Home Blog Page 68

ಡಿಕೆಶಿ ಗುಂಪು ರಾಜಕೀಯ ಮಾಡುವವರಲ್ಲ; ಹೈಕಮಾಂಡ್ ತೀರ್ಮಾನವೇ ಅಂತಿಮ – ಶಾಸಕ ಬಾಲಕೃಷ್ಣ

ನವದೆಹಲಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುಂಪು ಕಟ್ಟಿಕೊಂಡು ರಾಜಕೀಯ ಮಾಡುವ ವ್ಯಕ್ತಿಯಲ್ಲ. ಅವರು ಹೈಕಮಾಂಡ್‌ಗೆ ಸಂಪೂರ್ಣ ನಿಷ್ಠೆಯಿಂದಿರುವ ನಾಯಕ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಚರ್ಚೆಗೆ ಕರೆದಿರುವ ಹಿನ್ನೆಲೆಯಲ್ಲಿ ಮಹತ್ವದ ತೀರ್ಮಾನ ಹೊರಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಪಕ್ಷದೊಳಗಿನ ಗೊಂದಲಗಳಿಗೆ ಶೀಘ್ರ ಅಂತ್ಯವಾಗಬೇಕು. ಎಲ್ಲವೂ ಸ್ಪಷ್ಟವಾಗಬೇಕು. ಈ ವಿಚಾರಕ್ಕೆ ಹೈಕಮಾಂಡ್ ತೆರೆ ಎಳೆಯಬೇಕು ಎಂದು ಮನವಿ ಮಾಡಿದರು.

ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಕೆಲ ಆಪ್ತ ಸಚಿವರು ದೆಹಲಿಗೆ ತೆರಳಿರುವ ಕುರಿತು ಪ್ರತಿಕ್ರಿಯಿಸಿದ ಬಾಲಕೃಷ್ಣ, “ಡಿ.ಕೆ. ಶಿವಕುಮಾರ್ ಗುಂಪು ಕಟ್ಟಿಕೊಂಡು ರಾಜಕೀಯ ಮಾಡುವವರಲ್ಲ. ಅವರು ಯಾವಾಗಲೂ ಹೈಕಮಾಂಡ್‌ಗೆ ಬದ್ಧರಾಗಿರುವವರು” ಎಂದು ಹೇಳಿದರು.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಯಾರನ್ನೂ ವಿಶೇಷವಾಗಿ ಕರೆದುಕೊಂಡು ಹೋಗಿಲ್ಲ. ರಾಜಕೀಯ ಕುತೂಹಲದಿಂದ ಕೆಲ ಸಚಿವರು ಸ್ವಯಂಪ್ರೇರಿತವಾಗಿ ಹೋಗಿರಬಹುದು. ಈ ಹಿಂದೆ ಸಹ ಸಿಎಂ ದೆಹಲಿಗೆ ತೆರಳಿದಾಗ ಸಚಿವರು ಜೊತೆಯಾಗಿರುವ ಉದಾಹರಣೆಗಳಿವೆ. ಇದು ಹೊಸ ಬೆಳವಣಿಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.

“ಪಕ್ಷದೊಳಗಿನ ಗೊಂದಲಗಳು ನಿವಾರಣೆಯಾದರೆ 2028ರ ವಿಧಾನಸಭಾ ಚುನಾವಣೆಗೆ ಅನುಕೂಲವಾಗಲಿದೆ. ನಮಗೆ ಮುಂದಿನ ಚುನಾವಣೆ ಮುಖ್ಯ. ಆದರೆ ನಾವು ಮಾತನಾಡಿದ ಕೂಡಲೇ ಏನೂ ಆಗುವುದಿಲ್ಲ. ಅನಗತ್ಯ ಗೊಂದಲ ಸೃಷ್ಟಿಯಾಗಬಾರದು. ಹೈಕಮಾಂಡ್‌ಗೆ ಎಲ್ಲ ವಿಚಾರಗಳೂ ಗೊತ್ತಿವೆ. ಅಂತಿಮವಾಗಿ ಅವರ ತೀರ್ಮಾನವೇ ಪಕ್ಷಕ್ಕೆ ಮಾನ್ಯ” ಎಂದು ಬಾಲಕೃಷ್ಣ ಹೇಳಿದರು.

