ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳಲ್ಲಿ ವಿಶಿಷ್ಟ ಕೌಶಲ್ಯ ಹಾಗೂ ಏಕಾಗ್ರತೆ ಬೆಳೆಸುವ ‘ಗಾಂಧಾರಿ ವಿದ್ಯೆ’ಯನ್ನು ಕಲಿಸಲು ಪಾಲಕರು ಮುಂದಾಗಬೇಕು ಎಂದು ಐ.ಎಸ್. ಪೂಜಾರ್ ಕರೆ ನೀಡಿದರು.
ನಗರದ ಶ್ರೀ ವಾಸವಿ ಕನ್ನಡ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜ್ಞಾನವೃಕ್ಷ ಶಿಕ್ಷಣ ಹಾಗೂ ವಿವಿಧೋದ್ದೇಶಗಳ ಸಂಸ್ಥೆ (ರಿ), ಗದಗ ಇವರ ಆಶ್ರಯದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ‘ಗಾಂಧಾರಿ ವಿದ್ಯೆ’ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
6ರಿಂದ 16 ವರ್ಷದ ಮಕ್ಕಳಿಗೆ ಶ್ರೀ ವಾಸವಿ ಕನ್ನಡ ಪ್ರಾಥಮಿಕ ಶಾಲೆಯ ಆವರಣದಲ್ಲಿ ‘ಗಾಂಧಾರಿ ವಿದ್ಯೆ’ಯ ತರಬೇತಿ ನೀಡಲಾಗುತ್ತಿದೆ. ಮಕ್ಕಳು ಈ ವಿಶಿಷ್ಟ ಕಲೆಯನ್ನು ಕಲಿತು ತಮ್ಮಲ್ಲಿರುವ ಕೌಶಲ್ಯವನ್ನು ಬೆಳೆಸಿಕೊಳ್ಳಲು ಪಾಲಕರು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವಿವಿಧ ಕೌಶಲ್ಯಗಳನ್ನು ಪ್ರದರ್ಶಿಸುವ ‘ಗಾಂಧಾರಿ ವಿದ್ಯೆ’ಯ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹೇಮಗಿರೀಶ ಹಾವಿನಾಳ ಆಗಮಿಸಿದ್ದರು.
ಆನಂದಯ್ಯ ವಿರಕ್ತಮಠ ಮಾತನಾಡಿ, ಪೂಜ್ಯ ಪುಟ್ಟರಾಜ ಗವಾಯಿಗಳು ನಡೆದಾಡಿದ ಈ ನೆಲದಲ್ಲಿ ಮಕ್ಕಳು ವಿಭಿನ್ನ ಕಲೆಯನ್ನು ಕಲಿತು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಜಯಕುಮಾರ ಹಿರೇಮಠ, ವೈ.ಆರ್. ತಳವಾರ, ಶಿವಣ್ಣ ಬಳ್ಳಾರಿ, ಶಿವಾನಂದ ಮಾದಣ್ಣವರ, ಶ್ರೀ ವಾಸವಿ ಕನ್ನಡ ಪ್ರಾಥಮಿಕ ಶಾಲೆಯ ಆಡಳಿತಾಧಿಕಾರಿ ರಘುವೀರ ಫತ್ತೇಪೂರ, ಆಡಳಿತ ಮಂಡಳಿ ಸದಸ್ಯರಾದ ಶಂಕರ ಸಂಪಗಾವಿ, ವಿನಾಯಕ ಫತ್ತೇಪೂರ, ದೀಪಿಕಾ ಕಾಂಬಳೆ, ನವೀನ ಕುರ್ತಕೋಟಿ, ಕುಮಾರ ಹಿರೇಮಠ, ಜ್ಞಾನವೃಕ್ಷ ಸಂಸ್ಥೆಯ ಅಧ್ಯಕ್ಷೆ ರೇಣುಕಾ ಎಸ್. ಜಾಲಿಹಾಳ ಹಾಗೂ ತರಬೇತಿದಾರರಾದ ಸೌಮ್ಯ ಎಸ್. ಜಾಲಿಹಾಳ ಉಪಸ್ಥಿತರಿದ್ದರು.
ನಟರಂಗ ಸಂಸ್ಥೆಯ ಅಧ್ಯಕ್ಷ ಸೋಮಶೇಖರ ಚಿಕ್ಕಮಠ ನಿರೂಪಿಸಿದರು. ಶಾಲೆಯ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ರಾಷ್ಟ್ರಧ್ವಜದ ಚಿತ್ರ!
ಗಾಂಧಾರಿ ವಿದ್ಯೆಯ ಪ್ರದರ್ಶನದ ವೇಳೆ ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ರಾಷ್ಟ್ರಧ್ವಜದ ಚಿತ್ರ ಬಿಡಿಸಿ ತಮ್ಮ ವಿಶಿಷ್ಟ ಕೌಶಲ್ಯ ಪ್ರದರ್ಶಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು.



