Home Blog Page 3019

ನಟಿ ಕಂಗನಾ ಗನ್ ಮ್ಯಾನ್ ವಿರುದ್ಧ ಅತ್ಯಾಚಾರದ ಆರೋಪ?

ವಿಜಯಸಾಕ್ಷಿ ಸುದ್ದಿ, ಮುಂಬಯಿ

ನಟಿ ಕಂಗನಾ ರಣಾವತ್ ಅವರ ಗನ್ ಮ್ಯಾನ್ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ನಗರದ ಮೇಕಪ್ ಕಲಾವಿದೆಯೊಬ್ಬರು ಕುಮಾರ್ ಹೆಗ್ಡೆ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾರೆ. ಅಲ್ಲದೇ, ಈ ಕುರಿತು ದೂರು ಕೂಡ ದಾಖಲಿಸಿದ್ದಾರೆ.

ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ ಐಆರ್ ದಾಖಲಾಗಿದೆ. ಆದರೆ, ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಮದುವೆಯಾಗುವುದಾಗಿ ನಂಬಿಸಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ, ನನ್ನಿಂದಲೇ ರೂ. 50 ಸಾವಿರ ಹಣ ಪಡೆದಿದ್ದಾನೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

8 ವರ್ಷಗಳ ಹಿಂದೆ ಕುಮಾರ್ ಸಂತ್ರಸ್ತೆಯ ಜೊತೆ ಸಂಪರ್ಕಕ್ಕೆ ಬಂದಿದ್ದು, ಕಳೆದ ವರ್ಷ ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾನೆ. ಇದಾದ ನಂತರ ಸಂತ್ರಸ್ತೆಯ ಪ್ಲ್ಯಾಟ್ ಗೆ ಬಂದು ಹಲವು ಬಾರಿ ಅತ್ಯಾಚಾರ ನಡೆಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಏ.27ಕ್ಕೆ ನಾನು ಆತನಿಗೆ ಹಣ ನೀಡಿದ್ದೆ. ಆ ನಂತರ ಅವನು ಕರ್ನಾಟಕ ರಾಜ್ಯಕ್ಕೆ ಓಡಿ ಹೋಗಿದ್ದಾನೆ. ಈ ಸಂದರ್ಭದಲ್ಲಿ ನಾನು ಆತನ ತಾಯಿಗೆ ಕರೆ ಮಾಡಿದಾಗ ಆತ ಬೇರೆ ಯುವತಿಯೊಂದಿಗೆ ಮದುವೆಯಾಗುತ್ತಿರುವ ವಿಚಾರ ತಿಳಿಯಿತು. ಆತನ ತಾಯಿ ಕೂಡ ನನ್ನ ಮಗನಿಂದ ನೀನು ದೂರ ಇರು ಎಂದು ಹೇಳಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ನಟಿ ಕಂಗನಾ, ಈ ಕುರಿತು ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲ. ಕುಮಾರ್ ತನ್ನ ಕುಟುಂಬದ ಸದಸ್ಯ ಎಂದು ಈ ಹಿಂದೆ ಹೇಳಿದ್ದರು.

ಮಮತಾ ಬ್ಯಾನರ್ಜಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಶಾಸಕ!

ವಿಜಯಸಾಕ್ಷಿ ಸುದ್ದಿ, ಕೊಲ್ಕತ್ತಾ

ಪಶ್ಚಿಮ ಬಂಗಾಳದ ಭವಾನಿಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯ ಸಾಧಿಸಿದ್ದ ಟಿಎಂಸಿಯ ಹಿರಿಯ ನಾಯಕ ಹಾಗೂ ಕೃಷಿ ಸಚಿವ ಶೋಭಾನ್ ದೇವ್ ಚಟ್ಟೋಪಾಧ್ಯಾಯ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಈ ಕ್ಷೇತ್ರದಿಂದ ಸ್ಪರ್ಧಿಸಿ, ಗೆಲುವು ಸಾಧಿಸಲು ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಹಾದಿ ಸುಗಮವಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರು ನಂದಿ ಗ್ರಾಮದ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಅವರು ಸೋಲು ಕಂಡಿದ್ದರು. ಸಿಎಂ ಆಗಿರುವ ಅವರು, 6 ತಿಂಗಳೊಳಗೆ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲಬೇಕಾಗಿದೆ. ಹೀಗಾಗಿ ಅವರು ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಸಚಿವ ಪಾರ್ಥ ಚಟರ್ಜಿ ಹಾಗೂ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ವಿಧಾನಸಭಾಧ್ಯಕ್ಷ ಬಿಮ್ ಬಂಡೋಪಾಧ್ಯಾಯ ಅವರಿಗೆ ಚಟ್ಟೋಪಾಧ್ಯಾಯ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಸಲ್ಲಿಸಿ ಮಾತನಾಡಿದ ಅವರು, ನಾನು ಪಕ್ಷದ ನಿರ್ಧಾರಕ್ಕೆ ವಿಧೇಯನಾಗಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ನಾನು ರಾಜೀನಾಮೆ ಸಲ್ಲಿಸಿದ್ದೇನೆ. ಹೀಗಾಗಿ ಭವಾನಿಪುರ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.