ಗದಗ-ಬೆಟಗೇರಿಯಲ್ಲಿ ಓಪನ್ ಡ್ರಿಂಕ್ ದಂಧೆ ಬಯಲು! ವೈನ್ ಶಾಪ್ ಹೆಸರಿನಲ್ಲಿ ಓಪನ್ ಬಾರ್ ದಂಧೆ- ಪೊಲೀಸರ ದಾಳಿ

ಗದಗ: ನಗರದಲ್ಲಿ ವೈನ್ ಶಾಪ್‌ಗಳ ಹೆಸರಿನಲ್ಲಿ ಅಕ್ರಮ ಮದ್ಯ ದಂಧೆ ನಡೆಯುತ್ತಿರುವುದು ಬೆಟಗೇರಿ ಪೊಲೀಸರ ಎರಡು ಪ್ರತ್ಯೇಕ ದಾಳಿಗಳಲ್ಲಿ ಬಯಲಾಗಿದೆ. ಅಂಗಡಿಯೊಳಗೇ ಗ್ರಾಹಕರಿಗೆ ಕುಳಿತು ಮದ್ಯ ಸೇವನೆಗೆ ಅವಕಾಶ ನೀಡುವುದು, ಸಾರ್ವಜನಿಕ ರಸ್ತೆಯಲ್ಲೇ ವಿಸ್ಕಿ ಮಾರಾಟಕ್ಕೆ ಸಿದ್ಧತೆ ನಡೆಸುವುದು ಸೇರಿದಂತೆ ಲೈಸೆನ್ಸ್ ಉಲ್ಲಂಘನೆ ಪ್ರಕರಣಗಳು ಬೆಳಕಿಗೆ ಬಂದಿವೆ.

ನಗರದ ವೆಂಕಟೇಶ ಟಾಕೀಸ್ ರಸ್ತೆಯಲ್ಲಿರುವ ರಾಜೇಶ್ ವೈನ್ ಶಾಪ್ ಮೇಲೆ ಬೆಟಗೇರಿ ಬಡಾವಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ನಡೆದ ಕಾರ್ಯಾಚರಣೆಯಲ್ಲಿ ಅಂಗಡಿಯೊಳಗೇ ಗ್ರಾಹಕರು ಮದ್ಯ ಸೇವಿಸುತ್ತಿರುವುದು ಪತ್ತೆಯಾಯಿತು.

ಸ್ಥಳದಲ್ಲೇ ಮದ್ಯದ ಟೆಟ್ರಾ ಪ್ಯಾಕೆಟ್‌ಗಳು, ಬಳಸಿದ ಗ್ಲಾಸ್‌ಗಳು, ಪ್ಲಾಸ್ಟಿಕ್ ಟೇಬಲ್ ಹಾಗೂ ಸ್ಟೂಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂಗಡಿಯ ಮ್ಯಾನೇಜರ್ ಸುಧಾಕರ ವಿರುಪಣ್ಣ ಈಳಿಗೇರ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ನೀಡುತ್ತಿದ್ದರೆ, ಅಂಗಡಿ ಮಾಲೀಕ ರಾಜೇಶ್ ಮೋಹನ್ ಹುಯಿಲಗೋಳ ಲೈಸೆನ್ಸ್ ನಿಯಮ ಉಲ್ಲಂಘಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ, ಬೆಟಗೇರಿ ಮಂಜುನಾಥ ನಗರ ಕಣವಿ ಪ್ಲಾಟ್ ಪ್ರದೇಶದಲ್ಲಿ ಮನೆ ಮುಂದಿನ ರಸ್ತೆಯಲ್ಲೇ ಮದ್ಯ ಮಾರಾಟಕ್ಕೆ ಸಿದ್ಧತೆ ನಡೆಸುತ್ತಿದ್ದ ಆರೋಪದಡಿ ಬೆಟಗೇರಿ ಪೊಲೀಸರು ದಾಳಿ ನಡೆಸಿದರು.

ಸಿಪಿಐ ಡಿ.ಬಿ. ಶಿಂಧೆ ನೇತೃತ್ವದ ತಂಡ ನಡೆಸಿದ ದಾಳಿಯಲ್ಲಿ, ಶ್ರೀಕಾಂತ್ ಯಲ್ಲೋಸಾ ಪವಾರ್ (48) ಎಂಬಾತನಿಂದ 90 ಎಂ.ಎಲ್ ಗಾತ್ರದ ಡಿ.ಕೆ. ಡಬಲ್ ಕಿಕ್ ನೀಟ್ ವಿಸ್ಕಿ ಕಂಪನಿಯ 31 ಟೆಟ್ರಾ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ಜೊತೆಗೆ ಖಾಲಿ ಟೆಟ್ರಾ ಪ್ಯಾಕೆಟ್ ಹಾಗೂ ಎರಡು ಪ್ಲಾಸ್ಟಿಕ್ ಗ್ಲಾಸ್‌ಗಳನ್ನೂ ವಶಕ್ಕೆ ಪಡೆಯಲಾಗಿದೆ.

