Home Blog Page 87

ಅಡಿಗೆ ಅನಿಲ ಸೋರಕೆಯಿಂದ ಅಗ್ನಿ ಅವಗಢ; ಗಂಭೀರಗೊಂಡಿದ್ದ ಮೂವರು ಸಾವು!

0

ರಾಮನಗರ: ಕನಕಪುರದಲ್ಲಿ ಅಡುಗೆ ಮಾಡುವ ವೇಳೆ ಅನಿಲ ಸೋರಿಕೆಯಿಂದ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಒಂದೇ ಕುಟುಂಬದ ಮೂವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಮೃತರನ್ನು ಸಿದ್ದರಾಜು (55), ಚಂದ್ರಮ್ಮ (50) ಹಾಗೂ ಪ್ರಶಾಂತ್ (22) ಎಂದು ಗುರುತಿಸಲಾಗಿದೆ. ಕನಕಪುರ ನಗರದ ಅಮರನಾರಾಯಣ ಬ್ಲಾಕ್‌ನಲ್ಲಿ ನಾಲ್ಕು ದಿನಗಳ ಹಿಂದೆ ಗ್ಯಾಸ್ ಸೋರಿಕೆಯಿಂದ ಈ ಅಗ್ನಿ ಅವಘಡ ಸಂಭವಿಸಿತ್ತು.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕುಟುಂಬದ ಸದಸ್ಯರನ್ನು ತಕ್ಷಣ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ತಂದೆ, ತಾಯಿ ಮತ್ತು ಮಗ ಮೂವರೂ ಸಾವನ್ನಪ್ಪಿದ್ದಾರೆ. ಈ ಘಟನೆ ಕನಕಪುರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರು ಹಾಗೂ ಸ್ಥಳೀಯರು ಕಂಬನಿ ಮಿಡಿದಿದ್ದು, ಶೋಕದ ವಾತಾವರಣ ಆವರಿಸಿದೆ.

ಐತಿಹಾಸಿಕ ಲಕ್ಕುಂಡಿ ಅಭಿವೃದ್ಧಿಗೆ ವಿದೇಶಿ ಎನ್‌ಜಿಒ ಆಸಕ್ತಿ: ಡೆಕ್ಕನ್ ಹೆರಿಟೇಜ್ ಫೌಂಡೇಶನ್ ತಂಡ ಭೇಟಿ

0

ಗದಗ: ಐತಿಹಾಸಿಕ ಲಕ್ಕುಂಡಿಯ ಸಮಗ್ರ ಅಭಿವೃದ್ಧಿಗೆ ವಿದೇಶಿ ಎನ್‌ಜಿಒ ಸಂಸ್ಥೆಯೊಂದು ಆಸಕ್ತಿ ತೋರಿಸಿದೆ. ಇಟಲಿ ಹಾಗೂ ಗ್ರೀಸ್ ಮೂಲದ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ತಂಡ ಲಕ್ಕುಂಡಿಗೆ ಭೇಟಿ ನೀಡಿ, ಪ್ರಾಚ್ಯಾವಶೇಷಗಳು ಹಾಗೂ ಐತಿಹಾಸಿಕ ಸ್ಥಳಗಳ ಪರಿಶೀಲನೆ ನಡೆಸಿದೆ.

ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಮುಖ್ಯಸ್ಥರಾದ ಡಾ. ಹೆಲೆನ್ ನೇತೃತ್ವದ ತಂಡ, ಲಕ್ಕುಂಡಿಯ ಪ್ರಾಚ್ಯಾವಶೇಷಗಳ ಬಯಲು ವಸ್ತು ಸಂಗ್ರಹಾಲಯ, ಐತಿಹಾಸಿಕ ದೇವಸ್ಥಾನಗಳು ಹಾಗೂ ಪುರಾತನ ವಸ್ತುಗಳನ್ನು ಸಂಗ್ರಹಿಸಿರುವ ಸ್ಥಳಗಳನ್ನು ನೇರವಾಗಿ ಪರಿಶೀಲಿಸಿತು.

ಸುಮಾರು 3 ಎಕರೆ ವಿಸ್ತೀರ್ಣದಲ್ಲಿರುವ ಬಯಲು ವಸ್ತು ಸಂಗ್ರಹಾಲಯವನ್ನು ಅಭಿವೃದ್ಧಿಪಡಿಸುವ ಕುರಿತು ವಿಶೇಷ ಗಮನಹರಿಸಲಾಗಿದೆ.
ಲಕ್ಕುಂಡಿಯಲ್ಲಿ ದೊರೆತ ಪ್ರಾಚ್ಯಾವಶೇಷಗಳನ್ನು ಸಂರಕ್ಷಿಸಿ, ವೈಜ್ಞಾನಿಕ ರೀತಿಯಲ್ಲಿ ಪ್ರದರ್ಶಿಸುವ ಉದ್ದೇಶದಿಂದ ಸರ್ಕಾರವು ಈಗಾಗಲೇ ಸುಮಾರು 2 ಕೋಟಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಯೋಜನೆ ರೂಪಿಸಿದೆ.

ಸರ್ಕಾರದಿಂದ ಟೆಂಡರ್ ಪಡೆದು ಈ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲು ಡೆಕ್ಕನ್ ಹೆರಿಟೇಜ್ ಫೌಂಡೇಶನ್ ತಂಡ ಸಿದ್ಧತೆ ನಡೆಸುತ್ತಿದೆ. ತಜ್ಞರ ತಂಡದಿಂದ ಸ್ಥಳಪರಿಶೀಲನೆ ನಡೆಸಲಾಗಿದ್ದು, ಶೀಘ್ರದಲ್ಲೇ ಸಮಗ್ರ ಪ್ರಾಜೆಕ್ಟ್ ರಿಪೋರ್ಟ್ ಸಿದ್ಧಪಡಿಸಲಾಗುತ್ತದೆ.

