Home Blog Page 30

ಹಾಸನ| ಶಾಲಾ ಬಾಲಕಿಯನ್ನು ಹಿಂಬಾಲಿಸಿದ್ದ ಅಪರಿಚಿತ ಅರೆಸ್ಟ್!

0

ಹಾಸನ: ಶಾಲೆಯಿಂದ ಮನೆಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ ಆತಂಕ ಸೃಷ್ಟಿಸಿದ್ದ ಅಪರಿಚಿತನನ್ನು ಹಾಸನ ಪೊಲೀಸರು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಕೋಲಾರ ಜಿಲ್ಲೆಯ ದಂಡಿಹಳ್ಳಿ ಹೋಬಳಿಯ ಪ್ರಸನ್ನ (38) ಎಂದು ಗುರುತಿಸಲಾಗಿದೆ. ಜ.17ರಂದು ಹಾಸನ ನಗರದ 80 ಅಡಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆಯಿಂದ ಮನೆಗೆ ನಡೆದುಕೊಂಡು ಬರುತ್ತಿದ್ದ ಬಾಲಕಿಯನ್ನು ಆರೋಪಿಯು ಹಿಂಬಾಲಿಸಿಕೊಂಡು ಬಂದಿದ್ದಾನೆ ಎನ್ನಲಾಗಿದೆ. ಇದನ್ನು ಗಮನಿಸಿದ ಬಾಲಕಿ ಭಯಭೀತಳಾಗಿ ಓಡೋಡಿ ಮನೆ ಸೇರಿಕೊಂಡಿದ್ದಾಳೆ. ಆದರೆ ಅಷ್ಟರಲ್ಲೇ ನಿಲ್ಲದ ಆರೋಪಿ, ಬಾಲಕಿ ಮನೆಗೆ ತಲುಪಿದ ಬಳಿಕವೂ ಅಲ್ಲಿಂದ ತೆರಳದೆ, ಮನೆಯ ಗೇಟ್ ಹೊರಗೆ ನಿಂತು ಒಳಗೆ ಇಣುಕಿನೋಡಿ ಹೋಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಪಾಲಕರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿತ್ತು.
ಘಟನೆ ಸಂಬಂಧ ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ತನಿಖೆ ಕೈಗೊಂಡ ಪೊಲೀಸರು, ಘಟನೆ ನಡೆದ ಮೂರು ದಿನಗಳ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಘಟನೆಯಿಂದಾಗಿ ಮಕ್ಕಳ ಸುರಕ್ಷತೆ ಕುರಿತಾಗಿ ಪೋಷಕರು ಗಂಭೀರ ಚಿಂತನೆ ವ್ಯಕ್ತಪಡಿಸಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೊಸಕೋಟೆ–ದೇವನಹಳ್ಳಿ ಹೆದ್ದಾರಿಯಲ್ಲಿ ವೀಲಿಂಗ್ ಹಾವಳಿ: ಸಾರ್ವಜನಿಕರ ಜೀವಕ್ಕೆ ಅಪಾಯ!

0

ಹೊಸಕೋಟೆ: ಹೊಸಕೋಟೆ–ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ವೀಲಿಂಗ್ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಸುರಕ್ಷೆಗೆ ಭಾರಿ ಆತಂಕ ಮೂಡಿಸಿದೆ.

ಬೈಕ್‌ಗಳ ನಂಬರ್ ಪ್ಲೇಟ್‌ಗಳನ್ನು ಕಳಚಿಕೊಂಡು ರಸ್ತೆಗಿಳಿಯುತ್ತಿರುವ ಪುಂಡರು, ಗುಂಪು ಗುಂಪಾಗಿ ಬಂದು ರಾಷ್ಟ್ರೀಯ ಹೆದ್ದಾರಿಗಳಲ್ಲೇ ವೀಲಿಂಗ್ ನಡೆಸುತ್ತಿರುವುದು ಕಂಡುಬಂದಿದೆ. ಹೊಸಕೋಟೆ ತಾಲ್ಲೂಕಿನ ನೂತನ ಚೆನ್ನೈ ಎಕ್ಸ್‌ಪ್ರೆಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಯುವಕರು ಗುಂಪಾಗಿ ಸೇರಿ ಪುಂಡಾಟ ನಡೆಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಹೊರವಲಯದಲ್ಲಿ ಹೆದ್ದಾರಿಗಳ ಸಂಖ್ಯೆ ಹೆಚ್ಚಿರುವುದರಿಂದ ಇಂತಹ ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದು, ವಾಹನ ಸಂಚಾರ ಮಾಡುವ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ವೀಲಿಂಗ್ ಮಾಡುವ ವೇಳೆ ವೇಗವಾಗಿ ಬೈಕ್‌ಗಳನ್ನು ಚಲಾಯಿಸುವುದರಿಂದ ಅಪಘಾತದ ಭೀತಿ ಹೆಚ್ಚಿದ್ದು, ಪ್ರಯಾಣಿಕರು ಮತ್ತು ಚಾಲಕರು ಭಯಭೀತರಾಗಿದ್ದಾರೆ.

ಈ ಘಟನೆ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅಭಿಷೇಕ್–ರಿಂಕು ಸ್ಫೋಟಕ ಬ್ಯಾಟಿಂಗ್: ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ 48 ರನ್‌ಗಳ ಭರ್ಜರಿ ಗೆಲುವು!

0

ನಾಗಪುರ: ಅಭಿಷೇಕ್‌ ಶರ್ಮಾ ಮತ್ತು ರಿಂಕು ಸಿಂಗ್‌ ಅವರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಭಾರತ ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 48 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದಿದೆ. ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಭಾರತ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. 27 ರನ್‌ಗಳಾಗುವಷ್ಟರಲ್ಲಿ ಸಂಜು ಸ್ಯಾಮ್ಸನ್ ಹಾಗೂ ಇಶಾನ್‌ ಕಿಶನ್‌ ಔಟಾದರು. ಬಳಿಕ ಅಭಿಷೇಕ್‌ ಶರ್ಮಾ ಮತ್ತು ನಾಯಕ ಸೂರ್ಯಕುಮಾರ್‌ ಯಾದವ್‌ ಮೂರನೇ ವಿಕೆಟ್‌ಗೆ 47 ಎಸೆತಗಳಲ್ಲಿ 99 ರನ್‌ಗಳ ಅಮೂಲ್ಯ ಜೊತೆಯಾಟವಾಡಿದರು.