ಆರೋಪಿ ಅಮೃತ ವೈನ್ ಶಾಪ್‌ನಿಂದ ಮದ್ಯ ಖರೀದಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲು ವ್ಯವಸ್ಥೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲೇ ಮದ್ಯದ ಅಡ್ಡೆ ತೆರೆದು ಜನರ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದ ಆರೋಪವೂ ಕೇಳಿ ಬಂದಿದೆ. ಈ ಕುರಿತು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ
ಕರ್ನಾಟಕ ಅಬಕಾರಿ ಕಾಯ್ದೆ-1965ರ ಕಲಂ 32(3), 36 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೊಂದು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.45/2026
ಕರ್ನಾಟಕ ಅಬಕಾರಿ ಕಾಯ್ದೆ-1965ರ ಕಲಂ 32(3) ಅಡಿಯಲ್ಲಿ ದಾಖಲಾಗಿದೆ.

ಒಟ್ಟಿನಲ್ಲಿ ಅವಳಿ ನಗರದಲ್ಲಿ ವೈನ್ ಶಾಪ್‌ಗಳ ಹೆಸರಿನಲ್ಲಿ ಮಿನಿ ಬಾರ್‌ಗಳು ಹಾಗೂ ಅಕ್ರಮ ಮದ್ಯ ಮಾರಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ದಂಧೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿದ್ದಾರೆ.

‘ನಮ್ಮ ನೆಲದಲ್ಲಿ ಡ್ಯಾಂ ಕಟ್ಟ್ತೀವಿ… ತಡೆಯೋ ಶಕ್ತಿ ಯಾರಿಗೂ ಇಲ್ಲ’: ಗಣಿಗ ರವಿಕುಮಾರ್

0

ಮಂಡ್ಯ: ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಕರ್ನಾಟಕ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. “ಯಾರು ಏನೇ ಮಾಡಿದರೂ ಮೇಕೆದಾಟು ಡ್ಯಾಂ ನಿರ್ಮಾಣವನ್ನು ತಡೆಯಲು ಸಾಧ್ಯವಿಲ್ಲ” ಎಂದು ಅವರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, “ಮೇಕೆದಾಟು ಯೋಜನೆಯ ಡಿಪಿಆರ್ ಈಗಾಗಲೇ ಸಿದ್ಧವಾಗಿದೆ. ಸುಪ್ರೀಂಕೋರ್ಟ್ ಕೂಡ ಕಾವೇರಿ ಬೋರ್ಡ್ ಮೂಲಕ ವಿಷಯ ಬಗೆಹರಿಸಿಕೊಳ್ಳಿ ಎಂದು ಹೇಳಿದೆ. ಕಾನೂನು ಪ್ರಕ್ರಿಯೆ ನಮ್ಮ ಪರವಾಗಿಯೇ ಸಾಗುತ್ತಿದೆ” ಎಂದರು.

“ತಮಿಳುನಾಡಿಗೆ ನೀಡಬೇಕಾದ ನೀರನ್ನು ಕರ್ನಾಟಕ ಈಗಾಗಲೇ ನೀಡುತ್ತಿದೆ. ನಮ್ಮ ರಾಜ್ಯದ ಗಡಿಯಲ್ಲಿ ನಿರ್ಮಾಣವಾಗುವ ಡ್ಯಾಂ ಬಗ್ಗೆ ತಡೆಯೊಡ್ಡುವ ಹಕ್ಕು ಯಾರಿಗೂ ಇಲ್ಲ” ಎಂದು ಅವರು ತಿರುಗೇಟು ನೀಡಿದರು.

ಇದೇ ವೇಳೆ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, “ಕಳಸ-ಬಂಡೂರಿ ಯೋಜನೆಗೂ ಬಿಜೆಪಿ ಸರ್ಕಾರವೇ ಅಡ್ಡಿಯಾಗಿದೆ. ಗೋವಾದಲ್ಲೂ ಅವರ ಸರ್ಕಾರವೇ ಇದೆ. ಆದರೂ ಸಮಸ್ಯೆ ಬಗೆಹರಿಸಿಲ್ಲ” ಎಂದು ಆರೋಪಿಸಿದರು.

ಒಟ್ಟಾರೆಯಾಗಿ ಮೇಕೆದಾಟು ಯೋಜನೆ ಮತ್ತೆ ಕರ್ನಾಟಕ-ತಮಿಳುನಾಡು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದು, ಎರಡೂ ರಾಜ್ಯಗಳ ನಾಯಕರ ನಡುವೆ ವಾಕ್ಸಮರ ತೀವ್ರಗೊಂಡಿದೆ.

