Home Blog Page 3086

ಸಂಭ್ರಮಿಸುವ ಕ್ರೈಸ್ತರ ಕೈಕಟ್ಟಿ ಹಾಕಿದ ಕೋವಿಡ್; ಸಾಂಸ್ಕೃತಿಕ ಚುವಟಿಕೆಗಳಿಲ್ಲದೇ ಕಳೆಗುಂದಿದ ಕ್ರಿಸ್‌ಮಸ್!

0

ವಿಜಯಸಾಕ್ಷಿ ಸುದ್ದಿ, ಗದಗ

ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ಅವಳಿ ನಗರದ ವಿವಿಧ ಭಾಗಗಳಲ್ಲಿರುವ ರೋಮನ್ ಕ್ಯಾಥೋಲಿಕ್ ಹಾಗೂ ಪ್ರೊಟೆಸ್ಟೆಂಟ್ ಚರ್ಚ್‌ಗಳಲ್ಲಿ ಕ್ರೈಸ್ತರು ಶುಕ್ರವಾರ ಕ್ರಿಸ್‌ಮಸ್ ಹಬ್ಬವನ್ನು ಅತ್ಯಂತ ಸರಳ ಹಾಗೂ ಸಾಂಪ್ರದಾಯಕವಾಗಿ ಆಚರಿಸಿದರು. ಕೇಕ್ ಕತ್ತರಿಸಿ, ಸಿಹಿ ತಿನ್ನಿಸಿ ಯೇಸುವಿನ ಜನ್ಮದಿನವನ್ನು ಆಚರಿಸಿದ ಕ್ರೈಸ್ತರು ಒಬ್ಬರಿಗೊಬ್ಬರು ಶುಭಾಶಯ ಕೋರಿದರು.

ಪ್ರತಿವರ್ಷ ಕ್ರಿಸ್‌ಮಸ್ ಹಬ್ಬವನ್ನು ಡಿ.24ರ ರಾತ್ರಿಯಿಂದ ಜ.1 ರವರೆಗೆ ಒಂದು ವಾರಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಈ ಅವಧಿಯಲ್ಲಿ ಚರ್ಚ್‌ಗಳಲ್ಲಿ ದಿನನಿತ್ಯ ಒಂದಿಲ್ಲೊಂದು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ನೃತ್ಯ, ಹಾಡಿನ ಸ್ಪರ್ಧೆಗಳು ಸೇರಿದಂತೆ ಹಲವು ಸಾರ್ವಜನಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಇಂತಹ ಸಂಭ್ರಮಾಚರಣೆಗೆ ಕೊರೊನಾ ಕಡಿವಾಣ ಹಾಕಿದ್ದು, ಕ್ರಿಸ್‌ಮಸ್ ಮೇಲೆ ಕೊರೊನಾ ಕರಿ ನೆರಳು ಆವರಿಸಿತ್ತು. ಸಂಭ್ರಮಿಸುವ ಕೈಗಳನ್ನು ಕೋವಿಡ್ ಕಟ್ಟಿ ಹಾಕಿತ್ತು. ಹಾಗಾಗಿ ನಗರದ ಬಹುತೇಕ ಚರ್ಚ್‌ಗಳಲ್ಲಿ ಯಾವುದೇ ಆಡಂಭರವಿರಲಿಲ್ಲ.

ಸರಳವಾಗಿ ಆಚರಿಸಲಾದ ಈ ಸಲದ ಕ್ರಿಸ್‌ಮಸ್ ಯೇಸುವಿನ ಪ್ರಾರ್ಥನೆಗಷ್ಟೇ ಸೀಮಿತವಾಗಿತ್ತು. ಅಲ್ಲದೇ, ಕೆಲವೇ ಕೆಲವು ಜನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬೈಬಲ್‌ನ ಪ್ರಸಂಗಗಳನ್ನು ಓದಿರುವುದು ಈ ಬಾರಿಯ ಕ್ರಿಸ್‌ಮಸ್‌ಗೆ ಸಾಕ್ಷಿಯಾಯಿತು.

ಕ್ರಿಸ್‌ಮಸ್ ದಿನದ ಮುನ್ನಾ ದಿನ ಕ್ರಿಸ್‌ಮಸ್ ಈವ್ಸ್ ರಾತ್ರಿ ಹಬ್ಬದ ನಿಮಿತ್ತ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ, ಬಲಿಪೂಜೆ ಮಾಡುವ ಮೂಲಕ ಸಂತೋಷ ಹಂಚಿಕೊಳ್ಳಲಾಯಿತು. ಪ್ರತಿ ಚರ್ಚ್‌ಗಳಲ್ಲಿ ಮಹೋನ್ನತ ದೇವರಿಗೆ ಮಹಿಮೆ ಸಲ್ಲಿಸುವ ಗೋದಲಿ ನಿರ್ಮಿಸಿ ಕ್ರಿಸ್ತನ ಜನ್ಮ ವೃತ್ತಾಂತ ಸಾರುವ ದೃಶ್ಯಾವಳಿಗಳನ್ನು ಮರುಕಳಿಸಲಾಗಿತ್ತು. ಕೊರೊನಾ ನಿಯಮ ಪಾಲಿಸುವ ಸಲುವಾಗಿ ಈ ಬಾರಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸದೇ, ಕೇವಲ ಯೇಸುವಿನ ಪ್ರಾರ್ಥನೆ ಅಷ್ಟೇ ಮಾಡಲಾಯಿತು.

