ಬೆಂಗಳೂರು: ತುಮಕೂರಿನ ಇತಿಹಾಸ ಅಥವಾ ಅಸ್ತಿತ್ವವನ್ನು ಬದಲಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಮಾತ್ರ ತುಮಕೂರನ್ನು ಬೆಂಗಳೂರು ಉತ್ತರ ಭಾಗದೊಂದಿಗೆ ಸಂಪರ್ಕಿಸುವ ಕುರಿತು ಪ್ರಸ್ತಾಪ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ನಗರದ ಸದಾಶಿವನಗರದಲ್ಲಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಮಕೂರನ್ನು ಬೆಂಗಳೂರಿಗೆ ಸೇರಿಸುವುದೇ ನಮ್ಮ ಉದ್ದೇಶವಲ್ಲ. ಈ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ತುಮಕೂರು ಜಿಲ್ಲೆಯ ಹೆಸರನ್ನು ಬದಲಿಸುವ ಪ್ರಶ್ನೆಯೇ ಇಲ್ಲ. ತುಮಕೂರಿಗೆ ತನ್ನದೇ ಆದ ಇತಿಹಾಸ, ಅಸ್ಮಿತೆ ಮತ್ತು ಭಾವನಾತ್ಮಕ ಸಂಬಂಧವಿದೆ. ಅದನ್ನು ಬದಲಿಸಲು ಯಾರೂ ಹೋಗುವುದಿಲ್ಲ. ಬಂಡವಾಳ ಹೂಡಿಕೆ ಸೇರಿದಂತೆ ಹೆಚ್ಚಿನ ಅಭಿವೃದ್ಧಿ ಅವಕಾಶಗಳು ತುಮಕೂರಿಗೆ ಸಿಗಲಿ ಎಂಬ ಉದ್ದೇಶದಿಂದ ಮಾತ್ರ ಈ ವಿಚಾರ ಪ್ರಸ್ತಾಪವಾಗಿದೆ” ಎಂದು ತಿಳಿಸಿದರು.
ಬಿಜೆಪಿ ನಾಯಕರು ವಿಷಯವನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ ಪರಮೇಶ್ವರ್, “ತುಮಕೂರಿನ ಬಗ್ಗೆ ಎಲ್ಲರಿಗೂ ಇರುವ ಭಾವನೆ ನನಗೂ ಇದೆ. ನಾನು ಹುಟ್ಟಿ ಬೆಳೆದದ್ದೇ ತುಮಕೂರಿನಲ್ಲಿ. ತುಮಕೂರಿನ ಹೆಸರು, ಆಡಳಿತ ವ್ಯವಸ್ಥೆ ಅಥವಾ ಭೌಗೋಳಿಕ ವಿಸ್ತೀರ್ಣ ಯಾವುದೂ ಬದಲಾಗುವುದಿಲ್ಲ” ಎಂದು ಪುನರುಚ್ಚರಿಸಿದರು.
ಬೆಂಗಳೂರಿಗೆ ಹತ್ತಿರ ಇರುವ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ವಲಯದೊಂದಿಗೆ ಅಭಿವೃದ್ಧಿ ದೃಷ್ಟಿಯಿಂದ ಸಂಪರ್ಕಿಸಬೇಕೆಂದು ಕೇಳಲಾಗಿದೆ ಅಷ್ಟೇ ಎಂದು ಹೇಳಿದರು.
ದೆಹಲಿ ಸಮೀಪದ ನೋಯ್ಡಾ ಮಾದರಿಯನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, “ದೇಶದ ವಿವಿಧ ಭಾಗಗಳಲ್ಲಿ ಅಭಿವೃದ್ಧಿಯನ್ನು ವಿಕೇಂದ್ರೀಕರಿಸುವ ಉದ್ದೇಶದಿಂದ ಈ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ತುಮಕೂರನ್ನೂ ಅಭಿವೃದ್ಧಿಪಡಿಸಬಾರದೆಯೇ?” ಎಂದು ಪ್ರಶ್ನಿಸಿದರು.