‘ಆ ಕಣ್ಣುಗಳೇ ಸಾಕು…’: ಶಿವಣ್ಣನ ಸ್ಕ್ರೀನ್ ಪ್ರೆಸೆನ್ಸ್ ನೋಡಿ ಫಿದಾ ಆದ ಜಾನ್ಹವಿ ಕಪೂರ್!

‘ಪೆದ್ದಿ’ ಚಿತ್ರದ ಮೂಲಕ ಕನ್ನಡದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜೊತೆ ತೆರೆ ಹಂಚಿಕೊಂಡಿರುವ ಬಾಲಿವುಡ್ ನಟಿ ಜಾನ್ಹವಿ ಕಪೂರ್, ಶಿವಣ್ಣನ ನಟನಾ ಶೈಲಿ ಹಾಗೂ ಕಣ್ಣಿನ ಎಕ್ಸ್‌ಪ್ರೆಶನ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರುದಲ್ಲಿ ನಡೆದ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಜಾನ್ಹವಿ, “ಶಿವರಾಜ್ ಕುಮಾರ್ ಸರ್ ಜೊತೆ ನನಗೆ ಒಂದು ಸೀನ್ ಮಾತ್ರ ಇತ್ತು. ಆದರೆ ಆ ಒಂದು ಸೀನ್ನಲ್ಲೇ ಅವರು ಎಷ್ಟು ಅದ್ಭುತ ನಟ ಅನ್ನೋದು ಗೊತ್ತಾಯ್ತು. ಅವರ ಕಣ್ಣುಗಳಲ್ಲೇ ಪವರ್ ಇದೆ. ಅವರು ಡೈಲಾಗ್ ಹೇಳೋದಕ್ಕಿಂತ ಕಣ್ಣಿನಿಂದಲೇ ಸೀನ್ ಹಿಡಿದುಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.

ಇನ್ನೂ ಅವರ ಜೊತೆ ಹೆಚ್ಚು ನಟಿಸುವ ಅವಕಾಶ ಸಿಗಲಿಲ್ಲ ಎಂಬ ಬೇಸರವನ್ನೂ ವ್ಯಕ್ತಪಡಿಸಿದ ಜಾನ್ಹವಿ, “ಭವಿಷ್ಯದಲ್ಲಿ ಮತ್ತೆ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಗಲಿ” ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಜಾನ್ಹವಿ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದ್ದು ವಿಶೇಷವಾಗಿತ್ತು. ಅಭಿಮಾನಿಗಳ ಚಪ್ಪಾಳೆಗಳ ನಡುವೆ ಅವರು ಕನ್ನಡದಲ್ಲಿ ಮಾತು ಆರಂಭಿಸಿದ್ದು ಗಮನ ಸೆಳೆಯಿತು.

‘ಪೆದ್ದಿ’ ಸಿನಿಮಾದಲ್ಲಿ ರಾಮ್ ಚರಣ್ ನಾಯಕನಾಗಿ ನಟಿಸಿದ್ದು, ಶಿವರಾಜ್ ಕುಮಾರ್ ಗೌಡ ನಾಯ್ಡು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಗಪತಿ ಬಾಬು, ದಿವ್ಯೇಂದು ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದ್ದು, ಎ.ಆರ್ ರೆಹಮಾನ್ ಸಂಗೀತ ನೀಡಿದ್ದಾರೆ.

ಸೈಬರ್ ಖದೀಮರ ಬಲೆಗೆ ಬಿದ್ದ ಪದ್ಮಶ್ರೀ ವಿಜೇತ: ಮಧ್ಯರಾತ್ರಿ ಬಂದ ಮೆಸೇಜ್ʼನಿಂದ ಕ್ಷಣಾರ್ಧದಲ್ಲಿ ಹಣ ಮಾಯಾ

