Home Blog Page 31

ಶಿವಣ್ಣ ಆಶೀರ್ವಾದ ಪಡೆದ ಬಿಗ್‌ಬಾಸ್ ಚಾಂಪಿಯನ್: ಗಿಲ್ಲಿಗೆ ಅಭಿಮಾನಿಗಳ ಪ್ರೀತಿ, 40 ಕೋಟಿಗೂ ಹೆಚ್ಚು ವೋಟ್!

ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 12ರ ವಿಜೇತ ಗಿಲ್ಲಿಗೆ ದೊರೆತ ಜನಪ್ರಿಯತೆಯ ಹಿಂದೆ ಅಭಿಮಾನಿಗಳ ಪ್ರೀತಿ ಮಾತ್ರವಲ್ಲ, ಹಿರಿಯ ನಟ ಶಿವರಾಜ್‌ಕುಮಾರ್ ಅವರ ಆಶೀರ್ವಾದವೂ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಬಿಗ್‌ಬಾಸ್ ಟ್ರೋಫಿ ಗೆದ್ದ ನಂತರ ಗಿಲ್ಲಿ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಶಿವಣ್ಣ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ ದಂಪತಿ ಆತ್ಮೀಯವಾಗಿ ಸಿಹಿ ತಿನಿಸಿ, ಮುಂದಿನ ಬದುಕಿಗೆ ಶುಭ ಹಾರೈಸಿದರು.

ಗಮನಾರ್ಹ ಸಂಗತಿ ಎಂದರೆ, ಫಿನಾಲೆಗೆ ಮುನ್ನವೇ ಶಿವಣ್ಣ ಗಿಲ್ಲಿಯೇ ಗೆಲ್ಲೋದು ಎಂದು ಹೇಳಿದ್ದರು. ಇದೀಗ ಆ ಮಾತು ನಿಜವಾಗಿದ್ದು, ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮನೆಮಾಡಿದೆ.

ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ 40 ಕೋಟಿಗೂ ಅಧಿಕ ಮತಗಳನ್ನು ಪಡೆದು ಮೊದಲ ಸ್ಥಾನ ಪಡೆದರೆ, ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದಾರೆ.

ತಾಯಿಯ ಕೈಯಲ್ಲಿ ಅರಳಬೇಕಿದ್ದ ಜೀವ, ಕುಟುಂಬದ ಕೈಯಲ್ಲಿ ಅಂತ್ಯ

0

ಚಿಕ್ಕಮಗಳೂರು: ಒಬ್ಬ ತಾಯಿಯ ಕೈಗಳಲ್ಲಿ ಆರಂಭವಾಗಬೇಕಿದ್ದ ಜೀವಯಾತ್ರೆ, ಹುಟ್ಟಿದ ಕ್ಷಣದಲ್ಲೇ ಅಂತ್ಯಗೊಂಡ ಹೃದಯವಿದ್ರಾವಕ ಘಟನೆ ಲಕ್ಕವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮದುವೆಗೆ ಮುಂಚೆಯೇ ಗರ್ಭಿಣಿಯಾಗಿದ್ದ ಸ್ಟಾಫ್ ನರ್ಸ್ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವತಿ, ಕುಟುಂಬದವರ ಸಹಾಯದಿಂದ ಮನೆಯಲ್ಲೇ ಹೆರಿಗೆ ಮಾಡಿಕೊಂಡಿದ್ದಾಳೆ. ತಂದೆ, ತಾಯಿ, ಅಜ್ಜಿ ಹಾಗೂ ಇನ್ನೂ ಮೂವರು ಮಹಿಳೆಯರ ಸಹಕಾರದಲ್ಲಿ ಹೆರಿಗೆ ನಡೆದಿದ್ದು, ಗಂಡು ಮಗು ಜನಿಸುತ್ತಿದ್ದಂತೆಯೇ ಕುಟುಂಬದ ಸದಸ್ಯರೇ ಶಿಶುವನ್ನು ಕತ್ತು ಹಿಸುಕಿ ಕೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಶಿಶುವಿನ ಮೃತದೇಹವನ್ನು ತಿಪ್ಪೆಯಲ್ಲಿ ಹೂತು ಪ್ರಕರಣವನ್ನು ಮರೆಮಾಚಲು ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ. ಸುಮಾರು 15 ದಿನಗಳ ಬಳಿಕ ಈ ಘಟನೆ ಪಕ್ಕದ ಮನೆಯ ಯುವಕನಿಂದ ಬೆಳಕಿಗೆ ಬಂದಿದೆ.

