Home Blog Page 82

ಕೇಂದ್ರ ಬಜೆಟ್ ವೀಕ್ಷಣೆಗೆ ಬಿಜೆಪಿ ಸಿದ್ಧತೆ: ರಾಜ್ಯಾದ್ಯಂತ LED ಸ್ಕ್ರೀನ್ ವ್ಯವಸ್ಥೆ – ಅಶ್ವತ್ ನಾರಾಯಣ್

0

ಬೆಂಗಳೂರು: ನಾಳೆ (ಫೆ.1) ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕಾರ್ಯಾಲಯಗಳಲ್ಲಿ ಬಜೆಟ್ ನೇರ ವೀಕ್ಷಣೆಗೆ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆಯುವ ಬಜೆಟ್ ವೀಕ್ಷಣಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ರಾಜ್ಯ ಕೋರ್ ಕಮಿಟಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಶಿವಮೊಗ್ಗದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಕಾರ್ಯಕರ್ತರೊಂದಿಗೆ ಬಜೆಟ್ ವೀಕ್ಷಣೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಹುಮ್ನಾಬಾದ್ ಸ್ಫೋಟ ಪ್ರಕರಣ: ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

0

ಬೀದರ್: ಹುಮ್ನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದಲ್ಲಿ ನಡೆದ ಅನುಮಾನಾಸ್ಪದ ಸ್ಫೋಟ ಪ್ರಕರಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ ಆರು ಮಂದಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸಮಗ್ರ ಹಾಗೂ ವೈಜ್ಞಾನಿಕ ತನಿಖೆಗೆ ಅವರು ಆದೇಶಿಸಿದ್ದಾರೆ.

ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಬೇಕು ಹಾಗೂ ಚಿಕಿತ್ಸೆಗೆ ಬೇಕಾದ ಸಂಪೂರ್ಣ ವೆಚ್ಚವನ್ನು ಜಿಲ್ಲಾಡಳಿತವೇ ಭರಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ. ಅಲ್ಲದೇ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸ್ಫೋಟಕ ತಜ್ಞರು ಮತ್ತು ತನಿಖಾ ತಂಡವನ್ನು ಕಳುಹಿಸಿ, ಸ್ಫೋಟಕ ವಸ್ತುವಿನ ಮಾದರಿಗಳನ್ನು ಸಂಗ್ರಹಿಸಿ ತಕ್ಷಣ ತನಿಖೆ ಆರಂಭಿಸುವಂತೆ ಸೂಚಿಸಲಾಗಿದೆ.

ಸ್ಫೋಟಕ್ಕೆ ಕಾರಣವಾದ ವಸ್ತು ಯಾವುದು? ಅದು ಸ್ಫೋಟಕವೇ ಅಥವಾ ಬೇರೆ ವಸ್ತುವೇ? ಆ ವಸ್ತು ಅಲ್ಲಿಗೆ ಹೇಗೆ ತಲುಪಿತು? ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು? ಎಂಬ ಎಲ್ಲಾ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗುವಂತೆ ತನಿಖೆ ನಡೆಯಬೇಕು ಎಂದು ಖಂಡ್ರೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಘಟನೆಗೆ ಕಾರಣರಾದವರ ವಿರುದ್ಧ ಯಾವುದೇ ಸಡಿಲತೆ ಇಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಚಿವರು ಹೇಳಿದ್ದಾರೆ. ಪದೇಪದೇ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಎಚ್ಚರಿಸಿದ್ದಾರೆ.

ಊಟಕ್ಕೂ ಜಾತಿ ಟ್ಯಾಗ್? – ‘ನನ್ನ ಆಹಾರ ನನ್ನ ಚಾಯ್ಸ್’ ಎಂದು ಕಿಡಿಕಾರಿದ ಡಾಲಿ ಧನಂಜಯ್

ಬೆಂಗಳೂರು: ನಟ ಡಾಲಿ ಧನಂಜಯ್ ಅವರು ಮಾಂಸಾಹಾರ ಸೇವಿಸಿದ್ದ ವಿಚಾರವನ್ನು ವಿವಾದವನ್ನಾಗಿ ಮಾಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಆಹಾರ ನನ್ನ ಆಯ್ಕೆ. ಆದರೆ ಅದರಲ್ಲಿ ಸಮುದಾಯ, ಜಾತಿ, ಬೇರೆ ಕಲಾವಿದರನ್ನು ಎಳೆದು ತರುವ ಪ್ರಯತ್ನ ಬಹಳ ಬೇಸರ ತಂದಿದೆ ಎಂದು ಹೇಳಿದರು.

