Home Blog Page 3257

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಕ್ಷೇತ್ರ ಶಿಕ್ಷಣಾಧಿಕಾರಿಗೆ 5 ವರ್ಷ ಜೈಲು, 25 ಸಾವಿರ ರೂ. ದಂಡ

ವಿಜಯಸಾಕ್ಷಿ ಸುದ್ದಿ, ಗದಗ

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸದ್ಯ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿಗೆ (ಬಿಇಒ) 5 ವರ್ಷ ಜೈಲು ಹಾಗೂ 25 ಸಾವಿರ ರೂ. ದಂಡ ವಿಧಿಸಿ ಗದಗ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಗದಗ ಜಿಲ್ಲೆಯ ಮುಂಡರಗಿಯ ಪಟ್ಟಣದಲ್ಲಿ 2020 ರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಶಂಕ್ರಪ್ಪ ನಿಂಗಪ್ಪ ಹಳ್ಳಿಗುಡಿ ಶಿಕ್ಷೆಗೆ ಗುರಿಯಾದ ಅಧಿಕಾರಿ.

ಮುಂಡರಗಿಯಲ್ಲಿ ಬಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಮನೆ ಭೇಟಿ ಕಾರ್ಯಕ್ರಮದ ನೆಪದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಬಗ್ಗೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ 29/2020 ಕಲಂ 354(ಎ) 8,10,12 ಐ.ಪಿ.ಸಿ ಕಲಂ ಪೋಕ್ಸೋ ಕಾಯ್ದೆ 2012 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಎಸ್ ಎಂ ಬೆಂಕಿ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ, 21-3-2020ರಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆಯಲ್ಲಿ ಆರೋಪಿ ಅಂದಿನ ಬಿಇಒ ಶಂಕ್ರಪ್ಪ ನಿಂಗಪ್ಪ ಹಳ್ಳಿಗುಡಿ ಅವರು ಮಾಡಿದ ಅಪರಾಧವು ರುಜುವಾತಾಗಿದ್ದರಿಂದ ಸದರಿ ಆರೋಪಿಗೆ 5 ವರ್ಷ ಜೈಲು, 25 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡದ ಹಣ ಕೊಡಲುತಪ್ಪಿದಲ್ಲಿ ಹೆಚ್ಚುವರಿಯಾಗಿ 6 ತಿಂಗಳು ಶಿಕ್ಷೆ ವಿಧಿಸಿ ಮಾನ್ಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ರಾಜೇಶ್ವರ ಶೆಟ್ಟಿ ಅವರಿದ್ದ ಪೀಠ ಆದೇಶ ಹೊರಡಿಸಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಅಮರೇಶ್ ಉಮಾಪತಿ ಹಿರೇಮಠ ವಾದ ಮಂಡಿಸಿದ್ದರು.

ಹೊರಟ್ಟಿಯವರ `ನಿಸರ್ಗ ಫಾರ್ಮ್’ಗೆ ನಟ ರಿಷಬ್ ಶೆಟ್ಟಿ ಭೇಟಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಎಲ್ಲರೊಂದಿಗೂ ಒಂದಾಗುವ ವ್ಯಕ್ತಿತ್ವವುಳ್ಳ ಸಭಾಪತಿ ಬಸವರಾಜ ಹೊರಟ್ಟಿ ಅವರ ನೆಚ್ಚಿನ ನಿಸರ್ಗ ಫಾರ್ಮ್ ಗೆ ಕನ್ನಡದ ಚಿತ್ರರಂಗದ ಖ್ಯಾತ ನಾಯಕ ನಟ ರಿಷಬ್ ಶೆಟ್ಟಿ ಭೇಟಿ ನೀಡಿ, ಬಸವರಾಜ್ ಹೊರಟ್ಟಿ ಅವರ ಕೃಷಿ ಪ್ರೇಮದ ಕುರಿತು ಅಚ್ಚರಿ ವ್ಯಕ್ತಪಡಿಸಿದರು.

ನಾಲ್ಕು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಸಮಾಜಮುಖಿ ಸೇವೆಯೊಂದಿಗೆ ಕೃಷಿ ಕ್ಷೇತ್ರದಲ್ಲಿಯೂ ಸಾಕಷ್ಟು ಬದಲಾವಣೆ ತಂದಿರುವ ಹೊರಟ್ಟಿ ಅವರ ಕೃಷಿ ಚಟುವಟಿಕೆಗಳ ಬಗ್ಗೆ, ಹೈನುಗಾರಿಕೆ ಬಗ್ಗೆ, ದನ-ಕರಗಳ ಬಗ್ಗೆ, ಇನ್ನಿತರ ಪ್ರಾಣಿ-ಪಕ್ಷಿಗಳ ಕುರಿತ ಅವರ ಆಸಕ್ತಿಯ ಕುರಿತು ತಿಳಿದುಕೊಂಡು ಖುಷಿಪಟ್ಟ ರಿಷಬ್ ಶೆಟ್ಟಿ, ತಾವು ಕೃಷಿಯ ಬಗ್ಗೆ ಇರುವ ಪ್ರೀತಿ-ಆಸಕ್ತಿಯ ಬಗ್ಗೆಯೂ ಹೊರಟ್ಟಿ ಅವರೊಂದಿಗೆ ಹಂಚಿಕೊಂಡರು.

ಈ ಸಂದರ್ಭದಲ್ಲಿ ಖಾಸಗಿ ಸುದ್ದಿ ವಾಹಿನಿಯ ಸುದ್ದಿ ಸಂಪಾದಕ ಅಜಿತ್ ಹನುಮಕ್ಕನವರ್, ಹೊರಟ್ಟಿ ಅವರ ನಾಲ್ಕು ದಶಕಗಳ ರಾಜಕಾರಣದ ಬಗ್ಗೆ, ಅವರ ಹೋರಾಟಗಳ ಬಗ್ಗೆ, ಶಿಕ್ಷಕರ ಪರ ಇರುವ ಅವರ ಕಾಳಜಿ ಕುರಿತು ರಿಷಬ್ ಶೆಟ್ಟಿ ಅವರಿಗೆ ಮಾಹಿತಿ ನೀಡಿದರು.

ಒಂದೇ ಕ್ಷೇತ್ರದಿಂದ ಸತತ ಎಂಟು ಬಾರಿ ಆಯ್ಕೆಯಾಗುವುದು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಹೇಗೆ ಸಾಧ್ಯ ಎಂದು ಅಚ್ಚರಿ ವಕ್ತಪಡಿಸಿದರು.

