Home Blog Page 8

ಕಾರ್ಯಕ್ರಮಗಳಲ್ಲಿ ದೀಪ ಬೆಳಗುವುದೇಕೆ? ಇದರ ಹಿಂದಿರುವ ಆಧ್ಯಾತ್ಮಿಕ ಮಹತ್ವ ತಿಳಿಯಿರಿ!

0

ಹೊಸ ಕಚೇರಿ ಅಥವಾ ಅಂಗಡಿ ಉದ್ಘಾಟನೆ ವೇಳೆ ಸಾಮಾನ್ಯವಾಗಿ ಟೇಪ್ ಕತ್ತರಿಸುವ ಪದ್ಧತಿ ಕಂಡುಬರುತ್ತದೆ.

ಆದರೆ ಭಾರತೀಯ ಸಂಪ್ರದಾಯದಲ್ಲಿ ದೀಪ ಬೆಳಗುವ ಆಚರಣೆಗೆ ವಿಶೇಷ ಮಹತ್ವ ನೀಡಲಾಗಿದೆ. ಯಾವುದೇ ಶುಭ ಕಾರ್ಯವನ್ನು ದೀಪ ಬೆಳಗುವುದರ ಮೂಲಕ ಆರಂಭಿಸುವುದು ನಮ್ಮ ಸಂಸ್ಕೃತಿಯ ಒಂದು ಪ್ರಮುಖ ಭಾಗವಾಗಿದೆ.

“ದೀಪಂ ಜ್ಯೋತಿ ಪರಬ್ರಹ್ಮ, ದೀಪಂ ಜ್ಯೋತಿ ಜನಾರ್ದನಃ:
ದೀಪೋ ಹರತು ಮೇ ಪಾಪಾನಿ, ಸಂಧ್ಯಾ ದೀಪ ನಮೋಸ್ತುತೇ” ಎಂಬ ಶ್ಲೋಕದ ಪ್ರಕಾರ, ದೀಪವು ಪರಬ್ರಹ್ಮನ ಸ್ವರೂಪವಾಗಿದ್ದು ಪಾಪಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗಿದೆ. ಭಗವಂತನಿಗೆ ನೈವೇದ್ಯ ಅರ್ಪಿಸುವುದೂ ಸಹ ಅಗ್ನಿಯ ಮುಖಾಂತರವೇ ನಡೆಯುತ್ತದೆ. ಅದಕ್ಕಾಗಿ ದೀಪವನ್ನು ದೇವರ ಪ್ರತೀಕವಾಗಿ ಪರಿಗಣಿಸಲಾಗುತ್ತದೆ.

ದೀಪದ ಜ್ವಾಲೆ ಯಾವಾಗಲೂ ಮೇಲ್ಮುಖವಾಗಿ ಉರಿಯುತ್ತದೆ. ಈ ಮೇಲ್ಮುಖ ಚಲನೆಯು ಅಭಿವೃದ್ಧಿ, ಪ್ರಗತಿ ಮತ್ತು ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಅನಾದಿಕಾಲದಿಂದಲೂ ಯಾವುದೇ ಕಾರ್ಯಕ್ರಮವನ್ನು ದೀಪ ಬೆಳಗುವುದರಿಂದಲೇ ಆರಂಭಿಸುವ ಪದ್ಧತಿ ಇದೆ.

ಮನೆಗಳಲ್ಲಿ ಕೂಡ ಬೆಳಗಿನ ಪೂಜೆ ಮಾಡುವ ಮೊದಲು ದೀಪ ಹಚ್ಚುವುದು ರೂಢಿಯಾಗಿದೆ. ದೀಪಾವಳಿ ಹಬ್ಬದಲ್ಲಿ ಮನೆ ತುಂಬಾ ದೀಪಗಳನ್ನು ಬೆಳಗಿಸುವುದು ಶುಭದ ಸಂಕೇತವೆಂದು ನಂಬಲಾಗಿದೆ.

