ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಶನಿವಾರ ಬೆಳಗಿನಿಂದ ಅಸ್ವಸ್ಥಗೊಂಡಂತೆ ಕಂಡು ಬಂದ ಕುರಿಯೊಂದು ತಾಲೂಕಿನ ಅಳವಂಡಿ ಹೋಬಳಿಯ ಹೈದರ್ನಗರದಲ್ಲಿ ನಡೆದಿದೆ.
ತಕ್ಷಣ ಕುರಿಗಾಹಿ ದೇವಪ್ಪ ಅವರು ಪಶು ವೈದ್ಯ ವಿನೋದ ಅಳವಂಡಿ ಅವರಿಗೆ ಕರೆ ಮಾಡಿ ವಿಷಯ ತಿಳಿಸಿ ಸುಮಾರು ನಾಲ್ಕು ಗಂಟೆ ಕಳೆದರೂ ಸ್ಥಳಕ್ಕೆ ಪಶುವೈದ್ಯರು ಬಂದಿಲ್ಲ. ಪರಿಣಾಮ ಕುರಿಹಿಂಡಿನಲ್ಲಿರುವ ಒಂದೊಂದೇ ಕುರಿಗಳು ಅಸು ನೀಗುತ್ತಿವೆ.
ಇದರಿಂದ ಆತಂಕಗೊಂಡಿರುವ ಕುರಿಗಾಹಿ ದೇವಪ್ಪ ಪರಿ ಪರಿಯಾಗಿ ಬೇಡಿಕೊಂಡರೂ ವೈದ್ಯರು ನಮಗೆ ಇದೊಂದೇ ಕೆಲಸ ಅಲ್ಲ, ಬೇರೆ ಕಡೆ ಇದೀವಿ. ಜೊತೆಗೆ ಇವತ್ತು ರಜೆ ಬೇರೆ ಇದೆ. ಬರುವವರೆಗೆ ಕಾಯಬೇಕು ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಎಂದು ಕುರಿಗಾಹಿ ದೇವಪ್ಪ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ಕೇಳಲು ಪಶುವೈದ್ಯ ವಿನೋದ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಸಂಪರ್ಕ ಸಾಧ್ಯವಾಗುತ್ತಿಲ್ಲ.
ಒಂದೊಂದಾಗಿ ಸಾಯುತ್ತಿರುವ ಕುರಿಗಳು: ಚಿಕಿತ್ಸೆ ನೀಡಲು ಸತಾಯಿಸುತ್ತಿರುವ ವೈದ್ಯರು!
ಅ.31 ರಂದು ಮಹರ್ಷಿ ವಾಲ್ಮೀಕಿ ಜಯಂತಿ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಅ.31 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಸ್ತೆ ದುರಸ್ತಿಗೆ ಪ್ರಥಮಾದ್ಯತೆ ನೀಡಿ: ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಸತತ ಮಳೆಯಿಂದಾಗಿ ಗದಗ-ಬೆಟಗೇರಿ ನಗರಸಭೆ ಹಾಗೂ ಜಿಲ್ಲೆಯ ಎಲ್ಲಾ ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ರಸ್ತೆಗಳು ಹಾಳಾಗಿದ್ದು ಸದ್ಯ ಮಳೆ ಕಡಿಮೆಯಾದ ಕಾರಣ ರಸ್ತೆಗಳ ಸುಧಾರಣೆಗೆ ಮೊದಲ ಆಧ್ಯತೆ ನೀಡುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಜರುಗಿದ ಸಭೆಯಲ್ಲಿ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿ ಹಾಗೂ ಜಿಲ್ಲೆಯ ಎಲ್ಲಾ ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ರಸ್ತೆಗಳು ಮಳೆಯಿಂದಾಗಿ ಹಾಳಾಗಿದ್ದು, ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿದ್ದು, ರಸ್ತೆ ಸುಧಾರಣೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳು ಕೂಡಲೇ ಕ್ರಮವಹಿಸುವುದು ಅವಶ್ಯವಿರುತ್ತದೆ.
ಈಗಾಗಲೇ ಹಲವಾರು ಬಾರಿ ಸಭೆಗಳಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕುರಿತು ನಿರ್ದೇಶನಗಳನ್ನು ನೀಡಲಾಗಿದ್ದು, ಕೆಲವು ಅತಿ ಜನಸಂದನಿ ಹಾಗೂ ವಾಹನ ಸಂಚಾರ ಇರುವ ರಸ್ತೆಗಳನ್ನು ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕ ಓಡಾಟಕ್ಕೆ ಕ್ರಮವಹಿಸಲಾಗಿತ್ತು, ಅತಿಯಾದ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಸುಧಾರಣೆಗೆ ಮಳೆ ಅವಕಾಶ ನೀಡದೇ ಇರುವ ಕಾರಣ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿರಲಿಲ್ಲಾ.
