Home Blog Page 5

ಬೇರೆ ಪುರಾವೆಗಳಿಲ್ಲದಿದ್ದರೆ DNA ಪರೀಕ್ಷೆ ಅಗತ್ಯ: ಪಿತೃತ್ವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟನೆ

ನವದೆಹಲಿ: ಪಿತೃತ್ವಕ್ಕೆ ಸಂಬಂಧಿಸಿದ ವಿವಾದಗಳಲ್ಲಿ ಡಿಎನ್‌ಎ ಪರೀಕ್ಷೆಯ ಮಹತ್ವದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಸತ್ಯಾಂಶವನ್ನು ತಿಳಿಯಲು ಡಿಎನ್‌ಎ ಪರೀಕ್ಷೆಯೇ ಏಕೈಕ ಮಾರ್ಗವಾಗಿದ್ದು, ಬೇರೆ ಯಾವುದೇ ದೃಢವಾದ ಪುರಾವೆಗಳು ಲಭ್ಯವಿಲ್ಲದಿದ್ದರೆ ನ್ಯಾಯಾಲಯಗಳು ಡಿಎನ್‌ಎ ಪರೀಕ್ಷೆಗೆ ಆದೇಶಿಸಬಹುದೆಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ತಾನು ಜೈವಿಕವಾಗಿ ಯಾರ ಮಗ ಎಂಬುದನ್ನು ತಿಳಿದುಕೊಳ್ಳಲು ಕಾನೂನು ಹೋರಾಟ ನಡೆಸುತ್ತಿರುವ 26 ವರ್ಷದ ಯುವಕನ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್.ಕೆ. ಸಿಂಗ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣದಲ್ಲಿ ಪಿತೃತ್ವವನ್ನು ನಿರ್ಧರಿಸಲು ಡಿಎನ್‌ಎ ಪರೀಕ್ಷೆ ನಡೆಸುವಂತೆ ಛತ್ತೀಸ್‌ಗಢದ ಬಸ್ನಾ ನ್ಯಾಯಾಲಯ ಮತ್ತು ಹೈಕೋರ್ಟ್ ನೀಡಿದ್ದ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೆಳ ನ್ಯಾಯಾಲಯಗಳ ಆದೇಶವನ್ನು ಎತ್ತಿಹಿಡಿದಿದೆ.

ಪ್ರತಿವಾದಿಯಾಗಿರುವ ವ್ಯಕ್ತಿ, ತನ್ನನ್ನು ಡಿಎನ್‌ಎ ಮಾದರಿ ನೀಡುವಂತೆ ಬಲವಂತಪಡಿಸಲಾಗದು ಹಾಗೂ ಈ ಪ್ರಕರಣದಲ್ಲಿ ಡಿಎನ್‌ಎ ಪರೀಕ್ಷೆಯ ಅಗತ್ಯವಿಲ್ಲ ಎಂದು ವಾದಿಸಿದ್ದರು. ಆದರೆ ನ್ಯಾಯಾಲಯ, ಪ್ರಕರಣದ ತೀರ್ಮಾನಕ್ಕೆ ಡಿಎನ್‌ಎ ಪರೀಕ್ಷೆಯ ಫಲಿತಾಂಶವೇ ನಿರ್ಣಾಯಕವಾಗಿರುವಾಗ ಅದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ನ್ಯಾಯಪೀಠದ ಪ್ರಕಾರ, ಡಿಎನ್‌ಎ ಪರೀಕ್ಷೆಗೆ ಆದೇಶ ನೀಡಬೇಕೇ ಎಂಬುದನ್ನು ನಿರ್ಧರಿಸುವಾಗ ನ್ಯಾಯಾಲಯವು ಒಂದು ಪ್ರಮುಖ ಅಂಶವನ್ನು ಪರಿಗಣಿಸಬೇಕು. ಅಂದರೆ, ಡಿಎನ್‌ಎ ಪರೀಕ್ಷೆಯ ಮೂಲಕವೇ ಸತ್ಯಾಂಶವನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆಯೇ ಮತ್ತು ಅದಕ್ಕೆ ಪರ್ಯಾಯವಾದ ಯಾವುದೇ ಪುರಾವೆಗಳು ಲಭ್ಯವಿಲ್ಲವೇ ಎಂಬುದನ್ನು ಪರಿಶೀಲಿಸಬೇಕು ಎಂದು ತಿಳಿಸಿದೆ.

ಈ ಪ್ರಕರಣದಲ್ಲಿ ಯುವಕನು ತಾನು ಪ್ರತಿವಾದಿಯ ಮಗ ಎಂದು ಘೋಷಿಸುವಂತೆ ಹಾಗೂ ಅವರ ಆಸ್ತಿಯಲ್ಲಿ ಹಕ್ಕು ನೀಡುವಂತೆ ಸಿವಿಲ್ ಮೊಕದ್ದಮೆ ಹೂಡಿರುವುದರಿಂದ ಪಿತೃತ್ವದ ಪ್ರಶ್ನೆ ಪ್ರಕರಣದ ಕೇಂದ್ರಬಿಂದುವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸತ್ಯ ತಿಳಿಯುವ ಹಕ್ಕು ಮುಖ್ಯ

ಗೌಪ್ಯತೆಯ ಹಕ್ಕಿನ ವಿಚಾರವನ್ನೂ ಪರಿಗಣಿಸಿದ ನ್ಯಾಯಪೀಠ, ಪ್ರತಿವಾದಿಯ ವೈಯಕ್ತಿಕ ಹಕ್ಕುಗಳಿಗಿಂತಲೂ ತನ್ನ ಜೀವನಪೂರ್ತಿ ಕಾಡುತ್ತಿರುವ ಪಿತೃತ್ವದ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕೆಂಬ ಯುವಕನ ಹಕ್ಕು ಈ ಪ್ರಕರಣದಲ್ಲಿ ಹೆಚ್ಚು ಮಹತ್ವದ್ದಾಗಿದೆ ಎಂದು ಹೇಳಿದೆ.