ನಾನು ನಾನ್‌ವೆಜ್ ತಿನ್ನುತ್ತೇನೆ, ಸೀ-ಫುಡ್ ನನಗೆ ಇಷ್ಟ. ಇದು ನನ್ನ ವೈಯಕ್ತಿಕ ಬದುಕಿನ ಭಾಗ. ಇದನ್ನು ಚರ್ಚೆಯ ವಿಷಯವಾಗಿಸುವುದು ತಪ್ಪು. ನಾನು ಹಿಂದೆ ಪಾರ್ಟಿ ಮಾಡುತ್ತಿದ್ದೆ, ಸ್ಮೋಕಿಂಗ್ ಮಾಡುತ್ತಿದ್ದೆ, ಈಗ ಎಲ್ಲವನ್ನೂ ನಿಲ್ಲಿಸಿದ್ದೀನಿ. ಆದರೆ ನನ್ನ ಊಟದ ವಿಚಾರ ಮಾತ್ರ ದೊಡ್ಡ ವಿಷಯವಾಗಿಬಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಬಹಳ ಇನೋಸೆಂಟ್ ಆಗಿ ಗೆಳೆಯನ ಹೋಟೆಲ್‌ಗೆ ಹೋಗಿ ಊಟ ಮಾಡಿ ಬಂದೆ. ನಾನು ಈಗಾಗಲೇ 10–15 ಬಿರಿಯಾನಿ ಶಾಪ್‌ಗಳನ್ನು ಓಪನ್ ಮಾಡಿದ್ದೇನೆ. ಈ ಥರದ ವಿಷಯ ಇಷ್ಟೊಂದು ಡಿಸ್ಕಷನ್ ಆಗುತ್ತೆ ಅಂತ ಗೊತ್ತಿರಲಿಲ್ಲ. ಅದನ್ನು ನೋಡಿ ಶಾಕ್ ಆಯ್ತು ಎಂದು ಧನಂಜಯ್ ಹೇಳಿದರು.

ನಾನು ಎಲ್ಲಿ ಮಾಂಸ ತಿಂದೆ ಎಂದು ಹೇಳೋಕೆ ಹೋಗಲ್ಲ. ಚರ್ಚೆ ಶುರು ಮಾಡಿದವರಿಗೆ ಉತ್ತರ ಕೊಟ್ಟಂತೆ ಆಗುತ್ತೆ. ನಾನು ಯಾವತ್ತೂ ಲಿಂಗ ಹಾಕಿಕೊಂಡು ಊಟ ಮಾಡಲ್ಲ. ನಾನು ಏನೇ ಮಾಡಿದರೂ ಪ್ರಶ್ನೆಗಳು ಬರುತ್ತವೆ. ಆದರೆ ನಾನು ಚಿತ್ರರಂಗಕ್ಕಾಗಿ ಮಾಡುತ್ತಿರುವ ಕೆಲಸದ ಬಗ್ಗೆ ಯಾಕೆ ಚರ್ಚೆ ಆಗುತ್ತಿಲ್ಲ? ಎಂದು ಪ್ರಶ್ನಿಸಿದರು.

‘ಬಡವರ ಮಕ್ಕಳು ಬೆಳೆಯಬೇಕು’ ಅನ್ನೋದನ್ನ ಅವರವರ ಅರ್ಥಕ್ಕೆ ತಿರುಗಿಸಿ ಮಾತನಾಡಲಾಗುತ್ತಿದೆ. ಸಂಬಂಧಗಳನ್ನು ಸೆಲೆಬ್ರೇಟ್ ಮಾಡೋಣ ಅನ್ನೋದನ್ನ ನಾನು ಎಲ್ಲೆಡೆ ಹೇಳಿದ್ದೇನೆ ಅಷ್ಟೇ. ಸಿನಿಮಾ ನಟರು ಅಂದ್ರೆ ಒಂದೇ ವಿಚಾರದ ಬಗ್ಗೆ ಮಾತನಾಡಬೇಕು ಅಂತಿಲ್ಲ. ನಾನು ಊಟ ಮಾಡಿದ ವಿಚಾರವನ್ನೇ ದೊಡ್ಡ ವಿಷಯ ಮಾಡುವುದು ತಪ್ಪಲ್ಲವೇ? ಎಂದು ಧನಂಜಯ್ ಕಿಡಿಕಾರಿದರು.