ಟಿಪ್ಪರ್ ಹಾವಳಿಗೆ ಬೇಸತ್ತ ಸಾರ್ವಜನಿಕರು; ಟಿಪ್ಪರ್ ಸಂಚಾರಕ್ಕೆ ತಡೆವೊಡ್ಡಿ ಪ್ರತಿಭಟನೆ

0

ಬೇರೆ ಮಾರ್ಗದಲ್ಲಿ ಸಂಚಾರಕ್ಕೆ ಒತ್ತಾಯ…….

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ಪ್ರತಿನಿತ್ಯ ಸಂಚರಿಸುವ ಟಿಪ್ಪರ್‌ಗಳ ಹಾವಳಿಯಿಂದ ಬೇಸತ್ತ ಮಹಿಳೆಯರು ಸೋಮವಾರ ಟಿಪ್ಪರ್‌ಗಳನ್ನು ತಡೆದು ಕೆಲಕಾಲ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಚನ್ನಮ್ಮ ಹೋರಿ, ರೇಶ್ಮಾ ನದಾಫ್, ಚನ್ನಪಟ್ಟಣ ರಸ್ತೆ ಮೂಲಕ ಗ್ರಾಮದ ಹೊರವಲಯದಿಂದ ಆಗಮಿಸುವ ನೂರಾರು ಟಿಪ್ಪರ್‌ಗಳು ಓಡಾಡುತ್ತಿರುವದರಿಂದ ಹಗಲು-ರಾತ್ರಿ ಜೀವಭಯದಲ್ಲಿ ಜೀವನವನ್ನು ನಡೆಸುತ್ತಿದ್ದೇವೆ.

ಇದೇ ರಸ್ತೆಯಲ್ಲಿ 3 ಅಂಗನವಾಡಿ ಕೇಂದ್ರಗಳಿದ್ದು, ಇಕ್ಕಟ್ಟಾದ ರಸ್ತೆಯಲ್ಲಿ ವೇಗವಾಗಿ ಸಂಚರಿಸುತ್ತಿರುವ ಟಿಪ್ಪರ್‌ಗಳಿಂದ ತುಂಬಾ ತೊಂದರೆಯಾಗುತ್ತಿದೆ. ಚಿಕ್ಕಮಕ್ಕಳಿಗೆ ಧೂಳಿನಿಂದ ಚರ್ಮದ ಅಲರ್ಜಿ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.

ಆದ್ದರಿಂದ ಈ ರಸ್ತೆಯಲ್ಲಿ ಟಿಪ್ಪರ್ ಸಂಚಾರ ಸ್ಥಗಿತಗೊಳಿಸಿ ಪರ್ಯಾಯ ರಸ್ತೆಯ ಮೂಲಕ ಸಂಚಾರ ಮಾಡಬೇಕೆಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಗ್ರಾ ಪಂ ಪಿಡಿಓ ಲಿಖಿತ ರೂಪದಲ್ಲಿ ಮನವಿ ನೀಡಿದರೆ, ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಇದೀಗ ಪ್ರತಿಭಟನೆಯನ್ನು ಹಿಂಪಡೆಯಬೇಕೆಂದು ಹೇಳಿದರು. ಇದಕ್ಕೆ ಮಹಿಳಾ ಪ್ರತಿಭಟನಾಕಾರರು, ಇದೀಗ ತಡೆದು ನಿಲ್ಲಿಸಿರುವ ಟಿಪ್ಪರ್‌ಗಳನ್ನು ಬಿಡುತ್ತೇವೆ. ತದನಂತರ ಬರುವ ಟಿಪ್ಪರ್‌ಗಳನ್ನು ಬಿಡುವದಿಲ್ಲ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ರಮೇಶ ಕೋಳಿವಾಡ, ಮಲ್ಲಮ್ಮ ಆಲೂರ, ಶರೀಫಮ್ಮ ನದಾಫ್, ಕೃಷ್ಣಮ್ಮ ದಾಸರ, ನೀಲಮ್ಮ ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು.

ಲಕ್ಷ್ಮೇಶ್ವರ ತಾಲೂಕಿನಲ್ಲಿ ಗುಡುಗು-ಸಿಡಿಲಿನ ಮಳೆ; ಸಿಡಿಲಿಗೆ ಹೊತ್ತಿ ಉರಿದ ತೆಂಗಿನಮರ…!

0

ಇಳೆಗೆ ತಂಪೆರೆದ ಮಳೆ: ರೈತರ ಮೊಗದಲ್ಲಿ ಮಂದಹಾಸ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಮುಂಗಾರಿನ ಮುಖ್ಯ ಮಳೆಗಳು ಸಂಪೂರ್ಣ ವಿಫಲವಾಗಿದ್ದರಿಂದ ಚಿಂತೆಗೀಡಾಗಿದ್ದ ರೈತ ಸಮುದಾಯಕ್ಕೆ ಸೋಮವಾರ ಸಂಜೆ ಗುಡುಗು-ಸಿಡಿಲಬ್ಬರದೊಂದಿಗೆ ಸುರಿದ ಹದವಾದ ಮಳೆ ಲಕ್ಷ್ಮೇಶ್ವರ ಸೇರಿ ಸುತ್ತಲಿನ ಗ್ರಾಮಗಳ ರೈತರಲ್ಲಿ ಸಂತಸ ಮೂಡಿಸಿದೆ.

ಗುಡುಗು-ಸಿಡಿಲಿನ ಅಬ್ಬರಕ್ಕೆ ಜನರು ಕೆಲಕಾಲ ಬೆಚ್ಚಿದರು. ಪಟ್ಟಣದ ಕೆಂಚಲಾಪುರ ಓಣಿಯಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರ ಸಂಪೂರ್ಣ ಹೊತ್ತಿ ಉರಿದು ಆತಂಕ ಮೂಡಿಸಿತು. ಒಂದು ಗಂಟೆ ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಬಹಳ ದಿನಗಳ ನಂತರ ಸುರಿದ ಮಳೆಯಿಂದ ಕೊಳಚೆ, ತ್ಯಾಜ್ಯದಿಂದ ಕೂಡಿದ್ದ ಚರಂಡಿ ನೀರು ಅನೇಕ ಕಡೆ ರಸ್ತೆಗೆ ಹರಿದು ಸಂಚಾರಕ್ಕೆ ಅಡಚಣೆಯಾಯಿತು.

