Home Blog Page 3284

ಗದಗ ಜಿಲ್ಲೆಯಲ್ಲಿ ಮತ್ತೆ ಕಂತೆ ಕಂತೆ ಹಣ ಸೀಜ್

ವಿಜಯಸಾಕ್ಷಿ ಸುದ್ದಿ, ಗದಗ/ಲಕ್ಷ್ಮೇಶ್ವರ

ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 1 ಲಕ್ಷ 90 ಸಾವಿರ ರೂ. ಹಣ ಜಪ್ತಿ ಮಾಡಲಾಗಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿ ಚೆಕ್ ಪೋಸ್ಟ್ ನಲ್ಲಿ ಈ ಹಣ ಸಿಕ್ಕಿದೆ. ಇನ್ನೋವಾ ಕಾರ್ ನಲ್ಲಿ ಸಾಗಾಟ ಮಾಡುವಾಗ ರಾಮಗಿರಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಪಾಸಣೆ ವೇಳೆ ಈ ಹಣ ಸಿಕ್ಕಿದೆ.

ಆಂದ್ರಪ್ರದೇಶದ ಅನಂತಪೂರ ದಿಂದ ಧಾರವಾಡ ಜಿಲ್ಲೆಯ ಗುಡಗೇರಿಗೆ ಇನ್ನೋವಾ ಕಾರಿನಲ್ಲಿ ಈ ಹಣ ಸಾಗಾಟ ಮಾಡಲಾಗುತ್ತಿತ್ತು.

ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಹೆದ್ದಾರಿ ಕಾಮಗಾರಿ ಸರ್ವೆ ನಡೆಸುತ್ತಿದ್ದ ಸರ್ವೇಯರ್‌ ಮೇಲೆ ಹಲ್ಲೆ: ಪ್ರಕರಣ ದಾಖಲು

ವಿಜಯಸಾಕ್ಷಿ ಸುದ್ದಿ, ಗದಗ

ಹೆದ್ದಾರಿ ಕಾಮಗಾರಿಯ ಸರ್ವೆ ಕೆಲಸ ಮಾಡುತ್ತಿದ್ದ ಸರ್ವೇಯರ್ ಮೇಲೆ ಹಲ್ಲೆ ನಡೆಸಿ, ಧಮಕಿ ಹಾಕಿ ಅವರ ವಾಹನವನ್ನು ಸುಟ್ಟು ಹಾಕುತ್ತೇನೆಂದು ಅವಾಚ್ಯ ಶಬ್ಧಗಳಿಂದ ವ್ಯಕ್ತಿಯೊಬ್ಬರು ನಿಂದಿಸಿರುವ ಬಗ್ಗೆ ಗದಗ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಯ ವಿವರ

ಪಶ್ಚಿಮ ಬಂಗಾಳದ ಮೆಹರಬನ್‌ಪುರದ, ಹಾಲಿ ಶಿರಹಟ್ಟಿಯ ಹೊಳೆ ಇಟಗಿಯಲ್ಲಿ ವಾಸವಿರುವ ಖಾಸಗಿ ಕಂಪನಿಯೊಂದರ ಸರ್ವೇಯರ್‌ ಸಿದ್ಧಾಂತ್‌ ದೇಯ್‌ ಎಂಬುವರು ಮಾರ್ಚ್‌.13ರಂದು ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಬೆಳದಡಿ ಗ್ರಾಮದ ಬಳಿ ರಾಜ್ಯ ಹೆದ್ದಾರಿ ಕಾಮಗಾರಿಯ ಸರ್ವೇ ಕಾರ್ಯ ನಡೆಸುತ್ತಿದ್ದರು.