ಈ ಪ್ರಕರಣ ಇದೀಗ ಸಮುದಾಯದಲ್ಲಿ ಭಾರೀ ಆಘಾತ ಉಂಟುಮಾಡಿದ್ದು, ಲಕ್ಕವಳ್ಳಿ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿ, ಎಲ್ಲ ಆರೋಪಿಗಳ ಪಾತ್ರದ ಕುರಿತು ಗಂಭೀರ ತನಿಖೆ ನಡೆಸುತ್ತಿದ್ದಾರೆ.

ಲೈಂಗಿಕ ಕಿರುಕುಳ ಆರೋಪಕ್ಕೆ ಮನನೊಂದು ದೀಪಕ್ ದುರಂತ ಸಾವು: ಕೊನೆಗೂ ಶಿಂಜಿತಾ ಮುಸ್ತಫಾ ಬಂಧನ

0

ತಿರುವನಂತಪುರಂ: ಸಾಮಾಜಿಕ ಜಾಲತಾಣದಲ್ಲಿ ವ್ಯೂವ್ಸ್ ಮತ್ತು ಪ್ರಚಾರದ ಹಂಬಲ ಒಂದು ಅಮಾಯಕ ಜೀವದ ಅಂತ್ಯಕ್ಕೆ ಕಾರಣವಾಗಿದೆಯೇ? ಎಂಬ ಪ್ರಶ್ನೆಯನ್ನು ಎಬ್ಬಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಶಿಂಜಿತಾ ಮುಸ್ತಫಾಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಬಸ್ಸಿನಲ್ಲಿ ದೀಪಕ್ ಎಂಬ ಯುವಕ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳಿ ಶಿಂಜಿತಾ ಬಿಡುಗಡೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಆದರೆ, ಈ ಘಟನೆ ಬಳಿಕ ದೀಪಕ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರು.

ಈ ಘಟನೆ ನಂತರ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಯಿತು. ದೀಪಕ್ ಯಾವುದೇ ತಪ್ಪು ಮಾಡದೇ ಇದ್ದರೂ ಆತನ ಬಳಿಗೆ ಹೋಗಿ ಉದ್ದೇಶಪೂರ್ವಕವಾಗಿ ವಿಡಿಯೋ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದವು. ಶಿಂಜಿತಾಳನ್ನು ಬಂಧಿಸಬೇಕೆಂದು ಜನರು ಒತ್ತಾಯಿಸಿದರು.

ದೀಪಕ್ ಅವರ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಜಾಮೀನುರಹಿತ ಕಲಂಗಳ ಅಡಿ ಪ್ರಕರಣ ದಾಖಲಿಸಿದರು. ತನಿಖೆ ಆರಂಭವಾಗುತ್ತಿದ್ದಂತೆಯೇ ಶಿಂಜಿತಾ ಮೊಬೈಲ್ ಆಫ್ ಮಾಡಿ ಕಾಣೆಯಾಗಿದ್ದಳು. ಇದೀಗ ಕೋಯಿಕ್ಕೋಡ್‌ನ ಬಡಗರ ಪ್ರದೇಶದಲ್ಲಿ ಬಂಧನಕ್ಕೊಳಗಾಗಿದ್ದು, ನ್ಯಾಯಾಲಯ ನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಪೊಲೀಸರು ಬಸ್ ಚಾಲಕ, ಕಂಡಕ್ಟರ್ ಮತ್ತು ಪ್ರಯಾಣಿಕರ ಹೇಳಿಕೆಗಳನ್ನು ದಾಖಲಿಸಿದ್ದು, ಯಾರೂ ಕೂಡ ಪ್ರಯಾಣದ ವೇಳೆ ಯಾವುದೇ ಗಲಾಟೆ ಅಥವಾ ಕಿರುಕುಳ ನಡೆದಿಲ್ಲ ಎಂದು ತಿಳಿಸಿದ್ದಾರೆ. ಕಂಡಕ್ಟರ್ ಕೂಡ ಶಿಂಜಿತಾ ಯಾವುದೇ ಸಹಾಯ ಕೇಳಿರಲಿಲ್ಲ ಎಂದು ಹೇಳಿದ್ದಾರೆ.