ಯೋಜನೆ ಜಾರಿಗೆ ಬಂದ ಬಳಿಕ ಬಯಲು ವಸ್ತು ಸಂಗ್ರಹಾಲಯದ ಅಭಿವೃದ್ಧಿಯೊಂದಿಗೆ ಲಕ್ಕುಂಡಿಯ ಇತಿಹಾಸವನ್ನು ಪರಿಚಯಿಸುವ ಗೈಡ್ ಬುಕ್ ಸಿದ್ಧಪಡಿಸುವ ಕಾರ್ಯಕ್ಕೂ ಮುಂದಾಗಲಾಗುತ್ತದೆ. ಈ ಗೈಡ್ ಪುಸ್ತಕ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟವಾಗಲಿದೆ.
ಈ ಸಂದರ್ಭದಲ್ಲಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಮಾತನಾಡಿ, ಲಕ್ಕುಂಡಿಯ ಹೆರಿಟೇಜ್ ಮೌಲ್ಯವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಮುಖ್ಯಸ್ಥೆ ಡಾ. ಹೆಲೆನ್ ಅವರು, ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಕಾಪಾಡಿಕೊಂಡು ಅಭಿವೃದ್ಧಿಪಡಿಸುವ ಗುರಿಯಿದೆ ಎಂದು ಹೇಳಿದರು.

ಮಾವನ ಮಗನ ಮದುವೆ ಫಿಕ್ಸ್… ಚಾಲಕನ ಜೊತೆ ಓಡಿ ಹೋದ ಶ್ರೀಮಂತ ಕುಟುಂಬದ ಮಗಳು

0

ತುಮಕೂರು: ಶ್ರೀಮಂತ ಕುಟುಂಬವೊಂದರಲ್ಲಿ ಮದುವೆ ಸಂಭ್ರಮದ ತಯಾರಿ ನಡೆಯುತ್ತಿದ್ದಾಗಲೇ, ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಉದ್ಯಮಿಯೊಬ್ಬರ ಮಗಳು ಮನೆಯ ವಾಹನ ಚಾಲಕನ ಜೊತೆ ಓಡಿಹೋಗಿ ಮದುವೆಯಾಗಿರುವ ಪ್ರಕರಣ ನಗರ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಯುವತಿಯ ಕುಟುಂಬವು ಮಾವನ ಮಗನ ಜೊತೆ ಮದುವೆ ನಿಶ್ಚಯಿಸಿ, ನಿಶ್ಚಿತಾರ್ಥ ಮುಗಿಸಿ, ಮದುವೆ ಕಾರ್ಡ್ ಹಂಚಿಕೆ, ಚೌಲ್ಟ್ರಿ ಬುಕ್ಕಿಂಗ್, ಊಟ ಹಾಗೂ ಡೆಕೊರೇಷನ್ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ ಮದುವೆಗೆ ಇನ್ನೊಂದು ತಿಂಗಳು ಬಾಕಿ ಇರುವಾಗಲೇ, ಜನವರಿ 19ರಂದು ಯುವತಿ ಮನೆಯ ಪಾರ್ಟ್‌ಟೈಂ ಚಾಲಕ ರವೀಶ ಜೊತೆ ಓಡಿಹೋಗಿ, ಚಿಕ್ಕನಾಯಕನಹಳ್ಳಿಯಲ್ಲಿ ಮದುವೆಯಾಗಿದ್ದಾಳೆ.

ಮಗಳು ಕಾಣೆಯಾಗಿದ್ದರಿಂದ ಕುಟುಂಬಸ್ಥರು ತುಮಕೂರು ನಗರ ಠಾಣೆಗೆ ದೂರು ನೀಡಿದರು. ಆದರೆ ಪ್ರಕರಣದಲ್ಲಿ ತಿರುವು ಉಂಟಾಗಿ, ಯುವತಿಯೇ ಪೊಲೀಸರ ಮುಂದೆ ಹಾಜರಾಗಿ, ಕುಟುಂಬದವರಿಂದ ಬೆದರಿಕೆ ಇದೆ ಎಂದು ಆರೋಪಿಸಿ ಭದ್ರತೆ ಕೋರಿ ಕಣ್ಣೀರಿಟ್ಟಿದ್ದಾಳೆ.

ಇದಕ್ಕೆ ಪ್ರತಿಕ್ರಿಯಿಸಿದ ಯುವತಿಯ ಸಹೋದರ, “ಅವಳ ಇಚ್ಛೆಗೆ ವಿರುದ್ಧವಾಗಿ ನಾವು ಮದುವೆ ನಿಶ್ಚಯಿಸಿರಲಿಲ್ಲ. ಆಕೆಯ ಒಪ್ಪಿಗೆಯೇ ಎಲ್ಲಾ ಸಿದ್ಧತೆ ಮಾಡಿದ್ದೆವು. ತಾಯಿ ಆರೋಗ್ಯ ಸಮಸ್ಯೆ ಇದ್ದರೂ ಮದುವೆಗಾಗಿ ಓಡಾಡುತ್ತಿದ್ದರು. ಮದುವೆ ಬೇಡ ಎಂದಿದ್ದರೆ ಹೇಳಬಹುದಿತ್ತು. ಈ ರೀತಿ ನಡೆದುಕೊಂಡಿದ್ದು ನಮಗೆ ದೊಡ್ಡ ಶಾಕ್” ಎಂದು ಹೇಳಿದ್ದಾರೆ.

ಯುವತಿ ಕಾಣೆಯಾದ ಪ್ರಕರಣ ದಾಖಲಾದ ನಂತರ, ಪ್ರೇಮಿಗಳು ಈಗಾಗಲೇ ಮದುವೆಯಾಗಿರುವ ವಿಚಾರ ತಿಳಿದುಬಂದಿದೆ. ಬೆದರಿಕೆ ಆರೋಪದ ಹಿನ್ನೆಲೆ, ಪೊಲೀಸರ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ ನಡೆದು, ಎರಡೂ ಕಡೆಯ ಕುಟುಂಬಗಳ ಒಪ್ಪಿಗೆ ಪಡೆದು, ಖುಲಾಸೆ ಪತ್ರಕ್ಕೆ ಸಹಿ ಹಾಕಿಸಿಕೊಂಡು ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.