ಆಗ, ಆರೋಪಿ ಬೆಳಧಡಿ ಗ್ರಾಮದ ಸಹದೇವಪ್ಪ ಶಿವಪ್ಪ ಜಡಿ, ಈತ ಏಕಾಏಕಿಯಾಗಿ ಬಂದು, ಫಿರ್ಯಾದಿಯನ್ನು ಅಡ್ಡಗಟ್ಟಿ ನಿಲ್ಲಿಸಿ, ನಮ್ಮ ಹೊಲದಲ್ಲಿ ಪೈಪ್‌ಲೈನ್‌ ಮಾಡಿಕೊಡುತ್ತೇವೆಂದು ಹೇಳಿ ಈವರೆಗೂ ಕೆಲಸ ಮಾಡಿಕೊಟ್ಟಿಲ್ಲ. ಇಲ್ಯಾಕೆ ರಸ್ತೆ ಕಾಮಗಾರಿ ಸರ್ವೇ ಮಾಡುತ್ತಿದ್ದೀರಿ ಎಂದು ಅವಾಚ್ಯವಾಗಿ ಬೈದಿದ್ದಾರೆ.

ಅಷ್ಟೇ ಅಲ್ಲದೆ ಬಟ್ಟೆಯನ್ನು ಹಿಡಿದೆಳೆದು, ಕೂಡಲೇ ಕೆಲಸವನ್ನು ನಿಲ್ಲಿಸಿ. ಇಲ್ಲವಾದರೆ ನಿಮ್ಮನ್ನು ಹೊಡೆದು ಸಾಯಿಸಿಯೇಬಿಡುತ್ತೇನೆಂದು ಧಮಕಿ ಹಾಕಿದ್ದಲ್ಲದೆ, ಫಿರ್ಯಾದಿ ಹಾಗೂ ಸಾಕ್ಷಿದಾರರು ತಂದಿದ್ದ ಕಂಪನಿಯ ವಾಹನವನ್ನು ನೋಡಿ, ಇದನ್ನು ಬೆಂಕಿ ಹಚ್ಚಿ ಸುಟ್ಟುಹಾಕುತ್ತೇನೆ ಎಂದು ಕೈಯಿಂದ ಹೊಡೆದು ಗಾಯಪಡಿಸಿದ್ದಾರೆ ಎಂದು ದೂರು ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಗದಗ ಗ್ರಾಮೀಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಳ್ಳಭಟ್ಟಿ ಸಾರಾಯಿ ಮಾರಾಟ; ಮಹಿಳೆ ಸಮೇತ ಇಬ್ಬರ ಬಂಧನ

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ

ಸರ್ಕಾರದಿಂದ ನಿಷೇಧಿಸಲ್ಪಟ್ಟಿರುವ ಕಳ್ಳಭಟ್ಟಿ ಸಾರಾಯಿಯನ್ನು ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಗಜೇಂದ್ರಗಡ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾರ್ಚ್.19ರ ಬೆಳಿಗ್ಗೆ 9.30ರ ಸಮಯಕ್ಕೆ ಆರೋಪಿತಳಾದ ಗಜೇಂದ್ರಗಡ ನೆಲ್ಲೂರಿನ ಸೀತವ್ವ ಶರಣಪ್ಪ ಲಮಾಣಿ, ಕಳ್ಳಭಟ್ಟಿ ಸಾರಾಯಿ ಹಾನಿಕಾರಕವೆಂದು ಗೊತ್ತಿದ್ದೂ ನೆಲ್ಲೂರ ಗ್ರಾಮದ ಸರಕಾರಿ ಹಳ್ಳದ ಬಳಿ ಕುಳಿತುಕೊಂಡು ಮಾರಾಟ ಮಾಡುತ್ತಿದ್ದಾಗ 2ಲೀ.ನ 4 ಪ್ಲಾಸ್ಟಿಕ್‌ಬಾಟಲಿಯಲ್ಲಿ ತುಂಬಿಸಿದ್ದ ಕಳ್ಳಭಟ್ಟಿ ಸಾರಾಯಿಯೊಂದಿಗೆ ಸಾರಾಯಿ ತಯಾರಿಕೆಗೆ ಬಳಸಿದ್ದ ಅಂದಾಜು 1,050ರೂ ಮೌಲ್ಯದ ಪಾತ್ರೆ, ಕೊಡ ಇತ್ಯಾದಿ ಪರಿಕರಗಳ ಸಮೇತ ಸಿಕ್ಕುಬಿದ್ದಿದ್ದಾಳೆ.