ಕೊರೊನಾದಿಂದ ಟಿಎಂಸಿ ಮುಖಂಡ ಕಜಾಲ್ ಸಿನ್ಹಾ ಅವರು ನಿಧನರಾದ ಹಿನ್ನೆಲೆಯಲ್ಲಿ ನಡೆಯಲಿರುವ ಖಾರ್ದಾ ಕ್ಷೇತ್ರದ ಮರು ಚುನಾವಣೆಯಲ್ಲಿ ಶೋಭಾನ್ ದೇವ್ ಚಟ್ಟೋಪಾದ್ಯಾಯ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಅಲ್ಲದೇ, ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಲಾಗುವ ಸಾಧ್ಯತೆ ಇದೆ ಎಂದು ಹಲವರು ಹೇಳುತ್ತಿದ್ದಾರೆ.

ಯಾದಗಿರಿಯಲ್ಲಿ ಓಪನ್ ಆದ ಲಾಕ್ ಡೌನ್! ಎಲ್ಲೆಂದರಲ್ಲಿ ಜನ- ಜಂಗುಳಿ!

ವಿಜಯಸಾಕ್ಷಿ ಸುದ್ದಿ, ಯಾದಗಿರಿ

ಜಿಲ್ಲೆಯಲ್ಲಿ ಮೂರು ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿತ್ತು. ಆದರೆ, ಇಂದು ಮತ್ತೆ ಬೆಳಿಗ್ಗೆ ಓಪನ್ ಆಗಿದೆ. ಹೀಗಾಗಿ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಮುಗಿ ಬಿದ್ದಿರುವ ದೃಶ್ಯ ಸಾಮಾನ್ಯವಾಗಿದೆ.
ಹೊಲ್ ಸೇಲ್ ಮಾರುಕಟ್ಟೆಯಲ್ಲಿ ಜನ ಜಂಗುಳಿ ತುಂಬಿ ತುಳುಕುತ್ತಿದೆ.

ಪೊಲೀಸರಿಗೂ ಡೋಂಟ್ ಕೇರ್ ಎನ್ನುತ್ತಿರುವ ಜನರು, ಸಾಮಾಜಿಕ ಅಂತರ ಮರೆತು ವ್ಯಾಪಾರ – ವಹಿವಾಟು ನಡೆಸುತ್ತಿದ್ದಾರೆ.

ಜಿಲ್ಲೆಯಲ್ಲಿ ಮೂರು ದಿನಗಳಿಂದ ಸಂಪೂರ್ಣ ಲಾಕ್‍ ಡೌನ್ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದಿನಿಂದ ಬೆಳಿಗ್ಗೆ 6 ರಿಂದ 10ರ ವರೆಗೆ ತರಕಾರಿ ಮತ್ತು ದಿನಸಿ ಖರೀದಿಗೆ ಅವಕಾಶವನ್ನು ಜಿಲ್ಲಾಡಳಿತ ನೀಡಿತ್ತು. ಆದರೆ, ಈ ಸಂದರ್ಭದಲ್ಲಿ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜನರಿಗೆ ತಿಳಿಸಲಾಗಿದೆ. ಆದರೆ, ಜನರು ಮಾತ್ರ ತಮ್ಮ ಹಳೆಯ ಚಾಳಿ ಮುಂದುವರೆಸಿದ್ದಾರೆ.

ಪೊಲೀಸರು ಮತ್ತು ನಗರಸಭೆ ಸಿಬ್ಬಂದಿ ಮಾರುಕಟ್ಟೆಯಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಜನ ಮಾತ್ರ ತಲೆ ಕೆಡಿಸಿಕೊಳ್ಳದೆ ಗುಂಪು, ಗುಂಪಾಗಿ ವ್ಯಾಪಾರ – ವಹಿವಾಟು ನಡೆಸಿದ್ದಾರೆ.

ಪೊಲೀಸ್ ಸಿಬ್ಬಂದಿಗಳಿಗೆ ತರಕಾರಿ ಕಿಟ್ ವಿತರಣೆ

ವಿಜಯಸಾಕ್ಷಿ ಸುದ್ದಿ, ಹೂವಿನ ಹಡಗಲಿ

ಕೊರೊನಾ ಮಹಾಮಾರಿಯ ನಿಯಂತ್ರಣಕ್ಕಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಇಲಾಖೆಯ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದು ಕರ್ನಾಟಕ ಸಮರ ಸೇನೆಯ ತಾಲೂಕ ಅಧ್ಯಕ್ಷ ಬಿ ಎಂ ವೀರಯ್ಯಸ್ವಾಮಿ ಹೇಳಿದರು.

ಪ್ರಗತಿಪರ ರೈತರಾದ ಎಂ ಎಸ್ ಜಾನ್ ಅವರ ಜಮೀನಿನಲ್ಲಿ ಬೆಳೆದಂತಹ ತರಕಾರಿಗಳನ್ನು ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಮೂಲಕ ಸರ್ಕಾರ ಜಾರಿ ಮಾಡಿದ ಲಾಕ್ ಡೌನ್ ಅನ್ನು ಪ್ರತಿಯೊಬ್ಬರೂ ಪಾಲಿಸಿ ಎಂದ ಅವರು, ಸಾರ್ವಜನಿಕರ ಜೀವ ರಕ್ಷಣೆ ಮಾಡುತ್ತಿರುವ ಪೋಲೀಸ್ ಇಲಾಖೆಗೆ ಸಹಕಾರ ನೀಡಿ, ಕೊರೊನಾ ನಿಯಂತ್ರಣಕ್ಕೆ ಕೈ ಜೋಡಿಸಬೇಕು ಎಂದರು.