ಆದರೆ ಕಳೆದ ಒಂದು ವಾರದಿಂದ ಮಳೆ ಪೂರ್ಣ ಪ್ರಮಾಣದಲ್ಲಿ ನಿಂತು ಹೋದ ಕಾರಣ ಕೂಡಲೇ ಲೋಕೋಪಯೋಗಿ ಇಲಾಖೆ ತಮ್ಮ ವ್ಯಾಪ್ತಿಯ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿಗಳನ್ನು 15 ದಿನಗಳೊಳಾಗಿ ಕ್ರಮವಹಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಲು ಸಭೆಯಲ್ಲಿ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಅದೇ ರೀತಿ ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚು ವಾಹನ ಸಂಚಾರದ ರಸ್ತೆಗಳನ್ನು ಗುರುತಿಸಿ ಮೊದಲ ಹಂತದಲ್ಲಿ ಕೂಡಲೇ ಗುಂಡಿ ಮುಚ್ಚುವ ಕಾರ್ಯವನ್ನು ಕೈಗೊಳ್ಳಲು ಸೂಚಿಸಿದರು. ಹಾಗೂ ಇತರೇ ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚಿ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಭೆಯಲ್ಲಿ ನಿರ್ದೇಶನ ನೀಡಿದರು.
ಸಭೆಯಲ್ಲಿ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಕೆ.ಯು.ಡಬ್ಲೂ.ಎಸ್. ವತಿಯಿಂದ ಒಳಚರಂಡಿ ಹಾಗೂ ಕೆ.ಯು.ಐ.ಡಿ.ಎಫ್.ಸಿ ವತಿಯಿಂದ 24*7 ನೀರು ಸರಬರಾಜು ಅಭಿವೃದ್ಧಿ ಕಾಮಗಾರಿಗಳಿಂದ ಹಾಳಾದ ರಸ್ತೆಗಳನ್ನು ಪ್ರಥಮ ಆಧ್ಯತೆ ಮೇರೆಗೆ ದುರಸ್ತಿಗೊಳಿಸಲು ಸೂಚಿಸಿದರು. ಅದೇ ರೀತಿ ಗದಗ ಜಿಲ್ಲೆಗೆ ಸಂಬಂಧಿಸಿದ ನಗರದ ಹೊರವಲಯದಲ್ಲಿರುವ ಸಂಪರ್ಕ ರಸ್ತೆಗಳು ನಿರ್ವಹಣೆಯನ್ನು ರಾಜ್ಯ ಹೆದ್ದಾರಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ, ಕೆಶೀಪ್, ಹಾಗೂ ಲೋಕೋಪಯೋಗಿ ಇಲಾಖೆಗಳು ಹಾಳಾದ ರಸ್ತೆಗಳನ್ನು ಸುಧಾರಿಸಲು ಕೂಡಲೇ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು ಸಭೆಯಲ್ಲಿ ಸೂಚಿಸಿದರು.
ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ಕಾಮಗಾರಿಗಳನ್ನು ಪರಿಶೀಲನೆ ಮಾಡಿ ಅಗತ್ಯ ನಿರ್ದೇಶನಗಳನ್ನು ನೀಡಿ ಮಳೆಯಿಂದ ಹಾಳಾದ ರಸ್ತೆಗಳಿಗೆ ದುರಸ್ತಿ ಕಾರ್ಯಗಳನ್ನು ಸಂಬಂಧಿಸಿದ ಇಲಾಖೆಗಳು ಕೂಡಲೇ ಕ್ರಮವಹಿಸುವಂತೆ ಸಭೆಯಲ್ಲಿ ನಿರ್ದೇಶನ ನೀಡಿದರು.
ಸಭೆಯಲ್ಲಿ ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ ರುದ್ರೇಶ ಎಸ್.ಎನ್ ಹಾಗೂ ಲೋಕೋಪಯೋಗಿ ಇಲಾಖೆ, ಕೆ.ಯು.ಡಬ್ಲೂ.ಎಸ್ & ಡಿ.ಬಿ ಮತ್ತು ಕೆ.ಯು.ಐ.ಡಿ.ಎಫ್.ಸಿ ರಾಜ್ಯ ಹೆದ್ದಾರಿ ಪ್ರಾಧಿಕಾರ, ಅಧಿಕಾರಿಗಳು ಮತ್ತು ನಗರಸಭೆಯ ಅಭಿಯಂತರರು ಸಭೆಯಲ್ಲಿ ಹಾಜರಿದ್ದರು.
ಗಂಗಾವತಿ ನಗರಸಭೆ ಸದಸ್ಯನ ಅಪಹರಣ ಪ್ರಕರಣ; ಕಾಂಗ್ರೆಸ್-ಬಿಜೆಪಿ ಮುಖಂಡರ “ಜಗಳ್ ಬಂಧಿ!”
ಪರಣ್ಣ ಅಧಿಕಾರದಲ್ಲಿದ್ದಾಗೆಲ್ಲ ರೌಡಿಸಂ ಮಾಡ್ತಾರೆ: ಅನ್ಸಾರಿ
ಬಾಂಬೆ ನಂಟು ಸಾಬೀತಾದರೆ ರಾಜಕೀಯ ನಿವೃತ್ತಿ: ಪರಣ್ಣ
ಬಿಯಸ್ಕೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಇಲ್ಲಿನ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯನನ್ನು ಬಿಜೆಪಿ ಕಾರ್ಯಕರ್ತರು ಅಪಹರಿಸಿ, ಸಿಕ್ಕಿ ಬಿದ್ದಿದ್ದಾರೆ.