CJ Roy Case: ಶೂಟ್ ಆದ್ರೂ ಯಾರಿಗೂ ಶಬ್ದ ಕೇಳಿಸದೇ ಹೋಗಿದ್ದು ಹೇಗೆ? ಕೊನೆಗೂ ಈ ಪ್ರಶ್ನೆಗೆ ಸಿಕ್ತು ಉತ್ತರ

0

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಡಾ. ಸಿ.ಜೆ. ರಾಯ್ (CJ Roy) ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ ಬೆಳಕಿಗೆ ಬಂದಿದೆ.ರಿಚ್ಮಂಡ್ ಸರ್ಕಲ್‌ನ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ಕಾನ್ಫಿಡೆಂಟ್ ಗ್ರೂಪ್ ಕಚೇರಿಯ ತಮ್ಮ ಕೊಠಡಿಯಲ್ಲೇ ಡಾ. ಸಿ.ಜೆ. ರಾಯ್ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಗುಂಡಿನ ಶಬ್ದ ಕೇಳಿಸದೆ ಸುಮಾರು 20 ನಿಮಿಷಗಳ ಕಾಲ ಈ ಘಟನೆ ಯಾರಿಗೂ ತಿಳಿದಿರಲಿಲ್ಲ.

ರಾಯ್ ಅವರ ಚೇಂಬರ್ ಸಂಪೂರ್ಣವಾಗಿ ಸೌಂಡ್ ಪ್ರೂಫ್ ಆಗಿದ್ದರಿಂದ ಗುಂಡಿನ ಶಬ್ದ ಹೊರಗೆ ಕೇಳಿಸಿಲ್ಲ ಎನ್ನಲಾಗಿದೆ. ಕೊಠಡಿಯ ಒಳಗಿರುವ ಧ್ವನಿಗಳು ಹೊರಗೆ ಕೇಳಿಸದಂತೆ ವಿಶೇಷ ಇಂಟೀರಿಯರ್ ಮಾಡಲಾಗಿತ್ತು. ಇದರಿಂದಾಗಿ ಆತ್ಮಹತ್ಯೆ ನಡೆದರೂ ಕಚೇರಿಯ ಸಿಬ್ಬಂದಿಗೆ ತಕ್ಷಣ ಮಾಹಿತಿ ಸಿಗಲಿಲ್ಲ.

ಬಹಳ ಸಮಯವಾದರೂ ರಾಯ್ ತಮ್ಮ ಕೊಠಡಿಯಿಂದ ಹೊರಬರದ ಹಿನ್ನೆಲೆಯಲ್ಲಿ ಸಿಬ್ಬಂದಿ ಅವರನ್ನು ಕರೆದು ನೋಡಿದ್ದಾರೆ. ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ಅನುಮಾನಗೊಂಡು ಕುಟುಂಬದವರ ಅನುಮತಿ ಪಡೆದು ಭದ್ರತಾ ಸಿಬ್ಬಂದಿ ಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ರಾಯ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ.

ಆತ್ಮಹತ್ಯೆಗೆ ಮುನ್ನ ರಾಯ್ ತಮ್ಮ ತಾಯಿಯೊಂದಿಗೆ ಮಾತನಾಡಲು ಬಯಸಿದ್ದರು ಎನ್ನಲಾಗಿದೆ. ಜ.30ರಂದು ಆದಾಯ ತೆರಿಗೆ ಇಲಾಖೆ ಕಾನ್ಫಿಡೆಂಟ್ ಗ್ರೂಪ್ ಮೇಲೆ ದಾಳಿ ನಡೆಸಿತ್ತು. ಮಧ್ಯಾಹ್ನ ಸುಮಾರು 3 ಗಂಟೆಗೆ ರಾಯ್ ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಎ. ಜೋಸೆಫ್ ಹೇಳಿಕೆ ನೀಡಲು ಕಚೇರಿಗೆ ಆಗಮಿಸಿದ್ದರು. ಅಲ್ಲಿಂದ ವಾಪಸ್ ಬಂದ ಬಳಿಕ ರಾಯ್ ತಮ್ಮ ಕ್ಯಾಬಿನ್‌ಗೆ ತೆರಳಿದ್ದು, ಮತ್ತೆ ಹೊರಗೆ ಬಂದಿಲ್ಲ.

ನಂತರ ಜೋಸೆಫ್ ಅವರು ಕ್ಯಾಬಿನ್‌ಗೆ ಪ್ರವೇಶಿಸಲು ಯತ್ನಿಸಿದಾಗ, ರಾಯ್ ಅವರ ಸೂಚನೆಯಂತೆ ಯಾರನ್ನೂ ಒಳಗೆ ಬಿಡಬಾರದು ಎಂದು ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಬಳಿಕ ಬಾಗಿಲನ್ನು ಬಲವಂತವಾಗಿ ಒಡೆದು ಒಳಗೆ ಪ್ರವೇಶಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಕೇರಳ ಮೂಲದ ಸಿ.ಜೆ. ರಾಯ್ 2005ರಲ್ಲಿ ಕಾನ್ಫಿಡೆಂಟ್ ಗ್ರೂಪ್ ಸ್ಥಾಪಿಸಿದ್ದರು. ಈ ಸಂಸ್ಥೆ ಇದುವರೆಗೆ 65ಕ್ಕೂ ಹೆಚ್ಚು ಐಷಾರಾಮಿ ಯೋಜನೆಗಳನ್ನು ಪೂರ್ಣಗೊಳಿಸಿದ್ದು, ವಸತಿ ಅಪಾರ್ಟ್‌ಮೆಂಟ್‌ಗಳು, ವಿಲ್ಲಾಗಳು, ವಾಣಿಜ್ಯ ಸಂಕೀರ್ಣಗಳು, ಶಿಕ್ಷಣ, ಹೋಟೆಲ್‌, ರೆಸಾರ್ಟ್ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ 4.6 ತೀವ್ರತೆಯ ಭೂಕಂಪ: ಜನರಲ್ಲಿ ಭೀತಿ

0

ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 4.6 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಮಿ ನಡುಗಿದ ಅನುಭವದಿಂದ ಸ್ಥಳೀಯ ಜನರಲ್ಲಿ ಆತಂಕ ಮನೆ ಮಾಡಿದೆ.

