Home Blog Page 24

ಗ್ರಾ.ಪಂ.ಸದಸ್ಯರು ಅಧಿಕಾರ ಸ್ವೀಕರಿಸಿದ 15 ತಿಂಗಳ ಬಳಿಕ ಅವಿಶ್ವಾಸ ನಿರ್ಣಯಕ್ಕೆ ಅಡ್ಡಿಯಿಲ್ಲ: ಹೈಕೋರ್ಟ್

0

ಬೆಂಗಳೂರು: ಗ್ರಾಮ ಪಂಚಾಯತ್ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ದಿನಾಂಕದಿಂದ ಮೊದಲ 15 ತಿಂಗಳ ಅವಧಿಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿಲ್ಲ. ಆದರೆ, 15 ತಿಂಗಳ ಬಳಿಕ ಯಾವುದೇ ಸಮಯದಲ್ಲಾದರೂ ಅವಿಶ್ವಾಸ ನಿರ್ಣಯ ಮಂಡಿಸಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಚಲ್ಡಿಗಾನಹಳ್ಳಿಯ ಗ್ರಾಮಪಂಚಾಯತ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಸದಸ್ಯರ ಮನವಿಯ ಮೇರೆಗೆ ಕೋಲಾರ ಉಪವಿಭಾಗಾಧಿಕಾರಿ ಸಭೆಗೆ ದಿನಾಂಕ ನಿಗದಿ ಮಾಡಿದ್ದರು. ಈ ಕ್ರಮ ಪ್ರಶ್ನಿಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಎನ್. ಶ್ರೀನಿವಾಸ್ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಪೀಠ ವಿಚಾರಣೆ ನಡೆಸಿ, ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

ಪೀಠ ಹೇಳುವಂತೆ, ಗ್ರಾಮ ಪಂಚಾಯತ್ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ನಂತರದ ಆರಂಭಿಕ 15 ತಿಂಗಳ ಅವಧಿಯಲ್ಲಿ ಮಾತ್ರ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಬಂಧವಿದೆ. ಅದರ ನಂತರ ಯಾವುದೇ ಸಂದರ್ಭದಲ್ಲಿ ನಿರ್ಣಯ ಮಂಡಿಸಬಹುದು.

ಅರ್ಜಿದಾರರ ಪರ ವಕೀಲರು, ಅಧ್ಯಕ್ಷರ ಅವಧಿಯ ಕೊನೆಯ ಹಂತದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಸದಸ್ಯರು ಮುಂದಾಗಿರುವುದು ಸರಿಯಲ್ಲ ಎಂದು ವಾದ ಮಂಡಿಸಿದ್ದರು. ಆದರೆ, 15 ತಿಂಗಳ ಬಳಿಕ ಯಾವಾಗ ಬೇಕಾದರೂ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿದೆ ಎಂಬುದರಿಂದ ಆ ವಾದವನ್ನು ಪೀಠ ತಳ್ಳಿ ಹಾಕಿದೆ. ಅವಧಿಯ ಅಂತ್ಯದ ವೇಳೆಯಲ್ಲಿ ಅವಿಶ್ವಾಸ ಮಂಡಿಸಲು ಅವಕಾಶ ನೀಡುವುದರಿಂದ ಅಧಿಕಾರ ದುರುಪಯೋಗವಾಗುತ್ತದೆ ಎಂದು ಹೇಳಲಾಗುವುದಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದೇ ವೇಳೆ, ಉಪವಿಭಾಗಾಧಿಕಾರಿಗಳು ಸಭೆ ನಡೆಸಲು ದಿನಾಂಕ ನಿಗದಿ ಮಾಡಿರುವುದರಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಹಣಕಾಸಿನ ಅವ್ಯವಹಾರ ಆರೋಪಗಳಿಗೆ ಸಂಬಂಧಿಸಿದಂತೆ ಸೂಕ್ತ ಪ್ರಾಧಿಕಾರ ಪರಿಶೀಲನೆ ನಡೆಸಬೇಕು. ಆದೇಶದ ಪ್ರತಿ ಸಿಕ್ಕ ಏಳು ದಿನಗಳೊಳಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯತ್‌ಗೆ ನಿರ್ದೇಶನ ನೀಡಲಾಗಿದೆ.

ಗದಗದಲ್ಲಿ ಆಕಸ್ಮಿಕ ಬೆಂಕಿ ಅವಘಡ: ಲಕ್ಷಾಂತರ ಮೌಲ್ಯದ ಪ್ಲಾಸ್ಟಿಕ್ ಪೈಪ್ ಸುಟ್ಟು ಭಸ್ಮ!