ಗಂಗಾವತಿಯ ಬಾರ್ ಆ್ಯಂಡ್ ರೆಸ್ಟೋರೆಂಟ್ನಿಂದ ಅಕ್ಟೋಬರ್ 29ರ ರಾತ್ರಿ ನಗರಸಭೆ ಸದಸ್ಯ ಮನೋಹರ ಸ್ವಾಮಿ ಅವರನ್ನು ಬಿಜೆಪಿಯ ಮೂವರು ಸದಸ್ಯರು ಸೇರಿದಂತೆ ಹಲವರು ಅಪಹರಿಸಿದ್ದಾರೆ ಎಂದು ಗಂಗಾವತಿ ನಗರ ಠಾಣೆಯಲ್ಲಿ ಗುರುವಾರ ರಾತ್ರಿ ಪ್ರಕರಣ ದಾಖಲಾಗಿದೆ.

ನಾಲ್ಕೈದು ಯುವಕರು ಸದಸ್ಯ ಮನೋಹರ ಸ್ವಾಮಿ ಅವರನ್ನು ಎಳೆದೊಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಮಿಂಚಿನ ಕಾರ್ಯಾಚರಣೆ ನಡೆಸಿರುವ ಗಂಗಾವತಿ ಪೊಲೀಸರು ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಪೊಲೀಸರ ಸಹಾಯದೊಂದಿಗೆ ನಗರಸಭೆ ಸದಸ್ಯ ಮತ್ತು ಮೂವರು ಅಪಹರಣಕಾರರನ್ನು ವಶಕ್ಕೆ ಪಡೆದಿದ್ದಾರೆ.
ಚುನಾವಣೆ ಹಾಲಿ- ಮಾಜಿ ಶಾಸಕರಿಗೆ ಪ್ರತಿಷ್ಠೆಯಾಗಿದ್ದು, ದಿನಕ್ಕೊಂದು ಹೈಡ್ರಾಮಾಕ್ಕೆ ವೇದಿಕೆ ಆಗಿದೆ.
ನವೆಂಬರ್ 2ಕ್ಕೆ ನಿಗದಿಯಾಗಿರೋ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಕೈ-ಕಮಲ ಪಾಳೆಯ ಎಲ್ಲಿಲ್ಲದ ಕಸರತ್ತು ಮಾಡುತ್ತಿವೆ.
ಒಟ್ಟೂ 35 ಸದಸ್ಯ ಬಲದ ಗಂಗಾವತಿ ನಗರಸಭೆಯಲ್ಲಿ ಬಿಜೆಪಿಯ 14, ಇಬ್ಬರು ಪಕ್ಷೇತರ ಮತ್ತು ಒಬ್ಬ ಜೆಡಿಎಸ್ ಸದಸ್ಯನ ಜೊತೆಗೆ ಶಾಸಕ, ಸಂಸದರ ವೋಟ್ ನೊಂದಿಗೆ ಅಧಿಕಾರ ಹಿಡಿಯುವ ಕನಸು ಕಂಡಿತ್ತು. ಆದರೆ, ಬಿಜೆಪಿ ಸದಸ್ಯೆ ಸುಧಾ ಸೋಮನಾಥ ಕಾಂಗ್ರೆಸ್ಗೆ ಬೆಂಬಲ ಸೂಚಿಸುವ ಒಳ ಒಪ್ಪಂದದ ಹಿನ್ನೆಲೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.
ಇದರಿಂದ ಸದಸ್ಯೆ ಮನೆಯವರು ಕಾಂಗ್ರೆಸ್ ಮುಖಂಡರ ವಿರುದ್ಧ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು. ಆದರೆ, ಸ್ವತಃ ಸದಸ್ಯೆ ಮತ್ತು ಆಕೆಯ ಪತಿ ಸೋಮನಾಥ ನಮ್ಮನ್ನು ಯಾರೂ ಅಪಹರಿಸಿಲ್ಲ ಎಂದು ವಿಡಿಯೋ ಬಿಡುಗಡೆ ಮಾಡಿದ್ದರು.
ಬಿಜೆಪಿ ಸೇಡು!
ತಮ್ಮ ಸದಸ್ಯರನ್ನು ತಮ್ಮತ್ತ ಸೆಳೆದ ರಿವೆಂಜ್ ಮತ್ತು ಅಧಿಕಾರ ‘ಕೈ’ ಪಾಲಾಗಬಹುದು ಎಂಬ ಆತಂಕದಿಂದ ಬಿಜೆಪಿ ಸದಸ್ಯರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಸದಸ್ಯನನ್ನು ಸಿನಿಮೀಯ ಮಾದರಿಯಲ್ಲಿ ಅಪಹರಣ ಮಾಡಿದ್ದಾರೆ. ಹೀಗೆ ಅಪಹರಿಸಿ ಚುನಾವಣೆ ಮುಗಿಯುವವರೆಗೂ ಅಜ್ಞಾತ ಸ್ಥಳದಲ್ಲಿ ಇಟ್ಟು, ಚುನಾವಣೆ ಸಭೆಗೆ ಗೈರು ಮಾಡಿಸುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ. ಆದರೆ, ಪೊಲೀಸ್ ವ್ಯವಸ್ಥೆ, ಕಾನೂನು ಇದೆ ಎನ್ನುವ ಸಾಮಾನ್ಯ ಜ್ಞಾನ ಇಲ್ಲದಂತೆ ವರ್ತಿಸಿರೋ ಬಿಜೆಪಿ ಪಾಳೆಯದ ಕೆಲಸ ನಗೆಪಾಟಲಿಗೆ ಎಡೆ ಮಾಡಿದೆ.