ಅವಳಿ ನಗರದ ಚರ್ಚ್ ಆಫ್ ಬ್ಲೆಸ್ಸಿಂಗ್, ಸಂತ ಇಗ್ನೇಷಿಯಸ್ ಲೊಯೋಲಾ ಚರ್ಚ್, ಸಿಎಸ್‌ಐ ಬಾಶಲ್ ಮಿಷನ್, ಎಸ್‌ಪಿಜಿ, ಇಎಸ್‌ಐ, ಸಾಲೋಮಿನಿಸ್ಟ್ರಿ, ಚರ್ಚ್ ಆಫ್ ಗಾಡ್, ಹೆಬ್ರನ್ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಸಂಭ್ರಮಾಚರಣೆ ಕಳೆಗುಂದಿತ್ತು.

ಪ್ರತಿವರ್ಷ ಜನರಿಂದ ಗಿಜಗುಡುತ್ತಿದ್ದ ಚರ್ಚ್‌ಗಳಲ್ಲಿ ಈ ವರ್ಷ ಕೊರೊನಾ ಭೀತಿಯಿಂದಾಗಿ ಬೆರಳೆಣಕೆಯಷ್ಟು ಜನರು ಮಾತ್ರ ಕಾಣಿಸುತ್ತಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡು ಯೇಸುವಿನ ಪ್ರಾರ್ಥನೆಯಲ್ಲಿ ತಲ್ಲಿನರಾಗಿದ್ದರು. ಯೇಸುವಿನ ಶಿಲುಬೆಯ ಮುಂದೆ ಮೇಣದ ಬತ್ತಿ ಹಚ್ಚಿ ವೈಯಕ್ತಿಕ ಮತ್ತು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.

ರಾಜ್ಯ ಸರ್ಕಾರ ಕ್ರಿಸ್‌ಮಸ್ ಆಚರಣೆಗೆ ಅವಕಾಶ ಕಲ್ಪಿಸಿತ್ತು. ಆದರೆ, ಇಂತಹ ಸಂದಿಗ್ಧ ಪರಿಸ್ಥತಿಯಲ್ಲಿ ವಿಜೃಂಭಿಸುವುದು ಸೂಕ್ತವಲ್ಲ. ಕೊರೊನಾ ನಿಯಂತ್ರಿಸಲು ಸರ್ಕಾರದೊಂದಿಗೆ ಸಹಕರಿಸಬೇಕಿರುವುದು ನಮ್ಮ ಆದ್ಯ ಕರ್ತವ್ಯ. ಈ ಹಿನ್ನೆಲೆಯಲ್ಲಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳದೇ ಸರಳ ಕ್ರಿಸ್‌ಮಸ್ ಆಚರಿಸುತ್ತಿದ್ದೇವೆ.

ಜಾಕೋಬ್ ಆಂಟೋನಿ, ಸಂತ ಇಗ್ನೇಷಿಯಸ್ ಲೊಯೋಲಾ, ಧರ್ಮ ಕೇಂದ್ರದ ಗುರುಗಳು

ಒಂದೇ ರಾತ್ರಿ ಮೂರು ಕಡೆ ದಾಳಿ; ಲಾರಿ ಚಾಲಕರ ಮೇಲೆ ಹಲ್ಲೆ ನಡೆಸಿ ಪರಾರಿ

ವಿಜಯಸಾಕ್ಷಿ ಸುದ್ದಿ, ಗದಗ

ಲಾರಿ ಚಾಲಕರ ಮೇಲೆ ದಾಳಿ‌ ಮಾಡಿ ಹಲ್ಲೆ ನಡೆಸಿ, ಹಣ ವಸೂಲಿ ಮಾಡಿರುವ ಘಟನೆ ಜಿಲ್ಲೆಯ ಗದಗ ತಾಲ್ಲೂಕಿನ ಹುಲಕೋಟಿ, ಸಂಭಾಪುರ ಕ್ರಾಸ್ ಹಾಗೂ ಲಕ್ಕುಂಡಿ ಗ್ರಾಮಗಳಲ್ಲಿ ನಡೆದಿವೆ.

ಒಂದೇ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮೂರು ಕಡೆಗಳಲ್ಲಿ ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ.