ಬೆಳಗ್ಗೆ 5.35ರ ಸುಮಾರಿಗೆ ಭೂಕಂಪದ ಕಂಪನ ಅನುಭವವಾಗಿದ್ದು, ಇದರ ಕೇಂದ್ರಬಿಂದು ಪಟ್ಟನ್ ಪ್ರದೇಶದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಈ ಭೂಕಂಪದಿಂದ ಯಾವುದೇ ಸಾವು-ನೋವು, ಗಾಯಗಳು ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಈ ಕುರಿತು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (NCS) ತನ್ನ ಎಕ್ಸ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇದೇ ದಿನ ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಯೂ 4.6 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ ಎಂದು NCS ತಿಳಿಸಿದೆ.

NCS ಹೇಳಿಕೆಯ ಪ್ರಕಾರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಂಭವಿಸಿದ ಭೂಕಂಪವು ಭೂಮಿಯ ಮೇಲ್ಮೈಯಿಂದ 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಭೂಕಂಪದ ಅಕ್ಷಾಂಶ 9.03 ಡಿಗ್ರಿ ಉತ್ತರ ಹಾಗೂ ರೇಖಾಂಶ 92.78 ಡಿಗ್ರಿ ಪೂರ್ವವಾಗಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ದೃಢಪಡಿಸಲಾಗಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ವಿಶ್ವದ ಅತ್ಯಂತ ಭೂಕಂಪನಶೀಲ ಪ್ರದೇಶಗಳಲ್ಲಿ ಒಂದಾಗಿದ್ದು, 1893–1984ರ ಭಾರತದ ಭೂಕಂಪನ ವಲಯ ನಕ್ಷೆಯ ಪ್ರಕಾರ ಈ ಪ್ರದೇಶವನ್ನು ಭೂಕಂಪನ ವಲಯ–V ಎಂದು ವರ್ಗೀಕರಿಸಲಾಗಿದೆ.

ಭಾರತ ವಿರುದ್ಧದ ಪಂದ್ಯ ಬಹಿಷ್ಕಾರ: ಪಾಕಿಸ್ತಾನ ನಿರ್ಧಾರಕ್ಕೆ ICC ಖಡಕ್ ಎಚ್ಚರಿಕೆ!

0

ನವದೆಹಲಿ: 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವಂತೆ ಪಾಕಿಸ್ತಾನ ಸರ್ಕಾರ ತನ್ನ ಕ್ರಿಕೆಟ್ ತಂಡಕ್ಕೆ ಆದೇಶಿಸಿರುವ ನಿರ್ಧಾರಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಕ್ರಮವು ಅಂತಾರಾಷ್ಟ್ರೀಯ ಕ್ರೀಡಾ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಐಸಿಸಿ, ಪಾಕಿಸ್ತಾನ ಸರ್ಕಾರದ ನಿರ್ಧಾರ ತನ್ನ ಗಮನಕ್ಕೆ ಬಂದಿದ್ದರೂ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)ಯಿಂದ ಅಧಿಕೃತ ಮಾಹಿತಿ ದೊರೆಯುವವರೆಗೆ ಕಾಯಲಾಗುತ್ತಿದೆ ಎಂದು ತಿಳಿಸಿದೆ. ಪಂದ್ಯಾವಳಿಯಲ್ಲಿ ಆಯ್ದ ಪಂದ್ಯಗಳಲ್ಲಿ ಮಾತ್ರ ಭಾಗವಹಿಸುವ ಧೋರಣೆ ಸ್ವೀಕಾರಾರ್ಹವಲ್ಲ ಎಂದು ಐಸಿಸಿ ಅಸಮಾಧಾನ ವ್ಯಕ್ತಪಡಿಸಿದೆ.

“ರಾಷ್ಟ್ರೀಯ ನೀತಿ ವಿಷಯಗಳಲ್ಲಿ ಸರ್ಕಾರಗಳ ಪಾತ್ರವನ್ನು ಐಸಿಸಿ ಗೌರವಿಸುತ್ತದೆ. ಆದರೆ ಈ ನಿರ್ಧಾರವು ಸೂಕ್ತವಲ್ಲ. ಇದು ಜಾಗತಿಕ ಕ್ರಿಕೆಟ್ ಅಭಿಮಾನಿಗಳಷ್ಟೇ ಅಲ್ಲದೆ, ಪಾಕಿಸ್ತಾನದಲ್ಲಿರುವ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳ ಹಿತಾಸಕ್ತಿಗೂ ವಿರುದ್ಧವಾಗಿದೆ” ಎಂದು ಐಸಿಸಿ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಪಾಕಿಸ್ತಾನ ತೆಗೆದುಕೊಂಡಿರುವ ಈ ನಿರ್ಧಾರವು ದೀರ್ಘಕಾಲೀನ ಪರಿಣಾಮಗಳನ್ನುಂಟು ಮಾಡಬಹುದಾದ್ದರಿಂದ, ಮತ್ತೊಮ್ಮೆ ಪರಿಶೀಲಿಸುವಂತೆ ಐಸಿಸಿ ಪಿಸಿಬಿಯನ್ನು ಮನವಿ ಮಾಡಿದೆ.