ಬಾಲ್ಯದಿಂದಲೂ ತನ್ನ ತಾಯಿ ಪ್ರತಿವಾದಿಯೇ ತಂದೆ ಎಂದು ಹೇಳುತ್ತಾ ಬಂದಿದ್ದು, ಆದರೆ ಆ ವ್ಯಕ್ತಿ ಅದನ್ನು ನಿರಾಕರಿಸುತ್ತಿರುವ ಕಾರಣ ಯುವಕನು ಸತ್ಯ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಈ ಪ್ರಶ್ನೆಗೆ ಉತ್ತರ ದೊರೆಯದಿದ್ದರೆ, ಅವನಿಗೆ ಸಿಗಬೇಕಾದ ಕಾನೂನುಬದ್ಧ ಹಕ್ಕುಗಳಿಂದ ವಂಚಿತನಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ

ಅರ್ಜಿದಾರ ಯುವಕನ ಪ್ರಕಾರ, 1999ರ ಸೆಪ್ಟೆಂಬರ್ 10ರಂದು ತನ್ನ ತಾಯಿ ಮತ್ತು ಪ್ರತಿವಾದಿ ವ್ಯಕ್ತಿಯ ನಡುವಿನ ಸಂಬಂಧದಿಂದ ತಾನು ಜನಿಸಿದ್ದಾನೆ. ಬಾಲ್ಯದಿಂದಲೂ ತಾಯಿ ಇದೇ ವ್ಯಕ್ತಿಯೇ ತನ್ನ ತಂದೆ ಎಂದು ಹೇಳುತ್ತಾ ಬಂದಿದ್ದರೂ, ಪ್ರತಿವಾದಿ ಪಿತೃತ್ವವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.

ಈ ಹಿಂದೆ ಯುವಕನ ತಾಯಿ ದಾಖಲಿಸಿದ್ದ ಅತ್ಯಾಚಾರ ಪ್ರಕರಣದಲ್ಲಿ ಪ್ರತಿವಾದಿ ಖುಲಾಸೆಗೊಂಡಿದ್ದರು. ನಂತರ ಹಲವು ವರ್ಷಗಳ ಕಾಲ ಜೀವನಾಂಶ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಎರಡೂ ಕುಟುಂಬಗಳ ನಡುವೆ ಕಾನೂನು ಹೋರಾಟ ನಡೆದಿತ್ತು.

ಬಳಿಕ ಯುವಕನು ತನ್ನ ಪಿತೃತ್ವವನ್ನು ಕಾನೂನುಬದ್ಧವಾಗಿ ಘೋಷಿಸುವಂತೆ ಹಾಗೂ ಆಸ್ತಿಯಲ್ಲಿ ಪಾಲು ನೀಡುವಂತೆ ಸಿವಿಲ್ ದಾವೆ ಹೂಡಿದ್ದ. ಪ್ರಕರಣದ ಸತ್ಯಾಂಶ ನಿರ್ಧರಿಸಲು ಡಿಎನ್‌ಎ ಪರೀಕ್ಷೆಯೇ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಪರೀಕ್ಷೆಗೆ ಆದೇಶಿಸಿದ್ದವು. ಇದೀಗ ಸುಪ್ರೀಂ ಕೋರ್ಟ್ ಕೂಡ ಆ ಆದೇಶವನ್ನು ಎತ್ತಿಹಿಡಿದು, ಡಿಎನ್‌ಎ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಪ್ರಕರಣದ ಮುಂದಿನ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದೆ.

“ಮಧು ಅಭಿಷೇಕದ ನಂತರ ರಾಜಕೀಯ ಪಥ ಬದಲಾಯಿತೇ? ನಿಜವಾಯ್ತು ಪಂಚಮುಖಿ ದೇವಾಲಯದ ‘ಭವಿಷ್ಯ ನುಡಿ’

0

ರಾಯಚೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿರುವ ಬೆನ್ನಲ್ಲೇ, ರಾಯಚೂರು ತಾಲೂಕಿನ ಪಂಚಮುಖಿ ಆಂಜನೇಯ ದೇವಸ್ಥಾನ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದೆ. ಡಿ.ಕೆ. ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ನಿಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ದೇವಾಲಯದ ಹಿಂದಿನ ಭವಿಷ್ಯ ನುಡಿಗಳು ಮತ್ತೆ ಚರ್ಚೆಗೆ ಬಂದಿವೆ.

ಈ ದೇವಸ್ಥಾನದಲ್ಲಿ ಹಿಂದಿನಿಂದಲೂ ನಡೆದಿರುವ ಘಟನೆಗಳು ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸುತ್ತಿವೆ. ಗುಂಡೂರಾವ್, ಬಂಗಾರಪ್ಪ, ವೀರಪ್ಪ ಮೊಯ್ಲಿ ಮತ್ತು ಯಡಿಯೂರಪ್ಪ ಅವರು ಇಲ್ಲಿ ಪೂಜೆ ಸಲ್ಲಿಸಿದ ಬಳಿಕ ಮುಖ್ಯಮಂತ್ರಿಗಳಾದ ಉದಾಹರಣೆಗಳನ್ನು ದೇವಾಲಯದ ಮೂಲ ಅರ್ಚಕರು ಉಲ್ಲೇಖಿಸುತ್ತಿದ್ದಾರೆ.

ಇದೇ ರೀತಿಯಲ್ಲಿ 2025ರ ಅಕ್ಟೋಬರ್‌ನಲ್ಲಿ ಡಿಸಿಎಂ ಆಗಿದ್ದ ಡಿ.ಕೆ. ಶಿವಕುಮಾರ್ ಅವರು ಪತ್ನಿಯೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ‘ಮಧು ಅಭಿಷೇಕ’ ಹಾಗೂ 42 ಶ್ಲೋಕಗಳ ವಿಶೇಷ ಪೂಜೆ ನೆರವೇರಿಸಿದ್ದರು. ಆ ವೇಳೆಲೇ ಅವರ ಭವಿಷ್ಯ ಕುರಿತು ದೇವಾಲಯದ ಅರ್ಚಕರು ನೀಡಿದ್ದ ಹೇಳಿಕೆಗಳು ಈಗ ಮತ್ತೆ ಸದ್ದು ಮಾಡುತ್ತಿವೆ.

“ಪಂಚಮುಖಿ ಪ್ರಾಣದೇವರ ಆಶೀರ್ವಾದದಿಂದಲೇ ಇಷ್ಟಾರ್ಥಗಳು ಈಡೇರುತ್ತವೆ” ಎಂದು ಹೇಳಿದ್ದ ಅರ್ಚಕರು, ಇದೀಗ ಡಿಕೆಶಿ ಸಿಎಂ ಆಗಿರುವುದನ್ನು ದೈವ ಸಂಕೇತವಾಗಿ ನೋಡುತ್ತಿದ್ದಾರೆ. ದೇವಸ್ಥಾನದಲ್ಲಿ ಭಕ್ತರು ಸಂಭ್ರಮಾಚರಣೆ ನಡೆಸುತ್ತಿದ್ದು, ವಿಶೇಷ ಪೂಜೆಗಳು ಮುಂದುವರಿದಿವೆ.