ಸೂರ್ಯಕುಮಾರ್‌ ಯಾದವ್‌ 32 ರನ್‌ (22 ಎಸೆತ, 4 ಬೌಂಡರಿ, 1 ಸಿಕ್ಸ್‌) ಮತ್ತು ಹಾರ್ದಿಕ್‌ ಪಾಂಡ್ಯ 25 ರನ್‌ (16 ಎಸೆತ, 3 ಬೌಂಡರಿ, 1 ಸಿಕ್ಸ್‌) ಗಳಿಸಿ ಔಟಾದರು. ಆದರೆ ಅಭಿಷೇಕ್‌ ಶರ್ಮಾ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿ 35 ಎಸೆತಗಳಲ್ಲಿ 84 ರನ್‌ (5 ಬೌಂಡರಿ, 8 ಸಿಕ್ಸ್‌) ಚಚ್ಚಿದರು. 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು ನಂತರದ 15 ಎಸೆತಗಳಲ್ಲಿ 34 ರನ್‌ ಸೇರಿಸಿದರು. ಕೊನೆಯಲ್ಲಿ ರಿಂಕು ಸಿಂಗ್‌ ಅಜೇಯ 44 ರನ್‌ (20 ಎಸೆತ, 4 ಬೌಂಡರಿ, 3 ಸಿಕ್ಸ್‌) ಗಳಿಸಿ ತಂಡದ ಮೊತ್ತವನ್ನು 7 ವಿಕೆಟ್‌ ನಷ್ಟಕ್ಕೆ 238 ರನ್‌ಗಳಿಗೆ ಏರಿಸಿದರು.

239 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ ಆರಂಭದಲ್ಲೇ 1 ರನ್‌ಗೆ 2 ವಿಕೆಟ್‌ ಕಳೆದುಕೊಂಡಿತು. ಆದರೂ ಗ್ಲೆನ್‌ ಫಿಲಿಪ್ಸ್‌ ಮತ್ತು ಮಾರ್ಕ್‌ ಚಾಪ್‌ಮನ್‌ ಹೋರಾಟ ನೀಡಿದರು. ಫಿಲಿಪ್ಸ್‌ 78 ರನ್‌ (40 ಎಸೆತ, 4 ಬೌಂಡರಿ, 6 ಸಿಕ್ಸ್‌) ಹಾಗೂ ಚಾಪ್‌ಮನ್‌ 39 ರನ್‌ (24 ಎಸೆತ, 4 ಬೌಂಡರಿ, 2 ಸಿಕ್ಸ್‌) ಹೊಡೆದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್‌ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 190 ರನ್‌ಗಳಿಗೆ ಸೀಮಿತವಾಯಿತು. ಕ್ರಮೇಣ ಭಾರತ ಗೆದ್ದು ಬೀಗಿದೆ.

ಬೆಂಗಳೂರು| ವಿದೇಶಿ ಮಹಿಳೆಯ ಖಾಸಗಿ ಅಂಗ ಸ್ಪರ್ಶಿಸಿ ಕಿರುಕುಳ; ಏರ್ಪೋರ್ಟ್ ಸಿಬ್ಬಂದಿ ಅರೆಸ್ಟ್

0

ಬೆಂಗಳೂರು:- ಭದ್ರತಾ ತಪಾಸಣೆಯ ಹೆಸರಿನಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿಯೇ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಘಟನೆ ಬೆನ್ನಲ್ಲೇ ದೂರು ಆಧರಿಸಿ ಆರೋಪಿ ಅಪಾನ್ ಅಹ್ಮದ್ ಎಂಬಾತನನ್ನು ಬಂಧಿಸಲಾಗಿದೆ. ಟಿಕೆಟ್ ಪರಿಶೀಲನೆ ವೇಳೆ ಮಹಿಳೆಯ ಬ್ಯಾಗ್‌ನಿಂದ ಬೀಪ್ ಸೌಂಡ್ ಬರುತ್ತಿದೆ ಎಂದು ಹೇಳಿದ ಅಪಾನ್ ಅಹ್ಮದ್, ಪ್ರತ್ಯೇಕವಾಗಿ ತಪಾಸಣೆ ನಡೆಸಬೇಕೆಂದು ತಿಳಿಸಿದ್ದಾನೆ. ಚೆಕಿಂಗ್ ಕೌಂಟರ್‌ಗೆ ಹೋದರೆ ವಿಮಾನಕ್ಕೆ ತಡವಾಗುತ್ತದೆ ಎಂದು ನಂಬಿಸಿ, ಮಹಿಳೆಯನ್ನು ಪುರುಷರ ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ತಪಾಸಣೆ ನೆಪದಲ್ಲಿ ಮಹಿಳೆಯ ಖಾಸಗಿ ಅಂಗಗಳನ್ನು ಸ್ಪರ್ಶಿಸಿ, ಬಲವಂತವಾಗಿ ತಬ್ಬಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವೇಳೆ ಮಹಿಳೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟರಲ್ಲಿ ಆರೋಪಿಯು, ‘ಓಕೆ ಥ್ಯಾಂಕ್ ಯು’ ಎಂದು ಹೇಳಿ ಅಲ್ಲಿಂದ ಹೊರನಡೆದಿದ್ದಾನೆ. ಬಳಿಕ ವಿದೇಶಿ ಮಹಿಳೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ದೂರು ನೀಡಿದ್ದು, ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ವಿದೇಶಿ ಮಹಿಳೆಯ ದೂರಿನ ಮೇರೆಗೆ ಕೆಂಪೇಗೌಡ ಏರ್‌ಪೋರ್ಟ್ ಠಾಣೆ ಪೊಲೀಸರು ಅಪಾನ್ ಅಹ್ಮದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಬಂಧನವಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಭೂಮಿಯೊಳಗಿನ ಇತಿಹಾಸ ಹೊರಬರುತ್ತಿದೆಯೇ? ಲಕ್ಕುಂಡಿ ಉತ್ಖನನದಲ್ಲಿ ನಾಗರಶಿಲೆ, ಮೂಳೆ ಪತ್ತೆ – ಹೆಚ್ಚಿದ ಕುತೂಹಲ

0

ಗದಗ: ಲಕ್ಕುಂಡಿಯ ಪುರಾತನ ನೆಲದೊಳಗೆ ಅಡಗಿರುವ ಇತಿಹಾಸ ಈಗ ಒಂದೊಂದಾಗಿ ಹೊರಬರುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಇಂದು (ಜ.21) ಉತ್ಖನನದ 6ನೇ ದಿನದ ಕಾರ್ಯದಲ್ಲಿ ಹಸಿರು ಬಣ್ಣದ ನಾಗರಶಿಲೆ, ಸುಟ್ಟ ಮಣ್ಣಿನ ಬಿಲ್ಲೆ ಹಾಗೂ ಮೂಳೆಯ ತುಂಡುಗಳು ಪತ್ತೆಯಾಗಿದ್ದು, ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಹಸಿರು ಬಣ್ಣದ ನಾಗರಶಿಲೆ ಪತ್ತೆಯಾಗಿರುವುದು ವಿಶೇಷ ಗಮನ ಸೆಳೆದಿದ್ದು, ಇದು ಖಜಾನೆ (ನಿದಿ) ಇರುವ ಸೂಚನೆ ಇರಬಹುದೆಂಬ ಮಾತುಗಳು ಸ್ಥಳೀಯರಲ್ಲಿ ಹರಡಿವೆ. ಇದರಿಂದ ಉತ್ಖನನ ಸ್ಥಳದ ಸುತ್ತ ಜನರ ಆಸಕ್ತಿ ಮತ್ತಷ್ಟು ಹೆಚ್ಚಾಗಿದೆ.

