HomeKarnataka Newsಕರಾವಳಿಯ 23 ಕಂಬಳಗಳಿಗೆ ರಾಜ್ಯ ಸರ್ಕಾರದಿಂದ ₹1.15 ಕೋಟಿ ಅನುದಾನ ಘೋಷಣೆ!

ಕರಾವಳಿಯ 23 ಕಂಬಳಗಳಿಗೆ ರಾಜ್ಯ ಸರ್ಕಾರದಿಂದ ₹1.15 ಕೋಟಿ ಅನುದಾನ ಘೋಷಣೆ!

For Dai;y Updates Join Our whatsapp Group

ಉಡುಪಿ: ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ನಡುವೆಯೇ ರಾಜ್ಯ ಸರ್ಕಾರ ಕರಾವಳಿಯ ಕಂಬಳ ಆಯೋಜಕರಿಗೆ ಮಹತ್ವದ ಸಿಹಿ ಸುದ್ದಿ ನೀಡಿದೆ.

2025–26ನೇ ಸಾಲಿನಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯಲಿರುವ 23 ಕಂಬಳಗಳಿಗೆ ತಲಾ ₹5 ಲಕ್ಷದಂತೆ ಒಟ್ಟು ₹1.15 ಕೋಟಿ ಅನುದಾನವನ್ನು ಮಂಜೂರು ಮಾಡಿದೆ. ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಲಾಗಿದ್ದು, ಸರ್ಕಾರದ ಈ ಕ್ರಮವನ್ನು ಕಂಬಳ ಸಂಘಟಕರು ಸ್ವಾಗತಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ರಾಜ್ಯ ಸರ್ಕಾರ ತನ್ನ ಭರವಸೆಯಂತೆ ನಡೆದುಕೊಂಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಂಬಳ ಆಯೋಜಕರಿಗೆ ನೀಡಿದ ಈ ಅನುದಾನದಿಂದ ಕರಾವಳಿಯ 23 ಕಂಬಳಗಳಿಗೆ ದೊಡ್ಡ ಮಟ್ಟದ ನೆರವು ದೊರೆಯಲಿದೆ ಎಂದು ಹೇಳಿದರು. ಕಂಬಳ ಆಯೋಜನೆಗೆ ಹೆಚ್ಚಿನ ವೆಚ್ಚವಾಗುತ್ತಿದ್ದು, ಈ ನೆರವು ತುಳುನಾಡಿನ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಹಿಂದಿನ ಸರ್ಕಾರಗಳೂ ಕಂಬಳಕ್ಕೆ ಬೆಂಬಲ ನೀಡಿದ್ದನ್ನು ಉಲ್ಲೇಖಿಸಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಪ್ರವಾಸೋದ್ಯಮ ಮತ್ತು ಕ್ರೀಡಾ ಇಲಾಖೆಗಳ ಮೂಲಕ ಅನುದಾನ ನೀಡಲಾಗಿತ್ತು. ಸದಾನಂದ ಗೌಡ ಅವರ ಆಡಳಿತಾವಧಿಯಲ್ಲಿ ₹1 ಕೋಟಿ ಅನುದಾನ ಘೋಷಿಸಲಾಗಿತ್ತು. ರಾಜಕೀಯ ಭೇದವಿಲ್ಲದೆ ಎಲ್ಲ ಸರ್ಕಾರಗಳೂ ಕಂಬಳವನ್ನು ಪ್ರೋತ್ಸಾಹಿಸಿರುವುದು ಸಂತಸದ ವಿಷಯ ಎಂದು ಹೇಳಿದರು. ಮುಂದಿನ ರಾಜ್ಯ ಬಜೆಟ್‌ನಲ್ಲಿ ಕಂಬಳಕ್ಕೆ ₹5 ಕೋಟಿ ಅನುದಾನ ಮೀಸಲಿಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

ಮೈಸೂರು ದಸರಾ ಕಂಬಳ ವಿವಾದದ ಕುರಿತು ಪ್ರತಿಕ್ರಿಯಿಸಿದ ಡಾ. ದೇವಿಪ್ರಸಾದ್ ಶೆಟ್ಟಿ, ಕಂಬಳದಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ. ಇದು ಧರ್ಮ, ಜಾತಿ ಹಾಗೂ ರಾಜಕೀಯ ಭೇದ ಮೀರಿದ ಜನಪದ ಕ್ರೀಡೆಯಾಗಿದೆ. ಮೈಸೂರಿನಲ್ಲಿ ಕಂಬಳ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಕರಾವಳಿಯ ಜನಪ್ರತಿನಿಧಿಗಳು ಯಾವುದೇ ಪಕ್ಷದ ಒತ್ತಡಕ್ಕೆ ಒಳಗಾಗದೆ ಕಂಬಳದ ಗೌರವವನ್ನು ರಾಜ್ಯಾದ್ಯಂತ ಎತ್ತಿಹಿಡಿಯಬೇಕು ಎಂದು ಹೇಳಿದರು.

ಕಂಬಳದ ಬಗ್ಗೆ ಮೈಸೂರಿನಲ್ಲಿ ಅನಗತ್ಯ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಕಂಬಳವನ್ನು ಕೆಳವರ್ಗದವರ ಮೇಲಿನ ದಬ್ಬಾಳಿಕೆಯಂತೆ ಬಿಂಬಿಸುವುದು ತಪ್ಪು ಎಂದರು. ಕೋಟೆ-ಚೆನ್ನಯ್ಯ ಸೇರಿದಂತೆ ಹಲವು ಜನಪದ ನಾಯಕರ ಹೆಸರಿನಲ್ಲಿ ಕಂಬಳ ಆಯೋಜನೆ ನಡೆಯುತ್ತಿದ್ದು, ಇದು ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಸಂಕೇತವಾಗಿದೆ. ಕಂಬಳವನ್ನು ರಾಜ್ಯ ಹಾಗೂ ದೇಶದ ಮಟ್ಟದಲ್ಲಿ ಇನ್ನಷ್ಟು ವೈಭವೀಕರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಧೈರ್ಯದಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img