ದರ್ಶನ್‌ ಪತ್ನಿ ವಿಜಯಲಕ್ಷ್ಮಿ​​ಗೆ ಅಶ್ಲೀಲ ಮೆಸೇಜ್: ಬಂಧಿತರ ಸಂಖ್ಯೆ 8ಕ್ಕೆ ಏರಿಕೆ

ಬೆಂಗಳೂರು: ನಟ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳು ಹಾಗೂ ಅವಮಾನಕಾರಿ ಕಮೆಂಟ್‌ಗಳನ್ನು ಕಳುಹಿಸಿದ ಪ್ರಕರಣದಲ್ಲಿ ಪೊಲೀಸರು ಇನ್ನೂ ಮೂವರು ಆರೋಪಿಗಳನ್ನು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಚಾರ್ಜ್‌ಶೀಟ್ ಸಲ್ಲಿಕೆಗೆ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

ವಿಜಯಲಕ್ಷ್ಮಿ ಅವರು ಡಿಸೆಂಬರ್ ತಿಂಗಳಲ್ಲಿ ತಮ್ಮ ವಿರುದ್ಧ ನಿರಂತರವಾಗಿ ಟ್ರೋಲಿಂಗ್, ಅವಾಚ್ಯ ಭಾಷೆಯ ಕಮೆಂಟ್‌ಗಳು ಹಾಗೂ ಅಶ್ಲೀಲ ಸಂದೇಶಗಳು ಬರುತ್ತಿರುವ ಬಗ್ಗೆ ದೂರು ನೀಡಿದ್ದರು. ಪೊಲೀಸ್ ಆಯುಕ್ತ ಸೀಮಂತ್ ಸಿಂಗ್ ಅವರನ್ನು ಭೇಟಿ ಮಾಡಿ ಮೌಖಿಕವಾಗಿಯೂ ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ 15 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಅಧಿಕೃತ ದೂರು ದಾಖಲಿಸಿ, 150ಕ್ಕೂ ಹೆಚ್ಚು ಸ್ಕ್ರೀನ್‌ಶಾಟ್‌ಗಳನ್ನು ಪೊಲೀಸರಿಗೆ ಒದಗಿಸಿದ್ದರು.

ಈ ಪ್ರಕರಣದಲ್ಲಿ ಈಗಾಗಲೇ ದಾವಣಗೆರೆಯ ಇಂಜಿನಿಯರ್ ನಿತಿನ್, ಚಿಕ್ಕಬಾಣಾವರದ ಆಟೋ ಚಾಲಕ ಚಂದ್ರು, ಹುಬ್ಬಳ್ಳಿಯ ಪೆಟ್ರೋಲ್ ಬಂಕ್ ಮ್ಯಾನೇಜರ್ ನಾಗರಾಜ್ ತಳವಾರ್, ಧಾರವಾಡದ ಆಡಿಟರ್ ಪ್ರಶಾಂತ್ ತಳವಾರ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಇನ್ನೂ ಮೂವರು ಆರೋಪಿಗಳು ಬಂಧನಕ್ಕೊಳಗಾಗಿದ್ದು, ಟೆಕ್ನಿಕಲ್ ಸಾಕ್ಷ್ಯ ಹಾಗೂ ಡಿಜಿಟಲ್ ಟ್ರೇಸ್ ಆಧಾರದ ಮೇಲೆ ತನಿಖೆ ಮುಂದುವರೆದಿದೆ.

ಪ್ರಾರಂಭದಲ್ಲಿ ಪೊಲೀಸರ ತನಿಖೆ ಕುರಿತು ವಿಜಯಲಕ್ಷ್ಮಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು, ತಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ ಎಂದು ಆರೋಪಿಸಿದ್ದರು. ನಂತರ ಪೊಲೀಸರು ಸ್ಪಷ್ಟನೆ ನೀಡಿ, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದರು. ಅದರ ಫಲವಾಗಿ ಈವರೆಗೆ ಎಂಟು ಮಂದಿಯನ್ನು ಬಂಧಿಸಲಾಗಿದೆ.