ಹುಲಕೋಟಿಯಲ್ಲಿ ಲಾರಿ ಸೈಡಿಗೆ ಹಾಕಿ ವಿಶ್ರಾಂತಿ ಪಡೆಯುತ್ತಿದ್ದ ಯಲ್ಲಾಪುರ ತಾಲ್ಲೂಕಿನ ಕಿರವತ್ತಿ ಗ್ರಾಮದ ವಿಜಯಕುಮಾರ್ ಎಂಬ
ಮೈನ್ಸ್ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಚಾಲಕ ವಿಜಯಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ.

ಸಂಭಾಪುರ ಕ್ರಾಸ್ ಬಳಿಯೂ ಲಾರಿ ಮೇಲೆ ದಾಳಿ ನಡೆಸಿ ಲಾರಿಯ ಗಾಜು ಒಡೆದಿದ್ದಲ್ಲದೇ, ಚಾಲಕ ಜೀವನಸಾಬ್ ಬೂದಿಹಾಳ ಎಂಬುವವರ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್ ಕಿತ್ತುಕೊಂಡಿದ್ದಾರೆ.

ಇನ್ನು ಅದೇ ಮೂವರು ದುಷ್ಕರ್ಮಿಗಳ ಗ್ಯಾಂಗ್ ಲಕ್ಕುಂಡಿಯ ಬಸ್ ನಿಲ್ದಾಣದ ಹತ್ತಿರವೂ ಲಾರಿಯ ಚಾಲಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಚಾಲಕ ಕಿರುಚಿಕೊಂಡಿದ್ದಾನೆ. ಆಗ ಅಲ್ಲಿಂದ ದುಷ್ಕರ್ಮಿಗಳು ಕಾಲ್ಕಿತ್ತಿದ್ದಾರೆ.

ಗಾಯಗೊಂಡಿರುವ ಚಾಲಕರಾದ ವಿಜಯಕುಮಾರ್ ಹಾಗೂ ಜೀವನಸಾಬ್ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯಲ್ಲಿ ಒಂದೇ ರಾತ್ರಿ ನಡೆದ ಈ ದಾಳಿಯಿಂದಾಗಿ ಲಾರಿ ಚಾಲಕರನ್ನು ಭಯಬೀತರನ್ನಾಗಿಸಿದೆ.

ನೈಟ್ ಕರ್ಪ್ಯೂ ಬಗ್ಗೆ ಸರ್ಕಾರ ಗೊಂದಲದಲ್ಲಿರಲಿಲ್ಲ; ಸಚಿವ ಸಿ.ಸಿ.ಪಾಟೀಲ್ ಸ್ಪಷ್ಟನೆ

ವಿಜಯಸಾಕ್ಷಿ ಸುದ್ದಿ, ಗದಗ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಹಿನ್ನಲೆಯಲ್ಲಿ
ನಗರದ ಶ್ರೀನಿವಾಸ್ ಭವನದಲ್ಲಿ ಗಣಿ ಮತ್ರು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸರಳವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಚಿವ ಸಿ.ಸಿ.ಪಾಟೀಲ್ ಅವರು, ಕರ್ಪ್ಯೂ ವಿಚಾರದಲ್ಲಿ ಸರ್ಕಾರದ ಮಟ್ಟದಲ್ಲಿ ಯಾವುದೇ ಗೊಂದಲವಿರಲಿಲ್ಲ. ರೂಪಾಂತರಗೊಂಡಿರುವ ಕೊರೊನಾ ವೈರಸ್ ಹರಡುವಿಕೆಯ ವೇಗ ಜಾಸ್ತಿ ಇದೆ.‌ಕ್ರಿಸ್ ಮಸ್ ಹಬ್ಬ, ಹೊಸ ವರ್ಷದ ಆಚರಣೆಯಲ್ಲಿ ಲೇಟ್ ನಿಂದ ಲೈಟ್ ವರಿಗೆ ಹೊರಗಡೆ ಓಡಾಡುತ್ತಾರೆ. ರಾತ್ರಿ ವೇಳೆ ಮೇನ್ ಬತ್ತಿ ಹಚ್ಚಿಕೊಂಡು ಡ್ಯಾನ್ಸ್ ಮಾಡುತ್ತಾರೆ. ಜನರು ಗುಂಪು ಗುಂಪಾಗಿ ಸೇರಿ ಮೋಜು ಮಸ್ತಿ ಮಾಡುತ್ತಾರೆ.
ಇದೆಲ್ಲವನ್ನು ತಪ್ಪಿಸುವ ಸಲುವಾಗಿ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿತ್ತು ಎಂದು ರಾಜ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಹಲವಾರು ಸಂಘಟನೆ, ಬೇರೆ ಬೇರೆ ಪಕ್ಷಗಳ ಒತ್ತಡದಿಂದ ನೈಟ್ ಕರ್ಫ್ಯೂ ವಾಪಾಸ್ ಪಡೆಯಲಾಗಿದೆ. ಹಾಗಾಗಿ ಜನರು ಗುಂಪು ಗುಂಪಾಗಿ ಸೇರಬೇಡಿ. ಮೋಜು ಮಸ್ತಿಯಿಂದ ದೂರವಿರುವಂತೆ ಸಚಿವ ಸಿ.ಸಿ.ಪಾಟೀಲ್ ಮನವಿ ಮಾಡಿಕೊಂಡರು.