ಇದೇ ದಿನ, ಮಧ್ಯಾಹ್ನ 2.40ರ ಸಮಯಕ್ಕೆ ಗಜೇಂದ್ರಗಡದ ಜನತಾ ಪ್ಲಾಟ್‌ ನಿವಾಸಿ ಮಾರುತಿ ಗಿಡ್ಡಪ್ಪ ಗುಡೂರ ಈತನು ಗಜೇಂದ್ರಗಡ-ಕಾಲಕಾಲೇಶ್ವರ ರಸ್ತೆಯ ಪಂಪ್‌ಹೌಸ್‌ ಹತ್ತಿರ ರಸ್ತೆಯ ಮೇಲೆ ಕೂತು ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು, ಒಟ್ಟೂ 1 ಸಾವಿರ ರೂ. ಮೌಲ್ಯದ ಸಾರಾಯಿಯೊಂದಿಗೆ ವಶಕ್ಕೆ ಪಡೆದಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಕಲ್ಯಾಣಿ ಮಟಕಾ ಜೂಜಾಟ; ವ್ಯಾಪರಿ ಸಂಗಪ್ಪಶೆಟ್ಟರ ಬಂಧನ

ಶಿರಹಟ್ಟಿ ಪೊಲೀಸರ ಕಾರ್ಯಾಚರಣೆ…..

ವಿಜಯಸಾಕ್ಷಿ ಸುದ್ದಿ, ಗದಗ

ಸಾರ್ವಜನಿಕರಿಂದ ಹಣ ಪಡೆದು ಕಲ್ಯಾಣಿ ಮಟಕಾ ಎಂಬ ಜೂಜಾಟದಲ್ಲಿ ತೊಡಗಿದ್ದ ವ್ಯಾಪಾರಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ವಿರೂಪಾಕ್ಷಪ್ಪ ತಂದೆ ಶಂಕ್ರಪ್ಪ ಸಂಗಪ್ಪಶೆಟ್ಟರ್ ಎಂಬುವವರೇ ಬಂಧಿತ ಆರೋಪಿ.

ಫೆ.20 ರಂದು ಶಿರಹಟ್ಟಿ ಪಟ್ಟಣದ ಗಾಂಧಿ ಸರ್ಕಲ್ ಬಳಿ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಕಲ್ಯಾಣಿ ಮಟಕಾ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಶಿರಹಟ್ಟಿ ಪಿಎಸ್ಐ ಈರಪ್ಪ ಎಚ್ ರಿತ್ತಿ ಬಂಧಿಸಿದ್ದಾರೆ.

ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಯ್ಯಾಕ್ಟ್ 1963(u/s-78(3) 0024/2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಕಾರ್ಯಾಚರಣೆ; ಚೆಕ್ ಪೋಸ್ಟ್ ನಲ್ಲಿ ರಾತ್ರೋರಾತ್ರಿ ಲಕ್ಷಾಂತರ ರೂ. ಪತ್ತೆ

ಹುಬ್ಬಳ್ಳಿಯಿಂದ ಗದಗ ಕಡೆ ಬರುತ್ತಿದ್ದ ಅಕ್ರಮ ಮದ್ಯ ಜಪ್ತಿ…

ವಿಜಯಸಾಕ್ಷಿ ಸುದ್ದಿ, ಗದಗ

ದಾಖಲೆ ಇಲ್ಲದೆ ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಲಕ್ಷಾಂತರ ರೂ. ಹಣ ಸೀಜ್ ಮಾಡಿದ್ದಾರೆ.

ಬೆಟಗೇರಿ ಸಮೀಪದ ದಂಡಿನ ದುರ್ಗಮ್ಮ ದೇವಿ ಬಳಿಯ ಗಜೇಂದ್ರಗಡ ರಸ್ತೆಯಲ್ಲಿ ಸ್ಥಾಪಿಸಿದ ಚೆಕ್ ಪೋಸ್ಟ್ ನಲ್ಲಿ ಈ ಹಣ ಸಿಕ್ಕಿದೆ.

ಗಜೇಂದ್ರಗಡ ಪಟ್ಟಣದಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ಕಾರಿನಲ್ಲಿ 1ಲಕ್ಷ 43 ಸಾವಿರ ರೂ. ಹಣ ಸೀಜ್ ಮಾಡಲಾಗಿದೆ.