ಬೆಂಗಳೂರು: ಸೈಬರ್ ವಂಚಕರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ದೇಶದ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕೃತರನ್ನೂ ಬಿಡದ ಮಟ್ಟಿಗೆ ವಂಚನೆ ಜಾಲ ವಿಸ್ತರಿಸಿದೆ. ಖ್ಯಾತ ಪ್ಯಾರಾ ಅಥ್ಲೀಟ್ ಹಾಗೂ ಪದ್ಮಶ್ರೀ ಪುರಸ್ಕೃತ ಕೆ.ವೈ. ವೆಂಕಟೇಶ್ ಅವರ ಬ್ಯಾಂಕ್ ಖಾತೆಯಿಂದ ಸುಮಾರು ₹90 ಸಾವಿರ ಹಣವನ್ನು ಸೈಬರ್ ಖದೀಮರು ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಹುಟ್ಟಿನಿಂದಲೇ ಅಕೊಂಡ್ರೋಪ್ಲಾಸಿಯಾ ಸಮಸ್ಯೆಯಿಂದ ಬಳಲುತ್ತಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಕೆ.ವೈ. ವೆಂಕಟೇಶ್, 50ಕ್ಕೂ ಹೆಚ್ಚು ಕ್ರೀಡಾಕೂಟಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವು 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ಇದೀಗ ಅವರೇ ಸೈಬರ್ ವಂಚಕರ ಬಲೆಗೆ ಬಿದ್ದಿದ್ದಾರೆ. ಕೆಲ ದಿನಗಳ ಹಿಂದೆ ಮಧ್ಯರಾತ್ರಿ ವೇಳೆ ಅವರ ಮೊಬೈಲ್ ಸಂಖ್ಯೆಗೆ ನಿರಂತರವಾಗಿ ಒಟಿಪಿ ಸಂದೇಶಗಳು ಬರುತ್ತಿದ್ದವು. ಅಸಮಯದಲ್ಲಿ ಸತತವಾಗಿ ಒಟಿಪಿ ಬರುತ್ತಿರುವುದರಿಂದ ಅನುಮಾನಗೊಂಡ ವೆಂಕಟೇಶ್, ಮರುದಿನ ಬೆಳಗ್ಗೆ ಬ್ಯಾಂಕ್ ಶಾಖೆಗೆ ತೆರಳಿ ಖಾತೆ ಪರಿಶೀಲಿಸಿದ್ದಾರೆ.

ಈ ವೇಳೆ ಹಂತ ಹಂತವಾಗಿ ಖಾತೆಯಿಂದ ಒಟ್ಟು ₹90 ಸಾವಿರ ಹಣ ಕಡಿತವಾಗಿರುವುದು ಬೆಳಕಿಗೆ ಬಂದಿದೆ. ವಿಶೇಷವೆಂದರೆ, ಯಾವುದೇ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳದಿದ್ದರೂ ಸಹ ಸೈಬರ್ ವಂಚಕರು ತಾಂತ್ರಿಕ ತಂತ್ರಗಳನ್ನು ಬಳಸಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಕೆ.ವೈ. ವೆಂಕಟೇಶ್ ಅವರು ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಂಚಕರ ಬ್ಯಾಂಕ್ ಖಾತೆ ಹಾಗೂ ಐಪಿ ಅಡ್ರೆಸ್ ಪತ್ತೆಹಚ್ಚಲು ಸೈಬರ್ ಕ್ರೈಂ ವಿಭಾಗದ ನೆರವಿನೊಂದಿಗೆ ತನಿಖೆ ಮುಂದುವರಿಸಿದ್ದಾರೆ.

ನಾಯಿ ಕಚ್ಚಿದ್ದನ್ನು ನೆಗ್ಲೆಕ್ಟ್‌ ಮಾಡಿದ ಯುವಕ: ಎರಡು ತಿಂಗಳ ಬಳಿಕ ದಾರುಣ ಸಾವು!

0

ಬಾಗಲಕೋಟೆ: ಒಂದು ಸಣ್ಣ ನಿರ್ಲಕ್ಷ್ಯವೇ ಯುವಕನ ಜೀವ ಕಸಿದುಕೊಂಡ ದಾರುಣ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಜಾತ್ರೆಯ ವೇಳೆ ಹುಚ್ಚು ನಾಯಿ ಕಚ್ಚಿದ್ದರೂ ರೇಬಿಸ್ ಲಸಿಕೆ ಪಡೆಯದೆ ಕಾಲಹರಣ ಮಾಡಿದ 22 ವರ್ಷದ ಯುವಕ ಇದೀಗ ರೇಬಿಸ್ ಸೋಂಕಿಗೆ ಬಲಿಯಾಗಿದ್ದಾನೆ.