ಸಾಕ್ಷ್ಯಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಎಲ್ಲಾ ಆರೋಪಿಗಳ ವಿರುದ್ಧ ಶೀಘ್ರದಲ್ಲೇ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇಲಕಲ್ಲ ಡೀಪೋಗೆ ಹೆಮ್ಮೆ: ಕುಮಾರಸ್ವಾಮಿ ವಿರಕ್ತಮಠರಿಗೆ ಸರ್ವೋತ್ತಮ ಪ್ರಶಂಸನಾ ಗೌರವ

ಇಲಕಲ್ಲ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)ಯ ಇಲಕಲ್ಲ ಡೀಪೋದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಲೆಕ್ಕಿಗ ಶ್ರೀ ಕುಮಾರಸ್ವಾಮಿ ವಿರಕ್ತಮಠ ಅವರು 2025–26ನೇ ಸಾಲಿನ ಸರ್ವೋತ್ತಮ ಪ್ರಶಂಸನಾ ಗೌರವಕ್ಕೆ ಭಾಜನರಾಗಿದ್ದಾರೆ.2025ನೇ ಸಾಲಿನಲ್ಲಿ ಗರಿಷ್ಠ ಹಾಜರಾತಿ ಹಾಗೂ ಯಾವುದೇ ಅಪರಾಧ ದಾಖಲೆಗಳಿಲ್ಲದೇ ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಿದ್ದ ಹಿನ್ನೆಲೆ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಮುಖ್ಯ ಕಾರ್ಮಿಕ ಮತ್ತು ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ. ಈ ಕುರಿತು ಬಾಗಲಕೋಟೆ ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಲಾಗಿದೆ.ಜನವರಿ 26ರಂದು ಹುಬ್ಬಳ್ಳಿಯ ಕೇಂದ್ರ ಕಚೇರಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾದ ಐದು ಸಿಬ್ಬಂದಿಗಳ ಪೈಕಿ ಕುಮಾರಸ್ವಾಮಿ ವಿರಕ್ತಮಠ ಕೂಡ ಸೇರಿದ್ದಾರೆ.ಈ ಸಾಧನೆಗೆ ಇಲಕಲ್ಲ ಡೀಪೋದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದ್ದು, ಇದು ಡೀಪೋಗೆ ಸಂದ ಗೌರವ ಎಂದು ಶ್ಲಾಘಿಸಿದ್ದಾರೆ.

ಥರ್ಮಲ್ ಡ್ರೋನ್‌ ಕೈಗೂ ಸಿಗದ ಚಿರತೆ: ಅರಣ್ಯ ಇಲಾಖೆಗೆ ದೊಡ್ಡ ಸವಾಲು- ಕಾರ್ಯ ಪಡೆ ಎಂಟ್ರಿ

0

ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣದ ಹಿಂಭಾಗದಲ್ಲಿ ಕಳೆದೊಂದು ತಿಂಗಳಿಂದ ಸಂಚರಿಸುತ್ತಿರುವ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ ಇನ್ನೂ ಫಲಿತಾಂಶ ನೀಡಿಲ್ಲ. ಕಳೆದ ಭಾನುವಾರ ಸಂಜೆ ಆರಂಭಗೊಂಡು ಸೋಮವಾರ ಬೆಳಗಿನ ಜಾವದವರೆಗೆ ನಡೆದ ತೀವ್ರ ಕಾರ್ಯಾಚರಣೆಯ ವೇಳೆ ಥರ್ಮಲ್ ಡ್ರೋನ್ ಕ್ಯಾಮರಾದಲ್ಲಿ ಒಂದು ಬಾರಿ ಚಿರತೆ ಕಾಣಿಸಿಕೊಂಡರೂ, ನಂತರ ಅದು ಮತ್ತೆ ಮರೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್ 17ರಂದು ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡ ಬಳಿಕ ಈ ಪ್ರದೇಶದಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ. ಚಿರತೆ ಸೆರೆಗೆ ಮೂರು ಕಡೆಗಳಲ್ಲಿ ಬೋನ್ ಅಳವಡಿಸಲಾಗಿದ್ದು, 11 ಟ್ರ್ಯಾಪ್ ಕ್ಯಾಮರಾಗಳನ್ನು ಸ್ಥಾಪಿಸಲಾಗಿದೆ. ಆದರೂ ಚಿರತೆ ಸೆರೆಗೆ ಸಿಕ್ಕಿಲ್ಲ ಎಂಬುದು ಅರಣ್ಯ ಇಲಾಖೆಗೆ ಸವಾಲಾಗಿದೆ.

ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಲು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಥರ್ಮಲ್ ಡ್ರೋನ್ ಕ್ಯಾಮರಾಗಳು ಹಾಗೂ ತಜ್ಞರ ತಂಡವನ್ನು ಕರೆಸಲಾಗಿದೆ. ಮೈಸೂರಿನಿಂದ ಚಿರತೆ ಸೆರೆ ಹಿಡಿಯುವ ವಿಶೇಷ ಕಾರ್ಯಪಡೆ, ಗದಗ ಜಿಲ್ಲೆಯ ಬಿಂಕದಕಟ್ಟೆ ಪ್ರಾಣಿ ಸಂಗ್ರಹಾಲಯದ ಅರವಳಿಕೆ ತಜ್ಞರು ಹಾಗೂ ಧಾರವಾಡ ಪಶು ವೈದ್ಯಕೀಯ ಇಲಾಖೆಯ ತಜ್ಞರು ಕೂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ವಿಮಾನ ನಿಲ್ದಾಣದ ಸುತ್ತಮುತ್ತ ಸುಮಾರು 150 ಎಕರೆಗೂ ಅಧಿಕ ಪ್ರದೇಶವು ಪೊದೆ, ಮರಗಳಿಂದ ಆವೃತವಾಗಿದ್ದು, ನವಿಲು, ಮುಳ್ಳುಹಂದಿ, ಮೊಲಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಚಿರತೆಗೆ ಆಹಾರ ಸುಲಭವಾಗಿ ಲಭ್ಯವಾಗುತ್ತಿದೆ. ಈ ಕಾರಣದಿಂದ ಚಿರತೆ ಇದೇ ಪ್ರದೇಶದಲ್ಲೇ ಬೀಡುಬಿಟ್ಟಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಭಾನುವಾರ ಸಂಜೆಯಿಂದಲೇ ಕಾರ್ಯಾಚರಣೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹುಬ್ಬಳ್ಳಿ ವಲಯ ಅರಣ್ಯಾಧಿಕಾರಿ ಆರ್.ಎಸ್. ಉಪ್ಪಾರ ತಿಳಿಸಿದ್ದಾರೆ.

ಚಾಮರಾಜನಗರದಲ್ಲಿ ವನ್ಯಜೀವಿ ಭೀತಿ ಹೆಚ್ಚಳ: ಚಿರತೆ ದಾಳಿಯಲ್ಲಿ 30 ವರ್ಷದ ಯುವಕ ಮೃತ

0

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಚಿರತೆ ಉಪಟಳ ಮತ್ತೊಮ್ಮೆ ಆತಂಕ ಮೂಡಿಸಿದೆ. ಪಾದಯಾತ್ರೆ ಮೂಲಕ ಬೆಟ್ಟಕ್ಕೆ ತೆರಳುತ್ತಿದ್ದ ಯುವಕನ ಮೇಲೆ ಚಿರತೆ ದಾಳಿ ನಡೆಸಿದ್ದು, ಯುವಕ ಸಾವನ್ನಪ್ಪಿದ ಘಟನೆ ಬುಧವಾರ ಮುಂಜಾನೆ ನಡೆದಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಶವ ಪತ್ತೆಯಾಗಿದೆ.

ಮಂಡ್ಯ ಜಿಲ್ಲೆಯ ಚಿರನಹಳ್ಳಿ ಗ್ರಾಮದ ಪ್ರವೀಣ್ (30) ಮೃತ ಪಾದಯಾತ್ರಿಕ. ಮಂಡ್ಯ ಜಿಲ್ಲೆಯ ವಿವಿಧ ಗ್ರಾಮಗಳಿಂದ ನೂರಾರು ಭಕ್ತರು ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದರು. ಮಂಗಳವಾರ ರಾತ್ರಿ ತಾಳುಬೆಟ್ಟದಲ್ಲಿ ವಿಶ್ರಾಂತಿ ಪಡೆದ ತಂಡ, ಬುಧವಾರ ಬೆಳಗ್ಗೆ ಮುಂದಿನ ಹಂತದ ಯಾತ್ರೆ ಆರಂಭಿಸಿತ್ತು.

ಈ ವೇಳೆ ರಂಗಸ್ವಾಮಿ ಒಡ್ಡಿನ ಸಮೀಪದ ಪಾದಯಾತ್ರಾ ಮಾರ್ಗದಲ್ಲಿ ಚಿರತೆಯೊಂದು ಏಕಾಏಕಿ ದಾಳಿ ನಡೆಸಿ ಪ್ರವೀಣ್ ಅವರನ್ನು ಅರಣ್ಯದೊಳಗೆ ಎಳೆದೊಯ್ದಿದೆ. ಜೊತೆಯಲ್ಲಿದ್ದ ಐವರು ಸ್ನೇಹಿತರು ಕಿರುಚಾಡಿ ಚಿರತೆಯನ್ನು ಓಡಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ ಎಂದು ಹೇಳಲಾಗಿದೆ.