ಅಕ್ರಮ ಮರಳು ಗಣಿಗಾರಿಕೆ ಪ್ರಕರಣ: ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ದಾಖಲು, ಸರ್ಕಾರಕ್ಕೆ ನೋಟಿಸ್

0

ಬೆಂಗಳೂರು: ರಾಜ್ಯದ ಎಲ್ಲ ರಾಜಕೀಯ ಪಕ್ಷಗಳಲ್ಲಿನ ಪ್ರಭಾವಿ ವ್ಯಕ್ತಿಗಳು ಅಕ್ರಮ ಮರಳು ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ವಿಧಾನಸಭಾ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಅಕ್ರಮ ಮರಳು ಗಣಿಗಾರಿಕೆ ಆರೋಪ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ದಾಖಲಿಸಿಕೊಂಡಿದೆ.

ಮರಳು ಮಾಫಿಯಾಗಳ ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ಸರ್ಕಾರ ಅಸಹಾಯಕತೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಈ ಪ್ರಕರಣವನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ತಾರಾ ವಿತಾಸ್ತ ಗಂಜು ಅವರನ್ನೊಳಗೊಂಡ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡು, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಮೂರು ವಾರಗಳೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ.

ಇದೇ ವೇಳೆ, ಅರ್ಜಿಯ ವಿಚಾರಣೆಯನ್ನು ಸೂಕ್ತ ನ್ಯಾಯಪೀಠದ ಮುಂದೆ ನಿಯೋಜಿಸುವಂತೆ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿದೆ.

ನ್ಯಾಯಪೀಠ ತನ್ನ ಆದೇಶದಲ್ಲಿ, 2026ರ ಜನವರಿ 27ರಂದು ನಡೆದ ವಿಧಾನಸಭಾ ಕಲಾಪದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದೆ. ಅಕ್ರಮ ಮರಳು ಗಣಿಗಾರಿಕೆ ದೊಡ್ಡ ದಂಧೆಯಾಗಿದೆ. ಈ ಪ್ರಕರಣದಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸುವುದಿಲ್ಲ, ಯಾರನ್ನೂ ನೇರವಾಗಿ ದೂಷಿಸುವುದಿಲ್ಲ. ಇದು ಅತ್ಯಂತ ಮುಜುಗರದ ವಿಷಯವಾಗಿದ್ದು, ಅನೇಕ ಪ್ರಭಾವಿ ವ್ಯಕ್ತಿಗಳು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸಚಿವರು ಹೇಳಿರುವುದನ್ನು ನ್ಯಾಯಾಲಯ ಗಮನಿಸಿದೆ. ಈ ಹೇಳಿಕೆಗಳು ಜನವರಿ 28ರಂದು ಪತ್ರಿಕೆಗಳು ಹಾಗೂ ಟಿವಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿವೆ ಎಂದು ನ್ಯಾಯಪೀಠ ತಿಳಿಸಿದೆ.

ಅಲ್ಲದೆ, ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ರಾತ್ರಿ ವೇಳೆ ನಿರಂತರವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಕುರಿತು ಮಾಧ್ಯಮ ವರದಿಗಳನ್ನು ನ್ಯಾಯಾಲಯ ಉಲ್ಲೇಖಿಸಿದೆ. ಗಣಿಗಾರಿಕೆಯಿಂದ ಉಂಟಾಗುವ ಧೂಳಿನಿಂದ ಈ ಭಾಗದ ರೈತರು ಬೆಳೆಯುವ ಬೆಳೆಗಳಿಗೆ ತೀವ್ರ ಹಾನಿಯಾಗುತ್ತಿದೆ ಎಂಬ ಆರೋಪಗಳನ್ನು ರೈತರು ಮಾಡಿರುವುದನ್ನೂ ನ್ಯಾಯಪೀಠ ದಾಖಲಿಸಿದೆ.

ಈ ಹಿನ್ನೆಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಮೌನ ಮನೆ ಹಿಂದೆ ಡ್ರಗ್ಸ್ ಸಂಚು! ರಾತ್ರಿ ಮಾತ್ರ ತೆರೆಯುತ್ತಿದ್ದ ಗೋಡೌನ್ ಮೇಲೆ ಪೊಲೀಸ್ ದಾಳಿ- ಉತ್ತರ ಪ್ರದೇಶ ಮೂಲದ ದಂಪತಿ ಬಂಧನ

