನ ವೈರಲ್ ಆದ ಸುದೀಪ್–ನಾರಾಯಣ ಗೌಡ ಭೇಟಿ: ಕರವೇ ಸ್ಪಷ್ಟನೆ

‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರ ಕುತೂಹಲ ತೀವ್ರವಾಗಿದೆ. ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ, ಧನುಷ್, ಧ್ರುವಂತ್ ಮತ್ತು ಮ್ಯೂಟೆಂಟ್ ರಘು ಅವರು ಫಿನಾಲೆ ವಾರದವರೆಗೆ ಸ್ಪರ್ಧೆಯಲ್ಲಿ ಉಳಿದಿದ್ದಾರೆ.

ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿರುವ ಫೋಟೋ ವೈರಲ್ ಆಗಿದ್ದು, ಬಿಗ್ ಬಾಸ್ ಸಂಬಂಧಿತ ಊಹಾಪೋಹಗಳಿಗೆ ಕಾರಣವಾಗಿದೆ. ಕೆಲವರು ಈ ಭೇಟಿಯನ್ನು ಅಶ್ವಿನಿ ಗೌಡ ಪರವಾಗಿ ಲಾಬಿ ನಡೆಸಲು ನಡೆದ ಭೇಟಿ ಎಂದು ಪ್ರಚಾರ ಮಾಡಿದ್ದಾರೆ.

ಈ ಕುರಿತು ಕರವೇ ಮುಖಂಡ ಧರ್ಮಣ್ಣ ಅವರು ಸ್ಪಷ್ಟನೆ ನೀಡಿದ್ದು, ಈ ಭೇಟಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ.   “ನಾರಾಯಣ ಗೌಡ ಅವರು ತಮ್ಮ ಮಗನ ಮದುವೆಗೆ ಆಹ್ವಾನ ನೀಡಲು ಸುದೀಪ್ ಮನೆಗೆ ಹೋಗಿದ್ದರು. ಈ ಹಿಂದೆಯೇ ಮುಖ್ಯಮಂತ್ರಿ ಸೇರಿದಂತೆ ಹಲವರಿಗೆ ಮದುವೆ ಪತ್ರಿಕೆ ನೀಡಲಾಗಿದೆ. ಸುದೀಪ್ ಅವರಿಗೂ ಆಹ್ವಾನ ನೀಡಲು ಭೇಟಿ ನೀಡಲಾಗಿದೆ” ಎಂದು ತಿಳಿಸಿದ್ದಾರೆ.

ಇನ್ನು, “ಈ ಫೋಟೋವನ್ನು ಆಧರಿಸಿ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಇದರಲ್ಲಿ ನಾರಾಯಣ ಗೌಡ ಮತ್ತು ಸುದೀಪ್ ಅವರ ವಿರೋಧಿಗಳ ಪಾತ್ರ ಇದೆ. ಇದು ಖಂಡನೀಯ” ಎಂದು ಧರ್ಮಣ್ಣ ಹೇಳಿದ್ದಾರೆ.

ಬಿಗ್ ಬಾಸ್ ಮನೆಯ ಆಟದ ವಿಚಾರಕ್ಕೆ ಬಂದ್ರೆ, ಈ ಬಾರಿ ಗಿಲ್ಲಿ ನಟ ಅವರ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಹಲವರು ಗಿಲ್ಲಿಯೇ ಟ್ರೋಫಿ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಜನವರಿ 17 ಮತ್ತು 18ರಂದು ನಡೆಯುವ ಗ್ರ್ಯಾಂಡ್ ಫಿನಾಲೆಗೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲ ಸ್ಪರ್ಧಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಯುತ್ತಿದ್ದು, ಗಿಲ್ಲಿಗೆ ಹೆಚ್ಚಿನ ಬೆಂಬಲ ಕಂಡುಬರುತ್ತಿದೆ.

ಬಿಗ್ ಬಾಸ್ ಮಾಜಿ ಸ್ಪರ್ಧಿಗೆ ಸಾಲಗಾರರ ಕಾಟ; ತಂಗಿ ವಿರುದ್ಧವೇ ದೂರು ಕೊಟ್ಟ ಖ್ಯಾತ ನಟಿ!