ಡಿವೈಎಸ್ಪಿ ಹಾಲ ಮೂರ್ತಿರಾವ್ ಮಾತನಾಡಿ, ಉಚಿತ ತರಕಾರಿಗಳನ್ನು ನೀಡಿದ ಪ್ರಗತಿಪರ ರೈತರಾದ ಎಂ ಎಸ್ ಜಾನ್ ರವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸೋಂಕು ನಿಯಂತ್ರಣಕ್ಕಾಗಿ ಪ್ರತಿಯೊಂದು ಇಲಾಖೆಯ ಸಿಬ್ಬಂದಿಗಳು ಶ್ರಮಿ‌ಸುತ್ತಿದ್ದಾರೆ. ಸಾರ್ವಜನಿಕರು ಸೋಂಕು ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಕೈಜೋಡಿಸಿ ಕೊರೊನಾ ಮುಕ್ತ ದೇಶವನ್ನಾಗಿ ಮಾಡಲು ಹೋರಾಡಬೇಕೆಂದು ಎಂದರು.

ಸಿ ಪಿ ಐ ರಾಮರೆಡ್ಡಿ ಮಾತನಾಡಿ, ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಜಾಗೃತಗೊಂಡು ಈ ಕೊರೊನಾ ಮಹಾಮಾರಿಯ ರೋಗದಿಂದ ಜೀವವನ್ನು ರಕ್ಷಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಎ ಎಸ್ ಐ ವಡಕಪ್ಪ ಸೇರಿದಂತೆ ಸಿಬ್ಬಂದಿಗಳು, ಗೃಹರಕ್ಷಕದಳ ಸಿಬ್ಬಂದಿ ಉಪಸ್ಥಿತರಿದ್ದರು.

ಅಯ್ಯೋ ಯಾಕ್ರೀ ತಲೆ ತಿಂತೀರಿ…..

ವಿಜಯಸಾಕ್ಷಿ ವಿಶೇಷ

ಕೊರೋನಾದಿಂದ ಇನ್ನೂ ಸುಧಾರಿಸಿಕೊಂಡಿಲ್ಲ, ಆಗಲೇ ಬ್ಲಾಕ್ ಫಂಗಸ್, ವೈಟ್ ಫಂಗಸ್, ಮೂರನೇ ಅಲೆ, ಮಕ್ಕಳ ಮೇಲೆ ದಾಳಿ…..

ಏನ್ ನಾವು ಬದುಕಬೇಕಾ ಇಲ್ಲ ಭಯದಿಂದ ಸಾಯಬೇಕಾ ದಯವಿಟ್ಟು ನೀವೇ ಹೇಳಿ ಸ್ವಾಮಿ….

ಆ ಖಾಯಿಲೆ ಬರುತ್ತೆ, ಈ ರೋಗ ಬರುತ್ತೆ, ಕಣ್ಣು ಹೋಗುತ್ತೆ, ರಕ್ತ ಹೆಪ್ಪುಗಟ್ಟುತ್ತೆ, ಹೃದಯ ನಿಲ್ಲುತ್ತೆ, ತಲೆ ಸಿಡಿದು ಹೋಗುತ್ತೆ ಅಂತಾ ಸದಾ ಸುದ್ದಿ ಮಾಡ್ತೀರಿ, ಆಮೇಲೆ ಧೈರ್ಯವಾಗಿರಿ, ಎಚ್ಚರಿಕೆಯಿಂದ ಇರಿ ಅಂತಾನೂ ಹೇಳ್ತೀರಿ…….

ಮೈಮೇಲೆ ಚೇಳು ಬಿಸಾಕಿ ಭಯ ಪಡಬೇಡಿ ಅಂದ್ರೆ ಹೇಗೆ ಸಾಧ್ಯ ಸ್ವಾಮಿ………..

ಜೀವರಾಶಿ ಸೃಷ್ಟಿಯಾದ ಸಮಯದಲ್ಲೇ ಅದಕ್ಕೆ ವಿರುದ್ಧವಾದ ಮತ್ತು ತೊಂದರೆ ಕೊಡುವ ಜೀವಿಗಳು ಸೃಷ್ಟಿಯಾಗಿವೆ. ರೋಗಗಳು ಹೊಸದಲ್ಲ, ರೋಗಿಗಳು ಹೊಸದಲ್ಲ, ಅದರ ವಿರುದ್ಧ ಹೋರಾಟವೂ ಹೊಸದಲ್ಲ, ಹುಟ್ಟುಗಳು ಹೊಸದಲ್ಲ, ಸಾವುಗಳು ಹೊಸದಲ್ಲ………

ಟಿವಿ ವಾಹಿನಿಗಳು ಹೊಸವು, ಎಂಬಿಬಿಎಸ್ ಡಾಕ್ಟರುಗಳು ಹೊಸಬರು, ಪ್ರಜಾಪ್ರಭುತ್ವದಲ್ಲಿ ಚುನಾಯಿತ ಮಂತ್ರಿಗಳು ಹೊಸಬರು, ಜಿಲ್ಲಾಧಿಕಾರಿಗಳು ಹೊಸಬರು ಅಷ್ಟೇ………..