01ನೇ ಬ್ಲಾಕ್‌ನಲ್ಲಿ ಪತ್ತೆಯಾದ 6-7 ಚಿಕ್ಕ ಮೂಳೆ ತುಂಡುಗಳನ್ನು ಅಧಿಕಾರಿಗಳು ಜಾಗ್ರತೆಯಿಂದ ಪ್ಲಾಸ್ಟಿಕ್ ಪ್ಯಾಕೇಟ್‌ನಲ್ಲಿ ಸೀಲ್ ಮಾಡಿ ಸಂಗ್ರಹಿಸಿದ್ದಾರೆ. ಪುರಾತತ್ವ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದು, ಈ ಮೂಳೆಗಳು ಮಾನವರದ್ದಾ, ಪ್ರಾಣಿಗಳದ್ದಾ ಅಥವಾ ಪಕ್ಷಿಗಳದ್ದಾ ಎಂಬುದು ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ.

ನಿನ್ನೆ (ಜ.20) ಶಿವಲಿಂಗದ ಪಾಣಿಪೀಠದ ಸಂಪೂರ್ಣ ಭಾಗ ಹೊರತೆಗೆಯಲಾಗಿದ್ದು, ದೊಡ್ಡ ಮಡಿಕೆಯ ಒಂದು ಭಾಗವೂ ಪತ್ತೆಯಾಗಿತ್ತು. ಇವತ್ತು ಸುಮಾರು 6 ಅಡಿ ಆಳಕ್ಕೆ ಅಗೆದಿದ್ದು, ಭೂಮಿಯೊಳಗೆ ಇನ್ನೂ ಹಲವು ಅವಶೇಷಗಳು ಅಡಗಿರುವ ಸಾಧ್ಯತೆ ಹೆಚ್ಚಿದೆ.

ಒಟ್ಟಿನಲ್ಲಿ, ಲಕ್ಕುಂಡಿಯ ಉತ್ಖನನ ಕಾರ್ಯ ದಿನದಿಂದ ದಿನಕ್ಕೆ ಹೊಸ ರಹಸ್ಯಗಳನ್ನು ಹೊರಹಾಕುತ್ತಿದ್ದು, ಇತಿಹಾಸ ಪ್ರೇಮಿಗಳು ಹಾಗೂ ಸಾರ್ವಜನಿಕರಲ್ಲಿ ಅಪಾರ ಕುತೂಹಲ ಮೂಡಿಸಿದೆ.

ಜ. 25ರಂದು ಶ್ರೀ ಚನ್ನವೀರ ಶರಣರ ಜಾತ್ರಾ ಮಹೋತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ: ಮೌನಯೋಗಿ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಮಹಾರಥೋತ್ಸವವು ಜ. 25ರಂದು ಸಂಜೆ 5 ಗಂಟೆಗೆ ಜರುಗುವದು. ಜಾತ್ರಾ ಮಹೋತ್ಸವದ ಅಂಗವಾಗಿ ಮಹಾತ್ಮರ ಜೀವನ ದರ್ಶನ ಪ್ರವಚನ, ಮಹಾರಥೋತ್ಸವ, ಲಘು ರಥೋತ್ಸವ, ಜಾನಪದ ಕಲಾಮೇಳ, ಸಾಮೂಹಿಕ ವಿವಾಹಗಳು, ಸುಮಂಗಲೆಯರಿಗೆ ಉಡಿ ತುಂಬುವದು, ತುಲಾಭಾರ, ಧಾರ್ಮಿಕ ಚಿಂತನಗೋಷ್ಠಿ ಹಾಗೂ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸುಕ್ಷೇತ್ರ ಬಳಗಾನೂರಿನ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ ಮಠದ ಪೂಜ್ಯಶ್ರೀ ಶಿವಶಾಂತವೀರ ಶರಣರು ಹೇಳಿದರು.

ಅವರು ನಗರದ ಪತ್ರಿಕಾಭವನದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ. 24ರಂದು ಬೆಳಿಗ್ಗೆ 8 ಗಂಟೆಗೆ ಕುಷ್ಟಗಿಯ ಮದ್ದಾನಿ ಹಿರೇಮಠದ ಪೂಜ್ಯಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹಿರೇವಡ್ಡಟ್ಟಿ ಹಿರೇಮಠದ ಪೂಜ್ಯಶ್ರೀ ವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ 5 ಗಂಟೆಗೆ ಪ್ರಕಾಶ ಜಗದೀಶಪ್ಪ ಹುಗ್ಗಿ ಹಾಗೂ ಶರಣರ ಬಳಗ ರೋಣ ಅವರ ಮಹಾಮನೆಯಿಂದ ರಥದ ಕಳಸ ಆಗಮಿಸುವದು. ಸಂಜೆ 6 ಗಂಟೆಗೆ ಲಘು ರಥೋತ್ಸವ ಜರುಗುವದು.