0

ಗದಗ: ನಗರದ ಶಿವಬಸವ ನಗರದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕೇಬಲ್ ಲೈನ್‌ಗಳಿಗೆ ಬಳಸುವ ಪ್ಲಾಸ್ಟಿಕ್ ಪೈಪ್‌ಗಳು ಹೊತ್ತಿ ಉರಿದು ಭಸ್ಮವಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಪೈಪ್‌ಗಳು ಬೆಂಕಿಗೆ ಆಹುತಿಯಾಗಿದ್ದು, ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿತ್ತು.

ಬೆಂಕಿಯಿಂದ ಉಂಟಾದ ಕಪ್ಪು ದಟ್ಟ ಹೊಗೆ ಸುತ್ತಮುತ್ತಲಿನ ಬಡಾವಣೆ ಪ್ರದೇಶವನ್ನು ಆವರಿಸಿದ್ದು, ಸ್ಥಳೀಯರು ಭಯಭೀತರಾಗಿದ್ದರು. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು.

ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವೆಂದು ತಿಳಿದು ಬಂದಿದೆ. ಆದರೆ ಪೈಪ್‌ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ನಷ್ಟದ ಪ್ರಮಾಣ ಲಕ್ಷಾಂತರ ರೂಪಾಯಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ.

ಈ ಘಟನೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬೆಂಕಿ ಕಾಣಿಸಿಕೊಂಡ ಕಾರಣ ಕುರಿತು ತನಿಖೆ ಮುಂದುವರೆದಿದೆ.

ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಯಲ್ಲೇ 241 ಗ್ರಾಂ ಚಿನ್ನ ಕಳ್ಳತನ: ಆರೋಪಿಯ ಬಂಧನ

0

ಬೆಂಗಳೂರು: ಮನೆ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲಿದ್ದ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಯುವಕನೊಬ್ಬ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ದೋಚಿದ ಘಟನೆ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮನೆಯ ಮಾಲೀಕರು ಕೆಲಸದ ಮಹಿಳೆಯ ಮೇಲೆ ಅಪಾರ ವಿಶ್ವಾಸ ಇಟ್ಟು ಮನೆಯ ಕೀಲಿಯನ್ನು ಆಕೆಯ ಬಳಿಯೇ ಇಡುತ್ತಿದ್ದರು. ಈ ಮಹಿಳೆಯ ಜೊತೆ ಆಕೆಯ ತಂಗಿಯ ಮಗ ಸಹ ಆಗಾಗ್ಗೆ ಮನೆಗೆ ಬರುತ್ತಿದ್ದನು. ಇದೇ ಸಂದರ್ಭವನ್ನು ಸದುಪಯೋಗಪಡಿಸಿಕೊಂಡ ಯುವಕ, ದೊಡ್ಡಮ್ಮನ ಬಳಿಯಿದ್ದ ಮನೆಯ ಕೀಲಿಯನ್ನು ಚಾಲಾಕಿತನದಿಂದ ಪಡೆದುಕೊಂಡಿದ್ದಾನೆ.

ಮಾಲೀಕರು ಇಲ್ಲದ ಸಮಯ ನೋಡಿಕೊಂಡು ಮನೆಗೆ ನುಗ್ಗಿದ ಆತ, ಕಪಾಟಿನಲ್ಲಿ ಇಡಲಾಗಿದ್ದ 241 ಗ್ರಾಂ ಚಿನ್ನಾಭರಣ, 2.8 ಕೆಜಿ ಬೆಳ್ಳಿ ಮತ್ತು 1.3 ಲಕ್ಷ ರೂಪಾಯಿ ನಗದು ಕಳವು ಮಾಡಿದ್ದಾನೆ.