0
ಮೈಸೂರು: ನಗರದ ಹೊರವಲಯದ ಯಾಂಡಳ್ಳಿ ಪ್ರದೇಶದಲ್ಲಿದ್ದ ಶಾಂತ ಹಾಗೂ ನಿರ್ಜನ ಮನೆಯೊಂದರೊಳಗೆ ಭಾರೀ ಡ್ರಗ್ಸ್ ತಯಾರಿಕಾ ಸಂಚು ರೂಪುಗೊಂಡಿದ್ದದ್ದು ಇದೀಗ ಬಯಲಾಗಿದೆ. ಉತ್ತರ ಪ್ರದೇಶ ಮೂಲದ ದಂಪತಿಯು ಮನೆ ಕೆಳ ಅಂತಸ್ತಿನಲ್ಲಿ ಗೋಡೌನ್ ಸ್ಥಾಪಿಸಿ, ಡ್ರಗ್ಸ್ ತಯಾರಿಕೆಗೆ ಬೇಕಾದ ಅಪಾರ ಪ್ರಮಾಣದ ಕೆಮಿಕಲ್ಸ್ ಸಂಗ್ರಹಿಸಿದ್ದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ನಾಲ್ಕು ತಿಂಗಳ ಹಿಂದೆ ದಂಪತಿ ಎರಡು ಮನೆಗಳನ್ನು ಬಾಡಿಗೆ ಪಡೆದಿದ್ದು, ಕೇವಲ ಇಬ್ಬರಿದ್ದರೂ ಎರಡು ಮನೆ ಬೇಕೆಂದು ಹೇಳಿಕೊಂಡಿದ್ದದ್ದು ಸ್ಥಳೀಯರಲ್ಲಿ ಮೊದಲಿನಿಂದಲೇ ಅನುಮಾನ ಹುಟ್ಟಿಸಿತ್ತು. ರಾತ್ರಿ ಸಮಯದಲ್ಲಿ ಮಾತ್ರ ಗೋಡೌನ್ ಬಾಗಿಲು ತೆರೆಯುತ್ತಿದ್ದು, ದಿನದ ವೇಳೆಯಲ್ಲಿ ಸಂಪೂರ್ಣ ಮೌನ ವಹಿಸುತ್ತಿದ್ದರು. ಮಾತನಾಡಲು ಪ್ರಯತ್ನಿಸಿದಾಗ ಕೈ ಸನ್ನೆಯಲ್ಲೇ ತಪ್ಪಿಸಿಕೊಳ್ಳುತ್ತಿದ್ದರು ಎಂಬುದು ಸ್ಥಳೀಯರ ಹೇಳಿಕೆ.

ಗೋಡೌನ್ ಒಳಗೆ ಡ್ರಗ್ಸ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಬ್ಯಾರೆಲ್‌ಗಳಲ್ಲಿ ಸಂಗ್ರಹಿಸಿದ್ದು, ಅಂತಿಮ ಹಂತದ ಸಿದ್ಧತೆ ಮಾಡಿಕೊಂಡಿದ್ದುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಡೆದ ದಾಳಿಯಿಂದ ಭಾರೀ ಅನಾಹುತ ತಪ್ಪಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇನ್ನು ಎರಡು ತಿಂಗಳ ಹಿಂದೆ ಇದೇ ಮನೆಯಲ್ಲಿ ನಡೆದ 17 ಲಕ್ಷ ರೂ. ಕಳ್ಳತನ ಪ್ರಕರಣದಲ್ಲಿಯೂ ದಂಪತಿ ಪೊಲೀಸರನ್ನು ಸಂಪರ್ಕಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ದೆಹಲಿ ನೋಂದಣಿಯ ಕಾರು ಬಳಕೆ, ಸ್ಥಳೀಯರೊಂದಿಗೆ ಸಂಪರ್ಕ ಕಡಿತ — ಇವೆಲ್ಲವೂ ಡ್ರಗ್ಸ್ ಜಾಲದ ಗಂಭೀರತೆಯನ್ನು ಸೂಚಿಸುತ್ತಿವೆ.