ವಿಜಯಪುರ ಜಿಲ್ಲೆಯ ಗೋಲಸಂಗಿ ಗ್ರಾಮದ ಪ್ರದೀಪ್ ಚಂದ್ರಶೇಖರ ಹಳೇರೊಳ್ಳಿ ಕಳೆದ ಮಾರ್ಚ್‌ನಲ್ಲಿ ಮನ್ನಿಕೇರಿ ಚಂದ್ರಾದೇವಿ ಜಾತ್ರೆಗೆ ತೆರಳಿದ್ದ ವೇಳೆ ನಾಯಿಯ ಕಚ್ಚಿಗೆ ಒಳಗಾಗಿದ್ದ. ಆದರೆ ಗಾಯ ಗಂಭೀರವಲ್ಲ ಎಂದುಕೊಂಡು ಚಿಕಿತ್ಸೆ ಹಾಗೂ ರೇಬಿಸ್ ನಿರೋಧಕ ಲಸಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಕಳೆದ ಒಂದು ವಾರದಿಂದ ಆತನ ಆರೋಗ್ಯದಲ್ಲಿ ತೀವ್ರ ಏರುಪೇರು ಕಾಣಿಸಿಕೊಂಡಿದ್ದು, ರೇಬಿಸ್ ಲಕ್ಷಣಗಳು ದೃಢಪಟ್ಟ ಬಳಿಕ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಆದರೆ ಸೋಂಕು ದೇಹದಾದ್ಯಂತ ವ್ಯಾಪಿಸಿದ್ದರಿಂದ ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ತಡರಾತ್ರಿ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಯುವಕ ಮೃತಪಟ್ಟಿದ್ದಾನೆ. “ನಾಯಿ ಕಚ್ಚಿದ ಕೂಡಲೇ ರೇಬಿಸ್ ಲಸಿಕೆ ಪಡೆಯಲೇಬೇಕು, ಇಲ್ಲದಿದ್ದರೆ ಜೀವಕ್ಕೆ ಅಪಾಯ ಖಚಿತ” ಎಂಬ ಆರೋಗ್ಯ ಇಲಾಖೆಯ ಎಚ್ಚರಿಕೆಗೆ ಈ ಘಟನೆ ಮತ್ತೊಂದು ಗಂಭೀರ ಉದಾಹರಣೆಯಾಗಿದೆ.

ಆಗ್ರಾ-ಲಕ್ನೋ ಎಕ್ಸ್​ಪ್ರೆಸ್​ವೇಯಲ್ಲಿ ಬಸ್ ಪಲ್ಟಿ: ಆರು ಮಂದಿ ಸಾವು, ಹಲವರಿಗೆ ಗಾಯ

ಉನ್ನಾವೋ: ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ. 10ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ.

ಔರಾಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬಸ್ ಸಂಪೂರ್ಣ ಜಖಂಗೊಂಡಿದ್ದು, ಸ್ಥಳದಲ್ಲೇ ಹಲವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಮೃತರಲ್ಲಿ ಸಬ್ ಇನ್ಸ್‌ಪೆಕ್ಟರ್ ರಾಮಚಂದ್ರ ಮತ್ತು ಕೈದಿ ಛತ್ರಪಾಲ್ ಕೂಡ ಸೇರಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಇಬ್ಬರೂ ಸಿವಾನ್‌ನಿಂದ ದೆಹಲಿಗೆ ತೆರಳಿ ಹಿಂತಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣ ಲಕ್ನೋದ ಟ್ರಾಮಾ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ವೇಗವಾಗಿ ಚಲಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಪಲ್ಟಿಯಾಗಿದೆ ಎನ್ನಲಾಗಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

16ನೇ ಬಾರಿ ಜೈಲಿನಿಂದ ಹೊರಗೆ ಬಂದ ರಾಮ್ ರಹೀಮ್: ಮತ್ತೆ 30 ದಿನ ಪೆರೋಲ್ ನೀಡಿದ ಸರ್ಕಾರ!

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಮತ್ತೊಮ್ಮೆ 30 ದಿನಗಳ ಪೆರೋಲ್ ಮಂಜೂರು ಮಾಡಲಾಗಿದೆ. ಸಾಧ್ವಿಗಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಶಿಕ್ಷೆ ಅನುಭವಿಸುತ್ತಿರುವ ರಾಮ್ ರಹೀಮ್ ಸೋಮವಾರ ಬೆಳಗ್ಗೆ ಬಿಗಿ ಭದ್ರತೆಯ ನಡುವೆ ರೋಹ್ಟಕ್‌ನ ಸುನಾರಿಯಾ ಜೈಲಿನಿಂದ ಹೊರಬಂದು ಸಿರ್ಸಾ ಆಶ್ರಮಕ್ಕೆ ತೆರಳಿದ್ದಾರೆ.

ಈ ವರ್ಷ ಇದು ಅವರ ಎರಡನೇ ಪೆರೋಲ್ ಆಗಿದ್ದು, ಶಿಕ್ಷಾ ಅವಧಿಯಲ್ಲಿ ಒಟ್ಟು 16ನೇ ಬಾರಿ ಜೈಲು ಹೊರಗೆ ಬಂದಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ, 3,193 ದಿನಗಳ ಶಿಕ್ಷಾ ಅವಧಿಯಲ್ಲಿ ರಾಮ್ ರಹೀಮ್ ಈಗಾಗಲೇ 406 ದಿನಗಳನ್ನು ಜೈಲು ಹೊರಗೇ ಕಳೆದಿದ್ದಾರೆ ಎಂಬ ಮಾಹಿತಿ ಭಾರೀ ಚರ್ಚೆಗೆ ಕಾರಣವಾಗಿದೆ.