ರೀ ಸ್ವಾಮಿ, ಕಷ್ಟಗಳು, ನೋವುಗಳು, ಮಾರಣಾಂತಿಕ ರೋಗಗಳು ಎಲ್ಲಾ ಕಾಲಕ್ಕೂ ಬೇರೆ ಬೇರೆ ರೂಪದಲ್ಲಿ ಬರುತ್ತಲೇ ಇರುತ್ತವೆ. ಅದರ ವಿರುದ್ಧ ಹೋರಾಟವೂ ನಡೆಯುತ್ತಲೇ ಇರುತ್ತದೆ. ಆ ಸಂಘರ್ಷದಲ್ಲಿ ಸಾವುಗಳು ಸಹ ಸಹಜ.‌

ನಮಗೆ ಸ್ವಂತ ಭವ್ಯ ಬಂಗಲೆ ಇದೆ, ಬೆಲೆ ಬಾಳುವ ಕಾರು ಇದೆ, ಆಸ್ತಿ ಒಡವೆಗಳು ಇದೆ, ಅಧಿಕಾರ ಇದೆ, ಒಳ್ಳೆಯ ಗಂಡ ಹೆಂಡತಿ ಮಕ್ಕಳು ಇದ್ದಾರೆ, ತಿಂಗಳಿಗೆ ಲಕ್ಷಾಂತರ ಬಾಡಿಗೆ ಬಡ್ಡಿ ಸಂಬಳ‌ ಬರುತ್ತದೆ, ಸಾಕಷ್ಟು ಆಳು ಕಾಳು ಊಟ ಬಟ್ಟೆ ಇದೆ, ಆದ್ದರಿಂದ ನಾವು ಅತ್ಯಂತ ಭದ್ರ ಕೋಟೆಯಲ್ಲಿ ಇದ್ದೇವೇ, ಅದರಿಂದ ಸಾವು ನೋವು ರೋಗಗಳನ್ನು ಗೆದ್ದು ಆರಾಮವಾಗಿ ಜೀವನ ಮಾಡಬಹುದು ಎಂಬ ಭ್ರಮೆಗೆ ಒಳಗಾಗಿ ದೇಹ ಮನಸ್ಸುಗಳನ್ನು ದಂಡಿಸದೆ, ಓದು ಪ್ರವಾಸಗಳಿಂದ ಜ್ಞಾನಾರ್ಜನೆ ಮಾಡದೆ, ರುಚಿಗಾಗಿ ತಿನ್ನುತ್ತಾ, ಮಾಲ್ ಗಳಲ್ಲಿ ಓಡಾಡುತ್ತಾ, ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಈಗ ಟಿವಿ ನೋಡಿ ಬೆಚ್ಚಿ ಬಿದ್ದರೆ ಏನು ಪ್ರಯೋಜನ……

ಜಾತಸ್ಯ ಮರಣಂ ಧ್ರುವಂ….

ಮನುಷ್ಯ ಹುಟ್ಟಿದ ಕ್ಷಣದಿಂದ ಮುನ್ನಡೆಯುವುದು ಸಾವಿನ ಕಡೆಗೆ….

O – 100 ವರ್ಷಗಳ ನಡುವೆ ಯಾವಾಗ ಬೇಕಾದರೂ, ಯಾವುದೇ ಕಾರಣದಿಂದ ಸಾವು ಸಂಭವಿಸಬಹುದು. ಆ ಸಾಧ್ಯತೆ ಪ್ರತಿ ಮನುಷ್ಯನಿಗೂ ಪ್ರತಿ ಕ್ಷಣವೂ ಇರುತ್ತದೆ. ಆದರೆ ಸಾರ್ವತ್ರಿಕವಾಗಿ ಭಾರತದ 140 ಕೋಟಿ ಜನಸಂಖ್ಯೆಯ ಈ ಕ್ಷಣದ ಸರಾಸರಿ ಆಯಸ್ಸು ಸುಮಾರು 65 ವರ್ಷಗಳು. ಇದು ಒಂದು ರೀತಿಯ ಅನುಭವದ ಸರಾಸರಿ ಗ್ಯಾರಂಟಿ ಅಥವಾ ವಾರಂಟಿ.

ಸಾವುಗಳು ಸಹಜವಾಗಿದ್ದರು ಕಳೆದ 15 ತಿಂಗಳಿನಿಂದ ಕೊರೋನಾ ಎಂಬ ವೈರಸ್ ಸೋಂಕಿತ ಶೇಕಡಾ 1.5% ಜನರು ಸಾಯುತ್ತಿರುವುದು ವಾಸ್ತವ. ಬಹಳಷ್ಟು ಡಾಕ್ಟರುಗಳ ಹೇಳಿಕೆಯಂತೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮತ್ತು ಈಗಾಗಲೇ ಅನೇಕ ರೋಗಗಳಿಗೆ ತುತ್ತಾಗಿರುವ ಜನರು ಸಾಯುತ್ತಿರುವುದು ಕಂಡು ಬರುತ್ತಿದೆ.