ಕಳ್ಳತನದ ಬಗ್ಗೆ ಮನೆಯಲ್ಲಿ ತಿಳಿದುಬಂದ ತಕ್ಷಣ ದೂರು ದಾಖಲಾಗಿದ್ದು, ತನಿಖೆ ಕೈಗೆತ್ತಿಕೊಂಡ ಬಸವನಗುಡಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳುವಾದ ಸಂಪೂರ್ಣ ಚಿನ್ನ, ಬೆಳ್ಳಿ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸಿರುವ ಬಸವನಗುಡಿ ಪೊಲೀಸರು ಶ್ಲಾಘನೆಗೆ ಪಾತ್ರರಾಗಿದ್ದಾರೆ. ಯಾವುದೇ ವ್ಯಕ್ತಿ ಎಷ್ಟೇ ನಂಬಿಕಸ್ಥನಾಗಿದ್ದರೂ ಮನೆಯ ಕೀಲಿಗಳನ್ನು ಅವರ ಬಳಿ ಬಿಟ್ಟು ಹೋಗುವುದು ಅಪಾಯಕಾರಿಯಾಗಿದೆ ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಕೃಷಿ ಹೊಂಡದಲ್ಲಿ ಬಾಲಕಿ ಶವ… ಪೊಲೀಸರಿಗೆ ಮಾಹಿತಿ ಇಲ್ಲದೇ ಜಿಲ್ಲೆ ದಾಟಿದ ಮೃತದೇಹ!

0

ಚಿಕ್ಕಬಳ್ಳಾಪುರ: ಜಿಲ್ಲೆಯ 17 ವರ್ಷದ ಬಾಲಕಿ ಕಲ್ಯಾಣಿಯ ನಿಗೂಢ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗಿಡ್ನಹಳ್ಳಿ ಗ್ರಾಮದಲ್ಲಿ ದೊಡ್ಡಪ್ಪ-ದೊಡ್ಡಮ್ಮನ ಮನೆಯಲ್ಲಿ ಬೆಳೆದಿದ್ದ ಕಲ್ಯಾಣಿ, ಇಂದು ಬೆಳಿಗ್ಗೆ ಗ್ರಾಮದ ತೋಟವೊಂದರ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಆದರೆ ಪ್ರಕರಣ ಗಂಭೀರ ತಿರುವು ಪಡೆದಿದ್ದು, ಬಾಲಕಿ ಸಾವನ್ನಪ್ಪಿದ ಬಳಿಕ ಪೋಷಕರು ಮತ್ತು ಸಂಬಂಧಿಕರು ಸ್ಥಳೀಯ ನಂದಗುಡಿ ಪೊಲೀಸರಿಗೆ ಮಾಹಿತಿ ನೀಡದೆ ಶವವನ್ನು ನೇರವಾಗಿ ಚಿಕ್ಕಬಳ್ಳಾಪುರ ತಾಲೂಕಿನ ಈತಮಾಕಲಹಳ್ಳಿ ಗ್ರಾಮಕ್ಕೆ ಸಾಗಿಸಿರುವುದು.

ಇನ್ನೇನು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದ್ದಾಗ, ವಿಷಯ ತಿಳಿದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಸ್ಕಾರವನ್ನು ತಡೆದಿದ್ದಾರೆ. ಶವವನ್ನು ವಾಪಸ್ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಂಡಿದ್ದಾರೆ.

ಮೃತಳ ದೊಡ್ಡಮ್ಮ ಮುನಿರತ್ನಮ್ಮ, “ಆಕಸ್ಮಿಕವಾಗಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾಳೆ. ಸಾವಿನ ಹಿಂದೆ ಯಾವುದೇ ಅನುಮಾನ ಇಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಯಾವುದೇ ಅಸಹಜ ಸಾವು ಸಂಭವಿಸಿದಾಗ ಪೊಲೀಸರಿಗೆ ಮಾಹಿತಿ ನೀಡುವುದು ಕಡ್ಡಾಯವಾಗಿರುವ ಹಿನ್ನೆಲೆ, ಶವವನ್ನು ತಿಳಿಸದೆ ಸಾಗಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇದು ಆಕಸ್ಮಿಕ ಸಾವೋ? ಆತ್ಮಹತ್ಯೆಯೋ? ಸಾವಿನ ಹಿಂದೆ ಪ್ರಚೋದನೆ ಅಥವಾ ಇತರ ಕಾರಣಗಳಿವೆಯೇ? ಎಂಬ ಕೋನಗಳಲ್ಲಿ ತನಿಖೆ ನಡೆಯುತ್ತಿದೆ. ಚಿಕ್ಕಬಳ್ಳಾಪುರ ಮತ್ತು ನಂದಗುಡಿ ಪೊಲೀಸರು ಜಂಟಿಯಾಗಿ ಪ್ರಕರಣದ ಸುತ್ತಮುತ್ತಲಿನ ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ.