ನಿನ್ನೆ ಹುಬ್ಬಳ್ಳಿ ರಸ್ತೆಯ ದುಂದೂರು ಬಳಿಯ ಚೆಕ್ ಪೋಸ್ಟ್ ನಲ್ಲಿ ಕೂಡ 750ML ನ 25 ಬಾಟಲ್ ಬ್ಲೆಂಡರ್ ಸ್ಪೈಡ್ ಮದ್ಯ ಪತ್ತೆಯಾಗಿದೆ.

ಹುಬ್ಬಳ್ಳಿಯಿಂದ ಗದಗ ನಗರಕ್ಕೆ ಈ ಮದ್ಯ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಈ ಕುರಿತು ಬೆಟಗೇರಿ ಹಾಗೂ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಗದಗ ಎಸ್ಪಿ ಬಿ.ಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.

ಗದಗ ಜಿಲ್ಲೆಯ ಪೊಲೀಸರ ಭರ್ಜರಿ ಕಾರ್ಯಾಚರಣೆ; ಕಂತೆ ಕಂತೆ ಹಣ ಜಪ್ತಿ, ನರಸಿಂಗಸಾ ತಂಬಾಕು ಸೀಜ್

ಗದಗ, ಮುಂಡರಗಿ ಹಾಗೂ ಶಿರಹಟ್ಟಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ನಾಲ್ವರು ‌ವಶಕ್ಕೆ

ವಿಜಯಸಾಕ್ಷಿ ಸುದ್ದಿ, ಗದಗ

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟ್ ಗಳಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ. ಎಸ್ಪಿ ಬಿ. ಎಸ್ ನೇಮಗೌಡ ಅವರ ಮಾರ್ಗದರ್ಶನದಲ್ಲಿ ವಿವಿಧ ಚೆಕ್ ಪೋಸ್ಟ್ ಸಿಬ್ಬಂದಿಯ ಚಾಣಾಕ್ಷತನದಿಂದ ಲಕ್ಷಾಂತರ ರೂ.ಮೌಲ್ಯದ ತಂಬಾಕು ಹಾಗೂ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಕಂತೆ ಕಂತೆ ಹಣ ಸಿಕ್ಕಿದೆ.

ಗದಗ ಶಹರದ ಮುಳಗುಂದ ರಸ್ತೆಯಲ್ಲಿ ಇರುವ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 15 ಲಕ್ಷ ರೂ. ಗಳು ಪತ್ತೆಯಾಗಿದೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹುಲಗೂರಿನಿಂದ ದೇವದುರ್ಗಕ್ಕೆ ಹೊರಟಿದ್ದ ಕಾರಿನಲ್ಲಿ ಈ ಹಣ ಪತ್ತೆಯಾಗಿದ್ದು ವಿಶೇಷವಾಗಿದೆ.

ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಇನ್ನೊಂದು ಪ್ರಕರಣದಲ್ಲಿ ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕಿನ ಚೆಕ್ ಪೋಸ್ಟ್ ಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಸುಪ್ರಸಿದ್ಧ ತಂಬಾಕು ಸಿಕ್ಕಿದೆ.

ಗದಗನಿಂದ ಮುಂಡರಗಿ ಮಾರ್ಗವಾಗಿ ಕೊಪ್ಪಳ ಜಿಲ್ಲೆಯ ಕಡೆ ಹೊರಟಿದ್ದ ಗೂಡ್ಸ್ ವಾಹನದಲ್ಲಿ ಸೂಕ್ತ ದಾಖಲೆ ಇಲ್ಲದೇ 1ಲಕ್ಷ 84 ಸಾವಿರ ರೂ.ಮೌಲ್ಯದ ತಂಬಾಕು ಜಪ್ತಿ ಮಾಡಲಾಗಿದ್ದು, ಶಿರಾಜ್ ನಾಗರಕಟ್ಟಿ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.

ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಚೆಕ್ ಪೋಸ್ಟ್ ನಲ್ಲಿ ಕೂಡ 1ಲಕ್ಷ 10 ಸಾವಿರ ರೂ. ಮೌಲ್ಯದ ತಂಬಾಕು ಸಿಕ್ಕಿದೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಿಂದ ಶಿರಹಟ್ಟಿ ಕಡೆ ಈ ತಂಬಾಕು ತುಂಬಿದ ರಿಕ್ಷಾ ಬರುತ್ತಿತ್ತು ಎನ್ನಲಾಗಿದೆ. ಶ್ಯಾಮ್ ನವಲೆ ಎಂಬುವರನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಯುತ್ತಿದೆ.

ಗದಗ ಎಸ್ಪಿ ಬಿ. ಎಸ್.ನೇಮಗೌಡ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಪೊಲೀಸರ ಭರ್ಜರಿ ಕಾರ್ಯಾಚರಣೆ; ಮುಳಗುಂದ ಚೆಕ್ ಪೋಸ್ಟ್ ನಲ್ಲಿ 24 ಲಕ್ಷ ರೂ. ಸೀಜ್

ಗದಗ ಎಸ್ಪಿ ಬಿ.ಎಸ್ ನೇಮಗೌಡ ಭೇಟಿ, ಪರಿಶೀಲನೆ…..

ವಿಜಯಸಾಕ್ಷಿ ಸುದ್ದಿ, ಗದಗ

ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 24 ಲಕ್ಷ ರೂಪಾಯಿ ಹಣ ಜಪ್ತಿ ಮಾಡಲಾಗಿದೆ.

ಗದಗ ತಾಲೂಕಿನ ಮುಳಗುಂದ ಪಟ್ಟಣದ ಬಳಿಯ ಬಸಾಪುರ ಚೆಕ್ ಪೋಸ್ಟ್‌ನಲ್ಲಿ ಈ ಹಣ ಸೀಜ್ ಮಾಡಲಾಗಿದೆ. ಎರಡು ಪ್ರತ್ಯೇಕ ವಾಹನದಲ್ಲಿ ಹಣ ಸಾಗಿಸುವಾಗ, ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟ್‌ನಲ್ಲಿ ತಪಾಸಣೆ ಮಾಡುವಾಗ ಹಣ ಸಿಕ್ಕಿದೆ. ಈ ಹಣಕ್ಕೆ ಸೂಕ್ತ ದಾಖಲೆ ಇಲ್ಲ ಎನ್ನಲಾಗಿದೆ.

ಎರಡು ಪ್ರತ್ಯೇಕ ವಾಹನದಲ್ಲಿ ದಾವಣಗೆರೆಯಿಂದ ಗದಗ ಕಡೆಗೆ ಹಣ ತಗೆದುಕೊಂಡು ಹೊರಟಿದ್ದ ಪ್ರಯಾಣಿಕರ ಕಾರಲ್ಲಿ 20 ಲಕ್ಷ 50 ಸಾವಿರ ಹಾಗೂ ಬದಾಮಿ ತಾಲೂಕಿನ ಜಾಲಿಹಾಳದಿಂದ ಲಕ್ಷ್ಮೇಶ್ವರ ಕಡೆಗೆ ಹೊರಟಿದ್ದ ಕಾರಲ್ಲಿ 4 ಲಕ್ಷ ನಗದು ಸೀಜ್‌‌ ಮಾಡಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಗದಗ ಎಸ್ಪಿ ಬಾಬಾಸಾಹೇಬ ಎಸ್ ನೇಮಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ವಾಹನ ಖರೀದಿಗಾಗಿ ಹಾಗೂ ಆಸ್ತಿ ಖರೀದಿಸಲು ಈ ಹಣ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ವಾಹನ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ಅಶೋಕ್ ಸದಲಗಿ, ಪಿಎಸ್ಐ ಎಸ್. ಆರ್. ಕಣವಿ, ಸಿಬ್ಬಂದಿಗಳಾದ ವಿಜಯ ಪೂಜಾರ, ಅಬಕಾರಿ ಪೊಲೀಸ್ ನಜೀರ್ ಖುದಾವಂದ, ಜಿ.ಪಂ ಸಿಬ್ಬಂದಿ ಅರವಿಂದ್ ಬಂಡಿ ಇದ್ದರು.

ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಕಳ್ಳರ ಕೈ ಚಳಕ; ಒಂದೇ ದಿನ ಎರಡು ಮನೆ ಕಳ್ಳತನ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿ

ಸಾರಿಗೆ ನಗರದಲ್ಲಿ ಘಟನೆ……

ವಿಜಯಸಾಕ್ಷಿ ಸುದ್ದಿ, ಗದಗ

ಒಂದೇ ದಿನ ಒಂದೇ ಏರಿಯಾದ ಎರಡು ಮನೆಗಳಿಗೆ ಕನ್ನ ಹಾಕಿರುವ ಕಳ್ಳರು, ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಜರುಗಿದೆ.

ಗದಗ ತಾಲೂಕಿನ ಕಳಸಾಪೂರ ರಸ್ತೆಯಲ್ಲಿ ಬರುವ ಸಾರಿಗೆ ನಗರದಲ್ಲಿ ಈ ಕಳ್ಳತನ ನಡೆದಿದೆ.

ಪ್ರಕರಣ ಒಂದರಲ್ಲಿ ಮನೆಯೊಂದರ ಮುಂದಿನ ಬಾಗಿಲಿನ ಲಾಕರ್‌ ಕೀಲಿ ಮೀಟಿ ತೆಗೆದು ಮನೆಯೊಳಗೆ ನುಗ್ಗಿದ ಕಳ್ಳರು ಟ್ರೆಝರಿಯಲ್ಲಿರಿಸ್ದ 1.15 ಲಕ್ಷ ರೂ ಬೆಲೆಬಾಳುವ ಆಭರಣಗಳನ್ನು ದೋಚಿದ್ದಾರೆ.

ಪಾರ್ವತಿ ಮಾರುತೆಪ್ಪ ಜೋಗಿನ ಎಂಬುವರು ಈ ಬಗ್ಗೆ ಗದಗ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಾರ್ಚ್‌ 16ರ ರಾತ್ರಿ 10 ಗಂಟೆಯಿಂದ ಮಾರ್ಚ್‌ 17ರ ನಸುಕಿನ 5.30ರ ನಡುವಿನ ಸಮಯದಲ್ಲಿ ಕಳ್ಳರು ಕೈಚಳಕ ತೋರಿದ್ದು, ಟ್ರೆಝರಿಯಲ್ಲಿದ್ದ 5 ಗ್ರಾಂ. ತೂಕದ 25 ಸಾವಿರ ರೂ. ಬೆಲೆಬಾಳುವ ಬಂಗಾರದ ಉಂಗುರ, 2.5 ಗ್ರಾಂ. ತೂಕದ 15 ಸಾವಿರ ರೂ. ಬೆಲೆಬಾಳುವ 3 ಸಣ್ಣ ಉಂಗುರ, 25 ಸಾವಿರ ರೂ. ಬೆಲೆಯ 5 ಗ್ರಾಂ ತೂಕದ ಬಂಗಾರದ ಸುತ್ತುಂಗುರ, 25 ಸಾವಿರ ರೂ. ಬೆಲೆಬಾಳುವ 5 ಗ್ರಾಂ ತೂಕದ ಡಿಸೈನ್‌ ಉಂಗುರ, 5 ಗ್ರಾಂ. ತೂಕದ 25 ಸಾವಿರ ರೂ ಬೆಲೆಯ ಬುಗಡಿ ಹೀಗೆ ಒಟ್ಟೂ ಅಂದಾಜು 1,15,000 ರೂ ಬೆಲೆಬಾಳುವ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಮನೆಯೊಂದರ ಬಾಗಿಲಿನ ಚಿಲಕದ ಕೊಂಡಿ ಮೀಟಿ ತೆಗೆದು ಮನೆಯೊಳಗೆ ಟ್ರೆಝರಿಯಲ್ಲಿಟ್ಟಿದ್ದ 1.80 ಲಕ್ಷ ರೂ. ಬೆಲೆಬಾಳುವ ಆಭರಣ ಹಾಗೂ 50 ಸಾವಿರ ರೂ. ನಗದು ಹಣವನ್ನು ಕಳ್ಳತನ ನಡೆಸಿರುವ ಬಗ್ಗೆ ಗದಗ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಲ್ಲಿನ ವಿಜಯಲಕ್ಷ್ಮೀ ರುದ್ರಪ್ಪ ಬಂಗಾರಿಯವರಿಗೆ ಸೇರಿರುವ ಮನೆಯೇ ಕಳ್ಳತನವಾಗಿದೆ. ವಾಸದ ಮನೆಯ ಚಿಲಕದ ಕೊಂಡಿ ಮೀಟಿ ತೆರೆದು, ಟ್ರೆಝರಿಯಲ್ಲಿದ್ದ 15 ಗ್ರಾಂ.ನ 75 ಸಾವಿರ ರೂ. ಬೆಲೆಯ ಬಂಗಾರದ ಚೈನ್‌, 5 ಗ್ರಾಂ. ತೂಕದ 25 ಸಾವಿರ ರೂ. ಬೆಲೆಯ ಬಂಗಾರದ ಸುತ್ತುಂಗುರ, 5 ಗ್ರಾಂ. ತೂಕದ 25 ಸಾವಿರ ರೂ. ಬೆಲೆಯ ಬಂಗಾರದ ಬಿಳಿ ಹರಳಿನ ಉಂಗುರ, 15 ಸಾವಿರ ರೂ ಬೆಲೆಯ ಬಂಗಾರದ ಬೆಂಡವಾಲಿ, 15 ಸಾವಿರ ರೂ ಬೆಲೆಯ ಬಂಗಾರದ ಮೂಗುಬೊಟ್ಟು, 2 ಗ್ರಾಂ. ತೂಕದ 10 ಸಾವಿರ ರೂ ಬೆಲೆಯ ಚಿನ್ನದ ಸಣ್ಣ ಉಂಗುರ, 15 ಸಾವಿರ ರೂ. ಬೆಲೆಬಾಳುವ ಬೆಳ್ಳಿಯ ಆಭರಣಗಳು ಹಾಗೂ 50 ಸಾವಿರ ರೂ. ನಗದು ಹೀಗೆ ಒಟ್ಟೂ 2,30,000 ರೂ. ಬೆಲೆಬಾಳುವ ಬಂಗಾರ ಹಾಗೂ ನಗದನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಎರಡೂ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮೀಣ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಶಿಶುನಾಳದಿಂದ ಗಾಂಜಾ ತಂದು ಮಾರುತ್ತಿದ್ದ ಆರೋಪಿ: 18 ಸಾವಿರ ರೂ. ಮೌಲ್ಯದ ಗಾಂಜಾ ಜಪ್ತಿ