ಅದು ಏನೇ ಇರಲಿ. ವೈದ್ಯಕೀಯ ಭಾಷೆಯಲ್ಲಿ ದೇಹಕ್ಕೆ ಹಿತವಲ್ಲದ ಅನೇಕ ಅಂಶಗಳನ್ನು ರೋಗಗಳು ಎಂದು ಪರಿಗಣಿಸಲಾಗುತ್ತದೆ. ನೆತ್ತಿಯಿಂದ ಪಾದದವರೆಗಿನ ದೇಹದ ಒಳ ಹೊರ ಎಲ್ಲವೂ ಒಳಗೊಂಡ ಯಾವುದೇ ಭಾಗಕ್ಕೆ ಏನೇ ವ್ಯತ್ಯಾಸ ಆದರೂ ಅದನ್ನು ರೋಗ ಎಂದೇ ಕರೆಯಲಾಗುತ್ತದೆ. ಅಧ್ಯಯನದ ದೃಷ್ಟಿಯಿಂದ ಇದಕ್ಕೆ ಅದೇ ವೈದ್ಯಕೀಯ ಭಾಷೆಯಲ್ಲಿ ಏನೇನೂ ಹೆಸರುಗಳನ್ನು ಇಡಲಾಗಿದೆ. ಅವುಗಳ ಸಂಖ್ಯೆ ಬಹುಶಃ ಲಕ್ಷ ಮೀರಬಹುದು.

ಆದರೆ ಈ ವಿವೇಚನಾ ರಹಿತ ಮಾಧ್ಯಮಗಳು ಏನೋ ಹೊಸದನ್ನು ಕಂಡುಹಿಡಿದಂತೆ ಬ್ರೇಕಿಂಗ್ ನ್ಯೂಸ್ ಎಂದು ಅದಕ್ಕೆ ಪ್ರಚಾರ ನೀಡಿ ಹೆದರಿಸಿ ಸಾಮಾನ್ಯ ಜನರ ಬದುಕನ್ನೇ ಅಸಹನೀಯ ಗೊಳಿಸುತ್ತಿವೆ. ಮನುಷ್ಯರಿಗೆ ಖಾಯಿಲೆಗಳು ಬರಬಾರದು, ಅವರು ಸಾಯಲೇ ಬಾರದು ಎಂಬಂತೆ ವಿಚಿತ್ರ ಸಿದ್ದಾಂತ ಮಂಡಿಸುತ್ತಿವೆ. ಅದಕ್ಕೆ ಪೂರಕವಾಗಿ ಒಂದಷ್ಟು ಡಾಕ್ಟರುಗಳು ಸಹ ಅನವಶ್ಯಕ ಭಯ ಪಡಿಸುತ್ತಿದ್ದಾರೆ.

ರೋಗಗಳು ಇದೆ ನಿಜ. ಅದು ವ್ಯಾಪಕವಾಗಿ ಹರಡಿ ಸಾವು ನೋವು ಉಂಟುಮಾಡುತ್ತಿದೆ ಅದೂ ನಿಜ. ಆದರೆ ಸಾಮಾನ್ಯ ಜನರಾದ ನಮಗೆ ಆಯ್ಕೆಗಳು ಸೀಮಿತ. ರೋಗ ಬರದಂತೆ ತಡೆಯಲು ಒಂದಷ್ಟು ಪ್ರಯತ್ನ. ಅದರ ನಂತರವೂ ಬಂದರೆ ಅದನ್ನು ಸಾಧ್ಯವಾದಷ್ಟು ಧೈರ್ಯವಾಗಿ ಎದುರಿಸುವುದು, ಇರುವ ವ್ಯವಸ್ಥೆಯಲ್ಲಿ ನಮ್ಮ ನಿಯಂತ್ರಣ ಮೀರಿದ ಯಾವುದೇ ಫಲಿತಾಂಶಗಳಿಗೆ ಮಾನಸಿಕವಾಗಿ ಸಿದ್ದರಾಗುವುದು. ಇದಕ್ಕಿಂತ ಉತ್ತಮ ಆಯ್ಕೆಗಳು ಸಿಕ್ಕಲ್ಲಿ ಅದನ್ನು ಉಪಯೋಗಿಸಿಕೊಳ್ಳುವುದು‌ ಅಷ್ಟೇ…….

ಸದಾ ಕೊರೋನಾ ಕೊರೋನಾ ಎಂದು ಕೊರಗುತ್ತಾ ಇರುವ ಬದಲು ಅನಾರೋಗ್ಯ ಪೀಡಿತರು ಸಾಧ್ಯವಾದ ಚಿಕಿತ್ಸೆ ಪಡೆಯಿರಿ, ಆರೋಗ್ಯವಂತರು ದೇಹ ಮನಸ್ಸು ಮತ್ತಷ್ಟು ದಂಡಿಸಿ ಉತ್ತಮ ಆಹಾರ ಸೇವಿಸಿ ಎಂದಿನ ಕೆಲಸಗಳಲ್ಲಿ ಸಹಜವಾಗಿ ತೊಡಗಿಸಿಕೊಳ್ಳಿ.