ಕಲ್ಯಾಣಿಯನ್ನು ದೊಡ್ಡಪ್ಪ-ದೊಡ್ಡಮ್ಮ ದತ್ತು ಪಡೆದಿದ್ದು, ಅವರಿಗೆ ಸ್ವಂತ ಮಕ್ಕಳಿರಲಿಲ್ಲ ಎನ್ನಲಾಗಿದೆ. ಇದೀಗ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಸಾವಿನ ನಿಖರ ಕಾರಣ ಬಹಿರಂಗವಾಗಲಿದೆ.

‘ಪತ್ರಿಕೋದ್ಯಮದ ತಪಸ್ವಿ’ ಪಿ. ರಾಮಯ್ಯ ನಿಧನ – ಹೆಚ್‌ಡಿಡಿ, ಸಿದ್ರಾಮಯ್ಯ ಸೇರಿ ಗಣ್ಯರಿಂದ ಸಂತಾಪ

0

ಬೆಂಗಳೂರು: ಹಿರಿಯ ಪತ್ರಕರ್ತರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಪಿ. ರಾಮಯ್ಯ (93) ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರಾತ್ರಿ 9 ಗಂಟೆಗೆ ಅವರು ಅಸುನೀಗಿದ್ದಾರೆ ಎಂದು ಪುತ್ರ ಡಾ. ಬಾಲಜಿ ತಿಳಿಸಿದ್ದಾರೆ.

1933ರ ಸೆಪ್ಟೆಂಬರ್ 12ರಂದು ಜನಿಸಿದ ರಾಮಯ್ಯ ಅವರು ಕನ್ನಡನಾಡಿನ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದವರಾಗಿದ್ದರು. ಸುಮಾರು ಐದು ದಶಕಗಳ ಕಾಲ ‘ದಿ ಹಿಂದೂ’ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, 45 ವರ್ಷಗಳ ಕಾಲ ಬ್ಯೂರೋ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿದ್ದರು. ಸತ್ಯನಿಷ್ಠೆ ಮತ್ತು ಪ್ರಾಮಾಣಿಕತೆಗೆ ಬದ್ಧರಾಗಿದ್ದ ಅವರಿಗೆ ‘ಹಿಂದೂ ರಾಮಯ್ಯ’ ಎಂಬ ಗುರುತೂ ಸಿಕ್ಕಿತ್ತು.

ವಿಧಾನ ಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಅವರು, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿನ ತಮ್ಮ ವಿಶಾಲ ಸಂಪರ್ಕಗಳನ್ನು ಸಾರ್ವಜನಿಕ ಹಿತಕ್ಕಾಗಿ ಬಳಸಿಕೊಂಡಿದ್ದರು. ಅವರ ಅನುಭವಕಥನ “ನಾನು ಹಿಂದೂ ರಾಮಯ್ಯ” ಕೃತಿ, ಪತ್ರಿಕೋದ್ಯಮದ ಮೇಲಿನ ಅವರ ತಪಸ್ಸಿನ ಪ್ರತಿಬಿಂಬವಾಗಿದೆ.

ಅವರ ಅಗಲಿಕೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಆದಿಚುಂಚನಗಿರಿ ಮಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಹಾಗೂ ಕೆಂಪೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದ ರಾಮಯ್ಯ ಅವರು ಪತ್ರಿಕಾ ಅಕಾಡೆಮಿ ಮತ್ತು ವಿವಿಧ ಪತ್ರಕರ್ತ ಕಲ್ಯಾಣ ಸಮಿತಿಗಳಲ್ಲೂ ಸಕ್ರಿಯರಾಗಿದ್ದರು.

ಅವರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವಿದ್ದಾರೆ. ಪಾರ್ಥಿವ ಶರೀರವನ್ನು ಬುಧವಾರ ಬೆಳಗ್ಗೆ 9 ಗಂಟೆಯಿಂದ ಸದಾಶಿವನಗರದ 295/12/1, 7ನೇ ಮೇನ್, 16ನೇ ಕ್ರಾಸ್ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ಸೋದರಳಿಯ ಹಾಗೂ ಬಾಹ್ಯಾಕಾಶ-ರಕ್ಷಣಾ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ತಿಳಿಸಿದ್ದಾರೆ.

 ಆರಂಭಿಕ ಬ್ಯಾಟ್ಸ್‌ ಮನ್ ಅಭಿಷೇಕ್ ಶರ್ಮಾ ಹೊಟ್ಟೆ ಸೋಂಕಿನಿಂದ ಆಸ್ಪತ್ರೆಗೆ ದಾಖಲು!