ಬಿಜೆಪಿಯವರು ಗಂಗಾವತಿ ನಗರಸಭೆಯ ನಮ್ಮ ಕಾಂಗ್ರೆಸ್ ಸದಸ್ಯ ಮನೋಹರಸ್ವಾಮಿಯವರನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಮುಖಕ್ಕೆ, ಕಣ್ಣಿಗೆ ಸ್ಪ್ರೇ ಮಾಡಿ, ಕೈ ಕಟ್ಟಿ, ಎದೆಗೆ ಒದ್ದು ಹೊತ್ತೊಯ್ದಿದ್ದಾರೆ. ಇದು ಬಿಜೆಪಿ ಸಂಸ್ಕೃತಿ
-ಇಕ್ಬಾಲ್ ಅನ್ಸಾರಿ, ಮಾಜಿ ಶಾಸಕರು, ಗಂಗಾವತಿ
ಗೂಂಡಾಗಿರಿ ಮಾಡಲು ನಮಗೂ ಬರುತ್ತೆ. ಆದರೆ ಅದು ಕಾಂಗ್ರೆಸ್ ಸಂಸ್ಕೃತಿಯೂ ಅಲ್ಲ. ಬಿಜೆಪಿಯವರಿಗೆ ತಾಕತ್ತಿದ್ದರೆ ಮನೋಹರಸ್ವಾಮಿ ಮನವೊಲಿಸಿ ಕರೆದುಕೊಂಡು ಹೋಗಲಿ ನೋಡೋಣ.
-ಶಿವರಾಜ ತಂಗಡಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ.

ನನಗೆ ಬಾಂಬೆ ನಂಟು ಇದೆ ಎಂಬುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ವ್ಯಾಪಾರದ ದೃಷ್ಟಿಯಿಂದ ಬಾಂಬೆ ಪರಿಚಯವೇ ಹೊರತು ರೌಡಿಸಂನಿಂದಲ್ಲ. ಅಕ್ರಮ ವ್ಯವಹಾರ ಮಾಡುವವರಿಗೆ ಬಾಂಬೆ ಗೂಂಡಾಗಳ ಪರಿಚಯ ಇರುತ್ತೆ. ಅದಕ್ಕೆ ಮಾತಾಡ್ತಾರೆ. ಗಂಗಾವತಿ ನಗರಸಭೆ ಬಿಜೆಪಿ ಮಡಿಲಿಗೆ ಸೇರುವುದು ನಿಶ್ಚಿತ. ನಾವು ಯಾರನ್ನು ಕಿಡ್ನ್ಯಾಪ್ ಮಾಡಿಲ್ಲ. ಅದೇನಿದ್ದರೂ ಕಾಂಗ್ರೆಸ್ ಸಂಸ್ಕೃತಿ.
-ಪರಣ್ಣ ಮುನವಳ್ಳಿ, ಶಾಸಕರು, ಗಂಗಾವತಿ.
ನಗರಸಭೆ ಕಾಂಗ್ರೆಸ್ ಸದಸ್ಯನ ಅಪಹರಣ
ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಇಲ್ಲಿನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನ.2 ರಂದು ಚುನಾವಣೆ ನಿಗದಿಯಾಗಿದ್ದು, ಕಾಂಗ್ರೆಸ್, ಬಿಜೆಪಿ ಪಕ್ಷಗಳೆರೆಡು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ.
ಇದರ ಬೆನ್ನಲ್ಲೆ ಕಾಂಗ್ರೆಸ್ ಸದಸ್ಯನೊಬ್ಬರನ್ನು ಅ.29ರ ರಾತ್ರಿ ಸಿನಿಮಿಯ ರೀತಿಯಲ್ಲಿಕಿಡ್ನಾಪ್ ಮಾಡಿದ್ದು, ಬಿಜೆಪಿ ಮುಖಂಡರೆ ಕಿಡ್ನಾಪ್ ಮಾಡಿರುವ ಆರೋಪ ಕೇಳಿ ಬಂದಿದೆ.
ನಗರಸಭೆ 7 ನೇ ವಾರ್ಡ್ ನ ಕಾಂಗ್ರೆಸ್ ಸದಸ್ಯ ಮನೋಹರಸ್ವಾಮಿ ಹಿರೇಮಠ ಕಿಡ್ನಾಪ್ ಆದವರು. ರಾತ್ರೊರಾತ್ರಿ ಸದಸ್ಯ ನಾಪತ್ತೆಯಾಗಿದ್ದು, ಆತನನ್ನು ನಾಲ್ಕೈದು ಜನರು ಎಳೆದೊಯ್ಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಕೂಡಲೇ ಪೊಲೀಸ್ ಠಾಣೆಗೆ ಆಗಮಿಸದ ಕೈ ಮುಖಂಡರು ತಮ್ಮ ಸದಸ್ಯನನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ ನಾಪತ್ತೆಯಾಗಿದ್ದ ಸದಸ್ಯ ಕಾರವಾರದ ಹಳಿಯಾಳ ಪೊಲೀಸ್ ಠಾಣೆಯಲ್ಲಿರುವುದು ಬೆಳಕಿಗೆ ಬಂದಿದೆ. ಅಲ್ಲದೇ
ಬಿಜೆಪಿ ಬೆಂಬಲಿತ ಯುವಕರು ಅಪಹರಣ ಮಾಡಿರುವುದು ಬಯಲಾಗಿದೆ.
ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಪಹರಣಕಾರರು ನ. 2ವರೆಗೂ ಸದಸ್ಯನನ್ನು ಅಜ್ಞಾತವಾಗಿಲಸು ಸಂಚು ರೂಪಿಸಿದ್ದರೆಂದು ತಿಳಿದು ಬಂದಿದೆ. ಮೂತ್ರ ವಿಸರ್ಜನೆ ನೆಪದಲ್ಲಿ ಕಾರಿನಿಂದ ಕೆಳಗಿಳಿದ ಸದಸ್ಯ ಅಪಹರಣಕಾರರಿಂದ ತಪ್ಪಿಸಿಕೊಂಡಿದ್ದಾನೆ. ಅಲ್ಲದೇ ಬೀಟ್ ಪೊಲೀಸರ ನೆರವಿನೊಂದಿಗೆ ಪೊಲೀಸ್ ಠಾಣೆ ಆಶ್ರಯ ಪಡೆದಿದ್ದಾರೆ. ಸದ್ಯ ಗಂಗಾವತಿ ನಗರಠಾಣೆ ಪೊಲೀಸರು ಹಳಿಯಾಳಕ್ಕೆ ತೆರಳಿದ್ದಾರೆ.
ಕಂಪ್ಲಿಷನ್ ಸರ್ಟಿಫಿಕೇಟ್ ಗಾಗಿ ಲಂಚ: ಇಂಜಿನಿಯರ್ ಮೀರಾಜುದ್ದೀನ್ ಬಂಧನ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: 2018-19 ರ ಸಾಲಿನ ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಗೊಜನೂರ ಗ್ರಾಮದಲ್ಲಿ ಕೈಗೊಂಡಿದ್ದ ಸಾಮೂಹಿಕ ಶೌಚಾಲಯ ಕಾಮಗಾರಿಯ ಎಂ ಬಿ ಕಂಪ್ಲಿಷನ್ ಸರ್ಟಿಫಿಕೇಟ್ ಕೊಡಲು ಗುತ್ತಿಗೆದಾರರಿಂದ 15 ಸಾವಿರ ರೂ, ಲಂಚ ಕೇಳಿದ್ದ ಇಂಜಿನಿಯರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಶಿರಹಟ್ಟಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಜೂನಿಯರ್ ಇಂಜಿನಿಯರ್ ಮೀರಾಜುದ್ದೀನ್ ಅವರೇ ಲಂಚ ಪಡೆಯುವಾಗ ಸಿಕ್ಕಿ ಬಿದ್ದವರು.
ಗದಗ ತಾಲೂಕಿನ ನರಸಾಪೂರ ಗ್ರಾಮದ ಗುತ್ತಿಗೆದಾರ ರವಿಕುಮಾರ್ ನಿಡಗುಂದಿ, ಗೊಜನೂರು ಗ್ರಾಮದಲ್ಲಿ ಎರಡು ಲಕ್ಷ ರೂ, ವೆಚ್ಚದಲ್ಲಿ ಸಾಮೂಹಿಕ ಶೌಚಾಲಯ ನಿರ್ಮಾಣ ಮಾಡಿದ್ದರು. ಆದರೆ ಕಾಮಗಾರಿಯ ಎಂ ಬಿ ಹಾಗೂ ವರ್ಕ್ ಕಂಪ್ಲಿಷನ್ ಸರ್ಟಿಫಿಕೇಟ್ ಕೊಡಲು ಸತಾಯಿಸಲಾಗಿತ್ತು. ಅಷ್ಟೇ ಅಲ್ಲ ಎಂ ಬಿ ಹಾಗೂ ಕಂಪ್ಲಿಷನ್ ಸರ್ಟಿಫಿಕೇಟ್ ಕೊಡಲು ಪಂಚಾಯತ್ ರಾಜ್ ಇಂಜನಿಯರಿಂಗ್ ಉಪವಿಭಾಗದ ಜ್ಯೂನಿಯರ್ ಇಂಜಿನಿಯರ್ 16 ಸಾವಿರ ರೂ, ಲಂಚ ಕೇಳಿದ್ದರು. ಕೊನೆಗೂ 15 ಸಾವಿರ ರೂ,ಗಳಿಗೆ ಸೆಟ್ಲ್ ಆಗಿತ್ತು. ಈ ಕುರಿತು ಗುತ್ತಿಗೆದಾರ ರವಿಕುಮಾರ್ ಎಸಿಬಿಗೆ ದೂರು ನೀಡಿದ್ದರು.
ಎಸಿಬಿ ಡಿಎಎಸ್ಪಿ ವಾಸುದೇವ ಎನ್ ರಾಮ್ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಲಂಚದ ಹಣ ಪಡೆಯುತ್ತಿದ್ದಾಗ ಜ್ಯೂನಿಯರ್ ಇಂಜಿನಿಯರ್ ಮೀರಾಜುದ್ದೀನ್ ಅವರನ್ನು ಹಣ ಸಮೇತ ಬಂಧಿಸಲಾಗಿದೆ.
ದಾಳಿಯಲ್ಲಿ ಇನ್ಸ್ಪೆಕ್ಟರ್ ಗಳಾದ ವಾಯ್ ಎಸ್ ಧರಣಾನಾಯಕ್, ರವೀಂದ್ರ ಕುರಬಗಟ್ಟಿ, ಸಿಬ್ಬಂದಿ ಎಮ್ ಎಮ್ ಅಯ್ಯನಗೌಡರ, ಆರ್ ಎಚ್ ಹೆಬಸೂರು, ಎಮ್ ಎನ್ ಕರಿಗಾರ, ಎನ್ ಎಸ್ ತಾಯಣ್ಣವರ, ಈರಣ್ಣ ಜಾಲಿಹಾಳ, ವೀರೇಶ್ ಜೋಳದ ಹಾಗೂ ತಾರಪ್ಪ ಇದ್ದರು.
ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ
ವಿಜಯಸಾಕ್ಷಿ ಸುದ್ದಿ ಗದಗ
ಇಲ್ಲಿನ ಪಂಚಾಕ್ಷರಿ ನಗರದಲ್ಲಿರುವ ಮನೆಯೊಂದರಲ್ಲಿ ಶಾರ್ಟ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡು, ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾಗಿವೆ.
ಚಂದ್ರು ಅಸಂಗಿ ಅವರ ಮನೆಯಲ್ಲಿ ಗುರುವಾರ ಬೆಳಗ್ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಗಾಬರಿಗೊಂಡ ಕುಟುಂಬದ ಸದಸ್ಯರು ಮನೆಯಿಂದ ಹೊರ ಬಂದಿದ್ದಾರೆ. ಅಷ್ಟೊತ್ತಿಗೆ ಬೆಂಕಿ ಕೆನ್ನಾಲಿಗೆ ಮನೆಯನ್ನು ವ್ಯಾಪಿಸಿದೆ. ಗೃಹ ಬಳಕೆ ವಸ್ತುಗಳು ಸುಟ್ಟು ಕರಕಲಾಗಿವೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ರಾಜೀವ ಗಾಂಧಿ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ತಿ ವಿಸರ್ಜಿಸಲು ಹೋದ ವ್ಯಕ್ತಿ ನೀರುಪಲು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬದಾಮಿ: ತಂದೆಯ ಅಸ್ತಿ ವಿಸರ್ಜಿಸಲು ಹೋಗಿದ್ದ ವೇಳೆ ವ್ಯಕ್ತಿಯೊಬ್ಬ ನೀರು ಪಾಲಾಗಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ಗಜೇಂದ್ರಗಡದ ಮಹಾಂತೇಶ್ ಯಾದವ್(೪೫) ಮೃತ ದುರ್ದೈವಿಯಾಗಿದ್ದು, ತನ್ನ ತಂದೆಯ ೧೧ ದಿನದ ಅಸ್ತಿಯನ್ನು ಚೊಳಚಗುಡ್ಡದ ಬಳಿ ಮಲಪ್ರಭ ನದಿಗೆ ವಿಸರ್ಜನೆ ಮಾಡುವ ವೇಳೆ ಕಾಲುಜಾರಿ ಮಲಪ್ರಭ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.
ಸುಮಾರು ಮೂರು ಕಿಮಿ ದೂರದಲ್ಲಿ ನಾಗರಾಳ ಎಸ್ ಪಿ ಬಳಿ, ಮಹಾಂತೇಶ್ ಶವ ಪತ್ತೆಯಾಗಿದೆ. ಬಾಗಲಕೋಟೆ ಜಿಲ್ಲಾ ಅಗ್ನಿಶಾಮಕ ಜಿಲ್ಲಾ ಅಧಿಕಾರಿ, ಮಲ್ಲಿಕಾರ್ಜುನಪ್ಪ, ಪ್ರಧಾನ ಸಹಾಯಕ ಅಗ್ನಿಶಾಮಕ ಅಧಿಕಾರಿ, ಹಾಗೂ ಬದಾಮಿ ಅಗ್ನಿಶಾಮಕ ದಳದ ಸಿಬ್ಬಂದಿ, ಸತತ ಮೂರು ತಾಸು ಕಾರ್ಯಾಚರಣೆ ನಡೆಸಿ ಮಹಾಂತೇಶ್ ಮೃತದೇಹ ಹೊರತೆಗೆದಿದ್ದಾರೆ.
ಬದಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸ್ಟ್ರೆಕ್ಚರ್ ನಲ್ಲಿ ಬಂದು ಮತಚಲಾವಣೆ ಮಾಡಿದ ಪದವೀಧರ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ಪದವೀಧರನೊಬ್ಬ ಮತಗಟ್ಟೆಗೆ ಸ್ಟ್ರೆಕ್ಚರ್ ನಲ್ಲಿ ಬಂದು ಮತ ಚಲಾವಣೆ ಮಾಡಿದ್ದಾನೆ.
ಇಲ್ಲಿನ ಪುಟ್ಟರಾಜ ನಗರ ನಿವಾಸಿ ಮರ್ದಾನ್ ಅಲಿ ದೊಡ್ಡಮನಿ ಅಂಬುಲೆನ್ಸ್ ನಲ್ಲಿ ಮತಗಟ್ಟೆ ಸಂಖ್ಯೆ
೫೯ ಕ್ಕೆ ಆಗಮಿಸಿ, ಮತ ಚಲಾಯಿಸಿದರು.

ನಾಲ್ಕು ದಿನಗಳ ಹಿಂದೆ ಅಪಘಾತಕ್ಕೀಡಾಗಿದ್ದ ಮರ್ದಾನ್ ಅಲಿ ಕಾಲು ಮುರಿದಿದ್ದರಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆಗೆ ಮತದಾನ ಮಾಡಬೇಕು ಎಂದು ವೈದ್ಯರ ಬಳಿ ಮನವಿ ಮಾಡಿದ್ದರು. ಹೀಗಾಗಿ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಅವರನ್ನು ಮತಗಟ್ಟೆಗೆ ಕರೆದುಕೊಂಡು ಬರಲಾಗಿತ್ತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ, ಅನಿಲ್ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ ಮತ್ತಿತರರು ಇದ್ದರು.
ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದ ಸಂಕನೂರ -ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದೆಲ್ಲೆಡೆ ಬಿಜೆಪಿ ಅಲೆ -ಸಚಿವರು, ಸಂಸದರು, ಶಾಸಕರು, ಕಾರ್ಯಕರ್ತರಿಂದ ಭರ್ಜರಿ ಪ್ರಚಾರ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ವಿಧಾನ ಪರಿಷತ್ತಿನಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಪ್ರತಿನಿಧಿಯಾಗಿ ಆರು ವರ್ಷಗಳಲ್ಲಿ ಅಗಾಧವಾದ ಸಾಧನೆ ಮಾಡಿರುವ ಪ್ರೊ| ಎಸ್.ವಿ. ಸಂಕನೂರ, ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಸದನದ ಒಳಗೆ ಹಾಗೂ ಹೊರಗೆ ಅವಿರತವಾಗಿ ಶ್ರಮಿಸಿದ್ದಾರೆ. ಅವರಿಗೆ ನ್ಯಾಯ ದೊರಕಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದಾರೆ. ಕ್ಷೇತ್ರದ ಮತದಾರರ ಜತೆಗೆ ನಿರಂತರ ಸಂಪರ್ಕದಲ್ಲಿರುವ ಅವರು ಎರಡನೇ ಅವಧಿಗೆ ಪುನರಾಯ್ಕೆಗೊಳ್ಳುವ ವಿಶ್ವಾಸದಲ್ಲಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಬಿ.ಸಿ. ಪಾಟೀಲ, ಸಿ.ಸಿ. ಪಾಟೀಲ, ಬಿ. ಶ್ರೀರಾಮುಲು ಹಾಗೂ ಶಿವರಾಮ ಹೆಬ್ಬಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಯುವ ಮುಖಂಡ ಅನಿಲ ಮೆಣಸಿನಕಾಯಿ ಮುಂತಾದ ದಿಗ್ಗಜರು ಸಂಕನೂರು ಪರ ಪ್ರಚಾರ ಕೈಗೊಂಡಿದ್ದಾರೆ.

ಮೂವರು ಸಂಸದರು, 19 ಶಾಸಕರು, ಮೂವರು ವಿಧಾನ ಪರಿಷತ್ ಸದಸ್ಯರು, ಜಿ.ಪಂ. ಹಾಗೂ ತಾ.ಪಂ.ಗಳ ಅಧ್ಯಕ್ಷರು ಹಾಗೂ ಸದಸ್ಯರು, ಸ್ಥಳೀಯ ಮುಖಂಡರು, ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೂ ಹಗಲಿರುಳೂ ಕ್ಷೇತ್ರದಾದ್ಯಂತ ಸಂಚರಿಸಿ ಸಂಕನೂರ ಅವರ ಗೆಲುವಿಗಾಗಿ ದುಡಿಯುತ್ತಿದ್ದಾರೆ. ಬೇರುಮಟ್ಟದಲ್ಲಿ ಪಕ್ಷ ಸಂಘಟನೆ ಬಲವಾಗಿರುವ ಕಾರಣ ತಮ್ಮ ಗೆಲುವೇನೂ ಕಷ್ಟವಾಗಲಾರದು. ಅಲ್ಲದೆ, ಧಾರವಾಡ ಜಿಲ್ಲೆಯಲ್ಲಿ ಬಿಜೆಪಿಯಿಂದ ಕಾಲ್ ಸೆಂಟರ್ ಆರಂಭಿಸಿದ್ದು, ಕಾರ್ಯಕರ್ತರು ಸುಮಾರು 13 ಸಾವಿರಕ್ಕೂ ಅಧಿಕ ಮತದಾರರ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ, ಅವರಿಗೆ ಕರೆ ಮಾಡಿ ಹಾಗೂ ಸಂದೇಶಗಳನ್ನು ಕಳುಹಿಸಿ ಗೆಲುವಿಗೆ ಪ್ರಯತ್ನಿಸುತ್ತಿದ್ದಾರೆ ಎಂದು ಸಂಕನೂರ ಹೇಳಿದ್ದಾರೆ.
ಅಪಾರ ಅನುಭವಿ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಪ್ರೊ| ಸಂಕನೂರು ಅವರು ಮತದಾರರ ಮೊದಲ ಪ್ರಾಶಸ್ತ್ಯದ ಆಯ್ಕೆಯೂ ಆಗಲಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ, ರಾಜ್ಯದ 36 ಇಲಾಖೆಗಳಲ್ಲಿ ಖಾಲಿಯಾಗಿರುವ ಸುಮಾರು ಎರಡು ಲಕ್ಷ ಹುದ್ದೆಗಳ ಭರ್ತಿಗೆ ಸದನದಲ್ಲಿ ಒತ್ತಾಯಿಸಿರುವ ಸಂಕನೂರ, ಸುಮಾರು 35 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಭಡ್ತಿ, ವಿಶೇಷ ಭತ್ಯೆ, ವೇತನ ತಾರತಮ್ಯ ನಿವಾರಣೆ, ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಳ ಮುಂತಾದ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸಿದ್ದಾರೆ.