ಘಟನೆ ಕುರಿತು ಮಾಹಿತಿ ಪಡೆದ ಮಲೆಮಹದೇಶ್ವರ ಬೆಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಬಳಿಕ ಯುವಕನ ಶವವನ್ನು ಪತ್ತೆ ಹಚ್ಚಲಾಗಿದೆ.

ಈ ಘಟನೆಯು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಚಿರತೆ ದೃಶ್ಯಗಳಿಗೆ ಮತ್ತಷ್ಟು ಗಂಭೀರತೆ ತಂದಿದೆ. ಈ ಹಿಂದೆ ಸಹ ಚೆನ್ನಮಲ್ಲಿಪುರದಲ್ಲಿ ಚಿರತೆ ಸಾಕು ನಾಯಿಯನ್ನು ಹೊತ್ತೊಯ್ದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅರಣ್ಯ ಪ್ರದೇಶಗಳ ಸುತ್ತಮುತ್ತ ಚಿರತೆ ಉಪಟಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಪಾದಯಾತ್ರಿಕರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.

27 ವರ್ಷ, 3 ಮಿಷನ್, ಬಾಹ್ಯಾಕಾಶದಲ್ಲಿ 608 ದಿನ ವಾಸ್ತವ್ಯ: ನಾಸಾಗೆ ಅಧಿಕೃತ ವಿದಾಯ ಹೇಳಿದ ಸುನೀತಾ ವಿಲಿಯಮ್ಸ್‌

0

ವಾಷಿಂಗ್ಟನ್: ನಾಸಾದ ಅನುಭವಿ ಗಗನಯಾತ್ರಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸುನೀತಾ ವಿಲಿಯಮ್ಸ್ ಅವರು ಅಧಿಕೃತವಾಗಿ ನಿವೃತ್ತಿಯಾಗುತ್ತಿರುವುದನ್ನು ನಾಸಾ ಮಂಗಳವಾರ ಘೋಷಿಸಿದೆ. ಅವರ ನಿವೃತ್ತಿ ಡಿಸೆಂಬರ್ 27, 2025ರಿಂದ ಜಾರಿಗೆ ಬರಲಿದೆ ಎಂದು ನಾಸಾ ಪ್ರಕಟಣೆ ತಿಳಿಸಿದೆ.

1998ರಲ್ಲಿ ನಾಸಾದ ಗಗನಯಾತ್ರಿಯಾಗಿ ಆಯ್ಕೆಯಾದ ಸುನೀತಾ ವಿಲಿಯಮ್ಸ್, ಮೂರು ಬಾಹ್ಯಾಕಾಶ ಮಿಷನ್‌ಗಳಲ್ಲಿ ಭಾಗವಹಿಸಿ ಒಟ್ಟು 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ಇದು ನಾಸಾ ಗಗನಯಾತ್ರಿಗಳ ಪೈಕಿ ಎರಡನೇ ಅತಿ ಹೆಚ್ಚು ಅವಧಿ ಎಂದು ನಾಸಾ ಮಾಹಿತಿ ನೀಡಿದೆ. ಒಂಬತ್ತು ಬಾಹ್ಯಾಕಾಶ ನಡಿಗೆಗಳ ಮೂಲಕ ಅವರು ಒಟ್ಟು 62 ಗಂಟೆ 6 ನಿಮಿಷಗಳನ್ನು ಬಾಹ್ಯಾಕಾಶ ಹೊರಭಾಗದಲ್ಲಿ ಕಳೆದಿದ್ದಾರೆ.

2024ರ ಜೂನ್‌ನಲ್ಲಿ ಆರಂಭವಾದ ಅವರ ಮೂರನೇ ಮಿಷನ್, ಬೋಯಿಂಗ್ ಸ್ಟಾರ್‌ಲೈನರ್ ಮೂಲಕ ನಡೆದ ಕ್ರೂ ಫ್ಲೈಟ್ ಟೆಸ್ಟ್ ಆಗಿತ್ತು. ಈ ಮಿಷನ್ ಕೇವಲ 10 ದಿನಗಳಿಗಷ್ಟೇ ಯೋಜನೆಯಾಗಿದ್ದರೂ, ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಸುಮಾರು ಒಂಬತ್ತು ತಿಂಗಳುಗಳಿಗೂ ಹೆಚ್ಚು ಕಾಲ ಮುಂದುವರಿಯಿತು. ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಾರ್ಚ್ 2025ರಲ್ಲಿ ಭೂಮಿಗೆ ಮರಳಿದರು.

ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್‌ಮನ್, “ಸುನೀತಾ ವಿಲಿಯಮ್ಸ್ ಮಾನವ ಬಾಹ್ಯಾಕಾಶ ಅನ್ವೇಷಣೆಯ ಪ್ರಮುಖ ಮುಖ. ಅವರ ಸಾಧನೆಗಳು ಮುಂದಿನ ಪೀಳಿಗೆಗೆ ದಾರಿ ತೋರಿಸುತ್ತವೆ” ಎಂದು ಹೇಳಿದ್ದಾರೆ.

ಭಾರತೀಯ ಮೂಲದ ತಂದೆ ದೀಪಕ್ ಪಾಂಡ್ಯ ಮತ್ತು ಸ್ಲೊವೇನಿಯನ್ ಮೂಲದ ತಾಯಿ ಬೋನಿ ಪಾಂಡ್ಯ ಅವರ ಪುತ್ರಿಯಾಗಿರುವ ಸುನೀತಾ, ಭಾರತ–ಅಮೆರಿಕಾ ವೈಜ್ಞಾನಿಕ ಸಹಕಾರದ ಪ್ರತೀಕವಾಗಿ ಪರಿಗಣಿಸಲ್ಪಟ್ಟಿದ್ದಾರೆ.
“ಬಾಹ್ಯಾಕಾಶ ನನ್ನ ನೆಚ್ಚಿನ ಸ್ಥಳ. ಮೂರು ಬಾರಿ ಅಲ್ಲಿ ಸೇವೆ ಸಲ್ಲಿಸುವ ಅವಕಾಶ ನನ್ನ ಜೀವನದ ಅತ್ಯಂತ ದೊಡ್ಡ ಗೌರವ” ಎಂದು ನಿವೃತ್ತಿಯ ಸಂದರ್ಭ ಸುನೀತಾ ಹೇಳಿದ್ದಾರೆ.

ಶಿವಮೊಗ್ಗ ಡಬಲ್ ಮರ್ಡರ್ ಪ್ರಕರಣ ಭೇದ: ತಮ್ಮನ ಮಗನಿಂದಲೇ ನಡೆಯಿತು ಪೈಶಾಚಿಕ ಕೃತ್ಯ

0

ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯಲ್ಲಿ ನಡೆದ ವೃದ್ಧ ದಂಪತಿ ಸಾವಿನ ಪ್ರಕರಣ ಇದೀಗ ಭೀಕರ ಸತ್ಯವನ್ನು ಬಹಿರಂಗಪಡಿಸಿದೆ. ಮನೆಯಲ್ಲಿಯೇ ಮೃತಪಟ್ಟಿದ್ದ ಚಂದ್ರಪ್ಪ (80) ಮತ್ತು ಜಯಮ್ಮ (75) ಅವರನ್ನು ಕೊಲೆ ಮಾಡಿರುವುದು ಸಂಬಂಧಿಕ ಹಾಗೂ ವೈದ್ಯ ಡಾ. ಮಲ್ಲೇಶ್ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.