ಮೈಸೂರಿನ ರಿಂಗ್ ರಸ್ತೆಯಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಡ್ರಗ್ಸ್ ಜಾಲದ ಪ್ರಕರಣದ ಬಳಿಕ, ಇದೀಗ ಯಾಂಡಳ್ಳಿಯಲ್ಲಿ ನಡೆದ ಈ ದಾಳಿ ನಗರ ಸುತ್ತಮುತ್ತ ಮಾದಕ ವಸ್ತು ಮಾಫಿಯಾ ಬೇರೂರಿರುವ ಭೀತಿ ಹೆಚ್ಚಿಸಿದೆ. ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದು, ಡ್ರಗ್ಸ್ ಜಾಲದ ಹಿಂದಿರುವ ಲಿಂಕ್‌ಗಳ ಬಗ್ಗೆ ಆಳವಾದ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಹೆಚ್ಚಾಯ್ತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ: ಪುಷ್ಪಾ-ದೇವರಾಜ್ ಮಧ್ಯೆ ವಾಗ್ವಾದ

ಹಾಸನ: ನಟ ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್ ಮನೆ ಸಮೀಪದ ನಿವೇಶನಕ್ಕೆ ಸಂಬಂಧಿಸಿದ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹಾಸನ ನಗರದ ವಿದ್ಯಾನಗರದಲ್ಲಿ ಇರುವ ಪುಷ್ಪಾ ಅವರ ಮನೆ ಬಳಿಯ ಸೈಟ್‌ನಲ್ಲಿ ಕಾಂಪೌಂಡ್ ವಿಚಾರವಾಗಿ ಪುಷ್ಪಾ ಮತ್ತು ಮೂಲ ಮಾಲೀಕ ದೇವರಾಜು ನಡುವೆ ವಾಗ್ವಾದ ನಡೆದಿದೆ.

ಸೈಟ್ ಬಳಿ ಪುಷ್ಪಾ ಆಗಮಿಸಿ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದಾಗ ದೇವರಾಜು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ದಾಖಲೆಗಳನ್ನು ತೋರಿಸುವಂತೆ ಪುಷ್ಪಾ ಕೇಳಿದ್ದಾರೆ. “ಸೆಲೆಬ್ರಿಟಿ ನನ್ನ ಮಗ, ನಾನಲ್ಲ. ನಾನು ಇಲ್ಲಿ ಹುಟ್ಟಿ ಬೆಳೆದವಳು” ಎಂದು ಪುಷ್ಪಾ ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ದೇವರಾಜು ಆಕ್ಷೇಪ ವ್ಯಕ್ತಪಡಿಸಿದ್ದು, ಮಾತಿನ ಚಕಮಕಿ ನಡೆದಿದೆ.

ಪುಷ್ಪಾ ಅವರು ದೇವರಾಜು ವಿರುದ್ಧ ಗಂಭೀರ ಆರೋಪ ಮಾಡುತ್ತಾ, “ರೌಡಿಗಳನ್ನು ಕರೆದುಕೊಂಡು ಬಂದು ರೌಡಿಸಂ ಮಾಡ್ತೀಯಾ? ನಾನು ಎಸ್ಪಿಗೆ ದೂರು ಕೊಡ್ತೀನಿ. ಮತ್ತೆ ಇಲ್ಲಿಗೆ ಕಾಲಿಟ್ಟರೆ ಸುಮ್ಮನಿರಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಏನಿದು ಪ್ರಕರಣ?

ಈ ಹಿಂದೆ ಅಕ್ರಮ ಕಾಂಪೌಂಡ್ ನಿರ್ಮಾಣ ಆರೋಪ ಸಂಬಂಧ ಯಶ್ ತಾಯಿ ಪುಷ್ಪಾ ಅವರಿಗೆ ಕೋರ್ಟ್‌ನಿಂದ ದೊಡ್ಡ ಶಾಕ್ ಎದುರಾಗಿತ್ತು. ಸುಮಾರು 1,500 ಚದರ ಅಡಿ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಕೋರ್ಟ್ ಅನುಮತಿಯ ಮೇರೆಗೆ ಕಾಂಪೌಂಡ್ ಅನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಲಾಗಿತ್ತು. ಮೂಲ ಮಾಲೀಕ ದೇವರಾಜು ಈ ಕಾಂಪೌಂಡ್ ತೆರವುಗೊಳಿಸಿದ್ದರು.

ಈ ಪ್ರಕರಣ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದು, ಇತ್ತೀಚಿನ ವಾಗ್ವಾದದಿಂದ ಮತ್ತೆ ಸಾರ್ವಜನಿಕ ಗಮನ ಸೆಳೆದಿದೆ.

ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ಪ್ರಾಥಮಿಕ ತನಿಖಾ ವರದಿ ಬಳಿಕ ಮುಂದಿನ ಕ್ರಮ – ಸಚಿವ ಜಿ. ಪರಮೇಶ್ವರ್

0

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಸದ್ಯ ಆತ್ಮಹತ್ಯೆ ಆಯಾಮದಲ್ಲೇ ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ತನಿಖಾ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಳೆದ ಡಿಸೆಂಬರ್‌ನಲ್ಲಿ ಕೇರಳದ ಐಟಿ ಅಧಿಕಾರಿಗಳು ಸಿ.ಜೆ. ರಾಯ್ ಅವರ ಗ್ರೂಪ್ ಮೇಲೆ ದಾಳಿ ನಡೆಸಿದ್ದರು. ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವ ಗಡುವಿನ ಹಿನ್ನೆಲೆಯಲ್ಲಿ, ದುಬೈನಲ್ಲಿದ್ದ ರಾಯ್ ಅವರನ್ನು ಬೆಂಗಳೂರಿಗೆ ಕರೆಯಿಸಿಕೊಂಡಿದ್ದರು.

ಐಟಿ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ರಾಯ್ ಅವರ ಕಚೇರಿಗೆ ತೆರಳಿ ಹೇಳಿಕೆ ದಾಖಲಿಸಿಕೊಂಡಿದ್ದರು ಎಂದು ಸಚಿವರು ತಿಳಿಸಿದ್ದಾರೆ. ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ಕಚೇರಿಗೆ ಅಧಿಕಾರಿಗಳು ತೆರಳಿದ್ದ ವೇಳೆ, ರಾಯ್ ಅವರು ಐದು ನಿಮಿಷದಲ್ಲಿ ಬರುತ್ತೇನೆ ಎಂದು ಹೇಳಿ ಕೊಠಡಿಯೊಳಗೆ ತೆರಳಿದ್ದರು.

20 ನಿಮಿಷವಾದರೂ ಹೊರಬಾರದ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಾಗಿಲು ಒಡೆದು ನೋಡಿದಾಗ, ರಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದರ ಕುರಿತು ತನಿಖೆ ನಡೆಸುವಂತೆ ಸೂಚಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.

ಆತ್ಮಹತ್ಯೆಗೆ ಕಾರಣವೇನು, ಯಾವ ಒತ್ತಡಗಳು ಇದ್ದವು ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ವರದಿ ಬಂದ ಬಳಿಕ ಹಲವು ವಿಚಾರಗಳು ಬೆಳಕಿಗೆ ಬರಲಿವೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ಐಟಿ ದಾಳಿಯಿಂದ ಉದ್ಯಮಿಗಳಿಗೆ ಕಿರುಕುಳ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಈ ಹಂತದಲ್ಲಿ ಕಿರುಕುಳ ಆಯಾಮದ ಬಗ್ಗೆ ಯೋಚಿಸಿಲ್ಲ ಎಂದರು. ಸದ್ಯ ಆತ್ಮಹತ್ಯೆಗೆ ಕಾರಣವೇನು ಎಂಬುದರ ಕುರಿತು ಮಾತ್ರ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.

ರಾಯ್ ಅವರ ಸಹೋದರ ಬಾಬು ಅವರು, ಐಟಿ ಅಧಿಕಾರಿಗಳ ದಾಳಿ ಮತ್ತು ಒತ್ತಡವೇ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಪ್ರಾಥಮಿಕ ವಿಚಾರಣೆ ವರದಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಹೇಳಿದ್ದಾರೆ.

Gold Rate: ಚಿನ್ನ–ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ: ಎರಡು ದಿನದಲ್ಲಿ ₹1,500ಕ್ಕೂ ಹೆಚ್ಚು ಇಳಿಕೆ!

0

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಭಾರೀ ಕುಸಿತ ಮುಂದುವರಿದಿದೆ. ನಿನ್ನೆ ಪ್ರತಿ ಗ್ರಾಂಗೆ ಸುಮಾರು ₹800 ಇಳಿಕೆಯಾಗಿದ್ದ ಚಿನ್ನದ ಬೆಲೆ, ಇಂದು (ಶನಿವಾರ) ಮತ್ತೊಮ್ಮೆ ₹920 ರಷ್ಟು ಕಡಿಮೆಯಾಗಿದೆ. ಹೀಗೆ ಎರಡು ದಿನಗಳಲ್ಲಿ ಚಿನ್ನದ ಬೆಲೆ ಒಟ್ಟಾರೆ ₹1,500ಕ್ಕೂ ಅಧಿಕ ಇಳಿಕೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಹಲವು ದೇಶಗಳಲ್ಲಿ ಕುಸಿತ ಕಂಡಿದೆ. ಇದರ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ತೀವ್ರವಾಗಿ ಇಳಿಕೆಯಾಗಿದೆ.