ಭಾರತ–ಪಾಕಿಸ್ತಾನ ಪಂದ್ಯಗಳು ವಿಶ್ವ ಕ್ರಿಕೆಟ್‌ನಲ್ಲಿ ವಿಶೇಷ ಆಕರ್ಷಣೆಯನ್ನು ಹೊಂದಿವೆ. ಎರಡೂ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟುಗಳ ನಡುವೆಯೂ, 2012ರಿಂದ ಐಸಿಸಿ ಪ್ರಮುಖ ಪಂದ್ಯಾವಳಿಗಳಲ್ಲಿ ಎರಡೂ ತಂಡಗಳನ್ನು ಒಂದೇ ಗುಂಪಿನಲ್ಲಿ ಸೇರಿಸಿ ಪಂದ್ಯಗಳನ್ನು ಆಯೋಜಿಸುತ್ತಾ ಬಂದಿದೆ. ಈ ಬಾರಿ ಪಾಕಿಸ್ತಾನ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ, 2010ರ ನಂತರ ಉಭಯ ತಂಡಗಳು ಮುಖಾಮುಖಿಯಾಗದ ಮೊದಲ ಐಸಿಸಿ ಪಂದ್ಯಾವಳಿ ಇದಾಗಲಿದೆ.

ಪಾಕಿಸ್ತಾನ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳದಿದ್ದರೆ, ಐಸಿಸಿ ಪಿಸಿಬಿ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಪಾಕಿಸ್ತಾನ ಸೂಪರ್ ಲೀಗ್ (PSL)ನಲ್ಲಿ ಪಾಲ್ಗೊಳ್ಳಲು ವಿದೇಶಿ ಆಟಗಾರರು ಅಗತ್ಯವಿರುವ ನಿರ್ಬಂಧರಹಿತ ಪ್ರಮಾಣಪತ್ರ (NOC) ಪಡೆಯುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಪಾಕಿಸ್ತಾನಕ್ಕೆ ಗಂಭೀರ ಆರ್ಥಿಕ ನಷ್ಟ ಸಂಭವಿಸಬಹುದು. ಅಲ್ಲದೆ, ಭವಿಷ್ಯದಲ್ಲಿ ಐಸಿಸಿ ಪಂದ್ಯಾವಳಿಗಳನ್ನು ಆಯೋಜಿಸುವ ಹಕ್ಕನ್ನೂ ಪಾಕಿಸ್ತಾನ ಕಳೆದುಕೊಳ್ಳುವ ಅಪಾಯವಿದೆ ಎಂದು ವರದಿಗಳು ತಿಳಿಸಿವೆ.

ಇದರ ನಡುವೆ, ಭಾನುವಾರ ಪಾಕಿಸ್ತಾನ ಸರ್ಕಾರ ತನ್ನ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಟಿ20 ವಿಶ್ವಕಪ್ 2026ರಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಆದರೆ, ಫೆಬ್ರವರಿ 15, 2026ರಂದು ಭಾರತ ವಿರುದ್ಧ ನಡೆಯಲಿರುವ ಪಂದ್ಯವನ್ನು ಪಾಕಿಸ್ತಾನ ತಂಡ ಬಹಿಷ್ಕರಿಸಲಿದೆ ಎಂದು ಪ್ರಕಟಿಸಿದೆ.

ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆಗೆ ಕೋರಿ ಕೇಂದ್ರಕ್ಕೆ ಕೇರಳ ಸಿಎಂ ಪತ್ರ

0

ಕೇರಳ: ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯಾಚರಣೆ ವೇಳೆ ರಿಯಲ್ ಎಸ್ಟೇಟ್ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಫೆಬ್ರವರಿ 1ರಂದು ಬರೆದಿರುವ ಪತ್ರದಲ್ಲಿ, ಈ ಘಟನೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಬಿದ್ದಿರುವ ಕಪ್ಪು ಚುಕ್ಕೆಯಾಗಿದೆ ಎಂದು ಕೇರಳ ಸಿಎಂ ಅಭಿಪ್ರಾಯಪಟ್ಟಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳ ಶೋಧ ಕಾರ್ಯಾಚರಣೆಯಲ್ಲಿ ಗಂಭೀರ ಲೋಪಗಳಿವೆ ಎಂದು ಅವರು ಉಲ್ಲೇಖಿಸಿದ್ದಾರೆ.