ದೀಪವು ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುತ್ತದೆ ಎಂದು ಹೇಳಲಾಗುತ್ತದೆ. ದೀಪದ ಬೆಳಕು ಅಜ್ಞಾನವನ್ನು ದೂರ ಮಾಡಿ ಜ್ಞಾನದ ಬೆಳಕನ್ನು ನೀಡುತ್ತದೆ ಎಂಬ ನಂಬಿಕೆಯೂ ಇದೆ.

ಸಭೆ-ಸಮಾರಂಭಗಳಲ್ಲಿ ದೀಪ ಬೆಳಗುವುದು ಅಗ್ನಿದೇವರಿಗೆ ಪ್ರಾರ್ಥನೆ ಸಲ್ಲಿಸುವ ಸಂಕೇತವಾಗಿದೆ. ಅಗ್ನಿ ಪಂಚಭೂತಗಳಲ್ಲಿ ಒಂದಾಗಿದ್ದು (ಆಕಾಶ, ಭೂಮಿ, ಅಗ್ನಿ, ನೀರು, ವಾಯು) ಪ್ರಕೃತಿಯ ಸಮತೋಲನವನ್ನು ಕಾಯುವ ಶಕ್ತಿಯಾಗಿದೆ.

ಸಣ್ಣ ಅಥವಾ ದೊಡ್ಡ ವ್ಯಾಪಾರ ಆರಂಭಿಸುವಾಗ ದೀಪ ಬೆಳಗಿದರೆ ಆ ಸ್ಥಳದಲ್ಲಿರುವ ಋಣಾತ್ಮಕ ಶಕ್ತಿಗಳು ದೂರವಾಗಿ ಧನಾತ್ಮಕ ಶಕ್ತಿಗಳು ಆಕರ್ಷಿತವಾಗುತ್ತವೆ ಎಂಬ ನಂಬಿಕೆಯೂ ಇದೆ. ರೈತರು ಕೂಡ ಬಿತ್ತನೆ ಮಾಡುವ ಮೊದಲು ಭೂಮಿಯಲ್ಲಿ ದೀಪ ಹಚ್ಚಿ ಪ್ರಾರ್ಥಿಸಿದರೆ ಉತ್ತಮ ಫಸಲು ದೊರೆಯುತ್ತದೆ ಎಂದು ಪರಂಪರೆಯಲ್ಲಿ ಹೇಳಲಾಗುತ್ತದೆ.

 

ವೈಯಕ್ತಿಕ ದಾಖಲೆಗಾಗಿ ಆಡುವುದನ್ನು ಮೊದಲು ನಿಲ್ಲಿಸಿ: ಕೋಚ್ ಗಂಭೀರ್ ಖಡಕ್ ಸೂಚನೆ ಕೊಟ್ಟಿದ್ಯಾರಿಗೆ?

0

ಟಿ20 ವಿಶ್ವಕಪ್ ಗೆಲುವಿನ ಉಲ್ಲಾಸದಲ್ಲಿ ತೇಲುತ್ತಿರುವ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೊಸ ಖಡಕ್ ಸೂಚನೆ ನೀಡಿದ್ದಾರೆ.

ಆಟಗಾರರು ಶತಕ ಅಥವಾ ಅರ್ಧಶತಕಕ್ಕಾಗಿ ವೈಯಕ್ತಿಕ ದಾಖಲೆ ಗಳಿಸಲು ಆಟವಾಡಬಾರದು, ಬದಲಾಗಿ ಟೀಮ್ ಮೊತ್ತ ಮತ್ತು ಟ್ರೋಫಿ ಗೆಲುವಿಗೆ ಆಡಬೇಕು ಎಂದು ಗಂಭೀರ್ ಒತ್ತಿ ಹೇಳಿದ್ದಾರೆ.