ಶಾಲೆ ಆರಂಭದ ಕುರಿತು ಪ್ರತಿಕ್ರಿಯಿಸದ ಅವರು, ಡಿ.28 ರಂದು ರಾಜ್ಯ ಸಚಿವ ಸಂಪುಟ ಸಭೆ ಇದೆ. ಅಲ್ಲಿ ನಿರ್ಣಯ ಮಾಡಲಾಗುತ್ತದೆ. ನಾನು ನನ್ನ ಅಭಿಪ್ರಾಯವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸುತ್ತೇನೆ
ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಸಂಕ್ರಾಂತಿಗೆ ಸಚಿವ ಸಂಪುಟ ವಿಸ್ತರಣೆ: ಶಾಸಕ ಯತ್ನಾಳ್

ವಿಜಯಸಾಕ್ಷಿ ಸುದ್ದಿ, ವಿಜಯಪುರ

ಮಕರ ಸಂಕ್ರಾಂತಿಗೆ ರಾಜ್ಯದಲ್ಲಿ ಐತಿಹಾಸಿಕ ಬದಲಾವಣೆಗಳಾಗಲಿದ್ದು, ಉತ್ತರ ಕರ್ನಾಟಕಕ್ಕೆ ಉತ್ತರಾಯಣ ಆಗಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಶಯ ವ್ಯಕ್ತಪಡಿಸಿದರು.

ವಿಜಯಪುರದಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಆಗುತ್ತದೆಯೋ ಪುನರ್ ರಚನೆಯಾಗುತ್ತೋ ಖಚಿತ ಮಾಹಿತಿ ಇಲ್ಲಾ. ಎಲ್ಲವೂ ಗೋಡಾರ್ಥವಿದೆ ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆಯಾಗುತ್ತೆ ಎಂಬುದನ್ನು ನಾನು ಹೇಳುವುದಿಲ್ಲ, ನಾನದರಲ್ಲಿಲ್ಲ್ಲ. ನಾನು ಮಂತ್ರಿಯಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ನನಗೆ ಮಂತ್ರಿಯಾಗಲೂ ಮನಸ್ಸಿಲ್ಲ. ಹಣೆಬರಹ ಯಾರದ್ದೂ ಯಾರಿಗೂ ಗೊತ್ತಿಲ್ಲ, ಹಣೆಬರಹದಲ್ಲಿದ್ದರೆ ಸಿಎಂ ಆಗಬಹುದು. ಆಗಬಾರದು ಅಂತೆಲ್ಲಿದೆ? ಎಂದು ಹೇಳುವ ಮೂಲಕ ಸಿಎಂ ಆಗಬೇಕೆಂಬ ಕನಸನ್ನು ಯತ್ನಾಳ್ ಪರೋಕ್ಷವಾಗಿ ಬಿಚ್ಚಿಟ್ಟರು.

ಕೇಂದ್ರ ಹೈಕಮಾಂಡ್ ನೂರಕ್ಕೆ ನೂರರಷ್ಟು ಒಳ್ಳೆಯ ನಿರ್ಣಯ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವಿದೆ. ವಿಜಯಪುರ ಜಿಲ್ಲೆಗೆ ಇಷ್ಟುದಿನ ಆದ ಅನ್ಯಾಯಕ್ಕೆ ನ್ಯಾಯ ಕೊಡುವ ಕೆಲಸ ಕೇಂದ್ರ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಶಾಲೆ ಆರಂಭದಲ್ಲಿ ಅವಸರ ಬೇಡ

ಮಕ್ಕಳ ಆರೋಗ್ಯ ಹಾಗೂ ಭವಿಷ್ಯ ಮುಖ್ಯ. ನಾನು ಶಿಕ್ಷಣ ಸಂಸ್ಥೆಯ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ಒಂದು ವರ್ಷ ಶಿಕ್ಷಣ ಸಂಸ್ಥೆಗಳಿಗೆ ಹಾನಿಯಾದರೂ ನಾವು ಸಹಿಸಿಕೊಳ್ಳಬಹುದು. ಆದರೆ, ಮಕ್ಕಳ ಮೇಲೆ ಯಾವುದೇ ದುಷ್ಪರಿಣಾಮ ಆಗಬಾರದು. ಹಿಂದಿನಂತೆ ಈಗ ನಾಲ್ಕೈದು ಮಕ್ಕಳ ಬದಲು, ಒಂದೆರಡು ಮಕ್ಕಳಿದ್ದು, ಪಾಲಕರು ಜೋಪಾನದಿಂದ ಬೆಳೆಸಿರುತ್ತಾರೆ. ಹಾಗಾಗಿ ಶಾಲೆ ಆರಂಭದಲ್ಲಿ ಅವಸರ ಮಾಡುವ ಅವಶ್ಯಕತೆ ಇಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ

ಸಿಎಂ ಯಡಿಯೂರಪ್ಪ ಕರ್ಫ್ಯೂ ವಾಪಸ್ ತೆಗೆದುಕೊಂಡಿದ್ದು ಸ್ವಾಗತಾರ್ಹ. ಯಾರೋ ಒಬ್ಬರ ಮಾತು ಕೇಳಿ ತೀರ್ಮಾನ ತೆಗೆದುಕೊಳ್ಳುವ ಬದಲು, ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ಯತ್ನಾಳ ಒತ್ತಾಯಿಸಿದರು.

ಬೀದಿ ಬದಿ ವ್ಯಾಪಾರಸ್ಥರಿಂದ ಹಣ ವಸೂಲಿ; ಇಬ್ಬರು ಪೊಲೀಸರು ಅಮಾನತು

ವಿಜಯಸಾಕ್ಷಿ ಸುದ್ದಿ, ಮೈಸೂರು

ರಸ್ತೆ ಬದಿ ವ್ಯಾಪಾರಿಗಳಿಂದ ಹಣ ವಸೂಲಿ ಆರೋಪದ ಹಿನ್ನೆಲೆಯಲ್ಲಿ ಪೊಲೀಸರಿಬ್ಬರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತಾ ಆದೇಶ ಹೊರಡಿಸಿದ್ದಾರೆ.

ಎಎಸ್ಐ ಕುಮಾರಸ್ವಾಮಿ ಹಾಗೂ ಪಿಸಿಆರ್ ವಾಹನ ಚಾಲಕ ಪೇದೆ ಮಣಿಕಂಠ ಅಮಾನತು ಆಗಿದ್ದಾರೆ.

ನಗರದ ಗಾಂಧಿ ಚೌಕ ವ್ಯಾಪ್ತಿಯಲ್ಲಿ ವ್ಯಾಪಾರಸ್ಥರಿಂದ ಇಬ್ಬರು ಪೊಲೀಸರು ಹಣ ವಸೂಲಿ ಮಾಡುತ್ತಿದ್ದುದ್ದನ್ನು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವೀಡಿಯೋ ವೈರಲ್ ಮಾಡಿದ್ದರು. ಹಣ ಪೀಕುತ್ತಿದ್ದ ವಿಡಿಯೋ ವೈರಲ್ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಆಯುಕ್ತ ಚಂದ್ರಗುಪ್ತಾ ಅವರು ಸಸ್ಪೆಂಡ್ ಮಾಡಿ ಆದೇಶಿಸಿದ್ದಾರೆ.

ನಂಜನಗೂಡು ದೇವಾಲಯದ ಹುಂಡಿ ಎಣಿಕೆ; ಹುಂಡಿಯಲ್ಲಿ ನಿಷೇಧಿತ ನೋಟುಗಳು ಪತ್ತೆ!

ವಿಜಯಸಾಕ್ಷಿ ಸುದ್ದಿ, ಮೈಸೂರು

ದಕ್ಷಿಣ ಕಾಶಿ ನಂಜನಗೂಡು ದೇವಾಲಯದ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆದಿದ್ದು, ಎರಡು ತಿಂಗಳ ಅವಧಿಯಲ್ಲಿ ಕೊರೊನಾ ಭೀತಿಯ ನಡುವೆಯೂ ಒಟ್ಟು 1,98,47,290 ರೂ. ನಗದು, 77 ಗ್ರಾಂ. ಚಿನ್ನ ಹಾಗೂ 5 ಕೆಜಿ 700 ಗ್ರಾಂ. ಬೆಳ್ಳಿ ಸಂಗ್ರಹವಾಗಿದೆ.

ಬ್ಯಾಂಕ್ ಆಫ್ ಬರೋಡ ದ ಹಿರಿಯ ಅಧಿಕಾರಿ ಹರ್ಷ ಹಾಗೂ ನಂಜುಂಡೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಪ್ರಸಾದ್ ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆಯಿತು.

ಹುಂಡಿ ಎಣಿಕೆ ಕಾರ್ಯ ವೇಳೆ
79,700 ರೂ. ನಿಷೇಧಿತ ನೋಟುಗಳು ಪತ್ತೆಯಾಗಿದ್ದು, 1000 ರೂ.ಮುಖಬೆಲೆಯ ಹನ್ನೆರಡು, 500 ರೂ.ಮೌಲ್ಯದ 170 ನೋಟುಗಳು ಹುಂಡಿಯಲ್ಲಿ ಸಂಗ್ರಹವಾಗಿವೆ.