ರೋಹಿಣಿ ಮಳೆ ಸಂಪೂರ್ಣ ಕೈಕೊಟ್ಟು, ಮುಂಗಾರಿನ ಬಹುತೇಕ ಬಿತ್ತನೆ ಕುಂಠಿತವಾಗಿದೆ. ಮೃಗಶಿರ ಮಳೆಗಾಗಿ ಗುರ್ಜಿ ಪೂಜೆ, ಬಿಂದಿಗೆ ಪೂಜೆ, ಜಲಾಭಿಷೇಕ, ಕಪ್ಪೆ, ಗೊಂಬೆ ಮದುವೆ ಇನ್ನಿತರ ಧಾರ್ಮಿಕ ಸಂಪ್ರದಾಯಗಳನ್ನು ಮಾಡುತ್ತ ಮುಗಿಲಿನತ್ತ ನೋಡುತ್ತಿದ್ದರು. ಸೋಮವಾರ ಸುರಿದ ಮಳೆ ರೈತ ಸಮುದಾಯಕ್ಕೆ ಖುಷಿ ತಂದಿದೆ.

ಸಂಜೆ 6ಕ್ಕೆ ಪ್ರಾರಂಭವಾದ ಮಳೆ 2 ಗಂಟೆಗಳ ಕಾಲ ಲಕ್ಷ್ಮೇಶ್ವರವೂ ಸೇರಿ ಆದ್ರಳ್ಳಿ, ಬಟ್ಟೂರ, ಬಡ್ನಿ, ಕುಂದ್ರಳ್ಳಿ, ಗೊಜನೂರ, ರಾಮಗೇರಿ, ಶಿಗ್ಲಿ, ಅಕ್ಕಿಗುಂದ, ಅಡರಕಟ್ಟಿ, ಮಂಜಲಾಪುರ ಮತ್ತಿತರರ ಕಡೆ ಹದವಾಗಿ ಸುರಿಯಿತು.

ಒಟ್ಟಿನಲ್ಲಿ ಮಳೆಗಾಗಿ ಮುಗಿಲಿನತ್ತ ಚಿತ್ತ ನೆಟ್ಟಿದ್ದ ಈ ಭಾಗದ ರೈತ ಸಮುದಾಯಕ್ಕೆ ಬಿತ್ತನೆಗೆ ಅನಕೂಲವಾಗುವಂತೆ ಮಳೆಯಾಗಿ ಕೊಂಚ ನೆಮ್ಮದಿಯನ್ನುಂಟು ಮಾಡಿದೆ. ಆದರೆ, ಮುಂಗಾರಿನ ಹೆಸರು, ಶೇಂಗಾ, ಹತ್ತಿ ಸೇರಿ ಪ್ರಮುಖ ಬೆಳೆಗಳ ಬಿತ್ತನೆ ಕಾಲಾವಧಿ ಮೀರಿದ್ದರಿಂದ ಏನನ್ನು ಬಿತ್ತವುದು ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.

ಕೋಮು ರಾಜಕಾರಣಕ್ಕೆ ಬಲಿಯಾಗಿದ್ದ ನರಗುಂದದ ಸಮೀರ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ

0

ಒಟ್ಟು ಆರು ಕುಟುಂಬಗಳಿಗೆ ಪರಿಹಾರ ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ……

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮತೀಯ ದ್ವೇಷದಿಂದ ಹತ್ಯೆಗೀಡಾದ ರಾಜ್ಯದ ಆರು ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು. ಸುಳ್ಯದ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಮಸೂದ್, ಮಂಗಳೂರಿನ ಸುರತ್ಕಲ್ ನ ಮುಹಮ್ಮದ್ ಫಾಝಿಲ್, ಅಬ್ದುಲ್ ಜಲೀಲ್ , ದೀಪಕ್ ರಾವ್ , ಮಂಡ್ಯದ ಇದ್ರೀಸ್ ಪಾಶಾ, ನರಗುಂದದ ಸಮೀರ್ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ವಿತರಿಸಲಾಯಿತು.

ಗದಗ ಜಿಲ್ಲೆಯ ನರಗುಂದ ಪಟ್ಟಣದ ಯುವಕ ಕೋಮು ದ್ವೇಷಕ್ಕೆ ಬಲಿಯಾಗಿದ್ದ ಸಮೀರ್ ಸುಬಾನಸಾಬ ಶಾಹಪೂರ ಕುಟುಂಬದ ಸದಸ್ಯರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 25 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,
ಸರ್ಕಾರ ಸರ್ವರಿಗೂ ಸೇರಿದ್ದು, ಬಿಡಿ ಬಿಡಿಯಾಗಿ ಒಂದು ಜಾತಿ, ಒಂದು ಧರ್ಮದ ಪರವಾಗಿ ವರ್ತಿಸುವುದು ಸಂವಿಧಾನ ವಿರೋಧಿ ಕೃತ್ಯ.
ಬಿಜೆಪಿಯ ದ್ವೇಷ ಮತ್ತು ತಾರತಮ್ಯ ರಾಜಕಾರಣದ ವಿರುದ್ಧ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಸದನದಲ್ಲೇ ಧ್ವನಿ ಎತ್ತಿದ್ದೆ ಎಂದ ಸಿದ್ದರಾಮಯ್ಯ,

ಕೋಮುಗಲಭೆಗಳಿಗೆ ಬಲಿಯಾದ ಮೃತರ ಹೆಸರಲ್ಲೂ ಬಿಜೆಪಿ ತಾರತಮ್ಯ ನೀತಿಯನ್ನು ಅನುಸರಿಸಿತ್ತು. ಮೃತರ ಕುಟುಂಬದವರ ಕಣ್ಣೀರು ಒರೆಸುವುದು ಮತ್ತು ಪರಿಹಾರ ವಿತರಣೆಯಲ್ಲೂ ಸರ್ಕಾರ ತಾರತಮ್ಯವನ್ನು ಮೆರೆದಿತ್ತು. ಹಿಂದಿನ ಸರ್ಕಾರ ಮಾಡಿದ್ದ ತಾರತಮ್ಯವನ್ನು ನಾವು ಈಗ ಸರಿಪಡಿಸಿದ್ದೇವೆ ಎಂದರು.

ನಮ್ಮ ಅವಧಿಯಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಮತಾಂಧರಿಗೆ, ಅನೈತಿಕ ಪೊಲೀಸ್ ಗಿರಿಗೆ, ಜಾತಿ-ಧರ್ಮದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ. ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಈಗಾಗಲೇ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ನರಗುಂದ ಮಾಜಿ ಶಾಸಕ ಬಿ.ಆರ್ ಯಾವಗಲ್, ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಕಾರ್ಯದರ್ಶಿ ವಿವೇಕ್ ಯಾವಗಲ್, ನ್ಯಾಯವಾದಿ ಎಮ್.ಎ ಮೌಲ್ವಿ, ಹಾಗೂ ಕುಟುಂಬ ವರ್ಗದವರು ಇದ್ದರು.