ಗಂಭೀರ್ ಉದಾಹರಣೆಗೆ ಸಂಜು ಸ್ಯಾಮ್ಸನ್ ಅವರ ಆಟವನ್ನು ಉಲ್ಲೇಖಿಸಿದ್ದಾರೆ. ಟೂರ್ನಿಯ ಕೊನೆಯ ಮೂರು ಪಂದ್ಯಗಳಲ್ಲಿ 97*, 89 ಮತ್ತು 89 ರನ್ ಗಳಿಸಿದ ಸಂಜು, ಶತಕ ಹೊಡೆಯಲು ನಿಧಾನವಾಗಿ ಆಡದೇ, ತಂಡದ ವೇಗ ಮತ್ತು ಮೊತ್ತಕ್ಕೆ ಆದ್ಯತೆ ನೀಡಿದ್ದರಿಂದ ಭಾರತ ಗೆಲುವು ಸಾಧಿಸಿದೆ ಎಂದು ತಿಳಿಸಿದ್ದಾರೆ.

ಗಂಭೀರ್ ಹೀಗೆ ಹೇಳಿರುವ ಉದ್ದೇಶ, ಸ್ವಾರ್ಥಕ್ಕಾಗಿ ಅಥವಾ ವೈಯಕ್ತಿಕ ದಾಖಲೆಗಾಗಿ ಆಡುವುದನ್ನು ನಿಲ್ಲಿಸಿ, ತಂಡದ ಗೆಲುವಿಗಾಗಿ ಶ್ರಮಿಸಬೇಕು. ಸೂಪರ್ ಸ್ಟಾರ್ ಹುಟ್ಟುಹಾಕುವುದಲ್ಲ, ಬಲಿಷ್ಠ ತಂಡ ರೂಪಿಸುವುದೇ ಉದ್ದೇಶ. 2027 ಏಕದಿನ ವಿಶ್ವಕಪ್ಗೂ ಮುನ್ನ, ಈ ಮನೋಭಾವ ತಂಡದಲ್ಲಿ ಮೂಡಿಸಬೇಕೆಂದು ಗಂಭೀರ್ ಸೂಚಿಸಿದ್ದಾರೆ.

ತೋಟದಲ್ಲಿ ನವವಿವಾಹಿತನ ಶವ ಸಿಕ್ಕ ಪ್ರಕರಣಕ್ಕೆ ಟ್ವಿಸ್ಟ್: ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆಗೈದ ಹೆಂಡ್ತಿ!

0

ತುಮಕೂರು: ತಿಪಟೂರು ಗ್ರಾಮಾಂತರದ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದಲ್ಲಿ ನಡೆದ ಗುಜರಿ ವ್ಯಾಪಾರಿಯ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.

ಮದುವೆಯಾಗಿ ಕೇವಲ ಮೂರು ತಿಂಗಳಲ್ಲೇ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಗುಜರಿ ವ್ಯಾಪಾರಿ ಮನ್ಸೂರ್ ಪಾಷ ಹತ್ಯೆ ಪ್ರಕರಣದಲ್ಲಿ, ಫರ್ಜಾನ್ (31), ಧನರಾಜ್ (24), ವೆಂಕಟೇಶ್ (24) ಮತ್ತು ದರ್ಶನ್ (24) ಎಂಬ ನಾಲ್ಕು ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ. ಮನ್ಸೂರ್ ಕುಟುಂಬದ ನಿರ್ಧಾರದಂತೆ ಫರ್ಜಾನ್ ಎಂಬಾಕೆಯನ್ನು ಈ ವರ್ಷ ಜನವರಿಯಲ್ಲಿ ವಿವಾಹವಾಗಿದ್ದರು.

ಅದರಂತೆ ಮನ್ಸೂರ್ ಮಾರ್ಚ್ 4ರಂದು ಗುಜರಿ ವಸ್ತು ತರಲು ಹೋದಾಗ ನಾಪತ್ತೆ ಆಗಿದ್ದು, ತಪಾಸಣೆ ನಡೆಸಿದಾಗ ಅಡಕೆ ತೋಟದಲ್ಲಿ ಶವ ಪತ್ತೆಯಾಗಿತ್ತು.

ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಎಸ್, ಧನರಾಜ್ ಎಂಬಾತನ ಜೊತೆ ಮೃತ ಮನ್ಸೂರ್ ಪತ್ನಿ ಫರ್ಜಾನ ಸಂಬಂಧ ಹೊಂದಿದ್ದು, ಮನ್ಸೂರ್ ಕೊಲೆಗಾಗಿ ಹೆಂಡ್ತಿ ಹಾಗೂ ಪ್ರಿಯಕರ ಪ್ಲ್ಯಾನ್ ರೂಪಿಸಿದ್ದು ತಿಳಿದುಬಂದಿದೆ.