ಸಂಜೆ 7 ಗಂಟೆಗೆ ಮಹಾತ್ಮರ ಜೀವನ ದರ್ಶನ ಪ್ರವಚನ ಮಂಗಲೋತ್ಸವ ಜರುಗುವದು. ಹೂವಿನ ಹಡಗಲಿ ಗವಿಮಠದ ಪೂಜ್ಯಶ್ರೀ ಡಾ. ಹಿರಿಯ ಶಾಂತವೀರ ಮಹಾಸ್ವಾಮಿಗಳು ಪಾವನ ಸಾನ್ನಿಧ್ಯ ವಹಿಸುವರು. ಅಣದೂರ ನೀಲಕಂಠೇಶ್ವರ ಮಠದ ಪೂಜ್ಯಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ರಬಕವಿ ಬ್ರಹ್ಮಾನಂದ ಶ್ರೀಮಠದ ಪೂಜ್ಯಶ್ರೀ ಗುರುಸಿದ್ದೇಶ್ವರ ಸ್ವಾಮಿಗಳು ಸಮ್ಮುಖ ವಹಿಸುವರು. ಬಳೂಟಗಿಯ ಹಿರೇಮಠದ ಪೂಜ್ಯಶ್ರೀ ಶಿವಕುಮಾರ ಸ್ವಾಮಿಗಳು ಪ್ರವಚನ ಮಂಗಲದ ನುಡಿ ಆಡುವರು. ಸೋಮನಾಳದ ಶರಣು ಕೆ. ಹಿರೇಮಠ ಸಂಗೀತ ಸೇವೆ ನೀಡುವರು. ಗದುಗಿನ ಪಂಚಾಕ್ಷರಿ ಹೂಗಾರ ತಬಲಾ ಸಾಥ್ ನೀಡುವರು. ಇದೇ ಸಂದರ್ಭದಲ್ಲಿ ಶ್ರೀಮಠದ ಪೂಜ್ಯರಿಗೆ ದಾನಿಗಳಿಂದ ತುಲಾಭಾರದ ಭಕ್ತಿಸೇವೆ ಜರುಗಲಿದೆ ಎಂದರು.

ಜ. 25ರಂದು ಬೆಳಿಗ್ಗೆ 5 ಗಂಟೆಗೆ ಶ್ರೀ ಚನ್ನವೀರ ಶರಣರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಲಿಂಗದೀಕ್ಷೆ, ಅಯ್ಯಾಚಾರ ಜರುಗಲಿದೆ. ಮೈನಳ್ಳಿ ಹಾಗೂ ಬಿಕನಳ್ಳಿ ಹಿರೇಮಠದ ಪೂಜ್ಯಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಹುಬ್ಬಳ್ಳಿಯ ವಿಶ್ವನಾಥ ಮಂದಿರದ ವೇ.ಮೂ. ಬಸಯ್ಯ ಶಾಸ್ತ್ರಿಗಳು, ಅಮರಾಪೂರದ ವೇ.ಮೂ. ಶ್ರೀ ಚನ್ನವೀರಯ್ಯ ಶಾಸ್ತ್ರಿಗಳು ಹಾಗೂ ಶ್ರೀಮಠದ ವೈದಿಕ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೈದಿಕ ಕಾರ್ಯಕ್ರಮಗಳು ಜರುಗುವವು.

ಬೆಳಿಗ್ಗೆ 10 ಗಂಟೆಗೆ ಪೂಜ್ಯಶ್ರೀ ಚನ್ನವೀರ ಶರಣರ ಹರಕೆಯ ತೇರನ್ನು ಪೂಜ್ಯರು ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸುವರು. 10.30 ಗಂಟೆಗೆ ಶ್ರೀ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ ಹಾಗೂ ಕಲ್ಯಾಣ ಮಹೋತ್ಸವ ಜರುಗುವದು. ಈ ಕಾರ್ಯಕ್ರಮದಲ್ಲಿ ಹೊಸಳ್ಳಿ ಬೂದೀಶ್ವರ ಸಂಸ್ಥಾನಮಠದ ಪೂಜ್ಯಶ್ರೀ ಜ. ಬೂದೀಶ್ವರ ಮಹಾಸ್ವಾಮಿಗಳು ಪಾವನ ಸಾನ್ನಿಧ್ಯ ವಹಿಸುವರು. ಅಗಡಿ-ಅಕ್ಕಿಮಠದ ಪೂಜ್ಯಶ್ರೀ ಗುರುಲಿಂಗ ಮಹಾಸ್ವಾಮಿಗಳು, ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯಶ್ರೀ ಡಾ. ಕಲ್ಲಯ್ಯಜ್ಜನವರು ಸಮ್ಮುಖ ವಹಿಸುವರು. ಗದುಗಿನ ವೆಂಕಟೇಶ ಆಲ್ಕೋಡ ಹಾಗೂ ತಂಡದವರಿಂದ ಭಕ್ತಿಸಂಗೀತ ಕಾರ್ಯಕ್ರಮ ಜರುಗುವುದು.

ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೌತಾಳದ ಪ್ರಗತಿಪರ ಕೃಷಿ ಮಹಿಳೆ ಡಾ. ಕವಿತಾ ಮಿಶ್ರಾ, ಬಾಗಲಕೋಟೆಯ ಅನ್ನಪೂರ್ಣ ಬಸಯ್ಯ ಬಳೂಲಮಠ ಹಾಗೂ ಬೆಂಗಳೂರಿನ ಕಡಬಗೆರೆ ಮುನಿರಾಜ ಮತ್ತು ತಂಡ ಇವರಿಗೆ ಸಿದ್ದಲಿಂಗನಗೌಡ ಎಸ್. ಜಂಗ್ಲೆಪ್ಪಗೌಡ್ರ ಮೆಮೋರಿಯಲ್ ಉಮಾ ವಿದ್ಯಾಶ್ರೀ ಟ್ರಸ್ಟ್ ನವಲಗುಂದ ಇವರ ಸಂಯುಕ್ತಾಶ್ರಯದಲ್ಲಿ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ನಂತರ ಬೆಂಗಳೂರಿನ ಕಡಬಗೆರೆ ಮುನಿರಾಜ ಮತ್ತು ತಂಡದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಜರುಗುವದು. ಸಂಜೆ 4 ಗಂಟೆಗೆ ಬಳಗಾನೂರಿನ ಶರಣರ ಬಳಗ ಹಾಗೂ ಡಾ. ಶಿವಕುಮಾರಯ್ಯ ಶಂಕ್ರಯ್ಯ ಹಿರೇಮಠ ಅವರ ಮಹಾಮನೆಯಿಂದ ರಥದ ಹಗ್ಗವನ್ನು ತರಲಾಗುವದು. ಸಂಜೆ 5 ಗಂಟೆಗೆ ಪೂಜ್ಯಶ್ರೀ ಜಗದ್ಗುರುಗಳು, ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ಮಹಾರಥೋತ್ಸವ ಜರುಗುವದು.

ಸಂಜೆ 6 ಗಂಟೆಗೆ ಧಾರ್ಮಿಕ ಚಿಂತನಗೋಷ್ಠಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೊಪ್ಪಳ ಸಂಸ್ಥಾನ ಗವಿಮಠದ ಪೂಜ್ಯಶ್ರೀ ಜಗದ್ಗುರು ಗವಿಸಿದ್ದೇಶ್ವರ ಮಹಾಸ್ವಾಮಿಗಳು ಪಾವನ ಸಾನ್ನಿಧ್ಯ ವಹಿಸುವರು. ಹೂವಿನಶಿಗ್ಲಿ ವಿರಕ್ತಮಠದ ಪೂಜ್ಯಶ್ರೀ ಚನ್ನವೀರ ಮಹಾಸ್ವಾಮಿಗಳು ಹಾಗೂ ಕನಕಗಿರಿ ಸುವರ್ಣಗಿರಿ ವಿರಕ್ತಮಠದ ಪೂಜ್ಯಶ್ರೀ ಡಾ. ಚನ್ನಮಲ್ಲ ಮಹಾಸ್ವಾಮಿಗಳು ಉಪದೇಶಾಮೃತ ನೀಡುವರು.

