ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭೂ ವಿವಾದ ಬಗೆಹರಿಸುವುದಾಗಿ ಹೇಳಿ ಗ್ರಾಮಸ್ಥರಿಂದ ಸಂಗ್ರಹಿಸಿದ್ದ ಹಣವನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರು ಮತ್ತು ಕಾರ್ಯಕರ್ತರು ಹಿಂತಿರುಗಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಂಚಾಗಢ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಕೀರ್ ಕುತ್ತಿ ಪ್ರದೇಶದ ಶಾಲಾ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಿದ ಟಿಎಂಸಿ ಮುಖಂಡರು, ಗ್ರಾಮಸ್ಥರಿಗೆ ಹಣ ವಾಪಸ್ ನೀಡಿದ್ದಾರೆ. ಬೂತ್ ಅಧ್ಯಕ್ಷ ತಪನ್ ಡೇ ಅವರು ಹಲವು ಗ್ರಾಮಸ್ಥರಿಂದ ಪಡೆದಿದ್ದ ಹಣವನ್ನು ಹಿಂತಿರುಗಿಸಿದರೆ, ತಲೆಮರೆಸಿಕೊಂಡಿರುವ ಸ್ಥಳೀಯ ಮುಖಂಡ ಬಾಬೈ ಬರ್ಮನ್ ಪರವಾಗಿ ಅವರ ತಂದೆ ಹಣ ಮರಳಿಸಿದ್ದಾರೆ.
ಪಂಚಾಯಿತಿ ಸದಸ್ಯರು ಹಾಗೂ ಕೆಲ ಟಿಎಂಸಿ ನಾಯಕರು ಸೇರಿ ಗ್ರಾಮಸ್ಥರಿಂದ ಸುಮಾರು ₹80 ಲಕ್ಷ ಸಂಗ್ರಹಿಸಿದ್ದರು ಎನ್ನಲಾಗಿದೆ. ಭೂ ವಿವಾದ ಬಗೆಹರಿಸುವ ಭರವಸೆ ನೀಡಿ ಹಣ ಪಡೆದಿದ್ದರೂ ಯಾವುದೇ ಕೆಲಸ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಬಿಜೆಪಿ ಅಧ್ಯಕ್ಷ ಸುರೇಂದ್ರ ಬರ್ಮನ್, ಕಾನೂನು ಕ್ರಮದ ಭಯದಿಂದಲೇ ಟಿಎಂಸಿ ನಾಯಕರು ಹಣ ವಾಪಸ್ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಹಣ ಮರಳಿ ಸಿಕ್ಕಿರುವುದಕ್ಕೆ ಕೆಲ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಈ ಬೆಳವಣಿಗೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಘಟನೆ ಇದೀಗ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ಆಗ್ರಹಿಸಿದೆ.