0

ಕನ್ನಡ ನಟಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಕಾರುಣ್ಯಾ ರಾಮ್ ಅವರು ತಮ್ಮ ಸ್ವಂತ ತಂಗಿ ಸಮೃದ್ಧಿ ರಾಮ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಕಾರುಣ್ಯಾ ಅವರು ಸಿಸಿಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಂಗಿ ಸಮೃದ್ಧಿ, ಪ್ರತಿಭಾ, ಕಪಿಲ್, ಪ್ರಜ್ವಲ್, ರಕ್ಷಿತ್ ಮತ್ತು ಸಾಗರ್ ಎಂಬವರ ವಿರುದ್ಧ ಆರೋಪ ಮಾಡಿದ್ದಾರೆ. ದೂರು ಪ್ರಕಾರ, ಸಮೃದ್ಧಿ ರಾಮ್ ಮೇಕಪ್ ಆರ್ಟಿಸ್ಟ್ ಆಗಿದ್ದು, ಬೆಟ್ಟಿಂಗ್ ಮೂಲಕ ಸುಮಾರು ₹25 ಲಕ್ಷ ಸಾಲ ಮಾಡಿಕೊಂಡಿದ್ದು, ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದು, ಖಾಸಗಿ ವ್ಯಕ್ತಿಗಳಿಂದ ಪಡೆದ ಸಾಲವನ್ನು ತೀರಿಸಲು ಮನೆಯ ಚಿನ್ನ ಮತ್ತು ಹಣವನ್ನು ವಂಚನೆ ಮಾಡಿದ್ದಾರೆ.

ಪರಿಣಾಮ, ಸಾಲಗಾರರು ಮನೆಗೆ ಬಂದು ಪೀಡಿಸುತ್ತಿದ್ದಾರೆ ಮತ್ತು ಹಣವನ್ನು ಬಳಸಿಕೊಂಡಿದ್ದ ವಿಚಾರವನ್ನು ಪ್ರಶ್ನಿಸಿದ್ದಕ್ಕಾಗಿ ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ. ಅಲ್ಲದೇ ವಾಟ್ಸಪ್‌ನಲ್ಲಿ ಅಶ್ಲೀಲ ಸಂದೇಶ, ಸಾಮಾಜಿಕ ಜಾಲತಾಣದಲ್ಲಿ ಹಾಕುವ ಫೋಟೋಗಳಿಗೆ ಕೆಟ್ಟದಾಗಿ ಕಾಮೆಂಟ್ ಮಾಡಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ NCR ದಾಖಲಾಗಿತ್ತು. ಈಗ ಕಾರುಣ್ಯ ರಾಮ್‌ ಸಹೋದರಿ ವಿರುದ್ಧ ಸಿಸಿಬಿಯಲ್ಲಿ ದೂರು ನೀಡಿದ್ದಾರೆ.

ಕುಂದಗೋಳದಲ್ಲಿ ಆಘಾತಕಾರಿ ಘಟನೆ; ಶಾಲಾ ಮಕ್ಕಳಿಂದಲೇ SSLC ವಿದ್ಯಾರ್ಥಿಯ ಬರ್ಬರ ಕೊಲೆ!

0

ಹುಬ್ಬಳ್ಳಿ:- ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಶಾಲೆಯಲ್ಲಿ ಹುಡುಗಾಟ ಆಡುವ ವಯಸ್ಸಿನ ಮಕ್ಕಳೇ ಸಹಪಾಠಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕುಂದಗೋಳ ಪಟ್ಟಣದ ನಿಂಗರಾಜ್ ಅವಾರಿ (16) ಕೊಲೆಯಾದ ಬಾಲಕ. ಕುಂದಗೋಳ ಪಟ್ಟಣದ ಅನುದಾನಿತ ಶಾಲೆಯಲ್ಲಿ ಎಸ್​​ಎಸ್​ಎಲ್​ಸಿ ಓದುತ್ತಿದ್ದ ಆತನನ್ನು ಅದೇ ಶಾಲೆಯ ಓರ್ವ ಬಾಲಕ ಸೇರಿದಂತೆ ಮೂವರು ಬಾಲಕರು ಸೇರಿ ಕೊಲೆ ಮಾಡಿದ್ದಾರೆ.