ಜೀವನದಲ್ಲಿ ಜಿಗುಪ್ಸೆ; ಸರಕಾರಿ ‌ನೌಕರ ಬಾವಿಗೆ ಹಾರಿ ಆತ್ಮಹತ್ಯೆ

ವಿಜಯಸಾಕ್ಷಿ ಸುದ್ದಿ, ರೋಣ

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.

ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ಆರೋಗ್ಯ ನಿರೀಕ್ಷಾಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕುಮಾರಸ್ವಾಮಿ ಚಿದಾನಂದಯ್ಯ ಬರದೂರಮಠ (45) ಎಂಬುವವರೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು.

ಮೂಲತಃ ಗದಗ ತಾಲೂಕಿನ ಹುಯಿಲಗೋಳ ಗ್ರಾಮದವರಾದ ಕುಮಾರಸ್ವಾಮಿ, ರೋಣ ಪಟ್ಟಣದಲ್ಲಿ ವಾಸವಾಗಿದ್ದರು. ನಿತ್ಯವೂ ನಿಡಗುಂದಿ ಗ್ರಾಮಕ್ಕೆ ಕೆಲಸಕ್ಕೆ ಹೋಗಿ ಬರುತ್ತಿದ್ದ ಕುಮಾರಸ್ವಾಮಿ, ಮೊನ್ನೆ ಜೂ.16ರಂದು ಗದಗನಲ್ಲಿ ಮೀಟಿಂಗ್ ಇದೆ ಎಂದು ಹೋದವರು ಮರಳಿ ಮನೆಗೆ ಬಂದಿರಲಿಲ್ಲ. ಫೋನ್ ಮಾಡಿದರೂ ಮೊಬೈಲ್ ಸ್ವಿಚ್ಆಪ್ ಆಗಿತ್ತು.

ಹೀಗಾಗಿ ಕುಮಾರಸ್ವಾಮಿ ಪತ್ನಿ ಶಶಿಕಲಾ ಅವರು, ರೋಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ನಿನ್ನೆ ಮತ್ತೆ ಕುಮಾರಸ್ವಾಮಿ ಅವರನ್ನು ಹುಡುಕಾಡಲು ಅವರ ಜೊತೆಗೆ ಕೆಲಸ ಮಾಡುತ್ತಿದ್ದ ಆನಂದ ಜವಾರಿ ಹಾಗೂ ಇತರರು ಅವರ ಜಮೀನಿನ ಬಾವಿಯ ಬಳಿ ನೋಡಿದಾಗ ಚಪ್ಪಲಿ ಇದ್ದದ್ದು ಕಂಡು, ಬಾವಿಯೊಳಗೆ ಇಣಕಿದಾಗ ಕುಮಾರಸ್ವಾಮಿ ಅವರ ಶವ ತೇಲುತ್ತಿತ್ತು ಎನ್ನಲಾಗಿದೆ. ತಕ್ಷಣವೇ ಅವರ ಮನೆಯವರಿಗೆ ತಿಳಿಸಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ನಂತರ ಶವ ಹೊರತೆಗೆದು ಶವಗಾರಕ್ಕೆ ಸಾಗಾಟ ಮಾಡಲಾಗಿದೆ.

ಕುಮಾರಸ್ವಾಮಿ ಅವರು ಪಾರ್ಶ್ವವಾಯುನಿಂದ ಬಳಲುತ್ತಿದ್ದರು ಎಂದು ಅವರ ಪತ್ನಿ ಶಶಿಕಲಾ ಅವರು ಪೊಲೀಸರಿಗೆ ತಿಳಿಸಿದ್ದು, ಪ್ರಕರಣ ದಾಖಲಾಗಿದೆ.

ಪ್ರವಾಸೋದ್ಯಮ ಸಚಿವರ ಬರುವಿಕೆಗಾಗಿ ಕಾಯುತ್ತಿರುವ ಶೆಟ್ಟಿಕೆರೆ….!

0

ಸಸ್ಯಕಾಶಿ-ಪಕ್ಷಿಧಾಮ, ವನ್ಯಜೀವಿಗಳ ತಾಣ ನಯನಮನೋಹರ ಶೆಟ್ಟಿಕೆರೆ…….

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಗದಗ ಜಿಲ್ಲೆಯ ಅತ್ಯಂತ ಪ್ರಭಾವಿ ಮತ್ತು ಜಿಲ್ಲೆಯ ಅಭಿವೃದ್ಧಿ ಕನಸು ಹೊತ್ತಿರುವ ಹೆಚ್.ಕೆ ಪಾಟೀಲರು ಪ್ರವಾಸೋಧ್ಯಮ ಸಚಿವ ಸ್ಥಾನದ ಜತೆಗೆ ಅರಣ್ಯ, ವಸತಿ ಮತ್ತು ವಿಹಾರಧಾಮಗಳ ನಿಗಮ, ಕರ್ನಾಟಕ ರಾಜ್ಯ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವುದು ಜಿಲ್ಲೆಯ ಜನರಲ್ಲಿ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಅಲ್ಲದೇ ಸೋಮವಾರ ಸಚಿವರೊಂದಿಗೆ ಹಿರಿಯ ಐಎಎಸ್ ಅಧಿಕಾರಿ ಮನೋಜ ಕುಮಾರ ಅವರು ಜಿಲ್ಲೆಯ ವಿವಿಧ ಪ್ರವಾಸಿ, ಪ್ರೇಕ್ಷಣೀಯ ತಾಣಗಳಿಗೆ ಬೇಟಿ ನೀಡಿ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಕೈಗೊಳ್ಳಲಿದ್ದಾರೆ.

ಮಾಗಡಿ ಪಕ್ಷಿಧಾಮಕ್ಕೆ ಬೇಟಿ ನೀಡಿದ ವೇಳೆ ಶೆಟ್ಟಿಕೆರೆ ಪಕ್ಷಿಧಾಮಕ್ಕೂ ಬೇಟಿ ನೀಡಿ ಈ ಕ್ಷೇತ್ರದ ಅಭಿವೃದ್ಧಿಗೂ ಮುಂದಾಗಬೇಕು. ಎಂಬುದು ಗ್ರಾಪಂ ಅಧ್ಯಕ್ಷ ಜಗದೀಶಗೌಡ ಪಾಟೀಲ, ಮಂಜುನಾಥ ಗೌರಿ, ದೀಪಕ ಲಮಾಣಿ, ಹನಮಂತಪ್ಪ ಹರಿಜನ, ಶಿವಾನಂದ ಬನ್ನಿಮಟ್ಟಿ ಆಗ್ರಹಿಸಿದ್ದಾರೆ.

