ಮಗಳ ಸಾವಿಗೆ ಪ್ರತೀಕಾರ: ಪುತ್ರಿಯನ್ನು ಹತ್ಯೆಗೈದಿದ್ದ ಆರೋಪಿಯ ತಂದೆಯನ್ನು ಕೊಂದ ಅಪ್ಪ.!

0
Spread the love

ಮಂಡ್ಯ: ಭಾರೀ ಕುತೂಹಲ ಕೆರಳಿದ್ದ ಮಂಡ್ಯ ಜಿಲ್ಲೆಯ ಮೇಲುಕೋಟೆಯ ವಿವಾಹಿತ ಶಿಕ್ಷಕಿ ದೀಪಿಕಾ (21) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಹತ್ಯೆ ಮಾಡಿದ್ದ ಆರೋಪಿಯ ತಂದೆಯನ್ನು ಆಕೆಯ ತಂದೆ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

Advertisement

ಮಾಣಿಕ್ಯನಹಳ್ಳಿ ಗ್ರಾಮದ ನರಸಿಂಹೇಗೌಡ ಕೊಲೆ ವ್ಯಕ್ತಿಯಾಗಿದ್ದು, ಅದೇ ಗ್ರಾಮದ ವೆಂಕಟೇಶ್ ಕೊಲೆ ಆರೋಪಿಯಾಗಿದ್ದಾರೆ. ನರಸಿಂಹೇಗೌಡ ಅವರ ಪುತ್ರ ನಿತೀಶ್, ವೆಂಕಟೇಶ್ ಅವರ ಪುತ್ರಿ ದೀಪಿಕಾಳನ್ನು ಕೊಲೆ ಮಾಡಿದ್ದ. ಮಗಳ ಸಾವಿಗೆ ಪ್ರತೀಕಾರವಾಗಿ ಆಕೆಯ ತಂದೆ ವೆಂಕಟೇಶ್ ಆರೋಪಿ ನಿತೀಶ್‌ನ ತಂದೆಯನ್ನು ಹತ್ಯೆ ಮಾಡಿದ್ದಾನೆ.

ಘಟನೆ ಹಿನ್ನೆಲೆ

ದೀಪಿಕಾ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯಹಳ್ಳಿ ಗ್ರಾಮದವಳು. ಈಕೆಯನ್ನು 2024 ಜನವರಿ 22 ರಂದು ಅದೇ ಗ್ರಾಮದ ನಿತೀಶ್ ಎಂಬಾತ ಬರ್ಬರವಾಗಿ ಕೊಲೆ ಮಾಡಿದ್ದ. ಇದೀಗ ಮಗಳ ಕೊಲೆಯ ಪ್ರತೀಕಾರಕ್ಕೆ ತಂದೆ ಕೊಲೆ ಆರೋಪಿಯ ತಂದೆಯನ್ನಯ ಕೊಲೆ ಮಾಡಿದ್ದಾನೆ. 2024 ಜನವರಿ 19 ರಂದು ಮಾಣಿಕ್ಯನಹಳ್ಳಿ ಗ್ರಾಮದ ದೀಪಿಕಾ ಎಂಬ ಟೀಚರ್ ನಾಪತ್ತೆಯಾಗಿದ್ದಳು.

ಬಳಿಕ ಆಕೆ ಜನವರಿ 23 ರಂದು ಮೇಲುಕೋಟೆಯ ಬೆಟ್ಟದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈ ವೇಳೆ ರಾಜ್ಯದಲ್ಲಿ ದೊಡ್ಡಮಟ್ಟದ ಸುದ್ದಿಯಾಗಿತ್ತು. ಬಳಿಕ ಮಂಡ್ಯ ಪೊಲೀಸರು ಮಾಣಿಕ್ಯನಹಳ್ಳಿ ಗ್ರಾಮದ ನಿತೀಶ್ ಎಂಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈ ಕೊಲೆ‌ ಮಾಡಿದ್ದು ಬೇರೆ ಯಾರು ಅಲ್ಲ ನಿತೀಶ್ ಎಂದು ತಿಳಿದಿತ್ತು.