0

ಭಾರತದ ಕ್ರಿಕೆಟ್ ತಂಡದ ಸ್ಪೆಷಲ್ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಶರ್ಮಾ, ನಾಳೆ (ಫೆ.12) ನಡೆಯಲಿರುವ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಭಾಗವಹಿಸುವುದು ಸದ್ಯ ಅನುಮಾನದಲ್ಲಿದೆ.

ಯುಎಸ್ಎ ವಿರುದ್ಧದ ಪಂದ್ಯಾನಂತರ ಭಾರತ ತಂಡದ ಆಟಗಾರರು ದೆಹಲಿಗೆ ಆಗಮಿಸಿದ್ದರು. ದೆಹಲಿಯ ತಮ್ಮ ನಿವಾಸದಲ್ಲಿ ತಂಡದ ಕೋಚ್ ಗೌತಮ್ ಗಂಭೀರ್ ಭೋಜನ ಕೂಟವನ್ನು ಆಯೋಜಿಸಿದ್ದರು. ಆ ದಿನದ ಭೋಜನಾವಧಿಯಲ್ಲಿ ಅಭಿಷೇಕ್ ಶರ್ಮಾ ಅವರ ಆರೋಗ್ಯ ಹದಗೆಟ್ಟಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶರ್ಮಾ ಹೊಟ್ಟೆಯ ಸೋಂಕಿನಿಂದ ಬಳಲುತ್ತಿದ್ದುದರಿಂದ, ಮಂಗಳವಾರವರೆಗೆ ಅವರನ್ನು ಆಸ್ಪತ್ರೆಯಲ್ಲೇ ಇರಿಸಲು ಶಿಫಾರಸು ಮಾಡಲಾಗಿದೆ. ಈ ಕಾರಣದಿಂದ ಗುರುವಾರ ನಡೆಯಲಿರುವ ನಮೀಬಿಯಾ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ಶಕ್ತಿಯಿಲ್ಲವೆಂದು ತಜ್ಞರು ಸೂಚಿಸುತ್ತಿದ್ದಾರೆ.

ಅಭಿಷೇಕ್ ಶರ್ಮಾ ಪೂರೈಸದಿದ್ದರೆ, ಅವರ ಬದಲಿಗೆ ಸಂಜು ಸ್ಯಾಮ್ಸನ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಶರ್ಮಾ ಮತ್ತು ಸ್ಯಾಮ್ಸನ್ ಇಬ್ಬರೂ ಓಪನರ್ ಆಗಿ ಇನಿಂಗ್ಸ್ ಆರಂಭಿಸುತ್ತಿದ್ದರು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸಾಧಾರಣ ಬ್ಯಾಟಿಂಗ್ ಪ್ರದರ್ಶನದ ಕಾರಣ, ಸ್ಯಾಮ್ಸನ್ ಹಿಂಬಾಲಿಯಾಗಿ ಇಶಾನ್ ಕಿಶನ್ ಆರಂಭಿಕ ಸ್ಥಾನ ಪಡೆದಿದ್ದರು.

ನಮೀಬಿಯಾ ವಿರುದ್ಧದ ಪಂದ್ಯಾನಂತರ ಭಾರತ ತಂಡವು ಪಾಕಿಸ್ತಾನ್ ಮತ್ತು ನೆದರ್‌ಲೆಂಡ್ಸ್ ವಿರುದ್ಧದ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಅಭಿಷೇಕ್ ಶರ್ಮಾ ಸಂಪೂರ್ಣ ಫಿಟ್‌ನೆಸ್ನೊಂದಿಗೆ ಮತ್ತೆ ತಂಡಕ್ಕೆ ಸೇರುವ ಸಾಧ್ಯತೆ ಇದೆ ಎಂದು ಸೂಚಿಸಲಾಗಿದೆ.