ತಮ್ಮ ದೊಡ್ಡಪ್ಪ–ದೊಡ್ಡಮ್ಮನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯನೇ, ಸಾಲದ ಒತ್ತಡದಿಂದ ಹಣಕ್ಕಾಗಿ ಬೇಡಿಕೆ ಇಟ್ಟು, ನಿರಾಕರಣೆ ಎದುರಾದಾಗ ಪಕ್ಕಾ ಯೋಜನೆಯೊಂದಿಗೆ ಕೊಲೆ ಎಸಗಿದ್ದಾನೆ. ಚಿಕಿತ್ಸೆ ನೆಪದಲ್ಲಿ ಇಬ್ಬರಿಗೂ ಅನಸ್ಥೇಶಿಯಾ ಇಂಜೆಕ್ಷನ್ ನೀಡಿದ ಪರಿಣಾಮ ದಂಪತಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಮೊಗ್ಗ ಎಸ್‌ಪಿ ನಿಖಿಲ್ ಪ್ರಕಾರ, ಆರೋಪಿ ಇಬ್ಬರಿಗೂ ಹೈ ಡೋಸ್ ಔಷಧ ನೀಡಿ ಯಾವುದೇ ಗಾಯದ ಗುರುತು ಬಾರದಂತೆ ಕೊಲೆ ಮಾಡಿದ್ದಾನೆ. ಬಳಿಕ ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣ ದೋಚಿ, ಸುಮಾರು 80 ಗ್ರಾಂ ಚಿನ್ನವನ್ನು ಅಡವಿಟ್ಟು ಸಾಲ ತೀರಿಸಲು ಯತ್ನಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಆರಂಭದಲ್ಲಿ ಪ್ರಕರಣ ದರೋಡೆ ಕೊಲೆ ಎಂದು ಶಂಕಿಸಲಾಗಿತ್ತು. ಮಕ್ಕಳು ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಬಳಿಕ ಮನೆಗೆ ಭೇಟಿ ನೀಡಿದಾಗ ಬೆಡ್‌ರೂಮ್‌ನಲ್ಲಿ ಚಂದ್ರಪ್ಪ ಮತ್ತು ಹಾಲ್‌ನಲ್ಲಿ ಜಯಮ್ಮ ಶವ ಪತ್ತೆಯಾಗಿತ್ತು. ತನಿಖೆ ಮುಂದುವರಿದಂತೆ, ನಿಜವಾದ ಆರೋಪಿ ಮನೆಯೊಳಗೇ ಇದ್ದ ಸಂಬಂಧಿಕ ವೈದ್ಯನೇ ಎಂಬುದು ಬಯಲಾಗಿದೆ.

ಈ ಘಟನೆ, ನಂಬಿಕೆಯ ಸಂಬಂಧವೇ ಹೇಗೆ ಭೀಕರ ಅಪರಾಧಕ್ಕೆ ದಾರಿ ಮಾಡಿಕೊಡಬಹುದು ಎಂಬುದಕ್ಕೆ ಭಯಾನಕ ಉದಾಹರಣೆಯಾಗಿದೆ.

ಕಲಬುರಗಿಯಲ್ಲಿ ಮತ್ತೊಂದು ಬರ್ಬರ ಹತ್ಯೆ: ಲಾಡ್ಜ್ ಹಿಂಭಾಗದಲ್ಲಿ ಯುವಕನನ್ನು ಕೊಚ್ಚಿ ಕೊಲೆ

0

ಕಲಬುರಗಿ: ನಗರ ಮತ್ತೊಂದು ಭೀಕರ ಕೊಲೆಗೆ ಸಾಕ್ಷಿಯಾಗಿದೆ. ನಗರದ ಲಾಡ್ಜ್ ಒಂದರ ಹಿಂಭಾಗದ ಪಾಳುಬಿದ್ದ ಪಾರ್ಕ್‌ನಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಮೃತ ಯುವಕನನ್ನು ಸಯ್ಯದ್ ಮೆಹಬೂಬ್ ಅಲಿಯಾಸ್ ಬಾಡಿ (21) ಎಂದು ಗುರುತಿಸಲಾಗಿದೆ. ತಡರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫಾರೆನ್ಸಿಕ್ ತಜ್ಞರು ಹಾಗೂ ಶ್ವಾನ ದಳದಿಂದಲೂ ತನಿಖೆ ಮುಂದುವರಿದಿದೆ.

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಮೆಹಬೂಬ್ ಕೆಲ ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಈ ಹಿನ್ನೆಲೆ ಹಳೆಯ ವೈಷಮ್ಯವೇ ಕೊಲೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇನ್ನು ಮಗನ ಸಾವಿನ ಸುದ್ದಿ ಕೇಳಿ ಮೆಹಬೂಬ್‌ನ ತಂದೆ ಭಾವೋದ್ರಿಕ್ತರಾಗಿದ್ದು,
“ಅವನು ಮನೆಗೆ ಬರ್ತಿರಲಿಲ್ಲ. ಯಾವಾಗಲೂ ಹೊರಗಡೆಯೇ ಇರುತ್ತಿದ್ದ. ಈಗ ಮಗನನ್ನೇ ಕಳೆದುಕೊಂಡೆ” ಎಂದು ಕಣ್ಣೀರಿಟ್ಟಿದ್ದಾರೆ.

ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳ ಮೂಲಕ ಹುಡುಕಾಟ ತೀವ್ರಗೊಳಿಸಲಾಗಿದೆ.

error: Content is protected !!