ಟೀಚರ್ ದೀಪಿಕಾ ಮತ್ತು ನಿತೀಶ್ ನಡುವೆ ಕೊಲೆಗಿಂತ ಎರಡು ವರ್ಷ ಮುಂಚಿನಿಂದಲು ಸಲುಗೆ ಇತ್ತಂತೆ. ಇಬ್ಬರ ಸಲುಗೆ ನೋಡಿ ನಿತೀಶ್‌ಗೆ ದೀಪಿಕಾ ಗಂಡ ಹಾಗೂ ಕುಟುಂಬಸ್ಥರು ವಾರ್ನಿಂಗ್ ಕೂಡ ಕೊಟ್ಟಿದ್ದರು. ನಿತೀಶ್ ಜೊತೆಗಿನ ಸಲುಗೆ ಬಗ್ಗೆ ಪ್ರಶ್ನಿಸಿದ್ದಾಗ ಆತ ತಮ್ಮ ಇದ್ದಂತೆ ಎಂದು ದೀಪಿಕಾ ಹೇಳಿಕೊಂಡಿದ್ದಳು. ಕುಟುಂಬಸ್ಥರ ವಾರ್ನಿಂಗ್ ಬಳಿಕ ಇಬ್ಬರು ಅಂತರ ಕಾಯ್ದುಕೊಂಡಿದ್ದರು .ಇದರಿಂದ ದೀಪಿಕಾಳ ಜೊತೆಗಿನ ಒಡನಾಟವಿಲ್ಲದೇ ನಿತೀಶ್ ಘಾಸಿಗೊಂಡಿದ್ದ.

ನಂತರ 2024 ಜನವರಿ 19 ರಂದು ತನ್ನ ಬರ್ತ್ ಡೇ ನೆಪದಲ್ಲಿ ಬೆಟ್ಟದ ತಪ್ಪಲಿಗೆ ದೀಪಿಕಾಳನ್ನು ನಿತೀಶ್ ಕರೆಸಿಕೊಂಡಿದ್ದ. ಈ ಶರ್ಟ್ ಕೂಡ ಗಿಫ್ಟ್ ಕೊಡಲು ದೀಪಿಕಾ ಹೋಗಿದ್ದಳು. ಬಳಿಕ ಇಬ್ಬರ ನಡುವೆ ಜಗಳ ಆರಂಭವಾಗಿತ್ತು. ನಿತೀಶ್‌ನ್ನು ಅವೈಡ್ ಮಾಡುತ್ತಿದ್ದಕ್ಕೆ ದೀಪಿಕಾ ಮೇಲೆ ಸಾಕಷ್ಟು ಆಕ್ರೋಶ ಕೂಡ ಇತ್ತು. ಇದೇ ಕಾರಣಕ್ಕೆ ದೀಪಿಕಾಳನ್ನು ಹತ್ಯೆ ಮಾಡಿದ್ದ.

ಇದಾದ ಬಳಿಕ ಜೈಲು ಸೇರಿದ್ದ ನಿತೀಶ್ ಜಾಮೀನಿನ ಮೇಲೆ ಹೊರಕ್ಕೆ ಬಂದಿದ್ದ. ತನ್ನ ಮಗಳನ್ನು ಕೊಲೆ ಮಾಡಿದ್ದ ನಿತೀಶ್‌ನನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು ದೀಪಿಕಾ ತಂದೆ ವೆಂಕಟೇಶ್ ಸ್ಕೆಚ್ಚು ಹಾಕಿದ್ದ. ಇದೇ ಭಾನುವಾರ ಧರ್ಮಸ್ಥಳದಲ್ಲಿ ನಿತೀಶ್ ತಂಗಿ ಮದುವೆ ಸಹ ಇತ್ತು. ಇಂದು ನಿತೀಶ್ ತಂದೆ ನರಸಿಂಹೇಗೌಡ ಮನೆಯಿಂದ ಹೋರಹೋಗಿದ್ದಾರೆ.

ಈ ವೇಳೆ ಫಾಲೋ ಮಾಡಿಕೊಂಡು ಹೋದ ವೆಂಕಟೇಶ್, ಊರ ಹೊರಗೆ ಇದ್ದ ಟೀ ಅಂಗಡಿಯಲ್ಲಿ ಬಳಿ ಕುಳಿತಿದ್ದ ನರಸಿಂಹೇಗೌಡಗೆ ವೆಂಕಟೇಶ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.‌ ಕೊಲೆ ಮಾಡುವ ವೇಳೆ ನನ್ನ ಮಗಳನ್ನು ಕೊಲೆ ಮಾಡಿ ನಿನ್ನ ಮಗಳ ಮದುವೆ ಮಾಡುತ್ತಿದ್ದೀಯಾ ಎಂದು ಹೇಳಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here