2 ವರ್ಷಗಳ ಹಿಂದೆ ಬಿಜೆಪಿ ಸರಕಾರದಲ್ಲಿ ಅರಣ್ಯ ಸಚಿವರಾಗಿದ್ದ ಅರವಿಂದ ಲಿಂಬಾವಳಿ ಅವರು ಇಲ್ಲಿಗೆ ಬೇಟಿ ನೀಡಿದ ವೇಳೆ ಅಭಿವೃದ್ಧಿಗೆ ಭರವಸೆ ನೀಡಿದ್ದರು.
ಶೆಟ್ಟಿಕೇರಿ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರ ಗ್ರಾಮ ಪಂಚಾಯತಿಯ ಶೆಟ್ಟಿಕೆರೆ ಸಸ್ಯ, ಪ್ರಾಣಿ, ಜಲ, ಖನಿಜ ಸಂಪತ್ತಿನ ಸುಂದರ ಪರಿಸರದ ಮಲೆನಾಡಿನ ಭಾವನೆ ಮೂಡಿಸುತ್ತದೆ.

ಸೌರಾಷ್ಟ್ರದಿಂದ ಪುಲಿಗೆರೆ(ಲಕ್ಷ್ಮೇಶ್ವರ)ಗೆ ಶ್ರೀ ಸೋಮೇಶ್ವರನನ್ನು ತಂದು ಪ್ರತಿಷ್ಠಾಪಿಸಿದ ಶಿವಶರಣ ಆದಯ್ಯನೇ ಶೆಟ್ಟಿಕೇರಿ ಕೆರೆಯನ್ನು ಕಟ್ಟಿಸಿದ್ದಾನೆ ಎಂಬುದು ಪ್ರತೀತಿ.

ಕೈಬೀಸಿ ಕರೆಯುವ ಸಸ್ಯಕಾಶಿ

ಲಕ್ಷ್ಮೇಶ್ವರದಿಂದ 10ಕಿ.ಮೀ ದೂರದ ಶೆಟ್ಟಿಕೇರಿ 224 ಎಕರೆ ವಿಶಾಲವಾಗಿದ್ದು ವ್ಯಾಪ್ತಿಯಲ್ಲಿ 500 ಎಕರೆ ಅರಣ್ಯ ಪ್ರದೇಶವಿದೆ. ಹೊಂದಿಕೊಂಡು 40 ಎಕರೆಯಲ್ಲಿ ಅರಣ್ಯ ಇಲಾಖೆಯ ಸಸ್ಯಪಾಲನಾ ಕೇಂದ್ರ ವಿವಿಧ ಸಸ್ಯಗಳಿಂದ ಸದಾ ಹಸಿರಾಗಿದ್ದು ಪರಿಸರ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತದೆ.

ಶೆಟ್ಟಿಕೆರೆಯಲ್ಲಿ ವಿದೇಶಿ ಪಕ್ಷಿಗಳ ಕಲರವ

ಉತ್ತರ ಕರ್ಣಾಟಕದ ರಂಗನತಿಟ್ಟು ಎನ್ನುವ ಸಮೀಪದ ಮಾಗಡಿ ಕೆರೆಗೆ ಚಳಿಗಾಲದಲ್ಲಿ ಹಾರಿ ಬರುವ ವಿದೇಶಿ ಪಕ್ಷಿಗಳು ಸಮೀಪದ ಶೆಟ್ಟಿಕೆರಿಯಲ್ಲೂ ಬಿಡಾರ ಹೂಡುತ್ತವೆ. ಮಾಗಡಿ ಕೆರೆಗಿಂತಲೂ ಶೆಟ್ಟಿಕೆರೆ ಎರಡು ಪಟ್ಟು ಅಂದರೆ 224 ಎಕರೆ ವಿಸ್ತಾರವಾಗಿದೆ. ಗುಡ್ಡಗಳ ನಡುವೆ ಇರುವ ವಿಶಾಲವಾದ ಕೆರೆಯ ಸುತ್ತಲೂ ಅರಣ್ಯ, ಪ್ರಶಾಂತ ವಾತಾವರಣದಿಂದ ವಿದೇಶಿ ಹಕ್ಕಿಗಳ ವಾಸ್ತವ್ಯ, ಸಂತಾನೋತ್ಪತ್ತಿ, ಕಲರವಕ್ಕೆ ನೈಸರ್ಗಿಕವಾಗಿ ರೂಪಿತವಾದ ಪ್ರದೇಶವಾಗಿದೆ. ಪ್ರತಿವರ್ಷ ಇಲ್ಲಿಗೆ ಮಂಗೋಲಿಯಾ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಬರ್ಮಾ, ಭೂತಾನ್ ಮತ್ತು ಜಮ್ಮು-ಕಾಶ್ಮೀರದ ಲಡಾಕ್‌ನಿಂದ ಸುಮಾರು 16 ಜಾತಿಯ ಸಾವಿರಾರು ವಿದೇಶಿ ಪಕ್ಷಿಗಳು ಬಿಡಾರ ಹೂಡುತ್ತವೆ. ಶೆಟ್ಟಿಕೆರೆಯಲ್ಲಿನ ಪಕ್ಷಿಗಳ ಚಲ್ಲಾಟ, ನೀರಿನಲ್ಲಿ ಬಣ್ಣಗಳ ರಂಗೋಲಿ ಚಿತ್ತಾರ, ಬಾನಿನಲ್ಲಿ ರಾಕೆಟ್, ಕ್ಷಿಪಣಿಗಳ ರೀತಿಯ ಹಾರಾಟದ ವಿಸ್ಮಯದ ದೃಶ್ಯ, ನೀರಿನಿಂದ ಮೇಲೆ ಹಾರುವ, ಕೆಳಗಿಳಿಯುವ, ತೇಲುವ ಪಕ್ಷಿಗಳ ಲೋಕದ ನಯನ ಮನೋಹರ ದೃಶ್ಯ ಕಣ್ತುಂಬಿಕೊಳ್ಳಲು ಜನ ಬರುತ್ತಾರೆ.

ವನ್ಯ ಪ್ರಾಣಿಗಳ ಆಶ್ರಯ ತಾಣ

ಶೆಟ್ಟಿಕೇರಿಯಲ್ಲಿ ಮೀನುಗಾರಿಕೆಯೂ ನಡೆಯುತ್ತದೆ ಮತ್ತು ಕೆರೆಯಲ್ಲಿ ಅಪರೂಪದ ಮೃದು ಚರ್ಮದ ನೀರು ನಾಯಿಗಳೂ ವಾಸಿಸುತ್ತಿವೆ. ಇಲ್ಲಿನ 500 ಎಕರೆ ವಿಸ್ತಾರದ ಅರಣ್ಯ ಪ್ರದೇಶದಲ್ಲಿ ಪುನುಗು ಬೆಕ್ಕು, ಕತ್ತೆ ಕಿರುಬ, ಜಿಂಕೆ, ನಕ್ಷತ್ರ ಆಮೆ, ಉಡಾ, ಹೆಬ್ಬಾವು, ನರಿ, ತೋಳ, ನವಿಲು, ಕಾಡು ಕುರಿ ಸೇರಿ ಅನೇಕ ಪ್ರಾಣಿ ಪಕ್ಷಿಗಳಿಗೆ ಆಶ್ರಯ ಕಲ್ಪಿಸಿದೆ.