1000 ಮತ್ತು 500 ರೂ. ಮೌಲ್ಯದ ನೋಟು ನೀಷೇಧವಾಗಿ ನಾಲ್ಕು ವರ್ಷ ಕಳೆದರೂ ನಂಜನಗೂಡು ಭಕ್ತರ ಬಳಿ ಚಲಾವಣೆ ಆಗದ ನೋಟುಗಳು ಪತ್ತೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ದೇವಾಲಯದ 37 ಹುಂಡಿಗಳ ಪೈಕಿ 31 ಹುಂಡಿಗಳ ಎಣಿಕೆ ಮಾಡಲಾಗಿದ್ದು, 200 ಸ್ವಸಹಾಯ ಸಂಘದ ಮಹಿಳೆಯರು ಹಾಗೂ 50 ಜನ ದೇವಾಲಯದ ಸಿಬ್ಬಂದಿ ಸೇರಿದಂತೆ 250 ಸಿಬ್ಬಂದಿಗಳಿಂದ ಎಣಿಕೆ ಕಾರ್ಯ ನಡೆಸಿದ್ದರು.

ಅಕ್ಟೋಬರ್ ನಲ್ಲಿ 73,09,620 ರೂ. ಸಂಗ್ರಹವಾಗಿತ್ತು.

ಜೀವಹಾನಿ ತಡೆಯುವ ಸಲುವಾಗಿ ನೈಟ್ ಕರ್ಪ್ಯೂ ಜಾರಿ; ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ

ವಿಜಯಸಾಕ್ಷಿ ಸುದ್ದಿ, ಗದಗ

ಸಾರ್ವಜನಿಕರಿಗೆ ತೊಂದರೆ ಆಗಬಾರದು ಹಾಗೂ ಜೀವ ಹಾನಿ ತಡೆಯುವ ಉದ್ದೇಶದಿಂದ ಮುಂಜಾಗೃತ ಕ್ರಮವಾಗಿ ನೈಟ್ ಕರ್ಪ್ಯೂ ಜಾರಿ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದರು.

ನಗರದಲ್ಲಿ ಮಾತನಾಡಿದ ಅವರು,
ವಿರೋಧ ಪಕ್ಷದವರು ಸಂಪೂರ್ಣ ಲಾಕ್ ಡೌನ್ ಮಾಡಿದರೆ, ಜನರಿಗೆ ತೊಂದರೆ ಮಾಡುತ್ತಾರೆ ಅಂತಾ ಹೇಳುತ್ತಿದ್ದಾರೆ. ಮಹಾರಾಷ್ಟ್ರದಲ್ಲೂ ಲಾಕ್ ಡೌನ್ ಮಾಡಿದ್ದಾರೆ. ಅಲ್ಲಿ ಯಾವ ಸರ್ಕಾರ ಇದೆ ಎಂದು ಪ್ರಶ್ನಿಸಿದರು.

ಜನರು ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಣೆ ಮಾಡುವ ಮೂಲಕ ಗುಂಪು ಸೇರುತ್ತಾರೆ. ಹಾಗಾಗಿ ಒಬ್ಬರಿಂದ ಒಬ್ಬರಿಗೆ ಎರಡನೇಯ ಅಲೆ ವಿಸ್ತರಣೆ ಆಗಬಾರದು
ಎಂಬ ಕಾರಣಕ್ಕೆ ನೈಟ್ ಕರ್ಫ್ಯೂ ಜಾರಿ ಮಾಡಿದೆ ಎಂದರು.

ನೈಟ್ ಕರ್ಫ್ಯೂ ಕುರಿತು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಸಚಿವರು, ವಿಶ್ವನಾಥ ಅವರದ್ದು ವೈಯಕ್ತಿಕ ವಿಚಾರ. ವಿಶ್ವನಾಥ್ ಅವರ ನಿಲುವು ಪಕ್ಷದ ನಿಲುವಲ್ಲ.
ನಾವು ಮಾಡಿರುವುದು ನಮ್ಮ ಪಕ್ಷದ ನಿಲುವು ಮತ್ತು ಸರ್ಕಾರದ ನಿಲುವು ಎಂದು ಹೇಳುವ ಮೂಲಕ ನೈಟ್ ಕರ್ಫ್ಯೂ ಮಾಡಿರುವುದನ್ನು ಸಮರ್ಥಿಸಿಕೊಂಡರು.