ಮತಕ್ಷೇತ್ರದ ವ್ಯಾಪ್ತಿಯ ಗದಗ, ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡದಲ್ಲಿ ಉದ್ಯೋಗ ಮೇಳಗಳನ್ನು ಸಂಘಟಿಸಿರುವ ಸಂಕನೂರ ಅವರು, 1,955 ಪದವೀಧರರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಪದವಿ ಹಾಗೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ, ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ 7ನೇ ಯುಜಿಸಿ ವೇತನ ಜಾರಿ ಮಾಡುವಲ್ಲಿ ಹಾಗೂ ತಾಂತ್ರಿಕ, ವೈದ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿಗೆ 7ನೇ ಎಐಸಿಟಿಇ ವೇತನ ಶ್ರೇಣಿ ಜಾರಿಗೆ ಮತಿತು ವೈದ್ಯಕೀಯ ಸಿಬ್ದಂದಿಗೆ ಎನ್.ಪಿ.ಎಸ್. ಯೋಜನೆ ಜಾರಿ ಮಾಡಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ.

ಭವಿಷ್ಯದ ಯೋಜನೆಗಳು
ಎನ್.ಪಿ.ಎಸ್. ಬದಲು ಓ.ಪಿ.ಎಸ್. ಜಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆ ಸಿಬ್ಬಂದಿಗೆ ಪಿಂಚಣಿ ಯೋಜನೆ ಜಾರಿ, ಅತಿಥಿ ಉಪನ್ಯಾಸಕರಿಗೆ ಗೌರವ ಧನ ಹೆಚ್ಚಳ, ಪಶ್ಚಿಮ ಬಂಗಾಳ ರಾಜ್ಯ ಮಾದರಿಯಲ್ಲಿ ಸೇವಾ ಭದ್ರತೆ ಒದಗಿಸುವುದು, 1995ರ ಬಳಿಕ ಆರಂಭವಾಗಿರುವ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವುದು, ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಉದ್ಯೋಗ ಮೇಳಗಳನ್ನು ಸಂಘಟಿಸಿ, ಯುವಸಮುದಾಯಕ್ಕೆ ಉದ್ಯೋಗ ಒದಗಿಸಿಕೊಡುವುದು ತಮ್ಮ ಭವಿಷ್ಯದ ಯೋಜನೆಗಳೆಂದು ಹೇಳಿರುವ ಪ್ರೊ| ಸಂಕನೂರ, ಕೇಂದ್ರ ಹಾಗೂ ರಾಜ್ಯ ಎರಡೂ ಕಡೆಗಳಲ್ಲಿ ಬಿಜೆಪಿ ಸರಕಾರವೇ ಇರುವುದರಿಂದ ತಮ್ಮ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಅನುಕೂಲವಾಗುತ್ತದೆ.

ಹಲವು ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಶೀಘ್ರ ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಸಂಕನೂರ ತಿಳಿಸಿದ್ದಾರೆ.
ಸಂಕನೂರ ಪರ ಅಲೆ
ಸರಳ, ಸಜ್ಜನಿಕೆಯ ವ್ಯಕ್ತಿಯಾಗಿರುವ ಸಂಕನೂರ ಅವರು ಸದಾ ಜನರೊಂದಿಗೇ ಇದ್ದು, ಅವರ ಎಲ್ಲ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ಜನಪ್ರತಿನಿಧಿ. ಯಾರ ಜೊತೆಗೂ ವಿರೋಧ ಕಟ್ಟಿಕೊಳ್ಳದೆ ಸದಾ ನಗುಮೊಗದಿಂದಲೇ ಎಲ್ಲರೊಂದಿಗೂ ವ್ಯವಹರಿಸುತ್ತಾರೆ.

ಕಳೆದ ಬಾರಿ 14,000 ಮತಗಳ ಅಂತರದಿಂದ ಸಂಕನೂರ ಗೆದ್ದಿದ್ದರು. ಈ ಬಾರಿ ಅವರ ಪ್ರತಿಯೊಂದು ಪ್ರಚಾರ ಸಭೆಯಲ್ಲೂ ಸುಮಾರು 500ಕ್ಕಿಂತ ಹೆಚ್ಚು ಜನರು ಭಾಗವಹಿಸಿರುವ ಕಾರಣ, ಅವರ ಗೆಲುವಿನ ಅಂತರ 25 ಸಾವಿರವನ್ನು ದಾಟುವ ನಿರೀಕ್ಷೆ ಕ್ಷೇತ್ರದಲ್ಲಿ ವ್ಯಕ್ತವಾಗಿದೆ.
ಎಸ್.ವಿ. ಸಂಕನೂರ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರಡ. ವಿಧಾನ ಪರಿಷತ್ ಸದಸ್ಯರಾಗಿ ಆರು ವರ್ಷಗಳ ಕಾಲ ಪರಿಷತ್ ಒಳಗೆ ಮತ್ತು ಹೊರಗೆ ಪದವೀಧರರ ಜೊತೆಗೆ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದ್ದಾರೆ. ಸಂಕನೂರ ಅವರ ವೈಯಕ್ತಿಕ ಸೇವೆ, ಸರಕಾರದ ಸಾಧನೆ ಸಂಕನೂರು ಅವರ ಗೆಲುವಿಗೆ ಕಾರಣವಾಗಲಿವೆ.
– ಅನಿಲ ಮೆಣಸಿನಕಾಯಿ, ಬಿಜೆಪಿ ಯುವ ಮುಖಂಡ