ರಾಮ್ ಚರಣ್ ಜೊತೆ ಕಾಣಿಸಿಕೊಳ್ಳುವ ಈ ವ್ಯಕ್ತಿಗೆ ದಿನಕ್ಕೆ ₹4 ಲಕ್ಷ? ‘ಪೆದ್ದಿ’ ಪ್ರಚಾರದ ಹಿಂದಿನ ಸೀಕ್ರೆಟ್ ಬಯಲು!

‘ಪೆದ್ದಿ’ ಸಿನಿಮಾ ಬಿಡುಗಡೆಗೂ ಮುನ್ನ ರಾಮ್ ಚರಣ್ ಅವರ ಪ್ರತಿಯೊಂದು ಸಾರ್ವಜನಿಕ ಕಾರ್ಯಕ್ರಮದಲ್ಲೂ ಮತ್ತೊಬ್ಬ ವ್ಯಕ್ತಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಎತ್ತರದ ದೇಹ, ಕಪ್ಪು ಸೂಟ್, ಕಠಿಣ ಭದ್ರತೆ ಹಾಗೂ ಸ್ಟೈಲಿಶ್ ಹಾಜರಾತಿಯಿಂದ ವೈರಲ್ ಆಗಿರುವ ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಅಂತರರಾಷ್ಟ್ರೀಯ MMA ಫೈಟರ್ ಕೆವಿನ್ ಕುಂಟಾ.

ಗಾಂಬಿಯಾ ಮೂಲದ ಕೆವಿನ್ ಸದ್ಯ ಇಟಲಿಯಲ್ಲಿ ನೆಲೆಸಿದ್ದು, ವೃತ್ತಿಪರ ಫೈಟರ್ ಆಗಿ ಹಲವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ. ದೈಹಿಕ ಸಾಮರ್ಥ್ಯ ಮತ್ತು ಭದ್ರತಾ ಕೌಶಲ್ಯಗಳಿಂದ ಗುರುತಿಸಿಕೊಂಡಿರುವ ಅವರನ್ನು ‘ಪೆದ್ದಿ’ ಚಿತ್ರದ ಪ್ರಚಾರ ಅಭಿಯಾನಕ್ಕಾಗಿ ರಾಮ್ ಚರಣ್ ತಂಡ ವಿಶೇಷವಾಗಿ ಆಯ್ಕೆ ಮಾಡಿಕೊಂಡಿದೆ ಎನ್ನಲಾಗಿದೆ.

ಚಿತ್ರರಂಗದ ವಲಯಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಕೆವಿನ್ ಅವರಿಗೆ ದಿನಕ್ಕೆ 2 ಲಕ್ಷದಿಂದ 4 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ. ಈ ಮೊತ್ತವೇ ಈಗ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ರಾಮ್ ಚರಣ್ ಎಲ್ಲೇ ತೆರಳಿದರೂ ಕೆವಿನ್ ಅವರ ಸುತ್ತ ಭದ್ರತಾ ವಲಯ ನಿರ್ಮಿಸುತ್ತಾರೆ. ಅಭಿಮಾನಿಗಳ ಗುಂಪು, ಮಾಧ್ಯಮಗಳ ದಟ್ಟಣೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ನಡುವೆಯೂ ನಟನಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲಿದೆ.

ಇನ್ನೊಂದೆಡೆ, ‘ಪೆದ್ದಿ’ ಚಿತ್ರದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಎ.ಆರ್. ರೆಹಮಾನ್ ಸಂಗೀತ ಹಾಗೂ ಭಾರಿ ತಾರಾಗಣದೊಂದಿಗೆ ನಿರ್ಮಾಣವಾಗಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಜೂನ್ 4ರಂದು ಪ್ರೇಕ್ಷಕರ ಮುಂದೆ ಬರಲಿದೆ. ‘ಪೆದ್ದಿ’ ಚಿತ್ರದ ಪ್ರಚಾರದಷ್ಟೇ ರಾಮ್ ಚರಣ್ ಅವರ ಬಾಡಿಗಾರ್ಡ್ ಕೆವಿನ್ ಕುಂಟಾ ಕೂಡ ಈಗ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ.

‘ಸಿನಿಮಾಗೆ ಗುಡ್‌ಬೈ’ ಎಂದಿದ್ದ ನಟನಿಗೆ ಲೋಕೇಶ್ ಕಾಲ್: ಒಂದೇ ಕ್ಷಣದಲ್ಲಿ ಬದಲಾದ ಜಯಂ ರವಿ ನಿರ್ಧಾರ!

ಚೆನ್ನೈ: ವಿಚ್ಛೇದನ ಪ್ರಕರಣ ಮತ್ತು ವೈಯಕ್ತಿಕ ವಿವಾದಗಳಿಂದ ಸುದ್ದಿಯಲ್ಲಿದ್ದ ನಟ ಜಯಂ ರವಿ, ಚಿತ್ರರಂಗದಿಂದ ತಾತ್ಕಾಲಿಕವಾಗಿ ದೂರ ಉಳಿಯುವುದಾಗಿ ಘೋಷಿಸಿದ್ದರೂ ಇದೀಗ ಭರ್ಜರಿ ಕಮ್‌ಬ್ಯಾಕ್‌ಗೆ ಸಜ್ಜಾಗಿದ್ದಾರೆ. ತಮಿಳು ಚಿತ್ರರಂಗದ ಸ್ಟಾರ್ ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಸಿನಿಮ್ಯಾಟಿಕ್ ಯೂನಿವರ್ಸ್‌ಗೆ ಸೇರ್ಪಡೆಯಾಗುವ ಮೂಲಕ ಅವರು ಹೊಸ ಅಧ್ಯಾಯ ಆರಂಭಿಸಿದ್ದಾರೆ.

ಲೋಕೇಶ್ ಕನಕರಾಜ್ ಬೆಂಬಲದಲ್ಲಿ ನಿರ್ಮಾಣವಾಗುತ್ತಿರುವ ‘ಬೆಂಜ್’ ಸಿನಿಮಾದ ಪ್ರಮುಖ ಪಾತ್ರಕ್ಕೆ ಜಯಂ ರವಿ ಆಯ್ಕೆಯಾಗಿದ್ದು, ಈ ಕುರಿತು ಅಧಿಕೃತ ಘೋಷಣೆ ಹೊರಬಿದ್ದಿದೆ. “ವೆಲ್ಕಮ್ ಟು ದಿ ಯೂನಿವರ್ಸ್” ಎಂದು ಲೋಕೇಶ್ ಹಂಚಿಕೊಂಡಿರುವ ಪೋಸ್ಟ್ ಇದೀಗ ವೈರಲ್ ಆಗಿದೆ.