ಆ ರೋಗ ಈ ರೋಗ ಎಂದು ಅನವಶ್ಯಕ ಭಯಪಡಿಸುವ ಸುದ್ದಿಗಳನ್ನು ನಿರ್ಲಕ್ಷಿಸಿ. ದೇಹ ಇರುವವರೆಗೂ ರೋಗಗಳು ಇರುತ್ತವೆ. ಬದುಕು ಇರುವವರೆಗೂ ಕಷ್ಟಗಳು ಇರುತ್ತವೆ. ಹುಟ್ಟಿನ ನಂತರ ಸಾವುಗಳು ಇರುತ್ತವೆ. ಹಾಗೆಯೇ ಅದರ ವಿರುದ್ಧ ಹೋರಾಟಗಳು ಇರುತ್ತವೆ. ಇದು ಪ್ರಕೃತಿಯ ಸಹಜ ಸ್ವಾಭಾವಿಕ ನಿಯಮ.

ಗಾಬರಿಯು ಬೇಡ, ನಿರ್ಲಕ್ಷ್ಯವೂ ಬೇಡ. ಇರುವ ಪರಿಸ್ಥಿತಿಯಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳಿ, ಆತ್ಮಾವಲೋಕನ ಮಾಡಿಕೊಂಡು ಸಹಜವಾಗಿ ಬದುಕಲು ಪ್ರಯತ್ನಿಸೋಣ.

ಬ್ಲಾಕ್ ಫಂಗಸ್, ವೈಟ್ ಫಂಗಸ್, ಕೊರೋನಾ ಎಬೋಲ ಕ್ಯಾನ್ಸರ್ ಏಡ್ಸ್ ಎಲ್ಲವೂ ಜೀವ ಜಗತ್ತಿನ ಭಾಗಗಳು. ಅದರೊಂದಿಗೇ ಬದುಕು ಮತ್ತು ಅದರಿಂದಲೇ ಸಾವು. ಈ ಎಲ್ಲಾ ಸಾಧ್ಯತೆಗಳ ನಡುವಿನ ಸಮಯವೇ ಜೀವನ……

ಲೇಖಕರು- ವಿವೇಕಾನಂದ ಹೆಚ್ ಕೆ

ಕೋವಿಡ್ ಕೇರ್ ಸೆಂಟರ್ ನಿಂದ ಸೋಂಕಿತ ವ್ಯಕ್ತಿ ಪರಾರಿ; ಪೊಲೀಸರಿಂದ ಹುಡುಕಾಟ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಶಿರಹಟ್ಟಿಯ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಇತ್ತೀಚಿಗಷ್ಟೇ ಕೋವಿಡ್ ಆರೈಕೆ ಕೇಂದ್ರ ಪ್ರಾರಂಭವಾಗಿತ್ತು. ರೋಡ್ ವರ್ಕ್ ಮಾಡುವಂತಹ ಖಾಸಗಿ ಇಂಜಿನಿಯರ್ ಒಬ್ಬರಿಗೆ ಮೇ 20 ರಂದು ಸೋಂಕು ದೃಢ ಪಟ್ಟಿದ್ದರಿಂದ ಆರೈಕೆ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು, ಆದರೆ ಸೋಂಕಿತ ವ್ಯಕ್ತಿ ಮೇ 21 ರಂದು ಮಧ್ಯಾಹ್ನ 3.30 ರ ಸುಮಾರಿಗೆ ಊಟ ಮಾಡಿದ ನಂತರ ಆರೈಕೆ ಕೇಂದ್ರದಲ್ಲಿ ಇರುವಂತಹ ಸಿಬ್ಬಂದಿಗಳ ಮರೆಮಾಚಿ ಪರಾರಿಯಾಗಿದ್ದಾನೆ.

ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ನಂತರ ಸೋಂಕಿತ ವ್ಯಕ್ತಿ ಪರಾರಿಯಾಗಿರುವುದು ಖಚಿತಗೊಂಡಿದೆ.

ಕಂದಾಯ ನಿರೀಕ್ಷಕ ಮಹಾಂತೇಶ ಮಗದುಮ್ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಸೋಂಕಿತ ವ್ಯಕ್ತಿ ಪರಾರಿಯಾದ ಬಗ್ಗೆ ದೂರು ನೀಡಿದ್ದಾರೆ ‌

ಅಲೆಮಾರಿಗಳ ಹಸಿವು ನೀಗಿಸಿದ ಎಸ್ಪಿ ಯತೀಶ್ ಮಾನವೀಯ ಕಾರ್ಯಕ್ಕೆ ಶ್ಲಾಘನೆ! ಚಿತ್ರ ಸಹಿತ ಪೋಸ್ಟ್ ಪ್ರಕಟಿಸಿ ಹೆಮ್ಮೆ ವ್ಯಕ್ತಪಡಿಸಿದ ಕೇಂದ್ರ ವಾರ್ತಾ ಮತ್ತು ಪ್ರಚಾರ ಇಲಾಖೆ

ವಿಜಯಸಾಕ್ಷಿ ಸುದ್ದಿ, ಗದಗ

ಬೇರೆ ರಾಜ್ಯಗಳಿಂದ ಜಿಲ್ಲೆಗೆ ವಲಸೆ ಬಂದು ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ದುಡಿಮೆಗೆ ಅವಕಾಶ ಸಿಗದೆ, ಊಟಕ್ಕೂ ಪರದಾಡುತ್ತಿರುವ ಸ್ಥಿತಿಯನ್ನು ಗಮನಿಸಿದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹಾಗೂ ಅವರ ಪೊಲೀಸ್ ತಂಡದವರು ಈ ನಿರಾಶ್ರಿತರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದರು.

