ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಪ್ರಸ್ತುತ ಜಾಗತಿಕವಾಗಿ ಪ್ರಕೃತಿ ನಾಶದಿಂದ ಅನೇಕ ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದೇವೆ. ಇದನ್ನು ತಡೆಗಟ್ಟುವುದಕ್ಕಾಗಿ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕೆಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಬುಧವಾರ ಶಿರಹಟ್ಟಿಯ ಶ್ರೀ ಎಫ್.ಬಿ. ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವನಮಹೋತ್ಸವ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ಉಳಿದರೆ ಮಾತ್ರ ಜೀವಸಂಕುಲ ನೆಮ್ಮದಿಯಿಂದ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಆಮ್ಲಜನಕವನ್ನು ದುಡ್ಡು ಕೊಟ್ಟು ಖರೀದಿ ಮಾಡಲಾಗಿತ್ತು. ಇಂತಹ ದುಃಸ್ಥಿತಿ ಬರದ ರೀತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಇದರಿಂದ ಉತ್ತಮ ವಾತಾವರಣದ ಜೊತೆಗೆ ಉತ್ತಮ ಬದುಕನ್ನು ಸಾಗಿಸಲು ಸಾಧ್ಯವಾಗುತ್ತದೆ. ಅರಣ್ಯ ಇಲಾಖೆ ವತಿಯಿಂದ ರಸ್ತೆ ಬದಿಗಳಲ್ಲಿ ನೆಡುವ ಗಿಡಗಳನ್ನು ಪೋಷಣೆ ಮಾಡುವುದು ಕೂಡ ನಮ್ಮೆಲ್ಲರ ಜವಾಬ್ದಾರಿಯಾಗಬೇಕೆಂದು ಹೇಳಿದರು.
ವಲಯ ಅರಣ್ಯ ಸಂರಕ್ಷಣಾಧಿಕಾರಿ ರಾಮಪ್ಪ ಪೂಜಾರ, ಆರ್ಎಫ್ಓ (ಪ್ರಾ) ಕೌಶಿಕ್ ದಳವಾಯಿ, ಪ್ರಾಚಾರ್ಯ ಬಿ.ಜಿ. ಗಿರಿತಿಮ್ಮಣ್ಣವರ, ಎಸ್.ವಾಯ್. ಮುಜಾವರ, ರಾಜೇಶ್ವರಿ ಸಂಶಿ, ಎನ್.ಟಿ. ಮಾಳೋದೆ, ಪರಿಮಳ, ಚಿನ್ಮಯಿ ಕಪ್ಪತ್ತನವರ, ಗೌತಮ ಕಪ್ಪತ್ತನವರ, ನಟರಾಜ ರಾನಡೆ, ಶ್ರೀನಿವಾಸ ಕಪಟಕರ ಮುಂತಾದವರು ಉಪಸ್ಥಿತರಿದ್ದರು.