2017ರಲ್ಲಿ ಇಬ್ಬರು ಮಹಿಳಾ ಶಿಷ್ಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯ ರಾಮ್ ರಹೀಮ್‌ಗೆ 20 ವರ್ಷಗಳ ಶಿಕ್ಷೆ ವಿಧಿಸಿತ್ತು. ಬಳಿಕ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣ ಮತ್ತು ಡೇರಾ ಮ್ಯಾನೇಜರ್ ರಂಜಿತ್ ಸಿಂಗ್ ಕೊಲೆ ಸಂಚು ಪ್ರಕರಣದಲ್ಲೂ ಆತ ದೋಷಿ ಎಂದು ಘೋಷಿಸಲ್ಪಟ್ಟಿದ್ದ.

ಆದರೆ ನಂತರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಕೆಲ ಪ್ರಕರಣಗಳಲ್ಲಿ ರಾಮ್ ರಹೀಮ್‌ಗೆ ರಿಲೀಫ್ ನೀಡಿತ್ತು. ಇದೀಗ ಹರಿಯಾಣ ಉತ್ತಮ ನಡವಳಿಕೆ ಕೈದಿಗಳ ತಾತ್ಕಾಲಿಕ ಬಿಡುಗಡೆ ಕಾಯ್ದೆಯಡಿ ಮತ್ತೆ ಪೆರೋಲ್ ಸಿಕ್ಕಿದ್ದು, ಈ ನಿರ್ಧಾರ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಅಕ್ರಮ ಸಂಬಂಧ ಶಂಕೆ; ಗಾಢ ನಿದ್ದೆಯಲ್ಲಿದ್ದ ಪತಿಯ ಖಾಸಗಿ ಅಂಗ ಕತ್ತರಿಸಿದ ಪತ್ನಿ!

ಛತ್ತೀಸ್‌ಗಢದ: ಬಿಲಾಸ್‌ಪುರದಲ್ಲಿ ಕೌಟುಂಬಿಕ ಕಲಹ ಭೀಕರ ತಿರುವು ಪಡೆದುಕೊಂಡಿದ್ದು, ವಿವಾಹೇತರ ಸಂಬಂಧದ ಅನುಮಾನ ಹಿನ್ನೆಲೆ ಪತ್ನಿಯೊಬ್ಬಳು ಗಾಢ ನಿದ್ದೆಯಲ್ಲಿದ್ದ ಪತಿಯ ಖಾಸಗಿ ಅಂಗವನ್ನು ಕತ್ತಿಯಿಂದ ದಾಳಿ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ದಾಳಿಯಲ್ಲಿ ಪತಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡ ವ್ಯಕ್ತಿಯನ್ನು ರಾಜೇಶ್ ಕೌಶಿಕ್ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಮೇಸ್ತ್ರಿಯಾಗಿರುವ ರಾಜೇಶ್ ಮೇಲೆ ಅವರ ಪತ್ನಿ ದ್ರೌಪದಿ ಬಾಯಿ ದಾಳಿ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಯ ನಡುವೆ ಕಳೆದ ಕೆಲವು ತಿಂಗಳಿಂದ ನಿರಂತರ ಕೌಟುಂಬಿಕ ಜಗಳಗಳು ನಡೆಯುತ್ತಿದ್ದು, ರಾಜೇಶ್‌ಗೆ ಬೇರೆ ಮಹಿಳೆಯೊಂದಿಗೆ ಸಂಬಂಧವಿದೆ ಎಂಬ ಅನುಮಾನ ದ್ರೌಪದಿಗೆ ಇತ್ತು ಎನ್ನಲಾಗಿದೆ.

ಘಟನೆ ನಡೆದ ರಾತ್ರಿ ಇಬ್ಬರೂ ಊಟ ಮಾಡಿ ಮಲಗಿದ್ದರು. ಮಧ್ಯರಾತ್ರಿ ರಾಜೇಶ್ ಗಾಢ ನಿದ್ದೆಯಲ್ಲಿದ್ದ ವೇಳೆ ದ್ರೌಪದಿ ಕತ್ತಿಯಿಂದ ದಾಳಿ ನಡೆಸಿದ್ದಾಳೆ. ಗಂಭೀರವಾಗಿ ಗಾಯಗೊಂಡ ರಾಜೇಶ್ ಕಿರುಚುತ್ತಾ ಹೊರಗೆ ಓಡಿಬಂದಿದ್ದು, ಅವರ ಮಗ ಮತ್ತು ಸಂಬಂಧಿಕರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಸದ್ಯ ರಾಜೇಶ್ ಅವರನ್ನು ಸ್ಥಳೀಯ ಸಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಬೀದರ್ ಪಶು ವಿವಿ ಹಗರಣ ಸಾಬೀತು: ಮಾಜಿ ಉಪಕುಲಪತಿ ಸೇರಿ 6 ಮಂದಿ ಲೋಕಾಯುಕ್ತ ಬಲೆಗೆ

