ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪುಟಾಣಿ ಮಕ್ಕಳ ನಡುವೆ ಕುಳಿತು ಅವರ ಮಾತುಗಳನ್ನು ಆಲಿಸಿ, ಮುಗ್ಧ ನಗುವಿಗೆ ಮನಸಾರೆ ನಕ್ಕು, ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿದ ಹಾಲಕೆರೆಯ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ಆತ್ಮೀಯ ಕ್ಷಣಗಳು ಸಮೀಪದ ನಿಡಗುಂದಿಕೊಪ್ಪದ ಶ್ರೀಮಠದ ಆವರಣದಲ್ಲಿ ವಿಶೇಷ ಗಮನ ಸೆಳೆದವು.
ನಿಡಗುಂದಿಕೊಪ್ಪದ ಶ್ರೀಮಠಕ್ಕೆ ಆಗಮಿಸಿದ್ದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಪೀಠಾಧಿಪತಿ ಅಭಿನವ ಚನ್ನಬಸವ ಮಹಾಸ್ವಾಮಿಗಳ ಸಮ್ಮುಖದಲ್ಲಿ ನಡೆಯುತ್ತಿರುವ ಶ್ರೀ ಚನ್ನಚೇತನ ಗುರುಕುಲ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಕೆಲಕಾಲ ಆತ್ಮೀಯವಾಗಿ ಬೆರೆತರು.
ಶಾಲೆಗೆ ಶ್ರೀಗಳು ಆಗಮಿಸುತ್ತಿದ್ದಂತೆ ಪುಟಾಣಿ ಮಕ್ಕಳು ಕುತೂಹಲದಿಂದ ಅವರ ಸುತ್ತ ಸೇರಿದರು. ಮಕ್ಕಳೊಂದಿಗೆ ಸಂವಾದ ನಡೆಸಿದ ಶ್ರೀಗಳು, ಅವರ ಮುಗ್ಧ ಮಾತುಗಳನ್ನು ಆಲಿಸಿ, ಪ್ರತಿಭೆ ಹಾಗೂ ಚುರುಕುತನ ಕಂಡು ಸಂತಸಪಟ್ಟರು.
“ವಿದ್ಯೆ ಕಲಿಯುವುದಷ್ಟೇ ಶಿಕ್ಷಣವಲ್ಲ, ಸಂಸ್ಕಾರ, ಶಿಸ್ತು ಹಾಗೂ ಉತ್ತಮ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗಲೇ ಶಿಕ್ಷಣಕ್ಕೆ ನಿಜವಾದ ಅರ್ಥ ಬರುತ್ತದೆ” ಎಂದು ಮಕ್ಕಳಿಗೆ ಕಿವಿಮಾತು ಹೇಳಿದ ಶ್ರೀಗಳು, ಉತ್ತಮವಾಗಿ ಓದಿ ಸಮಾಜಕ್ಕೆ ಉಪಯುಕ್ತ ವ್ಯಕ್ತಿಗಳಾಗಿ ಬೆಳೆಯುವಂತೆ ಆಶೀರ್ವದಿಸಿದರು.
ಮಕ್ಕಳೊಂದಿಗೆ ಶ್ರೀಗಳು ಬೆರೆತ ಕ್ಷಣಗಳು ಶಾಲಾ ಆವರಣದಲ್ಲಿ ವಿಶೇಷ ಸಂತಸ ಮೂಡಿಸಿದವು. ತಮ್ಮ ನಡುವೆ ಕುಳಿತು ಪ್ರೀತಿಯಿಂದ ಮಾತನಾಡಿದ ಶ್ರೀಗಳ ಸರಳತೆ ಕಂಡು ಪುಟಾಣಿ ಮಕ್ಕಳು ಹರ್ಷಗೊಂಡರು. ಶ್ರೀಗಳ ಸಾನ್ನಿಧ್ಯದಿಂದ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹವೂ ಮೂಡಿತು.
ನಿಡಗುಂದಿಕೊಪ್ಪದ ಶ್ರೀಮಠದ ಪೀಠಾಧಿಪತಿ ಅಭಿನವ ಚನ್ನಬಸವ ಮಹಾಸ್ವಾಮಿಗಳು, ಶ್ರೀ ಚನ್ನಚೇತನ ಗುರುಕುಲ ಶಾಲೆಯ ಶೈಕ್ಷಣಿಕ ಚಟುವಟಿಕೆಗಳು ಹಾಗೂ ವಿವಿಧ ಆಯಾಮಗಳನ್ನು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳಿಗೆ ಪರಿಚಯಿಸಿದರು.
ಶಾಲೆಯ ನೂತನ ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದ ಸಂದರ್ಭವನ್ನು ಸ್ಮರಿಸಿದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಶಾಲೆಯು ಉತ್ತರೋತ್ತರ ಅಭಿವೃದ್ಧಿ ಕಾಣಲಿ. ಇಲ್ಲಿ ಕಲಿಯುವ ಮಕ್ಕಳ ಭವಿಷ್ಯ ಉಜ್ವಲವಾಗಲಿ. ಶ್ರೀ ಚನ್ನಬಸವೇಶ್ವರ ಹಾಗೂ ಶ್ರೀ ಅನ್ನದಾನೇಶ್ವರರ ಆಶೀರ್ವಾದ ಸದಾಕಾಲ ಶಾಲೆಯ ಮೇಲಿರಲಿ ಎಂದು ಹಾರೈಸಿದರು.
ಮಕ್ಕಳ ನಡುವೆ ಕೆಲಕಾಲ ಕಳೆದ ಶ್ರೀಗಳ ಆತ್ಮೀಯ ಭೇಟಿ ಗುರು-ಶಿಷ್ಯರ ಸಂಬಂಧಕ್ಕೆ ಮಮತೆಯ ಸ್ಪರ್ಶ ನೀಡಿದಂತಿತ್ತು. ಶ್ರೀಗಳ ಆಶೀರ್ವಾದ ಹಾಗೂ ಪುಟಾಣಿ ಮಕ್ಕಳ ಮುಗ್ಧ ನಗು ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮನದಲ್ಲಿ ಬಹುಕಾಲ ಉಳಿಯುವ ಸ್ಮರಣೀಯ ಕ್ಷಣಗಳಾದವು.
ಈ ಸಂದರ್ಭದಲ್ಲಿ ಗ್ರಾಮದ ಗಣ್ಯರು, ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.