ರಾಯ್ ಅವರ ಸಹೋದರ ಕೂಡ ಐಟಿ ಅಧಿಕಾರಿಗಳಿಂದ ಕಿರುಕುಳ ನಡೆದಿದೆ ಎಂದು ಆರೋಪಿಸಿರುವುದನ್ನು ಸಿಎಂ ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ರಾಯ್ ಅವರು ಎಲ್ಲಾ ದಾಖಲೆಗಳನ್ನು ನೀಡುವ ಮೂಲಕ ಅಧಿಕಾರಿಗಳಿಗೆ ಸಹಕರಿಸಿದ್ದರೂ, ಮರುಮರು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಐಟಿ ದಾಳಿಯ ಒತ್ತಡ ಅಸಹನೀಯವಾಗಿತ್ತು ಎಂದು ಅವರ ಸಹೋದರ ಹೇಳಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ತೆರಿಗೆ ವಂಚನೆ ಗಂಭೀರ ಸಮಸ್ಯೆಯಾಗಿದ್ದು, ಅದನ್ನು ತಡೆಗಟ್ಟಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ ರಾಯ್ ಪ್ರಕರಣದಂತೆ ಜೀವ ಹಾನಿಯಾಗುವ ಯಾವುದೇ ಕ್ರಮವನ್ನು ನಾಗರಿಕ ಪ್ರಜಾಪ್ರಭುತ್ವದಲ್ಲಿ ಸಮರ್ಥಿಸಲು ಸಾಧ್ಯವಿಲ್ಲ ಎಂದು ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳ ಶೋಧ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದಲ್ಲೇ ವ್ಯಕ್ತಿಯೊಬ್ಬರು ಬಂದೂಕಿನಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಅಚ್ಚರಿಯ ಸಂಗತಿ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ. ಇಂತಹ ಕಾರ್ಯಾಚರಣೆ ವೇಳೆ ಆ ಸ್ಥಳ ಸಂಪೂರ್ಣವಾಗಿ ತೆರಿಗೆ ಅಧಿಕಾರಿಗಳ ನಿಯಂತ್ರಣದಲ್ಲಿ ಇರಬೇಕು. ಶೋಧ ಕಾರ್ಯಾಚರಣೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕನಿಷ್ಠ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ತನಿಖೆಗೆ ಒಳಗಾಗುತ್ತಿರುವ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿಯೂ ಅಧಿಕಾರಿಗಳ ಮೇಲಿದೆ. ತೆರಿಗೆ ಎನ್ನುವುದು ನಾಗರಿಕರು ಸಮಾಜಕ್ಕಾಗಿ ಪಾವತಿಸುವ ಬೆಲೆ ಎಂದು ಹೇಳಲಾಗುತ್ತದೆ. ಆದ್ದರಿಂದ ತೆರಿಗೆ ವಂಚನೆ ವಿರುದ್ಧ ಶೂನ್ಯ ಸಹಿಷ್ಣುತೆ ಇರಬೇಕು ಎಂದು ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ನಿವೃತ್ತ ನ್ಯಾಯಾಧೀಶರ ನೇತೃತ್ವದ ವಿಚಾರಣಾ ಆಯೋಗ ರಚಿಸಿ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಿದ್ದಾರೆ.

ಗೋವಿಂದ–ನೀಲಂ ಪ್ರೇಮ ವದಂತಿಗಳಿಗೆ ತೆರೆ: “ನಮ್ಮ ನಡುವೆ ಅಂತಹದ್ದೇನೂ ಇರಲಿಲ್ಲ” ಎಂದ ನೀಲಂ ಕೊಠಾರಿ

ಗೋವಿಂದ ಅವರ ಖಾಸಗಿ ಜೀವನ ಸದ್ಯ ಬಾಲಿವುಡ್‌ನಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ವಿವಾಹೇತರ ಸಂಬಂಧ ಆರೋಪ, ಪತ್ನಿ ಸುನೀತಾ ಅಹುಜಾ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಸುದ್ದಿಗಳ ನಡುವೆ, ಹಳೆಯ ದಿನಗಳ ಗೋವಿಂದ–ನೀಲಂ ಕೊಠಾರಿ ಪ್ರೇಮ ವದಂತಿಗಳು ಮತ್ತೆ ಹೊರಬಂದಿವೆ.

ಈ ಎಲ್ಲಾ ಊಹಾಪೋಹಗಳಿಗೆ ಈಗ ನೀಲಂ ಕೊಠಾರಿ ನೇರವಾಗಿ ಉತ್ತರ ನೀಡಿದ್ದಾರೆ. ಉಷಾ ಕಾಕಡೆ ಪ್ರೊಡಕ್ಷನ್ಸ್ ಜೊತೆ ಮಾತನಾಡಿದ ಅವರು, ಗೋವಿಂದ ಜೊತೆಗಿನ ಯಾವುದೇ ಪ್ರೇಮ ಸಂಬಂಧವನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.

“ಇದನ್ನು ಯಾರು ಹೇಳುತ್ತಾರೆ? ಗೋವಿಂದ ಒಬ್ಬ ಅದ್ಭುತ ವ್ಯಕ್ತಿ. ನಾವು ಅನೇಕ ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ ಅಷ್ಟೇ. ಆದರೆ ನಮ್ಮ ನಡುವೆ ಪ್ರೇಮ ಸಂಬಂಧ ಇತ್ತು ಎಂಬ ಮಾತು ನಿಜವಲ್ಲ” ಎಂದು ನೀಲಂ ಹೇಳಿದ್ದಾರೆ.

ತೊಂಬತ್ತರ ದಶಕದಲ್ಲಿ ಮಾಧ್ಯಮಗಳ ವರದಿಯ ಶೈಲಿಯೇ ಇಂತಹ ವದಂತಿಗಳಿಗೆ ಕಾರಣವಾಗಿತ್ತು ಎಂದು ಅವರು ಹೇಳಿದ್ದಾರೆ. “ಆ ಸಮಯದಲ್ಲಿ ಯಾರೂ ಸ್ಪಷ್ಟನೆ ಕೊಡಲು ಇರಲಿಲ್ಲ. ಪತ್ರಿಕೆಗಳ ಲೇಖನಿಯ ಶಕ್ತಿಯೇ ಎಲ್ಲವೂ ಆಗಿತ್ತು. ಎರಡು-ಮೂರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದರೆ ಪ್ರೇಮ ಸಂಬಂಧವಿದೆ ಎಂದು ಭಾವಿಸಲಾಗುತ್ತಿತ್ತು. ನಾವು ಆಗ ಮಾಧ್ಯಮಗಳನ್ನು ತುಂಬಾ ಭಯಪಡುತ್ತಿದ್ದೆವು” ಎಂದು ಅವರು ತಿಳಿಸಿದ್ದಾರೆ.

ಗೋವಿಂದ ಮತ್ತು ನೀಲಂ ಆಗಾಗ್ಗೆ ಭೇಟಿಯಾಗುತ್ತಿದ್ದದ್ದು ಹಾಗೂ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರಿಂದ ಈ ಗಾಸಿಪ್‌ಗಳು ಹುಟ್ಟಿಕೊಂಡಿವೆ ಎನ್ನಲಾಗುತ್ತಿದೆ. ಆದರೆ ಅವುಗಳಿಗೆ ಯಾವುದೇ ವಾಸ್ತವಿಕ ಆಧಾರವಿಲ್ಲ ಎಂದು ನೀಲಂ ಸ್ಪಷ್ಟಪಡಿಸಿದ್ದಾರೆ.