#IndiaFightsCorona ಎಂಬ ಹ್ಯಾಷ್ ಟ್ಯಾಗ್‌ನಲ್ಲಿ ಗದಗ ಎಸ್ಪಿ ಯತೀಶ್ ಹಾಗೂ ಸಿಬ್ಬಂದಿ ನಿರಾಶ್ರಿತರಿಗೆ ದಿನಸಿ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವ ಫೋಟೋ ಸಹಿತ ಪೋಸ್ಟ್ ಪ್ರಕಟಿಸಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ `Covid-19 Warriors of India’ ಎಂದು ಹೆಮ್ಮೆಯಿಂದ ಹೇಳಿಕೊಂಡಿದೆ.

ಇಂತಹ ಮಾನವೀಯ ಸೇವೆ ಇತರರಿಗೂ ಪ್ರೇರಣೆಯಾಗಿ, ಇನ್ನಷ್ಟು ದಾನಿಗಳು ಸಹಾಯ ಮಾಡಲು ಮುಂದಾಗಲಿ ಎಂಬ ಉದ್ದೇಶ ಈ ಪೋಸ್ಟ್ ಹಿಂದಿದೆ.

ಇದನ್ನೂ ಓದಿ ಸದ್ದಿಲ್ಲದೆ ಅಲೆಮಾರಿಗಳ ಹಸಿವು ನೀಗಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ !


ಯತೀಶ್ ಅವರ ಈ ಮಾನವೀಯ ಕಾರ್ಯವನ್ನು ವಿಜಯಸಾಕ್ಷಿ ವೆಬ್ ‘ ಸದ್ದಿಲ್ಲದೆ ಅಲೆಮಾರಿಗಳ ಹಸಿವು ನೀಗಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶೀರ್ಷಿಕೆಯಲ್ಲಿ ಮೇ 15ರಂದು, ಹಾಗೂ ವಿಜಯಸಾಕ್ಷಿ ದಿನಪತ್ರಿಕೆಯ ಮೇ 16ರ ಸಂಚಿಕೆಯಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ನಿಲ್ಲುತ್ತಿಲ್ಲ ಸೋಂಕಿನ ಸ್ಫೋಟ; 530 ಜನರಿಗೆ ಸೋಂಕು, ಮತ್ತೆ ಐವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಸೋಂಕಿನ ಸ್ಫೋಟ ಮುಂದುವರೆದಿದೆ. ಹಳ್ಳಿ ಹಳ್ಳಿಗೂ ವ್ಯಾಪಿಸುತ್ತಿರುವ ಸೋಂಕು ದಿನದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತದೆ.

ಇಂದಿನ 530 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 20315 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -217, ಮುಂಡರಗಿ-60, ನರಗುಂದ-38, ರೋಣ-104, ಶಿರಹಟ್ಟಿ-106, ಹೊರಜಿಲ್ಲೆಯ-05 ಸೇರಿದಂತೆ 530 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಐವರು ಮೃತಪಟ್ಟಿದ್ದು, ಮೃತರ ಸಂಖ್ಯೆ 207 ಕ್ಕೇರಿದೆ.

ರೋಣ ತಾಲೂಕಿನ ನರೇಗಲ್ ನಿವಾಸಿ 55 ವರ್ಷದ ಮಹಿಳೆ ಮೇ-13 ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 15 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಮುದೇನಗುಡಿ ನಿವಾಸಿ 63 ವರ್ಷದ ಮಹಿಳೆ ಮೇ -16 ರಂದು ರೋಣ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಮೇ 17 ರಂದು ಮೃತಪಟ್ಟಿದ್ದಾರೆ.

ಮುಂಡರಗಿ ತಾಲೂಕಿನ ಸಿಂಗಟಾಲೂರ ನಿವಾಸಿ 77 ವರ್ಷದ ವ್ಯಕ್ತಿ ಮೇ 15 ರಂದು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಮೇ 18 ರಂದು ಮೃತಪಟ್ಟಿದ್ದಾರೆ.

ಲಕ್ಷ್ಮೇಶ್ವರ ನಿವಾಸಿ 51 ವರ್ಷದ ವ್ಯಕ್ತಿ ಮೇ 18 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 19 ರಂದು ಮೃತಪಟ್ಟಿದ್ದಾರೆ.

ನರಗುಂದ ತಾಲೂಕಿನ ಚಿಕ್ಕ ನರಗುಂದ ನಿವಾಸಿ 68 ವರ್ಷದ ವ್ಯಕ್ತಿ ತಾಲೂಕು ಆಸ್ಪತ್ರೆಗೆ ಮೇ-18 ರಂದು ದಾಖಲಾಗಿದ್ದರು. ಇವರು ಮೇ -19 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 400 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 16681 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 3427 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ.