ಶೆಟ್ಟಿಕೆರೆಗೆ ಮಾರ್ಗ

ಲಕ್ಷ್ಮೇಶ್ವರದಿಂದ ಬಟ್ಟೂರ ಮಾರ್ಗವಾಗಿ ಶೆಟ್ಟಿಕೆರೆ 10 ಕಿ.ಮೀ ಅಂತರದಲ್ಲಿದೆ. ಶಿರಹಟ್ಟಿಯಿಂದ 8.ಕಿ.ಮೀ ಅಂತರದಲ್ಲಿದೆ. ಸುತ್ತಲೂ ಅರಣ್ಯ, ಗುಡ್ಡದ ಪ್ರದೇಶ ಪ್ರಶಾಂತ ವಾತಾವರಣವಿದೆ. ಪಕ್ಷಿ ಪ್ರೇಮಿಗಳು, ಶಾಲಾ ಮಕ್ಕಳು, ನೌಕರ ವರ್ಗದವರು ಒಂದು ದಿನದ ಬಿಡುವಿನ ವೇಳೆಯಲ್ಲಿ ಶೆಟ್ಟಿಕೇರಿಯಲ್ಲಿ ಪಕ್ಷಿ ವೀಕ್ಷಣೆ ಮಾಡಬಹುದು.

ಹತ್ತಿರದಲ್ಲಿಯೇ ಹೊಳಲಮ್ಮನಗುಡ್ಡ, ಅರಣ್ಯ ಇಲಾಖೆಯ ನರ್ಸರಿ, ಶಿರಹಟ್ಟಿ ಫಕ್ಕೀರೇಶ್ವರಮಠ, ವರವಿ ಮೌನೇಶ್ವರ, ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ, ಮುಕ್ತಿಮಂದಿರ ಧರ್ಮಕ್ಷೇತ್ರದ ದರ್ಶನ ಪಡೆಯಬಹುದು.

ಸಚಿವರೇ ಶೆಟ್ಟಿಕೆರೆಗೊಮ್ಮೆ ಭೇಟಿ ಕೊಡಿ

ಅರಣ್ಯ ಸಂಪತ್ತು ವೀಕ್ಷಿಸಲು ವಾಚಿಂಗ್ ಟಾವರ್, ಬೈನಾಕೂಲರ್, ಕಾವಲು ಸಿಬ್ಬಂದಿ ಇತರೇ ಅವಶ್ಯಕ ಸೌಲತ್ತುಗಳನ್ನು ಕಲ್ಪಿಸಬೇಕು. ಸುತ್ತಲೂ ಗುಡ್ಡ, ಅರಣ್ಯ, ಕೆರೆ, ನರ್ಸರಿಯನ್ನೊಳಗೊಂಡ ನಯನಮನೋಹರ ಪ್ರದೇಶವಿದಾಗಿದೆ.

ಸಣ್ಣ ನೀರಾವರಿ ಇಲಾಖೆಗೆ ಸೇರಿದ ಈ ಕೆರೆಗೆ ನದಿ ನೀರು ಹರಿಸುವ ಯೋಜನೆ ಪ್ರಗತಿ ಹಂತದಲ್ಲಿದೆ. ಕೆರೆಯಲ್ಲಿನ ಹೂಳು, ಕಸ, ಗಿಡ ಗಂಟೆಗಳಿಂದ ಕೂಡಿರುವ ಕೆರೆಯ ಅಭಿವೃದ್ಧಿಗೆ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರದ ಗಮನ ಸೆಳೆದು ಬೋಟಿಂಗ್ ವ್ಯವಸ್ಥೆ, ಪಿಕನಿಕ್ ಸ್ಪಾಟ್ ಮಾಡಬಹುದಾಗಿದೆ ಎಂಬುದು ಪ್ರಜ್ಞಾವಂತರ ಒತ್ತಾಸೆಯಾಗಿದೆ.

ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳಿಗೆ ಐದು ವರ್ಷ ಕಠಿಣ ಶಿಕ್ಷೆ, 50ಸಾವಿರ ದಂಡ

ಎಂಟು ವರ್ಷಗಳ ಹಿಂದೆ ಸಿಕ್ಕಿಬಿದ್ದಿದ್ದ ಆರೋಪಿಗಳು…..

ವಿಜಯಸಾಕ್ಷಿ ಸುದ್ದಿ, ಗದಗ

ಸಾರ್ವಜನಿಕರಿಗೆ ಮಾರಾಟ ಮಾಡಲು ಗಾಂಜಾ ಸಂಗ್ರಹಿಸಿದ್ದ ಇಬ್ಬರು ಆರೋಪಿಗಳಿಗೆ ಐದು ವರ್ಷಗಳ ಕಾಲ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ‌ ಆದೇಶ ಹೊರಡಿಸಿದೆ.

ಬೆಟಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಎಸ್.ಎಂ. ಕೃಷ್ಣ ನಗರಕ್ಕೆ ಹೋಗುವ ರಸ್ತೆ ಬಳಿಯ ಸೇತುವೆ ಕಟ್ಟೆಯ ಮೇಲೆ 27.2.2015ರ ಸಂಜೆ 4.30ರ ಹೊತ್ತಿಗೆ ಅಕ್ರಮವಾಗಿ 2ಕೆಜಿಯಷ್ಟು ಗಾಂಜಾವನ್ನು ತಮ್ಮ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಲ್ಲಿದ್ದಾಗ ಆರೋಪಿಗಳಾದ ರಮೇಶ ರತ್ನಪ್ಪ ಕಾಳೆ ಹಾಗೂ ರತ್ನಪ್ಪ ಮೋನಪ್ಪ ಕಾಳೆ ಸಿಕ್ಕಿಬಿದ್ದಿದ್ದು, ಆರೋಪಿತರ ವಿರುದ್ಧ ಗದಗ ಉಪವಿಭಾಗದ ಅಬಕಾರಿ ನಿರೀಕ್ಷಕ ಮಲ್ಲಿಕಾರ್ಜುನ ರೆಡ್ಡಿ ತನಿಖೆ ಪೂರೈಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಸಾಕ್ಷಿ ವಿಚಾರಣೆ ನಡೆಸಿದ ಗದುಗಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಶ್ವರ ಎಸ್ ಶೆಟ್ಟಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತರಿಬ್ಬರಿಗೂ ಜೂ.13 ರಂದು ಎನ್‌ಡಿಪಿಎಸ್ ಕಾಯ್ದೆಯ ಕಲಂ 8(ಸಿ), 20(ಬಿ)(2)(ಬಿ) ಅಡಿಯಲ್ಲಿ 5 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸದರಿ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನ ಬಸವಗೌಡ ದೊಡ್ಡಗೌಡ್ರ ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