ವಿಜಯಸಾಕ್ಷಿ ಸುದ್ದಿ, ಗದಗ

ನಗರದ ದೋಭಿ ಘಾಟ್‌ ಬಳಿಯ ಸಾರ್ವಜನಿಕ ರಸ್ತೆಯ ಮೇಲೆ ಅನಧಿಕೃತವಾಗಿ ಸ್ವಂತ ಲಾಭಕ್ಕೋಸ್ಕರ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಗದಗ ಶಹರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿತನಾದ ಹುಡ್ಕೋ ಕಾಲನಿ ಅಂಬಾ ಭವಾನಿ ದೇವಸ್ಥಾನ ಬಳಿಯ ನಿವಾಸಿ ಶ್ರೀಧರ ಯಂಕೂಸಾ ಭಾಂಡಗೆ ಈತನು ಮಾರ್ಚ್‌ 17ರಂದು ಮಧ್ಯಾಹ್ನ 2 ಗಂಟೆಯ ಸಮಯಕ್ಕೆ ಶಿಶುನಾಳದಿಂದ ತಂದ 18 ಸಾವಿರ ರೂ. ಬೆಲೆಬಾಳುವ 180 ಗ್ರಾಂ. ತೂಕದ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಮಯದಲ್ಲಿ ಗದಗ ಶಹರ ಪೊಲೀಸ್‌ ಠಾಣೆಯ ಪಿಎಸ್‌ಐ ಎಸ್.ಸಿ. ಗುರುಭೆಟ್ಟಿ ಇವರು ದಾಳಿ ನಡೆಸಿ ಹಿಡಿದಿದ್ದಾರೆ.