ಬಾಲಕನ ಕೊಲೆಗೆ ಕಾರಣವಾಗಿದ್ದು ಶಾಲೆಯಲ್ಲಿ ನಡೆದ ಕ್ಷುಲಕ ವಿಚಾರ ಎನ್ನಲಾಗಿದೆ. ನಿಂಗರಾಜ್ ಮತ್ತು ಆತನ ಕೆಲ‌ ಸ್ನೇಹಿತರಿಗೆ ಎರಡು ದಿನದ ಹಿಂದೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿತ್ತು. ಇದನ್ನೇ ದೊಡ್ಡದಾಗಿ ಮಾಡಿದ ಆತನ ಸಹಪಾಠಿಯೋರ್ವ ಎಸ್​​ಎಸ್​ಎಲ್​ಸಿ ಡ್ರಾಪ್ ಔಟ್ ಆಗಿದ್ದ ಇನ್ನಿಬ್ಬರು ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ಕೃತ್ಯ ಎಸಗಿದ್ದಾನೆ.

ಕೊಲೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕುಂದಗೋಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಬಾಲಕರನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ.

ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ: ಫೋನ್ ಸ್ವಿಚ್ ಆಫ್ ಮಾಡಿ ‘ಕೈ’ ನಾಯಕ ರಾಜೀವ್ ಗೌಡ ಪರಾರಿ!

0

ಚಿಕ್ಕಬಳ್ಳಾಪುರ:- ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತ ಗೌಡ ಅವರಿಗೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಜೀವ್ ಗೌಡ ವಿರುದ್ಧ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಮೃತ ಗೌಡ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ಶ್ರೀನಿವಾಸ ಗೌಡ ಅವರ ದೂರಿನ ಮೇರೆಗೆ ಬಿಎನ್‌ಎಸ್ ಸೆಕ್ಷನ್‌ಗಳು 132, 351(3), 56, 224, 352 ಮತ್ತು 353(2) ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ರಾಜೀವ್ ಗೌಡ ಎರಡು ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾರೆ.

ಅವರ ಬಂಧನಕ್ಕಾಗಿ ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ಅವರ ನಿರ್ದೇಶನದಂತೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಸಿಸಿಎನ್ ಪೊಲೀಸ್‌ಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹೃದಯಾಘಾತದಿಂದ ಕಾಗಿನೆಲೆ ಕನಕಗುರುಪೀಠದ ಸಿದ್ದರಾಮನಂದ ಸ್ವಾಮೀಜಿ ವಿಧಿವಶ!

0

ರಾಯಚೂರು: ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ಡ್ ಸಮೀಪದ ಕಾಗಿನೆಲೆ ಕನಕಗುರುಪೀಠದ ಪೀಠಾಧಿಪತಿ ಸಿದ್ದರಾಮನಂದ ಸ್ವಾಮೀಜಿ (50) ಅವರು ವಿಧಿವಶರಾಗಿದ್ದಾರೆ. ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಹೃದಯ ಸ್ತಂಭನದಿಂದ ಅಸ್ತಂಗತರಾಗಿದ್ದಾರೆ.

ಇತ್ತೀಚೆಗಷ್ಟೇ ಜ.12, 13 ಹಾಗೂ 14ರಂದು ಅದ್ದೂರಿಯಾಗಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮವನ್ನು ಸ್ವಾಮೀಜಿ ಯಶಸ್ವಿಯಾಗಿ ಆಯೋಜಿಸಿದ್ದರು. ಹಾಲುಮತ ಸಾಹಿತ್ಯ ಸಮ್ಮೇಳನ ಹಾಗೂ ಹಾಲುಮತ ಪೂಜಾರಿಗಳ ಶಿಬಿರ ಭಾರೀ ಜನಮನ್ನಣೆ ಪಡೆದಿತ್ತು. ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪವಿಲ್ಲದೆ ನಡೆದ ಈ ಕಾರ್ಯಕ್ರಮಕ್ಕೆ ವಿವಿಧ ವಲಯಗಳಿಂದ ಪ್ರಶಂಸೆ ವ್ಯಕ್ತವಾಗಿತ್ತು.