ಕೆಲ ದಿನಗಳ ಹಿಂದಷ್ಟೇ ತಮ್ಮ ವೈಯಕ್ತಿಕ ಜೀವನದ ಒತ್ತಡದಿಂದ ಸಿನಿಮಾಗಳಿಂದ ದೂರ ಉಳಿಯುವುದಾಗಿ ಜಯಂ ರವಿ ಘೋಷಿಸಿದ್ದರು. ವಿಚ್ಛೇದನ ಪ್ರಕ್ರಿಯೆ ಮುಗಿಯುವವರೆಗೂ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ, ಈಗಿನ ಪರಿಸ್ಥಿತಿಯಲ್ಲಿ ನಟನೆಯತ್ತ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದರು.

ಸೈಬರ್ ಬುಲ್ಲಿಂಗ್, ವೈಯಕ್ತಿಕ ಆರೋಪಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ನಿಂದನೆಗಳು ತಮ್ಮ ಮೇಲೆ ಪರಿಣಾಮ ಬೀರಿವೆ ಎಂದು ರವಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಅಗತ್ಯವಿದ್ದರೆ ನಿರ್ಮಾಪಕರ ಹಣವನ್ನೂ ಹಿಂದಿರುಗಿಸಿ ವಿರಾಮ ಪಡೆಯುವುದಾಗಿ ತಿಳಿಸಿದ್ದರು.

ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ತಮಿಳು ಚಿತ್ರರಂಗದ ಅತ್ಯಂತ ಯಶಸ್ವಿ ಫ್ರಾಂಚೈಸಿಯಾಗಿರುವ ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಅವಕಾಶ ಸಿಕ್ಕಿರುವುದು ಜಯಂ ರವಿ ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿದೆ.

ಇದರ ಜೊತೆಗೆ ಗಾಯಕಿ ಕೆನಿಶಾ ಫ್ರಾನ್ಸಿಸ್ ಅವರೊಂದಿಗಿನ ಸಂಬಂಧದ ಕುರಿತ ಚರ್ಚೆಗಳೂ ಮುಂದುವರಿದಿವೆ. ಆದರೆ ವೈಯಕ್ತಿಕ ವಿವಾದಗಳ ನಡುವೆಯೇ ವೃತ್ತಿಜೀವನಕ್ಕೆ ಆದ್ಯತೆ ನೀಡಿರುವ ಜಯಂ ರವಿ, ಇದೀಗ ಮತ್ತೆ ಬಿಗ್ ಸ್ಕ್ರೀನ್‌ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.

ಶ್ರೀದೇವಿ ಹಾದಿಯಲ್ಲೇ ಜಾನ್ವಿ ಕಪೂರ್? ತೆಲುಗು ಭಾಷಣ ಸೆನ್ಸೇಶನ್!

ಹೈದರಾಬಾದ್: ಜೂನ್ 4ರಂದು ಬಿಡುಗಡೆಯಾಗಲಿರುವ ‘ಪೆದ್ದಿ’ ಚಿತ್ರದ ಪ್ರಚಾರದ ವೇಳೆ ನಟಿ ಜಾನ್ವಿ ಕಪೂರ್ ನೀಡಿರುವ ಒಂದು ಭಾಷಣ ಇದೀಗ ಟಾಲಿವುಡ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ವೇದಿಕೆಯಲ್ಲಿ ನಿರರ್ಗಳ ತೆಲುಗಿನಲ್ಲಿ ಮಾತನಾಡಿದ ಜಾನ್ವಿ, ಕೇವಲ ಸಿನಿಮಾ ಪ್ರಚಾರ ಮಾಡಲಿಲ್ಲ; ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ದೀರ್ಘಕಾಲದ ನೆಲೆ ಕಟ್ಟುವ ತಮ್ಮ ಉದ್ದೇಶವನ್ನೂ ಪರೋಕ್ಷವಾಗಿ ಬಹಿರಂಗಪಡಿಸಿದರು.

ರಾಮ್ ಚರಣ್ ಜೊತೆಗೆ ನಟಿಸಿರುವ ‘ಪೆದ್ದಿ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಜಾನ್ವಿ, ಪ್ರೇಕ್ಷಕರನ್ನು ರಂಜಿಸುವುದೇ ತಮ್ಮ ಜೀವನದ ಉದ್ದೇಶ ಎಂದು ಹೇಳಿದರು. ಭಾಷಣದ ಪೂರ್ಣ ಅವಧಿಯಲ್ಲಿ ಅವರು ತೋರಿದ ಭಾಷಾ ಪಾಂಡಿತ್ಯ ಮತ್ತು ಆತ್ಮವಿಶ್ವಾಸ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು.

ಚಿತ್ರರಂಗದಲ್ಲಿ ತಮ್ಮದೇ ಗುರುತು ಮೂಡಿಸಲು ಹೋರಾಟ ನಡೆಸುತ್ತಿರುವ ಜಾನ್ವಿ, ಈಗ ಪ್ಯಾನ್-ಇಂಡಿಯಾ ಸಿನಿಮಾಗಳತ್ತ ಸಂಪೂರ್ಣ ಗಮನ ಹರಿಸಿದ್ದಾರೆ. ಬಾಲಿವುಡ್‌ನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದರೂ, ದಕ್ಷಿಣ ಭಾರತದ ಮಾರುಕಟ್ಟೆಯೇ ತಮ್ಮ ಭವಿಷ್ಯಕ್ಕೆ ದೊಡ್ಡ ಅವಕಾಶ ನೀಡಲಿದೆ ಎಂಬ ಲೆಕ್ಕಾಚಾರದಲ್ಲಿ ಅವರು ಮುಂದುವರಿಯುತ್ತಿದ್ದಾರೆ ಎನ್ನಲಾಗುತ್ತಿದೆ.

ತೆಲುಗು ಚಿತ್ರರಂಗದಲ್ಲಿ ಒಮ್ಮೆ ಅಗ್ರಸ್ಥಾನದಲ್ಲಿದ್ದ ಶ್ರೀದೇವಿ ಅವರ ವಾರಸುದಾರೆಯಾಗಿ ಜಾನ್ವಿ ಈಗ ಅದೇ ಹಾದಿಯಲ್ಲಿ ಸಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ತಾಯಿಯಂತೆ ಭಾಷೆ, ಸಂಸ್ಕೃತಿ ಮತ್ತು ಪ್ರೇಕ್ಷಕರನ್ನು ಅಪ್ಪಿಕೊಳ್ಳುವ ಮೂಲಕ ದಕ್ಷಿಣದಲ್ಲಿ ಶಾಶ್ವತ ಸ್ಥಾನ ನಿರ್ಮಿಸಿಕೊಳ್ಳಲು ಅವರು ಮುಂದಾಗಿದ್ದಾರೆ.

ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡರೆ, ಜಾನ್ವಿ ಕಪೂರ್ ಅವರ ವೃತ್ತಿಜೀವನದಲ್ಲಿ ಇದು ಮಹತ್ವದ ತಿರುವಾಗಲಿದೆ. ಈಗಾಗಲೇ ಹಲವು ದಕ್ಷಿಣ ಭಾರತೀಯ ನಿರ್ಮಾಪಕರು ಅವರತ್ತ ಗಮನ ಹರಿಸಿದ್ದು, ‘ಪೆದ್ದಿ’ ಫಲಿತಾಂಶದ ಬಳಿಕ ಜಾನ್ವಿಯ ಬೇಡಿಕೆ ಹೊಸ ಎತ್ತರ ತಲುಪುವ ಸಾಧ್ಯತೆ ಇದೆ.

ಸೂಟು-ಬೂಟು ಧರಿಸುತ್ತಿರುವುದಕ್ಕೆ ಸ್ಪಷ್ಟನೆ ಕೊಟ್ಟ ಸಿಎಂ ವಿಜಯ್

ಮುಖ್ಯಮಂತ್ರಿಯಾದ ಬಳಿಕ ತಮ್ಮ ಉಡುಪು ಶೈಲಿಯಿಂದಲೇ ಸುದ್ದಿಯಾಗಿದ್ದ ದಳಪತಿ ವಿಜಯ್ ಇದೀಗ ಅದೇ ವಿಚಾರಕ್ಕೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಕಪ್ಪು-ಬಿಳಿ ಸೂಟ್ ಧರಿಸುವ ಕುರಿತು ಎದ್ದಿದ್ದ ಟೀಕೆಗಳಿಗೆ ಉತ್ತರಿಸಿದ ಅವರು, ವಿರೋಧ ಪಕ್ಷಗಳ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಿರುಚಿರಾಪಳ್ಳಿಯಲ್ಲಿ ನಡೆದ ಪಕ್ಷದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ವಿಜಯ್, “ನಾವು ಕೋಟ್ ಹಾಕಬಾರದೇ? ಅದು ಕೆಲವರ ಏಕಸ್ವಾಮ್ಯವಲ್ಲ. ನಾನು ಕಪ್ಪು-ಬಿಳಿ ಬಣ್ಣದ ಉಡುಪನ್ನು ಧರಿಸುವುದು ಪಾರದರ್ಶಕ ಆಡಳಿತದ ಸಂದೇಶಕ್ಕಾಗಿ” ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೇ ವಿಜಯ್ ಕೋಟ್-ಸೂಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೇ ವಿಚಾರ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಆದರೆ ಅದಕ್ಕೆ ತೆರೆ ಎಳೆದಿರುವ ಅವರು, “ನನ್ನ ಆಡಳಿತವೂ ಈ ಉಡುಪಿನಂತೆ ಸ್ಪಷ್ಟ ಮತ್ತು ಸರಳವಾಗಿರುತ್ತದೆ” ಎಂದು ಹೇಳಿದರು.

ಇದೇ ವೇಳೆ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ ಅವರು, “ಆರು ತಿಂಗಳು ಕಾಯುತ್ತೇವೆ ಎಂದವರು ಆರು ದಿನವೂ ಕಾಯಲಿಲ್ಲ. ಅಧಿಕಾರ ವಹಿಸಿಕೊಂಡ ಅರ್ಧ ಗಂಟೆಯಲ್ಲೇ ದೂರು ನೀಡಲು ಆರಂಭಿಸಿದರು” ಎಂದು ಟೀಕಿಸಿದರು.

“ತಮಿಳುನಾಡನ್ನು ವರ್ಷಗಳ ಕಾಲ ಆಳಿದ ಎರಡು ಪ್ರಮುಖ ಪಕ್ಷಗಳನ್ನು ಜನ ತಿರಸ್ಕರಿಸಿದ್ದಾರೆ. ನಾನು ಮುಖ್ಯಮಂತ್ರಿ ಸ್ಥಾನವನ್ನು ಅಧಿಕಾರವಾಗಿ ನೋಡುತ್ತಿಲ್ಲ. ಜನರ ಮನೆಯ ಅಣ್ಣ, ತಮ್ಮ ಹಾಗೂ ಸೇವಕನಾಗಿ ಕೆಲಸ ಮಾಡುತ್ತೇನೆ” ಎಂದು ಘೋಷಿಸಿದರು.

ವಿಜಯ್ ಅವರ ಈ ಭಾಷಣ ಹಾಗೂ ಸೂಟ್‌ ಕುರಿತ ಸ್ಪಷ್ಟನೆ ಇದೀಗ ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಇನ್ನೆರಡು ದಿನ ಕಾಯಿರಿ, ಎಲ್ಲವೂ ಗೊತ್ತಾಗಲಿದೆ: ಹೊಸ ರಾಜಕೀಯ ನಡೆ ಕುರಿತು ಕುತೂಹಲ ಮೂಡಿಸಿದ ಅಣ್ಣಾಮಲೈ

ಚೆನ್ನೈ: ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ರಾಜಕೀಯ ಭವಿಷ್ಯದ ಕುರಿತು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಅವರು ಬಿಜೆಪಿಗೆ ರಾಜೀನಾಮೆ ನೀಡಿ ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡಲಿದ್ದಾರೆ ಎಂಬ ಊಹಾಪೋಹಗಳು ಜೋರಾಗಿರುವ ನಡುವೆಯೇ, ಅಣ್ಣಾಮಲೈ ನೀಡಿರುವ ಪ್ರತಿಕ್ರಿಯೆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ನವದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ, “ಸ್ವಲ್ಪ ದಿನ ಕಾಯಿರಿ. ಇನ್ನೆರಡು ದಿನಗಳಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಮಾತನಾಡೋಣ. ಆಗ ಎಲ್ಲವೂ ಸ್ಪಷ್ಟವಾಗುತ್ತದೆ” ಎಂದು ಹೇಳುವ ಮೂಲಕ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಯಾವುದೇ ಸ್ಪಷ್ಟನೆ ನೀಡದೇ ಸಸ್ಪೆನ್ಸ್ ಉಳಿಸಿಕೊಂಡರು.