ಲಕ್ಕುಂಡಿ ದೇವಸ್ಥಾನದಲ್ಲಿ ನಿಜ ನಾಗಸರ್ಪ ದರ್ಶನ! ಜೀರ್ಣೋದ್ಧಾರ ವೇಳೆ ಕಾರ್ಮಿಕರಲ್ಲಿ ಆತಂಕ

0

ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವ ಪುರಾತನ ದೇವಸ್ಥಾನದ ಆವರಣದಲ್ಲಿ ನಿಜವಾದ ನಾಗಸರ್ಪ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಗದಗ ತಾಲೂಕಿನ ಪ್ರಸಿದ್ಧ ಲಕ್ಕುಂಡಿ ಗ್ರಾಮದಲ್ಲಿರುವ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಿತ ಈಶ್ವರ ಹಾಗೂ ಅರ್ಧನಾರೀಶ್ವರ ದೇವಸ್ಥಾನಗಳ ಅಭಿವೃದ್ಧಿ ಮತ್ತು ಪುನರ್ ನಿರ್ಮಾಣ ಕಾರ್ಯಗಳು ಇತ್ತೀಚೆಗೆ ವೇಗ ಪಡೆದಿವೆ. ಚೌಕಿಮಠ ಕುಟುಂಬಕ್ಕೆ ಸೇರಿದ ಮನೆ ಸಂಕೀರ್ಣದೊಳಗಿನ ಹುದುಗಿದ ಈಶ್ವರ ದೇವಸ್ಥಾನವನ್ನು ‘ಮನೆಯೊಳಗೊಂದು ದೇವಸ್ಥಾನ’ ಎಂಬ ಶೀರ್ಷಿಕೆಯಡಿ ಟಿವಿ9 ವರದಿ ಪ್ರಸಾರ ಮಾಡಿದ್ದ ಬಳಿಕ ಈ ಐತಿಹಾಸಿಕ ತಾಣದ ಜೀರ್ಣೋದ್ಧಾರಕ್ಕೆ ಚೈತನ್ಯ ಬಂದಿದೆ.

ಈ ಹಿನ್ನೆಲೆ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದ್ದಾಗ ಮಾರುದ್ದದ ನಾಗರಹಾವು ಅಚ್ಚರಿಯ ರೀತಿಯಲ್ಲಿ ಪತ್ತೆಯಾಯಿತು. ಹಾವು ಕಾಣುತ್ತಿದ್ದಂತೆಯೇ ಕಾರ್ಮಿಕರು ದಂಗಾಗಿ ಕೆಲಕಾಲ ಕೆಲಸ ಸ್ಥಗಿತಗೊಳಿಸಿದರು. ಸ್ಥಳೀಯರಲ್ಲೂ ಭಯದ ವಾತಾವರಣ ಉಂಟಾಯಿತು. ಕೆಲವೇ ಕ್ಷಣಗಳಲ್ಲಿ ನಾಗಸರ್ಪ ಸರಿದು ಹೋಗಿದ್ದು, ಬಳಿಕ ಭಯದ ನಡುವೆಯೇ ಸ್ವಚ್ಛತಾ ಕಾರ್ಯ ಮತ್ತೆ ಮುಂದುವರಿಸಲಾಯಿತು.

ತನ್ನ ಪ್ರಾಣ ಪಣಕ್ಕಿಟ್ಟು ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಯುವಕ!

0

ಮೈಸೂರು: ಕಾವೇರಿ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯೊಬ್ಬರನ್ನು ಯುವಕನೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸಿದ ಹೃದಯಸ್ಪರ್ಶಿ ಘಟನೆ ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ಕಪ್ಪಡಿ ದೇಗುಲದ ಬಳಿ ನಡೆದಿದೆ.

ಮಂಜು ಎಂಬಾತ ಸ್ನಾನಕ್ಕಾಗಿ ಕಾವೇರಿ ನದಿಗೆ ಇಳಿದಿದ್ದ ವೇಳೆ ಈಜು ಬಾರದ ಕಾರಣ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ. ಆತ ಜೀವದ ಹೋರಾಟ ನಡೆಸುತ್ತಿದ್ದುದನ್ನು ಗಮನಿಸಿದ ಮಧು ಎಂಬ ಯುವಕ ಕ್ಷಣಮಾತ್ರವೂ ವಿಳಂಬ ಮಾಡದೆ ನದಿಗೆ ಧುಮುಕಿದ. ಭೀಕರ ಪ್ರವಾಹದ ನಡುವೆ ಪ್ರಾಣಪಣವಾಗಿ ಹೋರಾಡಿ ಮಂಜುವನ್ನು ಸುರಕ್ಷಿತವಾಗಿ ಕರೆಯಕ್ಕೆ ತಂದಿದ್ದಾನೆ.

ಘಟನೆಯ ಬಳಿಕ ಕಪ್ಪಡಿ ಗ್ರಾಮದ ನಿವಾಸಿಗಳು ಮತ್ತು ಸ್ಥಳೀಯರು ಮಧು ಅವರ ಸಾಹಸಮಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವಕನ ಧೈರ್ಯ ಹಾಗೂ ಮಾನವೀಯತೆ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.