ಕಳೆದ ಒಂದು ವಾರದಿಂದ ನಿರಂತರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಸ್ವಾಮೀಜಿ ಸರಿಯಾಗಿ ಊಟ ಹಾಗೂ ನಿದ್ರೆ ಮಾಡಲಾಗದೆ ದೌರ್ಬಲ್ಯಕ್ಕೆ ಒಳಗಾಗಿದ್ದರು. ಬುಧವಾರ ರಾತ್ರಿ ಲೋ ಬಿಪಿಯಿಂದ ಬಳಲಿದ ಅವರನ್ನು ತಕ್ಷಣ ಲಿಂಗಸುಗೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ನಿಧನರಾಗಿದ್ದಾರೆ. ಸಿದ್ದರಾಮನಂದ ಸ್ವಾಮೀಜಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿಯವರು. ಮಹದೇವಯ್ಯ–ಜಯಮ್ಮ ದಂಪತಿಯ ಎರಡನೇ ಪುತ್ರರಾಗಿದ್ದ ಅವರ ಮೂಲ ಹೆಸರು ಮೋಹನ್ ಪ್ರದಾನ. 18ನೇ ವಯಸ್ಸಿನಲ್ಲಿ ಮನೆ ತೊರೆದ ಅವರು ಜೈನ, ಕ್ರೈಸ್ತ ಹಾಗೂ ಬ್ರಹ್ಮಕುಮಾರಿ ಪಂಥಗಳ ಪ್ರಭಾವಕ್ಕೂ ಒಳಗಾಗಿದ್ದರು.

ಶರಣ ಸಾಹಿತ್ಯದ ಜೊತೆಗೆ ವಿವಿಧ ಧರ್ಮಗಳ ಅಧ್ಯಯನ ನಡೆಸಿದ ಸ್ವಾಮೀಜಿ ಚಿತ್ರದುರ್ಗದ ಮುರುಘಾಮಠದಲ್ಲಿ ಕೆಲಕಾಲ ವಿದ್ಯಾಭ್ಯಾಸ ಮಾಡಿದ ಬಳಿಕ ನಾಲ್ಕು ವರ್ಷಗಳ ಕಾಲ ಸಿಂಧನೂರಿನಲ್ಲಿ ಸ್ವಾಮೀಜಿಯಾಗಿ ವಾಸ್ತವ್ಯ ಮಾಡಿದರು. ನಂತರ 2011ರಲ್ಲಿ ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ಡ್ ಬಳಿ ಕಾಗಿನೆಲೆ ಕನಕಗುರುಪೀಠವನ್ನು ಸ್ಥಾಪಿಸಿದರು.

ಕಲಬುರಗಿ ವಿಭಾಗದಾದ್ಯಂತ ಕನಕಗುರುಪೀಠಗಳ ಸ್ಥಾಪನೆಗೆ ಕಾರಣರಾಗಿದ್ದ ಅವರು ಪ್ರತಿ ವರ್ಷ ಜನವರಿ 12, 13, 14ರಂದು ಹಾಲುಮತ ಸಂಸ್ಕೃತಿ ವೈಭವವನ್ನು ಆಯೋಜಿಸುತ್ತಿದ್ದರು. ಶಾಲಾ ಮಕ್ಕಳಿಗೆ ಉಚಿತ ದಾಸೋಹ, ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ರಕ್ತದಾನ ಶಿಬಿರಗಳ ಮೂಲಕ ಸಮಾಜಸೇವೆಗೆ ಮಹತ್ವದ ಕೊಡುಗೆ ನೀಡಿದ್ದರು. ಜೊತೆಗೆ ಸಾಹಿತ್ಯ ಹಾಗೂ ಸಮಾಜಸೇವೆಯಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಭಾಸ್ಕರ, ಕನಕರತ್ನ ಹಾಗೂ ಸಿದ್ಧಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿದ್ದರು. ಸ್ವಾಮೀಜಿಗಳ ನಿಧನದಿಂದ ಹಾಲುಮತ ಸಮುದಾಯ ಹಾಗೂ ಅಪಾರ ಶಿಷ್ಯವೃಂದದಲ್ಲಿ ತೀವ್ರ ಶೋಕದ ಛಾಯೆ ಆವರಿಸಿದೆ.

