ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಭಾರತ ಔಷಧ ವ್ಯಾಪಾರಸ್ಥರ ಸಂಘದ ಕರೆ ಮೇರೆಗೆ ಮೇ 20ರಂದು ಜಿಲ್ಲೆಯಾದ್ಯಂತ ಔಷಧ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಜಿಲ್ಲಾ ಔಷಧ ವ್ಯಾಪಾರಸ್ಥರ ಮುಖಂಡ ರಾಮನಗೌಡ ದಾನಪ್ಪಗೌಡ್ರ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಹಾಗೂ ರಾಜ್ಯ ಮಟ್ಟದಲ್ಲಿ ಹೋಲ್ಸೇಲ್ ಮತ್ತು ರಿಟೇಲ್ ಔಷಧ ವ್ಯಾಪಾರಸ್ಥರು ಬಂದ್ಗೆ ಬೆಂಬಲ ಸೂಚಿಸಿದ್ದು, ಗದಗ ಜಿಲ್ಲೆಯಲ್ಲಿಯೂ ಸುಮಾರು 480ಕ್ಕೂ ಹೆಚ್ಚು ಔಷಧ ಅಂಗಡಿಗಳು ಸಂಪೂರ್ಣ ಬಂದ್ ಆಗಲಿವೆ ಎಂದರು.
ಸಣ್ಣ ಹಳ್ಳಿಗಳಲ್ಲಿಯೂ ವೈದ್ಯರು ಹಾಗೂ ಆಸ್ಪತ್ರೆಗಳ ಸೌಲಭ್ಯ ಕೊರತೆಯಿರುವ ಸಂದರ್ಭಗಳಲ್ಲಿ ಔಷಧ ವ್ಯಾಪಾರಸ್ಥರು ಸಾರ್ವಜನಿಕರಿಗೆ ಅಗತ್ಯ ಔಷಧಿಗಳನ್ನು ಪೂರೈಸುತ್ತಿದ್ದಾರೆ. ಆದರೆ ಜಿ.ಎಸ್.ಆರ್. ಆನ್ಲೈನ್ ವ್ಯವಸ್ಥೆಯ ಮೂಲಕ ಮನೆ ಬಾಗಿಲಿಗೆ ಔಷಧ ವಿತರಣೆ ಮಾಡುವ ಕ್ರಮದಿಂದ ಸಾಂಪ್ರದಾಯಿಕ ಔಷಧ ವ್ಯಾಪಾರಕ್ಕೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದರು.
ಇ-ಕಾಮರ್ಸ್ ವ್ಯವಸ್ಥೆಯಲ್ಲಿ ಚೈನ್ ಸಿಸ್ಟಮ್ ದುರ್ಬಳಕೆ ಆಗುತ್ತಿದ್ದು, ನಕಲಿ ಹಾಗೂ ಗುಣಮಟ್ಟವಿಲ್ಲದ ಔಷಧಗಳ ಮಾರಾಟ ನಡೆಯುತ್ತಿದೆ. ನಾರ್ಕೋಟಿಕ್ಸ್ ಹಾಗೂ ಆಂಟಿಬಯೋಟಿಕ್ ಔಷಧಗಳ ಮಾರಾಟಕ್ಕೂ ಸೂಕ್ತ ನಿಯಂತ್ರಣ ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಡ್ರಗ್ ಕಂಟ್ರೋಲ್ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಕೆಲವು ಆನ್ಲೈನ್ ಸಂಸ್ಥೆಗಳು ವೈದ್ಯರ ಚೀಟಿ ಇಲ್ಲದೆ ಔಷಧ ವಿತರಣೆ ಮಾಡುತ್ತಿವೆ. ಕೆಲವೆಡೆ ವೈದ್ಯರ ಚೀಟಿಯನ್ನು ನಕಲಿ ಸೃಷ್ಟಿಸಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ ಎಂದು ಆರೋಪಿಸಿದರು.
ಮೆಡ್ ಪ್ಲಸ್, ಅಪೋಲೊ ಹಾಗೂ ಐಎಂಎ ಸಂಘಟನೆಗಳು ಕೂಡ ಬಂದ್ಗೆ ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.
ಸಾರ್ವಜನಿಕರಿಗೆ ತೊಂದರೆ ಆಗದಂತೆ ತುರ್ತು ಸೇವೆಗಾಗಿ 8867757396, 9448746476 ಹಾಗೂ 9480296041 ಸಂಪರ್ಕ ಸಂಖ್ಯೆಗಳನ್ನು ನೀಡಲಾಗಿದೆ. ಅಗತ್ಯ ಸಂದರ್ಭಗಳಲ್ಲಿ ಈ ಸಂಖ್ಯೆಗಳಿಗೆ ಕರೆ ಮಾಡುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಭು ಕಾಬಳೆ, ರಮಜಾನಸಾಬ ನದಾಫ್, ಶಿವಯೋಗಿ, ಸದಾನಂದ ಹಾಗೂ ಜಗದೀಶ ಹಿರೇಮಠ ಉಪಸ್ಥಿತರಿದ್ದರು.
ಕೋಟ್
“ಆನ್ಲೈನ್ ಔಷಧ ವಿತರಣೆಯಿಂದ ಸಾಂಪ್ರದಾಯಿಕ ಔಷಧ ವ್ಯಾಪಾರಕ್ಕೆ ದೊಡ್ಡ ಹೊಡೆತ ಬೀಳುತ್ತಿದೆ.”
— ರಾಮನಗೌಡ ದಾನಪ್ಪಗೌಡ್ರ, ಜಿಲ್ಲಾ ಔಷಧ ವ್ಯಾಪಾರಸ್ಥರ ಮುಖಂಡ