ಇನ್ನು ಬೆಳ್ಳಿ ಬೆಲೆಯೂ ಮಹಾಕುಸಿತ ಅನುಭವಿಸಿದೆ. ಒಂದೇ ದಿನದಲ್ಲಿ ಪ್ರತಿ ಗ್ರಾಂಗೆ ₹45 ರಷ್ಟು ಇಳಿಕೆಯಾದರೆ, ಕಳೆದ ಎರಡು ದಿನಗಳಲ್ಲಿ ಒಟ್ಟಾರೆ ₹60 ರಷ್ಟು ಬೆಳ್ಳಿ ಬೆಲೆ ಕುಸಿದಿದೆ.

ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,47,200 ಆಗಿದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,60,580 ತಲುಪಿದೆ. 100 ಗ್ರಾಂ ಬೆಳ್ಳಿ ಬೆಲೆ ₹35,000 ಇದೆ.

ಬೆಂಗಳೂರಿನಲ್ಲೂ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಇಳಿಕೆ ದಾಖಲಾಗಿದ್ದು, 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,47,200 ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹35,000 ಇದೆ. ತಮಿಳುನಾಡು, ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲೂ ಬೆಳ್ಳಿ ಬೆಲೆ ಇದೇ ಮಟ್ಟದಲ್ಲಿ ಮುಂದುವರಿದಿದೆ.

ಭಾರತದಲ್ಲಿ ಚಿನ್ನ–ಬೆಳ್ಳಿ ಬೆಲೆ (ಜನವರಿ 31):

  • 24 ಕ್ಯಾರಟ್ ಚಿನ್ನ (1 ಗ್ರಾಂ): ₹16,058
  • 22 ಕ್ಯಾರಟ್ ಚಿನ್ನ (1 ಗ್ರಾಂ): ₹14,720
  • 18 ಕ್ಯಾರಟ್ ಚಿನ್ನ (1 ಗ್ರಾಂ): ₹12,044
  • ಬೆಳ್ಳಿ (1 ಗ್ರಾಂ): ₹350

ಬೆಂಗಳೂರಿನಲ್ಲಿ ಚಿನ್ನ–ಬೆಳ್ಳಿ ಬೆಲೆ:

  • 24 ಕ್ಯಾರಟ್ ಚಿನ್ನ (1 ಗ್ರಾಂ): ₹16,058
  • 22 ಕ್ಯಾರಟ್ ಚಿನ್ನ (1 ಗ್ರಾಂ): ₹14,720
  • ಬೆಳ್ಳಿ (1 ಗ್ರಾಂ): ₹350

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ):

  • ಬೆಂಗಳೂರು: ₹14,720
  • ಚೆನ್ನೈ: ₹14,900
  • ಮುಂಬೈ: ₹14,720
  • ದೆಹಲಿ: ₹14,735
  • ಕೋಲ್ಕತಾ: ₹14,720
  • ಕೇರಳ: ₹14,720
  • ಅಹ್ಮದಾಬಾದ್: ₹14,725
  • ಜೈಪುರ್: ₹14,735
  • ಲಕ್ನೋ: ₹14,735
  • ಭುವನೇಶ್ವರ: ₹14,720

ತುಮಕೂರು: 40ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ PSI..!

0

ತುಮಕೂರು: ಪ್ರಕರಣವೊಂದರಲ್ಲಿ ವಶಪಡಿಸಿಕೊಂಡಿದ್ದ ವಾಹನವನ್ನು ಬಿಡುಗಡೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು ಮೂಲದ ವಕೀಲರ ವಾಹನವನ್ನು ಬಿಡುಗಡೆ ಮಾಡಲು ಪಿಎಸ್ಐ ಚೇತನ್ ಕುಮಾರ್ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿತ್ತು.