ಹೆಬ್ಬಾಳ ಬ್ರಹ್ಮಮಠದ ಪೂಜ್ಯಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಸುಕ್ಷೇತ್ರ ಗುಡದೂರಿನ ಪೂಜ್ಯಶ್ರೀ ನೀಲಕಂಠ ತಾತನವರು, ಖಜ್ಜಿಡೋಣಿಯ ಪೂಜ್ಯಶ್ರೀ ಕೃಷ್ಣಾನಂದ ಶಾಸ್ತ್ರಿಗಳು ಸಮ್ಮುಖ ವಹಿಸುವರು. ದಿಯಾ ಪೀರಸಾಬ ಕೌತಾಳ ಅವರಿಂದ ಸಂಗೀತ ಕಾರ್ಯಕ್ರಮ ನಡೆಯುವದು. ಬೆಂಗಳೂರು ಆಕಾಶವಾಣಿಯ ನಿರೂಪಕಿ ಸವಿತಾ ಶಿವಕುಮಾರ ಕಾರ್ಯಕ್ರಮ ನಿರೂಪಿಸುವರು.

ಜ. 26ರಂದು ಸಂಜೆ 5 ಗಂಟೆಗೆ ಕಡುಬಿನ ಕಾಳಗ ಹಾಗೂ ಶ್ರೀ ಶರಣರ ಬೆಳ್ಳಿಮೂರ್ತಿ ಉತ್ಸವ ಜರುಗುವದು. ಸುಕ್ಷೇತ್ರ ಬಳಗಾನೂರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಚನ್ನವೀರ ಶರಣರ ಬೆಳ್ಳಿಮೂರ್ತಿ ಉತ್ಸವ ಜರುಗುವದು. ನಂತರ ಶ್ರೀಮಠದಲ್ಲಿ ಕಡುಬಿನ ಕಾಳಗ ಜರುಗುವದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎ.ಎನ್. ನಾಗರಳ್ಳಿ, ವಿ.ಬಿ. ಪೊಲೀಸಪಾಟೀಲ, ಎಂ.ಬಿ. ಸಿಕ್ಕೆದೇಸಾಯಿ, ವಿ.ಎಸ್. ಹಿರೇಮಠ, ಎಸ್.ಬಿ. ಪಾಟೀಲ, ಎಸ್.ಎಸ್. ಪಾಟೀಲ, ಶಿವಲಿಂಗಯ್ಯ ಶಾಸ್ತ್ರಿಗಳು ಹಿರೇಮಠ ಸಿದ್ದಾಪೂರ, ವಸಂತಮೇಟಿ, ಶೇಖಣ್ಣ ಗದ್ದಿಕೇರಿ, ಮನ್ನಾಪೂರ, ಗೌರಿಪೂರ, ವೈ.ಬಿ. ಡೊಳ್ಳಿನ, ಎಚ್.ಎಸ್. ವೆಂಕಟಾಪೂರ ಮುಂತಾದವರು ಉಪಸ್ಥಿತರಿದ್ದರು.

ಜ. 26ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಗಾಯಕರಾದ ಡಾ. ಶ್ರೀರಾಮ ಕಾಸರ್ ಮತ್ತು ತಂಡದವರಿಂದ ರಸಮಂಜರಿ ಹಾಗೂ ಚಲನಚಿತ್ರ ನಟ ಪ್ರವೀಣ ಗಸ್ತಿ ಮತ್ತು ಕಾಮಿಡಿ ಕಿಲಾಡಿಗಳಿಂದ ಹಾಸ್ಯ ಸಂಜೆ ಜರುಗುವದು. ರಾತ್ರಿ 9 ಗಂಟೆಗೆ ಸಿಡಿಮದ್ದು ಸುಡುವ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ಬಳ್ಳಾರಿಯ ಅಭಿನಯ ಕಲಾಕೇಂದ್ರ ಅವರಿಂದ ಅಲ್ಲಿಪುರದ ಮಹಾದೇವ ತಾತನವರ ಭಕ್ತಿ ಪ್ರಧಾನ ನಾಟಕ ಪ್ರದರ್ಶನವಾಗಲಿದೆ ಎಂದು ಪೂಜ್ಯ ಶ್ರೀಗಳು ಹೇಳಿದರು.

ನುಡಿದಂತೆ ನಡೆದ ಶರಣ ಅಂಬಿಗರ ಚೌಡಯ್ಯ: ಅಶೋಕ ಹುಬ್ಬಳ್ಳಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಬುಧವಾರ ಶಿರಹಟ್ಟಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತಿಯ ಅಂಗವಾಗಿ ಪಟ್ಟಣದ ಮ್ಯಾಗೇರಿ ಓಣಿಯಿಂದ ಬೃಹತ್ ಭಾವಚಿತ್ರ ಮೆರವಣಿಗೆಯ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ ಕಚೇರಿಯಲ್ಲಿ ತಾಲೂಕಾ ಆಡಳಿತದ ವತಿಯಿಂದ ಜಯಂತಿ ಆಚರಿಸಲಾಯಿತು.