ಬ್ಯಾಂಕ್ ಅಕೌಂಟ್ ಬ್ಲಾಕ್ ಆಗಿದೆ ಎಂದು ಕೆವೈಸಿ ಅಪ್‌ಡೇಟ್‌ ಮಾಡುವ ನೆಪದಲ್ಲಿ ನಿವೃತ್ತ ನೌಕರನಿಗೆ ಲಕ್ಷಾಂತರ ರೂ. ದೋಖಾ

0

ಗದಗ-ಬೆಟಗೇರಿಯ ರಾಜೀವಗಾಂಧಿ ನಗರದ ನಿವಾಸಿ ಮೋಸ……

ವಿಜಯಸಾಕ್ಷಿ ಸುದ್ದಿ, ಗದಗ

ಬ್ಯಾಂಕ್‌ ಅಕೌಂಟ್ ಬ್ಲಾಕ್‌ ಆಗಿದೆಯೆಂದು ಹೇಳಿ, ಕೆವೈಸಿ ಅಪ್ಡೇಟ್‌ ಮಾಡುವ ನೆಪದಲ್ಲಿ ಬ್ಯಾಂಕ್‌‌ ಖಾತೆಯ ಮಾಹಿತಿಗಳನ್ನು ಪಡೆದು, ಖಾತೆಯಿಂದ ಲಕ್ಷಾಂತರ ರೂ. ಹಣವನ್ನು ವರ್ಗಾವಣೆ ಮಾಡಿಕೊಂಡು ಮೋಸವೆಸಗಿದ ಅಪರಾಧದ ಬಗ್ಗೆ ಗದಗ ಸಿಇಎನ್‌ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.

ಮೇ.9ರಂದು ಸಂಜೆ 4 ಗಂಟೆಯ ಸುಮಾರಿಗೆ ದೂರುದಾರ ರಾಜೀವಗಾಂಧಿ ನಗರದ ನಿವೃತ್ತ ನೌಕರ ಇಮಾಮಸಾಬ್‌ ಫಕ್ರುಸಾಬ್‌ ದೊಡ್ಡಮನಿ ಎಂಬುವರಿಗೆ ಯಾರೋ ಅಪರಿಚಿತರು ಮೆಸೇಜ್‌ ಕಳುಹಿಸಿದ್ದರು.

ಅದರಲ್ಲಿ, ನಿಮ್ಮ ಅಕೌಂಟ್‌ ಬ್ಲಾಕ್‌ ಆಗಿದ್ದು, ಕೆವೈಸಿ ಅಪ್‌ಡೇಟ್‌ ಮಾಡಬೇಕಿದೆ ಎಂದು ಅವರ ಡೆಬಿಟ್‌ ಕಾರ್ಡ್‌ ನಂಬರ್‌ ಹಾಗೂ ಒಟಿಪಿ ನಂಬರ್‌ ಪಡೆದುಕೊಂಡಿದ್ದರು.

ನಂತರ, ದೂರುದಾರರ ಕೆನರಾ ಬ್ಯಾಂಕ್‌ ಖಾತೆಯಿಂದ ಹಂತಹಂತವಾಗಿ ಒಟ್ಟೂ 1,27,600 ರೂ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ.

ಈ ಕುರಿತು ಅಪರಾಧ 0041/2023, ಐಟಿ ಕಾಯ್ದೆ 2008ರ ಕಲಂ 66ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಲಗಾಮಿಲ್ಲದೇ ಸಾಗುತ್ತಿರುವ ಅಕ್ರಮ ಮರಳುಗಾರಿಕೆ, ಚಿವುಟಿದಷ್ಟೂ ಚಿಗುರುತ್ತಿರುವ ದಂಧೆ; ನಲುಗಿದ ತುಂಗಭದ್ರೆಯ ಒಡಲು…..!

0

ವಿಜಯಸಾಕ್ಷಿ ಸುದ್ದಿ, ಗದಗ

ಆ ಸ್ಥಳಗಳಲ್ಲಿ ಹಗಲು-ರಾತ್ರಿಯೆನ್ನದೆ ಜೆಸಿಬಿ ಯಂತ್ರಗಳ ಭೋರ್ಗರೆತದ ಸದ್ದು ನಿರಂತರ ಕೇಳುತ್ತಲೇ ಇದೆ. ಭೂಮಿಯ ಒಡಲನ್ನು ಎಷ್ಟೇ ಬಗೆದರೂ ಅವರಿಗೆ ಸಂತೃಪ್ತಿಯೆಂಬುದಿಲ್ಲ. ಆಡಳಿತದ ನಿಯಮಗಳು, ಎಚ್ಚರಿಕೆಗಳ ಹಂಗೂ ಇವರಿಗಿಲ್ಲ.

ಏನೇ ಆದರೂ, ತಮ್ಮ ಧನದಾಹ ತೀರಿಸಿಕೊಳ್ಳಬೇಕೆಂಬುದಷ್ಟೇ ಈ ದುರಾಸೆಯ ಮನುಷ್ಯರ ಅಂತಿಮ ಗುರಿ. ಇದರ ಫಲವಾಗಿ, ಸಮೃದ್ಧವಾಗಿದ್ದ ತುಂಗಭದ್ರೆ ದಿನದಿಂದ ದಿನಕ್ಕೆ ಸೊರಗುತ್ತಲೇ ಇದೆ ಮತ್ತು, ಆ ಆರ್ತನಾದ ಯಾರಿಗೂ ಕೇಳಿಸುತ್ತಿಲ್ಲ.

ಸರ್ಕಾರದ ಆದೇಶಗಳನ್ನೂ ಧಿಕ್ಕರಿಸಿ, ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವುದರಿಂದ ತುಂಗಭದ್ರೆಯ ಚಿತ್ರಣವೇ ಬದಲಾಗುತ್ತಿದೆ. ಜೆಸಿಬಿ ಯಂತ್ರಗಳ ಮೂಲಕ ತುಂಗಭದ್ರೆಯನ್ನು ವಿರೂಪಗೊಳಿಸಿ, ಇಕ್ಕೆಲದ ಜಮೀನುಗಳಲ್ಲಿ ಅಕ್ರಮವಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಮರಳು ಸಂಗ್ರಹಿಸಲಾಗುತ್ತಿದೆ.