ನಿನ್ನೆ ರಾತ್ರಿ ಸುಮಾರು 11:30ರ ವೇಳೆಗೆ ಕ್ಯಾತಸಂದ್ರ ಸಮೀಪದ ನಮಸ್ತೆ ತುಮಕೂರು ಹೋಟೆಲ್‌ನಲ್ಲಿ 40 ಸಾವಿರ ರೂ. ಲಂಚ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಪಿಎಸ್ಐ ಚೇತನ್ ಕುಮಾರ್ ಅವರನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಲೋಕಾಯುಕ್ತ ಪೊಲೀಸರು ಪಿಎಸ್ಐಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮೊನ್ನೆಯಷ್ಟೆ ಚೀಟಿ ಅವ್ಯವಹಾರ ಪ್ರಕರಣದಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಬೆಂಗಳೂರಿನಲ್ಲಿ ಇನ್ಸ್ಪೆಕ್ಟರ್ ಒಬ್ಬರು ಇತ್ತೀಚೆಗೆ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಸಿನಿಮೀಯ ರೀತಿಯಲ್ಲಿ ಲೋಕಾಯುಕ್ತ ತಂಡ ಟ್ರ್ಯಾಪ್ ನಡೆಸಿ ಇನ್ಸ್ಪೆಕ್ಟರ್ ಗೋವಿಂದರಾಜು ಅವರನ್ನು ರೆಡ್ಹ್ಯಾಂಡ್ ಆಗಿ ಬಂಧಿಸಿತ್ತು.

ಚೀಟಿ ವ್ಯವಹಾರದಲ್ಲಿ ವಂಚನೆ ಆರೋಪದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲು ತೆರಳಿದ್ದ ಇನ್ಸ್ಪೆಕ್ಟರ್ ಗೋವಿಂದರಾಜು, 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ 1 ಲಕ್ಷ ರೂ. ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದರು.

ಮೋಳಕೇರಾದಲ್ಲಿ ಮತ್ತೆ ಸ್ಫೋಟ: ಶಾಲೆಗೆ ತೆರಳುತ್ತಿದ್ದ ಐದು ಮಕ್ಕಳು ಗಂಭೀರ ಗಾಯ- ಸ್ಥಳದಲ್ಲಿ ಭಯದ ವಾತಾವರಣ

0

ಬೀದರ್: ಮೋಳಕೇರಾ ಗ್ರಾಮದಲ್ಲಿ ಶುಕ್ರವಾರ ಬೆಳಂಬೆಳಿಗ್ಗೆ ಸಂಭವಿಸಿದ ಅನುಮಾನಾಸ್ಪದ ಸ್ಫೋಟ ಗ್ರಾಮದಲ್ಲಿ ಆತಂಕವನ್ನು ಮೂಡಿಸಿದೆ. ಮೋಳಗಿ ಮಾರಯ್ಯ ದೇವಸ್ಥಾನ ಕಡೆ ಹೋಗುತ್ತಿದ್ದ ಶಾಲಾ ಮಕ್ಕಳ ಮೇಲೆ ಈ ಸ್ಫೋಟ ಪರಿಣಾಮ ಬೀರಿದೆ.

ಘಟನೆಯಲ್ಲಿಯೇ ಅನ್ವರ್ ಸಾಬ್ (18) ಮತ್ತು ಜಬ್ಬಾರ್ ಸಾಬ್ (65) ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್‌ಗೆ ರವಾನಿಸಲಾಗಿದೆ. ಪರಿಜಾರ್ (8), ಅಜೀಜ್ (5), ಬುಶ್ರಾ (4) ಮಕ್ಕಳಿಗೆ ಸಣ್ಣ ಗಾಯಗಳಾದರೂ ತಕ್ಷಣ ಚಿಕಿತ್ಸೆ ನೀಡಲಾಗಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಫೋಟಕ್ಕೆ ಕಾರಣವಾದ ವಸ್ತು ಮಾದರಿಗಳನ್ನು ಸಂಗ್ರಹಿಸಲು ಸೋಕೋ (SOCO) ತಂಡ ಸ್ಥಳಕ್ಕೆ ಕರೆಯಲಾಗಿದೆ. ಹುಮ್ನಾಬಾದ್ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವುದು, ಭದ್ರತಾ ವ್ಯವಸ್ಥೆ ಕಠಿಣಗೊಳಿಸಿರುವುದು ಗಮನಾರ್ಹ.

ಕಳೆದ ಆರು ತಿಂಗಳಲ್ಲಿ ಇದೇ ಗ್ರಾಮದಲ್ಲಿ ಇದು ಎರಡನೇ ಸ್ಫೋಟ, ಇದರಿಂದ ಸ್ಥಳೀಯರು ಆತಂಕ ಮತ್ತು ಭಯದಲ್ಲಿ ಬದುಕುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಂಪೂರ್ಣ ಕಾರಣ ಮತ್ತು ಪೈಪೋಟಿ/ಸಂಬಂಧಿತ ವ್ಯಕ್ತಿಗಳನ್ನು ಗುರುತಿಸಲು ತೀವ್ರ ತನಿಖೆ ನಡೆಸುತ್ತಿದ್ದಾರೆ.

error: Content is protected !!