ಅಣ್ಣಾಮಲೈ ಅವರ ದೆಹಲಿ ಪ್ರವಾಸ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಮೂಲಗಳ ಪ್ರಕಾರ, ಅವರು ಬಿಜೆಪಿ ರಾಷ್ಟ್ರೀಯ ನಾಯಕತ್ವದೊಂದಿಗೆ ಮಹತ್ವದ ಸಭೆ ನಡೆಸಲಿದ್ದು, ಪಕ್ಷದಲ್ಲಿ ತಮ್ಮ ಮುಂದಿನ ಪಾತ್ರ ಹಾಗೂ ಭವಿಷ್ಯದ ಕಾರ್ಯತಂತ್ರಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಿರಿಯ ನಾಯಕರನ್ನು ಭೇಟಿಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಹೊಸ ಪಕ್ಷ ಘೋಷಣೆ ಸಾಧ್ಯತೆ?

ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿಗಳ ಪ್ರಕಾರ, ಜೂನ್ 4ರಂದು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಅಣ್ಣಾಮಲೈ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಮಧುರೈ ಹಾಗೂ ಕೊಯಮತ್ತೂರು ಸೇರಿದಂತೆ ಹಲವು ನಗರಗಳಲ್ಲಿ ಅಣ್ಣಾಮಲೈ ಅವರನ್ನು “2.0 ಅವತಾರ” ಎಂದು ಬಿಂಬಿಸುವ ಬೃಹತ್ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದು, ಅಭಿಮಾನಿಗಳು ಮತ್ತು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ತ್ರಿಭಾಷಾ ನೀತಿ ವಿಚಾರವೂ ಚರ್ಚೆಗೆ ಕಾರಣ

ಮಾಜಿ ಐಪಿಎಸ್ ಅಧಿಕಾರಿ ಆಗಿರುವ ಅಣ್ಣಾಮಲೈ ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ತ್ರಿಭಾಷಾ ನೀತಿ ಕುರಿತು ಬಹಿರಂಗವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೀತಿಯನ್ನು ಮರುಪರಿಶೀಲಿಸುವಂತೆ ಅವರು ಒತ್ತಾಯಿಸಿದ್ದು, ಬಿಜೆಪಿ ನಾಯಕತ್ವದ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎಂಬ ಊಹಾಪೋಹಗಳಿಗೆ ಇದೂ ಕಾರಣವಾಗಿತ್ತು.

ಎಐಎಡಿಎಂಕೆ ಮೈತ್ರಿ ಬಳಿಕ ನಾಯಕತ್ವ ಬದಲಾವಣೆ

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಮುಖವಾಗಿದ್ದ ಅಣ್ಣಾಮಲೈ ಅವರ ಆಕ್ರಮಣಕಾರಿ ರಾಜಕೀಯ ಶೈಲಿ ಸಾಕಷ್ಟು ಗಮನ ಸೆಳೆದಿತ್ತು. ಆದರೆ ನಂತರ ಎಐಎಡಿಎಂಕೆ ಮತ್ತೆ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗುವ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಪ್ರಮುಖ ಷರತ್ತಾಗಿದ್ದ ಹಿನ್ನೆಲೆಯಲ್ಲಿ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಯಿಸಲಾಗಿತ್ತು.

ಈ ಬೆಳವಣಿಗೆಗಳ ನಡುವೆ ಅಣ್ಣಾಮಲೈ ಬಿಜೆಪಿ ತೊರೆದು ಸ್ವತಂತ್ರ ರಾಜಕೀಯ ಹಾದಿ ಹಿಡಿಯಲಿದ್ದಾರೆಯೇ ಅಥವಾ ಪಕ್ಷದ ನಾಯಕತ್ವ ಅವರನ್ನು ಮನವೊಲಿಸಿ ಬಿಜೆಪಿಯಲ್ಲೇ ಮುಂದುವರಿಸಲಿದೆಯೇ ಎಂಬ ಪ್ರಶ್ನೆಗೆ ಮುಂದಿನ ಕೆಲ ದಿನಗಳಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ. ತಮಿಳುನಾಡು ರಾಜಕೀಯದ ಗಮನ ಈಗ ಸಂಪೂರ್ಣವಾಗಿ ಅಣ್ಣಾಮಲೈ ಅವರ ಮುಂದಿನ ಹೆಜ್ಜೆಯತ್ತ ನೆಟ್ಟಿದೆ.

ಮೂವರು ರೌಡಿಶೀಟರ್‌ʼಗಳಿಗೆ ಗಡಿಪಾರು: ಎಸ್ಪಿ ರೋಹನ್ ಜಗದೀಶ್ ಖಡಕ್ ಸಂದೇಶ

ಗದಗ: ಜಿಲ್ಲೆಯಲ್ಲಿನ ರೌಡಿಶೀಟರ್‌ಗಳು ಹಾಗೂ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಗದಗ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಿರಂತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಮೂವರು ಕುಖ್ಯಾತ ಆರೋಪಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಗಡಿಪಾರುಗೊಂಡವರನ್ನು ಮೈನುದ್ದೀನ್, ಫಕ್ರುಸಾಬ್ ಹಾಗೂ ಹಾಲಪ್ಪ ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಹಲವು ಗಂಭೀರ ಪ್ರಕರಣಗಳು ದಾಖಲಾಗಿರುವುದು ಪೊಲೀಸ್ ದಾಖಲೆಗಳಿಂದ ಬಹಿರಂಗವಾಗಿದೆ.

ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್

ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ, ಆರೋಪಿಗಳು ಕೊಲೆ ಯತ್ನ, ಗಲಭೆ, ಸಾರ್ವಜನಿಕ ಆಸ್ತಿ ಹಾನಿ, ಜೀವ ಬೆದರಿಕೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಅನೇಕ ಬಾರಿ ಪ್ರಕರಣ ದಾಖಲಾಗಿದ್ದರೂ ತಮ್ಮ ಚಟುವಟಿಕೆಗಳನ್ನು ನಿಲ್ಲಿಸದೇ ಪುನಃ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆ ಸಮಾಜದ ಶಾಂತಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಗಡಿಪಾರು ಕ್ರಮ ಜಾರಿಗೊಳಿಸಲಾಗಿದೆ.

ಮೈನುದ್ದೀನ್ ವಿರುದ್ಧ 5 ಗಂಭೀರ ಪ್ರಕರಣಗಳು

ಮೈನುದ್ದೀನ್ ವಿರುದ್ಧ 2017ರಿಂದ 2026ರವರೆಗೆ ಒಟ್ಟು 5 ಪ್ರಕರಣಗಳು ದಾಖಲಾಗಿವೆ. ಗಲಭೆ, ಕೊಲೆ ಯತ್ನ, ದರೋಡೆ, ಸಾರ್ವಜನಿಕ ಆಸ್ತಿ ಹಾನಿ ಹಾಗೂ ಜೀವ ಬೆದರಿಕೆ ಪ್ರಕರಣಗಳಲ್ಲಿ ಈತನ ಹೆಸರು ಕೇಳಿ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫಕ್ರುಸಾಬ್ ವಿರುದ್ಧ 10 ಪ್ರಕರಣಗಳು!