 

ಮ್ಯಾಟ್ರಿಮೋನಿ ಮದುವೆ ಮೋಸ: 9 ಯುವತಿಯರಿಗೆ ವಂಚನೆ, ನಕಲಿ ‘ಮಾವ-ಅಳಿಯ’ ನಾಟಕ ಬಯಲು!

0

ಮಂಗಳೂರು: ಆನ್‌ಲೈನ್ ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಮದುವೆಯ ಹೆಸರಿನಲ್ಲಿ ಯುವತಿಯರನ್ನು ಗುರಿಯಾಗಿಸಿಕೊಂಡು ಲಕ್ಷಾಂತರ ರೂಪಾಯಿ ವಂಚನೆ ನಡೆಸುತ್ತಿದ್ದ ಖತರ್ನಾಕ್ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸುಶಾಂತ್ ಪೂಜಾರಿ ಎಂದು ಗುರುತಿಸಲಾಗಿದ್ದು, ಈತನಿಗೆ ಸಾಥ್ ನೀಡಿದ ಮುಲ್ಕಿ ನಿವಾಸಿ ಭಾಸ್ಕರ್‌ನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತನಿಖೆಯಲ್ಲಿ ಬಹಿರಂಗವಾದಂತೆ, ಸುಶಾಂತ್ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಲ್ಲಿ ವರ ಹುಡುಕುತ್ತಿದ್ದ ಯುವತಿಯರನ್ನು ಸಂಪರ್ಕಿಸಿ, ನಂಬಿಕೆ ಗಳಿಸಿ ಮದುವೆಯ ಮಾತುಕತೆ ಆರಂಭಿಸುತ್ತಿದ್ದ. ಬಳಿಕ ಹಂತ ಹಂತವಾಗಿ ಹಣ ಪಡೆದು ನಾಪತ್ತೆಯಾಗುತ್ತಿದ್ದ. ಈ ವಂಚನೆಗೆ ಭಾಸ್ಕರ್ ‘ಮಾವ’ ಪಾತ್ರದಲ್ಲಿ ಭಾಗವಹಿಸಿ ಸಂತ್ರಸ್ತೆಯ ಕುಟುಂಬದವರಲ್ಲಿ ವಿಶ್ವಾಸ ಮೂಡಿಸುತ್ತಿದ್ದ. ಧಾರ್ಮಿಕ ವಿಧಿವಿಧಾನಗಳಲ್ಲೂ ಭಾಗವಹಿಸಿ ನಾಟಕವಾಡಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇಬ್ಬರ ಜೊತೆ ಮದುವೆ, 9 ಜನರಿಗೆ ಮೋಸ

ಆರೋಪಿಯು ಒಟ್ಟು 9 ಯುವತಿಯರನ್ನು ವಂಚಿಸಿರುವುದು ಪತ್ತೆಯಾಗಿದೆ. ಇವರಲ್ಲಿ ಇಬ್ಬರು ಯುವತಿಯರೊಂದಿಗೆ ಮದುವೆಯಾಗಿ ನಂತರ ಕೈಕೊಟ್ಟಿದ್ದಾನೆ. ಮುಂಬೈನಲ್ಲಿ ಮದುವೆಯಾಗಿದ್ದ ಯುವತಿಯಿಂದ ಸುಮಾರು ₹6.6 ಲಕ್ಷ ಪಡೆದು ಪರಾರಿಯಾಗಿದ್ದ. ಉಡುಪಿ ಭಾಗದ ಇಬ್ಬರು ಯುವತಿಯರಿಗೆ ಮದುವೆಯಾಗುವುದಾಗಿ ಹೇಳಿ ಹಣ ಪಡೆದಿದ್ದಾನೆ. ಬೆಂಗಳೂರಿನ ಇಬ್ಬರು, ಕಾರ್ಕಳದ ಒಬ್ಬರು ಹಾಗೂ ಮಂಗಳೂರಿನ ಮತ್ತೊಬ್ಬ ಯುವತಿಯೂ ಇದೇ ಮೋಸದ ಬಲಿಯಾಗಿದ್ದಾರೆ.

ಈ ಕುರಿತು ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯೊಬ್ಬಳು ದೂರು ನೀಡಿದ್ದಳು. ದೂರು ಆಧಾರಿಸಿ ಪೊಲೀಸರು ಆರೋಪಿ ಹಿನ್ನಲೆ ಕೆದಕಿದಾಗ ವಂಚನೆಗಳ ಸರಣಿ ಬಯಲಾಗಿದೆ.

ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆನ್‌ಲೈನ್ ಮ್ಯಾಟ್ರಿಮೋನಿ ಸೇವೆ ಬಳಸುವವರು ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

300 ಎಕರೆ ಜಮೀನು ಡೀಲ್ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ? ಪೀಟರ್ ಡ್ಯಾಡಿ ಮನೆಗೆ ಸಿಐಡಿ ಶೋಧ

0

ಬೆಂಗಳೂರು: ಕೋಟ್ಯಾಂತರ ಮೌಲ್ಯದ ಜಮೀನು ವ್ಯವಹಾರದಲ್ಲಿ ಉದ್ಯಮಿಗೆ ವಂಚನೆ ನಡೆಸಿದ ಆರೋಪದಡಿ ಪೀಟರ್ ಡ್ಯಾಡಿ ಎಂಬಾತನ ಪುಲಿಕೇಶಿನಗರ ನಿವಾಸದ ಮೇಲೆ ಸಿಐಡಿ ಆರ್ಥಿಕ ಅಪರಾಧ ದಳ ಅಧಿಕಾರಿಗಳು ಫೆಬ್ರವರಿ 10ರಂದು ದಾಳಿ ನಡೆಸಿದ್ದಾರೆ.

ಸುಮಾರು 300 ಎಕರೆ ಜಮೀನಿನ ದಾಖಲೆಗಳನ್ನು ಸರಿಪಡಿಸಿ ಖಾತೆ ಬದಲಾವಣೆ ಮಾಡಿ ಮಾರುಕಟ್ಟೆ ದರಕ್ಕೆ ಮಾರಾಟ ಮಾಡಿಕೊಡುವುದಾಗಿ ಭರವಸೆ ನೀಡಿದ್ದ ಪೀಟರ್, ಪ್ರೊಸೆಸಿಂಗ್ ಫೀ, ಲ್ಯಾಂಡ್ ಡೀಲ್ ಮತ್ತು ಕಮಿಷನ್ ಹೆಸರಿನಲ್ಲಿ ₹96.50 ಲಕ್ಷ ಹಣ ಪಡೆದಿದ್ದರೂ ಯಾವುದೇ ಕೆಲಸ ಮಾಡಿಕೊಡದೆ ವಂಚನೆ ಮಾಡಿದ್ದಾರೆ ಎಂಬುದು ಉದ್ಯಮಿ ಸುಬ್ಬರಾವ್ ನೀಡಿದ ದೂರಿನ ಸಾರಾಂಶ.

ಈ ಕುರಿತು ಕಳೆದ ವರ್ಷದ ಆಗಸ್ಟ್‌ನಲ್ಲಿ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಗಮನಿಸಿ ತನಿಖೆಯನ್ನು ಸಿಐಡಿ ಆರ್ಥಿಕ ಅಪರಾಧ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ತನಿಖೆಯ ವೇಳೆ, ಕಮಿಷನ್ ಖಾತ್ರಿಗಾಗಿ ಪಡೆದಿದ್ದ ಚೆಕ್ ಅನ್ನು ಆಧಾರವಾಗಿ ಬಳಸಿಕೊಂಡು ದೂರುದಾರರ ವಿರುದ್ಧವೇ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿರುವ ಸಂಗತಿಯೂ ಬೆಳಕಿಗೆ ಬಂದಿದೆ. ಇದು ಪ್ರಕರಣಕ್ಕೆ ಮತ್ತಷ್ಟು ತೀವ್ರತೆ ನೀಡಿದೆ.

ಸಿಐಡಿ ಅಧಿಕಾರಿಗಳು ಪೀಟರ್ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಅಶೋಕನಗರ, ಹಲಸೂರು, ಬೆಳ್ಳಂದೂರು, ಜೀವನ್ ಭೀಮಾನಗರ ಹಾಗೂ ಪುಲಿಕೇಶಿನಗರ ಪೊಲೀಸ್ ಠಾಣೆಗಳಲ್ಲಿ ಪೀಟರ್ ವಿರುದ್ಧ ಇದೇ ರೀತಿಯ ವಂಚನೆ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಹೊರಬಂದಿದೆ.

ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದ್ದು, ಇನ್ನಷ್ಟು ಸ್ಫೋಟಕ ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ.

error: Content is protected !!