ಆರೋಪಿಗಳು ಮನ್ಸೂರ್ ನನ್ನು ಕರೆಸಿ ತರಾತುರಿಯಲ್ಲಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಪರಾರಿಯಾಗಿದ್ದರೂ, ದರ್ಶನ್ ನ ಕರೆ ಮೂಲಕ ಅವರ ಸಂಪರ್ಕ ಗೊತ್ತಾಗಿ, ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಐತಿಹಾಸಿಕ ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ರಿತ್ತಿ ಕುಟುಂಬದಿಂದ ಹೊಸ ಬೇಡಿಕೆ!

0

ಗದಗ: ಐತಿಹಾಸಿಕ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ.

ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಕುಟುಂಬವು ತಜ್ಞರು ಅಂದಾಜಿಸಿರುವ ಬೆಲೆಯ ಆಧಾರದ ಮೇಲೆ ತಮ್ಮ ಪಾಲು ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದೆ.

ಸರ್ಕಾರ ನೇಮಿಸಿದ ತಜ್ಞರ ತಂಡವು ಇತ್ತೀಚೆಗೆ ಪರಿಶೀಲನೆ ನಡೆಸಿ ನಿಧಿಯ ಅಂದಾಜು ಮೌಲ್ಯವನ್ನು ಸುಮಾರು 8 ಕೋಟಿ ರೂಪಾಯಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೆ ಈ ಮೊತ್ತಕ್ಕೆ ಒಪ್ಪುವುದಿಲ್ಲ ಎಂದು ಹೇಳಿರುವ ಕುಟುಂಬದವರು, ಪ್ರಾಚೀನ ವಸ್ತುವಾಗಿರುವುದರಿಂದ ಇದರ ಆ್ಯಂಟಿಕ್ ಮೌಲ್ಯ ಈಗಿನ ಅಂದಾಜಿಗಿಂತ ಹತ್ತರಷ್ಟು ಹೆಚ್ಚಿರಬಹುದು ಎಂದು ಹೇಳಿದ್ದಾರೆ.

ಆದರೂ ಕಾನೂನಿನ ಪ್ರಕಾರ ತಜ್ಞರು ನಿಗದಿಪಡಿಸಿದ 8 ಕೋಟಿ ರೂ. ಮೌಲ್ಯಕ್ಕೆ ಐದರ ಒಂದು ಭಾಗ ಪಾಲು ನೀಡಬೇಕು ಎಂದು ಕುಟುಂಬದವರು ಆಗ್ರಹಿಸಿದ್ದಾರೆ.

ಪ್ರಜ್ವಲ್ ರಿತ್ತಿ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದಾನೆ. ಹೀಗಾಗಿ ಸರ್ಕಾರವೂ ಪ್ರಾಮಾಣಿಕವಾಗಿ ಪರಿಹಾರ ನೀಡಬೇಕು ಎಂದು ಕುಟುಂಬದವರು ತಿಳಿಸಿದ್ದಾರೆ.

ಈ ಕುರಿತು ಸಚಿವ ಎಚ್.ಕೆ. ಪಾಟೀಲ್ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ್ ಭರವಸೆ ನೀಡಿದ್ದು, ಅವರ ಮೇಲೆ ನಮಗೆ ನಂಬಿಕೆ ಇದೆ ಎಂದು ಕುಟುಂಬದವರು ಹೇಳಿದ್ದಾರೆ.

ಕುಟುಂಬದವರ ಪ್ರಕಾರ, ನಿಧಿಯ ನಿಜವಾದ ಆ್ಯಂಟಿಕ್ ಮೌಲ್ಯವನ್ನು ಪರಿಗಣಿಸಿ ನ್ಯಾಯಸಮ್ಮತ ಪರಿಹಾರ ನೀಡಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.