ಕಲಂ20(ಬಿ) ಎನ್‌ಡಿಪಿಎಸ್‌ ಕಾಯ್ದೆ-1985ರ ಪ್ರಕಾರ ಸರಕಾರದ ಪರವಾಗಿ ನೀಡಿದ್ದ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸೂಕ್ತ ದಾಖಲೆ ನೀಡದ ವ್ಯಾಪಾರಿಗಳು….ಕೋಟ್ಯಾಂತರ ರೂ. ಬೆಲೆಬಾಳುವ ಬಂಗಾರದ ಆಭರಣಗಳೊಂದಿಗೆ ಮುಂಬೈನ ಇಬ್ಬರು ವಶಕ್ಕೆ

ವಿಜಯಸಾಕ್ಷಿ ಸುದ್ದಿ, ಗದಗ

ಕೋಟ್ಯಂತರ ರೂ. ಬೆಲೆಬಾಳುವ ಆಭರಣಗಳೊಂದಿಗೆ ಅನುಮಾನಾಸ್ಪದವಾಗಿ ನಗರದ ಅಂಗಡಿಯೊಂದರ ಎದುರು ನಿಂತಿದ್ದ ಇಬ್ಬರು ವ್ಯಕ್ತಿಗಳನ್ನು ಗದಗ ಶಹರ ಪೊಲೀಸರು ಆಭರಣಗಳೊಂದಿಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮಾರ್ಚ್‌ 15, ಬುಧವಾರ ಸಂಜೆ 4.10ರ ಸಮಯಕ್ಕೆ ನಗರದ ಟಾಂಗಾಕೂಟ್‌ ಬಳಿಯಿರುವ ಶ್ರೀ ಸಾರಿ ಸೆಂಟರ್‌ ಎದುರಿನ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತರಾದ 33 ವರ್ಷದ ಮುಂಬೈ-ಮಜಗಾಂವ್‌ನ ಅಭಿಷೇಕ ರಾಮಣಲಾಲ ಜೈನ್‌ ಹಾಗೂ 27 ವರ್ಷದ ಮುಂಬೈ-ವಿರಾರದ ಮಾಹೀಪಾಲ ಹಿಮ್ಮತಲಾಲ ಜೈನ್‌ ಇವರಿಬ್ಬರೂ 4 ಕೆ.ಜಿ. 46 ಗ್ರಾಂ ತೂಕದ 1,71,65,100 ರೂ. ಬೆಲೆಬಾಳುವ ಬಂಗಾರದ ಆಭರಣಗಳೊಂದಿಗೆ ಸುಳಿದಾಡುತ್ತಿದ್ದರು.

ಅನುಮಾನಗೊಂಡ ಶಹರ ಠಾಣೆಯ ಪಿಎಸ್ಐ ಎಸ್.ಬಿ.ಸಿಂಧೆ ಈ ಇಬ್ಬರು ವ್ಯಕ್ತಿಗಳ ಬಗ್ಗೆ ವಿಚಾರಿಸಿದಾಗ ಬಂಗಾರದ ವ್ಯಾಪಾರಿಗಳೆಂದು ತಿಳಿದರೂ, ತಮ್ಮ ಬಳಿಯಿರುವ ಬಂಗಾರದ ಆಭರಣಗಳ ಬಗ್ಗೆ ಸೂಕ್ತ ಉತ್ತರ ನೀಡದೇ, ರಿಸಿಪ್ಟ್/ಬಿಲ್‌ಗಳ ಬಗ್ಗೆಯೂ ಸರಿಯಾದ ಮಾಹಿತಿ ನೀಡದೇ ಇರುವುದರಿಂದ ಸದರಿ ಆಭರಣಗಳನ್ನು ಎಲ್ಲಿಂದಲೋ ಕಳ್ಳತನ ಮಾಡಿ ಸಂಪಾದಿಸಿ ತಂದಿರಬಹುದು ಎಂಬ ಅನುಮಾನದ ಮೇಲೆ ಎನ್‌.ಸಿ ನಂ. 06/2023 ಕಲಂ. 98 ಕೆಪಿ ಕಾಯ್ದೆಯ ಪ್ರರಕಾರ ಸರ್ಕಾರಿ ದೂರನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.