ವಿದೇಶದಿಂದ ಬಂದವರನ್ನು ಕ್ವಾರಟೈನ್ ಮಾಡಲಾಗಿದೆ.
ಸಾರಿಗೆ ಸಂಸ್ಥೆ ಬಸ್ ಪ್ರಯಾಣದಲ್ಲಿ ಯಾವುದೇ ಬದಲಾವಣೆ ಇಲ್ಲ. ಜನರು ಜವಾಬ್ದಾರಿತನದಿಂದ ವರ್ತನೆ ಮಾಡಬೇಕು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಕಿವಿ ಮಾತು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ,  ಬಿಜೆಪಿ ಜಿಲ್ಲಾ ಅಧ್ಯಕ್ಷ ಮೋಹನ್ ಮಾಳಶೆಟ್ಟಿ,  ಹಿರಿಯ ಮುಖಂಡ ಎಂ ಎಸ್ ಕರಿಗೌಡ್ರ, ಮಾಧವ ಗಣಾಚಾರಿ, ಶ್ರೀಪತಿ ಉಡುಪಿ, ರಾಜು ಕುರಡಗಿ, ಸಿದ್ದು ಪಲ್ಲೇದ, ರವಿ ದಂಡಿನ, ಬಾಬು ಯಲಿಗಾರ ಸೇರಿದಂತೆ ಇತರರು ಇದ್ದರು.

ವಿರೋಧ ಪಕ್ಷಗಳ ಒಕ್ಕೂಟ ರೈತರನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತಿದೆ; ಸಚಿವ ಸವದಿ ಆರೋಪ

ವಿಜಯಸಾಕ್ಷಿ ಸುದ್ದಿ, ಗದಗ

ನಾನು ಕೂಡಾ ರೈತ ಕುಟುಂಬದಿಂದ ಬಂದಿದ್ದೇನೆ. ನಾನೂ ಮೊದಲು ಹತ್ತಿ, ಬೆಲ್ಲ ಎಪಿಎಂಸಿ ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡಿದ್ದೇನೆ. ದಲ್ಲಾಳಿಗಳಿಂದ ಸುಲಿಗೆ ಆಗುತ್ತಿತ್ತು. ರೈತರಿಗೆ ಅನುಕೂಲವಾಗುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನುಗಳನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಮರ್ಥಿಸಿಕೊಂಡರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿಗೆ ಉಪಯೋಗಿಸುವ ಜಮೀನಿನನ್ನು ಕೈಗಾರಿಕೆಗೆ ಒಳಸುವಂತಿಲ್ಲಾ ಎಂಬುವುದು ಕೃಷಿ ಕಾನೂನಿನಲ್ಲಿ ಸ್ಪಷ್ಟವಾಗಿದೆ.ವಿರೋಧ ಪಕ್ಷಗಳ ಒಕ್ಕೂಟ ರೈತರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ರಾಜ್ಯದ ರೈತರಿಗೆ ಮನವಿ ಮಾಡುತ್ತೇನೆ. ಇದು ರೈತರ ಪರವಾಗಿ ಇರುವ ಕಾನೂನು. ಪ್ರತಿಭಟನೆ ಮಾಡುವವರಿಗೆ ಬುದ್ದಿವಾದ ಹೇಳಬೇಕು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಬುದ್ಧಿವಾದ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಮೋಹನ್ ಮಾಳಶೆಟ್ಟಿ, ಹಿರಿಯ ಮುಖಂಡ ಎಂ ಎಸ್ ಕರಿಗೌಡ್ರ, ಮಾಧವ ಗಣಾಚಾರಿ, ಶ್ರೀಪತಿ ಉಡುಪಿ, ರಾಜು ಕುರಡಗಿ, ಸಿದ್ದು ಪಲ್ಲೇದ, ರವಿ ದಂಡಿನ, ಬಾಬು ಯಲಿಗಾರ ಸೇರಿದಂತೆ ಇತರರು ಇದ್ದರು.

ನಕ್ಕು ನಲಿದಾಡಿದ ಪೋಲಿಸರು: ಪೋಲಿಸರ ಮಾನಸಿಕ ಒತ್ತಡ ದೂರ ಮಾಡಿದ ಹೌದ್ದ ಹುಲಿಯಾ ನಾಟಕ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕಳೆದ ಹಲವಾರು ದಿನಗಳಿಂದ ಸತತವಾಗಿ ಬಂದೋಬಸ್ತಿನಲ್ಲಿದ್ದ ಇಡೀ ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇಂದು ನಕ್ಕು ನಲಿದಾಡಿದರು. ಅದಕ್ಕೆ ಕಾರಣವಾಗಿದ್ದು ಹೌದ್ದ ಹುಲಿಯಾ ನಾಟಕ.