ಬೀದರ್: ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಬೀದರ್ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬಹುಕೋಟಿ ಹಗರಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸುಮಾರು 45 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವುದು ತನಿಖೆಯಲ್ಲಿ ಸಾಬೀತಾಗಿದ್ದು, ಲೋಕಾಯುಕ್ತ ಪೊಲೀಸರು ಮಾಜಿ ಉಪಕುಲಪತಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರಲ್ಲಿ ಪಶು ವಿವಿಯ ಮಾಜಿ ಉಪಕುಲಪತಿ ಪ್ರೊ. ಹೆಚ್.ಡಿ. ನಾರಾಯಣಸ್ವಾಮಿ, 2017-18ನೇ ಸಾಲಿನ ಹಣಕಾಸು ನಿಯಂತ್ರಣಾಧಿಕಾರಿಯಾಗಿದ್ದ ಕೆ.ಎಲ್. ಸುರೇಶ್, ಮೃತ್ಯುಂಜಯ ಹಿರೇಮಠ, ಬೊಪಣ್ಣ, ಮಂಜುನಾಥ ಹಾಗೂ ರಾಮಗೊಂಡ ಸೇರಿದ್ದಾರೆ.

ಏನಿದು ಹಗರಣ?

2017-18ರ ಅವಧಿಯಲ್ಲಿ ವಿಶ್ವವಿದ್ಯಾಲಯದ ವಿವಿಧ ಸಾಮಗ್ರಿಗಳ ಖರೀದಿಯ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 45 ಕೋಟಿ ರೂಪಾಯಿಗೂ ಹೆಚ್ಚು ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದಿತ್ತು. ಯಾವುದೇ ವಸ್ತುಗಳನ್ನು ಖರೀದಿಸದೇ ಖಾಸಗಿ ಎಂಟರ್‌ಪ್ರೈಸಸ್‌ಗಳ ಜೊತೆಗೂಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ವರ್ಗಾವಣೆ ಮಾಡಲಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಸಂಬಂಧ 2021ರಲ್ಲಿ ಲೋಕಾಯುಕ್ತ ಪೊಲೀಸರು ಮೊದಲ ಹಂತದ ದಾಳಿ ನಡೆಸಿದ್ದರು. ಬಳಿಕ ತನಿಖೆ ತೀವ್ರಗೊಳಿಸಿದ ಅಧಿಕಾರಿಗಳು 2025ರ ಸೆಪ್ಟೆಂಬರ್ 10ರಂದು ರಾಜ್ಯದ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ತನಿಖೆ ವೇಳೆ ವಿಶ್ವವಿದ್ಯಾಲಯದ ಉನ್ನತಾಧಿಕಾರಿಗಳು, ಸಿಬ್ಬಂದಿ ಹಾಗೂ ಖಾಸಗಿ ಸಂಸ್ಥೆಗಳ ಮಾಲೀಕರು ಸೇರಿ ಸಂಚು ರೂಪಿಸಿ ಅವ್ಯವಹಾರ ನಡೆಸಿರುವುದು ದೃಢಪಟ್ಟಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಬೀದರ್ ಜಿಲ್ಲಾ ಸತ್ರ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿತ್ತು. ಅದರ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ. ಲೋಕಾಯುಕ್ತ ಎಡಿಜಿಪಿ ಮನೀಷ್ ಕರಬಿಕರ್, ಐಜಿಪಿ ಡಾ. ಎ.ಎಸ್. ಸುಬ್ರಮಣ್ಯೇಶ್ವರ ಹಾಗೂ ಎಸ್‌ಪಿ ಸಿ & ಟಿ ಬದ್ರಿನಾಥ್ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆದಿದ್ದು, ಎಸ್‌ಪಿ ಸಿದ್ದರಾಜು ನೇತೃತ್ವದಲ್ಲಿ ಬೀದರ್ ಲೋಕಾಯುಕ್ತ ಡಿಎಸ್ಪಿ ಹಣಮಂತರಾಯ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.

error: Content is protected !!