ರಸ್ತೆ ಅಪಘಾತಕ್ಕೆ ಪುನುಗು ಬೆಕ್ಕು ಬಲಿ!

0

ಗದಗ: ರಸ್ತೆ ದಾಟುವ ವೇಳೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಪುನುಗು ಬೆಕ್ಕೊಂದು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಅರಷಿನಗೋಡಿ ಗ್ರಾಮದ ಬಳಿ ನಡೆದಿದೆ.

ಕಾಡು ಪ್ರದೇಶದ ಸಮೀಪ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ವಾಹನ ಪುನುಗು ಬೆಕ್ಕಿಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಅದು ಸಾವನ್ನಪ್ಪಿದೆ. ವಾಹನ ಸವಾರರು ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿರುವುದು ತಿಳಿದುಬಂದಿದೆ.

ಈ ಭಾಗದಲ್ಲಿ ಕಾಡು ಪ್ರಾಣಿಗಳು ರಸ್ತೆ ದಾಟುವ ಸಂದರ್ಭಗಳು ಹೆಚ್ಚಾಗಿರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಕಾಡು ಪ್ರಾಣಿಗಳನ್ನು ರಕ್ಷಿಸಲು ಸಹಕರಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಬೈಕ್ ಗೆ ಟಿಪ್ಪರ್ ಡಿಕ್ಕಿ: ವೈದ್ಯ ವಿದ್ಯಾರ್ಥಿನಿ ಸಾವು, ಮತ್ತೋರ್ವ ಯುವತಿ ಗಂಭೀರ!

ಬೆಂಗಳೂರು: ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮುಂಭಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ವೈದ್ಯ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.

21 ವರ್ಷದ ಕೃತಿಕಾ ಮೃತ ವೈದ್ಯ ವಿದ್ಯಾರ್ಥಿನಿ. ನಿನ್ನೆ ಸಂಜೆ ಕಾಲೇಜು ಮುಗಿಸಿ ಸ್ನೇಹಿತೆ MBBS ವಿದ್ಯಾರ್ಥಿನಿ ಹಂಸ ಜೊತೆ ಆಕ್ಟಿವಾದಲ್ಲಿ ತೆರಳುತ್ತಿದ್ದರು. ಈ ಸಮಯದಲ್ಲಿ ಅತಿವೇಗದಲ್ಲಿ ಬಂದ ಟಿಪ್ಪರ್ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜೊತೆಯಲ್ಲಿದ್ದ ಹಂಸ ಗಂಭೀರ ಗಾಯಗೊಂಡಿದ್ದು, ಅವರನ್ನು ಆರ್ ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಬೆನ್ನಲ್ಲೇ ಕೆಂಗೇರಿ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ವಾಯು ಗುಣಮಟ್ಟ ಕುಸಿತ: ಆರೋಗ್ಯಕ್ಕೆ ಅಪಾಯ!

ಬೆಂಗಳೂರು: ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಇಂದು ಕಳಪೆ ಮಟ್ಟವನ್ನು ತಲುಪಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರಿನ AQI 155ಕ್ಕೆ ಏರಿದ್ದು, ಆರೋಗ್ಯಕ್ಕೆ ಹಾನಿಕರ ಮಟ್ಟದಲ್ಲಿದೆ.

ಇದರೊಂದಿಗೆ, ಮಂಗಳೂರು 168, ಮೈಸೂರು 173, ಬೆಳಗಾವಿ 163, ಶಿವಮೊಗ್ಗ 162, ಬಳ್ಳಾರಿ 124, ಹುಬ್ಬಳ್ಳಿ 162, ಉಡುಪಿ 160, ವಿಜಯಪುರ 151 ರೀತಿ ರಾಜ್ಯದ ಹಲವು ಜಿಲ್ಲೆಗಳ ಗಾಳಿ ಕಳಪೆ ಮಟ್ಟಕ್ಕೆ ತಲುಪಿದೆ. ಕಲಬುರ್ಗಿ ಮಾತ್ರ 90 ರಲ್ಲಿ ಸ್ವಲ್ಪ ಸುಧಾರಿಸಿಕೊಂಡಂತಿದೆ.