ಗಿಲ್ಲಿಗೆ ನನ್ನ ಗಂಡ ಅಥವಾ ಬಾಯ್‌ಫ್ರೆಂಡ್ ಆಗುವ ಅರ್ಹತೆ ಇಲ್ಲ ಎಂದ ರಕ್ಷಿತಾ

ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ವಾರಕ್ಕೆ ಕಾಲಿಟ್ಟಿದ್ದು, ಈಗಾಗಲೇ ಏಳು ಮಂದಿ ಸ್ಪರ್ಧಿಗಳು ಉಳಿದಿದ್ದಾರೆ. ಬುಧವಾರ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದ್ದು, ಮನೆಯೊಳಗಿನ ಪ್ರತಿ ಬೆಳವಣಿಗೆಗೂ ಪ್ರೇಕ್ಷಕರು ಹೆಚ್ಚಿನ ಗಮನ ನೀಡುತ್ತಿದ್ದಾರೆ. ಗಿಲ್ಲಿಯ ಕಾಮಿಡಿ ಮತ್ತು ವರ್ತನೆ ಪ್ರೇಕ್ಷಕರಿಗೆ ವಿಶೇಷವಾಗಿ ಇಷ್ಟವಾಗಿದ್ದು, ಅವರು ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.

ಈ ಸೀಸನ್‌ನಲ್ಲಿ ಸಹ ಬಿಗ್ ಬಾಸ್ ಮನೆಯಲ್ಲಿ ಹಲವು ಜೋಡಿಗಳು ರೂಪುಗೊಂಡಿವೆ. ಅದರಲ್ಲಿ ಗಿಲ್ಲಿ ಮತ್ತು ಕಾವ್ಯಾ ಜೋಡಿ ಅತ್ಯಂತ ಜನಪ್ರಿಯವಾಗಿದೆ. ಆದರೆ ಇತ್ತೀಚೆಗೆ ರಕ್ಷಿತಾ ಕೂಡ ಗಿಲ್ಲಿ ಜೊತೆ ಹೆಚ್ಚು ಸಮಯ ಕಳೆಯುತ್ತಿರುವುದು ಪ್ರೇಕ್ಷಕರ ಗಮನ ಸೆಳೆದಿದೆ. ಗಿಲ್ಲಿ, ಕಾವ್ಯಾ ಅಥವಾ ಮುಂಚೆ ಸ್ಪಂದನಾ ಜೊತೆ ಮಾತನಾಡಿದಾಗ ರಕ್ಷಿತಾ ಬೇಜಾರು ಮಾಡಿಕೊಳ್ಳುತ್ತಿದ್ದ ಘಟನೆಗಳು ಕಂಡುಬಂದಿವೆ. ಕೆಲ ಸಂದರ್ಭಗಳಲ್ಲಿ ಗಿಲ್ಲಿ ಜೊತೆ ತಾವೊಬ್ಬರೇ ಕುಳಿತುಕೊಳ್ಳಲು ಇತರ ಬೀನ್ ಬ್ಯಾಗ್‌ಗಳನ್ನು ತೆಗೆದು ಹಾಕಿದ ಘಟನೆಯೂ ನಡೆದಿದೆ.

ಒಮ್ಮೆ ರಕ್ಷಿತಾ “ಗಿಲ್ಲಿಯಂಥ ಬಾಯ್‌ಫ್ರೆಂಡ್ ಬೇಕು” ಎಂದು ಹೇಳಿದ್ದರು. ಈ ವಿಚಾರ ವೀಕೆಂಡ್ ಎಪಿಸೋಡ್‌ನಲ್ಲಿ ಚರ್ಚೆಗೆ ಒಳಪಟ್ಟ ಬಳಿಕ, ರಕ್ಷಿತಾರ ನಿಲುವಿನಲ್ಲಿ ಬದಲಾವಣೆ ಕಂಡುಬಂದಿದೆ.