ಜಿಲ್ಲಾಡಳಿತ, ಗಣಿ, ಪೊಲೀಸ್, ಕಂದಾಯ ಇಲಾಖೆ ಎಷ್ಟೇ ಕ್ರಮಗಳನ್ನು ಕೈಗೊಂಡರೂ ಈ ಅಕ್ರಮ, ಅನಧಿಕೃತ ಮರಳುಗಾರಿಕೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಈ ಎಲ್ಲಾ ದೃಶ್ಯಗಳು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತುಂಗಭದ್ರಾ ನದಿ ಪಾತ್ರದಲ್ಲಿ ಕಂಡುಬರುತ್ತಿದೆ.

ಮುಂಡರಗಿ ತಾಲೂಕಿನ ಕಕ್ಕೂರ, ಸಿಂಗಟಾಲೂರು, ಕೊರ್ಲಹಳ್ಳಿ, ಶೀರನಹಳ್ಳಿ, ಗಂಗಾಪುರ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ದಂಧೆ ನಿರಂತರವಾಗಿ ಸಾಗಿದೆ. ಸಕ್ರಮದ ದಾರಿ ಒಂದೇ ಆಗಿದ್ದರೆ, ಅಕ್ರಮದ ದಾರಿ ನೂರಾರು.

ಮುಂಗಾರು ಆರಂಭವಾಗಿರುವುದರಿಂದ ಜೂನ್ ೫ರಿಂದ ನದಿಯಲ್ಲಿ ಮರಳು ತೆಗೆಯದಂತೆ ಗಣಿ ಇಲಾಖೆ ಸ್ಪಷ್ಟ ಕಾನೂನು ರಚಿಸಿದೆ. ಆದರೆ, ಗಣಿ ಇಲಾಖೆಯ ಯಾವ ನಿಯಮಗಳಿಗೂ ಇಲ್ಲಿ ಕವಡೆ ಕಾಸಿನ ಬೆಲೆಯಿಲ್ಲ. ಆಡಳಿತದ ಅಧಿಕಾರಿಗಳು ಈ ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾದಷ್ಟೂ ದಂಧೆಕೋರರು ರಂಗೋಲಿಯ ಕೆಳಗೂ ನುಸುಳುವಷ್ಟು ಹೆಚ್ಚಿದ್ದಾರೆ.

ಗದಗ ಜಿಲ್ಲೆಯಲ್ಲಿ ನಡೆಯುವ ಅಕ್ರಮ ಮರಳುಗಾರಿಕೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜೂನ್ ೧೨ರಂದು ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಅಕ್ರಮ ಮರಳುಗಾರಿಕೆಗೆ ಲಗಾಮು ಹಾಕಿದ್ದರು. ನಂತರದ ದಿನಗಳಲ್ಲಿ ಮತ್ತೆ ಮೊದಲಿನಂತೆಯೇ ಯಾರ ಗಮನಕ್ಕೂ ಬಾರದಂತೆ ಮರಳು ಲೂಟಿ ಮುಂದುವರೆದಿದೆ.


ಹೀಗೆ ಅಕ್ರಮ ಮರಳುಗಾರಿಕೆಯಿಂದ ನದಿಯ ಚಿತ್ರಣ ಬದಲಾಗುತ್ತಿದ್ದು, ಸರ್ಕಾರಕ್ಕೆ ಸೇರಬೇಕಿದ್ದ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ಯಾರದೋ ಖಾತೆ ಸೇರುತ್ತಿದೆ. ಕಾನೂನು ಆಟಕ್ಕಿದ್ದರೂ ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ನದಿ ಪಾತ್ರದಲ್ಲಿ ಹಾಗೂ ಅಕ್ಕಪಕ್ಕದ ಖಾಸಗಿ ಜಮೀನುಗಳಲ್ಲಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ಅಕ್ರಮ ಮರಳು ಸಂಗ್ರಹವನ್ನು ವಶಕ್ಕೆ ಪಡೆದು, ದಂಧೆಕೋರರ ಅಟಾಟೋಪಗಳಿಗೆ ಬ್ರೇಕ್ ಹಾಕಬೇಕಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಕಳೆದ ಬೇಸಿಗೆಯಲ್ಲಿ ಅಕ್ರಮ ಮರಳುಗಾರಿಕೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ, ಈ ಅಕ್ರಮವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದೆವು. ಮರಳು ಸಾಗಾಟಕ್ಕೆ ಬಳಸಿದ ಹಲವು ವಾಹನಗಳನ್ನು ವಶಕ್ಕೆ ಪಡೆದು ಗರಿಷ್ಠ ದಂಡ ವಿಧಿಸಿದ್ದರಿಂದ ನಿಯಂತ್ರಣಕ್ಕೆ ಬಂದಿತ್ತು. ಇದೀಗ ಮತ್ತೆ ಖಾಸಗಿ ಜಾಗಗಳಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ದೂರುಗಳು ಬರತೊಡಗಿವೆ. ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಗಣಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ರಾತ್ರಿ ಸಮಯದಲ್ಲೇ ಈ ಚಟುವಟಿಕೆ ಹೆಚ್ಚಾಗಿ ನಡೆಯುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

-ವೈಶಾಲಿ ಎಂ ಎಲ್. ಜಿಲ್ಲಾಧಿಕಾರಿಗಳು, ಗದಗ


ಚುನಾವಣೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಕಾರ್ಯಾಚರಣೆ ನಡೆಸಿ, ಅಕ್ರಮ ನಡೆಯುತ್ತಿರುವ ಸ್ಥಳಕ್ಕೆ ದಾಳಿ ಮಾಡಿ ಹಲವು ವಾಹನಗಳನ್ನು ವಶಕ್ಕೆ ಪಡೆದಿದ್ದೆವು. ಆ ಸಮಯದಲ್ಲಿ ನಿಯಂತ್ರಣಕ್ಕೆ ಬಂದಿದ್ದ ಈ ಅಕ್ರಮ ದಂಧೆ ಇದೀಗ ಮತ್ತೆ ಪ್ರಾರಂಭವಾದ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ತಿಳಿದುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಇಲಾಖೆಯ ಅಧಿಕಾರಿ/ಸಿಬ್ಬಂದಿಗಳೂ ಶಾಮೀಲಾಗಿದ್ದಾರೆ ಎಂಬ ಆರೋಪಗಳಿವೆ. ಅದು ಸತ್ಯವೇ ಆಗಿದ್ದರೆ, ಅಂಥವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ.

-ಬಿ ಎಸ್ ನೇಮಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು.
    error: Content is protected !!