ಈ ತಿಂಗಳು ರಾಜ್ಯದ ಹವಾಮಾನ ಉಷ್ಣವಾಗಿ ಇರಲಿದ್ದು, ಹೆಚ್ಚಿನ ನಗರಗಳಲ್ಲಿ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿರುತ್ತಾ ಇರಬಹುದು. WHO ಮಾನದಂಡಗಳ ಪ್ರಕಾರ, ಇಂತಹ AQI ಮಟ್ಟವು ಉಸಿರಾಟ ಸಮಸ್ಯೆ, ತೀವ್ರತೆ ಹೆಚ್ಚಾದ ಶ್ವಾಸಕೋಶ ಸಮಸ್ಯೆಗಳಿಗೆ ಕಾರಣವಾಗಬಹುದು.

 

ಸಹಪಾಠಿಯ ಕಿರುಕುಳ ಆರೋಪ: ಶಾಲಾ ಕಟ್ಟಡದಿಂದ ಜಿಗಿದು 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ?

ಬೀದರ್: ಚಿಟಗುಪ್ಪಾ ತಾಲೂಕಿನ ಭೆಮಳಖೇಡ ಗ್ರಾಮದಲ್ಲಿ ಶಾಲಾ ಕಟ್ಟಡದಿಂದ ಜಿಗಿದು 16 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

ಮೃತ ಬಾಲಕಿಯನ್ನು ಮದಿಯಾ ನಶೀರ್ ಪಾಷಾ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭೆಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದಿಯಾ ಚಿಕ್ಕಪ್ಪ ಎಂ.ಡಿ. ಯೂಸುಫ್ ತಿಳಿಸಿದಂತೆ, ಸಹಪಾಠಿ ಲವ್ ಮಾಡುವಂತೆ ಕಿರುಕುಳ ನೀಡಿದ್ದಕ್ಕೆ ಮದಿಯಾ ನಶೀರ್ ಪಾಷಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಬಾಲಕಿಯ ಮೇಲೆ ನಡೆದ ಹಿಂಸೆ ಹಾಗೂ ಕಿರುಕುಳದ ದೃಶ್ಯಗಳು ಸಿಸಿ ಕ್ಯಾಮರಾಗಳಲ್ಲಿ ಸೆರೆಹಿಡಿದಿವೆ.

ಪೊಲೀಸರು ಘಟನೆ ಕುರಿತು ತನಿಖೆ ಮುಂದುವರೆಸಿದ್ದಾರೆ..

ಕೊಪ್ಪಳ: ಮಲ್ಲಾಪುರದಲ್ಲಿ ಹಾಡಹಗಲೇ ಚಿರತೆ ಓಡಾಟ, ಗ್ರಾಮಸ್ಥರಲ್ಲಿ ಆತಂಕ!

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ಹಗಲು ಹೊತ್ತಿನಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ.

ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುವ ಚಿರತೆ ಹಗಲು ವೇಳೆ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಮಲ್ಲಾಪುರವು ತುಂಗಭದ್ರಾ ನದಿಯ ಸಮೀಪದಲ್ಲಿರುವುದರಿಂದ, ನದಿಯ ಆಸುಪಾಸಿನ ಪ್ರದೇಶಗಳಿಂದ ಚಿರತೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಗ್ರಾಮಸ್ಥರು ಚಿರತೆಯ ಸಂಚಾರ ಹೆಚ್ಚುತ್ತಿರುವುದರಿಂದ ಜಾನುವಾರುಗಳಿಗೆ ಅಪಾಯ ಉಂಟಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡಿದ್ದು, ಚಿರತೆಯನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಬೋನ್ ಅಳವಡಿಸುವಂತೆ ಮನವಿ ಮಾಡಿದ್ದಾರೆ.

ಮಾನಸಿಕವಾಗಿ ಬಲಿಷ್ಠರಾಗಲು ಏನು ಮಾಡಬೇಕು? ಚಾಣಕ್ಯರ ಈ ಕಿವಿಮಾತುಗಳನ್ನು ಪಾಲಿಸಿ!