ಇನ್ನೂ 192 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ವಿಜಯಪುರದಲ್ಲಿ ಹೆಚ್ಚುಗುತ್ತಿದೆ ಬ್ಲ್ಯಾಕ್ ಫಂಗಸ್ ಹಾವಳಿ

ವಿಜಯಸಾಕ್ಷಿ ಸುದ್ದಿ, ವಿಜಯಪುರ

ಜಿಲ್ಲೆಯಲ್ಲಿ ಕೊರೊನಾದೊಂದಿಗೆ ಬ್ಲ್ಯಾಕ್ ಫಂಗಸ್ ನ ಹಾವಳಿ ಹೆಚ್ಚಾಗುತ್ತಿದೆ. ಇಂದು ಒಂದೇ ದಿನ 14 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗೆ ಬರೋಬ್ಬರಿ 50ಕ್ಕೆ ಈ ಸಂಖ್ಯೆ ಏರಿಕೆ ಕಂಡಿದೆ.

ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಬ್ಲ್ಯಾಕ್ ಫಂಗಸ್ ಪ್ರಕರಣ ಮತ್ತೆಯಾದಲ್ಲಿ ಖಾಸಗಿ ಆಸ್ಪತ್ರೆಯವರು ಮುಚ್ಚಿಟ್ಟು ಚಿಕಿತ್ಸೆ ಕೊಡಬಾರದು ಎಂದು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಬ್ಲ್ಯಾಕ್ ಫಂಗಸ್ ಪತ್ತೆ ಹಚ್ಚಿದ ಆಸ್ಪತ್ರೆಯವರೇ ಜನರಿಗೆ ಚಕಿತ್ಸೆ ನೀಡಬೇಕು. ಅದರ ಔಷಧಿ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಪ್ರಕರಣ ಹೆಚ್ಚಾಗಿರುವ ಕಾರಣ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ.

ಮಹಾಮಾರಿಗೆ ರಾಜ್ಯದಲ್ಲಿ ಎಷ್ಟು ಜನ ಮಕ್ಕಳು ಬಲಿಯಾಗಿದ್ದಾರೆ? ಎಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಮಹಾಮಾರಿ ದೊಡ್ಡ ಪೀಡುಗಾಗಿದೆ. ವಯಸ್ಸಾದವರನ್ನೇ ಹೆಚ್ಚಾಗಿ ಕಾಡುತ್ತಿದ್ದ ಇದು ಮಕ್ಕಳಲ್ಲಿಯೂ ಹೊಕ್ಕುತ್ತಿದೆ. ಹೀಗಾಗಿ ಆತಂಕ ಎಲ್ಲೆಡೆ ಮನೆ ಮಾಡಿದೆ. ಕಳೆದ ಎರಡು ತಿಂಗಳಲ್ಲಿನ 40 ಸಾವಿರಕ್ಕೂ ಹೆಚ್ಚು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ.
ಮಾರ್ಚ್ 18 ರಿಂದ ಮೇ. 18ರ ವರೆಗೆ ಎರಡು ತಿಂಗಳಿನಲ್ಲಿ 0-9 ವಯೋಮಾನದ ಶೇ. 143ರಷ್ಟು ಮಕ್ಕಳಲ್ಲಿ ಕೊರೊನಾ ವೈರಸ್ ಸೋಂಕು ತಗುಲಿದೆ.

10-19 ವಯೋಮಾನದ ಮಕ್ಕಳಲ್ಲಿ ಶೇ.160ರಷ್ಟು ಮಕ್ಕಳಲ್ಲಿ ಸೋಂಕು ಕಂಡು ಬಂದಿದೆ. ಕೊರೊನಾ ವಾರ್ ರೂಂನ ಅಂಕಿ – ಅಂಶಿಗಳಂತೆ 0-9 ವರ್ಷದ 39,846 ಮಕ್ಕಳಿಗೆ ಸೋಂಕು ತಗುಲಿದೆ. 10-19 ವರ್ಷದ 1,05,044 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಹಿಡಿದು ಮಾ. 18ರ ವರೆಗೆ 0-9 ವರ್ಷದ 27,841 ಹಾಗೂ 10-19 ವರ್ಷದ 65,551 ಮಕ್ಕಳಿಗೆ ಕೊರೊನಾವೈರಸ್ ಸೋಂಕು ತಗುಲಿತ್ತು ಎಂದು ವೈದ್ಯಕೀಯ ತಪಾಸಣೆಯಿಂದ ತಿಳಿದಿತ್ತು.

ಒಂದನೇ ಅಲೆಯಲ್ಲಿ ರಾಜ್ಯದಲ್ಲಿ 46 ಮಕ್ಕಳು ಮಹಾಮಾರಿಗೆ ಬಲಿಯಾಗಿದ್ದರು. ಸದ್ಯ ಈ ಸಂಖ್ಯೆ 62ಕ್ಕೆ ಏರಿಕೆ ಕಂಡಿದೆ. 2ನೇ ಅಲೆಯಲ್ಲಿ ಮಕ್ಕಳ ಸಾವಿನ ಸಂಖ್ಯೆ ಕೂಡ ಮೂರು ಪಟ್ಟು ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ, ಮೂರನೇ ಅಲೆಯಲ್ಲಿ ಸೋಂಕು ಹೆಚ್ಚಾಗಿ ಮಕ್ಕಳನ್ನೇ ಬಾಧಿಸುತ್ತಿದೆ ಎಂದು ತಜ್ಞರು ಹೇಳಿದ್ದು, ಆತಂಕ ಇನ್ನಷ್ಟು ಹೆಚ್ಚಾಗುತ್ತಿದೆ.

error: Content is protected !!