ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ, ವ್ಯಕ್ತಿತ್ವ ನಿರ್ಮಾಣ, ಸಾಮಾಜಿಕ ಜಾಗೃತಿ ಹಾಗೂ ಉತ್ತಮ ಬದುಕಿನ ಅಡಿಪಾಯವಾಗಿದೆ ಎಂದು ಚಂದನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಟಿ. ಈಶ್ವರ ಹೇಳಿದರು.
ಪಟ್ಟಣದ ಟಿ.ಬಿ. ಮಾನ್ವಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಾನವ ಬಂಧುತ್ವ ವೇದಿಕೆ ತಾಲೂಕು ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ಗ್ರಾಮ ಸಂಚಾಲಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಅಂಕಗಳಿಗಿಂತ ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವಾಸ ಮುಖ್ಯ. ‘ನಾ ಸಾಧಿಸಬಲ್ಲೆ’ ಎಂಬ ನಂಬಿಕೆ, ಕೀಳರಿಮೆ ತೊರೆದು ಆಯ್ದ ಕ್ಷೇತ್ರದಲ್ಲಿ ಶ್ರದ್ಧೆ ಹಾಗೂ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬಂಡಾಯ ಸಾಹಿತಿ ಸಿ.ಜಿ. ಹಿರೇಮಠ ಅವರು ‘ದಲಿತ ಹಾಗೂ ಪ್ರಗತಿಪರ ಚಳವಳಿ ನಡೆದು ಬಂದ ದಾರಿ’ ವಿಷಯ ಕುರಿತು ಉಪನ್ಯಾಸ ನೀಡಿ, ಶೋಷಣೆರಹಿತ ಸಮಾಜ ನಿರ್ಮಾಣವೇ ಡಾ. ಅಂಬೇಡ್ಕರ್ ಅವರ ಕನಸಾಗಿತ್ತು. ಬುದ್ಧ ಹಾಗೂ ಬಸವಾದಿ ಶರಣರ ಸಮಾನತೆ ಮತ್ತು ಮಾನವೀಯ ಮೌಲ್ಯಗಳೇ ಭಾರತೀಯ ಸಂವಿಧಾನದ ತಳಹದಿಯಾಗಿವೆ ಎಂದು ತಿಳಿಸಿದರು.
ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಬಸವರಾಜ ಈರಣ್ಣವರ ವೇದಿಕೆಯ ಉದ್ದೇಶ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಮಂಜುನಾಥ ಕೊಕ್ಕರಗುಂದಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಿ.ಬಿ. ಫಕ್ಕೀರಪ್ಪ, ರಾಜೇಶ ಕಮತದ, ರಾಜೇಶ ಭೀಮಣ್ಣವರ, ಕರಿಯಪ್ಪ ಶಿರಹಟ್ಟಿ, ಗುಡ್ಡಪ್ಪ ಮತ್ತೂರ, ರವಿ ಭಜಕ್ಕನವರ, ಹನುಮಂತಪ್ಪ ಹರಿಜನ, ಆನಂದ ತಳಗೇರಿ, ಮಾಂತೇಶ ಮುಶಪ್ಪನವರ, ಚೇತನ ಯತ್ತಿನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಸಂಚಾಲಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
“ವಿದ್ಯಾರ್ಥಿಗಳ ಯಶಸ್ಸಿಗೆ ಅಂಕಗಳಿಗಿಂತ ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವಾಸವೇ ಮುಖ್ಯ. ನಿಮ್ಮನ್ನು ನೀವೇ ನಂಬಿದರೆ ಯಾವುದೇ ಗುರಿಯನ್ನೂ ಸಾಧಿಸಬಹುದು.”
– ಟಿ. ಈಶ್ವರ, ಅಧ್ಯಕ್ಷರು, ಚಂದನ ಶಿಕ್ಷಣ ಸಂಸ್ಥೆ