ನೀಲಂ ಕೊಠಾರಿ ಅವರ ವೈಯಕ್ತಿಕ ಜೀವನದ ವಿಚಾರಕ್ಕೆ ಬಂದ್ರೆ, ಅವರು ಮೊದಲಿಗೆ ರಿಷಿ ಸೇಥಿಯಾ ಅವರನ್ನು ವಿವಾಹವಾಗಿ ನಂತರ ವಿಚ್ಛೇದನ ಪಡೆದರು. ಬಳಿಕ ನಟ ಸಮೀರ್ ಸೋನಿ ಅವರನ್ನು ವಿವಾಹವಾಗಿದ್ದು, ಇಬ್ಬರೂ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ.

ಗೋವಿಂದ ಅವರು 1987ರಿಂದ ಸುನೀತಾ ಅಹುಜಾ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದು, ಒಬ್ಬ ಮಗ ಹಾಗೂ ಮಗಳ ತಂದೆಯಾಗಿದ್ದಾರೆ.

ಹೋಟೆಲ್ ಗಲಾಟೆಯ ಬಳಿಕ ಭೀಕರ ಹಲ್ಲೆ: ಪಿಪಿಸಿ ಕ್ರಾಸ್ ಬಳಿ ಕಾಂಗ್ರೆಸ್ ಯುವ ಮುಖಂಡನ ಮೇಲೆ ದಾಳಿ

0

ಉಡುಪಿ: ಕ್ಷುಲ್ಲಕ ಕಾರಣಕ್ಕೆ ನಡೆದ ಹೊಟೇಲ್ ಗಲಾಟೆ ತೀವ್ರ ಹಿಂಸಾಚಾರಕ್ಕೆ ತಿರುಗಿರುವ ಘಟನೆ ಜನವರಿ 30ರ ರಾತ್ರಿ ಪಿಪಿಸಿ ಕ್ರಾಸ್ ಬಳಿ ನಡೆದಿದೆ. ತಲವಾರ್ ಹಾಗೂ ಕಬ್ಬಿಣದ ಚೇರ್ ಹಿಡಿದು ಗುಂಪೊಂದು ದಾಳಿ ನಡೆಸಿದ್ದು, ಉಡುಪಿ ಜಿಲ್ಲಾ ಎನ್‌ಎಸ್‌ಯುಐ ಉಪಾಧ್ಯಕ್ಷ ಶರತ್ ಕುಂದರ್ (25) ಗಾಯಗೊಂಡಿದ್ದಾರೆ.

ಮಣಿಪಾಲದ ಹಕುನಾ ಮಟಾಟ ಹೊಟೇಲ್‌ನಲ್ಲಿ ಊಟದ ವೇಳೆ ಶರತ್ ಕುಂದರ್ ಅವರ ಕೈ ರಮಾನಂದ ಪೈ ಅವರ ಕೈಗೆ ತಾಕಿದ ವಿಚಾರವೇ ಈ ಗಲಾಟೆಗೆ ಕಾರಣವಾಗಿದೆ. ಮಾತಿನ ಚಕಮಕಿ ನಡೆದ ಬಳಿಕ ಶರತ್ ಕುಂದರ್ ಮನೆಗೆ ತೆರಳುವ ವೇಳೆ, ಪಿಪಿಸಿ ಕ್ರಾಸ್ ಬಳಿ ಮಾತುಕತೆ ನಡೆಸಲು ಅಕ್ಷತ್ ಪೈ ಕರೆ ಮಾಡಿ ನಿಲ್ಲುವಂತೆ ತಿಳಿಸಿದ್ದಾನೆ.

ಅದರಂತೆ ಶರತ್ ಕುಂದರ್ ಅವರು ತಮ್ಮ ಸ್ನೇಹಿತರೊಂದಿಗೆ ಕೋಸ್ಟಲ್ ಚಿಕನ್ ಅಂಗಡಿಯ ಎದುರು ಕಾಯುತ್ತಿದ್ದಾಗ, ರಾತ್ರಿ 11.30ರ ಸುಮಾರಿಗೆ ಟಾಟಾ ಸಫಾರಿ ಮತ್ತು ಮಹೀಂದ್ರ ಥಾರ್ ವಾಹನಗಳಲ್ಲಿ ಬಂದ ಆರೋಪಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.

ಅಕ್ಷತ್ ಪೈ, ಶಶಾಂಕ್ ಸೇರಿದಂತೆ 6–7 ಮಂದಿ ಕೈಯಲ್ಲಿ ತಲವಾರಿನಂತಹ ಆಯುಧ ಹಾಗೂ ಕಬ್ಬಿಣದ ಚೇರ್ ಹಿಡಿದು ಶರತ್ ಕುಂದರ್ ಅವರನ್ನು ಕೊಲ್ಲುವ ಉದ್ದೇಶದಿಂದ ತಲೆಗೆ ಬೀಸಿದ್ದಾರೆ. ತಪ್ಪಿಸಿಕೊಳ್ಳಲು ಅವರು ಕೈ ಮುಂದಕ್ಕೆ ಚಾಚಿದಾಗ, ಆರೋಪಿ ರಮಾನಂದ ಪೈ ತಲವಾರಿನಿಂದ ಬೀಸಿದ್ದು, ಬಲ ಅಂಗೈ, ಮಧ್ಯ ಬೆರಳು, ಎಡ ಕೈಮಣಿಗಂಟು ಹಾಗೂ ಕಿರು ಬೆರಳಿಗೆ ಗಂಭೀರ ಗಾಯಗಳಾಗಿವೆ.