ಅಂಬಿಗರ ಚೌಡಯ್ಯ ಸಮಾಜದ ತಾಲೂಕಾಧ್ಯಕ್ಷ ಅಶೋಕ ಹುಬ್ಬಳ್ಳಿ ಮಾತನಾಡಿ, ಚೌಡಯ್ಯನವರು ಕಲ್ಯಾಣದಲ್ಲಿ ತ್ರಿಪುರಾಂತಕ ಕೆರೆಯಲ್ಲಿ ದೋಣಿ ನಡೆಸುವ ಕಾಯಕ ಕೈಗೊಂಡು ಕಾಯಕ, ದಾಸೋಹ, ಶಿವಯೋಗ ಸಾಧನೆಯ ಮೂಲಕ ಅನೇಕ ವಚನಗಳನ್ನು ಬರೆದಿದ್ದಾರೆ. ಬೆನ್ನಿಗೆ ವಚನ ಸಾಹಿತ್ಯ ಕಟ್ಟುಗಳನ್ನು ಕಟ್ಟಿಕೊಂಡು ಖಡ್ಗ ಹಿಡಿದು ಹೋರಾಡಿದ ವೀರ ಗಣಾಚಾರಿ ಶರಣರಾಗಿದ್ದಾರೆ. ತುಂಬಿದ ನದಿಯಲ್ಲಿ ದೋಣಿಗೆ ಹುಟ್ಟು ಹಾಕುವ ಅಂಬಿಗ ಮಾತ್ರನಲ್ಲದೇ, ಭವಸಾಗರವೆಂಬ ಈ ಸಂಸಾರದ ವಾರಿಧಿಯನ್ನು ಅರಿವೆಂಬ ಹುಟ್ಟು ಹಾಕಿ ದಾಟಿಸುವ ಕೌಶಲ್ಯವುಳ್ಳವರಾಗಿದ್ದರು. ಅಪಾರ ಅನುಭವದ ಅಮೃತವನ್ನು ಚಾಟಿ ಏಟಿನೊಂದಿಗೆ ಕೊಟ್ಟು ಹೊಡೆದೆಬ್ಬಿಸಿ ಚುಚ್ಚು ಮಾತಿನ ಬಿಚ್ಚು ಹೃದಯದ ಕೆಚ್ಚಿನ ಅಮರ ವಚನಗಳು, ನುಡಿದಂತೆ ನಡೆದ, ನಡೆದಂತೆ ನುಡಿದ ಧೀರ-ವೀರ ಶರಣರಾಗಿದ್ದರು ಇವರ ಆದರ್ಶ ಇಂದಿನ ಸಮಾಜಕ್ಕೆ ಸ್ಫೂರ್ತಿಯಾಗಿದೆ ಎಂದರು.

ತಾಲೂಕಾ ಆಡಳಿತದ ವತಿಯಿಂದ ತಹಸೀಲ್ದಾರ ಕಚೇರಿಯಲ್ಲಿ ಜರುಗಿದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಪಾಲ್ಗೊಂಡು ಮಾತನಾಡಿದರು.

ಕೆಪಿಸಿಸಿ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಸಬ್ ರಜಿಸ್ಟ್ರಾರ್ ಶರಣಪ್ಪ ಪವಾರ, ಎಚ್.ಎಂ. ದೇವಗಿರಿ, ಹೊನ್ನಪ್ಪ ಶಿರಹಟ್ಟಿ, ರವಿ ಗುಡಿಮನಿ, ಪ್ರವೀಣ ಹುಬ್ಬಳ್ಳಿ, ಆನಂದ ಕೋಳಿ, ಬಾಬಾಜಾನ ಕೋಳಿವಾಡ, ಶಫಿ ಹೆಸರೂರ, ಪ್ರಕಾಶ ಸುಣಗಾರ, ಮಂಜು ಹುಬ್ಬಳ್ಳಿ, ಪ್ರಶಾಂತ ಹುಬ್ಬಳ್ಳಿ, ಕೃಷ್ಣಪ್ಪ ಹುಬ್ಬಳ್ಳಿ, ಕಾರ್ತಿಕ ಸುಣಗಾರ, ಉಮ್ಮಣ್ಣ ಸುಣಗಾರ, ನಿಂಗಪ್ಪ ಹುಬ್ಬಳ್ಳಿ, ಸಂಜು ಹುಬ್ಬಳ್ಳಿ, ಪ್ರದೀಪ ಹುಬ್ಬಳ್ಳಿ, ಚಂದ್ರಶೇಖರ ಹುಬ್ಬಳ್ಳಿ, ಶಂಕರಪ್ಪ ಬಾರ್ಕಿ, ನಿಂಗಪ್ಪ ವಡವಿ, ಶರಣಪ್ಪ ಹುಬ್ಬಳ್ಳಿ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ ರಾಘವೇಂದ್ರ ರಾವ್, 12ನೇ ಶತಮಾನದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಆ ಕಾಲದ ಅಸಂಖ್ಯಾತ ಶರಣ ಸಂಕುಲದಲ್ಲಿ ವಿಭಿನ್ನ ವ್ಯಕ್ತಿತ್ವ ಹೊಂದಿರುವ ವೀರಗಣಾಚಾರಿ, ತತ್ವನಿಷ್ಠೆ, ಶ್ರೇಷ್ಠ ತತ್ವಜ್ಞಾನಿಯಾಗಿ, ವಚನಕಾರರಾಗಿ ಅನೇಕ ಬಿರುದುಗಳನ್ನು ಪಡೆದು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದರು ಎಂದರು.

ಶಿಸ್ತು, ಪರಿಶ್ರಮದಿಂದ ಸಾಧನೆ ಸಾಧ್ಯ: ಸಿದ್ದಲಿಂಗ ಬಂಡು ಮಸನಾಯಕ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಮಕ್ಕಳು ಸಾಧನೆ ಮಾಡುವ ಆಸಕ್ತಿ ಹಾಗೂ ಇಚ್ಛಾಶಕ್ತಿಯಿಂದ ಕಲಿತರೆ ಎಲ್ಲಾ ಪಾಠಗಳನ್ನು ಸರಳವಾಗಿ ಗ್ರಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಶಿಸ್ತು ಮತ್ತು ಪರಿಶ್ರಮದಿಂದ ಸಾಧನೆ ಮಾಡಬಹುದಾಗಿದೆ ಎಂದು ಗದಗ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿದ್ದಲಿಂಗ ಬಂಡು ಮಸನಾಯಕ ಹೇಳಿದರು.