ಕೊಪ್ಪಳದ ಬುಧವಾರ 50ನೇ ಪ್ರದರ್ಶನ ಪೂರ್ಣಗೊಂಡ ನಿಮಿತ್ತ ವಿಶೇಷ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ವಿಶೇಷ ಅಂದ್ರೆ ಈ ನಾಟಕದ ಪ್ರೇಕ್ಷಕರೆಲ್ಲರೂ ಪೋಲಿಸ್ ಇಲಾಖೆಯವರು. ಮಹಿಳಾ ಸಿಬ್ಬಂದಿ, ಟ್ರೇನಿಂಗ್ ನಲ್ಲಿರುವ ಪೋಲಿಸರು ಸೇರಿದಂತೆ ಅಂದಾಜು ನೂರಕ್ಕೂ ಹೆಚ್ಚು ಪೋಲಿಸರು ಇಂದು ಹೌದ್ದ ಹುಲಿಯಾ ನಾಟಕ ನೋಡಿ ನಕ್ಕು ನಕ್ಕು ಸುಸ್ತಾದರು.

ಡಿವೈಎಸ್ಪಿ ವೆಂಕಟಪ್ಪ ನಾಯಕ ಇಡೀ ಇಲಾಖೆಯ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಕರೆತಂದು ನಾಟಕ ತೋರಿಸಿದರು. ಕರೋನಾ, ಚುನಾವಣೆ ಬಂದೋಬಸ್ತ್‌ನಿಂದ ಸತತವಾಗಿ ಒತ್ತಡದಲ್ಲಿ ಪೋಲಿಸರು ರಿಲ್ಯಾಕ್ಸ್ ಆದರು.

ನಾಟಕದ ಕೊನೆಯ ಸನ್ನಿವೇಶಕ್ಕೂ ಮೊದಲು ಡಿವೈಎಸ್ಪಿ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಡಿಆರ್ ಡಿಎಸ್ಪಿ ಶಶಿಕಾಂತ, ಸಿಪಿಐಗಳಾದ ವಿಶ್ವನಾಥ ಹಿರೇಗೌಡರ, ಮಾರುತಿ ಗುಳ್ಳಾರಿ, ಮೌನೇಶ್ವರ ಮಾಲಿಪಾಟೀಲ್, ನಾಗಿರೆಡ್ಡಿ, ಸೇರಿದಂತೆ ಇತರ ಅಧಿಕಾರಿಗಳು ವೇದಿಕೆಯ ಮೇಲೆ ನಟ ನಟಿಯರನ್ನು ಆತ್ಮೀಯವಾಗಿ ಸನ್ಮಾನಿಸಿ , ಕಾಣಿಕೆ ನೀಡಿದರು.

ಇಡೀ ಸಿಬ್ಬಂದಿ ವರ್ಗ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅವರಿಗೆ ಸ್ವಲ್ಪಮಟ್ಟಿಗೆ ರಿಲೀಪ್ ಸಿಗಲಿ ಎನ್ನುವ ಕಾರಣಕ್ಕೆ ಇವತ್ತು ಈ ಪ್ರದರ್ಶನ ಆಯೋಜನೆ ಮಾಡಿದ್ದೇವೆ. ಕಲಾವಿದರಾದ ಭರತ್ ತಾಳಿಕೋಟೆಯವರ ತಂದೆ ರಾಜು ತಾಳಿಕೋಟೆಯವರು ಅತ್ಯುತ್ತಮ ಕಲಾವಿದರು. ಇಂತಹ ಕಲೆಗೆ ಯಾವತ್ತೂ ಪ್ರೋತ್ಸಾಹ ನೀಡುತ್ತೇವೆ ಎಂದು ಡಿಎಸ್ಪಿ ವೆಂಕಟಪ್ಪ ನಾಯಕ ಹೇಳಿದರು.

ನಾಟಕ ನೋಡಲು ಪಿಎಸ್ಐ‌ಗಳಾದ ನಾಗರಾಜ ಮೇಕಾ, ಅಮರೇಶ ಹುಬ್ಬಳ್ಳಿ, ವೆಂಕಟೇಶ ,ಚಂದ್ರಪ್ಪ, ಬಸವರಾಜ್, ಸುಪ್ರಿತ್,ಹನುಮಂತ ತಳವಾರ ಸೇರಿದಂತೆ ಇತರ ಅಧಿಕಾರಿಗಳು , ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೊವಿಡ್-19: ಗದಗ ಜಿಲ್ಲೆಯ ಬುಧವಾರದ ಅಪ್ಡೇಟ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಡಿಸೆಂಬರ್‌ 23 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 159807 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 165458 ಮಾದರಿಗಳಲ್ಲಿ 154350 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 233 ಮಾದರಿಗಳ ವರದಿ ಬರಲು ಬಾಕಿ ಇದೆ.

ಜಿಲ್ಲೆಯಲ್ಲಿ ಇಂದಿನ 07 (ಗದಗ-05, ಮುಂಡರಗಿ-01, ಹೊರ ಜಿಲ್ಲೆಯ-01) ಪ್ರಕರಣಗಳು ಸೇರಿದಂತೆ ಒಟ್ಟು 10875 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ
ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 05 ಜನ ಸೇರಿದಂತೆ ಒಟ್ಟು 10703 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ 31 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!