ಫಕ್ರುಸಾಬ್ ವಿರುದ್ಧ 2017ರಿಂದ 2025ರವರೆಗೆ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ಗಲಭೆ, ಹಲ್ಲೆ, ಕೊಲೆ ಯತ್ನ ಹಾಗೂ ಸಮಾಜದ ಶಾಂತಿ ಭಂಗಪಡಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪಗಳಿವೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ವರ್ತನೆ ಬದಲಾಗದ ಹಿನ್ನೆಲೆ ಪೊಲೀಸರು ಗಡಿಪಾರು ಅಸ್ತ್ರ ಪ್ರಯೋಗಿಸಿದ್ದಾರೆ.

ಹಾಲಪ್ಪ ವಿರುದ್ಧ 12 ಪ್ರಕರಣಗಳ ಪಟ್ಟಿ!

ಹಾಲಪ್ಪ ವಿರುದ್ಧ ಅತ್ಯಧಿಕವಾಗಿ 12 ಪ್ರಕರಣಗಳು ದಾಖಲಾಗಿವೆ. ಗಲಭೆ, ಬೆದರಿಕೆ, ಸಾರ್ವಜನಿಕ ಆಸ್ತಿ ಹಾನಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಗಳಿವೆ. 2017ರಿಂದ 2025ರವರೆಗೆ ನಿರಂತರವಾಗಿ ಪ್ರಕರಣಗಳು ದಾಖಲಾಗಿರುವುದರಿಂದ ಈತನ ವಿರುದ್ಧವೂ ಕಠಿಣ ಕ್ರಮ ಜಾರಿಯಾಗಿದೆ.

ಅಪರಾಧಿಗಳಿಗೆ ಜಿಲ್ಲೆಯಲ್ಲಿ ಜಾಗ” – ಎಸ್ಪಿ ರೋಹನ್ ಜಗದೀಶ್

ಜಿಲ್ಲೆಯಲ್ಲಿ ಸಮಾಜ ವಿರೋಧಿ ಚಟುವಟಿಕೆಗಳಿಗೆ ಯಾವುದೇ ಅವಕಾಶ ನೀಡುವುದಿಲ್ಲ. ಸಾರ್ವಜನಿಕ ಶಾಂತಿ ಕದಡುವವರ ವಿರುದ್ಧ ಮುಂದೆಯೂ ಗಡಿಪಾರು ಸೇರಿದಂತೆ ಕಠಿಣ ಕಾನೂನು ಕ್ರಮ ಮುಂದುವರಿಯಲಿದೆ” ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರೋಹನ್ ಜಗದೀಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹೆಂಡತಿಯ ಈ ನಡವಳಿಕೆಗಳು ದಾಂಪತ್ಯ ಜೀವನಕ್ಕೆ ಮುಳುವಾಗಬಹುದು!

ಗಂಡ-ಹೆಂಡತಿ ಸಂಬಂಧವು ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿಂತಿರುವ ಪವಿತ್ರ ಬಾಂಧವ್ಯವಾಗಿದೆ.

ಆದರೆ ಕೆಲವು ನಡವಳಿಕೆಗಳು ಮತ್ತು ತಪ್ಪು ತಿಳುವಳಿಕೆಗಳು ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿಸಿ ಸಂಬಂಧದ ಮಧುರತೆಯನ್ನು ಹಾಳು ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ದಾಂಪತ್ಯ ಜೀವನ ಸುಗಮವಾಗಿ ಸಾಗಬೇಕಾದರೆ ಇಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದು ಹಾಗೂ ಪರಸ್ಪರ ಭಾವನೆಗಳಿಗೆ ಗೌರವ ನೀಡುವುದು ಅಗತ್ಯ. ಅದರಲ್ಲೂ ಕೆಲವು ಅಭ್ಯಾಸಗಳು ಸಂಬಂಧದಲ್ಲಿ ಅನಗತ್ಯ ಒತ್ತಡ ಮತ್ತು ಮನಸ್ತಾಪಗಳಿಗೆ ಕಾರಣವಾಗಬಹುದು ಎನ್ನಲಾಗುತ್ತಿದೆ.

ಅನುಮಾನ ಸಂಬಂಧಕ್ಕೆ ಮಾರಕ:

ಪ್ರತಿಯೊಂದು ಸಣ್ಣ ವಿಚಾರಕ್ಕೂ ಸಂಗಾತಿಯ ಮೇಲೆ ಅನುಮಾನ ವ್ಯಕ್ತಪಡಿಸುವುದು ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ನಿರಂತರ ಅನುಮಾನದಿಂದ ಪರಸ್ಪರ ನಂಬಿಕೆ ಕುಗ್ಗಿ, ಗಂಡ-ಹೆಂಡತಿ ನಡುವಿನ ಅಂತರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕುಟುಂಬ ಸಲಹೆಗಾರರು ಹೇಳುತ್ತಾರೆ.

ಇತರರೊಂದಿಗೆ ಹೋಲಿಕೆ ಬೇಡ:

ಕೆಲವರು ತಮ್ಮ ಸಂಗಾತಿಯನ್ನು ಇತರರೊಂದಿಗೆ ಹೋಲಿಸುವ ಅಭ್ಯಾಸ ಹೊಂದಿರುತ್ತಾರೆ. “ಅವರು ಹೀಗೆ ಮಾಡುತ್ತಾರೆ, ನೀವು ಯಾಕೆ ಮಾಡುವುದಿಲ್ಲ” ಎಂಬ ಮಾತುಗಳು ಸಂಬಂಧದಲ್ಲಿ ಅಸಮಾಧಾನ ಮೂಡಿಸಬಹುದು. ಇಂತಹ ಹೋಲಿಕೆಗಳು ಆತ್ಮವಿಶ್ವಾಸಕ್ಕೆ ಧಕ್ಕೆ ತರುವುದರ ಜೊತೆಗೆ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಹೆಚ್ಚಿಸಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ಅತಿಯಾದ ನಿರೀಕ್ಷೆ ಒತ್ತಡಕ್ಕೆ ಕಾರಣ:

ಆರ್ಥಿಕ ಸಾಮರ್ಥ್ಯವನ್ನು ಪರಿಗಣಿಸದೆ ಅತಿಯಾದ ಬೇಡಿಕೆಗಳು ಅಥವಾ ನಿರೀಕ್ಷೆಗಳನ್ನು ಇಡುವುದು ಕುಟುಂಬದಲ್ಲಿ ಹಣಕಾಸಿನ ಒತ್ತಡವನ್ನು ಹೆಚ್ಚಿಸಬಹುದು. ಇದು ದಾಂಪತ್ಯ ಜೀವನದಲ್ಲಿ ಅನಗತ್ಯ ಜಗಳಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

ಸಣ್ಣ ವಿಚಾರಕ್ಕೂ ಜಗಳ ಬೇಡ;

ಸಣ್ಣಪುಟ್ಟ ವಿಷಯಗಳನ್ನು ದೊಡ್ಡದಾಗಿ ಪರಿಗಣಿಸಿ ಪದೇ ಪದೇ ಜಗಳವಾಡುವುದು ಅಥವಾ ಸಂಗಾತಿಯೊಂದಿಗೆ ಕಠಿಣವಾಗಿ ವರ್ತಿಸುವುದು ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕೆಲಸದ ಒತ್ತಡದಿಂದ ಮನೆಗೆ ಬರುವ ಸಂಗಾತಿಗೆ ಸಹಾನುಭೂತಿ ಮತ್ತು ಪ್ರೀತಿಯಿಂದ ವರ್ತಿಸುವುದು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಒಟ್ಟಾರೆ, ಪರಸ್ಪರ ನಂಬಿಕೆ, ಗೌರವ ಮತ್ತು ಸಂವಹನವೇ ಯಶಸ್ವಿ ದಾಂಪತ್ಯ ಜೀವನದ ಮೂಲಾಧಾರಗಳಾಗಿದ್ದು, ಇವುಗಳನ್ನು ಕಾಪಾಡಿಕೊಂಡರೆ ಸಂಬಂಧ ದೀರ್ಘಕಾಲ ಸುಂದರವಾಗಿ ಉಳಿಯುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಂಗಾಳಕೊಲ್ಲಿಯಲ್ಲಿ 4.6 ತೀವ್ರತೆಯ ಭೂಕಂಪ; 10 ಕಿ.ಮೀ ಆಳದಲ್ಲಿ ನಡುಗಿದ ಭೂಮಿ

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಮಂಗಳವಾರ ಬೆಳಗ್ಗೆ 4.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಈ ಕುರಿತು ಮಾಹಿತಿ ನೀಡಿದೆ. ಭೂಕಂಪವು ಜೂನ್ 2ರಂದು ಬೆಳಗ್ಗೆ 7:43ರ ಸುಮಾರಿಗೆ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಕೇಂದ್ರ ತಿಳಿಸಿದೆ.

ಎನ್‌ಸಿಎಸ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಭೂಕಂಪದ ಕೇಂದ್ರಬಿಂದು 14.027 ಉತ್ತರ ಅಕ್ಷಾಂಶ ಹಾಗೂ 93.132 ಪೂರ್ವ ರೇಖಾಂಶದಲ್ಲಿ ದಾಖಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಎನ್‌ಸಿಎಸ್, ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆಯ ಭೂಕಂಪ ದಾಖಲಾಗಿದ್ದು, ಅದರ ಕೇಂದ್ರ ಬಂಗಾಳಕೊಲ್ಲಿಯ ಪ್ರದೇಶದಲ್ಲಿದೆ ಎಂದು ತಿಳಿಸಿದೆ.

ಸದ್ಯಕ್ಕೆ ಭೂಕಂಪದಿಂದ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಆದಾಗ್ಯೂ, ಸಂಬಂಧಿತ ಇಲಾಖೆಗಳು ಪರಿಸ್ಥಿತಿಯ ಮೇಲೆ ನಿಗಾ ವಹಿಸಿವೆ.

ಇದಕ್ಕೂ ಮುನ್ನ ಫೆಬ್ರವರಿ 11ರಂದು ಬಂಗಾಳಕೊಲ್ಲಿಯಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಬೆಳಗ್ಗೆ 5:12ರ ವೇಳೆಗೆ ಸಂಭವಿಸಿದ್ದ ಆ ಭೂಕಂಪವೂ 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದ್ದು, ಅದರ ಕೇಂದ್ರಬಿಂದು 14.94 ಉತ್ತರ ಅಕ್ಷಾಂಶ ಮತ್ತು 90.18 ಪೂರ್ವ ರೇಖಾಂಶದಲ್ಲಿತ್ತು ಎಂದು ಎನ್‌ಸಿಎಸ್ ತಿಳಿಸಿತ್ತು.

ಭೂಕಂಪಗಳ ಆಳವನ್ನು ಹೇಗೆ ವರ್ಗೀಕರಿಸಲಾಗುತ್ತದೆ?

ಭೂಮಿಯ ಮೇಲ್ಮೈಯಿಂದ ಸುಮಾರು 700 ಕಿಲೋಮೀಟರ್ ಆಳದವರೆಗೂ ಭೂಕಂಪಗಳು ಸಂಭವಿಸಬಹುದು. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಭೂಕಂಪಗಳನ್ನು ಅವುಗಳ ಆಳದ ಆಧಾರದ ಮೇಲೆ ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ.

  • ಆಳವಿಲ್ಲದ ಭೂಕಂಪಗಳು: 0 ರಿಂದ 70 ಕಿ.ಮೀ ಆಳದವರೆಗೆ
  • ಮಧ್ಯಂತರ ಭೂಕಂಪಗಳು: 70 ರಿಂದ 300 ಕಿ.ಮೀ ಆಳದವರೆಗೆ
  • ಆಳವಾದ ಭೂಕಂಪಗಳು: 300 ರಿಂದ 700 ಕಿ.ಮೀ ಆಳದವರೆಗೆ

ಸಾಮಾನ್ಯವಾಗಿ 70 ಕಿಲೋಮೀಟರ್‌ಗಿಂತ ಹೆಚ್ಚಿನ ಆಳದಲ್ಲಿ ಸಂಭವಿಸುವ ಭೂಕಂಪಗಳನ್ನು ‘ಡೀಪ್-ಫೋಕಸ್’ ಭೂಕಂಪಗಳು ಎಂದು ಕರೆಯಲಾಗುತ್ತದೆ. ಈ ಬಾರಿ ಬಂಗಾಳಕೊಲ್ಲಿಯಲ್ಲಿ ಸಂಭವಿಸಿರುವ ಭೂಕಂಪವು ಕೇವಲ 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿರುವುದರಿಂದ ಇದು ಆಳವಿಲ್ಲದ ಭೂಕಂಪಗಳ ವರ್ಗಕ್ಕೆ ಸೇರಿದೆ.

error: Content is protected !!