ಘಟನೆಯ ವೇಳೆ ಶರತ್ ಕುಂದರ್ ಜೊತೆಗಿದ್ದ ಸ್ನೇಹಿತರು ಬೊಬ್ಬೆ ಹೊಡೆದ ನಂತರ ಆರೋಪಿಗಳು ಜೀವಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಶ್ಮಿಕಾ–ವಿಜಯ್ ಸೀಕ್ರೆಟ್ ವೆಡ್ಡಿಂಗ್? ಉದಯಪುರ ಹೋಟೆಲ್ ಸಿದ್ಧತೆ ವಿಡಿಯೋ ವೈರಲ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ವಿಚಾರ ಮತ್ತೆ ಹಾಟ್ ಟಾಪಿಕ್ ಆಗಿದೆ. ಈ ಜೋಡಿ ಮದುವೆ ವಿಷಯವನ್ನು ಬಹುಕಾಲದಿಂದ ಗುಟ್ಟಾಗಿ ಇಟ್ಟುಕೊಂಡೇ ಬರುತ್ತಿದ್ದು, ಇದೀಗ ವಿವಾಹ ನಡೆಯಲಿರುವ ಹೋಟೆಲ್‌ನ ಸಿದ್ಧತೆಯ ವಿಡಿಯೋ ಲೀಕ್ ಆಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮದುವೆ ಎಷ್ಟು ಅದ್ದೂರಿಯಾಗಿ ನಡೆಯಲಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಈ ವಿವಾಹ ತುಂಬಾನೇ ಖಾಸಗಿಯಾಗಿ ಆಯೋಜಿಸಲಾಗಿದೆ ಎಂಬುದು ತಿಳಿದುಬರುತ್ತಿದೆ. ಯಾವುದೇ ಅನಗತ್ಯ ಗಮನ ಸೆಳೆಯದಂತೆ ಮದುವೆ ನೆರವೇರಿಸುವ ಪ್ಲ್ಯಾನ್ ಮಾಡಲಾಗಿದೆ.

‘ಗೀತ ಗೋವಿಂದಂ’ ಸಿನಿಮಾದ ಸೆಟ್‌ನಲ್ಲಿ ಪರಿಚಯವಾದ ರಶ್ಮಿಕಾ ಹಾಗೂ ವಿಜಯ್, ಆ ಬಳಿಕ ಒಳ್ಳೆಯ ಸ್ನೇಹ ಬೆಳೆಸಿಕೊಂಡಿದ್ದರು. ಆ ಸ್ನೇಹವೇ ಪ್ರೀತಿಗೆ ತಿರುಗಿದ್ದು, ಹಲವು ವರ್ಷಗಳಿಂದ ಇವರ ನಡುವೆ ಗಾಢ ಬಾಂಡಿಂಗ್ ಇದೆ. ಈಗ ಅದೇ ಪ್ರೀತಿ ಮದುವೆಯ ರೂಪ ಪಡೆಯುತ್ತಿದೆ ಎನ್ನಲಾಗುತ್ತಿದೆ.

ಈ ಹಿಂದೆ ವಿಜಯ್ ದೇವರಕೊಂಡ ಅವರ ಮನೆಯಲ್ಲಿ ಗುಟ್ಟಾಗಿ ನಿಶ್ಚಿತಾರ್ಥ ನಡೆದಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಮದುವೆಯನ್ನೂ ಸಹ ಅಷ್ಟೇ ರಹಸ್ಯವಾಗಿ ನಡೆಸಲಾಗುತ್ತಿದೆ.

ಉದಯಪುರದ ಐತಿಹಾಸಿಕ ಸಿಟಿ ಪ್ಯಾಲೇಸ್ ಹೋಟೆಲ್‌ನಲ್ಲಿ ಮದುವೆ ನಡೆಯುತ್ತಿದೆ ಎಂಬುದಾಗಿ ವಿಡಿಯೋ ವೈರಲ್ ಮಾಡಲಾಗಿದೆ. ವಿಡಿಯೋದಲ್ಲಿರುವವರ ಮಾಹಿತಿ ಪ್ರಕಾರ ಫೆಬ್ರವರಿ 2ರಂದು ಮದುವೆ ನಡೆಯಲಿದೆಯಂತೆ. ಈ ಹಿಂದೆ ಫೆಬ್ರವರಿ 26 ಎಂದು ಹೇಳಲಾಗಿತ್ತು. ಆದರೆ ಈಗ ದಿನಾಂಕ ಬದಲಾಯಿತೇ ಎಂಬ ಗೊಂದಲ ನಿರ್ಮಾಣವಾಗಿದೆ.

ನಿಜವಾದ ದಿನಾಂಕ ಬಹಿರಂಗವಾಗದಂತೆ ಸೆಲಬ್ರಿಟಿಗಳು ತಪ್ಪು ದಿನಾಂಕಗಳ ಸುದ್ದಿಯನ್ನು ಹರಿಯಲು ಬಿಡುತ್ತಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ರಶ್ಮಿಕಾ ಮಂದಣ್ಣ ಕೂಡ ಇದೇ ತಂತ್ರ ಬಳಸಿರಬಹುದು ಎನ್ನುವುದು ಅನೇಕರ ಅಭಿಪ್ರಾಯ.

ಇಂದು ಮದುವೆ ನಡೆದರೆ, ಸಂಜೆ ವೇಳೆಗೆ ವಿವಾಹದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮದುವೆ ಕುರಿತು ಸಾಕಷ್ಟು ಕನಸುಗಳನ್ನು ಕಂಡಿದ್ದ ರಶ್ಮಿಕಾ ಮಂದಣ್ಣ ಅವರ ಕನಸು ಇದೀಗ ಸಾಕಾರಗೊಳ್ಳುವ ಹಂತದಲ್ಲಿದ್ದು, ಫೋಟೋಗಳು ವೈರಲ್ ಆಗದಂತೆ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

error: Content is protected !!