0

ಮಾನಸಿಕ ಶಕ್ತಿ ಸಾಧಿಸುವುದು ಯಶಸ್ಸಿನ ಹಾಗೂ ಧೈರ್ಯದಿಂದ ಬದುಕಲು ಅನಿವಾರ್ಯ.

ದೈಹಿಕವಾಗಿ ಬಲಿಷ್ಠರಾಗಲು ವ್ಯಾಯಾಮ ಮಾಡಬೇಕೆನ್ನುವುದೇ ಇದ್ದಂತೆ, ಮನಸ್ಸಿನ ಶಕ್ತಿಯನ್ನು ಹೆಚ್ಚಿಸಲು ಕೆಲ ತತ್ವಗಳನ್ನು ಪಾಲಿಸುವುದು ಅಗತ್ಯ. ಚಾಣಕ್ಯರ ಹೇಳಿಕೆಯಲ್ಲಿ ಈ ತತ್ತ್ವಗಳನ್ನು ಅನುಸರಿಸುವುದರಿಂದ ನಮ್ಮ ಆಲೋಚನೆ, ನಂಬಿಕೆಗಳು ಮತ್ತು ಜೀವನ ಶೈಲಿ ಸಂಪೂರ್ಣವಾಗಿ ಬದಲಾಯಿಸಬಹುದು, ಜೊತೆಗೆ ನಮ್ಮ ಗುರಿಗಳನ್ನು ಸಾಧಿಸುವ ಶಕ್ತಿ ಬರುತ್ತದೆ.

ಮಾನಸಿಕವಾಗಿ ಸದೃಢರಾಗಲು ಮುಖ್ಯವಾದ ಕ್ರಮಗಳು:

  1. ಪ್ರತಿದಿನ ಯೋಚಿಸುವ ಅಭ್ಯಾಸ:
    ದೇಹವನ್ನು ಫಿಟ್ ಮಾಡಿಕೊಳ್ಳಲು ಪ್ರತಿದಿನ ವ್ಯಾಯಾಮ ಮಾಡುವಂತೆ, ನಮ್ಮ ಮನಸ್ಸನ್ನು ಬಲಪಡಿಸಲು ಪ್ರತಿದಿನ ಒಳ್ಳೆಯ ಆಲೋಚನೆಗಳನ್ನು ಯೋಚಿಸುವ ಅಭ್ಯಾಸ ಮಾಡಬೇಕು. ನಿರ್ಧಾರ ತೆಗೆದುಕೊಳ್ಳುವುದು, ಸವಾಲುಗಳನ್ನು ವಿಶ್ಲೇಷಿಸುವುದು, ಮತ್ತು ಮನಸ್ಸನ್ನು ಶಾಂತವಾಗಿಡುವ ಬಗ್ಗೆ ಯೋಚಿಸಲು ಸ್ವಲ್ಪ ಸಮಯ ಮೀಸಲು ಮಾಡಬೇಕು. ಈ ಅಭ್ಯಾಸ ನಿಮ್ಮನ್ನು ತಾಳ್ಮೆಯುಳ್ಳ, ಬುದ್ಧಿವಂತ ವ್ಯಕ್ತಿಯಾಗಿ ರೂಪಿಸುತ್ತದೆ.
  2. ಸ್ವಾವಲಂಬನೆ:
    ಚಾಣಕ್ಯರ ಪ್ರಕಾರ, ನಿಮ್ಮ ಸಮಸ್ಯೆಗಳನ್ನು ಸ್ವತಃ ಪರಿಹರಿಸಲು ಪ್ರಯತ್ನಿಸಿದಾಗ, ನಿಮ್ಮ ಮನಸ್ಸು ಬಲಗೊಳ್ಳುತ್ತದೆ. ಇತರರ ಮೇಲೆ ಅವಲಂಬನೆ ಹೆಚ್ಚಾದರೆ, ಆತ್ಮವಿಶ್ವಾಸ ಕುಗ್ಗುತ್ತದೆ. ಸಣ್ಣ ಜವಾಬ್ದಾರಿಗಳನ್ನು ನಿಜವಾಗಿ ತೆಗೆದುಕೊಂಡು ಸಾಧಿಸಿದಾಗ, ನೀವು ಮಾನಸಿಕವಾಗಿ ಬಲಿಷ್ಠರಾಗುತ್ತೀರಿ.
  3. ಸಮಯದ ಸದುಪಯೋಗ:
    ಸಮಯ ಅತ್ಯಂತ ಅಮೂಲ್ಯವಾದದ್ದು. ಮಾನಸಿಕವಾಗಿ ಬಲಿಷ್ಠರಾದವರು ಸಮಯವನ್ನು ಗೌರವಿಸುತ್ತಾರೆ, ನಿಷ್ಪ್ರಯೋಜಕ ವಿಷಯಗಳಿಗೆ ವ್ಯರ್ಥ ಮಾಡುವುದಿಲ್ಲ. ಸಮಯಕ್ಕೆ ಎಚ್ಚರಗೊಳ್ಳುವುದು, ಕೆಲಸಗಳಿಗೆ ಆದ್ಯತೆ ನೀಡುವುದು ಮತ್ತು ಪ್ರತಿಯೊಂದು ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸುವ ಅಭ್ಯಾಸವು ವ್ಯಕ್ತಿಯನ್ನು ಬಲಿಷ್ಠಗೊಳಿಸುತ್ತದೆ.
  4. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ:
    ಹತಾಶೆ, ಭಯ, ಕೋಪ ಇತ್ಯಾದಿ ನಕಾರಾತ್ಮಕ ಭಾವನೆಗಳು ಮನಸ್ಸನ್ನು ದುರ್ಬಲಗೊಳಿಸುತ್ತವೆ. ಚಾಣಕ್ಯರ ಪ್ರಕಾರ, ನಾವು ಸಕಾರಾತ್ಮಕವಾಗಿ ಯೋಚಿಸಿದರೆ, ಯಾವುದೇ ಸವಾಲನ್ನು ಧೈರ್ಯದಿಂದ ಎದುರಿಸಬಹುದು ಮತ್ತು ಯಶಸ್ವಿಯಾಗಬಹುದು.
  5. ಹೊಸ ವಿಷಯಗಳನ್ನು ಕಲಿಯಿರಿ:
    ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯುವುದು ಮತ್ತು ಜ್ಞಾನವನ್ನು ವಿಸ್ತರಿಸುವುದು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೊಸ ಪುಸ್ತಕಗಳನ್ನು ಓದುವುದು, ಹಿಂದಿನ ಅನುಭವಗಳಿಂದ ಪಾಠ ಕಲಿಯುವುದು, ಹಾಗೂ ಇತರರಿಂದ ಒಳ್ಳೆಯದನ್ನೇ ಕಲಿಯುವ ಪ್ರಯತ್ನವು ನಿಮ್ಮ ಮನಸ್ಸನ್ನು ಬಲಿಷ್ಠಗೊಳಿಸುತ್ತದೆ.

ಮನಸ್ಸು ಬಲಿಷ್ಠವಾಗಿರಬೇಕು ಎಂಬುದು ಜೀವನದಲ್ಲಿ ಯಶಸ್ಸಿನ ಮತ್ತು ಧೈರ್ಯ ಜೀವನದ ಪ್ರಮುಖ ಅಂಶ. ಚಾಣಕ್ಯರ ತತ್ತ್ವಗಳನ್ನು ಪಾಲಿಸುವ ಮೂಲಕ, ನಾವು ನಮ್ಮ ಮನಸ್ಸನ್ನು ಸದೃಢಗೊಳಿಸಬಹುದು, ಸವಾಲುಗಳನ್ನು ಧೈರ್ಯದಿಂದ ಎದುರಿಸಬಹುದು ಮತ್ತು ಜೀವನದಲ್ಲಿ ನಮ್ಮ ಗುರಿಗಳನ್ನು ಸಾಧಿಸಬಹುದು.

error: Content is protected !!