ಗಜೇಂದ್ರಗಡ ನಗರದ ಪುರ್ತಗೇರಿ ಕ್ರಾಸ್ ಬಳಿ ಇರುವ ಶ್ರೀ ಅನ್ನದಾನೇಶ್ವರ ವಾಣಿಜ್ಯ ಮತ್ತು ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಬುಧವಾರ ನಡೆದ ನೂತನ ಪ್ರಾಯೋಗಿಕ ಪರೀಕ್ಷಾ ಕೇಂದ್ರದ ಉದ್ಘಾಟನೆ, ವಿವಿಧ ಸಾಂಘಿಕ ಚಟುವಟಿಕೆಗಳ ಸಮಾರೋಪ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದದ್ದು. ವೈಯಕ್ತಿಕ ಬೆಳವಣಿಗೆ ಮಾತ್ರವಲ್ಲದೆ ಸಮಾಜ ಮತ್ತು ದೇಶದ ಪ್ರಗತಿ ಬಗ್ಗೆಯೂ ವಿದ್ಯಾರ್ಥಿ, ಯುವಜನರಿಗೆ ಜವಾಬ್ದಾರಿ ಇರಬೇಕು. ಓದುವ ಸಮಯದಲ್ಲಿ ಕಾಲಹರಣ ಮಾಡಿದರೆ ಕಷ್ಟ, ನೋವು ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೆಯಬಾರದು. ನೈತಿಕ ಮಾರ್ಗದಲ್ಲಿ ನಡೆದು ಗುರಿ ಸಾಧನೆ ಮಾಡಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಚೇರಮನ್ ವೀರಯ್ಯ ವಿ.ವಸ್ತ್ರದ, ವ್ಯಾಸಂಗದ ಅವಧಿಯಲ್ಲಿ ವಿದ್ಯಾರ್ಥಿಗಳು ಶಿಸ್ತು, ಸಂಯಮ ಮತ್ತು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಅಭ್ಯಾಸದ ಜೊತೆಗೆ ಮಕ್ಕಳ ಆರೋಗ್ಯಕ್ಕೆ ಹಾಗೂ ನೈತಿಕತೆಗೆ ಪಾಲಕರು, ಶಿಕ್ಷಕರು ಕಾಳಜಿ ವಹಿಸಬೇಕು. ಮಾನವನ ಬದುಕಿನಲ್ಲಿ ಸಮಯ ಕೋಟಿ ಕೊಟ್ಟರೂ ಸಿಗದು. ಹೀಗಾಗಿ ಪರೀಕ್ಷೆಗೆ ತಯಾರಿ ನಡೆಸಿರುವ ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಅಂದಾಗ ಮಾತ್ರ ದೇಶ ಮೆಚ್ಚುವಂತಹ ಸಾಧನೆಗೈಲು ಸಾಧ್ಯ. ಜೀವನದಲ್ಲಿ ಎಲ್ಲರೂ ಯಶಸ್ಸಿನ ಕನಸು ಕಾಣುತ್ತಾರೆ. ಅದಕ್ಕೆ ತಕ್ಕುದಾದ ತಯಾರಿ ಮಾಡುವುದಿಲ್ಲ. ಅದನ್ನು ನೀವು ಮಾಡಬೇಕು ಎಂದು ಸಲಹೆ ನೀಡಿದರು.

ಆರಂಭದಲ್ಲಿ ನೂತನ ಪ್ರಾಯೋಗಿಕ ಕೇಂದ್ರದ ಉದ್ಘಾಟನೆ ನೆರವೇರಿತು. ನಂತರ ದಾನಿಗಳ, ಗಣ್ಯರ ಸನ್ಮಾನ ಜರುಗಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಎಸ್‌ಎವಿವಿಪಿಯ ಶೈಕ್ಷಣಿಕ ಸಲಹೆಗಾರ ಬಿ.ಎಸ್. ಗೌಡರ, ಗಜೇಂದ್ರಗಡ ಅಂಗಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಶಿವಾನಂದ ಮಠದ, ಎಸ್‌ಎಪಿಯು ಕಾಲೇಜ್ ನರೇಗಲ್‌ನ ಚೇರಮನ್ ಎಂ.ಜಿ. ಸೋಮನಕಟ್ಟಿ, ಆಡಳಿತ ಮಂಡಳಿ ಸದಸ್ಯ ಎಂ.ಪಿ. ಪಾಟೀಲ, ಅನ್ನದಾನೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಚೇರಮನ್ ಪಿ.ಎನ್. ಚವಡಿ, ಕುಮಾರೇಶ್ವರ ಪದವಿ ಕಾಲೇಜಿನ ಚೇರಮನ್ ವೀರಣ್ಣ ಶೆಟ್ಟರ, ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ, ಸಮಾಜ ಸೇವಕ ರಾಜು ಸಾಂಗ್ಲಿಕರ, ವಕೀಲ ರಫೀಕ ತೋರಗಲ್ಲ, ಗಜೇಂದ್ರಗಡ ತಾಲೂಕು ಕಾನಿಪ ಅಧ್ಯಕ್ಷ ಮಂಜುನಾಥ ಎಸ್.ರಾಠೋಡ, ಗದಗ ಜಿಲ್ಲಾ ಕಾನಿಪ ಕಾರ್ಯಕಾರಿಣಿ ಸದಸ್ಯ ಶಿವಕುಮಾರ ಶಶಿಮಠ, ಎ.ಕೆ. ಒಂಟಿ, ಪ್ರಾಚಾರ್ಯರಾದ ವಸಂತರಾವ್ ಗಾರಗಿ, ಬಸಯ್ಯ ಹಿರೇಮಠ, ಎ.ಪಿ. ಗಾಣಗೇರ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಮಂಜುನಾಥ ಕಾಡದ ಇದ್ದರು.

ಪ್ರಸ್ತುತ ಸಮಾಜಕ್ಕೆ ವಿಜ್ಞಾನದ ಕೊಡುಗೆ ಕುರಿತು ಉಪನ್ಯಾಸ ನೀಡಿದ ಶಿವಾನಂದ ಕಲ್ಲೂರ ಮಾತನಾಡಿ, ವಿಜ್ಞಾನ ಕಠಿಣವಾಗಿದ್ದು, ಅರ್ಥ ಮಾಡಿಕೊಳ್ಳುವುದು ಕಷ್ಟಸಾಧ್ಯ ಎನ್ನುವ ಅಭಿಪ್ರಾಯ ಹಲವರಲ್ಲಿದೆ. ಆದರೆ ವಿಜ್ಞಾನವನ್ನು ಎಲ್ಲರೂ ಓದಬಹುದಾಗಿದ್ದು, ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. ನನ್ನಿಂದ ಕಷ್ಟ ಎನ್ನುವ ಭಾವನೆಯಿಂದ ಹೊರಬಂದು ಇಷ್ಟಪಟ್ಟಾಗ ಮನನ ಸಾಧ್ಯವಿದೆ. ಯಾವುದೇ ವಿಷಯಗಳ ಮೂಲ ಪರಿಕಲ್ಪನೆ ಅರ್ಥವಾಗದಿದ್ದಾಗ ಅದು ಕಠಿಣ ಅನ್ನಿಸುತ್ತದೆ. ಹೀಗಾಗಿ ಮೂಲ ಪರಿಕಲ್ಪನೆ ಮೊದಲಿಗೆ ಅರ್ಥೈಸಿಕೊಳ್ಳಬೇಕಿದೆ. ಜಗತ್ತಿನಲ್ಲಿಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬೇಕಾದರೆ ವಿಜ್ಞಾನವನ್ನು ತಿಳಿದುಕೊಳ್ಳುವ ಅಗತ್ಯವಿದೆ ಎಂದರು.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಮೆಣಸಿನಕಾಯಿ ನೇಮಕ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಭಾರತೀಯ ಜನತಾ ಪಾರ್ಟಿಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಿರಹಟ್ಟಿ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ ಬಿಜೆಪಿ ಪಕ್ಷದ ಯುವ ಮುಖಂಡ ಗಂಗಾಧರ ಮೆಣಸಿನಕಾಯಿ ನೇಮಕಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆದೇಶದಂತೆ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರಡಗಿ ನೇಮಕ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಡಾ. ಚಂದ್ರು ಲಮಾಣಿ, ಗಂಗಾಧರ ಮೆಣಸಿನಕಾಯಿ ಅವರು ಕಳೆದ ಹತ್ತಾರು ವರ್ಷಗಳಿಂದ ಪಕ್ಷದ ಕಾರ್ಯಕರ್ತನಾಗಿ, ನಗರ, ತಾಲೂಕಾ ಘಟಕಗಳ ಪದಾಧಿಕಾರಿಯಾಗಿ ಪಕ್ಷದ ಸಂಘಟನೆಯ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಪಕ್ಷದ ಕಾರ್ಯ ಚಟುವಟಿಕೆಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಎಲ್ಲರ ವಿಶ್ವಾಸ ಗಳಿಸಿದ್ದಾರೆ. ಮಂಡಲದ ಪ್ರ. ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ

0

ವಿಜಯಸಾಕ್ಷಿ ಸುದ್ದಿ, ಗದಗ: ನಕಲಿ ದಾಖಲೆ ಸೃಷ್ಟಿಸಿ ರಾಚೋಟೇಶ್ವರ ನಗರದ ನಿವಾಸಿಗಳಿಗೆ ತೊಂದರೆ ನೀಡುತ್ತ ಸರ್ಕಾರಿ ಕಾಮಗಾರಿಗಳಿಗೆ ವಿನಾಕಾರಣ ಅಡ್ಡಿ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರಾಚೋಟೇಶ್ವರ ನಗರದ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಚೋಟೇಶ್ವರ ನಗರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷರಾದ ರವಿ ಗುಂಜೀಕರ ಮಾತನಾಡಿ, ಲೇಔಟ್ ಮಾಲಿಕರು ಎಂದು ಹೇಳಿಕೊಂಡು ಒಟ್ಟು ಮೊಕ್ತಿಯಾರ್ ಪತ್ರ ಹೊಂದಿದ್ದೇವೆ ಎಂದು ಅಬ್ರಾರ್ ಮಹ್ಮದ ಅಲಿ ಬಿಜಾಪೂರ, ಶಾರುಖ್ ಫರಹಾದ್ ಬಿಜಾಪೂರ, ಸುಹೇಲ್ ಇಮಾಮಸಾಬ ಬಿಜಾಪೂರ ಹಾಗೂ ಉಮರ್ ಫಾರುಖ್ ಸಿರಾಜ್ ಅಹ್ಮದ್ ಬಿಜಾಪೂರ ಎನ್ನುವ ವ್ಯಕ್ತಿಗಳು ಪದೇ ಪದೇ ರಾಚೋಟೇಶ್ವರ ನಗರದ ಉದ್ಯಾನವನಕ್ಕೆ ಬಂದು ಈ ಉದ್ಯಾನವನದ ಸ್ಥಳದಲ್ಲಿ ತಮ್ಮ ನಿವೇಶನಗಳು ಇವೆ ಎಂದು ಸುಳ್ಳು ಹೇಳಿ ಶುದ್ಧ ನೀರಿನ ಘಟಕದ ಸರ್ಕಾರಿ ಕಾಮಗಾರಿ ನಡೆಸಲು ತೊಂದರೆ ಕೊಡುತ್ತಿದ್ದಾರೆ. ಗುತ್ತಿಗೆದಾರರಿಗೆ, ಕಾರ್ಮಿಕರಿಗೆ ಬೆದರಿಕೆ ಹಾಕಿ, ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ಮಾತನಾಡಿ ಗೂಂಡಾ ವರ್ತನೆ ಮಾಡುತ್ತಿದ್ದಾರೆ.

ಈ ವ್ಯಕ್ತಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪಾರ್ಕ್‌ನ ಪ್ಲಾಟ್ ನಂ. 48ರಲ್ಲಿ ವಿಭಜನೆ ತೋರಿಸಿ ಕ್ರ.ಸಂ. 49, 50, 51 ಹಾಗೂ 52ನೇ ನಿವೇಶನಗಳು ತಮ್ಮವು ಎಂದು ಹೇಳುತ್ತಿದ್ದಾರೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳು ಸಹ ಶಾಮೀಲು ಇದ್ದಾರೆಂದು ಆರೋಪಿಸಿದರು.

ಈ ಸಂದರ್ಭದಲ್ಲಿ ರಾಚೋಟೇಶ್ವರ ನಗರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಗೌರವಾಧ್ಯಕ್ಷ ಸುಧೀರಸಿಂಹ ಘೋರ್ಪಡೆ, ಉಪಾಧ್ಯಕ್ಷರಾದ ಡಾ. ಎಸ್.ಆರ್. ಹಿರೇಮಠ, ಸದಸ್ಯರಾದ ಬಸವರಾಜ ಹಡಪದ, ಅಂಬರೀಶ ಇಟಗಿ, ಎಸ್.ಪಿ. ಪಾವನ, ನಂದಾ ಶಾಸ್ತ್ರಿ, ಈರಣ್ಣ ನವಲಿ, ನೀಲಮ್ಮ ಬೋಳನವರ, ಶರಣಪ್ಪ ಬೋಳನವರ, ಎಂ.ಬಿ. ತುಪ್ಪದ, ಮಂಜುನಾಥ ಮಾನೆ, ತೋಟಪ್ಪ ಕರಮುಡಿ ಮುಂತಾದವರು ಉಪಸ್ಥಿತರಿದ್ದರು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ ಅಧಿಕಾರಿಗಳ ಮೇಲೆ ಹಾಗೂ ಕಾನೂನುಬಾಹಿರವಾಗಿ ವರ್ತಿಸಿದ ಎಲ್ಲರ ಮೇಲೆ ಕ್ರಮ ಕೈಗೊಂಡು ಅಲ್ಲಿ ಸಾರ್ವಜನಿಕರಿಗೆ ತುರ್ತಾಗಿ ಬೇಕಾಗಿರುವ ಶುದ್ಧ ನೀರಿನ ಘಟಕದ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಿ ಅನುಕೂಲ ಮಾಡಿಕೊಡಬೇಕೆಂದು ರವಿ ಗುಂಜೀಕರ ಹೇಳಿದರು.

error: Content is protected !!