ಗಿಲ್ಲಿ ಖಾಲಿ ಸಮಯದಲ್ಲಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಸಿನಿಮಾ ಕತೆ ಹೇಳುವುದು ಅಭ್ಯಾಸ. ಇತ್ತೀಚೆಗೆ ತಮ್ಮ ಹಾಗೂ ಕಾವ್ಯಾರ ಕಥೆಯನ್ನು ಕತೆಯ ರೂಪದಲ್ಲಿ ಹೇಳುವಾಗ, ರಕ್ಷಿತಾರ ವಿಷಯವನ್ನೂ ಸೇರಿಸಿ, ‘ರಕ್ಷಿತಾ ನನ್ನನ್ನು ಇಷ್ಟಪಡುತ್ತಾರೆ’ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ರಕ್ಷಿತಾ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, “ನನಗೆ ಗಿಲ್ಲಿ ಇಷ್ಟವಿಲ್ಲ. ನನ್ನ ಗಂಡ ಅಥವಾ ಬಾಯ್‌ಫ್ರೆಂಡ್ ಆಗುವ ಅರ್ಹತೆ ಅವರಿಗೆ ಇಲ್ಲ. ನಾನು ಜೀವನ ಸಂಗಾತಿಯಲ್ಲಿ ಹುಡುಕುವ ಗುಣಗಳು ಗಿಲ್ಲಿಯ ಬಳಿ ಇಲ್ಲ” ಎಂದು ಹೇಳಿದ್ದಾರೆ.

ನಂತರ ಕಾವ್ಯಾ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಕ್ಷಿತಾ, “ಗಿಲ್ಲಿಯ ಕೆಲ ಗುಣಗಳು ಇಷ್ಟವಾದರೂ, ಅವರ ಕೆಲವು ಸ್ವಭಾವ ನನಗೆ ಒಪ್ಪುತ್ತಿಲ್ಲ. ಅವುಗಳನ್ನು ಬದಲಾಯಿಸಿಕೊಳ್ಳಿ ಎಂದು ನಾನು ಹೇಳಿದ್ದೇನೆ. ಗಿಲ್ಲಿ ಬಗ್ಗೆ ಕೆಲ ಕಂಪ್ಲೇಂಟ್‌ಗಳೂ ನನಗೆ ಇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಫಿನಾಲೆ ಹಂತದಲ್ಲಿರುವ ಬಿಗ್ ಬಾಸ್ ಮನೆಯಲ್ಲಿ ಸಂಬಂಧಗಳ ಈ ಬದಲಾವಣೆ ಇದೀಗ ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.


ಬೇಗೂರಿನ ಬಳಿ ಅಗ್ನಿ ದುರಂತ; ತಪ್ಪಿದ ಭಾರೀ ಅನಾಹುತ!

0

ಬೆಂಗಳೂರು :- ರಾಜಧಾನಿ ಬೆಂಗಳೂರಿನ ಬೇಗೂರಿನ ಬಳಿ ಅಗ್ನಿ ಅವಘಡ ಸಂಭವಿಸಿದೆ.

ಪ್ಲಾಸ್ಟಿಕ್ ವೇಸ್ಟೇಜ್ ಗಳನ್ನ ಡಂಪ್ ಮಾಡಿದ್ದ ಬೇಗೂರಿನ ಡಂಪಿಂಗ್ ಯಾರ್ಡ್ ನಲ್ಲಿ ಬೆಳಗಿನ ಜಾವ 5 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆ ಬೆನ್ನಲ್ಲೇ ಸುಮಾರು ನಾಲ್ಕು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.

ಅದೃಷ್ಟಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ಹೊತ್ತಿಕೊಂಡ ಕಾರಣದ ಬಗ್ಗೆ ಸಿಬ್ಬಂದಿಗಳು ಕೂಡ ಪರಿಶೀಲನೆ ಮಾಡುತ್ತಿದ್ದಾರೆ.

error: Content is protected !!